ಯಕ್ಷರಂಗದ ಭರವಸೆಯ ಭಾಗವತ ರೋಶನ್ ಕೋಟ್ಯಾನ್
Posted On:
14-02-2023 12:31AM
ಶತಮಾನಗಳ ಇತಿಹಾಸವಿರುವ ಯಕ್ಷಗಾನವು ಸದಾ ಪಂಡಿತ ಪಾಮರರ ಚಿಂತನ-ಮಂಥನದ ವಸ್ತುವಾಗಿರುದು ಯಕ್ಷಗಾನ ಕಲೆಯ ಜೀವಂತಿಕೆಯ ಲಕ್ಷಣವಾಗಿದೆ. ಇದರ ವರ್ಣರಂಜಿತ ಇತಿಹಾಸದಲ್ಲಿ ತೆಂಕು-ಬಡಗಿನ ಅನೇಕ ಕಲಾವಿದರು ಅವಿಸ್ಮರಣೀಯರು.ಯಕ್ಷರಂಗದಲ್ಲಿ ಮಿಂಚಿ ಕಲಾ ಪ್ರೇಮಿಗಳ ಮನಗೆದ್ದ ತನ್ನದೇ ಆದ ಛಾಪನ್ನು ಒತ್ತಿ ಪ್ರೇಕ್ಷಕರ ಮನ ಗೆಲ್ಲಲು ಅಂಗೈ ಅಗಲದ ರಂಗದಲ್ಲಿ ಕ್ಷಣಾರ್ಧದಲ್ಲಿ ಮೂರು ಲೋಕಗಳನ್ನು ಸಾಕ್ಷಾತ್ಕರಿಸಿ ಪುರಾಣ ಕಥೆಗಳಿಗೆ ಜೀವಂತಿಕೆಯನ್ನು ನೀಡಬಲ್ಲ ತೆಂಕು-ಬಡಗಿನ ಪ್ರಬುದ್ಧ ಕಲಾವಿದರನೇಕರು ಇಂದು ಕಣ್ಮರೆಯಾದರೂ ಅವರೆಲ್ಲರ ಆದರ್ಶನೀಯವಾದ ಮಾರ್ಗದರ್ಶನದಲ್ಲಿ ಯಕ್ಷರಂಗದತ್ತ ಪಾದ ಬೆಳೆಸುವ ಕಲಾವಿದರಿಂದ ಯಕ್ಷಗಾನವನ್ನು ಉಳಿಸಬೇಕು, ಬೆಳೆಸಬೇಕು ಮಾತ್ರವಲ್ಲದೆ ರಂಗಕರ್ಮಿಗಳ ಬದುಕನ್ನು ರೂಪಿಸಲೆಂದು ಉದಯಿಸಿರುವ ಸಂಘ ಸಂಸ್ಥೆಗಳು ಹಲವಾರು.ಹಾಗಾಗಿ ಸರ್ವಾಂಗ ಸುಂದರವಾದ ಯಕ್ಷಗಾನವು ನಮ್ಮ ಜಿಲ್ಲೆಯ ಜನ ಜೀವನದಲ್ಲಿ ಬೆರೆತಂತೆ ಮತ್ಯಾವ ಕಲಾ - ಪ್ರಕಾರವೂ ಬೆರೆತಿಲ್ಲವೆನ್ನಬಹುದು.
ಜಾನಪದ ಕಲಾಪ್ರಕಾರವು ಕೆಲವು ನಿರ್ದಿಷ್ಟ ಜಾತಿ,ಪಂಗಡಗಳಿಗೆ ಮಿಸಲಾಗಿದ್ದರೆ ಯಕ್ಷಗಾನಕ್ಕೆ ಆ ಬಂಧನವಿಲ್ಲ.ಈ ರಂಗದಲ್ಲಿ ಎಲ್ಲಾ ಸಮಾಜದ ಜನರು ವಿವಿಧ ಸ್ತರಗಳಲ್ಲಿ ಪಾರಂಗತರಾಗಿರುವುದನ್ನು ನಾವು ಕಾಣಬಹುದು. ಜನಾಕರ್ಷಣಿಯಾವಾದ ಈ ಕಲಾ ಪ್ರಪಂಚಕ್ಕೆ ಬೆಡಗಿಗೆ ಮನಸೋತು ತಾನೂ ಒಬ್ಬ ಅತ್ಯುತ್ತಮ ಕಲಾವಿದನಾಗಬೇಕೇಂಬ ಹಂಬಲ ಜಾಗ್ರತವಾದಾರೂ ಎಲ್ಲರಿಗೂ ಅವರ ಬಯಕೆ ಈಡೆರುವ ಅವಕಾಶ ಒದಗುವುದಿಲ್ಲ .ಪರಿಸರ ಪರಿಸ್ಥಿತಿ ಸಂಧರ್ಭದಲ್ಲಿ ಅನುಕೂಲವಾಗಿ ಒದಗಿ ಬಂದರೆ ಮಾತ್ರ ಬಾಳ ಪ್ರತಿಭೆಗಳಲ್ಲಿ ಸುಪ್ತವಾಗಿರುವ ಕಲಾ ಚೇತನಗಳಿಗೆ ಆಕಾರವು ಪ್ರಾಪ್ತಿಯಾಗುತ್ತದೆಯೆಂಬುದಕ್ಕೆ ಉಡುಪಿ ಜಿಲ್ಲೆಯ ಕಾಪು ಸಮೀಪದ ಮೂಳೂರು ತುರ್ಕಿ ತೋಟದ ಜಯಂತಿ ಶಿವರಾಮ ಕೋಟ್ಯಾನ್ ರವರ ಪುತ್ರ ರೋಶನ್ ಕೋಟ್ಯಾನ್ ರವರೆ ಉದಾಹರಣೆಯಾಗಿದ್ದಾರೆ.
