Updated News From Kaup
ಉಡುಪಿ ಜಿಲ್ಲೆಯಲ್ಲಿ ಶೀಘ್ರದಲ್ಲಿ ಸರ್ಕಾರಿ ಕೋವಿಡ್ ಪರೀಕ್ಷಾ ಲ್ಯಾಬ್ ಆರಂಭ- ಡಾ.ಸುಧಾಕರ್
Posted On: 03 Jun 2020, 07:23 PM
ಉಡುಪಿ ಜೂನ್ 3 (ಕರ್ನಾಟಕ ವಾರ್ತೆ): ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಅತ್ಯಂತ ಶೀಘ್ರದಲ್ಲಿ ಸರ್ಕಾರಿ ಕೋವಿಡ್ -19 ಪರೀಕ್ಷಾ ಲ್ಯಾಬ್ ಆರಂಭಗೊಳ್ಳಲಿದ್ದು, ಈ ಕುರಿತಂತೆ ನೂತನ ಲ್ಯಾಬ್ ನಿರ್ಮಾಣ ಕಾಮಗಾರಿಗಳು ಅಂತಮ ಹಂತದಲ್ಲಿವೆ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ತಿಳಿಸಿದರು. ಅವರು ಬುಧವಾರ, ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ , ಕೋವಿಡ್-19 ಹಿನ್ನಲೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಡುಪಿ ಜಿಲ್ಲೆಯಲ್ಲಿ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ನಾಗರೀಕರ ಕೋವಿಡ್ ಪರೀಕ್ಷೆಯನ್ನು ಶೀಘ್ರದಲ್ಲಿ ನಡೆಸುವ ಅಗತ್ಯವಿದ್ದು, ಈಗಾಗಲೇ ಮಣಿಪಾಲದ ಕೆಎಂಸಿ ಯಲ್ಲಿ ಇರುವ ಲ್ಯಾಬ್ ನ ಜೊತೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ನೂತನ ಲ್ಯಾಬ್ ಆರಂಭದ ಕುರಿತಂತೆ , ಲ್ಯಾಬ್ ನ ಸಿವಿಲ್ ಕಾಮಗಾರಿಗಳು ಮುಕ್ತಾಯದ ಹಂತದಲ್ಲಿದ್ದು, ಶೀಘ್ರದಲ್ಲಿ ಅಗತ್ಯ ಯಂತ್ರೋಪಕರಣಗಳನ್ನು ಒದಗಿಸುವುದಾಗಿ ತಿಳಿಸಿದ ಸಚಿವರು , ಮುಂದಿನ 10 ದಿನದಲ್ಲಿ ಈ ಲ್ಯಾಬ್ ಕಾರ್ಯಾರಂಭ ಮಾಡಲಿದೆ ಎಂದರು. ಜಿಲ್ಲೆಗೆ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಬರುವವರನ್ನು ಸಾಂಸ್ಥಿಕ ಕ್ವಾರಂಟೈನ್ ಬದಲು ಅವರ ಮನೆಯನ್ನೇ ಸೀಲ್ ಡೌನ್ ಮಾಡಿ ಅಲ್ಲಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ಕುರಿತಂತೆ ಜಿಲ್ಲೆಯ ಶಾಸಕರು ನೀಡಿದ ಸಲಹೆಯ ಕುರಿತಂತೆ , ಪರಿಶೀಲಿಸುವುದಾಗಿ ತಿಳಿಸಿದ ಸಚಿವರು, ಕೋವಿಡ್ 19 ನಿಯಂತ್ರಣಕ್ಕೆ ಗ್ರಾಮಮಟ್ಟದಿಂದ ಜಿಲ್ಲಾ ಕೇಂದ್ರದಲ್ಲಿನ ವಾರ್ಡ್ ಗಳ ವರೆಗೂ ಕಾರ್ಯಪಡೆ ರಚಿಸಿಕೊಂಡು ಕಾರ್ಯ ನಿರ್ವಹಿಸುವಂತೆ ಸೂಚಿಸಿದರು. ಕೋವಿಡ್-19 ರ ಈ ಅವಧಿಯಲ್ಲಿ ಎಲ್ಲಾ ಖಾಸಗಿ ನರ್ಸಿಂಗ್ ಹೋಂ ಗಳು ಮತ್ತು ಕ್ಲಿನಿಕ್ ಗಳ ಸಾರ್ವಜನಿಕರಿಗೆ ಅಗತ್ಯ ಸೇವೆ ನೀಡುತ್ತಿರುವ ಬಗ್ಗ ಪರಿಶೀಲಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಸಚಿವ ಡಾ. ಕೆ.ಸುಧಾಕರ್, ಕೋವಿಡ್ ಲ್ಯಾಬ್ ಗೆ ಅಗ್ಯವಿರುವ ಸಿಬ್ಬಂದಿ ಮತ್ತು ಕೋವಿಡ್ ಚಿಕಿತ್ಸೆಗೆ ಅಗತ್ಯವಿರುವ ಸಿಬ್ಬಂದಿಯನ್ನು ಹೊರಗುತ್ತಿಗೆಯಲ್ಲಿ ಪಡೆಯುವಂತೆ ಸೂಚಿಸಿದರು. ಜಿಲ್ಲೆಗೆ ಅಗತ್ಯವಿರುವ 2000 ಪಿಪಿಇ ಕಿಟ್ ಗಳನ್ನು ಕೂಡಲೇ ಸರಬರಾಜು ಮಾಡಲಾಗುವುದು ಎಂದರು. ಜಿಲ್ಲೆಯಲ್ಲಿ ಇದುವರೆಗೆ 13542 ಜನರನ್ನು ಕ್ವಾರಂಟೈನ್ ಮಾಡಿದ್ದು, ಜಿಲ್ಲೆಗೆ ಮೇ ತಿಂಗಳಲ್ಲಿ 8624 ಮಂದಿ ಆಗಮಿಸಿದ್ದು, ಅದರಲ್ಲಿ 152 ಮಂದಿ ವಿದೇಶದಿಂದ ಮತ್ತು 8472 ಮಂದಿ ಇತರೆ ರಾಜ್ಯಗಳಿಂದ ಆಗಮಿಸಿದ್ದು, ಇದರಲ್ಲಿ 7697 ಮಂದಿ ಮಹಾರಾಷ್ಟ್ರದಿಂದ ಬಂದಿದ್ದಾರೆ, ಜಿಲ್ಲೆಯಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ 539 ಮಂದಿಗೆ ಪರೀಕ್ಷೆ ಮಾಡಲಾಗಿದೆ, ಇದುವರೆಗೆ 12504 ಮಾದರಿ ಸಂಗ್ರಹಿಸಲಾಗಿದೆ , ಒಟ್ಟು 410 ಪಾಸಿಟಿವ್ ಪ್ರಕರಣ ಕಂಡು ಬಂದಿದ್ದು, 64 ಬಿಡುಗಡೆಯಾಗಿದ್ದು, 345 ಸಕ್ರಿಯ ಪ್ರಕರಣಗಳಿವೆ, ಒಂದು ಸಾವು ಸಂಭವಿಸಿದೆ. ಪ್ರಕರಣ ಕಂಡು ಬಂದಿರುವಲ್ಲಿ ಶೇ.98% ಅಂದರೆ 400 ಮಂದಿಗೆ ರೋಗ ಲಕ್ಷಣಗಳಿಲ್ಲ , ಒಟ್ಟು 63 ಕಂಟೈನ್ ಮೆಂಟ್ ಝೋನ್ ರಚಿಸಲಾಗಿದ್ದು, ಪ್ರಸ್ತುತ 61 ಕಂಟೈನ್ ಮೆಂಟ್ ಝೋನ್ ಗಳಿವೆ ಎಂದು ಕೋವಿಡ್-19 ಜಿಲ್ಲಾ ನೋಡೆಲ್ ಅಧಿಕಾರಿ ಪ್ರಶಾಂತ್ ಭಟ್ ಮಾಹಿತಿ ನೀಡಿದರು. ಸಭೆಯಲ್ಲಿ ಮುಜರಾಯಿ , ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುನೀಲ್ ಕುಮಾರ್, ರಘುಪತಿ ಭಟ್, ಸುಕುಮಾರ ಶೆಟ್ಟಿ, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹಲೋತ್ ಹಾಗೂ ಆರೋಗ್ಯ ಇಲಾಖೆಯ ಮತ್ತು ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ದೀನರಿಗೆ, ದಿಕ್ಕು ದೆಸೆಯಿಲ್ಲದ ಹೋಟೆಲ್ ಕಾರ್ಮಿಕರಿಗೆ ಆಶ್ರಯದಾತರಾದವರ ಕಥೆಯಿದು
Posted On: 03 Jun 2020, 02:16 PM
ಮಹಾರಾಷ್ಟ್ರದ ಮಣ್ಣಿನಲ್ಲಿ ಹಸಿದವರಿಗೆ ಅನ್ನ ನೀಡಿದ "ಅನ್ನದಾತ" , ಮನುಷ್ಯತ್ವದ ರಾಯಬಾರಿ ಎನಿಸಿಕೊಂಡ ಮುಂಬೈ ಉದ್ಯಮಿಯೊಬ್ಬರ ಪರೋಪಕಾರದ ಪರಿಚಯವಿದು.. ಹೌದು ಅಲ್ಲಿ ಮೌನ ಹೆಪ್ಪುಗಟ್ಟಿದೆ. ಕಣ್ಣೀರು ಸಹ ಅನಾಥವಾಗಿದೆ.ಕಳೆಗುಂದಿದ ಮುಖ, ನಿಸ್ತೇಜಗೊಂಡ ಕಣ್ಣುಗಳು,ಏಳು ಸುತ್ತಿನ ಕೋಟೆಯಲ್ಲಿ ಬಂದಿ ನಾನಾದೆ ಎಂಬ ಬಾವ, ದುಡಿದು ತಿಂದ ಕೈಗಳಿಗೆ ಬೇಡಿ ತಿನ್ನಲು ಸ್ವಾಭಿಮಾನ ಅಡ್ಡ ಬರುತ್ತೆ.. ಈ ವರ್ಷ ಮುರುಕಲು ಮನೆಯನ್ನು ದುರಸ್ತಿ ಮಾಡಿ ಹಂಚನ್ನು ಹಾಕೋಣ. ಬರುವ ಸಲ ತಂಗಿಗೆ ಗಂಡು ಹುಡುಕೋಣ. ಪೋರೆಯಿಂದ ಮಂಜಾದ ನಿನ್ನ ಕಣ್ಣಿನ ಸರ್ಜರಿ ಮಾಡಿಸಬೇಕು ಅಮ್ಮ.. ನೀವು ಇನ್ಮುಂದೆ ಕೂಲಿಗೆ ಹೋಗಿದ್ದು ಸಾಕು ಮನೆಯಲ್ಲೇ ಆರಾಮಾಗಿರಿ ಅಪ್ಪಾ. ಅಂದ ಹುಡುಗನೊಬ್ಬ ತನ್ನೆಲ್ಲಾ ಕನಸುಗಳನ್ನು ನನಸು ಮಾಡಿಕೊಳ್ಳಲು ಎಂದೂ ಮಲಗದ ಈ ಮಾಯನಗರಿಯಲ್ಲಿ ಹಗಲಿರುಳೆನ್ನದೆ ರಕ್ತ ಬೆವರನ್ನು ಒಂದು ಮಾಡಿಕೊಂಡು ದುಡಿಯತೊಡಗುತ್ತಾನೆ.ಆದರೆ ಕೋರೋನ ಎನ್ನುವ ಮಹಾಮಾರಿ ಆತನ ಕನಸುಗಳನ್ನೆಲ್ಲ ಹಿಂಡಿ ಹಿಪ್ಪೆ ಮಾಡಿ ಹಾಕಿದೆ. ತನ್ನವರ ಬದುಕನ್ನು ಬಿಡಿ,ತನ್ನೊಬ್ಬನ ಜೀವನವನ್ನು ರಕ್ಷಿಸಿಕೊಳ್ಳಲು ಹೆಣಗಾಡುವ ದುಸ್ಥಿತಿ ಅವನಿಗೆ ಎದುರಾಗಿದೆ.ಅನೇಕ ತುಳು ಕನ್ನಡಿಗರ ಬದುಕು ಇಲ್ಲಿ ಡೋಲಾಯಮಾನವಾಗಿದೆ..ಅವರ ಕೂಗು ಅರಣ್ಯ ರೋದನವಾಗಿದೆ. ಇಂತಹ ಸಮಯದಲ್ಲಿ ಇವರ ನೆರವಿಗೆ ಧಾವಿಸಿ ಬಂದು ಸಹಾಯಕ್ಕೆ ನಿಂತವರೆ "ಮಾತೃ ಹೃದಯಿ" ಬಂಟರ ಸಂಘದ ವಸಾಯಿ - ಡಹಾಣು ಪ್ರಾದೇಶಿಕ ಸಮಿತಿಯ ಸಂಚಾಲಕರಾದ ಶ್ರೀ ಶಶಿಧರ್ ಕೆ ಶೆಟ್ಟಿಯವರು.. ಸಾಲಿನಲ್ಲಿ ಬರೆದಷ್ಟು ಸುಲಭವಲ್ಲಾ ಶಶಿಧರ್ ಶೆಟ್ಟಿಯವರ ಸಾಗರದಷ್ಟು ವಿಸ್ತಾರವಾದ ವ್ಯಕ್ತಿತ್ವವನ್ನು ವರ್ಣಿಸುವುದು.. ಶ್ರೇಷ್ಠ ಜನನಾಯಕ,ಸಂಘಟಕ, ಯಶಸ್ವೀ ಹೋಟೆಲ್ ಉದ್ಯಮಿ,ಕಲಾರಾಧಕ, ಸಮಾಜಮುಖಿ ಕಳಕಳಿಯ ಧೀಮಂತ ವ್ಯಕ್ತಿ ಎಲ್ಲಕಿಂತ ಮಿಗಿಲಾಗಿ ಇವರೊಬ್ಬ ಹೃದಯವಂತ ಮನುಷ್ಯ.. ಉಡುಪಿ ಜಿಲ್ಲೆಯ ಇನ್ನಂಜೆಯ ಮಂಡೇಡಿ ಇವರ ಊರು.ತಂದೆ ಮಂಡೆಡಿ ರಾಜನ್ ಮನೆ ಕಾಳು ಶೆಟ್ಟಿ, ತಾಯಿ ಮಂಡೆಡಿ ಕುಂಜಾರಬೆಟ್ಟು ಶಾರದಾ ಶೆಟ್ಟಿ. ದೇಶದ ಪ್ರತಿಷ್ಠಿತ ಕಂಪನಿಗಳೊಂದಾದ ಗೋದ್ರೆಜ್ ಕಂಪನಿಯ ಮುಂಬೈ ವಿಭಾಗದ ಶಾಖೆಯಲ್ಲಿ ಕ್ಯಾಂಟೀನ್ ನ ಮುಖ್ಯ ಬಾಣಸಿಗರಾಗಿ ಕಾಳು ಶೆಟ್ಟಿಯವರು ಕಾರ್ಯನಿರ್ವಹಿಸುತ್ತಿದ್ದರು. ಇವರ ಸಂಸಾರ ಮುಂಬೈಯ ಹೃದಯ ಬಾಗವಾದ ಲೋವರ್ ಪರೆಲ್ ನಲ್ಲಿ ವಾಸಿಸುತಿತ್ತು. ಎಲ್ಲರ ನೋವಿಗೂ ಸ್ಪಂದಿಸುವ ಕರುಣಾಮಯಿ ಈ ಕಾಳು ಶೆಟ್ಟಿಯವರ ಮನಸ್ಸು. ದಾರಿಹೋಕರಾದ ಬಿಕ್ಷುಕರು ಬಿಕ್ಷೆ ಬೇಡಲು ಬಂದರೆ ಅವರನ್ನು ಮನೆಯೊಳಗೆ ಕುಳ್ಳಿರಿಸಿ ಊಟ ಹಾಕಿ ಕಳಿಸುತ್ತಿದ್ದ ಕರುಣಾಮಯಿ. ಹೆತ್ತವರ ಇಂತಹ ಪರೋಪಕಾರದ ಗುಣಗಳು ಮಕ್ಕಳ ಮನಸ್ಸಿನ ಮೇಲೂ ಪ್ರಭಾವ ಬೀರತೊಡಗಿದವು.ವರ್ಲಿಯ ಮುನ್ಸಿಪಲ್ ಕನ್ನಡ ಮಾದ್ಯಮ ಶಾಲೆಯಲ್ಲಿ ಶಶಿಧರ್ ಶೆಟ್ಟಿ ಯವರು ವಿದ್ಯಾರ್ಥಿಯಾಗಿ ಸೇರಿಕೊಂಡರು.ಎಲ್ಲವೂ ಸುಖಕರವಾಗಿ ಸಾಗುತ್ತಿರುವಾಗ ಕಾಳು ಶೆಟ್ಟಿ ಯವರ ಸಾವು ಬರಸಿಡಿಲಂತೆ ಬಂದಪ್ಪಳಿಸಿತು. ಆಗ ಶಶಿಧರ ಶೆಟ್ಟಿಯವರ ಪ್ರಾಯ ಹನ್ನೊಂದು.