ಶಿರ್ವ ಗ್ರಾಮ ಪಂಚಾಯತ್ ಗೆ ಎರಡನೆಯ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರದ ಗರಿಮೆ
Posted On:
20-02-2023 05:16PM
ಶಿರ್ವ : ಇಲ್ಲಿನ ಗ್ರಾಮ ಪಂಚಾಯತ್ ಗೆ ಎರಡನೆ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ ದೊರೆತಿರುವುದು ತುಂಬಾ ಸಂತಸದ ವಿಚಾರ. ಈ ಹಿಂದೆ 2020 ರಲ್ಲಿ ಶಿರ್ವಾ ಗ್ರಾಮ ಪಂಚಾಯತ್ ನ ಇತಿಹಾಸದಲ್ಲಿಯೇ ಪ್ರಥಮ ಭಾರಿಗೆ ಬಿಜೆಪಿ ಬೆಂಬಲಿತ ಪಂಚಾಯತ್ ಅಧ್ಯಕ್ಷರಾದ ವಾರಿಜಾ ಪೂಜಾರಿಯವರ ಹಾಗೂ ಉಪಾಧ್ಯಕ್ಷರಾದ ದೇವದಾಸ್ ನಾಯಕ್ ಇವರ ಅವಧಿಯಲ್ಲಿ ಗಾಂಧಿ ಗ್ರಾಮ ಗೌರವಕ್ಕೆ ಪಾತ್ರವಾಗಿದೆ.
ವಾರಿಜಾ ಪೂಜಾರಿಯವರ ಅಧಿಕಾರಾವಧಿಯಲ್ಲಿ ಶಿರ್ವ ಗ್ರಾಮ ಪಂಚಾಯತ್ ಸ್ವಚ್ಛತೆಯನ್ನು ಪಾಲಿಸುವ ಸಲುವಾಗಿ ವಿಶೇಷ ಗಮನವನ್ನು ಕೊಟ್ಟು ಸಮಗ್ರವಾಗಿ ಹಸಿ ಕಸ ಹಾಗೂ ಒಣ ಕಸವನ್ನು ವಿಂಗಡನೆ ಮಾಡಲು ಎಸ್.ಎಲ್.ಆರ್.ಎಂ.ಘಟಕವನ್ನು ಸ್ಥಾಪಿಸಿದ ಹೆಗ್ಗಳಿಕೆಯೂ ವಾರಿಜಾ ಪೂಜಾರಿಯವರಿಗೆ ಸಲ್ಲುತ್ತದೆ. ಅಲ್ಲದೇ ಪ್ರತಿನಿತ್ಯ ಕೇವಲ ಒಂದೇ ಕಸ ಸಂಗ್ರಹಿಸುವ ವಾಹನ ಹಾಗೂ ನಿಯಮಿತ ಸ್ವಚ್ಛತಾ ಸಿಬಂದಿಗಳಿದ್ದರೂ ಬಹಳ ಉತ್ತಮ ರೀತಿಯಲ್ಲಿ ಕಸ ವಿಲೇವಾರಿಯ ಕೆಲಸವನ್ನೂ ನಿರ್ವಹಿಸುತ್ತಾರೆ. ಇದರ ಮೊದಲು ಶಿರ್ವ ಬಸ್ಸು ತಂಗುದಾಣ,ಪೇಟೆಯ ಸುತ್ತ ಮುತ್ತದಲ್ಲಿ ಕಸದ ರಾಶಿಗಳು ಗಬ್ಬು ನಾರುತ್ತಿತ್ತು.
2020 ರಲ್ಲಿ ಗಾಂಧಿ ಗ್ರಾಮ ಪ್ರಶಸ್ತಿ ದೊರಕುವಲ್ಲಿ ಶಿರ್ವ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳಾದ ಅನಂತ ಪದ್ಮನಾಭ ನಾಯಕ್ ಇವರ ಶ್ರಮವನ್ನು ಮರೆಯುವಂತಿಲ್ಲ. ಅವರ ಮೊದಲ ಆದ್ಯತೆ ಸ್ವಚ್ಛತೆಯ ಕಡೆಗೆ ಇತ್ತು. ಇದರೊಂದಿಗೆ ಗ್ರಾಮ ಪಂಚಾಯತ್ ಸದಸ್ಯರ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳ ಸಹಕಾರ ಸ್ವಚ್ಛತಾ ಸಿಬ್ಬಂದಿಗಳ ಶ್ರಮವನ್ನು ಮರೆಯುವಂತಿಲ್ಲ.
ಪ್ರಸ್ತುತ ಎರಡನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರವು ದೊರೆಯಲು ಈ ಹಿಂದೆ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಆಡಳಿತ ಅವಧಿಯಲ್ಲಿ ಹಾಕಿದ ಭದ್ರಬುನಾದಿಯೇ ಮೂಲ ಕಾರಣವಾಗಿದೆ ಎಂಬುದನ್ನು ಗ್ರಾಮಸ್ಥರು ಎಂದಿಗೂ ಮರೆಯುವಂತಿಲ್ಲ ಎಂದು ಉಡುಪಿ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ರವೀಂದ್ರ ಪಾಟ್ಕರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.