ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಸೆ.27 : ವಿಶ್ವ ಪ್ರವಾಸೋದ್ಯಮ ದಿನ - ಪ್ರವಾಸಿಗೆ ಪ್ರದರ್ಶಿಸಬೇಕಿದೆ ಸಾಂಸ್ಕೃತಿಕ ಸಂಪತ್ತು

Posted On: 26-09-2021 11:38AM

ಕರಾವಳಿ ಜಿಲ್ಲೆಗಳಲ್ಲಿ ವಿಫುಲವಾದ ಅವಕಾಶಗಳಿದ್ದರೂ ಪ್ರವಾಸೋದ್ಯಮ ಎಷ್ಟು ಅಭಿವೃದ್ಧಿಯಾಗಿದೆ ? ಇಲ್ಲಿರುವ ಪ್ರವಾಸಿ ಆಕರ್ಷಣೆಯ ಎಷ್ಟು ವಿಷಯಗಳು ಈಗಾಗಲೇ ತೆರೆದುಕೊಂಡಿವೆ - ತೆರೆಯಲಾಗಿದೆ ಅಥವಾ ಪರಿಚಯಿಸಲಾಗಿದೆ, ಗೊತ್ತಿಲ್ಲ ! . ಆದರೆ ನಮ್ಮ ಪ್ರವಾಸೋದ್ಯಮ ಸಂಬಂಧಿ ಚಟುವಟಿಕೆ‌ಗಳು‌ ಕಡಲ ದಡವನ್ನು‌ ಬಿಟ್ಟು ಪೂರ್ವಾಭಿಮುಖವಾಗಿ ನೋಡಿದ ಹಾಗೆ ಅನಿಸುವುದೇ ಇಲ್ಲ . ಹಾಗಾದರೆ ಕಡಲು - ಘಟ್ಟದ ನಡುವೆ ಏನಿದೆ ? ನಮ್ಮ ಉಭಯ ಜಿಲ್ಲೆಗಳಲ್ಲಿ ಸಮೃದ್ಧವಾಗಿ ಬೆಳೆದಿರುವ ಸಂಸ್ಕೃತಿಯು ವೈಶಿಷ್ಟ್ಯ ಪೂರ್ಣವಾದುದು . ಇಲ್ಲಿ ಜಾನಪದ ಮೂಲದ ಆಚರಣೆ , ನಂಬಿಕೆಗಳಿವೆ . ಆರಾಧನಾ ಕಲೆಗಳು ,ಪ್ರದರ್ಶನ ರಂಗ ಕಲೆಗಳಿವೆ . ಪರ್ವತ , ಗುಡ್ಡ , ಬೆಟ್ಟ , ಜಲಪಾತ , ಝರಿ , ನದಿ , ಹೊಳೆ , ಸಮುದ್ರ ಎಲ್ಲವೂಇದೆ . ಆಹಾರ ಪದಾರ್ಥಗಳ ವೈವಿಧ್ಯತೆ ಇದೆ . ಆಕರ್ಷಕ ಉತ್ಪನ್ನಗಳಿವೆ .