Updated News From Kaup
ಜುಲೈ 27 : ಶ್ರೀ ನಾರಾಯಣ ಗುರು ಯುವ ವೇದಿಕೆ ಉಡುಪಿ ವತಿಯಿಂದ ಕೋಟಿ ಚೆನ್ನೆಯೆರ್ ನಾಟಕ ಪ್ರದರ್ಶನ
Posted On: 25 Jul 2025, 11:02 AM
ಉಡುಪಿ : ಕಲಿಯುಗದ ಕಾರ್ಣಿಕ ಪುರುಷರಾದ ಕೋಟಿ ಚೆನ್ನಯ್ಯರ ಇತಿಹಾಸ ಸಾರುವ ಬಹು ನಿರೀಕ್ಷಿತ ಮತ್ತು ಉಚಿತ ಪ್ರವೇಶವಿರುವ 'ಕೋಟಿ ಚೆನ್ನಯೆರ್' ನಾಟಕವು ಜುಲೈ 27ರ ಆದಿತ್ಯವಾರ ಮಧ್ಯಾಹ್ನ 2 ಗಂಟೆಗೆ ಉದ್ಯಾವರದ ಕ್ಸೇವಿಯರ್ ಸಭಾಭವನದಲ್ಲಿ ಜರುಗಲಿದೆ ಎಂದು ಶ್ರೀ ನಾರಾಯಣ ಗುರು ಯುವ ವೇದಿಕೆಯ ಪ್ರಕಟಣೆ ತಿಳಿಸಿದೆ. ಇತ್ತೀಚೆಗೆ ಬಿಡುಗಡೆಗೊಂಡ ಧರ್ಮ ಚಾವಡಿ ಚಿತ್ರ ನಿರ್ದೇಶಕರ ಸಾರಥ್ಯದ ಕೋಟಿ ಚೆನ್ನಯೆರ್ ನಾಟಕವು ಉಡುಪಿ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಮಂಗಳೂರಿನ ಖ್ಯಾತ ನಾಟಕ ತಂಡ ಪ್ರಕೃತಿ ಕಲಾವಿದೆರ್ ಕುಡ್ಲ ಇವರ ಅಭಿನಯದಲ್ಲಿ ಜರುಗಲಿದ್ದು, ಕಲಾಭಿಮಾನಿಗಳಲ್ಲಿ ಬಹಳಷ್ಟು ನಿರೀಕ್ಷೆ ಹುಟ್ಟಿಸಿದೆ. ಬಹಳಷ್ಟು ಯಶಸ್ವೀ ಸಾಂಸ್ಕೃತಿಕ ಕಾರ್ಯಕ್ರಮ ಪ್ರಾಯೋಜಕತ್ವ ವಹಿಸಿಕೊಂಡು, ಹಲವಾರು ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊoಡಿರುವ ಶ್ರೀ ನಾರಾಯಣ ಗುರು ಯುವ ವೇದಿಕೆ (ರಿ) ಉಡುಪಿ, ಈ ಸಂಘಟನೆಯು ಹತ್ತು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು ಬಂದಿದೆ. ಶೂದ್ರ ಶಿವ, ಗೆಜ್ಜೆ ಗಿರಿ ಕ್ಷೇತ್ರ ಮಹಾತ್ಮೆ, ಶಂಭು ಕಲ್ಲು ಕ್ಷೇತ್ರ ಮಹಾತ್ಮೆ ಮುಂತಾದ ಇತಿಹಾಸ ಹಿನ್ನೆಲೆಯ ಕಾರ್ಯಕ್ರಮ ಮಾತ್ರವಲ್ಲದೆ, ತುಳು ನಾಟಕ, ನಾರಾಯಣ ಗುರುಗಳ ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂಬ ಸಂದೇಶವನ್ನು ಪ್ರತಿ ಕಾರ್ಯಕ್ರದಲ್ಲಿ ಸಂಬಂಧಪಟ್ಟ ಸಂಪನ್ಮೂಲ ಅತಿಥಿಗಳ ಮೂಲಕ ಗುರು ಸಂದೇಶ ಎಂಬ ಹೆಸರಿನಲ್ಲಿ ಶ್ರೀ ನಾರಾಯಣ ಗುರುಗಳ ತತ್ವ ಸಿದ್ಧಾಂತವನ್ನು ಪ್ರತಿಪಾದಿಸುವ ವಿಶಿಷ್ಟ ಕಾರ್ಯಕ್ರವನ್ನು ನಡೆಸಿಕೊಂಡು ಬಂದಿದೆ. 