"ಬೆಳೆಯುವ ಸಿರಿ ಮೊಳಕೆಯಲ್ಲಿ" ಎಂಬತೆ ಮಹಾನಗರ ಮುಂಬಯಿಯ ಘಾಟ್ಕೋಪಾರ್ ಪಶ್ಚಿಮ ಆಂಗ್ಲ ಮಾಧ್ಯಮದ ನಾರ್ತ್ ಬಾಂಬೆ ಶಾಲೆಯ ಆರನೇ ತರಗತಿ ಕಲಿಯುತ್ತಿರುವಾಗಲೇ ಶಾಲೆಯ ವಾರ್ಷಿಕೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಿಂದಲೇ ಪ್ರಶಂಸಿತನಾಗಿ ಭವಿಷ್ಯತ್ತಿನಲ್ಲಿ ತಾನೋರ್ವ ಶ್ರೇಷ್ಠ ಕಲಾವಿದನಾಗ ಬಲ್ಲೇ ಎಂಬ ಭರವಸೆಯನ್ನು ಮೂಡಿಸಿರುವ ಆ ಪುಟ್ಟ ಬಾಲಕನೇ ಇಂದು ಮುಂಬಯಿ ಹಾಗೂ ವಿದೇಶದಲ್ಲಿ ಯಕ್ಷ ಕಲಾಭಿಮಾನಿಗಳು ಕಂಡ "ಉದಯೋನ್ಮುಖ ಭಾಗವತ"
ಶಾಲೆಯ ಬಿಡುವಿನ ಸಮಯದಲ್ಲಿ ಇವರ ಕಲಾಭಿರುಚಿಯು ಕೆರಳಿ ಅದು ಪ್ರತಿಭೆಗೆ ಬರಲು ಪ್ರೋತ್ಸಾಹಿಸಿದವರೆಂದರೆ ಇವರ ಮಾತ- ಪಿತರು ,ಮಾತ್ರವಲ್ಲದೆ ಮನೆ ಸಮೀಪದ ಸಂಘಾನಿ ಶನಿ ಮಂದಿರದ ಭಕ್ತ ವ್ರಂದ.
ಇವರೆಲ್ಲರ ಸಂಪೂರ್ಣ ಸಹಕಾರದಿಂದ ಮಂದಿರದ ವಠಾರದಲ್ಲಿ ಜರಗುತ್ತಿದ್ದ ಪ್ರತಿಯೊಂದು ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತ ವ್ರಂದದ ಪ್ರಶಂಸೆಗೆ ಪಾತ್ರರಾದ ಅತ್ಯುತ್ತಮ ಭಜನಾ ಗಾಯಕರಾದ ಇವರ ಮಾವನಾದ ನಾಗೇಶ್ ಸುವರ್ಣರಿಂದ ಭಜನಾ ತರಬೇತಿಯನ್ನು ಅಲ್ಲದೆ ಶನಿಗ್ರಂಥ ಪಾರಾಯಣದ ತರಬೇತಿಯನ್ನು ಪಡೆದು ಎಲ್ಲರಿಂದಲೂ ಸೈ ಎನಿಸಿಕೊಂಡವರು.
