ಉಡುಪಿ ಜಿಲ್ಲೆಯಾದ್ಯಂತ ಪಡಿತರ ಕಾರ್ಡು ತಿದ್ದುಪಡಿ, ಸ್ವೀಕೃತವಾಗದ ಗೃಹಲಕ್ಷ್ಮಿ ಅರ್ಜಿ, ತಾಂತ್ರಿಕ ಸಮಸ್ಯೆ ಸರಿಪಡಿಸಿ : ಕಾಪು ಜಯರಾಮ ಆಚಾರ್ಯ
Posted On:
13-08-2023 12:11PM
ಉಡುಪಿ : ಜಿಲ್ಲೆಯಾದ್ಯಂತ ತಿಂಗಳ ಹಿಂದೆ ಪಡಿತರ ಕಾರ್ಡ್ ತಿದ್ದುಪಡಿ ಮಾಡಿಸಿಕೊಂಡವರು, ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಲು ತಾಂತ್ರಿಕ ಸಮಸ್ಯೆ ಎದುರಾಗಿದೆ ಇದನ್ನು ಸರಿಪಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಕಾಪು ಜಯರಾಮ ಆಚಾರ್ಯ ಆಗ್ರಹಿಸಿದ್ದಾರೆ.
ಪಡಿತರ ಕಾರ್ಡ್ ನಲ್ಲಿ ಕುಟುಂಬದ ಯಜಮಾನಿ ಹೆಸರನ್ನು ಬದಲಾವಣೆ ಮಾಡಿಸಿಕೊಂಡಿರುವವರು ಮತ್ತು ಮೃತರ ಹೆಸರನ್ನು ಪಡಿತರ ಕಾರ್ಡ್ ನಿಂದ ತೆಗೆಸಿದವರು ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಸಲು ಅರ್ಜಿ ಸ್ವೀಕಾರ ಆಗುತ್ತಿಲ್ಲ.ಇದರಿಂದ ಮಹಿಳೆಯರು ಬೇಸರ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಪಡಿತರ ಚೀಟಿ ಪ್ರಮುಖವಾದ ದಾಖಲೆ. ಕುಟುಂಬದ ಯಜಮಾನಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯಾಗಲು ಸಾಧ್ಯ. ಈ ಕಾರಣಕ್ಕೆ ಸಾಕಷ್ಟು ಪಡಿತರ ಚೀಟಿಗಳು ಕಳೆದ ಒಂದು ತಿಂಗಳಿಂದ ತಿದ್ದುಪಡಿಯಾಗಿವೆ. ಈ ರೀತಿ ತಿದ್ದುಪಡಿ ಆದ ಪಡಿತರ ಚೀಟಿಗಳು ಜಿಲ್ಲಾವಾರು ನೀಡಿರುವ ಅಂಕಿ ಸಂಖ್ಯೆಗಳಲ್ಲಿ ತಿದ್ದುಪಡಿಯಾಗದ ಕಾರಣ ಗೃಹಲಕ್ಷ್ಮಿ ಅರ್ಜಿಗಳು ಸ್ವೀಕ್ರತವಾಗುವುದಿಲ್ಲ ಎಂದು ನೋಂದಣಿ ಕೇಂದ್ರಗಳ ಸಿಬ್ಬಂದಿ ಹೇಳುತ್ತಿದ್ದಾರೆ.
ಈ ಹಿಂದೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯವರು ನೀಡಿರುವ ಅಂಕಿ ಸಂಖ್ಯೆಗಳ ಆಧಾರದ ಮೇಲೆ ಗೃಹಲಕ್ಷ್ಮೀ ಫಲಾನುಭವಿಗಳ ನೋಂದಣಿಯನ್ನು ಮಾಡಿಕೊಳ್ಳಲಾಗುತ್ತಿದೆ. ಪಡಿತರ ಕಾರ್ಡ್ ತಿದ್ದುಪಡಿ ಆಗಿರುವ ಅಂಕಿ ಸಂಖ್ಯೆಗಳನ್ನು 2ನೇ ಹಂತದಲ್ಲಿ ಪಡೆದು ಗೃಹಲಕ್ಷ್ಮಿ ಯೋಜನೆಯ ನೋಂದಣಿ ಕಾರ್ಯವನ್ನು ಶೀಘ್ರ ಮಾಡಕೊಡಬೇಕು. ಆದಷ್ಟು ಶೀಘ್ರ ಈ ಲೋಪ ವನ್ನು ಸರಿಪಡಿಸಿ ಉಡುಪಿ ಜಿಲ್ಲೆಯಲ್ಲಿ ನಿಜವಾದ ಫಲಾನುಭವಿಗಳಿಗೆ ಯೋಜನೆ ಲಭಿಸುವಂತೆ ಮಾಡಬೇಕು. ಈ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಮತ್ತು ನೋಡಲ್ ಅಧಿಕಾರಿಗಳು ಕೂಡಲೇ ಕ್ರಮ ವಹಿಸಿ ಮಹಿಳೆಯರಿಗೆ ಈ ಸೌಲಭ್ಯ ಸಿಗುವಂತೆ ಮಾಡಬೇಕು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.