2025ನೇ ಸಾಲಿನಲ್ಲಿ, ಕಳೆದ 7 ತಿಂಗಳಲ್ಲಿ ಮೂರನೇ ಬಾರಿಗೆ ಯಶಸ್ವೀ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡು ಬಂದಿರುವ ಯುವ ವೇದಿಕೆಯು, ಇದೀಗ 'ಬಿರ್ಧ್ ದ ಬೀರೆರ್ ಕೋಟಿ ಚೆನ್ನಯೆರ್' ಎಂಬ ನಾಟಕ ಪ್ರದರ್ಶನಕ್ಕೆ ಸಿದ್ದಗೊಂಡಿದೆ. ಪ್ರಖ್ಯಾತ ಕಲಾವಿದರಿಂದ ಕೂಡಿದ, ಭಕ್ತಿ ಪ್ರಧಾನ ನಾಟಕಕ್ಕೆ ಗಣ್ಯಾತಿ ಗಣ್ಯರು ಮತ್ತು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದ್ದು, ಕಲಾಭಿಮಾನಿಗಳು ಬಹು ನಿರೀಕ್ಷೆಯ ಈ ನಾಟಕದ ಪ್ರಯೋಜನವನ್ನು ಪಡೆಯಲು ಶ್ರೀ ನಾರಾಯಣ ಗುರು ಯುವ ವೇದಿಕೆ (ರಿ) ಉಡುಪಿ ಇದರ ಸರ್ವ ಪದಾಧಿಕಾರಿಗಳು ವಿನಂತಿಸಿದ್ದಾರೆ.
ಕಾಪು ಯುವವಾಹಿನಿ ಘಟಕದ ವತಿಯಿಂದ ಆಟಿಡೊಂಜಿ ದಿನ -2025 ಕಾರ್ಯಕ್ರಮ
Posted On: 24 Jul 2025, 01:08 PM
ಕಾಪು : ಆಟಿ ಆಚರಣೆಗಳು ಕರಾವಳಿಯ ಗತ ಅಸ್ತಿತ್ವದ ಜೊತೆಗೆ ಆರೋಗ್ಯದ ಬಗೆಗೂ ಗಮನ ನೀಡುವಂತೆ ನಮಗೆ ಪ್ರೇರೇಪಿಸುತ್ತದೆ. ಆಟಿಯ ಬಗ್ಗೆ ಕಿರಿಯರಿಗೆ ಹಿರಿಯರು ತಿಳಿ ಹೇಳುವ ಮೂಲಕ ನಾವು ಆಟಿ ಆಚರಣೆಗೆ ಮಹತ್ವ ನೀಡಬೇಕಾಗಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ಲೋಕೇಶ್ ಪೂಜಾರಿ ಹೇಳಿದರು. ಅವರು ಕಾಪು ಯುವವಾಹಿನಿ ಘಟಕದ ವತಿಯಿಂದ ನಡೆದ ಆಟಿಡೊಂಜಿ ದಿನ -2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉದ್ಯಮಿ ಪ್ರಭಾಕರ ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿ ಕೋಶಾಧಿಕಾರಿ ಸುನೀಲ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಹಾಗೂ ಸಮಾಜದ ಉನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾಪು ಘಟಕದ ಅಧ್ಯಕ್ಷ ಸೂರ್ಯನಾರಾಯಣ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಸೂರ್ಯನಾರಾಯಣ ಸುವರ್ಣ ಸ್ವಾಗತಿಸಿದರು. ದೀಪಕ್ ಕುಮಾರ್ ಎರ್ಮಾಳು ಪ್ರಸ್ತಾವಿಸಿದರು. ಪ್ರಜ್ವಲ್ ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತ ರಾಕೇಶ್ ಕುಂಜೂರು ವಂದಿಸಿದರು.
