Updated News From Kaup
ಯುವ ಜನರು ಆತ್ಮವಿಶ್ವಾಸ ಕಳೆದುಕೊಳ್ಳದೆ ದೈರ್ಯದಿಂದ ಪರಿಸ್ಥಿತಿ ಎದುರಿಸಬೇಕಿದೆ: ವಿಶ್ವಾಸ್ ಅಮೀನ್
Posted On: 25 Jun 2020, 08:26 AM
ಕೊರೊನಾ ಮಹಾಮಾರಿಯ ಕಾರಣದಿಂದ ಲಾಕ್ಡೌನ್ ಹಿನ್ನೆಲೆಯಲ್ಲಿ ಶೈಕ್ಷಣಿಕ ವರ್ಷದ ಬೇರೆ ಬೇರೆ ಪದವಿ ಪರೀಕ್ಷೆಗಳು ಮುಂದೂಡಲ್ಪಟ್ಟಿವೆ. ಪೈನಲ್ ಇಯರ್,ಗಳಲ್ಲಿ ಓದುತ್ತಿರುವ ಪದವಿ ವಿದ್ಯಾರ್ಥಿಗಳು ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯವನ್ನು ನೆನೆಸಿ ಆತಂಕಿತರಾಗಿದ್ದಾರೆ. ಜಿಲ್ಲೆಯಲ್ಲಿ ಯುವ ಜನತೆ ಲಾಕ್ಡೌನ್ ಸಮಸ್ಯೆಯಿಂದ ತಮ್ಮ ಭವಿಷ್ಯವೇ ಮುಗಿದು ಹೋಯಿತು ಎನ್ನುವಂತೆ ಖಿನ್ನತೆಗೊಳಗಾಗಿರುವ ವರದಿಗಳು ಬರುತ್ತಿರುವುದು ಆತಂಕಕ್ಕೀಡು ಮಾಡಿದೆ. ಮೊನ್ನೆ ಕಾರ್ಕಳ ತಾಲೂಕಿನ ಮುನಿಯಾಲು ಸಮೀಪದ ಪೈನಲ್ ಇಯರ್ ಪದವಿ ವಿದ್ಯಾರ್ಥಿನಿಯೊರ್ವಳು ಪರೀಕ್ಷೆಗಳು ನಡೆದಿಲ್ಲ ಮುಂದೆ ಉದ್ಯೋಗ ಸಿಗುವುದಿಲ್ಲವೆಂದು ಖಿನ್ನತೆಗೊಳಗಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿರುವ ಘಟನೆ ಇರಬಹುದು, ಮಲ್ಪೆ ಸಮೀಪದ ಯುವಕನೋರ್ವ ಇಂತಹದೇ ಔದ್ಯೋಗಿಕ ಸಮಸ್ಯೆಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇರಬಹುದು ಇದು ಜಿಲ್ಲೆಯ ಮಟ್ಟಿಗೆ ಅತ್ಯಂತ ಆತಂಕಕಾರಿ ಬೆಳವಣಿಗೆ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ನಾನು ಯುವ ಜನತೆಗೊಂದು ಕಿವಿ ಮಾತನ್ನು ಹೇಳಲು ಇಷ್ಟಪಡುತ್ತೇನೆ. ಕೊರಾನ ಮಹಾಮಾರಿಯಿಂದ ನಾವು ಖಂಡಿತಾ ಹೊರಬರುತ್ತೇವೆ ಎನ್ನುವ ವಿಶ್ವಾಸವಿದೆ, ಈಗ ನಮಗಾಗಿರುವ ಸಮಸ್ಯೆ ಇದೊಂದು ತಾತ್ಕಾಲಿಕ ಸಮಸ್ಯೆಯಾಗಿದೆ (ಹಿನ್ನೆಡೆಯಾಗಿದೆ). ಇದರಿಂದ ವಿದ್ಯಾರ್ಥಿಗಳಾಗಲಿ, ಯುವ ಜನತೆಯಾಗಲಿ ಆತ್ಮವಿಶ್ವಾಸವನ್ನು ಕಳೆದುಕೊಂಡು ಭಯಪಡುವ ಅವಶ್ಯಕತೆಯಿಲ್ಲ, ನನ್ನ ಯುವ ಮಿತ್ರರಲ್ಲಿ ವಿನಂತಿ, ದಯವಿಟ್ಟು ಯಾರೂ ಆತಂಕಕ್ಕೆ ಒಳಪಡದೇ ಭವಿಷ್ಯದ ಬಗ್ಗೆ ಆತ್ಮವಿಶ್ವಾಸದಿಂದ ಇರಬೇಕು. ಯುವಜನರು, ವಿದ್ಯಾರ್ಥಿಗಳು ಹೋರಾಟ ಮನೋಭಾವವನ್ನು ಬೆಳೆಸಿಕೊಂಡಲ್ಲಿ ಖಂಡಿತಾ ಮುಂದಿನ ದಿನಗಳು ನಿಮ್ಮದಾಗಲಿದೆ, ನಿಮ್ಮ ಭವಿಷ್ಯ ಉಜ್ವಲವಾಗಲಿದೆ. ರಾಜ್ಯದಲ್ಲೇ ಎಜುಕೇಷನ್ ಹಬ್ ಎಂದು ಖ್ಯಾತಿಗಳಿಸಿರುವ ನಮ್ಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾವಂತ ಯುವ ಜನರಿಗೆ ಸೂಕ್ತ ಉದ್ಯೋಗ ಅವಕಾಶಾಗಳಿಲ್ಲದೇ ನಮ್ಮ ಯುವ ಜನತೆ ಬೆಂಗಳೂರು ಮುಂಬಯಿ ಮುಂತಾದ ಅನ್ಯ ಜಿಲ್ಲೆ, ರಾಜ್ಯಗಳಿಗೆ ಉದ್ಯೋಗ ಅರಸಿ ವಲಸೆ ಹೋಗುವಂತಹ ಪರಿಸ್ಥಿತಿ ಉಂಟಾಗಿದೆ. ಯುವಜನರ ವಲಸೆಯು ಜಿಲ್ಲೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತಿದೆ. ಜಿಲ್ಲೆಯಲ್ಲಿ ಇಂದು ಮನೆ ಮನೆಗಳು ಅವಿಭಕ್ತ ಕುಟುಂಬದಿಂದ ವಿಭಕ್ತ ಕುಟುಂಬಗಳಾಗಿ ನ್ಯೂಕ್ಲಿಯರ್ ಪ್ಯಾಮಿಲಿಗಳಾಗಿ ಮಾರ್ಪಟ್ಟಿವೆ. ತಮ್ಮ ಅರ್ಹತೆಗೆ ತಕ್ಕಂತಹ ಉದ್ಯೋಗ ಸಿಗದೇ ಯುವ ಜನರು ವಲಸೆ ಹೋಗುವುದರಿಂದ ಇಂದು ಜಿಲ್ಲೆಯ ಮನೆ ಮನೆಗಳು ಅಕ್ಷರಶಃ ವೃದ್ದಾಶ್ರಮಗಳಾಗುತ್ತಿವೆ. ಒಂದು ಎರಡು ಮಕ್ಕಳಿರುವ ಹೆತ್ತವರು ಉದ್ಯೋಗ ನಿಮಿತ್ತ ದೂರದೂರಲ್ಲಿ ನೆಲೆಸಿರುವ ಮಕ್ಕಳಿಂದಾಗಿ ಮನೆಯಲ್ಲಿ ಮಕ್ಕಳ ಪ್ರೀತಿಯಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ಇಲ್ಲಿನ ಯುವ ಜನತೆಗೆ ಸ್ಥಳೀಯವಾಗಿಯೇ ಉದ್ಯೋಗ ಸಿಗುವಂತಾಗಬೇಕು. ನಾನು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಈ ಮೂಲಕ ಮನವಿಯನ್ನು ಮಾಡುತ್ತೇನೆ : ನಮ್ಮ ಜಿಲ್ಲೆಗೆ ಐಟಿ ಬಿಟಿ,ಯಂತಹ ಕಂಪನಿಗಳು ಬರಬೇಕು, ಜಿಲ್ಲೆಯ ಸುಂದರ ಪರಿಸರಕ್ಕೆ ಹಾನಿಯಾಗದಂತಹ ಬೃಹತ್ ಉದ್ದಿಮೆಗಳು ಜಿಲ್ಲೆಯಲ್ಲಿ ಸ್ಥಾಪನೆಯಾಗಬೇಕು. ಆ ಮೂಲಕ ಇಲ್ಲಿನ ಯುವ ಜನರು ಜಿಲ್ಲೆ ಬಿಟ್ಟು ಮಹಾನಗರಗಳಿಗೆ ವಲಸೆ ಹೋಗುವುದು ತಪ್ಪುತ್ತದೆ. ನಮ್ಮ ಜಿಲ್ಲೆಯ ಶಾಸಕರುಗಳು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನಹರಿಸಿ ತಕ್ಷಣ ಕಾರ್ಯ ಪ್ರವೃತ್ತರಾಗಬೇಕು. ಈ ಎಲ್ಲಾ ನಿಟ್ಟಿನಲ್ಲಿ ಯುವ ಜನರ ಮೇಲಿನ ಕಾಳಜಿಯಿಂದ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಟ್ವಿಟರ್ ಅಭಿಯಾನವನ್ನು ಮಾಡಲು ನಿರ್ಧರಿಸಿದೆ. ನನ್ನೆಲ್ಲಾ ಯುವ ಮಿತ್ರರು ಈ ಟ್ವಿಟರ್ ಅಭಿಯಾನದಲ್ಲಿ ಭಾಗಿಯಾಗುವ ಮೂಲಕ ನಮ್ಮ ಜಿಲ್ಲೆಯ ಅಭಿವೃದ್ಧಿ ಹಾಗೂ ಯುವ ಜನರ ಉದ್ಯೋಗದ ಸಮಸ್ಯೆಗಳಿಗೆ ಸ್ಪಂದನೆಯನ್ನು ನೀಡಬೇಕೆಂದು ಮನವಿಯನ್ನು ಮಾಡುತ್ತೇನೆ. ಮತ್ತೊಮ್ಮೆ ಯುವ ಮಿತ್ರರಲ್ಲಿ ಮನವಿಯನ್ನು ಮಾಡುತ್ತೇನೆ: ಪ್ರಸ್ತುತ ನಮಗಾಗಿರುವ ತಾತ್ಕಾಲಿಕ ಸಮಸ್ಯೆಯಿಂದ ನಾವು ಖಂಡಿತಾ ಹೊರಬರಲಿದ್ದೇವೆ. ಕೊರಾನ ಸಮಸ್ಯೆಗಳಿಂದ ಆದ ಅನಾಹುತಗಳನ್ನು ಮೆಟ್ಟಿನಿಂತು ಸುಂದರ ಬದುಕನ್ನು ಕಾಣುವ ವಿಶ್ವಾಸದಿಂದ ಮುನ್ನಡೆಯೋಣ. ಯುವ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಲು ಯಾವುದೇ ಕ್ಷಣದಲ್ಲೂ ಯುವ ಕಾಂಗ್ರೆಸ್ ಸನ್ನದ್ದವಾಗಿರುತ್ತದೆ ಎನ್ನುವ ಭರವಸೆಯನ್ನು ಈ ಮೂಲಕ ನೀಡುತ್ತಿದ್ದೇನೆ.
ಉಡುಪಿ : ಸುರಕ್ಷತೆ ಮತ್ತು ಸುಗಮ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಎಲ್ಲಾ ಸಿದ್ದತೆ
Posted On: 24 Jun 2020, 03:35 PM
ಉಡುಪಿ ಜೂನ್ 24 (ಕರ್ನಾಟಕ ವಾರ್ತೆ): ಉಡುಪಿ ಜಿಲ್ಲೆಯಲ್ಲಿ ಜೂನ್ 25 ರಿಂದ ನಡೆಯುವ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದು, ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಸುಗಮವಾಗಿ ಪರೀಕ್ಷೆ ನಡೆಯಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಅವರು ಬುಧವಾರ, ಉಡುಪಿಯ ವಳಕಾಡು ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ, ಕೇಂದ್ರದಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ ಮಾತನಾಡಿದರು. ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಅತ್ಯಂತ ಸುರಕ್ಷಿತ ಮತ್ತು ಸುಗಮವಾಗಿ ನಡೆಸುವ ಕುರಿತಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ, ಅಗತ್ಯ ಸೂಚನೆಗಳನ್ನು ನೀಡಲಾಗಿದ್ದು, ಜಿಲ್ಲಾ ಪಂಚಾಯತ್ ಸಿಇಓ , ಡಿಡಿಪಿಐ ಮತ್ತು ನಾನು ಹಲವು ಶಾಲೆಗಳಿಗೆ ಭೇಟಿ ನೀಡಿ ಅಗತ್ಯ ಸೂಚನೆಗಳನ್ನು ನೀಡಲಾಗಿದೆ, ಕಂಟೋನ್ಮೆಟ್ ಝೋನ್ ನಿಂದ ಬರುವ 4 ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ, ಕ್ವಾರಂಟೈನ್ ಗೆ ಬಳಸಿರುವ ಶಾಲೆಗಳನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದ್ದು, ವಿದ್ಯಾರ್ಥಿಗಳಿಗೆ ಅಗತ್ಯ ಬಸ್ ವ್ಯವಸ್ಥೆ ಮಾಡಲಾಗಿದ್ದು, 10 ಪರೀಕ್ಷಾ ಕೇಂದ್ರಗಳನ್ನು ಹೆಚ್ಚುವರಿಯಾಗಿ ಗುರುತಿಸಲಾಗಿದೆ. ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ಎಲ್ಲಾ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ಯಾನರ್ ಮೂಲಕ ಪರೀಶೀಲಿಸಿ ಪ್ರವೇಶ ನೀಡಲಾಗುವುದು, ಜ್ವರದ ಲಕ್ಷಣಗಳಿದ್ದ ಮಕ್ಕಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಪೋಷಕರು ಮತ್ತು ವಿದ್ಯಾರ್ಥಿಗಳು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿರು. ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ಪ್ರದೇಶದಲ್ಲಿ ಸೆಕ್ಷನ್ 144 ರಂತೆ ನಿಷೇಧಾಜ್ಞೆ ವಿಧಿಸಲಾಗಿದ್ದು, ಸಾರ್ವಜನಿಕರಿಗೆ ಪ್ರವೇಶವಿಲ್ಲ, ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿರುವ ಅಧಿಕಾರಿಗಳು ಮತ್ತು ಶಿಕ್ಷಕರಿಗೆ ಮಾತ್ರ ಪ್ರವೇಶವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಡಿಡಿಪಿಐ ಶೇಷ ಶಯನ ಕಾರಿಂಜ, ವಳಕಾಡು ಶಾಲೆಯ ಮುಖ್ಯೋಪಧ್ಯಾಯಿನಿ ನಿರ್ಮಲಾ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕೋವಿಡ್-19 ಚಿಕಿತ್ಸೆ ನೀಡಲು ಖಾಸಗಿ ಆಸ್ಪ್ಪತ್ರೆಗಳು ಸಿದ್ದವಾಗಬೇಕು :ಜಿಲ್ಲಾಧಿಕಾರಿ ಜಿ.ಜಗದೀಶ್
Posted On: 24 Jun 2020, 02:56 PM
