Updated News From Kaup

ದಿವ್ಯಾಂಗ ಬಾಲಕನ ಮನೆ ಬಾಗಿಲಿಗೆ ಬಂದು ಅಂಗವಿಕಲ ವೇತನ ಮಂಜೂರು ಮಾಡಿದ ತಹಶಿಲ್ದಾರ್ ಡಾ.ಪ್ರತಿಭಾ ಆರ್.

Posted On: 03-01-2025 07:02PM

ಕಾಪು : ಕೆಲ ದಿನಗಳ ಹಿಂದೆ ಫಲಿಮಾರು ಗ್ರಾಮದ ಅಡ್ವೆಯ ದಿವ್ಯಾಂಗ ಬಾಲಕನಿಗೆ ಮನೆ ಬಾಗಿಲಿಗೆ ಬಂದು ಆಧಾರ್ ಮಾಡಿಸಿಕೊಟ್ಟಿದ್ದ ತಹಶಿಲ್ದಾರ್ ಡಾ. ಪ್ರತಿಭಾರವರು ಗುರುವಾರ ಅದೇ ಬಾಲಕನ ಮನೆ ಬಾಗಿಲಿಗೆ ಬಂದು ಅಂಗವಿಕಲ ವೇತನವನ್ನೂ ಮಂಜೂರು ಮಾಡಿ ಮಾನವೀಯತೆ ಮೆರೆದಿದ್ದಾರೆ.

ಹದಿನಾಲ್ಕು ವರ್ಷದ ಕೀರ್ತನ್ ರವರಿಗೆ ಅಂಗವೈಕಲ್ಯದಿಂದ ಸದಾ ಕಾಲ ಹಾಸಿಗೆಯಲ್ಲಿಯೇ ಇರಬೇಕಾದ ಪರಿಸ್ಥಿತಿ. ತಾಯಿ ಮಮತಾರವರೇ ಎಲ್ಲಾ ಸೇವೆ ಮಾಡುತ್ತಿದ್ದು, ಆಧಾರ್ ಕಾರ್ಡ್ ಇಲ್ಲದೇ ಅಂಗವಿಕಲ ವೇತನವನ್ನು ಪಡೆಯಲು ಸಾಧ್ಯವಾಗಿರಲಿಲ್ಲ. ಆಗ ಸ್ವತಃ ತಹಶಿಲ್ದಾರ್ ಇಡೀ ಆಧಾರ್ ಕೇಂದ್ರವನ್ನೇ ಬಾಲಕನ ಮನೆ ಬಾಗಿಲಿಗೆ ಕೊಂಡೊಯ್ದು ಆಧಾರ್ ಕಾರ್ಡ್ ಮಾಡಿಸಿದ್ದರು. ಶೀಘ್ರವಾಗಿ ಅಂಗವಿಕಲ ಕಾರ್ಡ್ ಬರುವಂತೆ ಮಾಡಿ ಅಂಗವಿಕಲ ವೇತನವನ್ನು ಸಹ ಮಂಜೂರು ಮಾಡಿರುತ್ತಾರೆ.

ಈ ಬಗ್ಗೆ ಬಾಲಕನ ತಾಯಿ ಮಮತಾ ಮತ್ತು ತಂದೆ ಗುರುಸ್ವಾಮಿ ಪ್ರತಿಕ್ರಿಯಿಸಿ, ತಹಶಿಲ್ದಾರ್ ಪ್ರತಿಭಾ ಮೇಡಂರವರ ದೆಸೆಯಿಂದಾಗಿ ನಮಗಿಂದು ಈ ಪಿಂಚಣಿ ದೊರಕಲು ಸಾಧ್ಯವಾಗಿದೆ. ಅಂದು ಮನೆಗೆ ಆಧಾರ್ ಕೇಂದ್ರ ತಂದು ಆಧಾರ್ ಕಾರ್ಡ್ ಮಾಡಿಸಿಕೊಟ್ಟು ಹೋಗಿದ್ದರು. ಇಂದು ಮನೆ ಬಾಗಿಲಿಗೆ ಬಂದು ಪಿಂಚಣಿ ಮಂಜೂರಾತಿ ಪತ್ರ ನೀಡಿದ್ದಾರೆ. ಅವರಿಲ್ಲದೇ ಇದ್ದಿದ್ದರೆ ನಾವು ಜೀವನವಿಡೀ ಆಧಾರ್ ಕಾರ್ಡ್ ಮಾಡಿಸಲು ಸಾಧ್ಯವಾಗುತ್ತಿರಲಿಲ್ಲ. ಅವರಿಂದಾಗಿ ನಮ್ಮ ಬಾಳಿನಲ್ಲಿ ಬೆಳಕು ಕಂಡಿದೆ. ಇಂತಹ ಮಾನವೀಯತೆಯ ಅಧಿಕಾರಿಗಳು ವಿರಳ ಎಂದರು. ಈ ಬಗ್ಗೆ ತಹಶಿಲ್ದಾರ್ ಪ್ರತಿಭಾ ಆರ್ ಮಾತನಾಡಿ, ಸರಕಾರದ ಸೌಲಭ್ಯಗಳನ್ನು ನಿಜವಾದ ಅರ್ಹರಿಗೆ ತಲುಪಿಸುವುದು ಅಧಿಕಾರಿಗಳ ಕರ್ತವ್ಯ. ಅಂಗವಿಕಲ ವೇತನ ಮಂಜೂರು ಮಾಡಲು ಆಧಾರ್ ಕಾರ್ಡ್ ಅವಶ್ಯಕತೆ ಇತ್ತು. ವೈದ್ಯರಿಂದ ಅಂಗವಿಕಲ ಕಾರ್ಡ್ ನ ಅವಶ್ಯಕತೆ ಇತ್ತು. ಇವುಗಳನ್ನು ನಾನೇ ಸ್ವತಃ ಮುತುವರ್ಜಿ ವಹಿಸಿ ಮಾಡಿಸಿಕೊಟ್ಟಿರುತ್ತೇನೆ. ಇಂದು ಅಂಗವಿಕಲ ವೇತನವನ್ನು ಸಹ ಮಂಜೂರು ಮಾಡಿರುತ್ತೇನೆ. ಸರ್ಕಾರದ ಸೌಲಭ್ಯಗಳನ್ನು ದೊರಕಿಸುವಲ್ಲಿ ಅಧಿಕಾರಿಗಳು ಮಾನವೀಯ ಸ್ಪರ್ಶದೊಂದಿಗೆ ಕರ್ತವ್ಯ ನಿರ್ವಹಿಸಬೇಕು ಎಂದರು.

ಗ್ರಾಮ ಒನ್ ಸೆಂಟರ್ ನಡೆಸುತ್ತಿರುವ ಇಸ್ಮಾಯಿಲ್ ಫಲಿಮಾರು ಇವರು ತಹಶಿಲ್ದಾರ್ ಪ್ರತಿಭಾರವರ ಗಮನಕ್ಕೆ ತಂದು ಅಗತ್ಯ ನೆರವು ಸಿಗಲು ನೆರವಾಗಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮ ಆಡಳಿತಾಧಿಕಾರಿ ಸುನಿಲ್ ಉಪಸ್ಥಿತರಿದ್ದರು.

