ಉಡುಪಿ : ಸದ್ದಿಲ್ಲದೇ ಪೆರ್ಡೂರು ಕುಲಾಲ ಸಂಘದಿಂದ ಹೀಗೊಂದು ಮಾದರಿ ನಡೆ
Thumbnail

ಉಡುಪಿ : ಸಮುದಾಯ ಸಂಘಟನೆಯ ಕಾರ್ಯಚಟುವಟಿಕೆ ಕಾರ್ಯಕ್ರಮ ಆಯೋಜನೆ, ಮಾಹಿತಿ ಹಂಚಿಕೆ, ಸನ್ಮಾನಗಳಿಗೆ ಮಾತ್ರ  ಸೀಮಿತವಾಗದೆ ಅದರಾಚೆಗೆ ಬೆಳೆದು  ಮಳೆಯಲ್ಲಿ ನೆನೆದು, ಬಿಸಿಲಲ್ಲಿ ಬೆಂದು ನೋಯುತ್ತಿದ್ದ  ಬಡ  ಕುಟುಂಬಕ್ಕೆ ಭದ್ರವಾದ ಸೂರೊಂದನ್ನು ನಿರ್ಮಿಸಿ ಕೊಡುದರ ಮೂಲಕ ಮಾದರಿ ನಡೆಯನ್ನು ಪ್ರದರ್ಶಿಸಬಹುದು ಎಂಬುದನ್ನು  ಉಡುಪಿ ಜಿಲ್ಲೆಯ ಪೆರ್ಡೂರು ಕುಲಾಲ  ಸಂಘ ಮಾಡಿದೆ. 

ಪೆರ್ಡೂರು  ಕುಲಾಲ ಸಂಘ ವ್ಯಾಪ್ತಿಯ ಕುಕ್ಕೇಹಳ್ಳಿ ಬೊಂಟೆಕುಮೇರಿ ಬೇಬಿ  ಕುಲಾಲ ಕುಟುಂಬ ತೀರ ಬಡತನದ ಕುಟುಂಬ. ಗಂಭೀರ ಅರೋಗ್ಯ ಸಮಸ್ಯೆಯಿಂದ ಬಳಲಿ, ನಿತ್ಯದ ಬೇಕು  ಬೇಡವೆಗಳನ್ನು ನಿರ್ವಹಿಸಲು ಕಷ್ಟ್ಟಪಡುತ್ತಿದ್ದ ಕುಟುಂಬ. ಮಳೆ ಬಂದರೆ ಸೋರುವ, ಬೇಸಿಗೆಯಲ್ಲಿ ಬಿಸಿಲು ಇಣುಕುವ ಜೋಪಡಿ.  ಇಂತಹ ಸಂದೀಗ್ದ ಬದುಕಿನ ಪ್ರಯಾಸತನವನ್ನು ಕಂಡು  ಮರುಗಿದ ಸ್ಥಳೀಯ ಕುಲಾಲ ಯುವ ಭಾಂದವರು ಪೆರ್ಡೂರು  ಕುಲಾಲ ಸಂಘದ ಗಮನಕ್ಕೆ ತಂದು ಆ  ಕುಟುಂಬಕ್ಕೆ ನೆಮ್ಮದಿಯ ಮನೆಯೊಂದನ್ನು ನಿರ್ಮಿಸಿಕೊಡುವ ದೃಡ ಸಂಕಲ್ಪವನ್ನು  ಮಾಡಿದರು. 

ಪೆರ್ಡೂರು  ಕುಲಾಲ ಸಂಘದ  ಈ  ಯೋಚನೆಗೆ ಹಲವು  ಧಾನವಂತ ಮನಸುಗಳು ಸಹಾಯ ಹಸ್ತ ಚಾಚಿದವು.  ಕುಂಬಾರರ ಗುಡಿ ಕೈಗಾರಿಕೆ ಸಹಕಾರಿ ಸಂಘ  ಪೆರ್ಡೂರು 50 ಸಾವಿರ ಧನ ಸಹಾಯದ ಬೆಂಬಲ ನೀಡಿತು. ಸ್ಥಳೀಯ ಯುವ ಉತ್ಸಾಹಿ ಕಟ್ಟಡ ನಿರ್ಮಾಣ ಕೆಲಸಗಾರರ ತಂಡದ ಶ್ರಮದಾನ, ಪೆರ್ಡೂರು  ಕುಲಾಲ ಸಂಘದ  ಕಮಿಟಿಯ ಸದಸ್ಯರು, ಸಜ್ಜನರ ಧನ ಸಹಾಯ ಬೆಂಬಲದಿಂದ ಅಂದಾಜು 5 ಲಕ್ಷ ವೆಚ್ಚದಲ್ಲಿ ಸುಭದ್ರವಾದ ಮನೆಯನ್ನು ಕುಕ್ಕೇಹಳ್ಳಿಯ ಬೇಬಿ ಕುಲಾಲ ಕುಟುಂಬಕ್ಕೆ  ನಿರ್ಮಿಸಿ ಕೊಡಲಾಯಿತು. ಬೇಬಿ  ಕುಲಾಲ ಅವರ ಕಂಗಳಿಂದ ಆನಂದ  ಬಾಷ್ಪ ಹರಿದು ಬಂತು.

ಸಮುದಾಯದ ಕಟ್ಟಕಡೆಯ ವ್ಯಕ್ತಿಯನ್ನು ತಲುಪುವ ಈ ಮಹಾಕಾರ್ಯಕ್ಕೆ ತಾವೂ ಕೈಜೋಡಿಸಬಹುದು ಎಂದು ವಿನಂತಿಸಿದ್ದಾರೆ.
ಸಂಪರ್ಕ ಸಂಖ್ಯೆ : 9141150952. (ಕುಲಾಲ ಸಂಘ ಪೆರ್ಡೂರು )

16 Jun 2026, 09:18 PM
Category: Kaup
Tags: