ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಇನ್ನಂಜೆ : ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆ , ಸನ್ಮಾನ

Posted On: 02-10-2021 08:54PM

ಕಾಪು : ಇನ್ನಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಲಕ್ಷಣ ಕೆ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಇನ್ನಂಜೆ ದಾಸಭವನದಲ್ಲಿ ನಡೆಯಿತು. ಈ ಸಂದರ್ಭ ಮಾತನಾಡಿದ ಅವರು ಸದಸ್ಯರು ಉತ್ತಮ ಗುಣಮಟ್ಟದ ಮತ್ತು ಹೆಚ್ಚು ಉತ್ತಮ ಗುಣಮಟ್ಟದ ಹಾಲು ಪೂರೈಸುವ ಮೂಲಕ ಸಂಘದ ಅಭಿವೃದ್ಧಿಗೆ ನಿರಂತರವಾಗಿ ಸಹಕರಿಸುತ್ತಾ ಬರುತ್ತಿದ್ದಾರೆ. ಈ ಕಾರಣದಿಂದಾಗಿ ನಮ್ಮ ಸಂಘವು ಅತ್ಯುತ್ತಮ ಸಂಘವಾಗಿ ಮೂಡಿ ಬರಲು ಸಾಧ್ಯವಾಗಿದೆ. ಮುಂದೆಯೂ ಇದೇ ರೀತಿಯ ಬೆಂಬಲದ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದರು. ಒಕ್ಕೂಟದ ವಿಸ್ತರಣಾಧಿಕಾರಿ ಯಶವಂತರವರು ಲಾಭದಾಯಕ ಹೈನುಗಾರಿಕೆ, ಉತ್ತಮ ಗುಣಮಟ್ಟದ ಹಾಲಿನ ಉತ್ಪಾದನೆ, ರಾಸುವಿನ ಆರೋಗ್ಯದ ದೃಷ್ಟಿಯಲ್ಲಿ ಪ್ರತಿದಿನ ಖನಿಜ ಲವಣ ಮಿಶ್ರಣದ ಬಳಕೆ ಕುರಿತಾಗಿ ಸದಸ್ಯರಿಗೆ ತಿಳಿಸಿದರು. ಅಲ್ಲದೆ ರಾಸುಗಳ ಸಾಮೂಹಿಕ ವಿಮೆಯ ಮಹತ್ವವನ್ನೂ ವಿವರಿಸಿದರು.

ಸಂಘದ ಸಕ್ರಿಯ ಹಿರಿಯ ಸದಸ್ಯರಾದ ಸುಂದರ ಆಚಾರ್ಯ, ಜಯ ಎಸ್. ಶೆಟ್ಟಿ, ರಾಮ ಕೆ. ಶೆಟ್ಟಿ , ಎಮ್. ಶಾಂತ ಪೂಜಾರ್ತಿ ಮತ್ತು ಶಾರದಾ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಶೇ 85 ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು.

ವರದಿ ಸಾಲಿನಲ್ಲಿ ಅಧಿಕ ಹಾಲು ಸರಬರಾಜು ಮಾಡಿದ ವಿಠಲ ಮೂಲ್ಯ ಪ್ರಥಮ , ಆಶಾ ದ್ವಿತೀಯ, ಮತ್ತು ರವಿವರ್ಮ ಶೆಟ್ಟಿ ತೃತೀಯ ಬಹುಮಾನವನ್ನು ಪಡೆದರು. ಸಂಘವು 2020-2021ನೇ ಸಾಲಿನಲ್ಲಿ ನಿವ್ವಳ ಲಾಭ ರೂಪಾಯಿ 4,47,408.67 ಗಳಿಸಿದ್ದು ಅದನ ವಿಂಗಡಣೆ ಮಾಡಲಾಯಿತು. ಶೇ.15 ಷೇರು ಡಿವಿಡೆಂಡ್ ಘೋಷಿಸಲಾಯಿತು. ಪ್ರಸಕ್ತ ಸಾಲಿನ ಹಾಲು ಸರಬರಾಜು ಮಾಡಿದ ಸದಸ್ಯರಿಗೆ ರೂ. 1,92,374 ಬೋನಸ್ಸು ಹಾಗೂ ಶೇ. 1 ರಂತೆ, ರೂ. 77,141 ಪ್ರೋತ್ಸಾಹ ಧನ ನೀಡಲಾಯಿತು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಎನ್.ಭಟ್ ರವರು ವರದಿ ವಾಚಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಂಘದ ನಿದೇಶಕರಾದ ರಾಘವೇಂದ್ರ ಉಪಾಧ್ಯಾಯ, ರಾಮ ಕೆ.ಶೆಟ್ಟಿ, ಜಯ ಪೂಜಾರಿ, ನಾಗರಾಜ ಮುಚ್ಚಿನ್ನಾಯ, ಉಮೇಶ್ ಆಚಾರ್ಯ, ಉದಯ ಜಿ.,ಶಿವರಾಮ ಶೆಟ್ಟಿ, ಬೇಬಿ ಎಂ. ಪೂಜಾರ್ತಿ, ಪದ್ಮಾ ಮುಖಾರ್ದಿ ಮತ್ತು ಸುಮತಿ ಪಿ. ಅಂಚನ್ ಉಪಸ್ಥಿತರಿದ್ದರು.