ಇತಿಹಾಸ ಹೇಳುವ ಪುರಾತನ ನಿರ್ಮಿತಿಗಳಿವೆ . ವೀರರ , ಪ್ರತಿಭಾವಂತರ , ಸಾಧಕರ , ದೈವೀಪುರುಷರ ಆಡುಂಬೊಲವಿದೆ . ಭವ್ಯವಾಗಿ ಬೆಳೆದ ದೇವಾಲಯ ಸಂಸ್ಕೃತಿಯಿದೆ . ಒಟ್ಟಿನಲ್ಲಿ ಮನಮೋಹಕ ಪರಿಸರದಲ್ಲಿ ಹಾಡು - ಕುಣಿತಗಳಿಗೆ ಪೂರಕವಾಗಿ ವಾದ್ಯಗಳ ಘೋಷ - ಇದಕ್ಕೆ ಬಣ್ಣದ ಮೆರಗಿನೊಂದಿಗೆ ಪ್ರತಿದಿನ ದೈವ - ದೇವಲೋಕಗಳು , ನಾಗ - ಬ್ರಹ್ಮ ಸನ್ನಿಧಾನಗಳು ಸನ್ನಿಹಿತವಾಗುತ್ತವೆ ,ಪುರಾಣ ಪ್ರಪಂಚ ತೆರೆದುಕೊಳ್ಳುತ್ತದೆ .ರಾತ್ರಿಗಳು ಬೆಳ್ಳಂಬೆಳಗಾಗುತ್ತವೆ .ಲೌಕಿಕದಲ್ಲಿ ಅಲೌಕಿಕ ಸಂಭವಿಸುತ್ತದೆ . ಇದನ್ನೆಲ್ಲ ನಮ್ಮ ಸಂಸ್ಕೃತಿ ಎಂಬ ಗೌರವದೊಂದಿಗೆ ಪ್ರವಾಸಿಗೆ ತೋರಿಸಬೇಕು . ವಿವಿಧ ಸೌಲಭ್ಯಗಳೊಂದಿಗೆ ಈ ಸಾಂಸ್ಕೃತಿಕ ಸಂಪತ್ತಿನ ಖಜಾನೆಯ ಬಾಗಿಲು ತೆರೆಯಬೇಕು . ಆಗ ನಮ್ಮ ಸಂಸ್ಕೃತಿ ಜಗಜ್ಜಾಹೀರಾಗುತ್ತದೆ . ಬಹುತ್ವದ , ಬಹು ಆಯಾಮಗಳುಳ್ಳ ಒಂದು ಸಂಸ್ಕೃತಿ ಗೌರವಯುತವಾಗಿ ಪ್ರಸ್ತುತಪಡುವುದು ಹೆಮ್ಮೆಯಲ್ಲವೆ . ಆದರೆ ಪ್ರಸ್ತುತಿ ಹೇಗಾಗುತ್ತಿದೆ ಗೊತ್ತಿಲ್ಲ . ಅಂತಹ ಯಾವುದೇ ಮಾಹಿತಿ ಇಲ್ಲ . ನದಿಯಲ್ಲಿ ಸಾಹಸದ , ರೋಚಕ ದೋಣಿಪ್ರವಾಸದ ಬಗ್ಗೆ ಕೇಳಿ ಬರುತ್ತದೆ , ಸಮುದ್ರದಲ್ಲಿ ಬೋಟಿಂಗ್ ನೋಡ ಸಿಗುತ್ತದೆ . ರೆಸಾರ್ಟ್ ಗಳೂ ಇವೆ. ಬೇಕಾದಷ್ಟು ಬೀಚ್ ಉತ್ಸವಗಳು ಕಡಲ ಕಿನಾರೆಯ ಉದ್ದಕ್ಕೂ ನಡೆಯುತ್ತವೆ .ಬೈಕ್ ರಾಲಿಗಳು ಸಂಘಟಿಸಲ್ಪಡುತ್ತವೆ . ಅಷ್ಟಕ್ಕೆ ಸೀಮಿತವೇ ?

