ಪಡುಬಿದ್ರಿ : ಬಿಲ್ಲವ ಸಂಘದಲ್ಲಿ ಆಟಿದ ಲೇಸ್
Posted On:
21-07-2024 06:41PM
ಪಡುಬಿದ್ರಿ : ತುಳುನಾಡಿನ ಪ್ರತಿ ಪದ್ದತಿಗೂ ಅದರದೇ ಮಹತ್ವವಿದೆ. ಹಿರಿಯರಿಂದ ಸಂಸ್ಕೃತಿ ಉಳಿದಿದ್ದು, ಅದನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ. ಆಟಿಯ ತಿನಿಸುಗಳು ವಿಶೇಷವಾಗಿದ್ದು, ಈ ತಿಂಗಳಿನಲ್ಲಿ ಇದು ದೇಹಕ್ಕೆ ಅವಶ್ಯವಾಗಿದೆ. ಹೆತ್ತವರ ಜೊತೆಗೆ ಮಕ್ಕಳು ಇಂತಹ ಕಾರ್ಯಕ್ರಮಗಳಿಗೆ ಬಂದರೆ ಯಶಸ್ವಿಯಾದಂತೆ. ಆಟಿಯ ಪದ್ಧತಿಗಳನ್ನು ಮುಂದುವರೆಸೋಣ ಎಂದು ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಹೇಳಿದರು.
ಅವರು ಪಡುಬಿದ್ರಿ ಬಿಲ್ಲವ ಸಂಘದ ಸಭಾಗ್ರಹದಲ್ಲಿ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ, ಶ್ರೀ ನಾರಾಯಣಗುರು ಮಹಿಳಾ ಮಂಡಳಿ ಹಾಗೂ ಕಲ್ಪತರು ಮಹಿಳಾ ಸ್ವ ಸಹಾಯ ಗುಂಪಿನ ಆಶ್ರಯದಲ್ಲಿ ಜರಗಿದ ಆಟಿದ ಲೇಸ್ ಕಾರ್ಯಕ್ರಮವನ್ನು ಕಲಸಕ್ಕೆ ಭತ್ತ ತುಂಬುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕವಯಿತ್ರಿ ಸುಗಂಧಿ ಶ್ಯಾಮ್ ಆಟಿ ತಿಂಗಳಿನ ಮಹತ್ವದ ಬಗೆಗಿನ ಕವನ ವಾಚಿಸಿದರು. ವಿವಿಧ ಬಗೆಯ ತಿನಿಸುಗಳನ್ನು ತಯಾರಿಸಿದ ಮಹಿಳೆಯರನ್ನು ಗುರುತಿಸಲಾಯಿತು.
ವೇದಿಕೆಯಲ್ಲಿ ಕನ್ನಂಗಾರು ಬ್ರಹ್ಮ ಬೈದರ್ಕಳ ಗರಡಿ ಆಡಳಿತ ಸಮಿತಿಯ ಅಧ್ಯಕ್ಷರಾದ ಸೀನ ಪೂಜಾರಿ, ಪಡುಬಿದ್ರಿ ಪಂಚಾಯತ್ ಸದಸ್ಯರಾದ ಗಣೇಶ್ ಕೋಟ್ಯಾನ್, ಪಡುಬಿದ್ರಿ ಬಿಲ್ಲವ ಸಂಘದ ಕೋಶಾಧಿಕಾರಿ ಅಶೋಕ್ ಪೂಜಾರಿ ಪಾದೆಬೆಟ್ಟು, ವೈದ್ಯೆ ಡಾ.ಐಶ್ವರ್ಯ ಸಿ. ಅಂಚನ್, ಪಡುಬಿದ್ರಿ ಬಿಲ್ಲವ ಸಂಘದ ಅರ್ಚಕರಾದ ಚಂದ್ರಶೇಖರ ಶಾಂತಿ, ಬ್ರಹ್ಮಶ್ರೀ ನಾರಾಯಣಗುರು ಸೇವಾದಳದ ದಳಪತಿ ಸಂತೋಷ್ ನಂದಿಕೂರು, ಬಿಲ್ಲವ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ರೋಹಿಣಿ ಆನಂದ್ ಉಪಸ್ಥಿತರಿದ್ದರು
ಸುಜಾತ, ಪೂರ್ಣಿಮ ಪ್ರಾರ್ಥಿಸಿದರು. ಮಹಿಳಾ ವಿಭಾಗದ ಅಧ್ಯಕ್ಷೆ ರೋಹಿಣಿ ಆನಂದ್ ಸ್ವಾಗತಿಸಿದರು. ಚಿತ್ರಾಕ್ಷಿ ಕೆ. ಕೋಟ್ಯಾನ್ ಆಟಿ ರಸಪ್ರಶ್ನೆ ನಡೆಸಿಕೊಟ್ಟರು. ಸುಚರಿತ ಎಲ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು. ತೇಜಾವತಿ ವಂದಿಸಿದರು.
ಮಹಿಳೆಯರಿಂದ ಜಾನಪದ ನೃತ್ಯ, ಗಾಯನವು ಜರಗಿತು. ಆಟಿ ವಿಶೇಷತೆಯ ಸುಮಾರು 20 ಬಗೆಯ ತಿನಿಸುಗಳನ್ನು ಉಣ ಬಡಿಸಲಾಯಿತು.