Updated News From Kaup

ಕಾಪು : ತೆಂಗು, ಮಲ್ಲಿಗೆ, ಭತ್ತ ಬೆಳೆಯ ಮಾಹಿತಿ ; ಅತ್ಯುತ್ತಮ ಕೃಷಿಕ ಪ್ರಶಸ್ತಿ ಪ್ರಧಾನ

Posted On: 26-12-2024 03:52PM

ಕಾಪು : ಕಾಪು ಸಹಕಾರಿ ವ್ಯವಸಾಯಿಕ ಸಂಘ (ನಿ.) ಕಾಪು ಉಳಿಯಾರಗೋಳಿ ವತಿಯಿಂದ ವೈಜ್ಞಾನಿಕ ತೆಂಗು ಬೇಸಾಯ ಮತ್ತು ಮಲ್ಲಿಗೆ ಕೃಷಿ, ಭತ್ತದ ಬೆಳೆಯಲ್ಲಿ ಲಾಭದಾಯಕ ಕ್ರಮಗಳು ಹಾಗೂ ಹೈನುಗಾರಿಕೆಯ ಬಗ್ಗೆ ಸಮಗ್ರ ಮಾಹಿತಿ ಕಾರ್ಯಕ್ರಮ ಮತ್ತು ಅತ್ಯುತ್ತಮ ಕೃಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕಾಪು ಶ್ರೀ ವೀರಭದ್ರ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ ಕಾಪು ಇದರ ಆಡಳಿತ ಮೊಕ್ತೇಸರ ಮನೋಹರ ಎಸ್ ಶೆಟ್ಟಿ, ಕೃಷಿಕರ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ಬೆಲೆ ದೊರೆಯುತ್ತಿಲ್ಲ. ಸಹಕಾರಿ ವ್ಯವಸಾಯಿಕ ಸಂಘಗಳ ಮೂಲಕ ರೈತರಿಗೆ ಬೆಳೆ ಕಟಾವು, ಇನ್ನಿತರ ಯಂತ್ರಗಳನ್ನು ರಿಯಾಯಿತಿ ದರದಲ್ಲಿ ನೀಡುವ ಮೂಲಕ ಮಧ್ಯವರ್ತಿಗಳಿಂದ ಆಗುವ ನಷ್ಟ ತಪ್ಪಿಸಬೇಕಾಗಿದೆ. ಯುವಕರು ಕೃಷಿ ಬಗ್ಗೆ ಆಸಕ್ತಿ ವಹಿಸಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ಜಮ್ಮು ಕಾಶ್ಮೀರದ ಪೂಂಚ್ ವಲಯದಲ್ಲಿ ಸೇನಾ ವಾಹನದ ಅವಘಡದಲ್ಲಿ ಮೃತಪಟ್ಟ ಕುಂದಾಪುರ ಬೀಜಾಡಿ ಗ್ರಾಮದ ಸೈನಿಕ ಅನೂಪ್ ಪೂಜಾರಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪ್ರಶಸ್ತಿ ಪ್ರದಾನ/ಸನ್ಮಾನ : ಗುರುರಾಜ್ ಭಟ್ ಉಳಿಯಾರು, ಐತಪ್ಪ ಎಸ್ ಕೋಟ್ಯಾನ್, ಕೃಷ್ಣ ಸೇರಿಗಾರ ಉಳಿಯಾರಗೊಳಿ, ನಿತ್ಯಾನಂದ ನಾಯಕ್ ಪಾಲುಮೆ, ಯೋಗೀಶ್ ಪೂಜಾರಿ ಮೂಳೂರು, ಜಗದೀಶ ದೇವಾಡಿಗ ಮಲ್ಲಾರು ಇವರಿಗೆ ಅತ್ಯುತ್ತಮ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭತ್ತದ ಕೃಷಿಯಲ್ಲಿ ತೊಡಗಿರುವ ಮನೋಹರ ಎಸ್ ಶೆಟ್ಟಿ, ರತ್ನಾಕರ ಶೆಟ್ಟಿ ನಡಿಕೆರೆ ಇವರನ್ನು ಸನ್ಮಾನಿಸಲಾಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ವೈಜ್ಞಾನಿಕ ತೆಂಗು ಬೇಸಾಯ ಮತ್ತು ಉಡುಪಿ ಜಿಲ್ಲಾ ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಭತ್ತದ ಬೆಳೆಯಲ್ಲಿ ಲಾಭದಾಯಕ ಕ್ರಮ ವಿಷಯ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಕಾಪು ಹೊಸ ಮಾರಿಗುಡಿಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಉಡುಪಿ ಜಿಲ್ಲಾ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಲ್. ಹೇಮಂತ್ ಕುಮಾರ್, ವಲಯ ಮೇಲ್ವಿಚಾರಕ ಬಾಲಗೋಪಾಲ ಬಲ್ಲಾಳ್, ಕಾಪು ಸಹಕಾರಿ ವ್ಯವಸಾಯಿಕ ಸಂಘದ ಉಪಾಧ್ಯಕ್ಷ ದಿನೇಶ್ ಎ ಸಾಲ್ಯಾನ್, ಡಾ. ಮಾಧವ ಐತಾಳ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರ್ಚನಾ ಎಂ.ಶೆಟ್ಟಿ ಉಪಸ್ಥಿತರಿದ್ದರು.

ಕಾಪು ದಿವಾಕರ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಅರ್ಚನಾ ಎಂ.ಶೆಟ್ಟಿ ವಂದಿಸಿದರು.

ಡಿ.29 : ಶಂಕರಪುರದಲ್ಲಿ ರೋಟರಿ ಸಮುದಾಯದಳ ಜಿಲ್ಲಾ ಸಮ್ಮೇಳನ

Posted On: 26-12-2024 03:09PM

ಕಾಪು : ರೋಟರಿ ಕ್ಲಬ್ ಶಿರ್ವ ಮತ್ತು ರೋಟರಿ ಸಮುದಾಯದಳ ಪಾದೂರು ಇದರ ಆಶ್ರಯದಲ್ಲಿ ಒಂದು ದಿನದ ರೋಟರಿ ಸಮುದಾಯದಳ ಜಿಲ್ಲಾ ಸಮ್ಮೇಳನ 2024-25 "ಬೆಸುಗೆ" ಡಿ.29, ರವಿವಾರ ಶಂಕರಪುರ ಸೈಂಟ್ ಜೋನ್ಸ್ ಶಾಲಾ ಸಭಾಂಗಣದಲ್ಲಿ ಜರುಗಲಿದೆ ಎಂದು ರೋಟರಿ ಸಮುದಾಯದಳದ ಜಿಲ್ಲಾ ಛೆರ್ಮನ್ ಬಿ.ಪುಂಡಲೀಕ ಮರಾಠೆ ತಿಳಿಸಿದರು. ಅವರು ಗುರುವಾರ ಕಾಪು ಪ್ರೆಸ್ ಕ್ಲಬ್ ನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಶಿರ್ವ ರೋಟರಿಯ ಸಂಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ ಶಿಕ್ಷಣ ತಜ್ಞರು,ಕೃಷಿ ಪಂಡಿತರು, ಕಲಾವಿದರು, ಸ್ವಾತಂತ್ರ್ಯ ಹೋರಾಟಗಾರರು, ಬಹುಮುಖ ಪ್ರತಿಭಾ ಸಂಪನ್ನರು, ಶಂಕರಪುರ, ಕಾಪು ರೋಟರಿಯ ಪ್ರವರ್ತಕರು, ರೋಟರಿ ಸಮುದಾಯದಳದ ಚಿಂತನೆಗೆ ಆರಂಭದಲ್ಲಿಯೇ ಸ್ಪೂರ್ತಿ ತುಂಬಿದ "ರೋಟರಿ ಭೀಷ್ಮ" ಖ್ಯಾತಿಯ ದಿ.ರೊ. ಪಾಂಗಾಳ ವಿಟ್ಠಲ್ ಶೆಣೈರವರ ಜನ್ಮ ಶತಮಾನೋತ್ಸವದ ಸವಿನೆನಪಿನಲ್ಲಿ ಸಮ್ಮೇಳನ ಸಂಪನ್ನಗೊಳ್ಳಲಿದೆ. ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3182 ನಾಲ್ಕು ಕಂದಾಯ ಜಿಲ್ಲೆಗಳಾದ ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳನ್ನು ಒಳಗೊಂಡಿದ್ದು, 35ಕ್ಕೂ ಅಧಿಕ ರೋಟರಿ ಸಮುದಾಯದಳ ಘಟಕಗಳಿಂದ ಅಂದಾಜು 400 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಸಮ್ಮೇಳನ ಕಾರ್ಯಕ್ರಮಗಳು ಬೆಳಿಗ್ಗೆ 9:15ರಿಂದ ಸಂಜೆ 4ರವರೆಗೆ ಜರುಗಲಿವೆ. ಪೂರ್ವಾಹ್ನ ರೋ.ಅ,ಜಿಲ್ಲೆ. 3182 ಇದರ ಜಿಲ್ಲಾ ಗವರ್ನರ್ ರೊ.ದೇವ್ ಆನಂದ್ ಸಮ್ಮೇಳನ ಉದ್ಘಾಟಿಸಲಿದ್ದು, ಹಿರಿಯರಾದ ರೋಟರಿ ಜಿಲ್ಲಾ 1986-87ನೇ ಸಾಲಿನ ಗವರ್ನರ್ ಡಾ.ಆರ್.ಡಿ.ಪ್ರಭು ಉಪಸ್ಥಿತರಿರುವರು. ಶಿರ್ವ ರೋಟರಿ ಅಧ್ಯಕ್ಷ ಆಲ್ವಿನ್ ಅಮಿತ್ ಅರಾನ್ಹಾ ಅಧ್ಯಕ್ಷತೆ ವಹಿಸಲಿದ್ದು, ಶಂಕರಪುರ ಸೈಂಟ್ ಜೋನ್ಸ್ ಧರ್ಮಕೇಂದ್ರದ ಪ್ರಧಾನ ಧರ್ಮಗುರುಗಳಾದ ರೆ.ಫಾ. ಡಾ.ಪ್ರಕಾಶ್ ಅನಿಲ್ ಕಸ್ತಲಿನೊ ಆಶೀರ್ವನ ನೀಡಲಿರುವರು. ದಿಕ್ಸೂಚಿ ಭಾಷಣವನ್ನು ಜಿಲ್ಲಾ ಮಾಜಿ ಗವರ್ನರ್ ಡಾ.ದೇವದಾಸ್ ರೈ ಮಂಗಳೂರು ಮಾಡುವರು. ಮುಖ್ಯ ಅತಿಥಿಗಳಾಗಿ ಬ್ಯಾಂಕ್ ಆಫ್ ಬರೋಡಾ ಇದರ ನಿವೃತ್ತ ಡಿಜಿಎಮ್ ಪಾಂಗಾಳ ಜಯರಾಮ ಶೆಣೈ, ಜಿಲ್ಲಾ ನಿಯೋಜಿತ ಜಿಲ್ಲಾ ಗವರ್ನರ್ ಪಾಲಾಕ್ಷ ಹಾಸನ, 2026-27ನೇ ಸಾಲಿನ ಜಿಲ್ಲಾ ಗವರ್ನರ್ ಬಿ.ಎಮ್.ಭಟ್ ಬ್ರಹ್ಮಾವರ, ರೋಟರಿ ಸಮುದಾಯದಳದ ಜಿಲ್ಲಾ ಛೆರ್ಮನ್ ಬಿ.ಪುಂಡಲೀಕ ಮರಾಠೆ, ವಲಯ ಸಹಾಯಕ ಗವರ್ನರ್ ಅನಿಲ್ ಡೇಸಾ ಶಂಕರಪುರ, ಸಮುದಾಯದಳದ ವೈಸ್ ಛೇರ್ಮನ್ ಶ್ರೀಹರ್ಷ ಹರಿಹರಪುರ, ಜಿಲ್ಲಾ ಪ್ರತಿನಿಧಿ ಪ್ರಸಾದ್ ಆಚಾರ್ಯ ಪಾದೂರು, ಶಂಕರಪುರ ರೋಟರಿ ಅಧ್ಯಕ್ಷೆ ಮಾಲಿನಿ ಶೆಟ್ಟಿ, ಕಾಪು ರೋಟರಿ ಅಧ್ಯಕ್ಷ ಬಾಲಕೃಷ್ಣ ಆಚಾರ್ಯ, ಪಾದೂರು ಆರ್‌ಸಿಸಿ ಪ್ರತಿನಿಧಿ ಪ್ರಕಾಶ್ ಆಚಾರ್ಯ ಭಾಗವಹಿಸುವರು.

ಸಮ್ಮೇಳನದಲ್ಲಿ ನವೋದಯ ಕೊರಗರ ಸಾಂಸ್ಕೃತಿಕ ಕಲಾ ತಂಡ ಪಾಂಬೂರು ಇವರಿಂದ ಕಲಾ ಪ್ರಸ್ತುತಿ, ಮೂರು ಪ್ರಧಾನಗೋಷ್ಠಿಗಳು ನಡೆಯಲಿದ್ದು, "ಸೇವಾಹೀ ಪರಮೋ ಧರ್ಮ:" ಸಂಪನ್ಮೂಲವ್ಯಕ್ತಿಗಳಾಗಿ ಶಿಕ್ಷಕರು ಹಾಗೂ ಕಸಾಪ ಕಾರ್ಕಳ ತಾಲೂಕು ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ, "ಯುವಜನತೆ ಮತ್ತು ಕೃಷಿ ಜೀವನ ಶೈಲಿ" ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ, "ಮಿರಾಕಲ್ ಫಾರೆಸ್ಟ್ ಚಾಲೆಂಜ್" ಸಮಾಜಸೇವಕರಾದ ಮಹೇಶ್ ಶೆಣೈ ಕಟಪಾಡಿ ಮಾತನಾಡುವರು. ಅಪರಾಹ್ನ "ಸಾಂಸ್ಕೃತಿಕ ಪ್ರತಿಭಾ ಸ್ಫರ್ಧಾ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ಆರ್‌ಸಿಸಿ ಕಲಾ ತಂಡಗಳಿಂದ ಪ್ರತಿಭಾ ಪ್ರದರ್ಶನ. ನಂತರ ಜರುಗುವ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಗವರ್ನರ್ ದೇವ್ ಆನಂದ್, ಮಾಜಿ ಜಿಲ್ಲಾ ಗವರ್ನರ್ ಜ್ಞಾನವಸಂತ ಶೆಟ್ಟಿ ಬ್ರಹ್ಮಾವರ, ಹಿರಿಯ ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ ಉಡುಪಿ, ರೋಟರಿ ಜಿಲ್ಲಾ ಕಾರ್ಯದರ್ಶಿ(ಆಡಳಿತ) ಐರೋಡಿ ರಾಮದೇವ ಕಾರಂತ ಭಾಗವಹಿಸುವರು. ಸ್ಫರ್ಧಾವಿಜೇತರಿಗೆ ಟ್ರೋಫಿ, ನಗದು ಪುರಸ್ಕಾರದೊಂದಿಗೆ ಅರ್ಹತಾಪತ್ರ ನೀಡಲಾಗುವುದು.