ಐದನೇ ತರಗತಿಯ ವಿದ್ಯಾರ್ಥಿ.ಮನೆಯ ಆದಾರವೆ ಕುಸಿದು ಬಿದ್ದಾಗ ಕಂಗಾಲಾದ ಇವರೆಲ್ಲಾ ತಾಯಿಯೊಂದಿಗೆ ಪುನಃ ಹುಟ್ಟೂರಾದ ಇನ್ನಂಜೆಯ ಕಂಜಾರಬೆಟ್ಟುಗೆ ಬರಬೇಕಾಯಿತು.ಊರಲ್ಲಿ ಇವರದ್ದು ಅವಿಭಕ್ತ ಕುಟುಂಬ.ವ್ಯವಸಾಯ ಭೂಮಿಯೂ ಅಷ್ಟೇ ಪ್ರಮಾಣದಲ್ಲಿತ್ತು.ಇಲ್ಲಿ ಶಶಿಧರ್ ಶೆಟ್ಟರು ತನ್ನ ಶಿಕ್ಷಣವನ್ನು ಮುಂದುವರೆಸಿದರು.ಆದರೆ ಇವರ ಮನಸ್ಸು ಮುಂಬೈಗೆ ಮರಳಿ ಬರಲು ಕನವರಿಸುತಿತ್ತು.ತನ್ನ ಹದಿನೇಳನೇ ವರ್ಷದಲ್ಲಿ ಪುನಃ ಮುಂಬೈಯತ್ತ ಪ್ರಯಾಣ ಬೆಳೆಸಿದರು.ಬಂದವರೇ ಸಂಬಂಧಿಯೊಬ್ಬರ ಹೋಟೆಲಿನಲ್ಲಿ ಕೆಲಸ ಮಾಡತೊಡಗಿದರು. ಈ ಮಹಾರಾಷ್ಟ್ರದ ಮಣ್ಣಿನಲ್ಲಿ ಸಾಧನೆಯ ದಿವಿಗೆಯನ್ನು ಹಚ್ಚುವ, ತನ್ಮೂಲಕ ಬದುಕಿನಲಿ ಉನ್ನತಿಯನ್ನು ಹೊಂದುವ, ಮಹತ್ವಾಕಾಂಕ್ಷೆ ಇವರಲ್ಲಿ ತುಡಿತವಾಗಿ ಮಾರ್ಪಟ್ಟಿತ್ತು. ಕಾಲಕ್ರಮೇಣ ಉದ್ಯೋಗಿ ಆಗಿದ್ದವರು ಉದ್ಯಮಿಯಾಗಿ ಬೆಳೆದರು. ಈ ನಡುವಿನ ಇವರ ಹೊರಟ ನಿಜಕ್ಕೂ ಅದ್ಭುತ ಹಾಗೂ ಅವಿಸ್ಮರಣೀಯ.. ಶಶಿಧರ್ ಶೆಟ್ಟಿಯವರ ಧರ್ಮಪತ್ನಿ ಶಶಿಕಲಾ ಶೆಟ್ಟಿ. ಶ್ರೀಯುತರ ಬದುಕಿನ ಪಥವನ್ನೆ ಬದಲಿಸಿದಾಕೆ. ಮೂಲತಃ ಕಾರ್ಕಳದ ಹೆಬ್ರಿಯವರು. "ಕನಸು ಗುರಿಯಾಗಬೇಕು,ಗುರಿಯೇ ಕನಸಾಗಬಾರದು" ಅನ್ನುವುದು ಶಶಿಕಲಾರ ಮನದ ಇಂಗಿತ.. ಇವರ ದಾಂಪತ್ಯದ ಸಾಕ್ಷಿ ಎಂಬಂತೆ ಮನೆಯ ಲಕ್ಷ್ಮಿ ಯಾಗಿ ಮಗಳು ಸೃಷ್ಟಿ ಜನಿಸಿದಳು.. ನಾಲಾಸೋಪರ ಪರಿಸರದ ಯಶಸ್ವಿ ಹೋಟೆಲ್ ಉದ್ಯಮಿ ಅನ್ನಿಸಿಕೊಂಡರು.ಅನೇಕ ಹೆಸರಾಂತ ಹೋಟೆಲುಗಳ ಮಾಲಕ ಹಾಗೂ ಪಾಲುದಾರರೇನಿಕೊಂಡರು. ಅದರಲ್ಲೂ ನಾಲಸೋಪರ ದ "ಗ್ಯಾಲಕ್ಸಿ ಫ್ಯಾಮಿಲಿ ರೆಸ್ಟೋರೆಂಟ್" ಪ್ರಸಿದ್ಧವಾದುದು."ನಿನ್ನ ಸಾಧನೆಯ ದೀಪವನ್ನು ನೀನೇ ಹಚ್ಚಬೇಕು.ಕಟ್ಟಿಗೆ ಸುಟ್ಟಾಗ ಬೂದಿಯಾಗುತ್ತದೆ.ಆದರೆ ಇಟ್ಟಿಗೆ ಸುಟ್ಟಾಗ ಗಟ್ಟಿಯಾಗುತ್ತದೆ.ಆದ್ದರಿಂದ ನಾವು ಕಷ್ಟಗಳನ್ನು ಎದುರಿಸಿ ಮುಂದ ಡಿಯಿಟ್ಟಾಗ ಮಾತ್ರ ಜೀವನದಲ್ಲಿ ಸುಟ್ಟ ಇಟ್ಟಿಗೆಯಂತೆ ಗಟ್ಟಿ ಆಗುತ್ತೇವೆ" ಅನ್ನುವುದು ಶಶಿಧರ್ ಶೆಟ್ಟರ ಮಾತು.. ಲಾಕ್ ಡೌನ್ ನಿಂದಾಗಿ ಊರಿನಲ್ಲಿದ್ದು, ಮುಂಬೈಗೆ ಬರಲಾಗದಿದ್ದರೂ ಅಲ್ಲಿಂದಲೇ ಹತ್ತಾರು ಲಕ್ಷದ ದಿನಸಿ ಸಾಮಾನುಗಳನ್ನು ,ಬಂಟರ ಸಂಘ ಮುಂಬೈ, ವಸಾಯಿ- ದಾಹಣು ಪ್ರಾದೇಶಿಕ ಸಮಿತಿ,ಶ್ರೀದೇವಿ ಯಕ್ಷಕಲಾ ನಿಲಯ,ತುಳುಕೂಟ ಫೌಂಡೇಶನ್ ಇವರ ಮೂಲಕ ಲಾಕ್ ಡೌನ್ ನಿಂದ ತೊಂದರೆಗಿಡಾದ ಜನರಿಗೆ ಅದರಲ್ಲೂ ಮುಖ್ಯವಾಗಿ ಹೋಟೆಲ್ ಕಾರ್ಮಿಕರಿಗೆ, ಹಾಗೂ ತುಳು ಕನ್ನಡಿಗರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸುವ ಕಾರ್ಯ ಆರಂಭಿಸಿದರು.ಈಗಾಗಲೇ 2500ಕ್ಕೂ ಮಿಕ್ಕಿ ಕುಟುಂಬಗಳಿಗೆ ಸುಮಾರು 15 ಲಕ್ಷ ರೂಪಾಯಿ ಮೊತ್ತದ ಆಹಾರ ಪೊಟ್ಟಣ ಕೊಡಲಾಗಿದ್ದು,ಕೆಲವರಿಗೆ ನಗದನ್ನು ನೀಡಿ ಸಹಕರಿಸಿದ್ದಾರೆ...ಇವರ ಈ ಸೇವಾ ಕಾರ್ಯದಲ್ಲಿ ಅನೇಕ ವ್ಯಕ್ತಿಗಳು ಕೈ ಜೋಡಿಸಿದ್ದಾರೆ. ಶಶಿಧರ್ ಶೆಟ್ಟಿಯವರ ಮನಸ್ಸು ಯಾವಾಗ್ಲೂ ಸಮಾಜಮುಖಿಯಾಗಿ ಯೋಚಿಸುತ್ತಿರುತ್ತದೆ.ಎಷ್ಟೇ ಚಿಕ್ಕವರಾಗಿರಲಿ ತುಂಬಾ ಸರಳ ಸಜ್ಜನಿಕೆಯಿಂದ ಮಾತಾಡುವ ಇವರು ನಯವಿನಯಕ್ಕೆ ಪರ್ಯಾಯ ನಾಮ.ಇದಕ್ಕೆಲ್ಲ ಕಾರಣ ಅವರ ಬಾಲ್ಯದ ದಿನಗಳು. ಆಗೆಲ್ಲಾ ಹಲವು ರೀತಿಯ ಅಗ್ನಿ ದಿವ್ಯಗಳನ್ನು ಎದುರಿಸಿದ್ದಿರಿ.ಹಲವು ಬಗೆಯ ಸಂಸ್ಕಾರಕ್ಕೆ ಒಳಗಾದಿರಿ.ಅಪ್ಪಟ ಚಿನ್ನಾವಾದಿರಿ.ಕಲ್ಲು ಸಕ್ಕರೆ ಯಂತ ನಿಮ್ಮ ತುಳು ಬಾಷೆ .ತಿಳಿನೀರ ಮನಸುಳ್ಳ ಸಹೃದಯಿ.ಅದಕ್ಕೆ ನೀವು ಮನೆಯವರ ಊರವರ ಪ್ರೀತಿ ಪಾತ್ರರಾದೀರಿ.ಲಕ್ಷಾಂತರ ತುಳುವರಿಗೆ ಮತ್ತು ಕನ್ನಡಿಗರಿಗೆ ಪರಿಚಿತ ಮುಖವಾದಿರಿ.