ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು : ಸಮಾಜ ರತ್ನ ದಿ. ಲೀಲಾಧರ ಶೆಟ್ಟಿ, ವಸುಂದರಾ ಶೆಟ್ಟಿ ಪುಣ್ಯಸ್ಮರಣೆ ; ಬೃಹತ್ ರಕ್ತದಾನ ಶಿಬಿರ

Posted On: 12-12-2024 06:27PM

ಕಾಪು : ಕಾಪುವಿನ ಸಮಾಜ ಸೇವಕ, ಸಮಾಜ ರತ್ನ ದಿವಂಗತ ಲೀಲಾಧರ ಶೆಟ್ಟಿ ಮತ್ತು ವಸುಂದರಾ ಶೆಟ್ಟಿ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಗುರುವಾರ ಕಾಪು ಶ್ರೀ ವೀರಭದ್ರ ಸಭಾಭವನದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರವನ್ನು ಕಾಪು ಶ್ರೀ ಲಕ್ಷ್ಮಿ ಜನಾರ್ಧನ ದೇಗುಲದ ಮೊಕ್ತೇಸರ ಮನೋಹರ ಎಸ್ ಶೆಟ್ಟಿ ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ನಾವು ಜೀವನದಲ್ಲಿ ಯಾವುದಾದರೂ ಒಳ್ಳೆಯ ಕೆಲಸ ಮಾಡಿ ಸ್ವಲ್ಪವಾದರೂ ಸಮಾಜ ಸೇವೆ ಮಾಡೋಣ. ದಿ. ಲೀಲಾಧರ ಶೆಟ್ಟಿಯವರು ನಮ್ಮನ್ನು ಅಗಲಿ ಒಂದು ವರ್ಷವಾದರೂ ಅವರು ಮಾಡಿದ ಸಮಾಜ ಸೇವೆ ನಿತ್ಯ ನಿರಂತರ ಎಂದು ಹೇಳಿದರು.

ಕಾಪು ತಹಸೀಲ್ದಾರ್ ಡಾ. ಪ್ರತಿಭಾ ಆರ್ ಮಾತನಾಡಿ, ಸಮಾಜ ಸೇವಕ ದಿ. ಲೀಲಾಧರ ಶೆಟ್ಟಿ ಅವರ ಸಾಮಾಜಿಕ ಸೇವೆ, ರಕ್ತದಾನ ಶಿಬಿರ, ಅಶಕ್ತರಿಗೆ, ಶಾಲಾ ಮಕ್ಕಳಿಗೆ ನೀಡಿದ ಸಹಾಯ ಎಂದೂ ಮರೆಯಲಾಗದ ಉದಾಹರಣೆಯಾಗಿದೆ ಎಂದರು.

ಸನ್ಮಾನ : ಮುಳುಗು ತಜ್ಞ ಅಶೋಕ್ ಶೆಟ್ಟಿ ದೆಂದೂರು ದಂಪತಿಗಳನ್ನು ಹಾಗೂ ಪುರ ಸಭಾ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಬೃಹತ್ ರಕ್ತದಾನ ಶಿಬಿರ ನೆರವೇರಿತು. ಗಣ್ಯರು ದಿ. ಲೀಲಾಧರ ಶೆಟ್ಟಿ ದಂಪತಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ವೇದಿಕೆಯಲ್ಲಿ ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಪುರಸಭಾಧ್ಯಕ್ಷೆ ಕುಮಾರಿ ಹರಿಣಾಕ್ಷಿ ದೇವಾಡಿಗ, ಶ್ರೀಧರ್ ಶೆಟ್ಟಿ ಮುಲುಂಡ್, ಯೋಗೇಶ್ ಶೆಟ್ಟಿ, ಜಯಲಕ್ಷ್ಮಿ ಸುರೇಶ್ ಶೆಟ್ಟಿ, ಪ್ರಭಾಕರ್ ಪೂಜಾರಿ, ಡಾ. ವೀಣಾ ಕುಮಾರಿ, ಡಾ. ರಾಜಶ್ರೀ ಕಿಣಿ, ಮೋಹನ್ ದಾಸ್ ಶೆಟ್ಟಿ ಕರಂದಾಡಿ, ಕುತ್ಯಾರು ಪ್ರಸಾದ್ ಶೆಟ್ಟಿ, ರಮೇಶ್ ಶೆಟ್ಟಿ ಮತ್ತಿತರರು ವೇದಿಕೆಯಲ್ಲಿದ್ದರು. ಪ್ರಭಾತ್ ಶೆಟ್ಟಿ ಸ್ವಾಗತಿಸಿದರು. ಸೂರಿ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದಿವಾಕರ್ ಶೆಟ್ಟಿ ಮಲ್ಲಾರು ನಿರೂಪಿಸಿದರು.