ಪಾಂಗಾಳ ವಿಟ್ಠಲ ಶೆಣೈಯವರು ಶಿಕ್ಷಣ, ಕೃಷಿ, ಸಾಹಿತ್ಯ, ಜನಪದ,ರಂಗಭೂಮಿ,ಸಮಾಜಸೇವೆ ಸಹಿತ ವಿವಿಧ ಕ್ಷೇತ್ರಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡವರು. ಇದೇ ಆಶಯವನ್ನಿರಿಸಿಕೊಂಡು ಪಾಂಗಾಳ ವಿಟ್ಠಲ ಶೆಣೈ ಅವರಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಚಾರ ಬಯಸದೆ ಸೇವೆ ಸಲ್ಲಿಸುತ್ತಿರುವ ಒಬ್ಬರಿಗೆ ಪ್ರತೀ ಸಮ್ಮೇಳನದಲ್ಲಿ ಆಯಾ ಜಿಲ್ಲಾ ವ್ಯಾಪ್ತಿಯ ಅರ್ಹರನ್ನು ಗುರುತಿಸಿ ಗೌರವಿಸುವ ಪಾಂಗಾಳ ವಿಟ್ಠಲ ಶೆಣೈ ಸ್ಮಾರಕ "ಸಾಧನಾ-ಪ್ರೇರಣಾ ಪುರಸ್ಕಾರ ಪ್ರದಾನಿಸಲಾಗುವುದು. ನಿವೃತ್ತ ಶಿಕ್ಷಕ, ಯಕ್ಷಗಾನ ಕಲಾವಿದ, ಕೃಷಿಕ, ಬರಹಗಾರ ಕೃಷ್ಣಕುಮಾರ್ ರಾವ್ ಮಟ್ಟು ಅವರನ್ನು ಈ ಬಾರಿಯ ಗೌರವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನ ಸಮಿತಿಯ ಸಭಾಪತಿ ಡಾ.ವಿಟ್ಠಲ್ ನಾಯಕ್, ಜಿಲ್ಲಾ ಪ್ರತಿನಿಧಿ ಪ್ರಸಾದ್ ಆಚಾರ್ಯ ಪಾದೂರು, ರೋಟರಿ ವಲಯ ಸೇನಾನಿ ಮೆಲ್ವಿನ್ ಡಿಸೋಜ ಪಾದೂರು ರೋಟರಿ ಸಮುದಾಯದಳದ ಸಭಾಪತಿ ಜಯಕೃಷ್ಣ ಆಳ್ವ ಉಪಸ್ಥಿತರಿದ್ದರು.

ಎಪಿಜೆ ಅಬ್ದುಲ್ ಕಲಾಂ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಗೆ ಡಾ.ಯು.ಎಂ ಫಾರೂಕ್ ಚಂದ್ರನಗರ ಆಯ್ಕೆ

Posted On: 25-12-2024 07:21AM

ಕಾಪು : ನಿತ್ಯೋತ್ಸವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ ಬೆಂಗಳೂರು (ರಿ.) ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ-2024 ಹಾಗೂ ವಿಶ್ವ ಮಾನವ ದಿನಾಚರಣೆಯ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆ ಕಾಪುವಿನ ಸಮಾಜ ಸೇವಕ ಬಟರ್ ಫ್ಲೈ ಗೆಸ್ಟ್ ಹೌಸ್ ನ ಆಡಳಿತ ನಿರ್ದೇಶಕರಾದ ಡಾ.ಯು.ಎಂ ಫಾರೂಕ್ ಚಂದ್ರನಗರ ಇವರ ಸಮಾಜ ಸೇವೆಗಾಗಿ ಕೊಡಲ್ಪಡುವ ಡಾ. ಎಪಿಜೆ ಅಬ್ದುಲ್ ಕಲಾಂ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಯನ್ನು ಡಿ.29 ರಂದು ಕಲಾಗ್ರಾಮ ಜ್ಞಾನಭಾರತಿ ಯೂನಿವರ್ಸಿಟಿ ಸಭಾಂಗಣದಲ್ಲಿ ರಾಜ್ಯದ ಸ್ವಾಮೀಜಿಗಳು ರಾಜಕೀಯ ಗಣ್ಯತಿಗಣ್ಯರು ಸಾಹಿತಿಗಳು ನೀಡಿ ಗೌರವಿಸಲಿದ್ದಾರೆಂದು ಸಂಘದ ಅಧ್ಯಕ್ಷರಾದ ಕು| ನಿತ್ಯ ಬೆಂಗಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂಬೈ :14ನೇ ರಾಜ್ಯಮಟ್ಟದ ಓಪನ್ ಸೀ ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ ದಿಶಿತಾ ಚಂದ್ರಶೇಖರ್ ಗೆ ಫಿನಿಶರ್ ಪದಕ

Posted On: 24-12-2024 08:04PM

ಮುಂಬೈ : ಸಿಂಧುದುರ್ಗ್ ಜಿಲ್ಲಾ ಅಕ್ವೆಟಿಕ್ ಅಸೋಸಿಯೇಷನ್ ಆಶ್ರಯದಲ್ಲಿ ಚಿವ್ಲ ಬೀಚ್ ಮಾಲವಣದಲ್ಲಿ ಜರುಗಿದ 14ನೇ ರಾಜ್ಯಮಟ್ಟದ ಓಪನ್ ಸೀ ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ ದಿಶಿತಾ ಚಂದ್ರಶೇಖರ್ ಫಿನಿಶರ್ ಪದಕ ಗಳಿಸಿರುತ್ತಾರೆ.

ಈಕೆ ಕಾಪುವಿನ ಮಡುಂಬು ಸಂಜೀವ ಪೂಜಾರಿಯವರ ಮೊಮ್ಮಗಳಾಗಿದ್ದು, ಚಂದ್ರಶೇಖರ್ ಮತ್ತು ಸವಿತಾ ದಂಪತಿಗಳ ಪುತ್ರಿಯಾಗಿದ್ದಾರೆ.