ಕೆಲಸಗಾರರಿಗೆ ಪ್ರೀತಿಯ ಅಣ್ಣನಾದಿರಿ... "ನೀರು ತಾನು ಹರಿಯುವಾಗ ಎದುರಿಗೆ ಬರುವ ಕಸ ಕಡ್ಡಿ ಕಲ್ಲು ಮುಳ್ಳುಗಳನ್ನು ಹೊತ್ತುಕೊಂಡು ಹರಿದು ತನ್ನ ಗುರಿ ತಲುಪುತ್ತದೆ.ನೀವು ಅಷ್ಟೇ ಜೀವನದಲ್ಲಿ ಎದುರಾಗುವ ಅವಮಾನ,ತಿರಸ್ಕಾರ, ಕೊಂಕು ನುಡಿಗಳನ್ನು ಎದುರಿಸುತ್ತಾ ಸಾಧನೆಯ ಶಿಖರ ಮುಟ್ಟಿದ್ದಿರಿ." ಹಸಿವೆಯಿಂದ ಬಳಲಿ ಕಂಗಾಲಾಗಿದ್ದ ಸಾವಿರಾರು ಜನರ ಬಳಿ ಧಾವಿಸಿ ಬಂದ ನೀವು ಅವರೆಲ್ಲರ ಪಾಲಿಗೆ ಅನ್ನದಾತರಾದಿರಿ."ಎನಿತು ಜನರಿಗೆ,ಎನಿತು ಜನ್ಮಗಳಿಗೆ ತಾನೂ ಎನಿತು ಋಣಿಯೋ? ಹಾಗೆ ನೋಡಿದರೆ ಈ ಜೀವನವೆಂಬುದು ಒಂದು ಋಣದ ಗಣಿಯಂತೆ..ಹಾಗಾಗಿ ಸಮಾಜದ ಋಣಬಾರವನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನ ದಲ್ಲಿ ಅಶಕ್ತರು ಹಾಗೂ ಹಸಿದವರ ಕಣ್ಣೀರನ್ನು ಒರೆಸುವ ನಿಮ್ಮ ಬಾಗವತ್ಕರ್ಯ ನಿತ್ಯ ನಿರಂತರ ನಡೆಯುತ್ತಿರಲಿ. ಆ ಶಕ್ತಿಯನ್ನು ಶ್ರೀ ದೇವರು ನಿಮಗೆ ಇನ್ನಷ್ಟು ಅನುಗ್ರಹಿಸಿ ಕಾಪಾಡಲಿ.. ಬರಹ ✍️ ಉದಯ್ ಪೂಜಾರಿ
ಇನ್ಮುಂದೆ ಉಡುಪಿಯಲ್ಲಿ ಮಂಗಳವಾರದ ಬದಲಾಗಿ ಆದಿತ್ಯವಾರ ಸೆಲೂನ್ ಬಂದ್
Posted On: 02 Jun 2020, 10:07 PM
ಜಿಲ್ಲಾ ಸವಿತಾ ಸಮಾಜದ ಜಿಲ್ಲಾ ಪದಾಧಿಕಾರಿಗಳು ಹಾಗೂ ಏಳು ತಾಲೂಕಿನ ಅಧ್ಯಕ್ಷರು ಪದಾಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಿದಂತೆ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದಂತೆ ಸೆಲೂನ್ಗಳಿಗೆ ಆದಿತ್ಯವಾರ ಹೆಚ್ಚು ಗ್ರಾಹಕರು ಬರುವುದರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮತ್ತು ವೃತ್ತಿ ನಿರತರಿಗೆ ನಿಯಮಾವಳಿಗಳನ್ನು ಪಾಲಿಸಲು ಕಷ್ಟ ಸಾಧ್ಯವಾಗಿರುವುದರಿಂದ ಅಲ್ಲದೆ ಮುಂದಿನ ದಿನಗಳಲ್ಲಿ ಕೂಡಾ ಕಡ್ಡಾಯವಾಗಿ ಉಡುಪಿ ಜಿಲ್ಲೆಯಾದ್ಯಂತ ಸೆಲೂನ್ ಗಳನ್ನು ಆದಿತ್ಯವಾರ ಬಂದ್ ಮಾಡಿ ಮಂಗಳವಾರ ತೆರೆಯಲು ಸರ್ವಸದಸ್ಯರ ಸಭೆಯಲ್ಲಿ ನಿರ್ಣಯಿಸಲಾಗಿದೆ, ಎಂದು ಜಿಲ್ಲಾ ಸವಿತಾ ಸಮಾಜದ ಸಭೆಯಲ್ಲಿ ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರು ಭಾಸ್ಕರ್ ಭಂಡಾರಿ ಗುಡ್ಡೆಯಂಗಡಿ ಹಾಗೂ ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು ಕೋಶಧಿಕಾರಿ ಶೇಖರ್ ಸಾಲ್ಯಾನ್ ರಾಜ್ಯ ಪ್ರತಿನಿಧಿ ವಿಶ್ವನಾಥ್ ಭಂಡಾರಿ ನಿಂಜೂರು ಗೌರವಾಧ್ಯಕ್ಷ ಗೋವಿಂದ ಭಂಡಾರಿ, ಸವಿತಾ ಸಹಕಾರಿಯ ಅಧ್ಯಕ್ಷ ನವೀನ್ಚಂದ್ರ ಭಂಡಾರಿ ತಿಳಿಸಿದ್ದಾರೆ.
ಬಡ ಕುಟುಂಬಕ್ಕೆ ಅಸರೆಯಾದ ಕಾರ್ಕಳದ ಕಾಂತಾವರ ಗ್ರಾಮದ ತಂಡ..
Posted On: 01 Jun 2020, 08:04 PM
ಕಳೆದ ಒಂದು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಗೆ ಗ್ರಾಸವಾಗಿರುವ ಕಾಂತಾವರ ಗ್ರಾಮ ದ ಬಡಕುಟುಂಬವೊಂದರ ಮುರುಕಲು ಮನೆಯ ರಿಪೇರಿ ಬಗ್ಗೆ ಕೆಲವು ಚರ್ಚೆಗಳು ನಡೆದಿತ್ತು. ಈ ಸಮಸ್ಯೆಯನ್ನು ಕಂಡ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಜಯ ಎಸ್ ಕೋಟ್ಯಾನ್ ಹಾಗೂ ಗೆಳೆಯರ ಬಳಗ ಕಾಂತಾವರ ಇವರ ತಂಡ ಸೇರಿ,ಲಾಕ್ ಡೌನ್ ನಡುವೆಯೂ ಕಳೆದ ಎರಡು ವಾರದ ಸತತ ಪ್ರಯತ್ನದಿಂದ ಮನೆ ನಿರ್ಮಾಣ ಕಾರ್ಯ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಯತ್ನ ವೊಂದಿದ್ದರೆ ಯಾವುದೇ ಕೆಲಸ ಕಠಿಣ ವಲ್ಲ ಎಂದು ಈ ತಂಡ ತೋರಿಸಿಕೊಟ್ಟಿದೆ..ಇದು ಬೇರೆ ಸಂಘಟನೆಗಳಿಗೆ ಮಾದರಿಯಾಗಲಿ..ಇನ್ನು ಮುಂದೆಯೂ ನಿಮ್ಮಿಂದ ಇಂತಹ ಸಮಾಜ ಸೇವೆ ನಡೆಯಲಿ..ಕಾಂತಾವರದ ಕಾಂತೇಶ್ವರ ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ....ವೈಯಕ್ತಿಕ ಟೀಕೆ ಗಳನ್ನು ನಿಮ್ಮ ಸಾಧನೆ ಯಿಂದ ಉತ್ತರಿಸಿ... ಪ್ರತ್ಯಕ್ಷವಾಗಿ ಪರೋಕ್ಷವಾಗಿ ಬೆಂಬಲಿಸಿದ ಸಹಕರಿಸಿದ ಎಲ್ಲಾ ಸಹೃದಯರಿಗೆ ಧನ್ಯವಾದಗಳು...