ಬೆಳಪು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷರಾಗಿ ಬೆಳಪು ದೇವಿಪ್ರಸಾದ್ ಶೆಟ್ಟಿ ಅವಿರೋಧ ಆಯ್ಕೆ

Posted On: 03-01-2025 06:58PM

ಪಡುಬಿದ್ರಿ : ಬೆಳಪು ವ್ಯವಸಾಯ ಸಹಕಾರಿ ಸಂಘದ ಚುನಾವಣೆಯಲ್ಲಿ ಸಹಕಾರಿ ರತ್ನ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಬಳಗದ ಎಲ್ಲಾ 12 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದು, ಆಡಳಿತ ಮಂಡಳಿಯ ಮುಂದಿನ ಅವಧಿಗೆ ಸತತವಾಗಿ 9 ನೇ ಅವಧಿಗೆ ಅಧ್ಯಕ್ಷರಾಗಿ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಹಾಗೂ ಉಪಾಧ್ಯಕ್ಷರಾಗಿ ದ್ಯುಮಣಿ ಆರ್ ಭಟ್ ಉಚ್ಚಿಲರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶುಕ್ರವಾರ ಪಣಿಯೂರಿನಲ್ಲಿರುವ ಸಂಘದ ಕೇಂದ್ರ ಕಛೇರಿಯಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು.

ನಿರ್ದೇಶಕರುಗಳಾಗಿ ಪಾಂಡು ಶೆಟ್ಟಿ, ಸಾಧು ಶೆಟ್ಟಿ ಪಣಿಯೂರು, ಆಲಿಯಬ್ಬ, ಗೋಪಾಲ ಪೂಜಾರಿ, ಪಾಂಡು ಎಮ್. ಶೇರಿಗಾರ, ಸೈಮನ್ ಡಿಸೋಜ , ಮೀನ ಪೂಜಾರ್ತಿ, ಸುಂದರಿ, ವಿಮಲ ಅಂಚನ್, ಅನಿತ ಆನಂದರವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

ಚುನಾವಣೆಯಲ್ಲಿ ಸಹಕಾರ ಸಂಘಗಳ ಚುನಾವಣಾ ನಿರ್ವಚನಾಧಿಕಾರಿ ಕೆ. ಆರ್. ರೋಹಿತ್‌ರವರು ಚುನಾವಣಾ ಪ್ರಕ್ರಿಯೆ ನಡೆಸಿದರು.

ಈ ಸಂದರ್ಭ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಲೋಚನ ಮತ್ತು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಲಯ ನಿರ್ದೇಶಕ ಬಾಲಗೋಪಾಲರವರು ಉಪಸ್ಥಿತರಿದ್ದರು.

ಜ.5 : ಉಡುಪಿ ಜಿಲ್ಲಾ ನಾಯಕ ಸಮುದಾಯ ಸಂಘದ ಮಹಾಸಭೆ

Posted On: 02-01-2025 10:50PM

ಉಡುಪಿ : ನಾಯಕ ಸಮುದಾಯ ಸಂಘ (ರಿ.) ಉಡುಪಿ ಜಿಲ್ಲೆ ಇದರ ಮಹಾಸಭೆ ಜನವರಿ 5, ಆದಿತ್ಯವಾರ ಪೂರ್ವಾಹ್ನ ಘಂಟೆ 10 ಕ್ಕೆ ವೀರಭದ್ರ ದೇವಸ್ಥಾನ, ಕಲ್ಯಾಣಪುರ ಇಲ್ಲಿ ಜರಗಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ನಾಯಕ ಸಮುದಾಯ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ನಾಯಕ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಹಿರಿಯ ವೈದ್ಯಕೀಯ ತಜ್ಞರಾದ ಡಾ| ದಯಾಮಣಿ ಬಿ., ಕಾರ್ಕಳ ನಗರ ಠಾಣೆಯ ಸಹಾಯಕ ಉಪನಿರೀಕ್ಷಕರಾದ ಯಶವಂತ್ ಭಾಗವಹಿಸಲಿದ್ದಾರೆ.

ಉಡುಪಿ ಜಿಲ್ಲಾ ನಾಯಕ ಸಮುದಾಯ ಸಂಘದ ಗೌರವಾಧ್ಯಕ್ಷ ಶೇಖರ ನಾಯಕ, ಗೌರವ ಸಲಹೆಗಾರರಾದ ವಸಂತ ನಾಯಕ, ಸುನೇತ್ರ ನಾಯಕ, ಕಾಪು ತಾಲೂಕು ನಾಯಕ ಸಮುದಾಯ ಸಂಘದ ಅಧ್ಯಕ್ಷರಾದ ನೀಲಾನಂದ ನಾಯಕ, ಮಂಗಳೂರು ತಾಲೂಕು ಅಧ್ಯಕ್ಷರಾದ ಹರೀಶ ನಾಯಕ ಉಪಸ್ಥಿತರಿರಲಿದ್ದಾರೆ.

ಇದೇ ಸಂದರ್ಭದಲ್ಲಿ 2023-24 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಶೇ.85 ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಸಂಘದ ಸಂಚಾಲಕರಾದ ನೀಲಾನಂದ ನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಪು : ಹದಿಹರೆಯದ ವಿದ್ಯಾರ್ಥಿಗಳಿಗೆ ಆತ್ಮರಕ್ಷಣೆ ಮತ್ತು ವೃತ್ತಿ ಸಮಾಲೋಚನೆ ಕಾರ್ಯಕ್ರಮ

Posted On: 02-01-2025 12:40PM

ಕಾಪು : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ಜಿಲ್ಲೆ, ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಡುಪಿ ಜಿಲ್ಲೆ ಇದರ ಸಹಯೋಗದೊಂದಿಗೆ ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನದ ಪ್ರಯುಕ್ತ ಗುರುವಾರ ಪೊಲಿಪು ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ "ಹದಿಹರೆಯದ ವಿದ್ಯಾರ್ಥಿಗಳಿಗೆ ಆತ್ಮರಕ್ಷಣೆ ಮತ್ತು ವೃತ್ತಿ ಸಮಾಲೋಚನೆ ಕಾರ್ಯಕ್ರಮನ್ನು ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಜಗತ್ತಿನಲ್ಲಿ ಹೆಣ್ಣು ಮಕ್ಕಳು ಪಾತ್ರ ಬಹುಮುಖ್ಯವಾದದ್ದು. ಹೆಣ್ಣು ಮಕ್ಕಳನ್ನು ರಕ್ಷಿಸುವ ಕಾರ್ಯವಾಗಬೇಕು. ಪ್ರಸ್ತುತ ಸಮಾಜದಲ್ಲಿ ವಿವಿಧ ಪಾಳಿಯಲ್ಲಿ ಉದ್ಯೋಗ ಮಾಡುವಂತ ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆ ಅತ್ಯಗತ್ಯ ಎಂದರು.

ಈ ಸಂದರ್ಭದಲ್ಲಿ ಕಾಪು ಪುರಸಭೆಯ ಅಧ್ಯಕ್ಷರಾದ ಹರಿಣಾಕ್ಷಿ ದೇವಾಡಿಗ, ಪುರಸಭೆಯ ಸದಸ್ಯರಾದ ರಾಧಿಕಾ, ಕಾಪು ತಹಶೀಲ್ದಾರರಾದ ಡಾ. ಪ್ರತಿಭ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಕುಮಾರ್ ವಿ ನಾಯ್ಕ್, ಪೊಲಿಪು ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಶಿವಲಿಂಗಪ್ಪ, ಗಣ್ಯರು, ಉಪನ್ಯಾಸಕ ವೃಂದ ಉಪಸ್ಥಿತರಿದ್ದರು.