ರಜತ ಸಂಭ್ರಮದಲ್ಲಿ ದಿ. ಸೂರ್ಯ ಕುಲಾಲ್ ಸ್ಥಾಪನೆಯ ಕಳತ್ತೂರು ಕುಕ್ಕುಂಜ ಅಯ್ಯಪ್ಪ ಶಿಬಿ

Posted On: 24-12-2024 03:57PM

ಕಾಪು : ಇಲ್ಲಿಯ ಕುತ್ಯಾರು ಕುಕ್ಕುಂಜದ ದಿ. ಸೂರ್ಯ ಕುಲಾಲ್ ಅವರ ಮುಖೆನ ಆರಂಭಗೊಂಡ ಶ್ರೀ ಅಯ್ಯಪ್ಪ ಭಕ್ತವೃಂದ (ರಿ.) ಕುಕ್ಕುಂಜ ಕಳತ್ತೂರು ಇದರ 25 ನೇ ವರ್ಷದ ಕಾರ್ಯಕ್ರಮ ಜ.10 ರಂದು ನಡೆಯಲಿದ್ದು ಆ ಪ್ರಯುಕ್ತ ಜ. 8 ರ ಬುಧವಾರ ರಾತ್ರಿ 9 ಗಂಟೆಗೆ ಶ್ರೀ ಅಯ್ಯಪ್ಪ ದೇವರ ದೀಪೋತ್ಸವ, ಜ.10 ರಂದು ಬೆಳಿಗ್ಗೆ 11.30 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ, ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ಹಾಗೂ ಅಂದು ರಾತ್ರಿ 9 ಗಂಟೆಗೆ ಸಸಿಹಿತ್ಲು ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯಿಂದ ಶ್ರೀ ಅಯ್ಯಪ್ಪ ಕ್ಷೇತ್ರ ಮಹಾತ್ಮೆ,ರಾತ್ರಿ 8.30 ರಿಂದ ಅನ್ನ ಸಂತರ್ಪಣೆ ನಡೆಯಲಿದ್ದು ಭಕ್ತರು ಆಗಮಿಸಿ, ಶ್ರೀ ದೇವರ ಗಂಧ ಪ್ರಸಾದ ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶಿಬಿರದ ಪ್ರಮುಖರು ಪ್ರಕಟಣೆಯಲ್ಲಿ ತಿಳಿಸಿರುವರು.

ಭಾರತ ತಂಡಕ್ಕೆ ಕಾಪು ಮೂಲದ ತನುಷ್ ಕೋಟ್ಯಾನ್ ಆಯ್ಕೆ

Posted On: 24-12-2024 03:51PM

ಕಾಪು : ಕಾಪು ಮೂಲದ ತನುಷ್ ಕೋಟ್ಯಾನ್ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಮುಂಬಯಿಯಲ್ಲಿ ಹುಟ್ಟಿ ಬೆಳೆದ ತನುಷ್ ಕ್ರಿಕೆಟ್ ಆಟದಲ್ಲಿ ಬಾಲ್ಯದಿಂದಲೇ ಆಲ್‌ ರೌಂಡರ್ ಆಟದೊಂದಿಗೆ ಗಮನ ಸೆಳೆದಿದ್ದು, ಮುಂಬಯಿ ಕಿರಿಯರ ತಂಡದಲ್ಲಿ ಖಾಯಂ ಸ್ಥಾನ ಪಡದುಕೊಂಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ವಿಜಯ ಹಜಾರೆ ಟೂರ್ನಿಯಲ್ಲೂ ಮುಂಬಯಿ ತಂಡದ ಭಾಗವಾಗಿದ್ದಾರೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಆಯ್ಕೆ ಆಗಿದ್ದಾರೆ. ಈ ಹಿಂದೆ ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಮುಂಬಯಿ ಆಟಗಾರ ಇದೀಗ ರವಿಚಂದ್ರನ್ ಅಶ್ವಿನ್ ಅವರ ನಿವೃತ್ತಿಯಿಂದ ತೆರವಾದ ಸ್ಥಾನದಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.

26 ವಯಸ್ಸಿನ ತನುಷ್‌ ಕೋಟ್ಯಾನ್ ಬಲಗೈ ಸ್ಪಿನ್ನರ್, ಬಲಗೈ ಬ್ಯಾಟ್ಸ್‌ಮನ್. ತನುಷ್‌ ಕೋಟ್ಯಾನ್ ಮುಂಬಯಿ ಪರ ಈವರೆಗೆ 33 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವರು 41.21ರ ಸರಾಸರಿಯಲ್ಲಿ 1525 ರನ್ ಗಳಿಸಿದ್ದಾರೆ. ಹಾಗೆಯೇ 25.70 ಸರಾಸರಿಯಲ್ಲಿ 101 ವಿಕೆಟ್‌ಗಳನ್ನು ಪಡೆದು ಮಿಂಚಿದ್ದಾರೆ. ಅವರ ಬ್ಯಾಟ್‌ನಿಂದ 2 ಭರ್ಜರಿ ಶತಕ ಮತ್ತು 13 ಅರ್ಧ ಶತಕಗಳು ಮೂಡಿಬಂದಿವೆ. 2023-24ರಲ್ಲಿ ಮುಂಬಯಿ ತಂಡ ರಣಜಿ ಟ್ರೋಫಿ ಗೆಲ್ಲುವಲ್ಲಿ ತನುಷ್ ಕೋಟ್ಯಾನ್‌ ಪ್ರಮುಖ ಪಾತ್ರವಹಿಸಿದ್ದರು. ಈ ಟೂರ್ನಿಯಲ್ಲಿ 41.83 ಸರಾಸರಿಯಲ್ಲಿ 502 ರನ್ ಗಳಿಸಿದ್ದಲ್ಲದೆ 29 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದ್ದರು. ಈ ಮೂಲಕ ಪ್ಲೇಯರ್ ಆಫ್ ದಿ ಟೂರ್ನಮೆಂಟ್‌ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.

