ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪಡುಬಿದ್ರಿ : ಸಿ ಎ ಸೊಸೈಟಿ - ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದೊಡ್ಡ ಪ್ರಮಾಣದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನಿಯೋಗ ಭೇಟಿ

Posted On: 27-06-2023 07:38PM

ಪಡುಬಿದ್ರಿ :ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಿಟ್ಟಕೊಪ್ಪಲು ಗ್ರಾಮದ ದೊಡ್ಡ ಪ್ರಮಾಣದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳ ನಿಯೋಗ ಇಂದು ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಗೆ ಭೇಟಿ ನೀಡಿದರು.

ಈ ಸಂದರ್ಭ ಮಾತನಾಡಿದ ಮಳವಳ್ಳಿ ತಾಲೂಕಿನ ದೊಡ್ಡ ಪ್ರಮಾಣದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಎಚ್ ಬಿ ಬಸವೇಶ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಹಕಾರಿ ವ್ಯವಸಾಯಿಕ ಸೊಸೈಟಿಗಳು ಉತ್ತಮ ಠೇವಣಾತಿಯ ಹೆಚ್ಚಳದಿಂದ ಲಾಭಾಂಶದಿಂದ ಕೂಡಿವೆ. ಈಗಾಗಲೇ ಬ್ರಹ್ಮಾವರ ಸೇರಿದಂತೆ ವಿವಿಧ ಸಹಕಾರಿ ವ್ಯವಸಾಯಿಕ ಸೊಸೈಟಿಗಳಿಗೆ ಭೇಟಿ ನೀಡಲಾಗಿದೆ. ನಮ್ಮ ಭಾಗದಲ್ಲಿ ಬೆಳೆ ಸಾಲ ಮಾತ್ರವಿದ್ದು ಠೇವಣಾತಿ ಇದ್ದರೂ ಜನ ಹಣ ಇಡುತ್ತಿಲ್ಲ. ಈ ಬಗ್ಗೆ ನಮ್ಮಲ್ಲಿಯೂ ಕರಾವಳಿಯ ಭಾಗದಂತೆ ಜನರು ಸಹಕಾರಿ ಸೊಸೈಟಿಗಳೆಡೆಗೆ ಆಸಕ್ತಿಯುತರಾಗಿ ಮಾಡುವ ಗುರಿಯಿದೆ. ಈ ನಿಟ್ಟಿನಲ್ಲಿ ಈ ಭಾಗದ ಆಯ್ದ ಸಹಕಾರಿ ಸಂಘಗಳಿಗೆ ಭೇಟಿಯಿತ್ತಿದ್ದೇವೆ ಎಂದರು.

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಅಧ್ಯಕ್ಷ ವೈ ಸುಧೀರ್ ಕುಮಾರ್ ಮಾತನಾಡಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಿಟ್ಟಕೊಪ್ಪಲು ಗ್ರಾಮದ ದೊಡ್ಡ ಪ್ರಮಾಣದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳ ತಂಡ ಬಂದಿದ್ದು ಇಲ್ಲಿಯ ಕಾರ್ಯ ವೈಖರಿಯನ್ನು ಪರಿಶೀಲಿಸಿದ್ದಾರೆ. ಮಳವಳ್ಳಿಯಲ್ಲೂ ಇದೇ ರೀತಿ ಸಹಕಾರಿ ಸಂಘವನ್ನು ಸುಧಾರಣೆಗೊಳಿಸುವುದಾಗಿ ಎಂದು ಸಹಕಾರ ಸಂಘದ ಅಧ್ಯಕ್ಷ ಎಚ್ ಬಿ ಬಸವೇಶ್ ಹೇಳಿದ್ದಾರೆ ಎಂದರು.

ಈ ಸಂದರ್ಭ ಮಳವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 11ಮಂದಿ ನಿರ್ದೇಶಕರು, ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸಂಘದ ಉಪಾಧ್ಯಕ್ಷ ಗುರುರಾಜ ಪೂಜಾರಿ, ಹಿರಿಯ ನಿರ್ದೇಶಕ ವೈ. ಜಿ. ರಸೂಲ್, ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೀಪಕ್ ಸಾಲ್ಯಾನ್ ಹಾಗೂ ನಿರ್ದೇಶಕ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಪಡುಬಿದ್ರಿ ಕಾರ್ಯನಿರ್ವಹಣಾಧಿಕಾರಿ ನಿಶ್ಮಿತಾ ಪಿ. ಎಚ್. ಸ್ವಾಗತಿಸಿ, ವಂದಿಸಿದರು.