ಮೂಡುಬೆಳ್ಳೆ - ಹಿರಿಯ ಪಾರ್ದನಗಾರ್ತಿ ಅಪ್ಪಿ ಕೃಷ್ಣ ಪಾಣಾರ ಇವರಿಗೆ ಕರ್ನಾಟಕ ಜಾನಪದ ಅಕಾಡೆಮಿಯಿಂದ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ
Posted On:
23-04-2025 02:21PM
ಶಿರ್ವ : ಪಾರ್ದನಗಳು ಗ್ರಂಥಸ್ಥವಾಗಿ ಮುಂದಿನ ಪೀಳಿಗೆಗೆ ಸಿಗುವಂತಾಗಬೇಕು. ಬಾಯಿಯಿಂದ ಬಾಯಿಗೆ ಹರಿದು ಬಂದ ಸತ್ ಸಂಪ್ರದಾಯ ಗೀತೆಗಳಾದ ಪಾರ್ದನಗಳು ಈ ನಾಡಿನ ಭವ್ಯ ಜಾನಪದ ಇತಿಹಾಸವನ್ನು ತಿಳಿಸುತ್ತವೆ. ಪಾಣಾರ ಸಮುದಾಯ ಈ ತುಳುನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಇದನ್ನು ಶಾಶ್ವತವಾಗಿ ಉಳಿಸುವ ಕಾರ್ಯ ನಡೆಯಬೇಕು ಎಂದು ಕಾಪು ತಹಶೀಲ್ದಾರ್ ಡಾ.ಪ್ರತಿಭಾ ಆರ್ ನುಡಿದರು.
ಅವರು ಪಾಣಾರ ಯಾನೆ ನಲಿಕೆಯವರ ಸಮಾಜ ಸೇವಾ ಸಂಘ ಮೂಡುಬೆಳ್ಳೆ ಇವರ ಆಶ್ರಯದಲ್ಲಿ ಬೆಳ್ಳೆ ಕಾಡಬೆಟ್ಟು ಶ್ರೀ ಪಂಜಿರ್ಲಿ ದೈವಸ್ಥಾನದ ಪ್ರಾಂಗಣದಲ್ಲಿ ಮೂಡುಬೆಳ್ಳೆಯ ಹಿರಿಯ ಪಾರ್ದಾನಗಾರ್ತಿ ಅಪ್ಪಿ ಕೃಷ್ಣ ಪಾಣಾರ ಇವರಿಗೆ ಕರ್ನಾಟಕ ಸರಕಾರದ ಕರ್ನಾಟಕ ಜಾನಪದ ಅಕಾಡೆಮಿಯಿಂದ ವಾರ್ಷಿಕ "ಗೌರವ ಪ್ರಶಸ್ತಿ ಪ್ರದಾನ" ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಜಾನಪದ ಇಲ್ಲದ ಜಾಗವೇ ಇಲ್ಲ. ಜಾನಪದದಲ್ಲಿ ನಾಡು, ನುಡಿ, ಸಂಸ್ಕೃತಿ ಕಟ್ಟುವುದರಲ್ಲಿ ಸಾಹಿತ್ಯವನ್ನು ಉಳಿಸುವುದೇ ಅಕಾಡೆಮಿಯ ಕೆಲಸವಾಗಿದೆ. ಬೀದರ್ನಲ್ಲಿ ಜರುಗಿದ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ವಯೋ ಸಮಸ್ಯೆಯಿಂದ ಬರಲು ಅಸಾಧ್ಯವಾದ ಸಾಧಕರಿಗೆ ಅಕಾಡೆಮಿ ಅವರ ಮನೆಗೆ ಹೋಗಿ ಗೌರವಿಸುವ ಈ ಕಾರ್ಯಕ್ರಮದಲ್ಲಿ ಇಲ್ಲಿನ ವ್ಯವಸ್ಥೆ, ಅಂಬೇಡ್ಕರ್ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಅಚ್ಚುಕಟ್ಟುತನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಅಪ್ಪಿ ಕೃಷ್ಣ ಪಾಣಾರ ಇವರನ್ನು ಬೆಳ್ಳೆ ಗ್ರಾಮ ಪಂಚಾಯತ್, ಬೆಳ್ಳೆ ವ್ಯ.ಸೇ.ಸಹಕಾರಿ ಸಂಘ, ನವೋದಯ ಒಕ್ಕೂಟ, ಕೆನರಾ ಬ್ಯಾಂಕ್ ಮಧ್ವನಗರ ಶಾಖೆ, ಪಾಣಾರ ಯಾನೆ ನಲಿಕೆಯವರ ಜಿಲ್ಲಾ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಪಾಣಾರ ಯಾನೆ ನಲಿಕೆಯವರ ಸಂಘದಿಂದ ಸಮುದಾಯಕ್ಕೆ ನೀಡುತ್ತಿರುವ ಬೆಂಬಲ ಹಾಗೂ ಸಹಕಾರಕ್ಕೆ ತಹಶೀಲ್ದಾರ್ ಡಾ.