ಮೂಳೂರು : 10ನೇ ವರ್ಷದ ಆಟಿ ಕಷಾಯ ವಿತರಣಾ ಕಾರ್ಯಕ್ರಮ
Posted On: 24 Jul 2025, 11:55 AM
ಉಚ್ಚಿಲ : ಹಿಂದೂ ರಕ್ಷಾ ವೆಲ್ಫೇರ್ ಟ್ರಸ್ಟ್ ಮೂಳೂರು ಹಾಗೂ ಸಂಜೀವ ಆರ್ ಅಮೀನ್ ಸಹಕಾರದೊಂದಿಗೆ ಆಟಿ ಅಮಾವಾಸ್ಯೆಯ ಪ್ರಯುಕ್ತ ಸತತ 10ನೇ ವರ್ಷ ಹಾಳೆ ಮರದ ತೊಗಟೆಯಿಂದ ಮಾಡಿದ ಉಚಿತ ಕಷಾಯ ವಿತರಣಾ ಕಾರ್ಯಕ್ರಮ ಗುರುವಾರ ಮೂಳೂರು ಸರಕಾರಿ ಸಂಯುಕ್ತ ಶಾಲಾ ಆವರಣದಲ್ಲಿ ಜರಗಿತು. ಹಿಂದೂ ರಕ್ಷಾ ವೆಲ್ಫೇರ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಧೀರೇಶ್ ಡಿ ಪಿ ಮಾತನಾಡಿ, ತುಳುನಾಡಿನ ಆಚರಣೆ, ಆಹಾರ ಪದ್ಧತಿಗಳಲ್ಲಿ ವೈಜ್ಞಾನಿಕ ಅಂಶಗಳು ಅಡಕವಾಗಿದೆ. ಆಟಿ ಅಮವಾಸ್ಯೆಯಂದು ಸೇವಿಸುವ ಆಟಿ ಕಷಾಯವು ಇದರಲ್ಲಿ ಒಂದಾಗಿದೆ. 16 ಯುವಕರು ಸೇರಿ ಈ ಬಾರಿ 50 ಲೀಟರ್ ಕಷಾಯ ತಯಾರಿಸಿ ಸುಮಾರು 850 ಜನರು ಇದರ ಸದುಪಯೋಗ ಪಡೆಯಲು ಅನುಕೂಲವಾಗಿದೆ. ಮೂಳೂರು ಸೇರಿದಂತೆ ಎರ್ಮಾಳಿನಿಂದ ಕೈಪುಂಜಾಲುವರೆಗೆ ಜನರು ಆಗಮಿಸುತ್ತಾರೆ ಎಂದರು. ಈ ಸಂದರ್ಭ ಟ್ರಸ್ಟಿ ಪ್ರತೀಕ್ ಸುವರ್ಣ, ನಾಗೇಶ್ ಅಮೀನ್, ಸದಸ್ಯರಾದ ದಿನೇಶ್ ಪಾಣರ, ಸುನೀಲ್ ಕರ್ಕೇರ, ಕಾರ್ತಿಕ್ ಸುವರ್ಣ, ಗಗನ್ ಮೆಂಡನ್, ಹವ್ಯಾಸ್ ಪೂಜಾರಿ, ಅವೀಶ್ ಅಂಚನ್, ಶಲಿನ್ ಅಂಚನ್, ತನೀಶ್ ಎಸ್ ಪೂಜಾರಿ, ಪ್ರಜೇಶ್, ಗುರುರಾಜ್ ಪೂಜಾರಿ, ಮನ್ವಿತ್ ಕರ್ಕೇರ, ಜಯೇಶ್ ಸಾಲ್ಯಾನ್ ಉಪಸ್ಥಿತರಿದ್ದರು.
ಜುಲೈ 27 : ಸುಶ್ಮಿ ಮೆಲೋಡಿಯಸ್ ಪಡುಬಿದ್ರಿ ವತಿಯಿಂದ ಕರೋಕೆ ಗಾಯನ ಸ್ಪರ್ಧೆ
Posted On: 24 Jul 2025, 11:38 AM
ಕಾಪು : ಗ್ರಾಮೀಣ ಪ್ರದೇಶದ ಉದಯೋನ್ಮುಖ ಸಂಗೀತ ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಸುಶ್ಮಿ ಮೆಲೋಡಿಯಸ್ ಪಡುಬಿದ್ರಿ ಇದರ ವತಿಯಿಂದ ಜುಲೈ 27 ರಂದು ದ.ಕ ಮತ್ತು ಉಡುಪಿ ಜಿಲ್ಲಾ ಮಟ್ಟದ ಕರೋಕೆ ಗಾಯನ ಸ್ಪರ್ಧೆ ಪಡುಬಿದ್ರಿ ಸುಜಾತಾ ಆಡಿಟೋರಿಯಂ ನಲ್ಲಿ ಜರಗಲಿದೆ ಎಂದು ಸುಶ್ಮಿ ಮೆಲೋಡಿಯಸ್ ಪಡುಬಿದ್ರಿ ಆಡಳಿತ ನಿರ್ದೇಶಕರಾದ ಸುಶ್ಮಿತಾ ಎರ್ಮಾಳ್ ಹೇಳಿದರು. ಅವರು ಕಾಪು ಪತ್ರಿಕಾ ಭವನದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ನವೀನಚಂದ್ರ ಜೆ ಶೆಟ್ಟಿ ಉದ್ಘಾಟಿಸಲಿದ್ದಾರೆ. ಚಲನಚಿತ್ರ ನಟರಾದ ಅನ್ವಿತಾ ಸಾಗರ್, ಸ್ವರಾಜ್ ಶೆಟ್ಟಿ ಹಾಗು ಗಜಾನನ ಕ್ರಿಕೆಟ್ರ್ಸ್ ಮತ್ತು ನತ್ತೆರಕೆರೆ ಚಲನಚಿತ್ರ ತಂಡದ ನಟ ನಟಿಯರು ಭಾಗವಹಿಸಲಿದ್ದಾರೆ. ಜುಲೈ 20 ರಂದು ನಡೆದ ಅಡಿಷನ್ ರೌಂಡ್ ನಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಯ ವಿವಿಧ ಕಡೆಗಳಿಂದ 64 ಸ್ಪರ್ಧಾಳು ಭಾಗವಹಿಸಿದ್ದರು. ಜುಲೈ 27 ರಂದು ನಡೆಯುವ ಅಂತಿಮ ಸುತ್ತಿಗೆ 25 ಸ್ಪರ್ಧಿಗಳು ಆಯ್ಕೆಗೊಂಡಿರುತ್ತಾರೆ. ಪ್ರಥಮ ಬಹುಮಾನಿತರಿಗೆ ಹತ್ತು ಸಾವಿರ, ದ್ವಿತೀಯ ಐದು ಸಾವಿರ, ತೃತೀಯ ಮೂರು ಸಾವಿರ ನಗದು, ಪ್ರಶಸ್ತಿ ಪತ್ರ ಹಾಗು ಶಾಶ್ವತ ಫಲಕ ನೀಡಿ ಗೌರವಿಸಲಾಗುವುದು. ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮ ನಿರ್ದೇಶಕರಾದ ಸಂತೋಷ್ ಪಡುಬಿದ್ರಿ ಮತ್ತು ರಚನ್ ಸಾಲ್ಯಾನ್ ಉಪಸ್ಥಿತರಿದ್ದರು.
ಕರ್ನಾಟಕ ಸ್ಟೇಟ್ ಟೈಲರ್ಸ್ ವಲಯ ಸಮಿತಿ ಕಾಪು ಇದರ ಮಹಾಸಭೆ
Posted On: 24 Jul 2025, 08:42 AM
ಕಾಪು : ಕರ್ನಾಟಕ ಸ್ಟೇಟ್ ಟೈಲರ್ಸ್ ವಲಯ ಸಮಿತಿ ಕಾಪು ಇದರ ಮಹಾಸಭೆಯು ಭಾಸ್ಕರ ಸೌಧ ಸಭಾಭವನ ಕಾಪು ಇಲ್ಲಿ ಕಾಪು ವಲಯ ಸಮಿತಿಯ ಅಧ್ಯಕ್ಷರಾದ ಸುರೇಖಾ ಶೈಲೇಶ್ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು. ಸಭೆಯಲ್ಲಿ 2025 -26ನೇ ಸಾಲಿನ ನೂತನವಾಗಿ ಕಾರ್ಯಕಾರಿ ಸಭೆಯನ್ನು ನೇಮಕ ಮಾಡಲಾಯಿತು. ಅಧ್ಯಕ್ಷರಾಗಿ ಸುಧಾಕರ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಯಾಗಿ ರಮಣಿ ಆಚಾರ್ಯ, ಕೋಶಾಧಿಕಾರಿಯಾಗಿ ನರೇಂದ್ರ ಸಾಲಿಯಾನ್ ಹಾಗು ಉಪಾಧ್ಯಕ್ಷರಾಗಿ ಶುಭಕರ್ ಕಾಪು ಹಾಗು ಜೊತೆ ಕಾರ್ಯದರ್ಶಿ ಯಾಗಿ ಆಶಾ ಆಚಾರ್ಯ ಇವರನ್ನು ನೇಮಕ ಮಾಡಲಾಯಿತು. ಈ ಸಭೆಯಲ್ಲಿ ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ಬಿ ಕೆ ಶ್ರೀನಿವಾಸ್, ಕಾಪು ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ರಮಾನಂದ ಅತ್ತೂರು, ಪ್ರಧಾನ ಕಾರ್ಯದರ್ಶಿ ದಿವಾಕರ್, ಸುರೇಶ್ ಶೆಟ್ಟಿಗಾರ್ ಮತ್ತು ಕಾಪು ವಲಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಫಯಾಜ್ ಕೋಶಾಧಿಕಾರಿ ಆಶಾ ಆಚಾರ್ಯ, ಉಪಾಧ್ಯಕ್ಷರಾದ ಕೃಷ್ಣ ಬಂಗೇರ ಹಾಗು ಕಾಪು ವಲಯ ಸಮಿತಿಯ ಮಾಜಿ ಅಧ್ಯಕ್ಷರಾದ ಮೋಹಿನಿ ಸುವರ್ಣ, ಹಿರಿಯರಾದ ಕೃಷ್ಣಬಂಗೇರ ಉಪಸ್ಥಿತರಿದ್ದರು.
