ಪಡುಬಿದ್ರಿ : ಅದಾನಿ ಸ್ಥಾವರದಲ್ಲಿ ಕಾಮಗಾರಿ ವೇಳೆ ಅವಘಡದಲ್ಲಿ ಕಾರ್ಮಿಕ ಮೃತ್ಯು
Posted On:
29-07-2023 01:47PM
ಪಡುಬಿದ್ರಿ : ಎಲ್ಲೂರಿನ ಅದಾನಿ ಯುಪಿಸಿಎಲ್ ವಿದ್ಯುತ್ ಸ್ಥಾವರದಲ್ಲಿ ಎಫ್ಜಿಡಿ ಸ್ಥಾವರದ ಕಾಮಗಾರಿ ವೇಳೆ ಕಬ್ಬಿಣದ ದೊಡ್ಡ ಬೀಮ್ ಕುಸಿದು ಕಾರ್ಮಿಕ ಸಾವನ್ನಪ್ಪಿದ್ದ ಘಟನೆ ಶುಕ್ರವಾರ ನಡೆದಿದೆ.
ರಾಜಸ್ಥಾನ ಮೂಲದ ಮುಲಾರಾಮ್(21) ಮೃತಪಟ್ಟ ಕಾರ್ಮಿಕ ಘಟನೆಯಿಂದ ಮೂವರು ಗಂಭೀರ ಗಾಯಗೊಂಡಿದ್ದಾರೆ.
ಅದಾನಿ ಸ್ಥಾವರದೊಳಗೆ ಎಫ್ಜಿಡಿ ಸ್ಥಾವರದ ಕಾಮಗಾರಿ ನಡೆಯುತ್ತಿದ್ದು, ಬಹುತೇಕ ಶೇ.75 ಕಾಮಗಾರಿ ಮುಕ್ತಾಯಗೊಳ್ಳುತ್ತಾ ಬಂದಿದೆ.ಅದಾನಿ ಸಂಸ್ಥೆಯು ಪವರ್ ಮೆಕ್ ಕಂಪನಿಗೆ ಈ ಕುರಿತಾದ ಗುತ್ತಿಗೆ ನೀಡಿದ್ದು, ಆ ಕಂಪನಿ ಕೇರಳದ ಸುನ್ನಿ ಮತ್ತು ವೆಲ್ ಟೆಕ್ ಎಂಬ ಸಂಸ್ಥೆಯನ್ನು ಪರ್ಯಾಯವಾಗಿ ಈ ಕಾರ್ಯಕ್ಕಾಗಿ ನೇಮಕ ಮಾಡಿತ್ತು.
ಆ ಕಂಪನಿಯ 5 ಮಂದಿ ಶುಕ್ರವಾರ ಮಧ್ಯಾಹ್ನದ ವೇಳೆ ಕ್ರೇನ್ ಮೂಲಕ ರೋಪ್ ಕಟ್ಟಿಕೊಂಡು ಸುರಕ್ಷತಾ ಕ್ರಮವಾಗಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭ ಕ್ರೇನ್ನ ರೋಪ್ ತುಂಡಾಗಿ ಕಟ್ಟಡದ ಬೀಮ್ ಒಂದು ನೆಲಕ್ಕುರುಳಿದೆ. ನಾಲ್ವರು ರೋಪ್ ಸಮೇತ ನೆಲಕ್ಕುರುಳಿದ್ದರು. ಅವರಲ್ಲಿ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯದಲ್ಲಿ ಮುಲಾರಾಮ್ ಮೃತಪಟ್ಟಿದ್ದಾರೆ. ಇನ್ನು ಗಂಭೀರ ಗಾಯಗೊಂಡು ಮೂವರು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.