ಇರಾನಿ ಕಪ್‌ನಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ 27 ವರ್ಷಗಳ ನಂತರ ಮುಂಬಯಿ ತಂಡ ಪ್ರಶಸ್ತಿ ಗೆಲ್ಲುವಲ್ಲಿಯೂ ಪ್ರಮುಖ ಪಾತ್ರವಹಿಸಿದ್ದರು. ಹಾಗೆಯೇ ದುಲೀಪ್ ಟ್ರೋಫಿಯಲ್ಲಿ ಭಾರತ ಎ ತಂಡದ ಪರ ಕಣಕ್ಕಿಳಿದಿದ್ದ ತನುಷ್ 3 ಪಂದ್ಯಗಳಲ್ಲಿ 10 ವಿಕೆಟ್ ಕಬಳಿಸಿ ಮಿಂಚಿದ್ದರು. ಅದರಂತೆ ಮೆಲ್ಲೋರ್ನ್ ಹಾಗೂ ಸಿಡ್ನಿಯಲ್ಲಿ ನಡೆಯಲಿರುವ ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿ ತನುಷ್‌ ಕೋಟ್ಯಾನ್ ಆಡಲಿದ್ದಾರೆ.

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ : ಸಮಾಲೋಚನಾ ಸಭೆ

Posted On: 24-12-2024 03:31PM

ಕಾಪು : ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ (ರಿ.) ಮತ್ತು ಶ್ರೀ ಹೊಸ ಮಾರಿಗುಡಿ ದೇವಸ್ಥಾನ, ಕಾಪು ಇದರ ವ್ಯವಸ್ಥಾಪನಾ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯಿಂದ ಜಂಟಿ ಸಭೆಯು ಸೋಮವಾರ ದೇವಳದ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಲಯದಲ್ಲಿ ನಡೆಯಿತು.

ನೂತನ ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಬೇಕಾಗುವಂತಹ ಅನೇಕ ವ್ಯವಸ್ಥೆಗಳ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಕೆ ಪ್ರಕಾಶ್ ಶೆಟ್ಟಿ, ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರತ್ನಾಕರ ಶೆಟ್ಟಿ ನಡಿಕೆರೆ, ಪ್ರಧಾನ ಅರ್ಚಕರಾದ ವೇ. ಮೂ. ಶ್ರೀನಿವಾಸ ತಂತ್ರಿ ಕಲ್ಯಾ, ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರಾದ ಲಾಲಾಜಿ ಆರ್. ಮೆಂಡನ್, ಅನಿಲ್ ಬಲ್ಲಾಳ್ ಕಾಪು ಬೀಡು, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ನವದುರ್ಗಾ ಲೇಖನ ಯಜ್ಞ ಸಮಿತಿಯ ಅಧ್ಯಕ್ಷರಾದ ಕೆ. ರಘುಪತಿ ಭಟ್, ಬೆಂಗಳೂರು ಸಮಿತಿಯ ಅಧ್ಯಕ್ಷರಾದ ಉಪೇಂದ್ರ ಶೆಟ್ಟಿ, ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಮಾಧವ ಆರ್. ಪಾಲನ್, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರುಗಳಾದ ಉದಯ ಸುಂದರ್ ಶೆಟ್ಟಿ, ಜಯ ಸಿ. ಕೋಟ್ಯಾನ್, ಭಾಸ್ಕರ್ ಎಂ. ಸಾಲ್ಯಾನ್, ಭಗವಾನ್ ದಾಸ್ ಶೆಟ್ಟಿಗಾರ್,ಕೋಶಾಧಿಕಾರಿ ಸಿಎ ಸುದೇಶ್ ರೈ ಮಂಗಳೂರು, ಜೊತೆ ಕಾರ್ಯದರ್ಶಿ ಅರುಣ್ ಶೆಟ್ಟಿ ಪಾದೂರು, ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಸಭೆಯನ್ನು ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ನಿರ್ವಹಿಸಿ, ಪ್ರಧಾನ ಕಾರ್ಯದರ್ಶಿ ಸುಹಾಸ್ ಹೆಗ್ಡೆ ನಂದಳಿಕೆ ವಂದಿಸಿದರು.

ಸರಕಾರಿ ಸಂಯುಕ್ತ ಪ್ರೌಢ ಶಾಲೆ ಬೆಳಪು : ಶಾಲಾ ವಾರ್ಷಿಕೋತ್ಸವ

Posted On: 24-12-2024 02:56PM

ಕಾಪು : ಸರಕಾರಿ ಸಂಯುಕ್ತ ಪ್ರೌಢ ಶಾಲೆ ಬೆಳಪು ಇದರ ಶಾಲಾ ವಾರ್ಷಿಕೋತ್ಸವ ವಿಜೃಂಭಣೆಯಿಂದ ಜರಗಿತು. ಕಾರ್ಯಕ್ರಮವನ್ನು ಕಾಪು ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ಉದ್ಘಾಟಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ.ದೇವಿ ಪ್ರಸಾದ್ ಶೆಟ್ಟಿ ವಹಿಸಿದ್ದರು. ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಸ್ಫರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರಗಿತು.