ಎನ್ ಹೆಚ್ 66ರಲ್ಲಿ ಸರ್ವಿಸ್ ರಸ್ತೆ ನಿರ್ಮಾಣಕ್ಕಾಗಿ ಸಮಾಜ ಸೇವಕ ಕಾಪು ಜಯರಾಮ ಆಚಾರ್ಯ ಆಗ್ರಹ
Posted On: 24 Jul 2025, 08:33 AM
ಕಾಪು : ರಾಷ್ಟ್ರೀಯ ಹೆದ್ದಾರಿ ಎನ್ ಹೆಚ್ 66 ರಲ್ಲಿ ಉಡುಪಿ ಜಿಲ್ಲೆಯ ಹೆಜಮಾಡಿಯಿಂದ ಬೈಂದೂರುವರೆಗೆ ಎರಡು ಬದಿಗಳಲ್ಲೂ ಸರ್ವಿಸ್ ರಸ್ತೆ ನಿರ್ಮಾಣ ಮಾಡಲು ಸಮಾಜ ಸೇವಕ ಕಾಪು ಜಯರಾಮ ಆಚಾರ್ಯರವರು ಉಡುಪಿ ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರಲ್ಲಿ ಮನವಿ ಮಾಡಿದ್ದಾರೆ. ಉಡುಪಿ ಜಿಲ್ಲೆಯ ಕೆಲವು ಪ್ರದೇಶದಲ್ಲಿ ಸ್ಕೈವಾಕ್ ನಿರ್ಮಾಣ ಒಪ್ಪಿಗೆ, ಕೋಟೇಶ್ವರ, ಹೆಜಮಾಡಿ ಮದ್ದೆ 26 ಕಿ.ಮೀ ಸರ್ವಿಸ್ ರಸ್ತೆಗೆ ಅನುಮೋದನೆ ವಿಚಾರ ಕೇಳಿ ಸಂತೋಷವಾಯಿತು. ಆದರೆ ಎಲ್ಲೆಲ್ಲಿ ಅತೀ ಅವಶ್ಯಕಥೆ ಇದೆ ಅಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಮಾಡದೆ ಯಾದೃಚ್ಛಿಕ ಸರ್ವಿಸ್ ರಸ್ತೆ ನಿರ್ಮಾಣ ಮತ್ತು ಸ್ಕೈ ವಾಕ್ ವ್ಯವಸ್ಥೆ ಸರಿಯಲ್ಲ. ಉಡುಪಿ ಜಿಲ್ಲೆಯ ಎರಡು ಬದಿಗಳಲ್ಲಿ ಸರ್ವಿಸ್ ರಸ್ತೆ ಅತಿ ಅಗತ್ಯವಾಗಿ ನಿರ್ಮಾಣವಾಗಬೇಕು, ಅಂತೆಯೇ ಪುರಸಭೆ, ತಾಲೂಕು ವ್ಯಾಪ್ತಿ ಮತ್ತು ಹೆಜಮಾಡಿಯಿಂದ ಬೈಂದೂರು ತನಕ ಸರ್ವಿಸ್ ರಸ್ತೆ ನಿರ್ಮಾಣವಾಗಲೇ ಬೇಕು. ಹಲವಾರು ಕಡೆ ಸರ್ವಿಸ್ ರಸ್ತೆ ಇಲ್ಲದೆ ಹಲವಾರು ಅಪಘಾತಗಳು ಈಗಾಗಲೇ ನಡೆದು ಹೋಗಿರುತ್ತದೆ. ಉಡುಪಿ ಜಿಲ್ಲೆಯ ಮಾನ್ಯ ಸಂಸದರು ಈ ಬಗ್ಗೆ ಪುನರ್ ಪರಿಶೀಲಿಸಿ ಎಲ್ಲಾ ಮಾನ್ಯ ಶಾಸಕರೊಂದಿಗೆ ಹಾಗೂ ಸ್ಥಳೀಯರೊಂದಿಗೆ ಚರ್ಚಿಸಿ ಉಡುಪಿ ಜಿಲ್ಲೆಯ ಎನ್ ಎಚ್ 66 ರ ಎರಡು ಬದಿಗಳಲ್ಲಿ ಸರ್ವಿಸ್ ರಸ್ತೆ ಆಗುವವರೆ ಪ್ರಯತ್ನಿಸಬೇಕೆಂದು ಆಗ್ರಹಿಸಿದ್ದಾರೆ.
