ರೋಟರಿ ಕ್ಲಬ್ ಸೈಬ್ರಕಟ್ಟೆ ವತಿಯಿಂದ ಕಾವಡಿ ಸರಕಾರಿ ಪ್ರೌಢಶಾಲೆಗೆ ಶಾಲಾ ಪರಿಕರಗಳ ಕೊಡುಗೆ
Posted On:
09-10-2021 03:34PM
ಉಡುಪಿ : ರೋಟರಿ ಕ್ಲಬ್ ಸೈಬ್ರಕಟ್ಟೆ ಇವರಿಂದ ಸರಕಾರಿ ಪ್ರೌಢಶಾಲೆ ಕಾವಡಿ ಇಲ್ಲಿ ಸೀಲಿಂಗ್ ಫ್ಯಾನ್ ಗಳ ಹಸ್ತಾಂತರ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪದ್ಮನಾಭ ಕಾಂಚನ್ ಆಗಮಿಸಿದ್ದರು. ಪ್ರಸಾದ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ನೋಟ್ ಬುಕ್, ಪೆನ್ನು ಹಾಗೂ ಮಾಸ್ಕ್ ವಿತರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪದ್ಮನಾಭ ಕಾಂಚನ್ ಅವರು ಶೈಕ್ಷಣಿಕವಾಗಿ ಶಾಲೆಯ ಕೊಡುಗೆಗಳನ್ನು ಶ್ಲಾಘಿಸಿದರು. ಶಾಲೆಯ ಅಭಿವೃದ್ಧಿಗೆ ಸದಾ ಸಿದ್ದ ಎಂದರು. ನೀಲಕಂಠ ರಾವ್ ಇವರು ಶಾಲೆಗೆ ಕೊಡಮಾಡಿದ ನಾಲ್ಕು ಫ್ಯಾನ್ ಗಳನ್ನು ಶಾಲೆಗೆ ರೋಟರಿ ಕ್ಲಬ್ ವಲಯ 3 ರ ಸಹಾಯಕ ಗವರ್ನರ್ ಪದ್ಮನಾಭ ಕಾಂಚನ್ ಮೂಲಕ ಶಾಲಾ ಮುಖ್ಯಗುರುಗಳಾದ ಜಯಶ್ರೀಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ನೀಲಕಂಠ ರಾವ್ ರವರು ತಮ್ಮ ಊರಶಾಲೆಯ ಬಗೆಗಿನ ತಮ್ಮ ಅಭಿಮಾನವನ್ನು ತಮ್ಮ ಮಾತುಗಳ ಮೂಲಕ ತೋರಿಸಿಕೊಟ್ಟರು. ರೋಟರಿ ಕ್ಲಬ್ ಸೈಬ್ರಕಟ್ಟೆ ಇದರ ಅಧ್ಯಕ್ಷರಾದ ಪ್ರಸಾದ್ ಭಟ್ ಇವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ರೊಟರಿ ಕ್ಲಬ್ ನ ಶೈಕ್ಷಣಿಕ ಸೇವಾ ಕಾರ್ಯಗಳ ಬಗ್ಗೆ ತಿಳಿಸಿದರು.
ಅಣ್ಣಯ್ಯ ದಾಸ್, ನೀಲಕಂಠ ರಾವ್, ವಿಜಯಕುಮಾರ್ ಶೆಟ್ಟಿ, ಶಾಲಾ ಮುಖ್ಯಶಿಕ್ಷಕಿ ಜಯಶ್ರೀ , ಶಾಲಾ ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಕುಮಾರ್ ಶೋಧನ್, ಶಾಲಾ ವಿದ್ಯಾರ್ಥಿ ನಾಯಕ ಕುಮಾರ್ ಪ್ರಸನ್ನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಶಾಲಾ ಮುಖ್ಯಶಿಕ್ಷಕಿ ಜಯಶ್ರೀ ಅತಿಥಿಗಳನ್ನು ಸ್ವಾಗತಿಸಿ, ಕುಮಾರಿ ಕೀರ್ತಿ ಹಾಗೂ ಕುಮಾರಿ ಸಾಕ್ಷಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಶಾಲಾ ಶಿಕ್ಷಕಿ ನಾಗವೇಣಿ ವಂದಿಸಿದರು.