ಕಾಪು : ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ದೀಪಾವಳಿ ಹಬ್ಬದ ಆಚರಣೆ
Posted On:
11-11-2023 10:26PM
ಕಾಪು : ಮಾಧ್ಯಮ ಕ್ಷೇತ್ರ ಇಂದು ಕ್ರಿಯಾಶೀಲವಾಗಿದೆ. ಸಮಾಜದ ಒಳಿತು ಕೆಡುಕುಗಳ ಬಗೆಗೆ ಬೆಳಕು ಚೆಲ್ಲುವ ಕಾರ್ಯ ಮಾಧ್ಯಮದ ಮೂಲಕ ಆಗಬೇಕಾಗಿದೆ. ಪತ್ರಕರ್ತರು ಅವರ ಕುಟುಂಬ ವರ್ಗದೊಂದಿಗೆ ದೀಪಾವಳಿ ಆಚರಿಸುತ್ತಿರುವುದು ಖುಷಿಯ ವಿಷಯ. ದೀಪಾವಳಿಯು ನಮ್ಮಲ್ಲಿ ಸಂಭ್ರಮ ಉಂಟುಮಾಡಿ ಎಲ್ಲರಿಗೂ ಒಳಿತಾಗಲಿ ಎಂದು ಕಾಪು ತಹಶೀಲ್ದಾರರಾದ ಡಾ. ಪ್ರತಿಭ ಆರ್ ಶುಭ ಹಾರೈಸಿದರು.
ಅವರು ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಶನಿವಾರ ಸಂಜೆ ನಡೆದ ದೀಪಾವಳಿ ಹಬ್ಬದ ಆಚರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು, ಹಿರಿಯ ಪತ್ರಕರ್ತರಾದ ಪುಂಡಲೀಕ ಮರಾಠೆ ದೀಪಾವಳಿಯ ಮಹತ್ವ ವಿವರಿಸಿದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಅಗಲಿದ ಪತ್ರಕರ್ತರುಗಳಾದ ಶೇಖರ ಅಜೆಕಾರು, ಶಶಿಧರ್ ಹೆಮ್ಮಣ್ಣಗೆ ಸಂತಾಪ ಸೂಚಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಹರೀಶ್ ಕುಮಾರ್ ಹೆಜಮಾಡಿ ವಹಿಸಿದ್ದರು.
ಈ ಸಂದರ್ಭ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂತೋಷ್, ಕೋಶಾಧಿಕಾರಿ ಹೇಮನಾಥ್ ಉಪಸ್ಥಿತರಿದ್ದರು.
ಪತ್ರಕರ್ತ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಹೆಜಮಾಡಿ ಸ್ವಾಗತಿಸಿದರು. ಪತ್ರಕರ್ತ ರಾಕೇಶ್ ಕುಂಜೂರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸಂತೋಷ್ ವಂದಿಸಿದರು.