ಮತ್ತೆ ಬಂದಿದೆ ಹೊಸ ವರ್ಷ, ತರಲಿ ಹೊಸ ಹರ್ಷ

Posted On: 01-01-2025 09:27AM

ಹೊಸ ವರ್ಷಕ್ಕೆ ಸ್ವಾಗತ. 2025 ಹೊಸತನ ಅನ್ನುವುದು ಸೃಷ್ಟಿಯ ನಿಯಮ. ಹೀಗಾಗಿಯೇ ಸದಾ ಒಂದಲ್ಲ ಒಂದು ಹೊಸತನಕ್ಕಾಗಿ ನಾವು ಕಾಯುತ್ತಿರುತ್ತೇವೆ. ಹೊಸ ಜೀವನ, ಹೊಸ ಕಾರು, ಹೊಸ ಮನೆ, ಹೊಸ ಹುದ್ದೆ, ಹೊಸ ಗೆಳೆಯರು, ಹೊಸ ಸ್ಥಳಗಳು, ಹೊಸ ಮೊಬೈಲ್ ಹೀಗೆ ಹೊಸ ಬಟ್ಟೆಯಿಂದ ಹಿಡಿದು ಹೊಸ ಚಪ್ಪಲಿಯವರೆಗಿನ ಪ್ರತಿಯೊಂದು ಹೊಸತನಗಳನ್ನು ನಾವು ತುಂಬಾ ಹರ್ಷದಿಂದ ಸ್ವಾಗತಿಸುತ್ತೇವೆ. ಅದೇ ರೀತಿ ಈಗ ಹಳೆಯ ನೋವು, ನೆನಪುಗಳನ್ನೆಲ್ಲಾ ಬದಿಗೆ ಸರಿಸಿ ಹೊಸ ನಿರೀಕ್ಷೆ ಹಾಗೂ ಕನಸುಗಳೊಂದಿಗೆ ಮತ್ತೊಂದು ಹೊಸ ವರ್ಷವನ್ನು ನಾವು ಬರಮಾಡಿಕೊಳ್ಳುತ್ತಿದೇವೆ. ಈ ಹೊಸ ವರ್ಷ ನಿಮ್ಮ ಜೀವನದಲ್ಲಿ ಹಲವು ಹೊಸತನಗಳೊಂದಿಗೆ ಹೊಸ ಹರ್ಷ ತರಲಿ.

ಕಳೆದ ವರ್ಷ ಮಾಡಿದ ರೆಸಲ್ಯೂಶನೇ ಇನ್ನೂ ಪೂರ್ಣವಾಗ್ಲಿಲ್ಲ. ಈ ವರ್ಷ ಇನ್ನೇನು ಮಾಡೋದು ಎಂದು ಹೊಸ ವರ್ಷದ ಪ್ರಾರಂಭದಲ್ಲಿ ನಮಗೆಲ್ಲ ಅನಿಸೋದು ಸರ್ವೇಸಾಮಾನ್ಯ. ರೆಸಲ್ಯೂಶನ್‌ ಗಳೆ ಹೊಸ ವರ್ಷದ ಮೊದಲ ನಾಲ್ಕು ದಿನಗಳಿಗೆ ಮಾತ್ರ ಸೀಮಿತವಾಗಿಬಿಟ್ಟಿದೆ. ವರ್ಷದ ಮೊದಲ ದಿನದಂದು ಈ ವರ್ಷ ಇದನ್ನು ಸಾಧಿಸಿಯೇ ತೀರುತ್ತೇನೆ ಎಂಬ ಸಂಕಲ್ಪ ಮಾಡುತ್ತೇವೆ. ಆದರೆ ಕೆಲಸದ ಜಂಜಾಟದ ನಡುವೆ ನಾವು ಸಾಧಿಸಬೇಕಾದ ವಿಷಯವನ್ನೇ ಮರೆತುಬಿಡುತ್ತಿದ್ದೇವೆ. ಆ ರೀತಿ ಮಾಡಿದಾಗ ಕಳೆದ ವರ್ಷಕ್ಕೂ ಈ ವರ್ಷಕ್ಕೂ ಏನಿದೆ ವ್ಯತ್ಯಾಸ. ದಿನಗಳು ಅಥವಾ ವರ್ಷ ನಮಗಾಗಿ ಕಾಯುವುದಿಲ್ಲ. ಅದರ ಪಾಡಿಗೆ ಅದು ಸಾಗುತ್ತಿರುತ್ತದೆ. ನಾವು ಅದರ ಜತೆ ಸಾಗುತ್ತಿರಬೇಕು ಅಷ್ಟೇ. ಆದರೆ ನಾವು ಸಮಯದ ಜತೆ ಎಷ್ಟು ಬಾರಿ ಸರಿಯಾಗಿ ಸಾಗಿದ್ದೇವೆ ಅನ್ನೋದನ್ನು ಮನನ ಮಾಡಿಕೊಳ್ಳಬೇಕು.

ನಮ್ಮ ಸಂಕಲ್ಪ ಸದಾ ಇರಲಿ : ನಾವು ಪ್ರತೀ ವರ್ಷ ಹೊಸ ವರ್ಷದಂದು ಸಂಕಲ್ಪಗಳನ್ನು ಮಾಡುತ್ತೇವೆ. ಆದರೆ ವರ್ಷವಿಡೀ ಅದನ್ನು ಅನುಸರಿಸುವುದು ಕಷ್ಟವಾಗುತ್ತದೆ. ನಾವು ಮಾಡಿಕೊಂಡ ಸಂಕಲ್ಪಗಳ ಪೈಕಿ ವಾಸ್ತವವಾಗಿ ಕಾರ್ಯರೂಪಕ್ಕೆ ಬರುವುದು ಕೆಲವು ಮಾತ್ರ ಎಂಬ ಸತ್ಯ ನಮಗೆ ತಿಳಿದಿದೆ. ಈ ನಿರ್ಣಯಗಳನ್ನು ಗಟ್ಟಿಯಾಗಿ ಅನುಸರಿಸುವುದು ನಮ್ಮ ಕೈಯಲ್ಲಿ ಇರುವುದರಿಂದ ಮೊದಲು ನಾವು ದೃಢ ಸಂಕಲ್ಪವನ್ನು ಮಾಡಬೇಕು. ಧನಾತ್ಮಕ ಚಿಂತನೆ ಮೈಗೂಡಿಸಿ ಪ್ರತೀ ದಿನ, ಕ್ಷಣ ಅದನ್ನು ನೆನಪಿಸಿಕೊಳ್ಳುತ್ತಿರಬೇಕು. ಈ ವರ್ಷ ಇದನ್ನು ಮಾಡಬೇಕು ಎಂದುಕೊಂದಿದ್ದರೆ ಮಾರನೇ ದಿನವೇ ಮರೆತುಬಿಡುವುದಲ್ಲ. ಬದಲಾಗಿ ನಾವು ಅದನ್ನು ಸಂಪೂರ್ಣಗೊಳಿಸಲು ಎಡವಿದೆ, ನಾವು ತಲುಪಬೇಕಾದ ಗುರಿಯನ್ನು ನೆನಪಿಸಿಕೊಳ್ಳುತ್ತಿರಬ ಆ ಕೆಲಸ ಕೆಲಸ ಆಗುವರೆಗೂ ಬಿಡಬಾರದು ಹೀಗಾದರೆ ನಾವು ಎಣಿಸಿದ ಕಾಯ೯ ಯಾವುದೇ ತೊಂದರೆ ಇಲ್ಲದೆ ಆಗುವುದು.