ಈ ಸಂದರ್ಭ ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷರಾದ ‌ಮುಸ್ತಾಕ್ ಅಹಮದ್, ಬೆಳಪು ಸ್ಪೋರ್ಟ್ಸ್ ಕ್ಲಬ್ ಬೆಳಪು ಅಧ್ಯಕ್ಷ ಶಾ ನವಾಜ್‌, ರೋಟರಿ ಕ್ಲಬ್ ಕಾಪು ಅಧ್ಯಕ್ಷ ಬಾಲಕೃಷ್ಣ, ಉದ್ಯಮಿ ರವಿ, ಪ್ರಾಥಮಿಕ ಶಾಲಾ ವಿಭಾಗದ ಎಸ್ಡಿಎಂಸಿ ಅಧ್ಯಕ್ಷ ಚಂದ್ರಹಾಸ, ಎಸ್ ಡಿ ಎಂ.ಸಿ ಸದಸ್ಯರಾದ ಅನುರಾಧ, ಚಂದ್ರಶೇಖರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಬ್ರಾಹಿಂ, ಉಪಾಧ್ಯಕ್ಷ ಮಹೇಶ್ ಉಪಸ್ಥಿತರಿದ್ದರು.

ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಆಶಾ ಕೆ ಸ್ವಾಗತಿಸಿದರು. ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಅನಸೂಯಾ ಇವರು ವಂದಿಸಿದರು. ಪ್ರೌಢ ಶಾಲೆಯ ಶಿಕ್ಷಕ ಸುಧಾಕರ್ ಪಿ ಎಲ್ ನಿರೂಪಿಸಿದರು.

ಉದ್ಯಾವರ ಸೌಹಾರ್ದ ಸಮಿತಿಯಿಂದ ಅಂಗನವಾಡಿಗಳಲ್ಲಿ ಕ್ರಿಸ್ಮಸ್ ಆಚರಣೆ

Posted On: 24-12-2024 02:27PM

ಉದ್ಯಾವರ : ಸೌಹಾರ್ದ ಸಮಿತಿ ಉದ್ಯಾವರದ ನೇತೃತ್ವದಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ 11 ಅಂಗನವಾಡಿಗಳಲ್ಲಿರುವ ಮಕ್ಕಳಿಗೆ ಕ್ರಿಸ್ಮಸ್ ಸಿಹಿ ವಿತರಿಸಿ, ಕ್ರಿಸ್ಮಸ್ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸ್ಥಳೀಯ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಪ್ರಧಾನ ಧರ್ಮಗುರು ವo. ಅನಿಲ್ ಡಿಸೋಜ, ಕ್ರಿಸ್ಮಸ್ ಹಬ್ಬ ಶಾಂತಿ, ಸೌಹಾರ್ದತೆ ಮತ್ತು ಕ್ಷಮಿಸುವ ಹಬ್ಬ. ದೇವರು ತಮ್ಮ ಏಕ ಮಾತ್ರ ಪುತ್ರನನ್ನು ಜಗತ್ತಿನ ಒಳಿತಿಗೋಸ್ಕರ ಅವರು ಧಾರೆ ಎರೆದರು. ಯೇಸು ಸ್ವಾಮಿಯವರು ಪ್ರೀತಿಯ ಮೂಲಕ ಎಲ್ಲರ ಮನಸ್ಸು ಗೆದ್ದರು. ನಾವೆಲ್ಲರೂ ಒಂದೇ ದೇವರ ಮಕ್ಕಳು. ನಾವೆಲ್ಲರೂ ಜೊತೆಯಾಗಿ ಪ್ರೀತಿಯ ಸಂದೇಶವನ್ನು ಎಲ್ಲೆಡೆ ಪಸರಿಸೋಣ. ಮನೆಗಳಲ್ಲಿ ತೂಗು ಹಾಕಿರುವ ನಕ್ಷತ್ರದ ಬೆಳಕಿನಂತೆ ಸಮಾಜಕ್ಕೆ ನಾವು ಬೆಳಕಾಗೋಣ. ಒಬ್ಬರಿಗೊಬ್ಬರು ಕ್ಷಮಿಸುವ ಮೂಲಕ ದೇವರ ಪ್ರೀತಿಯ ಸಂದೇಶವನ್ನು ಹಂಚೋಣ ಎಂದು ಕ್ರಿಸ್ಮಸ್ ಸಂದೇಶವನ್ನು ನೀಡಿದರು.

ಈ ಸಂದರ್ಭದಲ್ಲಿ ಸಹಾಯಕ ಧರ್ಮ ಗುರು ವಂ. ಸ್ಟೀಫನ್ ರೋಡ್ರಿಗಸ್, ಹಲಿಮಾ ಸಾಬ್ಜು ಆಡಿಟೋರಿಯಂ ಟ್ರಸ್ಟಿ ಹಾಜಿ ಅಬ್ದುಲ್ ಜಲೀಲ್ ಸಾಹೇಬ್, ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ನಿತಿನ್ ಸಾಲ್ಯಾನ್, ಉದ್ಯಾವರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಜೇಶ್ ಕುಂದರ್, ಪಂಚಾಯತ್ ಸದಸ್ಯರಾದ ರಿಯಾಜ್ ಪಳ್ಳಿ, ಆಶಾ ವಾಸು, ಆಬಿದ್ ಅಲಿ, ಶ್ರೀ ನಾರಾಯಣ ಗುರು ಯುವ ವೇದಿಕೆ ಗೌರವಾಧ್ಯಕ್ಷ ಸದಾಶಿವ ಆಮಿನ್, ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ವಿಲ್ಫ್ರೆಡ್ ಡಿಸೋಜಾ, ಉದ್ಯಾವರ ಫ್ರೆಂಡ್ಸ್ ಸರ್ಕಲ್ ಗೌರವಾಧ್ಯಕ್ಷ ನಾಗೇಶ್ ಕುಮಾರ್, ಶಿಕ್ಷಕಿಯರಾದ ಗೀತಾ, ಅಕ್ಷತಾ, ಅಂಗನವಾಡಿ ಕಾರ್ಯಕರ್ತೆಯರು, ಸೌಹಾರ್ದ ಸಮಿತಿ ಮತ್ತು ಕಥೋಲಿಕ್ ಸಭಾದ ಸದಸ್ಯರು ಉಪಸ್ಥಿತರಿದ್ದರು.