ಪಡುಬಿದ್ರಿ ಬಿಲ್ಲವ ಸಂಘ ವ್ಯಾಪ್ತಿಯ ಕುಟುಂಬಗಳಿಗೆ ಆಹಾರ ಸಾಮಾಗ್ರಿ ಕಿಟ್ ವಿರತಣೆ
Posted On: 01 Jun 2020, 07:28 PM
ಲಾಕ್ಡೌನ್ ಸಡಿಲಿಕೆಯಾದರು ಜನರಿಗೆ ತೊಂದರೆಯಾಗಬಾರದೆಂಬ ನಿಟ್ಟಿನಲ್ಲಿ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ (ರಿ.) ಪಡುಬಿದ್ರಿ ಇದರ ವ್ಯಾಪ್ತಿಗೆ ಒಳಪಡುವ ಸಮಾಜ ಬಾಂಧವರಿಗಾಗಿ ಪಡುಬಿದ್ರಿ ಬಿಲ್ಲವ ಸಂಘದಲ್ಲಿ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪಡುಬಿದ್ರಿ ಬಿಲ್ಲವ ಸಂಘದ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್, ಗೌರವಾಧ್ಯಕ್ಷರಾದ ವಾಸು ಡಿ. ಸಾಲ್ಯಾನ್, ಕಾರ್ಯದರ್ಶಿ ಲಕ್ಷ್ಮಣ್ ಬಿ. ಅಮೀನ್, ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷರಾದ ಶೀನ ಪೂಜಾರಿ, ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರಸಾದ್ ವೈ. ಕೋಟ್ಯಾನ್,ವೀರೇಂದ್ರ ಎನ್., ಲಕ್ಷ್ಮಣ ಡಿ. ಪೂಜಾರಿ, ಪ್ರಶಾಂತ್ ಕುಮಾರ್, ಶಂಕರ್ ಪಿ. ಸುವರ್ಣ, ಪೂರ್ಣಿಮ ಕೆ., ಮಹಿಳಾ ವಿಭಾಗದ ಅಧ್ಯಕ್ಷೆ ಚಿತ್ರಾಕ್ಷಿ ಕೆ.ಕೋಟ್ಯಾನ್ ಸದಸ್ಯರಾದ ಸುಚರಿತ ಎಲ್. ಅಮೀನ್, ಜಯಂತಿ ಜಿ.,ಸಾಧನ ಎಚ್. ಮುಂತಾದವರು ಉಪಸ್ಥಿತರಿದ್ದರು.
ಉಡುಪಿ.ಜೂನ್, 1: ಕೋವಿಡ್ ಆಸ್ಪತ್ರೆ ಹಾಸಿಗೆ ಸಾಮರ್ಥ್ಯ ವಿಸ್ತರಣೆ : ಉಸ್ತುವಾರಿ ಕಾರ್ಯದರ್ಶಿ
Posted On: 01 Jun 2020, 05:36 PM
ಕೋವಿಡ್ ಆಸ್ಪತ್ರೆ ಹಾಸಿಗೆ ಸಾಮರ್ಥ್ಯ ವಿಸ್ತರಣೆ: ಉಸ್ತುವಾರಿ ಕಾರ್ಯದರ್ಶಿ ಉಡುಪಿ ಜೂನ್ 1 (ಕರ್ನಾಟಕ ವಾರ್ತೆ): ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಹಾಗೂ ಸಂಬAಧಿತ ಲಕ್ಷಣಗಳಿರುವ ರೋಗಿಗಳ ಚಿಕಿತ್ಸೆಗಾಗಿ ಇನ್ನೂ ಹೆಚ್ಚುವರಿಯಾಗಿ ಆಸ್ಪತ್ರೆಗಳ ಹಾಸಿಗೆಗಳನ್ನು ವಿಸ್ತರಿಸಲಾಗುವುದು. ಇದಕ್ಕಾಗಿ ಅಗತ್ಯ ವೈದ್ಯರು, ಸಿಬ್ಬಂದಿಗಳ ನೇಮಕಾತಿಗೆ ಅನುಮೋದನೆ ನೀಡಲಾಗುವುದು ಎಂದು ರಾಜ್ಯ ಸರ್ಕಾರದ ಕೈಗಾರಿಕೆ, , ವಾರ್ತಾ ಇಲಾಖೆಯ ಪ್ರದಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ. ಮಹೇಶ್ವರ ರಾವ್ ತಿಳಿಸಿದ್ದಾರೆ. ಅವರು ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಲಾಖಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈಗಾಗಲೇ ರಾಜ್ಯ ಸರಕಾರ ಆಸ್ಪತ್ರೆಗಳಲ್ಲಿ 2500 ಹೆಚ್ಚುವರಿ ಹಾಸಿಗೆಗಳನ್ನು ಸೃಷ್ಟಿಸಲು ಸೂಚಿಸಿದೆ. ಈ ನಿಟ್ಟಿನಲ್ಲಿ ಹೆಚ್ಚುವರಿ ಮಾನವ ಸಂಪನ್ಮೂಲ ಅಗತ್ಯವಿದ್ದು, ಜಿಲ್ಲಾಧಿಕಾರಿಗಳ ಪ್ರಸ್ತಾವನೆಗೆ ಸರಕಾರದ ಅನುಮತಿ ನೀಡಲಾಗುವುದು ಎಂದು ಅವರು ತಿಳಿಸಿದರು. ಕೋವಿಡ್ ರೋಗಿಗಳ ಚಿಕಿತ್ಸೆಗೆ ಬಳಸಲಾಗುವ ಉಪಕರಣಗಳ ಕಾರ್ಯಕ್ಷಮತೆ ಹಾಗೂ ಸಿಬ್ಬಂದಿಗಳ ತರಭೇತಿ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಬೇಕು. ತಾಲೂಕು ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗೆ ವೆಂಟಿಲೇಟರ್ ಸೌಲಭ್ಯ ಒದಗಿಸುವುದರೊಂದಿಗೆ, ಹೆಚ್ಚುವರಿಯಾಗಿ ಖಾಸಗೀ ಆಸ್ಪತ್ರೆಗಳನ್ನು ಇದಕ್ಕಾಗಿ ಗುರುತಿಸಬೇಕು ಎಂದು ಉಸ್ತುವಾರಿ ಕಾರ್ಯದರ್ಶಿಗಳು ಸೂಚಿಸಿದರು. ಹೊರರಾಜ್ಯದಿಂದ ಬಂದವರ ಮಾಹಿತಿ ಆಯಾ ಸ್ಥಳೀಯ ಸಂಸ್ಥೆ, ಗ್ರಾಮ ಪಂಚಾಯತ್ಗಳಲ್ಲಿ ಇರಬೇಕು. ಅವರ ಕ್ವಾರೆಂಟೈನ್ ಅವಧಿಯ ಮೇಲೆ ನಿಗಾ ಇಡಬೇಕು ಎಂದು ಅವರು ತಿಳಿಸಿದರು. ಉಡುಪಿ ಜಿಲ್ಲೆಯ ಕೋವಿಡ್ ಪ್ರಯೋಗಾಲಯದ ಮೂಲಸೌಕರ್ಯ ಕಾಮಗಾರಿ ಅಂತಿಮ ಹಂತದಲ್ಲಿದ್ದು, 2-3 ದಿನಗಳೊಳಗೆ ಪೂರ್ಣಗೊಳ್ಳಲಿದೆ. ಬಳಿಕ ಪ್ರಯೋಗಾಲಯದಲ್ಲಿ ಅಗತ್ಯ ಉಪಕರಣಗಳ ಅಳವಡಿಕೆಯಾಗಿ, ಪ್ರಯೋಗಾಲಯದಲ್ಲಿ ಗಂಟಲ ದ್ರವ ಪರೀಕ್ಷೆ ಉಡುಪಿಯಲ್ಲಿಯೇ ಆರಂಭಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು. ಉದ್ಯಮಿಗಳಿಗೆ ನೆರವು: ಬ್ಯಾಂಕರ್ಗಳ ಜತೆ ಸಭೆ ಕೋವಿಡ್ ಹಿನ್ನೆಲೆಯಲ್ಲಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆ, ಉದ್ಯಮಿಗಳಿಗೆ ಕೇಂದ್ರ ಸರಕಾರ ಘೋಷಿಸಿರುವ ಹಣಕಾಸು ನೆರವು ಯೋಜನೆ ಜಾರಿಗೆ ಜಿಲ್ಲೆಯಲ್ಲಿ ಕೆಲವು ಖಾಸಗೀ ಬ್ಯಾಂಕುಗಳು ಸ್ಪಂದಿಸುತ್ತಿಲ್ಲ ಎಂಬ ಬಗ್ಗೆ ದೂರುಗಳು ಬಂದಿದ್ದು, ಈ ಬಗ್ಗೆ ಜಿಲ್ಲೆಯ ಬ್ಯಾಂಕುಗಳ ಜತೆ ಸಭೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲು ಉಸ್ತುವಾರಿ ಕಾರ್ಯದರ್ಶಿಗಳು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ ಈ ಬಗ್ಗೆ ಪ್ರತೀ ವಾರ ಪರಿಶೀಲನೆ ನಡೆಸಲು ಅವರು ತಿಳಿಸಿದರು. ಕಳೆದ ವರ್ಷ ಪ್ರಾಕೃತಿಕ ವಿಕೋಪದಿಂದ ಭಾಗಶ: ಹಾನಿಗೊಳಗಾದ ಮನೆಗಳನ್ನು ಪುನರ್ ನಿರ್ಮಾಣ ಮಾಡಲು ಈಗಾಗಲೇ ಅನುದಾನ ಬಿಡುಗಡೆ ವಿಳಂಭದಿAದ ಕೆಲವೆಡೆ ಮನೆ ನಿರ್ಮಾಣ ಇನ್ನೂ ಪೂರ್ಣಗೊಳ್ಳದಿರುವ ಮನೆಗಳಿಗೆ ಕೂಡಲೇ ಅನುದಾನ ಬಿಡುಗಡೆ ಮಾಡಲು ಅವರು ಸೂಚಿಸಿದರು. ಜಿಲ್ಲೆಯಲ್ಲಿ ಕೃಷಿ ಭಿತ್ತೆನೆ ಬೀಜಕ್ಕೆ ಹೆಚ್ಚು ಬೇಡಿಕೆ ಬರುತ್ತಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಹೆಚ್ಚು ಜನಸಂದಣಿ ಕಂಡುಬAದಿದೆ. ಜಿಲ್ಲೆಯ ಕೆಲವೆಡೆ ಈಗಾಗಲೇ ಭಿತ್ತೆನೆ ಚಟುವಟಿಕೆ ಆರಂಭಗೊAಡಿದೆ ಎಂದು ಕೃಷಿ ಜಂಟೀ ನಿರ್ದೇಶಕರು ಸಭೆಗೆ ತಿಳಿಸಿದರು. ರಾಜ್ಯ ಸರಕಾರವು ಹೂ ಬೆಳೆಗಾರರಿಗೆ ಪರಿಹಾರ ನೀಡುವ ಯೋಜನೆಯಲ್ಲಿ ಜಿಲ್ಲೆಯಲ್ಲಿ 4333 ರೈತರು ಅರ್ಜಿ ಸಲ್ಲಿಸಿದ್ದಾರೆ. ಗರಿಷ್ಠ 2.5 ಎಕರೆಗೆ ರೂ. 25000 ಪರಿಹಾರ ದೊರಕಲಿದೆ. ಇದರೊಂದಿಗೆ ತರಕಾರಿ, ಹಣ್ಣು ಬೆಳೆಗಾರರಿಗೆ ಪರಿಹಾರ ನೀಡಲು ಹೊಸದಾಗಿ ಮಾರ್ಗದರ್ಶಿ ಬಂದಿದ್ದು, ಜಿಲ್ಲೆಯಲ್ಲಿ ಕಲ್ಲಂಗಡಿ ಹಾಗೂ ಅನಾನಸು ಬೆಳೆಗಾರರಿಗೆ ಪರಿಹಾರ ದೊರೆಯಲಿದೆ ಎಂದು ತೋಟಗಾರಿಕಾ ಉಪನಿರ್ದೇಶಕರು ಸಭೆಗೆ ತಿಳಿಸಿದರು. ಅಕ್ರಮ ಮರಳುಗಾರಿಕೆ: ಕೇಸು ದಾಖಲು ಜಿಲ್ಲೆಯಲ್ಲಿ ಅಕ್ರಮವಾಗಿ ಮರಳುಗಾರಿಕೆ ಮಾಡಿರುವ ಪ್ರಕರಣಗಳಲ್ಲಿ ಸಂಬAಧಪಟ್ಟವರ ವಿರುದ್ಧ ಕೇಸು ದಾಖಲಿಸಲು ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್ ಸೂಚಿಸಿದರು. ಪಟ್ಟಾ ಜಮೀನು ಸೇರಿದಂತೆ ಲಾಕ್ಡೌನ್ ಅವಧಿಯಲ್ಲಿ ಅಕ್ರಮ ಮರಳುಗಾರಿಕೆ ನಡೆದಿರುವ ಬಗ್ಗೆ ಉಪವಿಭಾಗಾಧಿಕಾರಿಗಳು, ಪ್ರತೀ ಜಮೀನಿಗೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಲು ಅವರು ನಿರ್ದೇಶಿಸಿದರು. ಜಿಲ್ಲಾಧಿಕಾರಿಗಳು ಈ ಬಗ್ಗೆ ವಿವರ ನೀಡಿ, ಈಗಾಗಲೇ ಇಂತಹ ಪ್ರಕರಣಗಳ ವಿರುದ್ಧ ಕೇಸು ದಾಖಲಿಸಲಾಗಿದೆ. 5 ವಾಹನಗಳನ್ನು ಜಫ್ತಿ ಮಾಡಲಾಗಿದೆ. ಅಲ್ಲದೇ, ಸಂಬAಧಪಟ್ಟ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್, ವಿವಿಧ ಇಲಾಖಾಧಿಖಾರಿಗಳು ಉಪಸ್ಥಿತರಿದ್ದರು.
ಉಡುಪಿ. ಜೂನ್, 1 : ಸಂಚಾರಿ ನಿಯಮಗಳನ್ನು ಪಾಲಿಸದಿದ್ದಲ್ಲಿ ಕಠಿಣ ಕ್ರಮ
Posted On: 01 Jun 2020, 05:29 PM
ಸಂಚಾರಿ ನಿಯಮಗಳನ್ನು ಪಾಲಿಸದಿದ್ದಲ್ಲಿ ಕಠಿಣ ಕ್ರಮ- ಜಿಲ್ಲಾಧಿಕಾರಿ ಜಿ.ಜಗದೀಶ್ ಉಡುಪಿ ಜೂನ್ 1 (ಕರ್ನಾಟಕ ವಾರ್ತೆ): ಕೋವಿಡ್ -2019 (ಕೊರೋನಾ ವೈರಸ್ ಕಾಯಿಲೆ ) ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಘೋಷಣೆ ಆಗಿ ನಂತರ ಹಂತ ಹಂತವಾಗಿ ಲಾಕ್ ಡೌನ್ ಸಡಿಲಿಕೆಯಾಗಿದ್ದು, ಲಾಕ್ ಡೌನ್ ಸಮಯದಲ್ಲಿ ವಾಹನಗಳ ಸಂಚಾರ ವಿರಳವಾದ ಕಾರಣ ಇತ್ತೀಚಿಗೆ ಅಪಘಾತಗಳ ಸಂಖ್ಯೆ ಇಳಿಮುಖವಾಗಿರುತ್ತದೆ. ಪ್ರಸ್ತುತ ಲಾಕ್ ಡೌನ್ ಸಡಿಲಗೊಳಿಸಿ ಅನೇಕ ವಿನಾಯಿತಿಗಳನ್ನು ನೀಡಲಾಗಿರುತ್ತದೆ, ಇದರಿಂದಾಗಿ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿದ್ದು ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ . ರಸ್ತೆಗಳಲ್ಲಿ ಮುಖ್ಯವಾಗಿ ರಾಷ್ರೀಯ ಹೆದ್ದಾರಿಗಳಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸದೆ ದ್ವಿಚಕ್ರ ವಾಹನ ಸವಾರರು ತಮಗೆ ನಿಗಧಿ ಪಡಿಸಿದ ಪಥದಲ್ಲಿ ಸಂಚರಿಸದೆ ಅತಿ ವೇಗದಲ್ಲಿ ಮೊದಲ ಪಥಗಳಲ್ಲಿ ಸಂಚರಿಸುತ್ತಿರುವ ಕಾರಣ ಅಪಘಾತಗಳಾಗುತ್ತಿರುವುದನ್ನು ಗಮನಿಸಲಾಗಿದೆ. ಹಾಗೂ ದ್ವಿಚಕ್ರ ವಾಹನಗಳಲ್ಲಿ 3 ಜನರು ಸಂಚರಿಸುವುದು , ಹೆಲ್ಮೆಟ್ ಧರಿಸದೆ ಇರುವುದು, ಮತ್ತು ಮಾಸ್ಕ್ ಧರಿಸದೆ ಇರುವುದು ಕಂಡು ಬಂದಿರುತ್ತದೆ. ಇಂತಹ ಅತಿರೇಕಗಳಿಂದ ಉಡುಪಿ ಜಿಲ್ಲೆಯಲ್ಲಿ ಅಪಘಾತಗಳು ಹೆಚ್ಚುತಿರುವುದು ಕಳವಳಿಕಾರಿಯಾದ ವಿಷಯವಾಗಿದೆ. ಅಲ್ಲದೇ ಮಳೆಗಾಲದ ಪ್ರಾರಂಭದಲ್ಲಿ ಗ್ರೀಸ್ , ಆಯಿಲ್ ಇತ್ಯಾದಿಗಳು ರಸ್ತೆಗೆ ಬಿದ್ದಿರುವ ಕಾರಣಗಳಿಂದಾಗಿ ಎಲ್ಲಾ ರೀತಿಯ ವಾಹನಗಳು ಸ್ಕಿಡ್ ಆಗಿ ಅಪಘಾತಗಳು ಸಂಭವಿಸುತ್ತಿವೆ . ಆದುದರಿಂದ ಅತೀ ಜಾಗ್ರತೆಯಿಂದ ನಿಯಮಿತ ವೇಗದಲ್ಲಿ ವಾಹನ ಚಲಾಯಿಸುವಂತೆ ಮತ್ತು ಸಂಚಾರಿ ನಿಯಮಗಳನ್ನು ಪಾಲಿಸಿ , ನಿಗಧಿತ ಪಥಗಳಲ್ಲಿಯೆ ಸಂಚರಿಸಿ , ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಅಪಘಾತಗಳಾಗುವುದನ್ನು ತಡೆಯುವ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಿ ಸಂಚರಿಸುವOತೆ ಸಾರ್ವಜನಿಕರಲ್ಲಿ, ಹಾಗೂ ವಾಹನ ಬಳಕೆದಾರರಲ್ಲಿ ವಿನಂತಿಸಲಾಗಿದೆ.ತಪ್ಪಿದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ.