ಮನಸ್ಸು ಕಂಟ್ರೋಲ್ ನಲ್ಲಿ ಇರಲಿ : ನಮ್ಮ ಮನಸ್ಸು ನಾವು ಹೇಳಿದಂತೆಯೇ ಇರುತ್ತದೆ. ಈ ವರ್ಷ ಒಳ್ಳೆಯದನ್ನು ಮಾಡಬೇಕು ಎಂದು ಪ್ರತಿ ಕ್ಷಣ ನಮ್ಮ ಮನಸ್ಸಿಗೆ ಹೇಳುತ್ತಾ ಅದನ್ನೇ ಯೋಚಿಸುತ್ತಾ ಇದ್ದರೆ ಖಂಡಿತ ಬದಲಾವಣೆ ಸಾಧ್ಯವಿದೆ. ಪ್ರತೀ ದಿನವನ್ನು ಹೊಸವರ್ಷವೆಂದು ಭಾವಿಸುವುದು ರೆಸಲ್ಯೂಷನ್‌ ಗಳನ್ನು ಪೂರ್ಣಗೊಳಿಸಲು ಇರುವ ಇನ್ನೊಂದು ಹಾದಿ. ನಮಗೆ ದಿನದಲ್ಲಿ 24 ಗಂಟೆ ಸಿಗುವುದರಿಂದ ಅಷ್ಟು ಗಂಟೆಯಲ್ಲಿ ಎಷ್ಟು ಸಮಯವನ್ನು ನಾವು ಒಳ್ಳೆಯ ಕೆಲಸಕ್ಕೆ ಸದುಪಯೋಗಪಡಿಸಿಕೊಳ್ಳುತ್ತೇವೆ ಎಂಬುವುದರ ಕಡೆ ಗಮನ ಹರಿಸಬೇಕು. ಹೊಸ ವರ್ಷ ಎಂಬುವುದು ಖಾಲಿ ಪುಸ್ತಕದಂತೆ. ಪೆನ್ನು ನಮ್ಮ ಕೈಯಲ್ಲಿ ಇರುವುದರಿಂದ ಸುಂದರವಾದ ಕಥೆಯನ್ನು ಬರೆಯಲು ಇದು ನಮಗೆ ಉತ್ತಮ ಅವಕಾಶ.ಈ ಕಥೆ ನಮ್ಮ ಬದುಕಿನ ಹೊಸ ಅಧ್ಯಾಯವಾಗಬೇಕು. ನಾವೆಲ್ಲರೂ ಕೇವಲ ಮೋಜು, ಮಸ್ತಿಯಲ್ಲಿ ಕಾಲ ಕಳೆಯದೆ ನಮ್ಮ ಬದುಕು ಮತ್ತೊಬ್ಬರ ಬದುಕಿಗೆ ಆಸರೆಯಾಗ ಬೇಕು. ನಮ್ಮ ಕೆಲಸದ ಸಂಸ್ಥೆಯ ಅಭಿವೃದ್ಧಿಗೆ ಪಣ ತೊಟ್ಟು ಕೆಲಸ ಮಾಡಬೇಕು. ಏಕೆಂದರೆ ಸಂಸ್ಥೆಯು ಅಭಿವೃದ್ಧಿಯಾದರೆ ನಮ್ಮ ಅಭಿವೃದ್ಧಿ ಸಾಧ್ಯ. ಈ ಕ್ಯಾಲೆಂಡರ್ ವಷ೯ದಲ್ಲಿ ಒಂದಿಷ್ಟು ಸಂಕಲ್ಪಗಳನ್ನು ಈಡೇರಿಸಲು ಹೆಚ್ಚು ಕೆಲಸ ಮಾಡೋಣ ಈ ಉತ್ತಮ ಸಂಕಲ್ಪಗಳು ನಮ್ಮ ಬದುಕಿಗೆ ಹೊಸ ಅಥ೯ ಕೊಡುವಲ್ಲಿ ಅನುಮಾನವಿಲ್ಲ. ✍