ಸೌಹಾರ್ದ ಸಮಿತಿ ಅಧ್ಯಕ್ಷ ರೊಯ್ಸ್ ಫೆರ್ನಾಂಡಿಸ್ ಸ್ವಾಗತಿಸಿದರು. ಕಾರ್ಯದರ್ಶಿ ಪ್ರತಾಪ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಡಿ.28 ಮತ್ತು 29 : ಪಡುಬಿದ್ರಿಯಲ್ಲಿ ಕೃಷಿ ಮೇಳ

Posted On: 24-12-2024 02:21PM

ಪಡುಬಿದ್ರಿ : ಉದಯಾದ್ರಿ ಬಾಲಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನ ಹಾಗೂ ನಿತ್ಯಾನಂದ ಆಗ್ರೋ ಲಿಮಿಟೆಡ್ ಕೊಲ್ನಾಡ್,ಮುಲ್ಕಿ ಇವರ ಜಂಟಿ ಆಶ್ರಯದಲ್ಲಿ ಡಿ. 28 ಹಾಗೂ 29ರಂದು ದ್ವಿತೀಯ ಬಾರಿಗೆ ಪಡುಬಿದ್ರಿ ಉದಯಾದ್ರಿ ಬಾಲಗಣಪತಿ ಪ್ರಸನ್ನ ದೇವಸ್ಥಾನದ ಆವರಣದಲ್ಲಿ ಬೆಳಿಗ್ಗೆ ಗಂಟೆ 9ರಿಂದ ರಾತ್ರಿ 9ರವರೆಗೆ ಜರಗಲಿದೆ ಎಂದು ಸಂಘಟಕರಾದ ರಕ್ಷಾ ಇವರು ಪಡುಬಿದ್ರಿ ಉದಯಾದ್ರಿ ಬಾಲಗಣಪತಿ ಪ್ರಸನ್ನ ದೇವಸ್ಥಾನದ ಆವರಣದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಡಿಸೆಂಬರ್ 28ರಂದು ಕೃಷಿ ಮೇಳವನ್ನು ಬಂಟರ ಸಂಘದ ಮಾಜಿ ಅಧ್ಯಕ್ಷರಾದ ನವೀನ್ ಚಂದ್ರ ಜೆ. ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಶಿಕಾಂತ ಪಡುಬಿದ್ರಿ ಉದ್ಘಾಟಿಸಲಿದ್ದಾರೆ. ಮಳಿಗೆಗಳ ಉದ್ಘಾಟನೆಯನ್ನು ಪಡುಬಿದ್ರಿ ಉದ್ಯಮಿ ಸಂತೋಷ್ ಶೆಟ್ಟಿ ನಡೆಸಲಿದ್ದಾರೆ.

ಸಾವಯವ ಕೃಷಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೃಷಿ ಮೇಳವನ್ನು ಆಯೋಜಿಸಲಾಗಿದ್ದು, ಕೃಷಿ ಮಾಹಿತಿ, ಸಾವಯವ ಗೊಬ್ಬರಗಳು, ವಿವಿಧ ತರಕಾರಿ, ಹಣ್ಣಿನ ಗಿಡಗಳ ಮಾರಾಟ, ಕೃಷಿ ಯಂತ್ರೋಪಕರಣ, ನೀರಾವರಿ ಬಗ್ಗೆ ಮಾಹಿತಿ, ಮತ್ಸ್ಯ ಮೇಳ, ಆಹಾರ ಮೇಳಗಳು ಇರಲಿವೆ. ಈಗಾಗಲೇ 70 ಮಳಿಗೆಗಳು ನೋಂದಣಿಯಾಗಿದ್ದು, ಇದರಲ್ಲಿ 15 ಕೃಷಿ ಮಳಿಗೆಗಳಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ನಿತ್ಯಾನಂದ ಆಗ್ರೋ ಲಿಮಿಟೆಡ್ ಪ್ರಬಂಧಕ ನವೀನ್ ಚಂದ್ರ ಪ್ರಭು, ಉದಯಾದ್ರಿ ಬಾಲ ಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನದ ಟ್ರಸ್ಟಿಗಳಾದ ಜಗದಾಭಿರಾಮ ಸ್ವಾಮಿ, ನಯನಾಭಿರಾಮ, ಪಿ.ಡಿ. ಶೇಖರ ರಾವ್, ದಿನಕರ ರಾವ್, ಚರಣ್ ರಾಜ್ ಉಪಸ್ಥಿತರಿದ್ದರು.