ಉಡುಪಿ ಜೂನ್ 24 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಕೋವಿಡ್-19 ಗೆ ಚಿಕಿತ್ಸೆ ನೀಡಲು ನೊಂದಾಯಿಸಿಕೋಂಡಿರುವ ಆಸ್ಪತ್ರೆಗಳು , ತಮ್ಮಲ್ಲಿ ಬರುವ ಕೋವಿಡ್-19 ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡಲು ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಅವರು ಬುಧವಾರ,ಜಿಲ್ಲಾಧಿಕಾರಿ ಕಚೇರಿಯಲ್ಲಿ , ಕೋವಿಡ್-19 ಚಿಕಿತ್ಸೆ ನೀಡಲು ನೊಂದಾಯಿಸಿರುವ ಖಾಸಗಿ ಆಸ್ಪತ್ರೆಗಳು ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಅಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಕೋವಿಡ್ 19 ಚಿಕಿತ್ಸೆ ನೀಡಲು 19 ಆಸ್ಪತ್ರೆಗಳು ನೊಂದಾಯಿಸಿದ್ದು, ಈ ಆಸ್ಪತ್ರೆಗಳು ಕೋವಿಡ್ ಪೀಡಿತರಿಗೆ ಚಿಕಿತ್ಸೆ ನೀಡಲು ಅಗತ್ಯ ಬೆಡ್ ಗಳನ್ನು ಮೀಸಲಿಡುವುದಂತೆ ಹಾಗೂ ಚಿಕಿತ್ಸೆಗೆ ಅಗತ್ಯವಿರುವ ಉಪಕರಣಗಳನ್ನು ಅಳವಡಿಸಿಕೊಳ್ಳುವಂತೆ ಹಾಗೂ ಅಗತ್ಯವಿರುವ ದುರಸ್ತಿ ಕಾರ್ಯಗಳನ್ನು ಕೈಗೊಂಡು ಯಾವುದೇ ಸಂದರ್ಭದಲ್ಲಿ ತಮ್ಮಲ್ಲಿಗೆ ಬರುವ ರೋಗಿಯ ಚಿಕಿತ್ಸಗೆ ಸಂಪೂರ್ಣ ಸಿದ್ದರಿರುವಂತೆ ಸೂಚಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್ , ಯಾವುದೇ ರೋಗಿಗೆ ಚಿಕಿತ್ಸೆಯನ್ನು ನಿರಾಕರಿಸುವಂತಿಲ್ಲ ಎಂದು ಸೂಚಿಸಿದರು. ಜಿಲ್ಲೆಯಲ್ಲಿ ಪ್ರಸ್ತುತ 108 ಪಾಸಿಟಿವ್ ಪ್ರಕರಣಗಳು ಮಾತ್ರ ಇದ್ದು, ಅವುಗಳಿಗೆ ಕುಂದಾಪುರ ಮತ್ತು ಕಾರ್ಕಳದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಮುಂದೆ ಪ್ರಕರಣಗಳು ಹೆಚ್ಚು ಕಂಡು ಬಂದಲ್ಲಿ ಖಾಸಗಿ ಆಸ್ಪತ್ರೆಗಳು ಸಹ ಚಿಕಿತ್ಸೆ ನೀಡಲು ಸಿದ್ದರಿರಬೇಕು, ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸಗೆ ಅಗತ್ಯವಿರುವ ಸೌಲಭ್ಯಗಳು ಇರುವ ಕುರಿತಂತೆ ಪರಿಶೀಲಿಸಲು ತಕ್ಷಣದಲ್ಲೇ ತಜ್ಞರ ಸಮಿತಿಯನ್ನು ರಚಿಸಲಿದ್ದು,ಈ ಸಮಿತಿಯು ಆಸ್ಪತೆಗಳಿಗೆ ಭೇಟಿ ನೀಡಿ, ಆಸ್ಪತ್ರೆಗಳಿಗೆ ಅಗತ್ಯ ಸಲಹೆ ಸೂಚನೆ ನೀಡಿ, ವರದಿ ನೀಡಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು. ನೊಂದಾಯಿತ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ , ಸರ್ಕಾರದ ಮಾರ್ಗಸೂಚಿಯನ್ವಯ ಕೋವಿಡ್-19 ರೋಗಿಗಳ ದಾಖಲಾತಿ ಪ್ರಕ್ರಿಯೆ, ಚಿಕಿತ್ಸಾ ವಿಧಾನಗಳ ಬಗ್ಗೆ ಹಾಗೂ ಮತ್ತಿತರ ಅಗತ್ಯ ಮಾಹಿತಿಗಳನ್ನು ನೀಡಲಾಗುವುದು ಹಾಗೂ ಖಾಸಗಿ ಆಸ್ಪತ್ರೆಯ ಸ್ವಚ್ಚತಾ ಸಿಬ್ಬಂದಿಗಳಿಗೆ ಹಾಗೂ ಇತರರಿಗೆ ಸೂಕ್ತ ತರಬೇತಿ ನೀಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, ಎಲ್ಲಾ ಖಾಸಗಿ ಆಸ್ಪತ್ರೆಗಳು ಜ್ವರ ಪರೀಕ್ಷಾ ಕೇಂದ್ರ ಮತ್ತು ಐಸೋಲೇಶನ್ ಕೇಂದ್ರ ಗಳನ್ನು ತೆರೆಯುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು. ಪ್ರಸ್ತುತ ಜಿಲ್ಲೆಯಲ್ಲಿ , ಶ್ರೀಮಾತಾ ಆಸ್ಪತ್ರೆ, ಕುಂದಾಪುರ, ನಿಟ್ಟೆ ಗಜ್ರಿಯಾ ಆಸ್ಪತ್ರೆ ಕಾರ್ಕಳ, ಆದರ್ಶ ಆಸ್ಪತ್ರೆ ಉಡುಪಿ, ನ್ಯೂಸಿಟಿ ಆಸ್ಪತ್ರೆ ಉಡುಪಿ, ಚಿನ್ಮಯಿ ಆಸ್ಪತ್ರೆ ಕುಂದಾಪುರ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಡಾ.ಎನ್.ಆರ್. ಆಚಾರ್ಯ ಸ್ಮಾರಕ ಆಸ್ಪತ್ರೆ ಕೋಟೇಶ್ವರ, ಹೈಟೆಕ್ ಮೆಡಿಕೇರ್ ಆಸ್ಪತ್ರೆ ಉಡುಪಿ, ಮಹೇಶ್ ಆಸ್ಪತ್ರೆ ಬ್ರಹ್ಮಾವರ, ಮಿತ್ರಾ ಆಸ್ಪತ್ರೆ ಉಡುಪಿ, ಪ್ರಣವ್ ಆಸ್ಪತ್ರೆ ಬ್ರಹ್ಮಾವರ, ಸರ್ಜನ್ಸ್ ಆಸ್ಪತ್ರೆ ಕೋಟೇಶ್ವರ, ವಿವೇಕ್ ಆಸ್ಪತ್ರೆ ಕುಂದಾಪುರ, ಸ್ಪಂದನಾ ಆಸ್ಪತ್ರೆ ಕಾರ್ಕಳ, ಶ್ರೀದೇವಿ ಆಸ್ಪತ್ರೆ ಕುಂದಾಪುರ, ಶ್ರೀ ಮಂಜುನಾಥ ಆಸ್ಪತ್ರೆ ಕುಂದಾಪುರ, ಆದರ್ಶ ಆಸ್ಪತ್ರೆ ಕುಂದಾಪುರ, ಸುನಾಗ್ ಆರ್ಥೋಕೇರ್ ಅಂಡ್ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ, ಉಡುಪಿ, ಡಾ.ಎ.ವಿ ಬಾಳಿಗಾ ಆಸ್ಪತ್ರೆ ಉಡುಪಿ ಇವುಗಳಲ್ಲಿ ಕೋವಿಡ್-19 ರೋಗಿಗಳ ಚಿಕಿತ್ಸೆ ನೀಡಲು ಅನುಮತಿ ನೀಡಿದ್ದು, ಪ್ರಸ್ತುತ ಯಾವುದೇ ರೋಗಿಗಳು ಈ ಆಸ್ಪತ್ರೆಗಳಲ್ಲಿ ದಾಖಲಾಗಿಲ್ಲ. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಹೆಚ್ಓ ಡಾ. ಸುಧೀರ್ ಚಂದ್ರ ಸೂಡಾ, ಜಿಲ್ಲಾ ಸರ್ಜನ್ ಮಧುಸೂದನ ನಾಯಕ್, ಕೊವಿಡ್-19 ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ಹಾಗೂ ಕೋವಿಡ್-19 ಗೆ ಚಿಕಿತ್ಸೆ ನೀಡಲು ನೊಂದಾಯಿಸಿಕೋಂಡಿರುವ ಆಸ್ಪತ್ರೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಮಣಿಪುರ ಗ್ರಾಮದ ರೈಲ್ವೆ ಟ್ರ್ಯಾಕ್ ನಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆ
Posted On: 24 Jun 2020, 08:25 AM
ದಿನಾಂಕ 23.06.2020 ರಂದು ಸಮಯ 23.45 ಗಂಟೆಗೆ ಮಣಿಪುರ ಗ್ರಾಮದ ರೈಲ್ವೆ ಟ್ರ್ಯಾಕ್ ಬದಿಯಲ್ಲಿ ಸುಮಾರು 30 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹವು ದೊರೆತಿದ್ದು ಸದ್ರಿ ಮೃತ ದೇಹದ ವಾರಸುದಾರರು ಪತ್ತೆಯಾಗಿರುವುದಿಲ್ಲ ಮೃತ ದೇಹ ನೋಡಲಾಗಿ ಬಲಗೈ ಬಲ ಕಾಲು ಸಂಪೂರ್ಣ ವಾಗಿ ಮುರಿದಿದ್ದು ತಲೆಗೆ ಪೆಟ್ಟಾಗಿರುತ್ತದೆ ಮೃತ ದೇಹದ ಮೇಲೆ ಆಕಾಶ ನೀಲಿ ಬಣ್ಣದ ಟಿ ಶರ್ಟ್ ಹಾಗೂ ಕಪ್ಪು ಚೌಕ್ ಇರುವ ನೀಲಿ ಲುಂಗಿ ನೀಲಿ ಬಣ್ಣದ ಒಳ ಚಡ್ಡಿ ಧರಿಸಿದ್ದು ಕಿವಿಯಲ್ಲಿ ಕಿವಿಯೋಲೆ ಮತ್ತು ಸೊಂಟದಲ್ಲಿ ಉಡುದರ ಹಾಗೂ ಸೊಂಟಕ್ಕೆ ಕಪ್ಪು ಬಣ್ಣದ ದಾರವನ್ನು ಧರಿಸಿರುತ್ತಾನೆ, ಶವವನ್ನು ಸೂರಿ ಶೆಟ್ಟಿಯವರ ಸಹಾಯದಿಂದ ಆಂಬುಲೆನ್ಸ್ ನಲ್ಲಿ ಉಡುಪಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ - ನಮ್ಮ ಕಾಪು ನ್ಯೂಸ್
ಶ್ರೀ ವಿಶ್ವನಾಥ್ ರಾವ್ ಪೈಯ್ಯಾರು ಇನ್ನಿಲ್ಲ.
Posted On: 23 Jun 2020, 08:26 AM
ಯಕ್ಷಲೋಕದ ಭಾಗವತಿಕೆಯಲ್ಲಿ ಮಿನುಗಿದ, ಬಿ.ಜೆ.ಪಿ ಪಕ್ಷವನ್ನ ಗ್ರಾಮೀಣ ಭಾಗದಲ್ಲಿ ಸಂಘಟಿಸಿದ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜ್ಯೋತಿನಗರ ಕಳತ್ತೂರು ಇದರ ಸ್ಥಾಪಕ ಸದಸ್ಯರಾಗಿ,ಅಧ್ಯಕ್ಷರಾಗಿ, ಸಮಿತಿಯ ರಜತ ಸಂಭ್ರಮವನ್ನ ಯಶಸ್ವಿಯಾಗಿ ನಿರ್ವಹಿಸಿದ ಪೈಯಾರಿನ ಹಿರಿಯ ಚೇತನವೊಂದು ಅಲ್ಪ ಕಾಲದ ಅಸೌಖ್ಯದಿಂದ ನಿನ್ನೆ ಸಂಜೆ ಧೈವಾದೀನರಾಗಿರುತ್ತಾರೆ ಎಂದು ತಿಳಿಸಲು ವಿಷಾದಿಸುತ್ತೇವೆ.
ಉಡುಪಿಯ ಭುಜಂಗ ಪಾರ್ಕಿನಲ್ಲಿ ಕುಡುಕರ ಹಾವಳಿ.
Posted On: 22 Jun 2020, 07:59 PM
ಉಡುಪಿ, ಜೂ.22; ವಾಯು ವಿಹಾರ ತಾಣ ಅಜ್ಜರಕಾಡು ಹುತಾತ್ಮ ಸೈನಿಕರ ಸ್ಮಾರಕದ ಬಳಿ, ಕುಡುಕರು ಅಲ್ಲಲ್ಲಿ ಎಸೆದಿರುವ ಸಾವಿರಾರು ಮದ್ಯದ ಬಾಟಲಿಗಳನ್ನು ತೆರವುಗೊಳಿಸಲು ಜಿಲ್ಲಾ ನಾಗರಿಕ ಸಮಿತಿ ಹಾಗೂ ಸ್ವಚ್ಚ ಭಾರತ್ ಪ್ರೇಂಡ್ಸ್ ಇವರು ಸ್ವಚ್ಚತಾ ಕಾರ್ಯಕ್ರಮವನ್ನು ಸೋಮವಾರ ನಡೆಸಿದರು. ಜಂಟಿ ಸಮಿತಿಯ ಕಾರ್ಯಕರ್ತರು ಸುರಿಯುವ ಮಳೆಯಲ್ಲಿಯೇ ಬಾಟಲಿಗಳ ಒಟ್ಟುಗೂಡಿಸಿ ಆಯಾಕಟ್ಟಿನ ಸ್ಥಳಗಳಲ್ಲಿ ಸಂಗ್ರಹಿಸಿ ಇಟ್ಟಿದ್ದಾರೆ. ವಿಲೇವಾರಿಗೊಳಿಸಲು ಸಂಬಂಧಪಟ್ಟವರಿಗೆ ತಿಳಿಸಿಟ್ಟಿದ್ದಾರೆ. ಸ್ವಚ್ಚತಾ ಸೇವಾಕಾರ್ಯದಲ್ಲಿ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಸಹಸಂಚಾಲಕ ತಾರಾನಾಥ್ ಮೇಸ್ತ ಶಿರೂರು, ಹಾಗೂ ಸ್ವಚ್ಚ ಭಾರತ ಪ್ರೇಂಡ್ಸ್ ಸಂಯೋಜಕ ರಾಘವೇಂದ್ರ ಪ್ರಭು, ಕರ್ವಾಲು, ಜೇಸಿ ಉಡುಪಿ ಸಿಟಿ ಪೂರ್ವಾದ್ಯಕ್ಷ ಜಗದೀಶ್ ಶೆಟ್ಟಿ , ಉದಯ ನಾಯ್ಕ ಪಾಲ್ಗೊಂಡಿದ್ದರು. ಅಜ್ಜರಕಾಡು ಭುಜಂಗ ಪಾರ್ಕ್ ಇದೊಂದು ನಗರದ ಏಕೈಕ ವಾಯುವಿಹಾರ ತಾಣ. ಇಲ್ಲಿಗೆ ಹಿರಿಯ ನಾಗರಿಕರು, ಚಿಕ್ಕ ಮಕ್ಕಳು, ವಾಯು ವಿಹಾರಿಗಳು ಬರುತ್ತಾರೆ. ಇಲ್ಲಿ ಕುಡುಕುರ ಹಾವಳಿಯಿಂದಾಗಿ ಸಾರ್ವಜನಿಕರು ಭಯಪಡಬೇಕಾದ ಪರಿಸ್ಥಿತಿ ಎದುರಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆಗೆ ಅವಕಾಶ ಇಲ್ಲದಿದ್ದರೂ ಇಲ್ಲಿ ಕಾನೂನಿಗೆ ವಿರುದ್ಧವಾಗಿ ರಾತ್ರಿಯ ಹೊತ್ತಿನಲ್ಲಿ ಮದ್ಯಗೋಷ್ಠಿಗಳು ನಡೆಯುತ್ತಿವೆ. ಹುತಾತ್ಮ ಸೈನಿಕರ ಸ್ಮಾರಕದ ವಠಾರದಲ್ಲಿ ಇಂತಹ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವುದು ಮಹಾ ಅಪರಾಧವಾಗಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಬೇಸರ ವ್ಯಕ್ತವಾಗಿದೆ. ನಗರಡಾಳಿತ ಜಿಲ್ಲಾಡಳಿತವು ಅಜ್ಜರಕಾಡು ಪಾರ್ಕಿಗೆ ಕಾವಲುಗಾರನ ವ್ಯವಸ್ಥೆ, ಪೊಲೀಸ್ ಗಸ್ತು, ಬೆಳಕಿನ ವ್ಯವಸ್ಥೆಗಳೊಂದಿಗೆ ಇಲ್ಲಿಗೆ ಬರುವ ಸಾರ್ವಜನಿಕರಿಗೆ ಸುರಕ್ಷೆ ಒದಗಿಸಬೇಕೆಂದು ಜಂಟಿ ಸಂಘಟನೆಯ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಕುಂಜಾರುಗಿರಿ ಪಾಜಕದ ಸಮೀಪ ಇರುವ ಹನುಮ,ಭೀಮ ಮತ್ತು ಮಧ್ವರ ಶಿಲೆ...