ಶಿರ್ವ : ರೋಟರಿ ಸಮುದಾಯದಳ ಜಿಲ್ಲಾ ಸಮ್ಮೇಳನ 2024-25 ಸಂಪನ್ನ

Posted On: 01-01-2025 09:19AM

ಶಿರ್ವ : ಅಂತಾರಾಷ್ಟ್ರೀಯ ರೋಟರಿ ಮಾರ್ಗದರ್ಶನದಲ್ಲಿ ಗ್ರಾಮೀಣ ಸಮುದಾಯ ದಳಗಳು ಗ್ರಾಮೀಣ ಭಾಗದ ಸೇವಾಸಕ್ತರ ಒಂದು ಒಕ್ಕೂಟವಾಗಿದ್ದು, ರೋಟರಿ ಸಮುದಾಯ ಸೇವೆಯ ಒಂದು ಭಾಗವಾಗಿದೆ. ರೋಟರಿಯ ಮಾರ್ಗದರ್ಶನದಲ್ಲಿ ಸಮರ್ಥ ನಾಯಕತ್ವ, ಸ್ವಾವಲಂಬಿ ಜೀವನಕ್ಕೆ ಪೂರಕ ವಾತಾವರಣದ ನಿರ್ಮಾಣದ ಜೊತೆಗೆ ಗ್ರಾಮೀಣ ಪರಿಸರದ ಸುಧಾರಣೆ, ಅಭಿವೃದ್ಧಿಗೆ ಸಮುದಾಯದಳಗಳ ಪುನಶ್ಚೇತನ ಅಗತ್ಯವಾಗಿದೆ ಎಂದು ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3182 ಇದರ ಜಿಲ್ಲಾ ಗವರ್ನರ್ ಸಿಎ. ದೇವ್ ಆನಂದ್ ನುಡಿದರು. ಅವರು ಶಿರ್ವ ರೋಟರಿಯ ಸಂಸ್ಥಾಪಕರು, ಬಹುಮುಖಿ ಪ್ರತಿಭಾ ಸಂಪನ್ನರಾದ ದಿ.ಪಾಂಗಾಳ ವಿಟ್ಠಲ ಶೆಣೈ ಜನ್ಮ ಶತಮಾನೋತ್ಸವದ ಸವಿನೆನಪಿನಲ್ಲಿ ಶಿರ್ವ ರೋಟರಿ ಕ್ಲಬ್, ಪಾದೂರು ರೋಟರಿ ಸಮುದಾಯದಳದ ನೇತೃತ್ವ ಹಾಗೂ ರೋಟರಿ ಶಂಕರಪುರ ಇದರ ಸಹಕಾರದಲ್ಲಿ ಶಂಕರಪುರ ಸೈಂಟ್ ಜೋನ್ಸ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಹಾಸನ ಜಿಲ್ಲೆಗಳನ್ನು ಒಳಗೊಂಡ ರೋಟರಿ ಅ.ರಾ.ಜಿಲ್ಲೆ 3182 ಇದರ ರೋಟರಿ ಸಮುದಾಯದಳ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಆರಂಭದಲ್ಲಿ ದಿ.ಪಾಂಗಾಳ ವಿಟ್ಠಲ್ ಶೆಣೈಯವರ ಸಂಸ್ಮರಣಾರ್ಥ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ದಿಕ್ಸೂಚಿ ಭಾಷಣ ಮಾಡಿದ ರೋಟರಿ ಜಿಲ್ಲಾ ಮಾಜಿ ಗವರ್ನರ್ ಡಾ.ದೇವದಾಸ್ ರೈ ಮಂಗಳೂರು ಇವರು ಮಾತನಾಡಿ ರೋಟರಿ ಸಮುದಾಯದಳದ ಸಂಘಟನೆ,ಕಾರ್ಯವ್ಯಾಪ್ತಿ, ಮತ್ತು ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶಿಕ್ಷಣ, ಕೃಷಿ, ಸಾಹಿತ್ಯ, ರಂಗಭೂಮಿ ಸಂಘಟನೆ, ಸಮಾಜಸೇವೆ ಸಹಿತ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗಾಗಿ ನೀಡಲಾಗುತ್ತಿರುವ ಪಾಂಗಾಳ ವಿಟ್ಠಲ ಶೆಣೈ ಸ್ಮರಣಾರ್ಥ "ಸಾಧನಾ-ಪ್ರೇರಣಾ ಪುರಸ್ಕಾರ"ವನ್ನು ನಿವೃತ್ತ ಶಿಕ್ಷಕ,ಕಲಾವಿದ ಕೃಷ್ಣಕುಮಾರ್ ರಾವ್ ಮಟ್ಟುರವರಿಗೆ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಆರ್‌ಸಿಸಿ ಜಿಲ್ಲಾ ಛೆರ‍್ಮನ್ ಬಿ.ಪುಂಡಲೀಕ ಮರಾಠೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಪಾಂಗಾಳ ಜಯರಾಮ ಶೆಣೈ, 2025-26ನೇ ಸಾಲಿನ ನಿಯೋಜಿತ ಜಿಲ್ಲಾ ಗವರ್ನರ್ ಪಾಲಾಕ್ಷ ಹಾಸನ, 2026-27ರ ಜಿಲ್ಲಾ ಗವರ್ನರ್ ಬಿ.ಎಂ.ಭಟ್ ಬ್ರಹ್ಮಾವರ, ವಲಯ ಸಹಾಯಕ ಗವರ್ನರ್ ಅನಿಲ್ ಡೇಸಾ, ಆರ್‌ಸಿಸಿ ಜಿಲ್ಲಾ ಪ್ರತಿನಿಧಿ ಪ್ರಸಾದ್ ಆಚಾರ್ಯ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಐರೋಡಿ ರಾಮದೇವ ಕಾರಂತ, ಶಂಕರಪುರ ರೋಟರಿ ಅಧ್ಯಕ್ಷೆ ಮಾಲಿನಿ ಶೆಟ್ಟಿ, ಕಾಪು ರೋಟರಿ ಅಧ್ಯಕ್ಷ ಬಾಲಕೃಷ್ಣ ಆಚಾರ್ಯ, ಪಾದೂರು ಆರ್‌ಸಿಸಿ ಅಧ್ಯಕ್ಷ ಪ್ರಕಾಶ್ ಆಚಾರ್ಯ, ವಲಯ ಸೇನಾನಿ ಮೆಲ್ವಿನ್ ಡಿಸೋಜ ಶಿರ್ವ, ಆರ್‌ಸಿಸಿ ವಲಯ ಸಂಯೋಜಕರಾದ ಶರತ್ ಹೆಗ್ಡೆ ಶಂಕರನರಾಯಣ, ಸ್ಮಿತಾ ಕಾಮತ್ ಐಸಿರಿ ಪರ್ಕಳ, ವಲಯ 2ರ ಸಹಾಯಕ ಗವರ್ನರ್ ಮಮತಾ ಶೆಟ್ಟಿ, ಪಾದೂರು ಆರ್‌ಸಿಸಿ ಸಭಾಪತಿ ಜಯಕೃಷ್ಣ ಆಳ್ವ,ವಲಯ ಸಂಯೋಜಕ ರಘುಪತಿ ಐತಾಳ್, ಕಾರ್ಯದರ್ಶಿ ಕಿಶೋರ್ ಆಚಾರ್ಯ ವೇದಿಕೆಯಲ್ಲಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಶಿರ್ವ ರೋಟರಿ ಅಧ್ಯಕ್ಷ ಆಲ್ವಿನ್ ಅಮಿತ್ ಅರಾನ್ಹಾ ವಹಿಸಿದ್ದರು. ಸಮ್ಮೇಳನ ಸಮಿತಿಯ ಅಧ್ಯಕ್ಷ ಡಾ.ವಿಟ್ಠಲ್ ನಾಯಕ್ ಸ್ವಾಗತಿಸಿದರು. ಪಾದೂರು ರಮಾಕಾಂತ್ ಐತಾಳ್ ಪ್ರಾರ್ಥಿಸಿದರು. ಡಾ.ಅರುಣ್ ಕುಮಾರ್ ಹೆಗ್ಡೆ ನಿರೂಪಿಸಿದರು. ರೋಟರಿ ಕಾರ್ಯದರ್ಶಿ ಈವನ್ ಜ್ಯೂಡ್ ಡಿಸೋಜ ವಂದಿಸಿದರು. ಆರಂಭದಲ್ಲಿ ಹಿರಿಯ ಸಾಹಿತಿ ಪಾಂಗಾಳ ಬಾಬು ಕೊರಗ ನೇತೃತ್ವದ ನವೋದಯ ಕೊರಗರ ಸಾಂಸ್ಕೃತಿಕ ಕಲಾ ತಂಡದಿಂದ ಕಲಾ ಪ್ರಸ್ತುತಿ ನಡೆಯಿತು.

ನಂತರ ನಡೆದ ಮೂರು ಪ್ರಧಾನಗೋಷ್ಠಿಗಳಲ್ಲಿ "ಸೇವಾಹೀ ಪರಮೋ ಧರ್ಮ:" ಸಂಪನ್ಮೂಲವ್ಯಕ್ತಿಗಳಾಗಿ ಶಿಕ್ಷಕರು ಹಾಗೂ ಕಸಾಪ ಕಾರ್ಕಳ ತಾಲೂಕು ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ, "ಯುವಜನತೆ ಮತ್ತು ಕೃಷಿ ಜೀವನ ಶೈಲಿ" ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ, "ಮಿರಾಕಲ್ ಫಾರೆಸ್ಟ್ ಚಾಲೆಂಜ್" ಸಮಾಜಸೇವಕರಾದ ಮಹೇಶ್ ಶೆಣೈ ಕಟಪಾಡಿ ಮಾತನಾಡಿದರು. ಡಾ.ವಿಟ್ಟಲ್ ನಾಯಕ್ ನಿರೂಪಿಸಿದರು. ನಂತರ ಸಾಂಸ್ಕೃತಿಕ ಪ್ರತಿಭಾ ಸ್ಫರ್ಧಾ ಕಾರ್ಯಕ್ರಮ ಜರುಗಿತು.