ಪೈಂಟಿಂಗ್ ಕ್ಷೇತ್ರದಲ್ಲಿ ಕಾಪುವಿನ ರಕ್ಷಾ ಪೂಜಾರಿಯ ಸಾಧನೆ
Posted On: 01 Jun 2020, 11:36 AM
ಸೋತು ಗೆಲ್ಲುವೆನೆಂಬ ಛಲ ತೊಟ್ಟು ಪೇಂಟಿಂಗ್ ಕ್ಷೇತ್ರದಲ್ಲಿಯೇ ಸದ್ದಿಲ್ಲದೇ ಸಾಧನೆ ಮಾಡುತ್ತಿರುವ ರಕ್ಷಾ ಪೂಜಾರಿಯವರು ಯುವ ಪೀಳಿಗೆಗೆ ಮಾದರಿ ಹಾಗೂ ಹೆಮ್ಮೆ ಕೂಡಾ.ಕಾಪುವಿನಲ್ಲಿ ನೆಲೆಸಿರುವ ಇವರ ತಂದೆ ರಮೇಶ್ ಪೂಜಾರಿ ಹಾಗೂ ತಾಯಿ ಶಶಿಕಲಾ ಕೋಟ್ಯಾನ್.ಪಿಯುಸಿ ಹಾಗೂ ಕಾಲೇಜು ಶಿಕ್ಷಣವನ್ನು ದಂಡತೀರ್ಥ ಉಳಿಯಾರಗೋಳಿಯಲ್ಲಿ ಪೂರ್ಣ ಗೊಳಿಸಿದ ಇವರು ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಬೇಕೆನ್ನುವ ಉದ್ಧೇಶದಿಂದ ವಿಶುವಲ್ ಆರ್ಟ್ಸ್ ಕಲಿಯಲು ಮೂಡಬಿದ್ರೆ ಯ ಆಳ್ವಾಸ್ ಶಿಕ್ಷಣ ಸಂಸ್ಥೆ ಗೆ ಸೇರುತ್ತಾರೆ.ವಾರ್ಲಿ ಆರ್ಟ್, ವಾರ್ಲಿ ವಾಲ್ ಪೈಂಟಿಂಗ್, ಟ್ರೆಡಿಷನಲ್ ಪೇಂಟಿಂಗ್, ಪಾಟ್ ಪೈಂಟಿಂಗ್, ಪಾಟ್ರೈಟ್ ಫೈಟಿಂಗ್, ಪಾಟ್ರೈಟ್ ಸ್ಕೆಚ್ ಮತ್ತು ಓಯಿಲ್ ಕಲರ್ ಪೈಂಟಿಂಗ್ ಹಾಗೂ ಎಲ್ಲಾ ರೀತಿಯ ಕ್ಯಾನವಸ್ ಪೈಂಟಿಂಗ್ ಮಾಡುವ ಇವರು ಹಲವಾರು ಕ್ಯಾಂಪ್ ಹಾಜರಾಗಿದ್ದಾರೆ. ಉಡುಪಿಯಲ್ಲಿ ನಡೆದ ಪವರ್ ಪರ್ಬ ಎನ್ನುವ ಎಕ್ಸಿಬಿಷನ್ ನಲ್ಲಿ ಪಾಲ್ಗೊಂಡಿದ್ದಾರೆ.ರಾಜ್ಯ ಮಟ್ಟದಲ್ಲಿ ಕೂಡಾ ಇವರ ಸಾಧನೆಗೆ ಪ್ರಶಸ್ತಿ ಪಡೆದು ಕೊಂಡಿದ್ದಾರೆ.ಫೆಬ್ರವರಿ 23ರಂದು ಕಲಾಬ್ದಿ ಎನ್ನುವ ರಾಷ್ಟ್ರ ಮಟ್ಟದ ಪೈಂಟಿಂಗ್ ಸ್ಪರ್ಧೆ ಗೆ ಆಯ್ಕೆ ಯಾಗಿದ್ದರು. ಈ ಎಲ್ಲಾ ಸಾಧನೆಗೆ ಎಲ್ಲರೂ ಬೆನ್ನು ತಟ್ಟಿ ಪ್ರೋತ್ಸಾಹ ನೀಡಬೇಕಾಗಿ ವಿನಂತಿ.ಇವರನ್ನು ಸಂಪರ್ಕಿಸಲು 9964777580 ಕರೆ ಮಾಡಿ.. ಇನ್ನೂ ಹೆಚ್ಚಿನ ಸಾಧನೆಗಳು ಇವರಿಂದ ಮೂಡಿ ಬರಲಿ ಎಂಬುದು ನಮ್ಮೇಲ್ಲರ ಆಶಯ..
34 ವರ್ಷಗಳ ಕಾಲ ಸೇವೆ ಸಲ್ಲಿಸಿದ ಶಿಕ್ಷಕ ಗೋಪಾಲಕೃಷ್ಣ ಭಟ್ ವಯೋ ನಿವೃತ್ತಿ
Posted On: 31 May 2020, 09:15 PM
ಭವಿಷ್ಯದ ಬದುಕಿಗೆ ಅಕ್ಷರ ಕಲಿಸಿ ನಿವೃತ್ತಿ ಹೊಂದಿದ ನಮ್ಮೂರಿನ ಲೆಕ್ಕ ಮಾಸ್ಟರ್.. ಕಾಪು: ಕಾಪು ಕಳತ್ತೂರಿನ ಪಿ.ಕೆ ಎಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿರುವ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರು ಶ್ರೀ ಗೋಪಾಲಕೃಷ್ಣ ಭಟ್ ಕೆ.ಎಂ.. ಕಳೆದ ೨೭ ವರ್ಷಗಳ ಕಾಲ ಸಹಶಿಕ್ಷಕರಾಗಿ,ಏಳು ವರ್ಷಗಳ ಕಾಲ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ 31/05/2020 ರಂದು ವಯೋನಿವೃತ್ತಿ ಹೊಂದಿರುವ ಶ್ರೀ ಗೋಪಾಲಕೃಷ್ಣ ಭಟ್ ಕೆ ಎಂ ಇವರು ಹಲವು ವರ್ಷದಿಂದ SSLC ಪರೀಕ್ಷೆಯಲ್ಲಿ ಗಣಿತ ಶಾಸ್ತ್ರದಲ್ಲಿ ಶೇಕಡಾ ನೂರು ಫಲಿತಾಂಶ ಹಾಗೂ ಕಳೆದ ಎರಡು ವರ್ಷಗಳಿಂದ ಗಣಿತ ಶಾಸ್ತ್ರದಲ್ಲಿ ಉಡುಪಿ ಜಿಲ್ಲಾ ಸಾಧಕ ಪ್ರಶಸ್ತಿ ಪಡೆದು ಸಾಧನೆ ಮಾಡಿರುವರು ಹಾಗೂ ಸಂಸ್ಥೆಯ NCC ಘಟಕದ ಅಫೀಸರ್ ಆಗಿಯೂ ಸೇವೆ ಸಲ್ಲಿಸಿರುತ್ತಾರೆ.. ವಿದ್ಯಾರ್ಥಿಗಳಲ್ಲಿ ಉಜ್ವಲ ಭವಿಷ್ಯ ತುಂಬಿ ಇದೀಗ ವಯೋನಿವೃತ್ತಿ ಹೊಂದಿದ ತಮ್ಮ ನಿವೃತ್ತಿ ಜೀವನ ಸುಖಮಯವಾಗಿರಲಿ.. ✍
ಕಾಲನ ಹೊಡೆತಕ್ಕೆ ಸಿಕ್ಕ ಮೈಂದಡಿ ದೈವಸ್ಥಾನ ಮತ್ತು ಗರಡಿ
Posted On: 29 May 2020, 10:56 AM