ಸಮುದ್ರ ಕಿನಾರೆ : ಸಮುದ್ರ ಎಂದರೆ ಭಯ ಭವ್ಯತೆಯನ್ನು ಹೊಂದಿ ಮನೆಸೂರೆಗೊಳ್ಳುವ ಒಂದು ವಿಸ್ಮಯ . ನದಿಗಳು ಸಾಗರ ಸಂಗಮಿಸುವ ಅಳಿವೆಗಳು ಪ್ರಕೃತಿ ನಿರ್ಮಿಸಿದ ಸುಂದರ ಪ್ರದೇಶ . ನಿಸರ್ಗ ಸಹಜ ದ್ವೀಪಗಳು (ಕುದುರು) ಪ್ರವಾಸಿ ತಾಣಗಳು . ಹಿನ್ನೀರಿನ ನೋಟವು ಅಗಾಧ ಜಲರಾಶಿ . ಇಂತಹ ಆಕರ್ಷಣೀಯ ಪರಿಸರ ಪ್ರವಾಸಿ ತಾಣಗಳಾಗಿವೆ. ಧಾರ್ಮಿಕ ಕ್ಷೇತ್ರಗಳು : ಪ್ರಸಿದ್ಧ ದೇವಾಲಯಗಳು , ಪವಿತ್ರ ನದಿ ಸ್ನಾನ - ತೀರ್ಥಸ್ನಾನದ ನದಿ ದಡಗಳು , ನಾಗ ಸನ್ನಿಧಾನಗಳು , ಮಾರಿಗುಡಿಗಳು , ಬ್ರಹ್ಮಸ್ಥಾನಗಳು , ದೈವಸ್ಥಾನಗಳು , ಸಿರಿ ಕ್ಷೇತ್ರಗಳು (ಆಲಡೆಗಳು) ಧಾರ್ಮಿಕ ಮಹತ್ವಗಳೊಂದಿಗೆ ಯಾತ್ರಿಕರನ್ನು ಸೆಳೆಯುತ್ತವೆ . ಧಾರ್ಮಿಕ ಪ್ರವಾಸೋದ್ಯಮವನ್ನು ವಿಸ್ತರಿಸುವ ಸಾಧ್ಯತೆ ಇದೆ . ಇಂತಹ ದೇವಾಲಯ , ದೈವಸ್ಥಾನಗಳಲ್ಲಿ ಶಿಲ್ಪಕಲೆಯ ಬೆಡಗುಇದೆ .ಮೂರ್ತಿಗಳು , ಕಲ್ಲಿನ - ಲೋಹಗಳ ವಿಶಿಷ್ಟ ಕಲಾಕೃತಿಗಳು - ಕುಸುರಿ ಕೆಲಸದ ಮಣೆ ಮಂಚಗಳಿವೆ ,ದೈವಗಳ ಭಂಡಾರದಲ್ಲಿ ಅಪೂರ್ವ - ಪವಿತ್ರ ವಸ್ತುಗಳಿರುತ್ತವೆ . ಇವೆಲ್ಲದರ ಪ್ರದರ್ಶನಾವಕಾಶ ಒದಗಬೇಕು . ವಾರ್ಷಿಕ ಉತ್ಸವ ಸಂದರ್ಭಗಳಲ್ಲಿ ಇದು ಸಾಧ್ಯ . ಪ್ರಾಚೀನ ಚರ್ಚ್ , ಮಸೀದಿಗಳು ಉಭಯ ಜಿಲ್ಲೆಗಳಲ್ಲಿವೆ .ಇಲ್ಲಿ ನಡೆಯುವ ಉರೂಸ್ , ಚರ್ಚ್ ನ ವಾರ್ಷಿಕ ಹಬ್ಬಗಳು ಹಾಗೂ ವಿಶಿಷ್ಟ ಆಚರಣೆ ಗಳು ಪ್ರವಾಸಿಗೆ ಆಕರ್ಷಣೀಯವಾಗಬಹುದು . ಪುರಾತನ ಚರ್ಚ್ ,ಮಸೀದಿಗಳ ಐತಿಹಾಸಿಕ ಮಹತ್ವ , ರಚನಾ ಶೈಲಿಗಳು ಮಹತ್ವಪೂರ್ಣವಾದುವೇ.