ಪ್ರತಿಭಾ ಆರ್, ಗ್ರಾಮ ಆಡಳಿತಾಧಿಕಾರಿ ಪ್ರದೀಪ್ ಕುಮಾರ್, ಗ್ರಾ.ಪಂ.ಉಪಾಧ್ಯಕ್ಷ ಶಶಿಧರ ವಾಗ್ಲೆ, ಗ್ರಾಮ ಸಹಾಯಕರಾಗಿ 32ವರ್ಷ ಸೇವೆ ನೀಡಿದ ನ್ಯಾನ್ಸಿ ಡಿಸೋಜ, ಸಮಾಜ ಸೇವಕ ಸುಂದರ, ಜಾನಪದ ವಿದ್ವಾಂಸ ಎಸ್.ಎ.ಕೃಷ್ಣಯ್ಯ, 30 ವರ್ಷದ ಬಳಿಕ ಪಿಯುಸಿ ಬರೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಅಂಗನವಾಡಿ ಕಾರ್ಯಕರ್ತೆ ಸುನೀತಾ ಪೂಜಾರಿ ಇವರನ್ನು ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಮೂಡುಬೆಳ್ಳೆ ಪಾಣಾರ ಸಂಘದ ಅಧ್ಯಕ್ಷ ರಾಜು ಪಾಣಾರ ವಹಿಸಿದ್ದರು. ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಮಾಜಿ ಸಚಿವ ವಿನಯಕುಮಾರ್ ಸೊರಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಅಕಾಡೆಮಿಯ ರಿಜಿಸ್ಟ್ರಾರ್ ನಮೃತಾ, ಅಕಾಡೆಮಿಯ ವಲಯ ಸಂಯೋಜಕ ಡಾ.ಜಮೀರುಲ್ಲಾ ಶರೀಫ್, ಬೆಳ್ಳೆ ಗ್ರಾಮ ಪಂಚಾಯತ್ ಅಧ್ಯಕ್ಷೆ ದಿವ್ಯಾ ವಿ.ಆಚಾರ್ಯ, ಪಾಣಾರ ಸಂಘದ ಗೌರವ ಅಧ್ಯಕ್ಷ ಸುಧಾಕರ ಪಾಣಾರ ಬೆಳ್ಳೆ, ಜಿಲ್ಲಾ ಜಾನಪದ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಗಣೇಶ್ ಗಂಗೊಳ್ಳಿ, ಮಾಜಿ ತಾ.ಪಂ.ಅಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ಉದ್ಯಮಿ ವಿನ್ಸೆಂಟ್ ಫರ್ನಾಂಡಿಸ್ ಬೆಳ್ಳೆ, ಬೆಳ್ಳೆ ಸೊಸೈಟಿ ಅಧ್ಯಕ್ಷ ಶಿವಾಜಿ ಎಸ್.ಸುವರ್ಣ, ಗ್ರಾ.ಪಂ. ಮಾಜಿ ಅಧ್ಯಕ್ಷರುಗಳಾದ ಸುಧಾಕರ ಪೂಜಾರಿ, ರಂಜನಿ ಹೆಗ್ಡೆ, ರಾಜೇಂದ್ರ ಶೆಟ್ಟಿ, ಮಾಜಿ ತಾ.ಪಂ.ಸದಸ್ಯೆ ಸುಜಾತಾ ಸುವರ್ಣ, ಪಳ್ಳಿ ಸೊಸೈಟಿ ನಿರ್ದೇಶಕ ದಯಾನಂದ ಶೆಟ್ಟಿ ಪಠೇಲ್ಮನೆ, ಪಾಣಾರ ಸಂಘ ಉಡುಪಿ ಜಿಲ್ಲಾ ಅಧ್ಯಕ್ಷ ಪಾಂಡುರಂಗ ಪಡ್ಡಾಮ, ಕಾಪು ಬಿಜೆಪಿ ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಪಾಣಾರ ಸಂಘ ಜಿಲ್ಲಾ ಸಮಿತಿಯ ಸುಕೇಶ್, ಸಂಜೀವ ಪಡ್ಡಾಮ, ಗ್ರಾ.ಪಂ.ಸದಸ್ಯ ಗುರುರಾಜ್ ಭಟ್, ಗ್ರಾಮಸ್ಥರು ಉಪಸ್ಥಿತರಿದ್ದರು.
ಬೆಳ್ಳೆ ಗ್ರಾ,ಪಂ.ಉಪಾಧ್ಯಕ್ಷ ಶಶಿಧರ ವಾಗ್ಲೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ನಿರೂಪಿಸಿ, ವಂದಿಸಿದರು.