ನಾನಿಲ್ತಾರ್ ಕುಲಾಲ ಸಂಘದ ಅಧ್ಯಕ್ಷರಾಗಿ ಜಯರಾಮ ಕುಲಾಲ್ ಅಗ್ಗರಟ್ಟ ಮರು ಆಯ್ಕೆ
Posted On: 20 Jul 2025, 05:17 PM
ಕಾರ್ಕಳ : ತಾಲೂಕಿನ ನಾನಿಲ್ತಾರು ಕುಲಾಲ ಸಂಘದಲ್ಲಿ ಜರಗಿದ ಸಂಘದ 37 ನೇ ವಾರ್ಷಿಕ ಮಹಾಸಭೆಯಲ್ಲಿ ಸರ್ವಾನುಮತದಿಂದ ಜಯರಾಮ ಕುಲಾಲ್ ಅಗ್ಗರಟ್ಟರನ್ನು ಅಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆ ಮಾಡಲಾಯಿತು. ಈ ಸಂದರ್ಭ ನಾನಿಲ್ತಾರು ಕುಲಾಲ ಸಂಘದ ಸದಸ್ಯರು ಉಪಸ್ಥಿತರಿದ್ದರು.
ರೋಟರಿ ಸಮುದಾಯದಳ ಇನ್ನಂಜೆ - ಪದಪ್ರಧಾನ ಕಾರ್ಯಕ್ರಮ
Posted On: 20 Jul 2025, 05:11 PM
ಕಾಪು : ರೋಟರಿ ಸಮುದಾಯದಳ ಇನ್ನಂಜೆ ಇದರ ಪದಪ್ರಧಾನ ಸಮಾರಂಭವು ಇನ್ನಂಜೆ ಯುವಕ ಮಂಡಲದಲ್ಲಿ ಜರುಗಿತು. ಪದ ಪ್ರಧಾನ ಅಧಿಕಾರಿಯಾಗಿ ರೋಟರಿ ಶಂಕರಪುರದ ಅಧ್ಯಕ್ಷರಾದ ಪ್ಯಾಟ್ರಿಕ್ ಡಿಸೋಜ ರೋಟರಿ ಸಮುದಾಯದಳ ಇನ್ನಂಜೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಜ್ರೇಶ್ ಆಚಾರ್ಯ ಇವರಿಗೆ ಪದ ಪ್ರಧಾನ ಮಾಡಿದರು. ನೂತನ ಕಾರ್ಯದರ್ಶಿಯಾಗಿ ಗಣೇಶ್ ಆಚಾರ್ಯ, ದಂಡಪಾಣಿಯಾಗಿ ಜೇಸುದಾಸ್ ಸೋನ್ಸ್ ಇವರು ಅಧಿಕಾರ ಸ್ವೀಕರಿಸಿದರು. ಈ ಸಂಧರ್ಭದಲ್ಲಿ ಇನ್ನಂಜೆ ಹಾಲು ಉತ್ಪಾದಕರ ಸಂಘ ಇದರ ಕಾರ್ಯನಿರ್ವಹಣಾಧಿಕಾರಿಯಾದ ಸುಬ್ರಮಣ್ಯ ಎನ್ ಭಟ್, ಅತಿಥಿಗಳಾಗಿ ರೋಟರೆಕ್ಟ್ ಜಿಲ್ಲಾ ಸಭಾಪತಿಯಾದ ನವೀನ್ ಅಮೀನ್, ರೋಟರಿ ಶಂಕರಪುರದ ಕಾರ್ಯದರ್ಶಿಯಾದ ಎದ್ವಿನ್ ನೋಯಲ್ ಡಿಸಿಲ್ವಾ, ಆರ್ ಸಿ ಸಿ ಸಭಾಪತಿಯಾದ ಮಾಲಿನಿ ಇನ್ನಂಜೆ, ಆರ್ ಸಿ ಸಿ ನಿಕಟ ಪೂರ್ವ ಅಧ್ಯಕ್ಷರಾದ ಪ್ರಶಾಂತ್ ಆಚಾರ್ಯ ಉಪಸ್ಥಿತರಿದ್ದರು.