ಐತಿಹಾಸಿಕ ಸ್ಥಳಗಳು : ಚರಿತ್ರೆಗೆ ಸಾಕ್ಷಿಯಾಗಿ ಉಳಿದಿರುವ ಅರಮನೆಗಳು , ಕೋಟೆಗಳ ಅವಶೇಷಗಳು , ಅಪೂರ್ವ ದಾರುಶಿಲ್ಪಗಳಿರುವ ಪ್ರಾಚೀನ ಮಠ ಮತ್ತು ಗುತ್ತಿನಮನೆಗಳು , ಚೌಕಿಮನೆಗಳು , ಜಾನಪದ ವೀರರು ಹುಟ್ಟಿದ ಸ್ಥಳ - ನಡೆದಾಡಿದ ಪರಿಸರ - ಸಾಧಕ ವಿದ್ಯೆಕಲಿತ ಐಗಳಮಠ - ಗರಡಿಗಳು, ಪಾರ್ದನ - ಜಾನಪದಗಳಿಗೆ ಸಂಬಂಧಿಸಿದ ಸ್ಥಳಗಳು , ಇತಿಹಾಸ , ಸಂಸ್ಕೃತಿ ಪ್ರೀತಿಯ ಪ್ರವಾಸಿಗಳ ಗಮನ ಸೆಳೆಯದಿದ್ದೀತೆ ? ಆಚರಣೆ - ಆರಾಧನೆ - ಕ್ರೀಡೆ : ಪ್ರಖ್ಯಾತ ದೈವಸ್ಥಾನಗಳ ವಿಶಿಷ್ಟ ಕೋಲ- ನೇಮ - ಮೆಚ್ಚಿ - ಗೆಂಡ , ನಾಗಮಂಡಲ - ಡಕ್ಕೆಬಲಿ - ಪಾಣರಾಟಗಳು ನಡೆಯುವಲ್ಲಿಗೆ ಆಸಕ್ತ ಯಾತ್ರಿಗಳನ್ನು ಕರೆದೊಯ್ದು ತೋರಿಸುವ ಅವಕಾಶವಿದೆ . ದೇವಾಲಯಗಳ ವಾರ್ಷಿಕ ಜಾತ್ರೆ , ಕೋಲ - ನೇಮದ ಬಳಿಕ‌ ವರ್ಷಂಪ್ರತಿ ವಾಡಿಕೆಯಂತೆ ನಡೆಯುವ ಸಾಂಪ್ರದಾಯಿಕ ಕೋಳಿ ಅಂಕ , ಕಂಬಳಗಳನ್ನೂ ಪ್ರವಾಸಿಗಳಿಗೆ ತೋರಿಸುವ ಸಾಧ್ಯತೆಇದೆ . ತೆಂಗಿನಕಾಯಿ ಕಟ್ಟುವ, ಬೇಟೆಯಾಡುವ (ಕೆಡ್ಡಸ ಬೋಂಟೆ) ಮುಂತಾದ ಜಾನಪದ ಕ್ರೀಡೆಗಳನ್ನೂ ಏರ್ಪಡಿಸಿ ಪ್ರದರ್ಶಿಸಬಹುದು . ವಾದನ - ನರ್ತನ ವೈಭವ : ವಾದನ - ನರ್ತನಗಳು ಸಂತೋಷ , ಸಂಭ್ರಮದ ಸಂಕೇತಗಳಾಗಿ , ದೈವ - ದೇವರ ಸೇವೆಯ ಪ್ರಧಾನ ಅಂಗವಾಗಿ ರೂಢಿಯಲ್ಲಿವೆ . ಧಾರ್ಮಿಕ - ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೈಭವವನ್ನು ಒದಗಿಸಲು ವಾದನ - ನರ್ತನ ಪ್ರಮುಖವಾದುದು . ಜಾನಪದ ನಾಗಸ್ವರ , ಕೊಳಲು ಸಹಿತ ಬಾಯಿಯಿಂದ ಊದಿ ನುಡಿಸುವ ವಾದ್ಯಗಳು ,ಸಮ್ಮೇಳ ,ತಾಸ್ ಮಾರ್ , ದುಡಿ ತೆಂಬರೆ, ಡಕ್ಕೆ ,ದಿಡ್ಂಬು , ನಗರಿ , ದೋಲು ಮತ್ತು ಬ್ಯಾಂಡ್ ಸೆಟ್ ಮುಂತಾದ ಸಾಂಪ್ರದಾಯಿಕ ಜಾನಪದ ಚರ್ಮವಾದ್ಯಗಳು ನಮ್ಮ ಆಚರಣೆಗಳಲ್ಲಿದ್ದು ಆಕರ್ಷಣೀಯವಾಗಿವೆ , ಇವು ಪ್ರವಾಸಿಗರ ಮುಂದೆ ಪ್ರದರ್ಶಿಸುವಂತಹದ್ದು. ಕರಾವಳಿಯ ಗಂಡುಕಲೆ ಯಕ್ಷಗಾನದ ವರ್ಣ - ವಾದನ - ನರ್ತನ - ಸಾಹಿತ್ಯ ವೈಭವ, ಬೂತಾರಾಧನೆಯ ರಮ್ಯಾದ್ಭುತ ಸೊಗಸು , ನಂಬಿಕೆ ಆಧರಿಸಿದ ಉಪಾಸನಾ ಪದ್ಧತಿ ,ನಾಗಮಡಲ - ಡಕ್ಕೆಬಲಿಗಳಲ್ಲಿರುವ ನಾಟ್ಯ ,ವಾದನ ಮತ್ತು ಬಣ್ಣ ಹೀಗೆ ಬಣ್ಣದ ಬಣ್ಣನೆಗೆ ಬದಲಿಲ್ಲದ ಗಮನ ಸೆಳೆಯುವ ಆರಾಧನಾ‌ರಂಗಕಲೆಗಳು , ರಂಗಕಲೆಗಳು ನಮ್ಮಲಿವೆ . ಆಹಾರದ ವಿವಿಧತೆ ನಮ್ಮಲಿವೆ , ಅವುಗಳು ಅದರದ್ದೆ ಆದ ರುಚಿಯಿಂದ ವಿಶೇಷ ಖ್ಯಾತಿಯನ್ನು ಪಡೆದಿವೆ . ಕಡಲಿನಿಂದ ದೊರೆಯುವ ಫ್ರೆಶ್ ,ಶುದ್ದ ಮೀನು ಕರಾವಳಿಯ ವಿಶೇಷ .ಈ ಆಹಾರ ವೈವಿಧ್ಯವನ್ನು ಪ್ರವಾಸಿಗಳನ್ನು ಕರೆದೊಯ್ಯುವಲ್ಲಿ ಸುಲಭ ಲಭ್ಯವಾಗುವಂತೆ ಒದಗಿಸಬಹುದು .

ಕರಾವಳಿಯ ಉತ್ಪನ್ನಗಳು : ನಮ್ಮ ಕರಾವಳಿ ಸೀಮೆಯ ಉತ್ಪನ್ನಗಳನ್ನು ಈ‌ ಸಂದರ್ಭಗಳಲ್ಲಿ ಪ್ರದರ್ಶಿಸಿ ವ್ಯವಹಾರವನ್ನು ನಡೆಸುವ ಸಾಧ್ಯತೆಗಳಿವೆ . ಕೈಮಗ್ಗದ ಬಟ್ಟೆಗಳು , ಜಾನಪದ ಸೊಗಸುಳ್ಳ ಚಿನ್ನ - ಬೆಳ್ಳಿಯ ಆಭರಣಗಳು , ದೈವ ದೇವರ ಮುಖ , ಮೂರ್ತಿ, ಆಭರಣಗಳು , ಪಂಚಲೋಹ - ಕಂಚಿನ ಮೂರ್ತಿಗಳು ,ಪಾತ್ರೆಗಳು ಕಬ್ಬಿಣದ ಚೂರಿ ,ಕತ್ತಿ , ಕೊಡಲಿ , ಬೀಗಗಳು ಮತ್ತು ಮರದ ನಿತ್ಯೋಪಯೋಗಿ ವಸ್ತಗಳಾದ ಸಂಬಾರದ ಮರಿಗೆ , ಸೇರು , ಪಾವು , ಕಳಸೆ ,ಕಡೆಗೋಲು , ಮಣೆ , ಮೆಟ್ಟುಕತ್ತಿ ,ಹೆರೆಮಣೆ ಹಾಗೂ ಕರಾವಳಿಯ ಸೊಗಡಿನ ಪೀಠೋಪಕರಣಗಳನ್ನು ಪ್ರದರ್ಶಿಸಿ ಪ್ರವಾಸಿಗಳು ಖರೀದಿಸುವಂತೆ ಮಾಡ ಬಹುದು . ಪ್ರಕೃತಿ ಜನ್ಯ ಮೂಲವಸ್ತುಗಳಿಂದ ಸಿದ್ಧಗೊಳಿಸುವ ಹೆಡಿಗೆ ,ಗೆರಸೆ , ಬುಟ್ಟಿ, ಹುರಿಹಗ್ಗ , ನಾರಿನಹಗ್ಗ , ಬೀಳಿನ ಸಣ್ಣ ಹೆಡಿಗೆ ಮುಂತಾದುವುಗಳನ್ನು ಪ್ರವಾಸಿಗರು ನೆರೆಯುವ ಕಡಲಕಿನಾರೆಯಲ್ಲಿ , ಜಾತ್ರೆಗಳಲ್ಲಿ ,ಕೋಲ- ನೇಮಗಳಲ್ಲಿ ಸುಲಭವಾಗಿ ಲಭಿಸುವಂತೆ ಮಾಡಬಹುದು . ಗುಡಿ ಕೈಗಾರಿಕೆಯನ್ನು ಪ್ರೋತ್ಸಾಹಿಸುವಂತಾಗುವುದಿಲ್ಲವೇ?. ಸಾಂಸ್ಕೃತಿಕ ಭವ್ಯತೆ : ಹೀಗೆ ವಿವಿಧ ಲಭ್ಯ ಆಕರಗಳನ್ನು ಬಳಸಿಕೊಂಡು ಪ್ರವಾಸಿಗಳನ್ನು ಆಕರ್ಷಿಸಬಹುದು .ನಮ್ಮದೆನ್ನುವ ಸಾಂಸ್ಕೃತಿಕ ಭವ್ಯತೆ ನಮ್ಮಲ್ಲಿವೆ. ಅವುಗಳನ್ನು ಪ್ರದರ್ಶಿಸಬೇಕು , ವಿವರಿಸಬೇಕು , ಯಾತ್ರಿಗಳನ್ನು ಸೆಳೆಯುವ ಕೆಲಸವಾಗಬೇಕು . [ಉಭಯ ಜಿಲ್ಲೆಗಳಲ್ಲಿರುವ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳು , ಆಸ್ಪತ್ರೆಗಳು ದೇಶದಲ್ಲಿ ಮಾದರಿ. ಇಂತಹವುಗಳ ಕುರಿತು ಅಧ್ಯಯನ ಅವಕಾಶವಿದೆ . ಈ ನೆವನವೂ ಪ್ರವಾಸೋದ್ಯಮವಾಗಬಹುದು. ಬ್ಯಾಂಕಿಂಗ್ ಸಹಿತ ಹಲವು ಉದ್ಯಮಗಳು ಬೆಳೆದು ನಿಂತಿವೆ.] ಇಂತಹ ಪ್ರದರ್ಶನಗಳಿಂದ ಸ್ಥಳೀಯರ ಧಾರ್ಮಿಕ ಭಾವನೆಗಳಿಗೆ ನೋವಾಗಬಾರದು . ಇತಿಹಾಸವನ್ನು ತಿರುಚಬಾರದು .ಈ ಧಾರ್ಮಿಕ , ಐತಿಹಾಸಿಕ , ಜಾನಪದ ಸಂಪತ್ತನ್ನು ಗೌರವದಿಂದ ನಮ್ಮ ಪೂರ್ವಸೂರಿಗಳ ಸಾಂಸ್ಕೃತಿಕ ಕೊಡುಗೆ ಎಂದು ಪ್ರವಾಸಿಯ ಮುಂದೆ ಪ್ರದರ್ಶಿಸಬೇಕು . ವರ್ಣ, ವರ್ಗ ತಾರತಮ್ಯ ಪರಿಗಣಿಸದೆ ಪ್ರಶಸ್ತವಾದುದನ್ನು ಸ್ವೀಕರಿಸುವ , ಪ್ರಚುರಪಡಿಸುವ , ಅಳವಡಿಸಿಕೊಳ್ಳುವ ವಿಶಾಲಮನೋಭಾವ ಅಗತ್ಯವಿದೆ. ಪ್ರವಾಸೋದ್ಯಮ ವಿಶಾಲವಾಗಿ ಹರಡಿಕೊಳ್ಳಬೇಕಿದೆ . ‌‌‌‌‌ ‌ಬರಹ : ಕೆ. ಎಲ್.ಕುಂಡಂತಾಯ.