ಸಮಾರೋಪ ಸಮಾರಂಭ: ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಗವರ್ನರ್ ದೇವ್‌ಆನಂದ್‌ರವರು ಸ್ಫರ್ಧಾ ವಿಜೇತರಿಗೆ ನಗದು ಬಹುಮಾನ ಸಹಿತ ಟ್ರೋಫಿ, ಅರ್ಹತಾ ಪತ್ರ ವಿತರಿಸಿ ಅಭಿನಂದಿಸಿದರು. ಆರ್‌ಸಿಸಿ ಮೂಡುಗಿಳಿಯಾರು ಪ್ರಥಮ, ಕೊರವಾಡಿ ಕೋಟೇಶ್ವರ ದ್ವಿತೀಯ, ಹೊರನಾಡು ಕಳಸ ತೃತೀಯ , ಮಣಿಪಾಲ ಹಿಲ್ಸ್ ಚತುರ್ಥ, ಹರಿಹರಪುರ ಪಂಚಮ ಸ್ಥಾನಗಳಿಸಿದರು. ಸ್ಫರ್ಧಾ ಸಂಯೋಜಕ ರಘುಪತಿ ಐತಾಳ್ ವಿಜೇತರ ಪಟ್ಟಿ ವಾಚಿಸಿದರು. ದಿನೇಶ್ ಕುಲಾಲ್ ಸಹಕರಿಸಿದರು. ನಿಣಾಯಕರಾಗಿ ಕೃಷ್ಣಕುಮಾರ್ ರಾವ್, ಪ್ರಕಾಶ್ ಸುವರ್ಣ ಕಟಪಾಡಿ, ರಾಘವೇಂದ್ರ ರಾವ್ ಸಹಕರಿಸಿದರು. ಈ ಸಂದರ್ಭದಲ್ಲಿ ಆರ್‌ಸಿಸಿ ಜಿಲ್ಲಾ ಎಸ್ಸೆಂಬಿಯನ್ನು ಯಶಸ್ವಿಯಾಗಿ ಸಂಘಟಿಸಿದ ಸ್ಮಿತಾ ಗುರುದತ್ತ್ ಕಾಮತ್ ಪರ್ಕಳ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಆರ್‌ಸಿಸಿ ವೈಸ್ ಛೆರ‍್ಮನ್ ಜೆ.ಎಂ.ಶ್ರೀಹರ್ಷ, ಜಿಲ್ಲಾ ಕಾರ್ಯದರ್ಶಿ ಜೈಕಿಸನ್ ಶೆಟ್ಟಿ, ವಲಯ ಸಹಾಯಕ ಗವರ್ನರ್‌ಗಳಾದ ಅನಿಲ್ ಡೇಸಾ, ರಾಘವೇಂದ್ರ ಸಾಮಗ, ಮಮತಾ ಶೆಟ್ಟಿ,ಆರ್‌ಸಿಸಿ ವಲಯ ಸಂಯೋಜಕರು, ರೋಟರಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಹಿರಣ್ಣಯ್ಯ ಹಿರೇಮಠ್, ಸುಪ್ರೀತಾ ಪುರಾಣಿಕ್ ಮೂಡುಗಿಳಿಯಾರು ಮಾತನಾಡಿದರು. ಡಾ.ಅರುಣ್ ಹೆಗ್ಡೆ ನಿರೂಪಿಸಿದರು. ವಿಷ್ಣುಮೂರ್ತಿ ಸರಳಾಯ ವಂದಿಸಿದರು.

ಪಡುಬಿದ್ರಿಯಲ್ಲಿ ಕೃಷಿ ಮೇಳಕ್ಕೆ ಚಾಲನೆ

Posted On: 28-12-2024 06:47PM

ಪಡುಬಿದ್ರಿ : ಆಧುನಿಕ ತಂತ್ರಜ್ಞಾನವನ್ನು ಕೃಷಿಯಲ್ಲೂ ಬಳಸುವುದು ಅನಿವಾರ್ಯ. ಅದರ ಬಳಕೆಗೆ ರೈತರನ್ನು ಉತ್ತೇಜಿಸಬೇಕಾಗಿದೆ. ಕೃಷಿ ಮೇಳಗಳು ಇದಕ್ಕೆ ಪೂರಕವಾಗಿದೆ ಎಂದು ನಿವೃತ್ತ ಕೃಷಿ ಅಧಿಕಾರಿ ಅಬ್ದುಲ್ ಬಶೀರ್ ಅಭಿಪ್ರಾಯಪಟ್ಟರು. ಅವರು ಶನಿವಾರ ಬಾಲಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನದ ವಠಾರದಲ್ಲಿ ಉದಯಾದ್ರಿ ಪ್ರಸನ್ನ ಪಾರ್ವತಿ ದೇವಸ್ಥಾನದ ಸಹಯೋಗದೊಂದಿಗೆ ಕೊಲ್ನಾಡು ಮುಲ್ಕಿಯ ನಿತ್ಯಾನಂದ ಆಗ್ರೋ ಲಿ. ಇದರ ವತಿಯಿಂದ ದ್ವಿತೀಯ ಬಾರಿಗೆ ಕೃಷಿ ಮೇಳ 2024ದಲ್ಲಿ ಮಾಹಿತಿ ನೀಡಿದರು.

ಈ ಸಂದರ್ಭ ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಬಂಟರ ಸಂಘದ ಮಾಜಿ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ಉದ್ಯಮಿ ಸಂತೋಷ್ ಶೆಟ್ಟಿ ಪಲ್ಲವಿ, ಉದಯಾದ್ರಿ ಬಾಲಗಣಪತಿ ಪ್ರನ್ನಪಾರ್ವತಿ ದೇವಸ್ಥಾನದ ಅಧ್ಯಕ್ಷ ಪಿ.ಡಿ. ಶೇಖರ್ ರಾವ್, ಟ್ರಸ್ಟಿಗಳ ಜಗದಾಭಿರಾಮ, ನಯನಾಭಿ ರಾಮ, ರೇಶ್ಮಾ ಶೆಟ್ಟಿ ಉಪಸ್ಥಿತರಿದ್ದರು. ನಿತ್ಯಾನಂದ ಆಗ್ರೋ ಲಿಮಿಟೆಡ್‌ನ ದಿನಕರ್ ರಾವ್, ನವೀನ್‌ಚಂದ್ರ ಪ್ರಭು, ಶರಣ್‌ರಾಜ್, ದೇವದಾಸ್ ಕೋಟ್ಯಾನ್, ರಕ್ಷಾ ಉಪಸ್ಥಿತರಿದ್ದರು.

ಎರಡು ದಿನಗಳ ಕಾಲ ನಡೆಯುವ ಕೃಷಿ ಮೇಳದಲ್ಲಿ ಜಿಲ್ಲೆಯ ಪ್ರಸಿದ್ಧ ನರ್ಸರಿಗಳಾದ ಹಣ್ಣುಹಂಪಲು, ತೆಂಗು ಹಾಗೂ ಇನ್ನಿತರ ತಳಿಗಳ ಮಾರಾಟ ಅಲ್ಲದೆ ಮಲ್ಲಿಗೆ, ದಾಸವಾಳ, ಸಂಪಿಗೆ ಹಾಗೂ ಇನ್ನಿತರ ಹೂವಿನ ಗಿಡ, ವಿವಿಧ ರೀತಿಯ ಕಾಂಪೋಸ್ಟ್ ಗೊಬ್ಬರ, ತರಕಾರಿ ಬೀಜಗಳ ಮಾರಾಟ, ಮತ್ಸ್ಯ ಮೇಳ, ನರ್ಸರಿ, ಸ್ವದೇಶಿ ಖಾದಿ, ಆಹಾರ ಮೇಳ ಮತ್ತು ವಿವಿಧ ರೀತಿಯ ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಮಾರಾಟ ನಡೆಯಿತು.