ಯಕ್ಷರಂಗದ ಸವ್ಯಸಾಚಿಯೆಂದು ಖ್ಯಾತರಾದ ಕಟೀಲು ಮೇಳದ ಸುಪ್ರಸಿದ್ಧ ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜರಿಂದ ಮೃದಂಗನಾದವನ್ನು ಯಕ್ಷರಂಗದ ಪರಂಪರೆಯ ಯಕ್ಷಕಲಾ ಗುರುಗಳಾದ ಮೋಹನ ಬೈಪಡಿತ್ತಾಯರವರಿಂದ ಭಾಗವತಿಕೆಯನ್ನು ಅಭ್ಯಾಸ ಮಾಡಿ ಗುರು ಪ್ರೇರಣೆಯಂತೆ ಗುರುನಾರಾಯಣ ಮೇಳದವರ "ಶ್ರೀ ದೇವಿ ಮಹಾತ್ಮೆ" ಪ್ರಸಂಗದಲ್ಲಿ ಪ್ರಥಮ ಭಾಗವತಿಕೆಯನ್ನು ಮಾಡಿ ಪ್ರೇಕ್ಷಕರ ಮನಗೆದ್ದು ಗುರುಪ್ರಶಂಸೆಯನ್ನು ಪಡೆದ ಕಿರ್ತಿಗೆ ಭಾಜನರಿವರು.ಗುರುನಾರಯಣ ಮೇಳದ ಪ್ರಸಿದ್ಧ ಭಾಗವತ ಜಯಪ್ರಕಾಶ್ ನಿಡ್ವಣ್ಣಾಯರವರಿಂದ ಭಾಗವತಿಕೆಯ ಹೆಚ್ಚಿನ ತರಬೇತಿಯನ್ನು ಪಡೆದಿರುವ ಇವರು ಉದ್ಯೋಗದ ನಿಮಿತ್ತ ವಿದೇಶಕ್ಕೆ ತೆರಳಿ ಅಲ್ಲಿ ಶಿಪ್ಪಿಂಗ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ತನ್ನ ಕಲಾ ಪ್ರತಿಭೆಗೆ ಕಾರಣರಾಗಿರುವ ಹಿರಿಯ-ಕಿರಿಯರನೇಕರನ್ನು ಸದಾ ಸ್ಮರಿಸುತ್ತಿರುವ ಪ್ರಸ್ತುತ ವಿದೇಶದಲ್ಲಿರೂ ಆಗಾಗ್ಗೆ ತನ್ನ ತಾಯ್ನಾಡಿಗೆ ಮರಳಿದಾಗ ನಗರದಲ್ಲಿ ಜರಗುತ್ತಿರುವ ಪ್ರತಿಯೊಂದು ಸಂಘ ಸಂಸ್ಥೆಗಳ ಧಾರ್ಮಿಕ- ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ತನ್ನ ಕಲಾರಂಗದ ಮನದಾಸೆಯನ್ನು ಪೂರೈಸಿಕೊಂಡು ಸಂತಸ ಪಡುವ ಸಂತೃಪ್ತ ಕಲಾವಿದರು.
ಇವರ ಕಲಾ ಪ್ರೌಡಿಮೆಗೆ ತಾನಾಗಿ ಒಲಿದು ಬಂದ ಸನ್ಮಾನಗಳು, ಪ್ರಶಸ್ತಿಗಳು ಅನೇಕ.
ಅವುಗಳಲ್ಲಿ ಪ್ರಧಾನವಾದವು ಬೆಹರಿನ್ ಕರ್ನಾಟಕ ಸಂಘದ ವತಿಯಿಂದ ಹಾಗೂ "ಹವ್ಯಾಸಿ ಕಲಾವಿದರು" ಸೌದಿ ಅರೇಬಿಯಾ ಮತ್ತು "ಕುಡ್ಲ ಅಡ್ವೆಂಚರ್ " ದಮಾಮ್ ಇಲ್ಲಿ ಅಲ್ಲದೆ ಅಮ್ಮ ಕಲಾವಿದರು, ಪಟ್ಲ ಫೌಂಡೇಶನ್ ಟ್ರಸ್ಟ್. ಮುಂತಾದ ಕಡೆಗಳಲ್ಲಿ ಒದಗಿರುವ ಗೌರವ ಸನ್ಮಾನಗಳು ಅವಿಸ್ಮರಣೀಯವಾಗಿದೆ ಎನ್ನುತ್ತಾರೆ. ಮುಂಬೈಯ ಯಕ್ಷ ಭ್ರಾಮರಿ ನೃತ್ಯ ನಿಲಯದ ಸನ್ಮಾನವು ಮತ್ತು ಇವರಿಗೆ ಭ್ರಮರಇಂಚರ ಹಾಗೂ 2021 ಮುಂಬಾಯಿ ಯಲ್ಲಿ ನಡೆದ ಜಯ.ಸಿ. ಸುವರ್ಣ ಬಿಲ್ಲವಾರ್ ಐಕೊನ್ ಪ್ರಶಸ್ತಿ ತುಂಬಾ ಖುಷಿ ಕೊಟ್ಟಿದ್ದೆನ್ನುತ್ತಾರೆ. ಶ್ರೀಯುತರು 2013ರಲ್ಲಿ ಶ್ರೀ ಮತಿ ದೀಕ್ಷಾ ಎಂಬವರೊಡನೆ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿರುತ್ತಾರೆ ಇವರಿಗೆ ವೃತಿ ಎಂಬ ಪುಟ್ಟ ಹೆಣ್ಣು ಮಗಳು ಇದ್ದಾರೆ ಹೀಗೆ ಚಿಕ್ಕದಾದರೂ ಚೊಕ್ಕ ಸಂಸಾರದಲ್ಲಿ ಸಂತೃಪ್ತ ಜೀವನ ನಡೆಸುತ್ತಿದ್ದಾರೆ.
