ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು :ಕನ್ನಡ ಸಾಹಿತ್ಯ ಪರಿಷತ್ತು - ೧೦೯ನೇ ಸಂಸ್ಥಾಪನಾ ದಿನಾಚರಣೆ, ದತ್ತಿ ಉಪನ್ಯಾಸ ಕಾರ್ಯಕ್ರಮ

Posted On: 06-05-2023 05:53PM

ಕಾಪು : ಹಲವು ವರ್ಷಗಳ ಹಿಂದೆ ಮಾನವನಿಗೆ ಸ್ವಂತವಾದ ಬದುಕಿದೆಯೆಂದು ಯೋಚನೆ ಇರಲಿಲ್ಲ. ಎಲ್ಲವೂ ದೇವರೆಂಬ ಕಲ್ಪನೆಯಲ್ಲಿದ್ದರು. ಭಾರತದಲ್ಲಿ ಬಸವಣ್ಣನಂತಹ ದಾರ್ಶನಿಕರು ದೇವರು ಮತ್ತು ಮನುಷ್ಯನಿಗೆ ನೇರವಾಗಿ ಸಂಬಂಧವಿದೆ ಎಂದು ಮೊದಲ ಬಾರಿಗೆ ತಿಳಿಸಿದರು. ವಚನಕಾರರು ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ವಚನಗಳು ಸಾಹಿತ್ಯದಲ್ಲಿ ಶ್ರೇಷ್ಠವಾಗಿದೆ. ನಮ್ಮ ರಾಜ್ಯದ ಶ್ರೀಮಂತಿಕೆಯನ್ನು, ಪ್ರಕೃತಿಯ ಸೊಬಗನ್ನು ಕೆ.ಎಸ್.ನಿಸಾರ್ ಅಹಮದ್ ರಂತಹ ಕವಿಗಳು ಪದ್ಯದ ಮೂಲಕ ಜಗತ್ತಿಗೆ ಸಾರಿದ್ದಾರೆ ಎಂದು ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸ್ಟೀವನ್ ಕ್ವಾಡ್ರಸ್ ಹೇಳಿದರು. ಅವರು ಶುಕ್ರವಾರ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ಆಶ್ರಯದಲ್ಲಿ ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರಗಿದ ಕನ್ನಡ ಸಾಹಿತ್ಯ ಪರಿಷತ್ತಿನ ೧೦೯ನೇ ಸಂಸ್ಥಾಪನಾ ದಿನಾಚರಣೆ - ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇವರು ಕೇಂದ್ರಿತ ನೃತ್ಯಗಳಲ್ಲಿ ತುಳುನಾಡಿನ ಕಂಗೀಲು, ಉತ್ತರ ಕನ್ನಡದ ವೀರಭದ್ರ ಕುಣಿತ, ಕಂಸಾಲೆ ಇತ್ಯಾದಿ ಜಾನಪದ ನೃತ್ಯ ಪ್ರಾಕಾರಗಳು ಮನುಷ್ಯ ಮತ್ತು ದೇವರಿಗೆ ಸಂಬಂಧಿತ ನೃತ್ಯಗಳಾಗಿವೆ ಎಂದರು. ಕಸಾಪ ಉಡುಪಿ ಜಿಲ್ಲೆಯ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳಲ್ಲಿ ಕನ್ನಡ ನಾಡು ನುಡಿ ಪರಂಪರೆಯ ಬಗ್ಗೆ ಮತ್ತು ದತ್ತಿ ಉಪನ್ಯಾಸದ ಮಹತ್ವದ ಬಗ್ಗೆ ತಿಳಿಸಿದರು. ಪುರಂದರದಾಸರ ಬಗ್ಗೆ ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕರಾದ ಪ್ರೊ. ಎ.ಆರ್. ನಾಯ್ಕ್ ಮಾತನಾಡಿ, ತನ್ನೆಲ್ಲ ಸರ್ವಸ್ವ ಧಾರೆಯೆರೆದು ದಾಸನಾಗಿ ಎಲ್ಲಾ ವರ್ಗದ ಜನರ ಒಡನಾಟವನ್ನು ಮಾಡಿ ತನ್ನ ಅನುಭವಗಳನ್ನು ಕೀರ್ತನೆಗಳ ಮೂಲಕ ಪುರಂದರದಾಸರು ಜನರಿಗೆ ತಿಳಿಸಿದರು. ವರ್ತನೆಯಲ್ಲಿ ಪರಿವರ್ತನೆ ಮಾಡಿದಾಗ ಮನುಷ್ಯನಾಗಬಹುದು. ಶಾಸನಗಳಲ್ಲಿಯೂ ಪುರಂದರದಾಸರ ಬಗ್ಗೆ ಮಾಹಿತಿ ಇದೆ. ಕನ್ನಡ ಸಾಹಿತ್ಯ ಹಲವಾರು ಕವಿಗಳನ್ನು ಕಂಡಿದೆ. ಜೊತೆಗೆ 8 ಜ್ಞಾನ ಪೀಠದ ಗೌರವ ಕನ್ನಡಕ್ಕೆ ದೊರೆತಿದೆ. ಕನ್ನಡವನ್ನು ಉಳಿಸಿ ಬೆಳೆಸಲು ಕನ್ನಡದ ಮನಸ್ಸುಗಳು ಒಂದಾಗಬೇಕಿದೆ ಎಂದರು.