ಇನ್ನಂಜೆ ಎಸ್ ವಿ ಎಚ್ ಕಾಲೇಜು : ಕ್ರಿಕೆಟ್ ಪಿಚ್ ನಿರ್ಮಾಣ ಮತ್ತು ಆಟೋಟ ಸಾಮಗ್ರಿಗಳ ಹಸ್ತಾಂತರ
Posted On: 20 Jul 2025, 05:05 PM
ಕಾಪು : ರೋಟರಿ ಸಮುದಾಯದಳ ಇನ್ನಂಜೆ, ಯುವಕ ಮಂಡಲ (ರಿ.) ಇನ್ನಂಜೆ, ಇನ್ನಂಜೆ ಫ್ರೆಂಡ್ಸ್ ಇನ್ನಂಜೆ ಇದರ ವತಿಯಿಂದ ಇನ್ನಂಜೆ ಎಸ್ ವಿ ಎಚ್ ಕಾಲೇಜಿಗೆ ಸುಮಾರು 80,000 ವೆಚ್ಚದಲ್ಲಿ ಕ್ರಿಕೆಟ್ ಪಿಚ್ ನಿರ್ಮಾಣ ಮತ್ತು ಆಟೋಟ ಸಾಮಗ್ರಿಗಳನ್ನು ಹಸ್ತಾಂತರಿಸಲಾಯಿತು. ಕಿಕ್ರೆಟ್ ಪಿಚ್ ಹಸ್ತಾಂತರ ಕಾರ್ಯಕ್ರಮವನ್ನು ರೋಟರಿ ಸಮುದಾಯ ದಳ ಇನ್ನಂಜೆ ಅಧ್ಯಕ್ಷರಾದ ವಜ್ರೇಶ್ ಆಚಾರ್ಯ, ರೋಟರಿ ಅಧ್ಯಕ್ಷರಾದ ಪ್ಯಾಟ್ರಿಕ್ ಡಿ ಸೋಜ, ಯುವಕ ಮಂಡಲ ಪೂರ್ವ ಅಧ್ಯಕ್ಷರಾದ ದೀವೇಶ್ ಶೆಟ್ಟಿ ಮತ್ತು ವಿಜಯ್ ಜಿ. ಇವರುಗಳು ಪ್ರಾಂಶುಪಾಲರಾದ ರಾಜೇಂದ್ರ ಪ್ರಭು ಇವರಿಗೆ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಇನ್ನಂಜೆ ಪಂಚಾಯತ್ ಅಧ್ಯಕ್ಷರಾದ ಮಾಲಿನಿ ಇನ್ನಂಜೆ, ರೋ. ನವೀನ್ ಅಮೀನ್, ಕನ್ನಡ ಮಾಧ್ಯಮ ಮುಖ್ಯ್ಯೋಪಾದ್ಯಾಯರಾದ ನಟರಾಜ್ ಉಪಾಧ್ಯಾಯ, ದೈಹಿಕ ಶಿಕ್ಷಕರಾದ ನವೀನ್ ಶೆಟ್ಟಿ, ನಿವೃತ್ತ ಶಿಕ್ಷಕರಾದ ವಿಶ್ವನಾಥ್ ನಾಯ್ಕ್ ಪೇತ್ರಿ ಮತ್ತು ಆರ್ ಸಿ ಸಿ ಸದಸ್ಯರು, ಯುವಕ ಮಂಡಲ ಸದಸ್ಯರು, ಇನ್ನಂಜೆ ಫ್ರೆಂಡ್ಸ್ ಸದಸ್ಯರು ಉಪಸ್ಥಿತರಿದ್ದರು.
ಪಡುಬಿದ್ರಿ : ಆಟಿದ ಲೇಸ್ ಕಾರ್ಯಕ್ರಮ
Posted On: 20 Jul 2025, 04:28 PM
ಪಡುಬಿದ್ರಿ : ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ, ಶ್ರೀ ನಾರಾಯಣಗುರು ಮಹಿಳಾ ಮಂಡಳಿ ಮತ್ತು ಕಲ್ಪತರು ಮಹಿಳಾ ಸ್ವಸಹಾಯ ಗುಂಪಿನ ಆಶ್ರಯದಲ್ಲಿ ಪಡುಬಿದ್ರಿ ಬಿಲ್ಲವ ಸಂಘದ ಸಭಾಂಗಣದಲ್ಲಿ ಜರಗಿದ ಆಟಿದ ಲೇಸ್ ಕಾರ್ಯಕ್ರಮವನ್ನು ಜಾನಪದ ಚಿಂತಕ ವಾಮನ ಕೋಟ್ಯಾನ್ ನಡಿಕುದ್ರುರವರು ಕಳಸಕ್ಕೆ ಭತ್ತ ತುಂಬುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಅಂದು ಆಟಿಯು ಕಷ್ಟದ ಕಾಲವಾಗಿತ್ತು. ಅವಿಭಕ್ತ ಕುಟುಂಬದಲ್ಲಿಯ ಒಡನಾಟದ ಜೊತೆಗೆ ಕೃಷಿ ಬದುಕಿನ ಅನಾವರಣದ ನೆನಪು ಅಜರಾಮರ. ಇಂದು ಆಟಿಯು ವೈಭವೀಕರಣವಾಗಿದೆ. ಹಾಳೆಯ ಮುಟ್ಟಾಲೆಯಿಂದ ಹಿಡಿದು ಬಳಸುವ ಪರಿಕರಗಳಿಗೆ ವೈಜ್ಞಾನಿಕ ಹಿನ್ನೆಲೆಯಿದೆ. ಆಟಿಯ ಆಹಾರಗಳು ದೈಹಿಕ ವ್ಯವಸ್ಥೆಗೆ ಶಕ್ತಿದಾಯಕವಾಗಿತ್ತು ಎಂದರು. ಪಡುಬಿದ್ರಿ ಸಿ.