ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಶಿರ್ವ : ಪೋಲಿಸ್ ಜನಸಂಪರ್ಕ ಸಭೆ ಮತ್ತು ಪೋಲಿಸ್ ಇಲಾಖಾ ಮಾಹಿತಿ ಕಾರ್ಯಕ್ರಮ

Posted On: 12-06-2025 02:37PM

ಶಿರ್ವ : ಅಪ್ರಾಪ್ತ ವಯಸ್ಸಿನ ಮಕ್ಕಳು ಹೆಚ್ಚಾಗಿ ಮಾದಕ ದ್ರವ್ಯ ಸೇವನೆ ಸಹಿತ ವಿವಿಧ ಅಪರಾಧ ಕೃತ್ಯಗಳಿಗೆ ಬಲಿಯಾಗುತ್ತಿದ್ದಾರೆ. ಮಕ್ಕಳಿಗೆ ನೈತಿಕ ಶಿಕ್ಷಣದ ಅಗತ್ಯ ಇದೆ. ತನಗೂ ಇನ್ನೊಬ್ಬರಿಗೂ ಅನುಕೂಲವಾಗುವಂತಹ ಶಿಕ್ಷಣ ಮನೆಯಿಂದಲೇ ಆಗಬೇಕು. ಸೈಬರ್ ಕ್ರೈಮ್, ಮೊಬೈಲ್ ಮೂಲಕ ಆಮಿಷಕ್ಕೆ ಒಳಗಾಗುವ ವಂಚನಾ ಜಾಲದ ಬಗ್ಗೆ ಎಚ್ಚರ ವಹಿಸಬೇಕಾಗಿದೆ. ಕ್ರೈಮ್ ಸಹಿತ ಅಪರಾಧಗಳ ನಿಯಂತ್ರಣಕ್ಕೆ ಪೋಲಿಸರೊಂದಿಗೆ ಸಾರ್ವಜನಿಕರ ಸಕಾಲಿಕ ಸ್ಪಂದನ ಅಗತ್ಯ ಎಂದು ಶಿರ್ವ ಪೋಲಿಸ್ ಠಾಣಾಧಿಕಾರಿ ಮಂಜುನಾಥ್ ಮರಬದ ಹೇಳಿದರು. ಅವರು ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ವಠಾರದಲ್ಲಿ ನಾಗರಿಕ ಸೇವಾ ಸಮಿತಿ ಬಂಟಕಲ್ಲು ಇದರ ಆಶ್ರಯದಲ್ಲಿ ಆರಕ್ಷಕ ಠಾಣೆ ಶಿರ್ವ ಇವರ ಸಹಯೋಗದೊಂದಿಗೆ ರಾಜಾಪುರ ಸಾರಸ್ವತ ಸೇವಾ ವೃಂದ ಬಂಟಕಲ್ಲು, ಅಟೋರಿಕ್ಷಾ ಚಾಲಕರ ಮಾಲಕರ ಸಂಘ ಬಂಟಕಲ್ಲು, ಕಾರು ಚಾಲಕರ ಮತ್ತು ಮಾಲಕರ ಸಂಘ ಬಂಟಕಲ್ಲು ಇದರ ಸಹಕಾರದಲ್ಲಿ ಏರ್ಪಡಿಸಿದ "ಪೋಲಿಸ್ ಜನಸಂಪರ್ಕ ಸಭೆ ಮತ್ತು ಪೋಲಿಸ್ ಇಲಾಖಾ ಮಾಹಿತಿ" ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಮೆಸೇಜ್‌ಗಳ ಬಗ್ಗೆ ಎಚ್ಚರ ವಹಿಸುವುದು, ಪ್ರಚೋದನಕಾರಿ ಮೆಸೆಜ್‌ಗಳನ್ನು ಲೈಕ್, ಫಾರ್‌ವರ್ಡ್ ಮಾಡುವುದೂ ಅಪರಾಧವಾಗಿದೆ ಎಂದರು.

ಎಎಸ್‌ಐ ಶ್ರೀಧರ್ ಮತ್ತು ಮಹಿಳಾ ಪೋಲಿಸ್ ಗೀತಾ, ಮಹಿಳಾ ದೌರ್ಜನ್ಯ ಹಾಗೂ ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ, ಪೋಕ್ಸೋ ಕಾನೂನು, ಅಪ್ರಾಪ್ತರಿಂದ ವಾಹನ ಚಾಲನೆ ಅಪರಾಧಗಳ ಬಗ್ಗೆ ಮಾಹಿತಿ, ತಡೆಗಟ್ಟುವಿಕೆ, ಪೋಲಿಸ್ ಸಹಾಯವಾಣಿ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ಶ್ರೀಕ್ಷೇತ್ರ ಬಂಟಕಲ್ಲು ದುರ್ಗಾಪರಮೆಶ್ವರೀ ದೇವಳದ ಆಡಳಿತ ಮೊಕ್ತೇಸರ ಗಂಪದಬೈಲು ಜಯರಾಮ ಪ್ರಭು ಉದ್ಘಾಟಿಸಿದರು.

ಈ ಸಂದರ್ಭ ರಿಕ್ಷಾ ಯೂನಿಯನ್ ಅಧ್ಯಕ್ಷ ಮಂಜುನಾಥ್ ಪೂಜಾರಿ, ಕಾರು ಚಾಲಕ ಮಾಲಕರ ಸಂಘದ ಅಧ್ಯಕ್ಷ ಉಮೇಶ್ ರಾವ್, ಗ್ರಾ.ಪಂ.ಸದಸ್ಯ ಸತೀಶ್, ಬಂಟಕಲ್ಲು ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಉಮೇಶ ಪ್ರಭು ಪಾಲಮೆ, ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ, ಶ್ರೀದುರ್ಗಾ ಮಹಿಳಾ ಮಂಡಳಿ ಅಧ್ಯಕ್ಷೆ ಸುನೀತಾ ದೇವೇಂದ್ರ ನಾಯಕ್, ಹೆಡ್ ಕಾನ್ಟೇಬಲ್ ಮಂಜುನಾಥ ಅಡಿಗ, ಬಂಟಕಲ್ಲು ಬೀಟ್ ಪೋಲಿಸ್ ಶಿವಾನಂದ, ಮಂಜುನಾಥ್, ನಾಗರಿಕರು ಉಪಸ್ಥಿತರಿದ್ದರು.

ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ಕೆ.ಆರ್.ಪಾಟ್ಕರ್ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ದಿನೇಶ ದೇವಾಡಿಗ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.