Posted On: 22 Jun 2020, 02:38 PM
ಮೇಲೆ 'ಹನುಮ' ಮಧ್ಯೆ 'ಭೀಮ' ಕೆಳಗೆ 'ಮಧ್ವ'. ಈ ಯಾದಿಯಲ್ಲಿ ಮಧ್ವಾಚಾರ್ಯರ ಅವತಾರ ಮೂರನೇಯದ್ದು . ಹನುಮಂತ , ಭೀಮ , ಮಧ್ವರು ಎಂಬುದು ಉಡುಪಿ ಮತ್ತು ಮಧ್ವಾನುಯಾಯಿಗಳ ಅನುಸಂಧಾನ . ತುಳು ಮಣ್ಣಿನಲ್ಲಿ ಅಂಕುರಿಸಿದ " ದ್ವೈತ " ತುಳು ಸಂಸ್ಕೃತಿಯ ಬುನಾದಿ , ನಂಬಿಕೆ - ನಡವಳಿಕೆಗಳ ಶ್ರದ್ಧೆ , ವೈಚಾರಿಕ ವೈಶಾಲ್ಯತೆಯ ಸಮೃದ್ಧ ನೆಲದಲ್ಲಿ ಅಂಕುರಿಸಿತು "ತತ್ತ್ವವಾದ" , ಅದೇ ಮುಂದೆ "ದ್ವೈತ" ಸಿದ್ಧಾಂತವಾಗಿ ಪ್ರಸಿದ್ಧವಾಯಿತು . ಮೂರನೇ ಆಚಾರ್ಯರಾಗಿ ಭಾರತೀಯ ಅಧ್ಯಾತ್ಮಕ್ಕೆ ತುಳುನಾಡಿನ ಕೊಡುಗೆಯಾದರು ಆಚಾರ್ಯ ಮಧ್ವರು .ಪೂರ್ಣಪ್ರಜ್ಞ , ಆನಂದ ತೀರ್ಥರೆಂದೂ ಮಾನ್ಯರು . ವೈವಿಧ್ಯಮಯ ಆಚಾರ - ವಿಚಾರಗಳು , ಶ್ರದ್ಧೆ - ನಂಬಿಕೆಗಳು , ನಾಗ - ಬೂತ ಆರಾಧನಾ ವಿಧಾನಗಳು ಸರಳ - ಮುಗ್ಧ ವಿಧಿಯಾಚರಣೆಗಳು , ಕೃಷಿ - ಮೀನುಗಾರಿಕೆ - ಮೂರ್ತೆ ಆಧರಿತ ಬದುಕುಗಳು ಪಡಿಮೂಡಿದ್ದ ತುಳುವ ಮಣ್ಣಿನಲ್ಲಿ ಆಚಾರ್ಯರು ಜನಿಸಿದರು.ಈ ಸಾಂಸ್ಕೃತಿಕ ಹಿನ್ನೆಲೆಯಿಂದಲೇ ಪ್ರೇರಿತರಾಗಿ ಪರಮಾರ್ಥ ಪರಿವ್ರಾಜಕರೆನಿಸಿದರು . ತೌಳವದ ಎಲ್ಲ ಧಾರ್ಮಿಕ - ಸಾಂಸ್ಕೃತಿಕ ವೈವಿಧ್ಯಗಳನ್ನು ಉಡುಪಿಯ ಶ್ರೀ ಕೃಷ್ಣ ಮಠದ ಪೂಜಾ ವಿಧಾನಗಳಲ್ಲಿ ಅಳವಡಿಸಿಕೊಂಡು ಆಚರಣೆ - ಉತ್ಸವ ಪರ್ವಗಳಲ್ಲಿ ಮತ್ತೆ ವಿಜೃಂಭಿಸುವಂತೆ ಮಾಡಿದ ಆಚಾರ್ಯರು ವೈದಿಕದ ಪರಮೋಚ್ಚ ಸ್ವೀಕಾರದಲ್ಲೂ ತುಳು ಮಣ್ಣಿನ ತನ್ನ ಮೂಲವನ್ನು ಮರೆಯದೆ ಒಂದು ಬಹು ಆಯಾಮದ ಧಾರ್ಮಿಕ ಕ್ಷೇತ್ರ ವಾಗಿ ಸಾಂಸ್ಕೃತಿಕ ಕೇಂದ್ರವಾಗಿ ಉಡುಪಿಯನ್ನು ಸಿದ್ಧಗೊಳಿಸಿದರು .ಬಹುಶಃ ಇದೇ , ಧಾರ್ಮಿಕ ಬಹುತ್ವ ಕಾರಣವಾಗಿ , ಉಡುಪಿ ದೇಶದ ಭೂಪಟದಲ್ಲಿ , ವಿಶ್ವದಲ್ಲಿ ಗುರುತಿಸಲ್ಪಟ್ಟಿತು . ತುಳುವರ ಹೆಚ್ಚುಗಾರಿಕೆ , ಬದುಕಿನ ವಿಧಾನದಲ್ಲಿ , ಭಾಷೆಯ ಮಾಧುರ್ಯದಲ್ಲಿ , ಮಣ್ಣಿನ ಅತಿಶಯತೆಯಲ್ಲಿದೆ . ಈ ಎಲ್ಲವನ್ನೂ ನಾವಿಂದು ಉಡುಪಿಯಲ್ಲಿ , ಶ್ರೀ ಕೃಷ್ಣ ಮಠದ ಮಹೋತ್ಸವಗಳಲ್ಲಿ ,ರಥ ಬೀದಿಯಲ್ಲಿ ಕಾಣಬಹುದು . ಸುಂದರ ಮಂದಿರಗಳ ನಗರ ಉಡುಪಿ ಆಚಾರ್ಯ ಮಧ್ವರು ವೇದಾಂತ ಸಾಮ್ರಾಜ್ಯವನ್ನು ಆಳಿದ ಮಂಗಳ ಭೂಮಿ , ಶ್ರೀ ಕೃಷ್ಣ ಪ್ರತಿಷ್ಠೆಯಿಂದ ಪರಿಪೂರ್ಣ ಕ್ಷೇತ್ರವಾಯಿತು . ಅಷ್ಟ ಯತಿಗಳನ್ನು ಶಿಷ್ಯರನ್ನಾಗಿ ಸ್ವೀಕರಿಸಿ ಸರದಿಯಲ್ಲಿ ಶ್ರೀ ಕೃಷ್ಣನ ಪೂಜೆಗೆ ನೆಲೆಗೊಳಿಸಿದ ಪೂರ್ಣಪ್ರಜ್ಞರು ಎರಡು ತಿಂಗಳ ಅವಧಿಯ ಪರ್ಯಾಯ ಪೂಜಾ ವಿಧಾನ ಆರಂಭಿಸಿದರು . ಈ ಕಾಲಾವಧಿಯನ್ನುಸೋದೆ ಮಠದ ಶ್ರೀ ಮದ್ವಾದಿರಾಜರು ಎರಡು ವರ್ಷಕ್ಕೆ ವಿಸ್ತರಿಸಿ ಪರ್ಯಾಯಕ್ಕೆ ಹೊಸ ಆಯಾಮ ನೀಡಿದರು , ಸಮಷ್ಟಿಯ ಸಹಭಾಗಿತ್ವಕ್ಕೆ ಅವಕಾಶವಾಯಿತು . ನಿತ್ಯೋತ್ಸವದ ನಾಡಿನಲ್ಲಿ ಮತ್ತೊಂದು ಉತ್ಸವ ಸೇರಿ ಕೊಂಡು ಪರ್ಯಾಯೋತ್ಸವವಾಯಿತು, ನಾಡ ಹಬ್ಬವಾಗಿ ಮಾನ್ಯವಾಯಿತು . ತತ್ತ್ವವಾದ ಭಾರತೀಯ ತತ್ತ್ವಜ್ಞಾನದ ಪರಂಪರೆಗೆ ಹೊಸ ತಿರುವು ನೀಡಿ ದೇಶದಾದ್ಯಂತದ ವಿದ್ವಾಂಸರನ್ನು ನಿಬ್ಬೆರಗುಗೊಳಿಸಿ ಹೊಸ ಚರ್ಚೆಗೆ ನಾಂದಿ ಹಾಡಿದ ಶ್ರೀ ಮಧ್ವಾಚಾರ್ಯರ ವಿಚಾರಧಾರೆ "ತತ್ತ್ವವಾದ". ವೇದಗಳಿಗೆ ಜೀವಾತ್ಮ - ಪರಮಾತ್ಮಪರವಾದ ವ್ಯಾಖ್ಯಾನ ನೀಡಿದವರಲ್ಲಿ ಮೊದಲಿಗರಾಗಿ , ವೇದ ಪ್ರತಿಪಾದ್ಯವಾದ ಅನೇಕ ಸತ್ಯಗಳ ಪರಿಶೋಧಕರಾಗಿ ಆಚಾರ್ಯ ಮಧ್ವರು ತಾವು ನಡೆಸಿದ ಅಧ್ಯಯನದ ಮೂಲಕ ಕಂಡು ಕೊಂಡ 'ತತ್ತ್ವವಾದ' ಅಂದರೆ 'ದ್ವೈತ' ಸಿದ್ಧಾಂತವನ್ನು ಘೋಷಿಸಿದ್ದು'ಒಡಿಪು' ಅಥವಾ ' ಉಡುಪಿ'ಯಲ್ಲಿ . ಮೂರನೇ ಆಚಾರ್ಯನಾಗಿ ಸನಾತನ ಧರ್ಮಕ್ಕೆ ಸರಳ ಸುಂದರ ಸರ್ವಮಾನ್ಯ , ಸರ್ವಸಮ್ಮತ ವಿವರಣೆ ನೀಡಿದ ಪೂರ್ಣಪ್ರಜ್ಞರು ಲೋಕದೃಷ್ಟಿಯಿಂದ ಕಾಲದ ಅನಿವಾರ್ಯತೆಗೆ ಸ್ಪಂದಿಸಿದವರು .ಹಳೆಯ , ತಿರುಳಿಲ್ಲದ , ಗೊಂದಲಕ್ಕೆ ಕಾರಣವಾಗಬಹುದಾದ ಅನೇಕ ನಂಬಿಕೆಗಳನ್ನು ಸ್ಪಷ್ಟವಾಗಿ ಖಂಡಿಸಿ ,ಅಧ್ಯಾತ್ಮವನ್ನು ಮೂಢನಂಬಿಕೆಗಳ ಜೊತೆಗೆ ಸಮೀಕರಿಸಬಾರದೆಂದು ಪ್ರಚುರಪಡಿಸಿದರು . ಸಮಾಜದ ಯಾವ ವರ್ಗದ ಮೇಲೂ ತಿರಸ್ಕಾರ ಭಾವವಿಲ್ಲ , ಸಮಸ್ತರಿಗೂ ನಿಷ್ಕಳಂಕ ,ನಿಸ್ವಾರ್ಥ ಭಗವತ್ ಸೇವೆಯಿಂದ ಮೋಕ್ಷ ಖಚಿತ . ಮಹಾಪಾಪಿಗಳೂ ಪಶ್ಚಾತ್ತಾಪ ಪಟ್ಟಲ್ಲಿ , ಸನ್ಮಾರ್ಗದಲ್ಲಿ ನಡೆದಲ್ಲಿ ಆತ್ಮೋನ್ನತಿ ಸಾಧ್ಯ ಎಂಬ ಸಂದೇಶವನ್ನು ನೀಡಿದವರು ಮಧ್ವರು . ಸದ್ಗುಣಭರಿತವಾದ ಗುಣ ಹಿರಿತನ ವ್ಯಕ್ತಿಗೆ ಮಾನ್ಯತೆಯನ್ನು ನೀಡುತ್ತದೆ ಗುಣಗಳೇ ಇಲ್ಲದ ಬ್ರಾಹ್ಮಣನೂ ನಿಂದ್ಯನೆ ಎಂಬುದು ಮಧ್ವಾಚಾರ್ಯರ ನಿಲುವು ಆಗಿತ್ತು . ಪ್ರಾಣಿ ಸೇವೆಯೂ ಭಗವಂತನನಿಗೆ ಪ್ರಿಯವಾದುದು ಎಂದು ವಿಶ್ಲೇಷಿಸುತ್ತಿದ್ದ ಆಚಾರ್ಯರು ನಾರಾಯಣನೊಬ್ಬನೆ ಸರ್ವೋತ್ತಮ , ಸ್ವತಂತ್ರನಾದ ಪರದೈವ , ಏಕೋ ದೇವಃ ಎನ್ನುವುದೇ ವೈದಿಕ ವಾಙ್ಮಯದ ಸಾರ ಎಂದು ಪ್ರತಿಪಾದಿಸಿದರು . ಉಡುಪಿಯಲ್ಲಿ ಶ್ರೀ ಕೃಷ್ಣ ಪ್ರತಿಷ್ಠೆಯ ಮೂಲಕ ಭಕ್ತಿ ಸಾಮ್ರಾಜ್ಯಕ್ಕೆ ಭದ್ರ ಬುನಾದಿ ಹಾಕಿದ ಆಚಾರ್ಯರು ಬೆಳೆದದ್ದು ನೆಲದಗಲಕ್ಕೆ , ಮುಗಿಲೆತ್ತರಕ್ಕೆ . ಸುಲಭ ಗ್ರಾಹ್ಯವಾದ ತತ್ವಜ್ಞಾನದ ನಿರೂಪಣೆ , ಸರ್ವ ಸಮಭಾವದ ಉದಾತ್ತ ಧೋರಣೆ , ಜನಪದಕ್ಕೆ ಹತ್ತಿರವಾದ ವಿಚಾರಧಾರೆಗಳಿಂದ ಜನಮಾನಸ ಗೆದ್ದರು . ಪ್ರವೇಶಕ್ಕೆ ಸುಲಭ ಸಾಧ್ಯವಾದ , ವಿಸ್ತೃತ ಹರವುಳ್ಳ , ಸುಂದರ ವೇದಾಂತವು ಆಚಾರ್ಯರ 'ತತ್ತ್ವವಾದ'ವಾಗಿದ್ದರೂ ಸ್ಥಾಪಿತ ಚಿಂತನೆಗಳವರಿಂದ , ವಿದ್ವಾಂಸರಿಂದ ಬಹಳಷ್ಟು ಆಕ್ಷೇಪಗಳಿಗೆ , ಚರ್ಚೆಗೆ ವಸ್ತುವಾಯಿತು . ಆದುದರಿಂದ ವಾದಗಳೇ ಪ್ರಧಾನವಾಯಿತು . ನಿಜ ಅರ್ಥದಲ್ಲಿ ತತ್ತ್ವವಾದ ಮಂಡಿಸಲ್ಪಟ್ಟಿತು .ಹೊಸ ಚಿಂತನೆಯೊಂದನ್ನು ಸ್ಥಾಪಿಸಲು , ಪ್ರಚುರ ಪಡಿಸಲು , ಜನಪ್ರೀತಿ ಸಂಪಾದಿಸಲು ಮಂಡನೆ - ಖಂಡನೆಗಳು ಅನಿವಾರ್ಯ . ಇದು ಮಧ್ವರಿಗೂ ಸಹಜವಾಗಿ ಎದುರಾದ ಸಮಸ್ಯೆ . ಆದರೆ ಎಲ್ಲಾ ವಾದಗಳಿಗೆ ಸಮರ್ಥವಾಗಿ, ಸಮಾಧಾನಕರವಾಗಿ ಉತ್ತರಿಸಿ ದ್ವೈತ ವನ್ನು ಜನಪ್ರಿಯಗೊಳಿಸಿದರು . ಚಾರಿತ್ರಿಕ , ಧಾರ್ಮಿಕ ಸ್ಥಿತ್ಯಂತರ ತನ್ನ ಆಧ್ಯಾತ್ಮಿಕ ಗುರು ಅಚ್ಯುತ ಪ್ರಜ್ಞರಿಗೆ ಅಚ್ಚರಿಯನ್ನುಂಟು ಮಾಡುತ್ತಾ ಬೆಳೆದ ಪೂರ್ಣಪ್ರಜ್ಞರು ಆನಂದ ತೀರ್ಥರಾಗಿ ಮಧ್ವಾಚಾರ್ಯರೆಂದೇ ಪ್ರಸಿದ್ಧರಾದರು .