ಡಿ.23ರಿಂದ 29: ಪಡುಕುತ್ಯಾರಿನಲ್ಲಿರುವ ಆನೆಗುಂದಿ ಮಠದಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹ - 2024
Posted On:
11-12-2024 04:53PM
ಶಿರ್ವ : ಪಡುಕುತ್ಯಾರಿನಲ್ಲಿರುವ ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದಲ್ಲಿ ಡಿಸೆಂಬರ್ 23ರಿಂದ 29ತನಕ ಯಕ್ಷಗಾನ ತಾಳಮದ್ದಳೆ ಸಪ್ತಾಹ 2024 ನಡೆಯಲಿದೆ.
ಮಹಾಸಂಸ್ಥಾನದ ಆನೆಗುಂದಿ ಪ್ರತಿಷ್ಠಾನದ ನೇತೃತ್ವದಲ್ಲಿ ಯಕ್ಷಗಾನ ಕಲಾ ಪೋಷಕರ ಸಹಕಾರದೊಂದಿಗೆ ಸತತ4 ನೇ ವರ್ಷದ ಯಕ್ಷಗಾನ ತಾಳಮದ್ದಳೆ ಸಪ್ತಾಹ 2024 ದಶಂಬರ 23 ರಿಂದ ಆರಂಭಗೊಳ್ಳಲಿದೆ.
2021ರಿಂದ ಯಕ್ಷಗಾನ ತಾಳಮದ್ದಳೆ ಸಪ್ತಾಹ ಆರಂಭಗೊಂಡಿದ್ದು, ಕಾರ್ಯಕ್ರಮದಲ್ಲಿ ಪ್ರಸಿದ್ದ ಕಲಾವಿದರ ಜತೆಗೆ ಸ್ಥಳೀಯ ಕಲಾವಿದರೂ ಪಾಲ್ಗೊಳ್ಳುತ್ತಿದ್ದಾರೆ.
ಯಕ್ಷಗಾನ ಕಲೆಯನ್ನು ಉಳಿಸಿ, ಬೆಳೆಸುವ ಹಾಗೆಯೇ ಕಲಾವಿದರನ್ನು ಗುರುತಿಸಿ ಗೌರವಿಸುವ ಯಕ್ಷ ಸೇವೆಯನ್ನು ಮಹಾಸಂಸ್ಥಾನದಿಂದ ನಡೆಸಲಾಗುತ್ತಿದೆ. ದಶಂಬರ 23ರಂದು ಸಪ್ತಾಹವನ್ನು ಅಪರಾಹ್ನ 2.30 ಘಂಟೆಗೆ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ದೀಪಪ್ರಜ್ವಲಗೊಳಿಸಿ ಉದ್ಘಾಟಿಸಲಿರುವರು.
ಅತಿಥಿಗಳಾಗಿ ಕಣಿಪುರ ಮಾಸ ಪತ್ರಿಕೆ ಸಂಪಾದಕ ಹಾಗೂ ಯಕ್ಷಗಾನ ಚಿಂತಕ ಶ್ರೀ ಎಂ ನಾ ಚಂಬಲ್ತಿಮಾರ್ ಕುಂಬಳೆ ಭಾಗವಹಿಸುವರು.
ದಿನಾಂಕ 23 ರಂದು ಅಂಗದ ಸಂಧಾನ , 24ರಂದು ಶಲ್ಯ ಸಾರಥ್ಯ, 25ರಂದು ಜಾಂಬವತಿ ಕಲ್ಯಾಣ, 26ರಂದು ಗುರುದಕ್ಷಿಣೆ, 27ರಂದು ಊರ್ವಶಿ ಶಾಪ, 28ರಂದು ಸಮರ ಸನ್ನಾಹ, 29ರಂದು ಸುಧನ್ವಾರ್ಜುನದೊಂದಿಗೆ ಸಂಪನ್ನಗೊಳಲಿದೆ.
ದಶಂಬರ್ 29ರಂದು ಯಕ್ಷಗಾನ ತಾಳಮದ್ದಳೆ ಸಪ್ತಾಹದ ಸಮಾರೋಪದ ವಿಶೇಷ ಸಮಾರಂಭದಲ್ಲಿ ವಿವಿಧ ಗಣ್ಯರು ಯಕ್ಷಗಾನ ಕಲಾ ಪೋಷಕರು ಭಾಗವಹಿಸುವರು.
ಜಿ.ಟಿ ಆಚಾರ್ಯ ಮುಂಬಯಿ, ಜನಾರ್ಧನ ಆಚಾರ್ಯ ಕನ್ಯಾನ ಇವರು ತಾಳಮದ್ದಳೆ ಸಪ್ತಾಹ 2024ರ ಸಂಯೋಜಕರಾಗಿದ್ದಾರೆ ಎಂದು
ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ ಆಚಾರ್ ಕಂಬಾರ್, ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.