ಕಂಬಳದಲ್ಲಿ ಗಳಿಸಿದ ಚಿನ್ನದ ಪದಕ ಕಾಪು ಮಾರಿಯಮ್ಮನಿಗೆ ಸಮರ್ಪಿಸಿದ ಎರ್ಮಾಳು ಪುಚ್ಚೊಟ್ಟು ಬೀಡು ಬಾಲಚಂದ್ರ ಶೆಟ್ಟಿ

Posted On: 28-12-2024 05:21PM

ಕಾಪು : ತುಳುನಾಡಿನ ಜಾನಪದ ಕ್ರೀಡೆ ಕಂಬಳ, ಇತ್ತೀಚಿನ ದಿನಗಳಲ್ಲಿ ಕಂಬಳ ಬಹಳಷ್ಟು ಜನಮನ್ನಣೆಯನ್ನು ಗಳಿಸುತ್ತಿದ್ದು, ರಾಜ್ಯ ರಾಜಧಾನಿಯಲ್ಲೂ ಕಂಬಳದ ಸುದ್ಧಿ ಬಹಳವಾಗಿ ಕೇಳಿ ಬರುತ್ತಿದೆ, ದೂರದ ಮಹಾರಾಷ್ಟ್ರದ ಪುಣೆಯ ಖ್ಯಾತ ಉದ್ಯಮಿ, ಕಂಬಳ ಪ್ರೇಮಿ ಎರ್ಮಾಳು ಪುಚ್ಚೊಟ್ಟು ಬೀಡು ಬಾಲಚಂದ್ರ ಶೆಟ್ಟಿ ದಂಪತಿ ಸಮೇತರಾಗಿ ಮಕ್ಕಳೊಂದಿಗೆ ಜಿರ್ಣೋದ್ಧಾರಗೊಳ್ಳುತ್ತಿರುವ ಕಾಪುವಿನ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಆಗಮಿಸಿ ಮಾರಿಯಮ್ಮನ ದರುಶನ ಪಡೆದು ಅಮ್ಮನ ಅನುಗ್ರಹ ಪ್ರಸಾದವನ್ನು ಸ್ವೀಕರಿಸಿದರು.

ತಾನು ಕಂಬಳದಲ್ಲಿ ಗಳಿಸಿದ ಎರಡು ಚಿನ್ನದ ಪದಕಗಳನ್ನು ಕಾಪು ಮಾರಿಯಮ್ಮನ ಸ್ವರ್ಣ ಗದ್ದುಗೆಗೆ ಸಮರ್ಪಿಸಿದರು. ಈ ಹಿಂದೆಯೂ ಇದೆ ರೀತಿಯಾಗಿ ಗೆದ್ದಿದ್ದ ಚಿನ್ನದ ಪದಕಗಳನ್ನು ಅಮ್ಮನಿಗೆ ಸಮರ್ಪಿಸಿದ್ದು ಮಾತ್ರವಲ್ಲದೆ ಈಗಾಗಲೇ 5 ಲಕ್ಷ ರೂಪಾಯಿಯನ್ನು ಶಿಲೆಯ ದೇಣಿಗೆಯಾಗಿ ದೇವಳದ ಜಿರ್ಣೋದ್ಧಾರಕ್ಕೆ ನೀಡಿರುವ ಅವರು ಸುಮಾರು 15ಲಕ್ಷ ರೂಪಾಯಿ ಬೆಲೆ ಬಾಳುವ ಮುಖಮಂಟಪದಲ್ಲಿನ ಮತ್ತು ಇತರೆ 27 ಶಿಲಾಮೂರ್ತಿಗಳನ್ನು ಸೇವಾರೂಪದಲ್ಲಿ ನೀಡಿರುತ್ತಾರೆ.

ಕಾಪುವಿನ ಅಮ್ಮನ ಅನುಗ್ರಹದಿಂದ ಕಂಬಳ ಕ್ಷೇತ್ರದಲ್ಲಿ ಪಡೆಯುತ್ತಿರುವ ಚಿನ್ನದ ಪದಕಗಳನ್ನು ಅಮ್ಮನಿಗಾಗಿ ನಿರ್ಮಾಣಗೊಳ್ಳುತ್ತಿರುವ ಸ್ವರ್ಣ ಗದ್ದುಗೆಗೆ ಸಮರ್ಪಿಸಿರುವ ಅವರು ಈ ವರ್ಷದಲ್ಲಿ ಇನ್ನು ಮುಂದೆ ನಾವು ಕಂಬಳ ಕ್ಷೇತ್ರದಲ್ಲಿ ಗೆದ್ದ ಎಲ್ಲಾ ಚಿನ್ನದ ಪದಕಗಳನ್ನು ಅಮ್ಮನಿಗೆ ಸಮರ್ಪಿಸುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ದೇವಳದ ಪ್ರಬಂಧಕ ಗೋವರ್ಧನ್ ಸೇರಿಗಾರ್, ಆರ್ಥಿಕ ಸಮಿತಿಯ ಶೈಲಪುತ್ರಿ ತಂಡದ ಸಂಚಾಲಕ ರಾಧಾರಮಣ ಶಾಸ್ತ್ರಿ ಮತ್ತು ಸಿಬ್ಬಂದಿ ಲಕ್ಷ್ಮಣ್ ಶೆಟ್ಟಿ ಮಂಡೇಡಿ ಉಪಸ್ಥಿತರಿದ್ದರು.

ಕಳತ್ತೂರು ಟೈಗರ್ಸ್ ವತಿಯಿಂದ ಕಳತ್ತೂರು ಗರಡಿ ಜೀರ್ಣೋದ್ಧಾರಕ್ಕೆ ರೂ. 1ಲಕ್ಷ 60 ಸಾವಿರ ದೇಣಿಗೆ

Posted On: 28-12-2024 12:54PM

ಕಾಪು : ಕಳತ್ತೂರು ಟೈಗರ್ಸ್ ವತಿಯಿಂದ ನಡೆದ ದ್ವಿತೀಯ ವರ್ಷದ ಪಿಲಿನಲಿಕೆ ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣದಲ್ಲಿ ಕಳತ್ತೂರು ಬ್ರಹ್ಮ ಬೈದರ್ಕಳ ಗರಡಿ ಜೀರ್ಣೋದ್ಧಾರ ಕಾರ್ಯಕ್ಕೆ ರೂ. 1,60,000 ವನ್ನು ದೇಣಿಗೆ ನೀಡಲಾಯಿತು.

ಪಲಿಮಾರು : ಮುರಿದು ಬೀಳುವಂತಿದ್ದ ಸಂಕ - ವೃದ್ಧರ ಕಷ್ಟಕ್ಕೆ ಸ್ಪಂದಿಸಿದ ಕಾಪು ತಹಶಿಲ್ದಾರ್

Posted On: 28-12-2024 12:39PM

ಪಲಿಮಾರು : ಗಲ್ಲಿ ಗಲ್ಲಿಗೂ ರಸ್ತೆಗಳಿರುವ ಈ ಕಾಲದಲ್ಲಿ ಒಂದೆಡೆ ರಸ್ತೆ ಸಂಪರ್ಕವೂ ಇಲ್ಲ. ಮತ್ತೊಂದೆಡೆ ಹೊಳೆಯ ಮೇಲಿನ ಶಿಥಿಲಗೊಂಡ ಕಾಲು ಸಂಕ ದಾಟಿ ಮನೆ ಸೇರಬೇಕಾದ ವೃದ್ಧ ದಂಪತಿಗಳು ಇಂತಹ ಸ್ಥಿತಿ ಕಂಡು ಬಂದದ್ದು ಪಲಿಮಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅವರಾಲು ಮಟ್ಟುವಿನಲ್ಲಿ. ಇದೀಗ ಸುರಕ್ಷಿತ ಸೇತುವೆ ನಿರ್ಮಿಸಿಕೊಡುವ ಭರವಸೆ ಕಾಪು ತಾಲೂಕು ತಹಶಿಲ್ದಾರ್ ಮೂಲಕ ದೊರಕಿದೆ.