ತುಳುನಾಡು ಎಂದಕ್ಷಣ ಕಣ್ಣಿಗೆ ಕಾಣುವುದು ದೈವಾರಾಧನೆ. ತುಳುವರ ರಕ್ತದಲ್ಲಿ ದೈವಾರಾಧನೆ ಬೆರೆತು ಹೋಗಿದೆ. ಏನೇ ಕಷ್ಟ ಬಂದರು ಮೊರೆ ಹೋಗುವುದು ದೈವಗಳ ಕಾಲ ಬುಡಕ್ಕೆ. ನಂಬಿದವರನ್ನು ಯಾವತ್ತು ಕೈಬಿಟ್ಟವರಲ್ಲ ಈ ಅತಿಮಾನುಷ ಶಕ್ತಿಗಳಾದ ದೈವಗಳು. ಅದೆಷ್ಟೋ ಕಾಲದ ಹೊಡೆತಕ್ಕೆ ಮಣ್ಣಿನಡಿಗೆ ಸೇರಿದ ದೈವಸ್ಥಾನಗಳು ಕೂಡ ಕಾಲ ಬಂದಾಗ ತಮ್ಮ ಇರುವಿಕೆಯನ್ನು ತೋರಿಸಿ ತಮಗೆ ಬೇಕಾದ ಸ್ಥಾನಮಾನಗಳನ್ನು ಕಟ್ಟಿಸಿಕೊಂಡು ನಂಬಿದವರಿಗೆ ಇಂಬುಕೊಟ್ಟವರು. ಇಂತಹ ದೈವಾರಾಧನೆಯಲ್ಲಿ ಗರಡಿಗಳು ಕೂಡ ಕಾಯ ಬಿಟ್ಟು ಮಾಯ ಸೇರಿದ ಅವಳಿ ಕಾರಣೀಕ ಪುರುಷರ ಆರಾಧನ ಕೇಂದ್ರ. ಪ್ರಸ್ಥುತ 250 ಮಿಕ್ಕಿ ಗರಡಿಗಳು ಇದ್ದರು ಕೂಡ ಕೆಲವು ಗರಡಿಗಳು ಮಣ್ಣಿನ ಅಡಿಯಲ್ಲಿ ಜೀರ್ಣಾವಸ್ಥೆಯಲ್ಲಿ ಇದೆ. ಹೆಸರಿಗೆ ಮಾತ್ರ ಲೆಕ್ಕದಲ್ಲಿ ಇದೆ. ಅಂತಹುದೇ ಗರಡಿಗಳಲ್ಲಿ ಮೈಂದಡಿ ಗರಡಿಯು ಒಂದು. ಶ್ರೀ ಕ್ಷೇತ್ರ ಕಟೀಲಿಗೆ ಹೋಗುವ ದಾರಿಯಲ್ಲಿ ಸಿಗುವ ನಿಡ್ಡೋಡಿ ಎಂಬ ಗ್ರಾಮದಲ್ಲಿ ಮೈಂದಡಿ ಎನ್ನುವ ಪುಟ್ಟ ಊರು. ಹಸಿರು ಕಾಂತಿಯಿಂದ ಈ ಹಳ್ಳಿ ಕಂಗೊಳಿಸುತ್ತಾ ಇದ್ದು ಎಲ್ಲರು ನೆಮ್ಮದಿಯಿಂದ ಒಟ್ಟಾಗಿ ಜೀವಿಸುತ್ತಿರುವ ಊರು. ಕಾಲದ ಹೊಡೆತಕ್ಕೆ ಸಿಕ್ಕಿ ಈ ಹಿಂದೆ ವಿಜೃಂಭಣೆಯಿಂದ ನಡೆಯುತ್ತಿದ್ದ ಗರಡಿ ಜಾತ್ರೆ ಕಾಲಗರ್ಭದಲ್ಲಿ ಹುದುಗಿ ಹೋಗಿದೆ. 66 ಗರಡಿ 33 ತಾವುಗಳೆಂಬ ನಾಣ್ಣುಡಿಯಂತೆ ಈ ಗರಡಿಯು ಕೂಡ 66 ಗರಡಿಯಲ್ಲಿ ಸೇರಿರಬಹುದೆಂಬ ನಂಬಿಕೆಯಿದೆ. ಇಲ್ಲಿ ಅಳಿದು ಉಳಿದಿರುವ ಶಕ್ತಿ ಕಲ್ಲು, ದಂಬೆ ಕಲ್ಲು, ಆಯದ ಕಲ್ಲು, ತೀರ್ಥ ಬಾವಿ ಇವೆಲ್ಲ ಇದಕ್ಕೆ ಸಾಕ್ಷಿಯೆಂಬಂತೆ ಇದೆ. ಸುಮಾರು 150 ವರ್ಪಗಳ ಹಿಂದೆ ಬಹು ಸಡಗರದಿಂದ ನಡೆಯುತ್ತಿದ್ದ ನೇಮೋತ್ಸವವು ಯಾಕಾಗಿ ನಿಂತಿದೆ ಎನ್ನುವ ಮಾಹಿತಿ ಯಾರಿಗೂ ಇಲ್ಲ. ನೋಡಿದ ಕೇಳಿದ ಜನರು ಇರಲು ಸಾಧ್ಯವಿಲ್ಲ. ಆದರೆ 5 ಕಡೆಗಳಿಂದ ದೈವಗಳು ಮತ್ತು ಬೈದೇರುಗಳ ಭಂಡಾರ ಬಂದು ನೇಮೋತ್ಸವ ಆಗುತ್ತಿದ್ದ ಬಗ್ಗೆ ಅಲ್ಪ ಸ್ವಲ್ಪ ಮಾಹಿತಿಯಿದೆ. ಭಾವದ ಮನೆಯಿಂದ ಕೊಡಮಂದಾಯ ದೈವದ ಭಂಡಾರ, ಪಾತ್ರಬೈಲು ಮನೆಯಿಂದ ಸರಳ ಜುಮಾದಿ ಭಂಡಾರ, ಮಚ್ಚಾರು ಮನೆಯಿಂದ ಬೈದೇರುಗಳ ಭಂಡಾರ, ನಂದೊಟ್ಟು ಮನೆಯಿಂದ ಕಾಂತೇರ್ ಜುಮಾದಿ ಭಂಡಾರ ಮತ್ತು ಇನ್ನೊಂದು ಕಡೆಯಿಂದ ಜಾರಂದಾಯನ ಭಂಡಾರ ಮೈಂದಡಿ ಎನ್ನುವ ಸ್ಥಳದಲ್ಲಿ ಇರುವ ದೈವಸ್ಥಾನಕ್ಕೆ ಮತ್ತು ಗರಡಿಗೆ ಒಟ್ಟಾಗಿ ಬಂದು ಧ್ವಜಾರೋಹಣ ಆಗಿ ನೇಮೋತ್ಸವ ಆಗುತ್ತಿತ್ತಂತೆ. ಇಡೀ ಊರಿಗೆ ಇದು ಜಾತ್ರೆ. ಗ್ರಾಮಸ್ಥರು ಎಲ್ಲರು ಒಟ್ಟಾಗಿ ದೈವಗಳ ಮತ್ತು ಬೈದೇರುಗಳ ಭಂಡಾರ ಮನೆಯವರ ಮುಂದಾಳತ್ವದಲ್ಲಿ ನಡೆಸುತ್ತಿದ್ದರಂತೆ. ಆದರೆ ಯಾವುದೋ ಒಂದು ವಿಷ ಗಳಿಗೆಯಲ್ಲಿ ಎಲ್ಲವು ನಿಂತು ಹೋಗಿ ಮೈಂದಡಿಯಲ್ಲಿರುವ ದೈವಸ್ಥಾನ ಮತ್ತು ಗರಡಿ ಧರಶಾಹಿಯಾಗಿದೆ. ಈ ಬಗ್ಗೆ ಊರಿನ ಸಂಬಂಧಪಟ್ಟವರಿಂದ ಆಶಾದಾಯಕ ಬೆಳವಣಿಗೆಗಳು ನಡೆಯುತ್ತಿದ್ದು ಅತೀ ಬೇಗನೆ ಆಗಬಹುದೆಂಬ ನಂಬಿಕೆಯಿದೆ. ಒಂದಂತು ಸತ್ಯ ಯಾವ ಕಾಲಕ್ಕೆ ಯಾವುದು ಆಗಬೇಕೆನ್ನುವುದು ದೈವ ನಿರ್ಣಯ. ದೈವಗಳ ಮತ್ತು ಬೈದೇರುಗಳ ನಿರ್ಣಯ ಯಾವ ರೀತಿ ಇದೆಯೆಂಬುದು ಯಾರಿಗೂ ತಿಳಿದಿಲ್ಲ. ಆದರೆ ಆಗುತ್ತೆ ಎನ್ನುವುದು ಸಾರ್ವಕಾಲಿಕ ಸತ್ಯ. ಗ್ರಾಮಸ್ಥರೆಲ್ಲ ಈ ಬಗ್ಗೆ ಉತ್ಸುಕತೆಯಿಂದ ಕಾಯುತ್ತಿದ್ದು ಎಲ್ಲರು ಒಂದು ಕಡೆ ಸೇರಿ ಈ ಬಗ್ಗೆ ಚರ್ಚಿಸಲು ಮಾತ್ರ ಬಾಕಿಯಿರುತ್ತದೆ. ಇಲ್ಲಿನ ಪಳೆಯುಳಿಕೆಗಳಾದ ದೈವಗಳ ದೈವಸ್ಥಾನ, ಬೈದೇರುಗಳ ಗರಡಿ, ದಂಬೆಕಲ್ಲು, ಶಕ್ತಿಕಲ್ಲು, ಆಯದ ಕಲ್ಲು, ತೀರ್ಥ ಬಾವಿ ಹೊರಗಿನಿಂದ ಅಲ್ಪಸ್ವಲ್ಪ ಕಾಣುತ್ತಿದ್ದು ಚಿತ್ರಣವನ್ನು ನೋಡುವಾಗ ಮೈ ರೋಮಾಂಚಣಗೊಳ್ಳುತ್ತದೆ. ಇಂದಿಗೂ ಅಲ್ಲಿರುವ ಶಕ್ತಿಗಳು ಭಕ್ತರ ಬರುವಿಕೆಗೆ ಕಾದಿದೆಯೋ ಎನ್ನುವಂತೆ ಭಾಸವಾಗುತ್ತಿದೆ.