ಸನ್ಯಾಸ ಸ್ವೀಕರಿಸಿ , ಪೂರ್ಣಪ್ರಜ್ಞರಾಗಿ ನಲುವತ್ತೆ ದಿನಗಳಲ್ಲಿ ವಾದವನ್ನು ಎದುರಿಸಿದರು , ಉಡುಪಿಗೆ ಬಂದಿದ್ದ ಆ ವಿದ್ವಾಂಸರನ್ನು ತರ್ಕದಲ್ಲಿ ಸೋಲಿಸಿದರು .ಬಾಲಕ ಯತಿಯ ಅದ್ಭುತ ಪ್ರತಿಭೆಗೆ ಗುರುಗಳಾದ ಅಚ್ಯುತ ಪ್ರಜ್ಞರು ತಲೆದೂಗಿದರು . ಮುಂದೊಂದು ದಿನ ಬುದ್ಧಿಸಾಗರನೆಂಬಾತ ತನ್ನ ಶಿಷ್ಯ ವಾದಿಸಿಂಹನೊಂದಿಗೆ ಅಚ್ಯುತಪ್ರಜ್ಞರ ಮಠಕ್ಕೆ ಆಗಮಿಸಿದ್ದ , ಈ ವಿದ್ವಾಂಸನನ್ನು ಪೂರ್ಣಪ್ರಜ್ಞರು ನಿರುತ್ತರಗೊಳಿಸಿದರು . ಸಂತುಷ್ಟರಾದ ಗುರು ಅಚ್ಯುತ ಪ್ರಜ್ಞರು ವೇದಾಂತ ಸಾಮ್ರಾಜ್ಯಕ್ಕೆ ಪಟ್ಟಾಭಿಷೇಕಗೈದು " ಆನಂದತೀರ್ಥ" ರೆಂದು ಹೆಸರಿಸಿದ್ದು ಸಾರ್ಥಕವಾಯಿತೆಂದು ಸಮಾಧಾನಪಟ್ಟರು . ಮುಂದೆ ಎರಡುಬಾರಿ ಭಾರತದಾದ್ಯಂತ ಸಂಚರಿಸಿ ಹಲವು ವಿದ್ವಾಂಸರನ್ನು , ಚಿಂತಕರನ್ನು ವಾದದಲ್ಲಿ ಮಣಿಸಿದಾಗ ಕೆಲವರು ಶಿಷ್ಯರಾದರು . ಮಧ್ವರು ಅಂತ್ಯದ ದಶಕದವರೆಗೂ ವಾದಗಳನ್ನೆ ಎದುರಿಸಬೇಕಾಯಿತು . ' ತತ್ತ್ವವಾದ ' ವನ್ನು ಸ್ಥಾಪಿಸಿದರು . ಉಡುಪಿಯು ನಿಗಮಾಗಮಗಳು ನಿಗಿನಿಗಿಸುವ ನಿಕೇತನವಾಯಿತು. ನಿಸ್ಪೃಹ ಮನಸ್ಥಿತಿಯಿಂದ ನಿಸ್ಸೀಮ ಚಿಂತಕನೆನಿಸಿ ನೀಲಮೇಘಶ್ಯಾಮನಾದ ಕೃಷ್ಣನನ್ನು ಆರಾಧಿಸುತ್ತಾ ಒಂದು ಸುವ್ಯವಸ್ಥೆಯ ಕ್ಷೇತ್ರವನನ್ನು ಕಟ್ಟಿದರು .ನಿತ್ಯ ಉತ್ಸವದಂತಹ ವೈಭವದ ಭವ್ಯತೆಯನ್ನು ಕಲ್ಪಿಸಿ ದಿವ್ಯವಾದ ಕೃಷ್ಣ ಸಾನ್ನಿಧ್ಯ ಭಕ್ತಜನ ಕೋಟಿಯು ಶ್ರದ್ಧಾ ಕೇಂದ್ರವಾಯಿತು . ಅನ್ನ ಬ್ರಹ್ಮನ ಆರಾಧನೆ ಮುಂತಾದ ಅನೇಕ ಆ ಕಾಲಕ್ಕೆ ನೂತನವಾದ ವ್ಯವಸ್ಥೆಗಳನ್ನು ನೆಲೆಗೊಳಿಸಿ ಮಧ್ವರು ಜನಪದಕ್ಕೆ ಸಮೀಪವಾದರು . ಆದರೂ ಈ ತತ್ತ್ವವಾದಿ ವಾದದೊಳು ಉದ್ಭವಿಸಿದವರು . ಕಾಲ : 13ನೇ ಶತಮಾನ . ಚಾರಿತ್ರಿಕವಾಗಿ ಬದಲಾವಣೆಯ ಕಾಲ . ಧಾರ್ಮಿಕ - ಸಾಂಸ್ಕೃತಿಕ ಸ್ಥಿತ್ಯಂತರಗಳ ಸಂದರ್ಭ . ಅನ್ಯಸಂಸ್ಕೃತಿಗಳು ಧಾರ್ಮಿಕತೆಯನ್ನು ಅಲುಗಾಡಿಸುತ್ತಿದ್ದ ವೇಳೆ . ಆಚಾರ್ಯರು ಕಾಲದ , ಸಂದರ್ಭದ , ಮನೋಧರ್ಮಗಳ ಅನಿವಾರ್ಯತೆಯನ್ನು ಮನಗಂಡು ಕಾರ್ಯ ಸಾಧಿಸಿದರು .ಈ ಮಹಾತ್ಮ ತುಳುವ ತಾಯಿಯ ಮಗ ಎನ್ನುವುದು ನೆನಪಿಸಿಕೊಳ್ಳಲೇಬೇಕು . (ಬರಹ : ಕೆ . ಎಲ್ . ಕುಂಡಂತಾಯ) (ಮದ್ವಾಚಾರ್ಯರ ಕಾಲಿನ ಕೆಳಗಡೆ ಇರುವುದು ಮಣಿಮಂತ ರಾಕ್ಷಸ, ಈ ಫೋಟೋ ಮದ್ವಾಚಾರ್ಯರು ಮಣಿಮಂತ ರಾಕ್ಷಸನನ್ನು ಸಂಹರಿಸಿದ ಸ್ಥಳದಲ್ಲಿರುವ ಏಕಶಿಲೆಯದ್ದಾಗಿದೆ) ಅದರ ಕಥೆಯನ್ನು ಮುಂದಿನ ಭಾಗದಲ್ಲಿ ಬರೆಯಲಾಗುವುದು
ಸಂಕಷ್ಟದಲ್ಲಿರುವ ಜಾನುವಾರಿಗೆ ಮಿಡಿದ ಯುವಕರ ಕಾಯ೯ಕ್ಕೆ ವ್ಯಾಪಕ ಪ್ರಶoಸೆ
Posted On: 21 Jun 2020, 12:29 PM