ವೃದ್ಧ ದಂಪತಿಗಳು ಪ್ರತಿದಿನ ಅವರು ತಮ್ಮ ದಿನನಿತ್ಯದ ಕೆಲಸಗಳಿಗೆ ಹೊರಗೆ ಬರಬೇಕೆಂದರೆ ಈ ಶಿಥಿಲ ಕಾಲು ಸಂಕದ ಮೇಲೆಯೇ ಬರಬೇಕು. ಅಲ್ಲಾಡುತ್ತಾ ಇನ್ನೇನು ಮುರಿದು ಬೀಳುತ್ತದೆಯೇನೋ ಎನ್ನುವಂತಿರುವ ಈ ಮರದ ಸಣ್ಣ ಹಲಗೆಯ ಮೇಲೆಯೇ ವಸಂತಿ (70 ) ಭೋಜ ಸಾಲ್ಯಾನ್ (74) ಅವರು ನಡೆದಾಡಬೇಕಾದ ಪರಿಸ್ಥಿತಿ ಇದೆ. ದಿನಸಿ ತರಲು, ಹೊರಗಿನ ಜನರನ್ನು ಭೇಟಿ ಮಾಡಲು, ಪೇಟೆ ಬೀದಿಗೆ ಬರಲು, ಇನ್ಯಾವುದೇ ಕೆಲಸಕ್ಕೂ ಈ ಬೀಳುವಂತಿರುವ ಹಲಗೆಯ ಮೇಲೆಯೇ ಜೀವ ಕೈಲಿ ಹಿಡಿದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ.

ತಮ್ಮ ಸಮಸ್ಯೆಗಳ ಬಗ್ಗೆ ಮನೆಯೊಡತಿ ವಸಂತಿರವರು ಮಾತನಾಡಿ, ನಾವು ಪೇಟೆ ಬದಿಗೆ ಹೋಗಬೇಕೆಂದರೆ ಈ ಹೊಳೆ ದಾಟಿಯೇ ಹೋಗಬೇಕು. ಇಲ್ಲಿ ಅತಿ ಹಳೆಯದಾದ ಸಣ್ಣ ಹಲಗೆಯ ರೀತಿಯ ಸಂಕ ಇದೆ. ಇದು ಮುರಿದು ಹೋಗಿದೆ. ನಮಗೆ ವಯಸ್ಸಾಗಿದೆ. ಆರೋಗ್ಯ ಸರಿ ಇಲ್ಲ. ಗಂಡನಿಗೆ ಇದರ ಮೂಲಕ ಆಚೆ ಬದಿಗೆ ಹೋಗೋಕೆ ಆಗೋದೇ ಇಲ್ಲ. ಇದ್ದ ಒಬ್ಬ ಮಗಳನ್ನು ಮದುವೆ ಮಾಡಿ ಆಗಿದೆ. ಗಂಡು ಮಕ್ಕಳಿಲ್ಲ. ಜೀವನವೇ ದುಸ್ತರವಾಗಿದೆ. ದಿನಸಿ ತರೋಕೆ, ಔಷಧಿ ತರೋಕೆ ನಾನೇ ಈ ಮುರುಕಲು ಸಂಕದ ಮೂಲಕ ತಟ್ಟಾಡಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಒಂದು ಸುರಕ್ಷಿತ ಕಾಲು ಸೇತುವೆ ನಿರ್ಮಿಸಿಕೊಟ್ಟರೆ ಬಹಳ ಉಪಕಾರವಾಗುತ್ತದೆ ಎಂದು ಕಣ್ಣೀರಾಗುತ್ತಾರೆ. ಈ ಸಂದರ್ಭ ತಹಶಿಲ್ದಾರ್ ಪ್ರತಿಭಾ ಆರ್ ಮಾತನಾಡಿ, ವಸಂತಿ, ಭೋಜ ಸಾಲ್ಯಾನ್ ವೃದ್ಧ ದಂಪತಿಗಳ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ. ನಾನೂ ಸ್ವತಃ ಈ ಹಲಗೆಯ ಮೇಲೆ ನಡೆದುಬಂದೆ, ನಿಜಕ್ಕೂ ಭಯವಾಯಿತು. ಕಾಲಿಟ್ಟರೆ ಅಲ್ಲಾಡುವ, ಒಂದು ಹೆಜ್ಜೆ ಊರುವಷ್ಟು ಮಾತ್ರವೇ ಅಗಲವಿರುವ ಶಿಥಿಲಗೊಂಡ ಮರದ ಹಲಗೆಯ ಮೇಲೆ ನಡೆದುಕೊಂಡು ಬಂದು ಹೊಳೆ ದಾಟಿ ತಮ್ಮ ದಿನ ನಿತ್ಯದ ಅಗತ್ಯ ಪೂರೈಸಿಕೊಳ್ಳಬೇಕಾದ ಪರಿಸ್ಥಿತಿ ಈ ವೃದ್ಧ ದಂಪತಿಗಳದು. ಮಳೆಗಾಲದಲ್ಲಿ ನೆರೆ ಆವರಿಸುತ್ತದೆ. ಪಕ್ಕದಲ್ಲೇ ಇರುವ ಇನ್ನೊಂದು ಮನೆಯವರು ಈ ಕಷ್ಟ ಸಹಿಸಲಾಗದೆ ಈಗಾಗಲೇ ಸ್ವಂತ ಮನೆ ತೊರೆದು ಬೇರೆ ಕಡೆ ಶಿಫ್ಟ್ ಆಗಿದಾರೆ. ಆದರೆ ಈ ವೃದ್ಧ ದಂಪತಿಗಳಿಗೆ ಇರುವುದೊಂದೇ ಸೂರು ಹೊಳೆಗೆ ಸುಭದ್ರ ಸೇತುವೆ ನಿರ್ಮಿಸಿಕೊಡಲು ಮನವಿ ಮಾಡಿಕೊಂಡಿದ್ದಾರೆ ಓಡಾಡಲು ಸುರಕ್ಷಿತ, ಸುಭದ್ರ ಸೇತುವೆ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಸಂಬಂಧಪಟ್ಟ ಇಲಾಖೆ ಮತ್ತು ಯಾರಾದರೂ ದಾನಿಗಳ ಸಹಕಾರದಿಂದ ಇದನ್ನು ಸಾಧ್ಯವಾಗಿಸಲು ಪ್ರಯತ್ನಿಸುತ್ತೇನೆ ಎಂದರು.

ಪಲಿಮಾರು ಗ್ರಾಮ ಪಂಚಾಯತಿಯ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಸದಸ್ಯರಾದ ಜಯಂತಿ, ಸತೀಶ್ ದೇವಾಡಿಗ, ಯೋಗಾನಂದರವರು ಈ ವೃದ್ಧ ದಂಪತಿಗಳಿಗೆ ರಸ್ತೆ ನಿರ್ಮಿಸಿಕೊಡಲು ಸಹಕರಿಸುವುದಾಗಿ ತಿಳಿಸಿರುತ್ತಾರೆ. ಇಸ್ಮಾಯಿಲ್ ಫಲಿಮಾರು ಇಂತಹ ಪರಿಸ್ಥಿತಿಯ ಬಗ್ಗೆ ತಹಶಿಲ್ದಾರ್ ರವರ ಗಮನಕ್ಕೆ ತಂದಿದ್ದರು.