ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ನಮ್ಮ ಉಡುಪಿ-ಸ್ವಚ್ಛ ಉಡುಪಿ ಸಂಕಲ್ಪ ಮಾಡಿ: ಯುವಜನರಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಕರೆ

Posted On: 02-10-2021 12:17PM

ಉಡುಪಿ : ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯವರ ಅತ್ಯಂತ ಪ್ರೀತಿ ಪಾತ್ರವಾಗಿರುವ ಕೆಲಸ ಸ್ವಚ್ಛತೆ ಮಾತ್ರವಲ್ಲದೇ ನಮ್ಮ ದೇಶದ ಪ್ರಧಾನ ಮಂತ್ರಿಯವರ ಕನಸು ಭಾರತದ ದೇಶದ ಶುಚಿತ್ವ. ಅದೇ ರೀತಿಯಲ್ಲಿ ಉಡುಪಿ ಜಿಲ್ಲೆಯನ್ನು ಅತ್ಯಂತ ಸ್ವಚ್ಚ ಜಿಲ್ಲೆಯನ್ನಾಗಿ ಮಾಡಲು ಸಂಕಲ್ಪ ಮಾಡುವಂತೆ ಯುವಜನರಿಗೆ , ಎನ್‌ಸಿಸಿ, ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗೆ ಹಾಗೂ ಎಲ್ಲಾ ವಿವಿಧ ಸಂಘಟನೆಗಳಿಗೆ ಜಿಲ್ಲಾಧಿಕಾರಿ ಕೂರ್ಮ ರಾವ್ ಕರೆ ನೀಡಿದರು. ಅವರು ಇಂದು ಎಮ್‌ಜಿಎಮ್ ಕಾಲೇಜಿನ ಆವರಣದಲ್ಲಿ ,ಕ್ಲೀನ್ ಇಂಡಿಯಾ ಕಾರ್ಯಕ್ರಮದ ಅಂಗವಾಗಿ, ಕಸ ಕೊಂಡೊಯ್ಯುವ ಸ್ವಚ್ಛ ವಾಹಿನಿ ವಾಹನಕ್ಕೆ ಹಸಿರು ನಿಶಾನೆ ತೋರಿಸಿ, ವಿದ್ಯಾರ್ಥಿಗಳಿಗೆ ಹೆಕ್ಕಿದ ಪ್ಲಾಸ್ಟಿಕ್ ಕಸವನ್ನು ತುಂಬಿಸಲು ಚೀಲಗಳನ್ನು ವಿತರಿಸಿ ಮಾತನಾಡಿದರು.