ಬಯಲಾಟದ ಕುರಿತು ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಡಾ| ಗೋಪಾಲಕೃಷ್ಣ ಗಾಂವ್ಕರ್ ಮಾತನಾಡಿ ಬಯಲಾಟವು ಉತ್ತರ ಕರ್ನಾಟಕದಲ್ಲಿ ಜಾನಪದ ಕಲೆಯಾಗಿ ಕನ್ನಡ ಭಾಷೆಯಲ್ಲಿ ನೀತಿ ನಿಯಮ, ಹೊಸ ವಿಷಯಗಳನ್ನು ಜನರಿಗೆ ಮುಟ್ಟಿಸುವ ಮಾಧ್ಯಮವಾಗಿದೆ. ನಮ್ಮ ಸುತ್ತ ಮುತ್ತಲಿನ ಘಟನಾವಳಿಗಳು ಕನ್ನಡದಲ್ಲಿರುತ್ತದೆ. ಅದನ್ನು ನಾವು ಅರಗಿಸಿಕೊಳ್ಳುವ ತಾಕತ್ತು ನಮಗೆ ಬಂದಾಗ ನಾವು ಬೇರೆ ಭಾಷೆ, ವ್ಯವಸ್ಥೆಯಲ್ಲಿ ಮಾತನಾಡಲು ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಕಾಪು ತಾಲೂಕು ಘಟಕದ ಅಧ್ಯಕ್ಷರಾದ ಬಿ.ಪುಂಡಲೀಕ ಮರಾಠೆ ವಹಿಸಿದ್ದರು. ಈ ಸಂದರ್ಭ ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಸಂಯೋಜಕರಾದ ಡಾ| ರೋಶ್ನಿ ಯಶ್ವಂತ್, ಉಡುಪಿ ಜಿಲ್ಲಾ ಘಟಕದ ನರಸಿಂಹ ಮೂರ್ತಿ ರಾವ್, ಕಸಾಪ ಕಾಪು ಘಟಕದ ಕೋಶಾಧಿಕಾರಿ ವಿದ್ಯಾಧರ ಪುರಾಣಿಕ್, ಕೃಷ್ಣಕುಮಾರ್ ರಾವ್, ಮಧುಕರ ಎಸ್. ಯು, ದೀಪಕ್ ಬೀರ ಉಪಸ್ಥಿತರಿದ್ದರು.

ಗಾಯಕ ಡಾ| ಗಣೇಶ್ ಗಂಗೊಳ್ಳಿಯವರಿಂದ ಕನ್ನಡ ಗೀತೆಗಳ ಗಾಯನವು ನಡೆಯಿತು. ಕಸಾಪ ಕಾಪು ಘಟಕದ ಸದಸ್ಯ ರಾಕೇಶ್ ಕುಂಜೂರು ಸ್ವಾಗತಿಸಿದರು. ಎಸ್.ಎಸ್. ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಕಸಾಪ ಕಾಪು ಘಟಕದ ಕಾರ್ಯದರ್ಶಿ ನೀಲಾನಂದ ನಾಯ್ಕ ವಂದಿಸಿದರು.