ಕಾಪು : ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆಕಟ್ಟಿದ್ದಾರೆ ಅನ್ನೋ ನೆಪದಲ್ಲಿ, ಪರಿಶಿಷ್ಟ ಜಾತಿಯ ವ್ಯಕ್ತಿಯೊಬ್ಬರ ಮನೆಯನ್ನು ಬಿಜೆಪಿಯವರ ಕುಮ್ಮಕ್ಕಿನಿಂದ ಶಿರ್ವ ಗ್ರಾಮಪಂಚಾಯತ್ ಪಿಡಿಓ ,ಕಾಪು ತಹಶೀಲ್ದಾರ್ ಆದೇಶದ ನೆಪವನ್ನು ಇಟ್ಟುಕೊಂಡು ಮನೆ ಧ್ವಂಸಗೊಳಿಸಿದ್ದು, ಈ ವಿಚಾರದಲ್ಲಿ ಸ್ಪಷ್ಟನೆ ಕೇಳಲು ತೆರಳಿದ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆಯವರ ಜೊತೆ ಅಮಾನವೀಯ ವರ್ತನೆ ತೋರಿ ಹಲ್ಲೆಗೆ ಯತ್ನಿಸಿದ ಪಿಡಿಓ ರವರನ್ನು ತಕ್ಷಣ ಅಮಾನತುಗೊಳಿಸಬೇಕು ಎಂದು ಕಾಪು ಯುವಕಾಂಗ್ರೆಸ್ ಒತ್ತಾಯಿಸಿದೆ.
ಈ ಮಧ್ಯೆ ಈ ವಿಚಾರದಲ್ಲಿ ಸೊರಕೆಯವರು ಮಾಧ್ಯಮ ಹೇಳಿಕೆ ನೀಡುತ್ತಿದ್ದ ಸಂದರ್ಭ ಏಕಾಏಕಿ ಬಿಜೆಪಿ ಗೂಂಡಾಗಳು, ಘೋಷಣೆ ಕೂಗುತ್ತಾ, ಸೊರಕೆಯವರ ಮಾತಿಗೆ ಅಡ್ಡಿಪಡಿಸಿದ್ದು, ಬಡಕುಟುಂಬದ ಮನೆಯನ್ನು ದ್ವಂಸಗೊಳಿಸುವಲ್ಲಿ ಬಿಜೆಪಿಯ ಕೈವಾಡ ಸ್ಪಷ್ಟವಾಗಿ ಗೋಚರವಾಗುತ್ತಿದ್ದು, ಶಿರ್ವ ಪಿಡಿಓ ಜೊತೆ ಸೇರಿ ಯಾವುದೇ ನೋಟಿಸ್ ನೀಡದೆ ಮನೆಯನ್ನು ದ್ವಂಸಗೊಳಿಸಿದ್ದು ಅತ್ಯಂತ ಖಂಡನೀಯ ಆ ಕುಟುಂಬ ಮನೆ ಇಲ್ಲದೆ ಈಗ ಬೀದಿಪಾಲಾಗಿದೆ. ಬಿಜೆಪಿಯವರಿಗೆ ನೈತಿಕತೆ ಇದ್ದರೆ ನೊಂದ ಮಹಿಳೆಯ ಕುಟುಂಬದ ಜೊತೆ ಇದ್ದು ಮನೆ ನಿರ್ಮಾಣ ಕಾರ್ಯದಲ್ಲಿ ನೈತಿಕ ಬೆಂಬಲ ಸೂಚಿಸಬೇಕು. ಕೂಡಲೇ ಆ ಬಡಕುಟುಂಬಕ್ಕೆ ಮನೆಯನ್ನು ಪಂಚಾಯತಿ ವತಿಯಿಂದಲೇ ನಿರ್ಮಾಣ ಮಾಡಿಕೊಡಬೇಕು ಎಂದು ಕಾಪು ಬ್ಲಾಕ್ ಯುವಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.