ವಿದೇಶದಲ್ಲಿ ಅದೆಷ್ಟೋ ಯಕ್ಷ ಕಲಾಭಿಮಾನಿಗಳು ಇದ್ದು ಅವರಿಗೆ ಇವರ ಭಾಗವತಿಕೆ ಎಂದರೆ ಅಚ್ಚು ಮೆಚ್ಚು. ಇವರು ವಿದ್ಯಭ್ಯಾಸವನ್ನು ಮುಂಬೈಯಲ್ಲಿ ಪೂರ್ಣಗಳಿಸಿರುದರಿಂದ ಇವರಿಗೆ ಕನ್ನಡ ಅಕ್ಷರ ಓದಲು ಬರೆಯಲು ಬರುವುದಿಲ್ಲ ಆದರೂ ಇವರು ಛಲ ಬಿಡದೆ ಕನ್ನಡದಲ್ಲಿ ಬರೆದ ಭಾಗವತಿಕೆಯನ್ನು ಹಲವರ ಸಹಾಯದಿಂದ ಹಿಂದಿ ಭಾಷೆಯಲ್ಲಿ ಬರೆದು ಭಾಗವತಿಕೆಯನ್ನು ಅಭ್ಯಾಸ ಮಾಡುತ್ತಾರೆ.ಈ ವೃತ್ತಿ ಜೀವನದಲ್ಲಿ ಸಮಯ ಸರಿಯಾಗಿ ಸಿಕ್ಕಿಲ್ಲವೆಂದರೂ ಸುಮಾರೂ ಮೂರು ಗಂಟೆಗಳ ಕಾಲ ತನ್ನ ವಾಹನದಲ್ಲಿ ಸಂಚಾರ ಮಾಡಿ ಯಕ್ಷಗಾನ ಅಭ್ಯಾಸ ಮಾಡಿ ಮತ್ತು ಯುವಕರನ್ನು ಯಕ್ಷರಂಗದತ್ತ ಒಲವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ತನ್ನ ಕಲಾ ಜೀವನದಲ್ಲಿ ಸಂಪೂರ್ಣ ರೀತಿಯಲ್ಲಿ ಸಹಕರಿಸುವ ಕಟೀಲು ಮೇಳದ ಪ್ರಸಿದ್ಧ ಭಾಗವತ ಸತೀಶ್ ಶೆಟ್ಟಿ ಬೊಂದೆಲ್ ಹಾಗೂ ಪ್ರಸಿದ್ಧ ಸ್ತ್ರೀ ಪಾತ್ರಧಾರಿ ದೀಪಕ್ ರಾವ್ ಪೇಜಾವರ ಅವರ ಹಾಗೂ ಪ್ರಸಿದ್ಧ ಭಾಗವತ ಸತೀಶ್ ಶೆಟ್ಟಿ ಪಟ್ಲ ಇವರ ಹೆಸರನ್ನು ಹೇಳಲು ಮರೆಯುದಿಲ್ಲ.
ಬೊಟ್ಟಿಕೆರೆ ಪುರುಷೋತ್ತಮ ಪೂಂಜರು,ಮೋಹನ ಬೈಪಾಡಿತ್ತಾಯರು,ಜಯಪ್ರಕಾಶ್ ನಿಡ್ವಣ್ಣಾಯರು ಹೀಗೆ ಗುರುತ್ರಯರಿಂದ ಯಕ್ಷ ರಂಗದ ತರಬೇತಿ ಪಡೆದಿರುವ ಇವರು ಭವಿಷ್ಯತ್ತಿನಲ್ಲಿ ಅತ್ಯುತ್ತಮ ಕಲಾವಿದನಾಗಿ ಯಕ್ಷ ಪ್ರಪಂಚದಲ್ಲಿ ವಿಜೃಂಭಿಸಲಿಯೆಂಬುದೇ ನಮ್ಮ ಶುಭ ಹಾರೈಕೆ.