ಕಾಪು : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಅ.15ರಂದು ಭಾನುವಾರ ಬೆಳಿಗ್ಗೆ ಗಂಟೆ 09:09ಕ್ಕೆ ಸರಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ಮತ್ತು ನವಶಕ್ತಿ ವೈಭವ ವೇಷ ಭೂಷಣ/ ನೃತ್ಯರೂಪಕ ಸ್ಪರ್ಧೆಯೊಂದಿಗೆ ಮೊದಲ್ಗೊಂಡು ಅ. 24 ರವರೆಗೆ ಶ್ರೀ ಶರನ್ನವರಾತ್ರಿ ಮಹೋತ್ಸವವು ಜರಗಲಿದೆ. ಇದರೊಂದಿಗೆ ಅ. 17ರಂದು ಚಂಡಿಕಾಯಾಗ ಪೂರ್ಣಾಹುತಿ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ಸಂಪನ್ನಗೊಳ್ಳಲಿದೆ.
ಶರನ್ನವರಾತ್ರಿ ಮಹೋತ್ಸವ ಪ್ರಯುಕ್ತ ಅ.15ರಿಂದ ಮೊದಲ್ಗೊಂಡು ಅ. 24ರವರೆಗೆ ಪ್ರತೀ ದಿನ ಮಂಗಳ ವಾದ್ಯ, ಉಷಾಃ ಕಾಲ ಕಲ್ಪೋಕ್ತ ಪೂಜೆ,
ಗಣಯಾಗ, ಶಕ್ತಿಯಾಗ, ಲಲಿತಾರ್ಚನೆ, ಸುವಾಸಿನಿ ಪೂಜೆ, ರಾತ್ರಿ ಪೂಜೆ ಮತ್ತು ಏಕಾಂತ ಸೇವೆ ನಡೆಯಲಿದೆ. ಹಾಗೂ ಭಜನೆ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ.
ಅ. 15ರಂದು ಪೂರ್ವಾಹ್ನ ಕವಾಟೋದ್ಘಾಟನೆ, ಅ. 16ರಂದು ಬೆಳಗ್ಗೆ 9.9ಕ್ಕೆ ಜೀರ್ಣೋದ್ಧಾರ ಸಮಿತಿಯ ಗ್ರಾಮ ಸಮಿತಿಯ ಮಹಿಳೆಯರ ಪಾಲ್ಗೊಳ್ಳುವಿಕೆಯೊಂದಿಗೆ ಸಾಮೂಹಿಕ ನವದುರ್ಗಾ ಕುಂಕುಮಾರ್ಚನೆ ಸೇವೆ ನಡೆಯಲಿದೆ. ಅ. 17ರಂದು ಕದಿರು ಕಟ್ಟುವುದು, ಮಧ್ಯಾಹ್ನ 11.30ಕ್ಕೆ ಚಂಡಿಕಾಯಾಗ, ಪೂರ್ಣಾಹುತಿ, ಮಧ್ಯಾಹ್ನ ಸಾಮೂಹಿಕ ಅನ್ನಸಂತರ್ಪಣೆ, ಸಂಜೆ 4 ಗಂಟೆಗೆ ಶ್ರೀ ದೇವಿ ದರ್ಶನ, ಕವಾಟ ಪೂರಣ, ಮಧ್ಯಾಹ್ನ ದೇವಿ ದರ್ಶನ ನಡೆಯಲಿದೆ. ಅ. 24 ರಂದು ಸಮಷ್ಠಿ ಪೂಜೆ, ಮಂಗಳ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಅ. 15ರಂದು ಜೀರ್ಣೋದ್ಧಾರ ಸಮಿತಿಯ ನೇತೃತ್ವದಲ್ಲಿ ಬೆಳಗ್ಗೆ ಗಂಟೆ 9.9 ರಿಂದ ಆಹ್ವಾನಿತ ತಂಡಗಳಿಗೆ ನವಶಕ್ತಿ ವೈಭವ ನೃತ್ಯ ಸ್ಪರ್ಧೆ, ಅ. 19ರಂದು ಸಂಜೆ 7 ಗಂಟೆಯಿಂದ ಆನಿದ ಮನದಾನಿ ತುಳು ನಾಟಕ, ಅ. 21ರಂದು ಸಂಜೆ 7 ಗಂಟೆಗೆ ನೃತ್ಯ ಕಾರ್ಯಕ್ರಮ, ಅ. 22ರಂದು ಸಂಜೆ 7 ಗಂಟೆಯಿಂದ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ ತುಳುನಾಡ ಸಿರಿ ತುಳು ಯಕ್ಷಗಾನ ನಡೆಯಲಿದೆ ಎಂದು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ, ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರಮೇಶ್ ಹೆಗ್ಡೆ ಮತ್ತು ಕಾರ್ಯನಿರ್ವಹಣಾಧಿಕಾರಿ ರವಿ ಕಿರಣ್ ಜಂಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.