ರಾಷ್ಟ್ರಮಟ್ಟದಲ್ಲಿ ಅಕ್ಟೋಬರ್ 1 ರಿಂದ 31 ರ ಒಂದು ತಿಂಗಳುಗಳ ಕಾಲ ನಡೆಯುವ “ಕ್ಲೀನ್ ಇಂಡಿಯಾ” ಕಾರ್ಯಕ್ರಮ ಇದಾಗಿದ್ದು , ಭಾರತ ಸರಕಾರದ ಯವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ನೇತ್ರತ್ವದಲ್ಲಿ ನೆಹರು ಯುವ ಕೇಂದ್ರದ ಸಂಯೋಜನೆಯೊಂದಿಗೆ , ಮನೆಯಲ್ಲಿಯಾಗಲಿ ಸಾರ್ವಜನಿಕ ಸ್ಥಳಗಳಲ್ಲಿಯಾಗಲಿ ಒಂದು ಬಾರಿ ಬಳಸಿ ಬಿಸಾಡಿದಂತಹ ಪ್ಲಾಸ್ಟಿಕ್‌ಗಳನ್ನು ಹೆಕ್ಕಿ ನಂತರ ಹೆಕ್ಕಿದ ಪ್ಲಾಸ್ಟಿಕ್ ತ್ಯಾಜ್ಯವನ್ನು ತೂಕ ನೋಡಿ ಆಯಾ ಸ್ಥಳೀಯ ಸರಕಾರ, ಗ್ರಾಮ ಪಂಚಾಯತ್ ಅಥವಾ ನಗರ ಸಭಾ ಎಸ್‌ಎಲ್‌ಆರ್‌ಎಮ್/ಸ್ವಚ್ಛ ಸಂಕೀರ್ಣ ಕೇಂದ್ರಗಳಿಗೆ ಹಸ್ತಾಂತರಿಸುವಂತೆ ಹೇಳಿದರು. ಕ್ಲೀನ್ ಇಂಡಿಯಾ ಅಭಿಯಾನವನ್ನು ಗ್ರಾಮ ಮಟ್ಟದಿಂದ ತಾಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದವರೆಗೆ ಈ ಕಾರ್ಯಕ್ರಮ ಹಾಕಿಕೊಂಡಿದ್ದು ಉಡುಪಿ ಜಿಲ್ಲಾ ಮಟ್ಟದಲ್ಲಿ ಈ ಅಭಿಯಾನವನ್ನು ಯಶಸ್ವಿಗೊಳಿಸುವಲ್ಲಿ ಉಡುಪಿ ಜಿಲ್ಲಾಡಳಿತದೊಂದಿಗೆ ಉಡುಪಿ ನಗರ ಸಭೆ, ಎನ್‌ಎಸ್‌ಎಸ್ ಎನ್‌ಸಿಸಿ, ಸ್ಕೌಟ್ಸ್ ಎಂಡ್ ಗೈಡ್ಸ್, ರೋವರ್ ಎಂಡ್ ರೇಂಜರ್, ಜಿಲ್ಲೆಯಾದ್ಯಂತ ಇರುವ ಯುವಕ ಯುವತಿ ಸಂಘಟನೆಗಳು, ಸ್ವಸಹಾಯ ಸಂಘಗಳ ಸದಸ್ಯರು ಇದರಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ನಡೆಸುವಲ್ಲಿ ಸಹಕರಿಸುವಂತೆ ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಕಾಲೇಜಿನ ಆವರಣದಲ್ಲಿ ಬಿದ್ದಿರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕುವುದರ ಮೂಲಕ ವಿದ್ಯಾರ್ಥಿಗಳಿಗೆ ಮಾದರಿಯಾದರು. ಇಂದಿನ ಕಾರ್ಯಕ್ರಮದಲ್ಲಿ 200ಕ್ಕೂ ಮಿಕ್ಕಿ ಯುವಕ ಯುವತಿ ಯುವತಿಯರು ಭಾಗವಹಿಸಿದ್ದು , ಮುಂದಿನ ಒಂದು ತಿಂಗಳ ಅವಧಿಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ, ಜಿಲ್ಲೆಯ ಹಲವಾರು ಸಮಾಜಮುಖಿ ಕೆಲಸಗಳಲ್ಲಿ ಈಗಾಗಲೇ ತೊಡಗಿಸಿಕೊಂಡಿರುವ ಅತ್ಯಂತ ಕ್ರೀಯಾಶೀಲ ಸಂಘಟನೆಗಳಾದ ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಜೆಸಿಐ, ಇಂಡಿಯನ್ ಸೀನಿಯರ್ ಸಿಟಿಜನ್, ಸ್ವಚ್ಛ ಭಾರತ್ ಪ್ರೆಂಡ್ಸ್, ಭಾರತೀಯ ವಿಕಾಸ ಟ್ರಸ್ಟ್ ಹಾಗೂ ಇನ್ನಿತರ ಸಂಘಟನೆಗಳು ಭಾಗವಹಿಸಲಿವೆ. ರಾಷ್ಟ್ರ ಹಿತದ ಹಾಗೂ ಅತ್ಯಂತ ಮಹತ್ವದ ಈ ಕಾರ್ಯಕ್ರಮಕ್ಕೆ ಉಡುಪಿಯ ಎಲ್ಲಾ ಬ್ಯಾಂಕ್ ಗಳು ಹಾಗೂ ದೊಡ್ಡ ಸಂಸ್ಥೆಗಳು,ವಿಶೇಷವಾಗಿ ಲೀಡ್ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕ್ ಎಲ್ಲಾ ರೀತಿಯ ವಿತ್ತೀಯ ಸಹಕಾರವನ್ನ ನೀಡಲು ಮುಂದಾಗಿವೆ.

ಕ್ಲೀನ್ ಇಂಡಿಯಾ ದ ಜಿಲ್ಲಾ ನೋಡಲ್ ಆಧಿಕಾರಿ ಶ್ರೀನಿವಾಸ್, ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ, ಉದಯ್ ಶೆಟ್ಟಿ , ಆಯುಕ್ತರು ನಗರ ಸಭೆ ಉಡುಪಿ, ಲೀಡ್ ಬ್ಯಾಂಕ್ ಮ್ಯಾನೆಜರ್ ಪೀರ್‌ಸಾಬ್ ಪಿಂಜರ್, ಎಮ್‌ಜಿಎಮ್ ಕಾಲೇಜಿನ ಪ್ರಾಂಶುಪಾಲರು ದೇವಿದಾಸ್ ನಾಯಕ್, ಸ್ವಚ್ಛ ಭಾರತ್ ಪ್ರೆಂಡ್ಸ್ ಗಣೇಶ್ ನಾಯಕ್ ರಾಘವೇಂದ್ರ ಕರ್ವಾಲೊ, ಬಿವಿಟಿ ಸಂಸ್ಥೆಯ ಸಿಇಒ ಮಣಿಪಾಲ ಮನೋಹರ್ ಮತ್ತಿತರರು ಉಪಸ್ಥಿತರಿದ್ದರು. ವಿಲ್‌ಫ್ರೆಡ್ ಡಿಸೋಜ ಜಿಲ್ಲಾ ಯುವ ಜನ ಅಧಿಕಾರಿ ನೆಹರು ಯುವ ಕೇಂದ್ರ, ಭಾರತ ಸರಕಾರ ಹಾಗೂ ಈ ಕಾರ್ಯಕ್ರಮದ ಮುಖ್ಯ ಸಂಯೋಜಕರು ಸ್ವಾಗತಿಸಿ, ಪ್ರಾಸ್ತವಿಕ ನುಡಿ ನಿರೂಪಿಸಿದರು. ಜಲ ಶಕ್ತಿ ಹಾಗೂ ಸ್ವಚ್ಛ ಭಾರತ್ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿ ಜೋಸೆಫ್ ಜಿ ಎಮ್ ರೆಬೆಲ್ಲೊ ವಂದಿಸಿದರು.