ಎ.ಸೊಸೈಟಿ ನಿರ್ದೇಶಕ ಗಿರೀಶ್ ಪಲಿಮಾರು ಮಾತನಾಡಿ, ಪ್ರಸ್ತುತ ಆಟಿ ಎಲ್ಲಾ ಕಡೆ ಜರಗುತ್ತಿದೆ. ಆದರೆ ಅಂದಿನ ವಾಸ್ತವಿಕತೆಯನ್ನು ನೆನಪಿಸಿ ಯುವ ಜನಾಂಗಕ್ಕೆ ತಿಳಿಸುವ ಕಾರ್ಯವಾಗಬೇಕಿದೆ. ಕೃಷಿ ಕಾರ್ಯ ಮುಗಿದು ಮನೆ ತುಂಬಾ ಜನರಿದ್ದ ಸಂದರ್ಭದಲ್ಲಿ ಊಟಕ್ಕೂ ತತ್ವಾರದಲ್ಲಿದ್ದ ಸಮಯ ಪ್ರಕೃತಿದತ್ತವಾಗಿ ಸಿಗುತ್ತಿದ್ದ ವಸ್ತುಗಳನ್ನು ಆಹಾರಕ್ಕಾಗಿ ಬಳಸುತ್ತಿದ್ದ ಕಾಲ. ಆಟಿಯ ಸಮಯ ವಿವಿಧ ಪರಿಕರಗಳನ್ನು ತಯಾರಿಸುತ್ತಿದ್ದು, ವಕ್೯ ಫ್ರಮ್ ಹೋಮ್ ಪರಿಕಲ್ಪನೆ ಅಂದೂ ಇತ್ತು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಮಾತನಾಡಿ, ಕೊರೋನಾದ ಬಳಿಕ ಜನರಿಗೆ ಆರೋಗ್ಯದ ಬಗ್ಗೆ ಕಾಳಜಿ ಮೂಡಿದೆ. ಆಟಿಯ ತಿಂಡಿ ತಿನಿಸುಗಳು ಹಲವಾರು ರೋಗಗಳನ್ನು ತಡೆಗಟ್ಟಲು ಸಹಕಾರಿಯಾಗಿದೆ ಎಂದರು. ಈ ಸಂದರ್ಭ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ. ಸುಕುಮಾರ್, ಬಿಲ್ಲವ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ರೋಹಿಣಿ ಆನಂದ್, ನಾರಾಯಣಗುರು ಸೇವಾದಳದ ದಳಪತಿ ಸಂತೋಷ್ ನಂದಿಕೂರು, ಬಿಲ್ಲವ ಸಂಘದ ಉಪಾಧ್ಯಕ್ಷ ರವಿ ಸಾಲ್ಯಾನ್, ಕಾರ್ಯದರ್ಶಿ ಲಕ್ಷ್ಮಣ ಪೂಜಾರಿ, ಕೋಶಾಧಿಕಾರಿ ಅಶೋಕ್ ಪೂಜಾರಿ ವೇದಿಕೆಯಲ್ಲಿದ್ದರು. ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ, ಶ್ರೀ ನಾರಾಯಣಗುರು ಮಹಿಳಾ ಮಂಡಳಿ ಮತ್ತು ಕಲ್ಪತರು ಮಹಿಳಾ ಸ್ವಸಹಾಯ ಗುಂಪಿನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಸುಜಾತ ಹರೀಶ್ ಪ್ರಾರ್ಥಿಸಿದರು. ರೋಹಿಣಿ ಆನಂದ್ ಸ್ವಾಗತಿಸಿದರು. ಸುಚರಿತ ಎಲ್ ಅಮೀನ್ ನಿರೂಪಿಸಿ, ತೇಜಾವತಿ ವಂದಿಸಿದರು. ಸುಗಂಧಿ ಶ್ಯಾಮ್ ಆಟಿಯ ಕವನ ವಾಚಿಸಿದರು. ಮಹಿಳೆಯರಿಂದ ನೃತ್ಯ ಕಾರ್ಯಕ್ರಮ ಜರಗಿತು. ಸುಮಾರು 26 ಬಗೆಯ ಆಟಿ ಆಹಾರ ಖಾದ್ಯಗಳನ್ನು ಉಣಬಡಿಸಲಾಯಿತು.
