ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಉಚ್ಚಿಲ : ಸ್ಕೂಟರ್ ಡಿಕ್ಕಿ ಹೊಡೆದು ವ್ಯಕ್ತಿ ‌ಮೃತ್ಯು

Posted On: 31-03-2023 07:23PM

ಉಚ್ಚಿಲ : ಸ್ಕೂಟರೊಂದು ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಯೋರ್ವರಿಗೆ ಡಿಕ್ಕಿ ಹೊಡೆದು ಆ ವ್ಯಕ್ತಿ ‌ಮೃತಪಟ್ಟ ಘಟನೆ ಕಾಪು ತಾಲೂಕು ಬಡಾ ಗ್ರಾಮ ಉಚ್ಚಿಲದ ಮಹಾಲಕ್ಷ್ಮೀ ದೇವಸ್ಥಾನದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ‌ನಡೆದಿದೆ.

ಎರ್ಮಾಳು ಬಡಾ ಗ್ರಾಮದ ಗೋಪಾಲ ಎ. ಕರ್ಕೆರ (68) ಮೃತಪಟ್ಟವರು. ಇವರು ತಮ್ಮ ಅಣ್ಣನ ಮಗ ರವಿ ವಿ.ಸುವರ್ಣ ಅವರೊಂದಿಗೆ ಮಾಚ್೯ 30ರಂದು ಉಚ್ಚಿಲ ದೇವಸ್ಥಾನಕ್ಕೆ ಪೂಜೆಗೆಂದು ಹೋಗಿ ಪೂಜೆ ಮುಗಿಸಿ ವಾಪಾಸ್ಸು ಮನೆಗೆ ತೆರಳುವ ವೇಳೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುವ ಏಕಮುಖ ಸಂಚಾರ ರಸ್ತೆಯಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಸ್ಕೂಟರ್ ಸವಾರ ಜೈ ಪ್ರಕಾಶ್ ಎಂಬಾತ ರಸ್ತೆಯ ಬದಿಯಲ್ಲಿ ನಿಂತಿದ್ದ ಗೋಪಾಲ ಎ ಕರ್ಕೆರ ರವರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ರಸ್ತೆಗೆ ಬಿದ್ದ ಬೈಕ್ ಸವಾರ ಹಾಗೂ ಸಹಸವಾರನಿಗೂ ಗಾಯವಾಗಿದ್ದು ಗೋಪಾಲ ಎ ಕರ್ಕೆರ ಅವರು ಗಂಭೀರ ಗಾಯಗೊಂಡಿದ್ದರು.

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಗೋಪಾಲ ಎ ಕರ್ಕೆರ ಅವರನ್ನು ತಕ್ಷಣ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಆಸ್ಪತ್ರೆಯಲ್ಲಿ ಗೋಪಾಲ ಎ ಕರ್ಕೆರ ರವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಈ ಬಗ್ಗೆ ರವಿ ವಿ. ಸುವರ್ಣ ಅವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.