ಉಡುಪಿ : ಇತ್ತೀಚೆಗೆ ಮಿಯಾರು ಬೋಕ೯ಟ್ಟೆ ಬಳಿ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಜೀವನ್ಮರಣ ಹೋರಾಟದಲ್ಲಿರುವ ಗಬ್ಬದನ ವನ್ನು ರಕ್ಷಿಸಿ ಚಿಕಿತ್ಸೆ ನೀಡುತ್ತಿರುವ ಸ್ಥಳೀಯರಾದ ರಾಜೇಶ್ ಶೆಟ್ಟಿ ಕುಟುಂಬ ಕೊರೋನಾ ವಾರಿಯರ್ಸ್ ಉಡುಪಿ ತoಡ ತಯಾರಿಸಿದ 21 ಭಾಷೆಯ ಅಡಿಯೋ ಕೇಳಿ ಸಹಾಯಕ್ಕೆ ಮನವಿ ಮಾಡಿರುತ್ತಾರೆ ಈ ಸಂದಭ೯ದಲ್ಲಿ ಮಂಗಳೂರಿನ ದೂರಸಂಪಕ೯ ಇಲಾಖೆಯ ಗೋಪಾಲ ಕೃಷ್ಣ ಪ್ರಭು ಜಾನುವಾರಿಗೆ ಬೇಕಾದ ಅಗತ್ಯ ಆಹಾರ ವಸ್ತುಗಳನ್ನು ಅದೇ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿದೇ೯ಶಕ ಡಾII ಸುಬ್ರಮಣ್ಯ ಪ್ರಸಾದ್ ರವರ ಸಹಕಾರ ಚಿಕಿತ್ಸೆಗೆ ಸಹಕರಿಸಿದ್ದಾರೆ.ಮಾಜಿ ಸಹಾಯಕ ತಹಶೀಲ್ದಾರ್ ಮಾತ೯ಮ್ಮ ರವರ ತೋಟದ ಹಟ್ಟಿಯಲ್ಲಿ ಈ ದನದ ಶುಶ್ರೂಷೆ ನಡೆಯುತ್ತಿದೆ.ಈ ಕಾಯ೯ಕ್ಕೆ ಪ್ರಸಾದ್ ಶೆಟ್ಟಿ, ರಮೇಶ್, ಸಂದೀಪ್ ಹೆಗ್ಡೆ ಸಹಕರಿಸುತ್ತಿದ್ದಾರೆ. ಇದೀಗ ದನದ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ. ಕರೋನಾ ವಾರಿಯರ್ಸ್ ತಂಡದ ದೀಪಕ್, ರಾಘವೇಂದ್ರ ಕವಾ೯ಲು ಸಹಕರಿಸಿದರು. ಸಂಕಷ್ಟದಲ್ಲಿರುವ ಜಾನುವಾರಿಗೆ ಮಿಡಿದ ಈ ಯುವಕರ ಕಾಯ೯ಕ್ಕೆ ವ್ಯಾಪಕ ಪ್ರಶoಸೆ ವ್ಯಕ್ತವಾಗಿದೆ.
ಹುತಾತ್ಮ ಯೋಧರ ಬಲಿದಾನ ವ್ಯರ್ಥವಾಗಬಾರದು: ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ
Posted On: 20 Jun 2020, 02:55 PM
ಕಾಪು, 20.ಜೂನ್ : ಭಾರತಾಂಬೆಯ ಗಡಿ ರಕ್ಷಣೆಯಲ್ಲಿ ಕಾರ್ಯನಿರತರಾಗಿದ್ದ ಭಾರತೀಯ ಸೈನಿಕರು ಇತ್ತೀಚೆಗೆ ಕುತಂತ್ರಿ ಚೀನೀ ಸೈನಿಕರಿಂದ ಹತರಾಗಿರುವುದು ಅತ್ಯಂತ ಖೇದಕರ ಮತ್ತು ಖಂಡನೀಯ. ಚೀನೀ ಸೈನಿಕರು ಎಲ್ಲ ಗಡಿ ನಿಯಮ, ನಿರ್ಬಂಧಗಳನ್ನು ಉಲ್ಲಂಘಿಸಿ ಭಾರತದ ಸೈನಿಕರನ್ನು ಹತ್ಯೆಗೈದಿರಿವುದು ಮತ್ತು ದೇಶದ ಗಡಿಯಲ್ಲಿ ಉದ್ವಿಘ್ನತೆ ಹೆಚ್ಚುತ್ತಿರುವುದು ಸರ್ಕಾರದ ಆಡಳಿತ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ದೇಶಕ್ಕಾಗಿ ಪ್ರಾಣಾರ್ಪಣೆಗೈದ ವೀರ ಯೋಧರಿಗೆ ನಮ್ಮ ಭಾವಪೂರ್ಣ ನಮನಗಳು, ಹುತಾತ್ಮರಾದ ವೀರ ಯೋಧರ ಬಲಿದಾನ ವ್ಯರ್ಥವಾಗಬಾರದು, ಹಾಗೂ ಅವರ ಕುಟುಂಬವರ್ಗಕ್ಕೆ ಆತ್ಮಸ್ಥೈರ್ಯ ವನ್ನು, ಶಕ್ತಿಯನ್ನು ನೀಡಬೇಕು ಎಂದು ಹೇಳಿದರು. ಅವರು ಕಾಪು ರಾಜೀವ್ ಭವನದಲ್ಲಿ, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮ ದಲ್ಲಿ ಭಾಗಿಯಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಲಾಕ್ ಅಧ್ಯಕ್ಷರಾದ ನವೀನಚಂದ್ರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರುಗಳಾದ ಕಾಪಿ ದಿವಾಕರ್ ಶೆಟ್ಟಿ, ಕೆ. ಇಬ್ರಾಹಿಂ ಮನಹರ್, ಪ್ರಧಾನ ಕಾರ್ಯದರ್ಶಿ ವೈ. ಸುಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ವಿ.ಅಮೀನ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೇ, ಯುವ ಕಾಂಗ್ರೆಸ್ ಅಧ್ಯಕ್ಷರುಗಳಾದ ಮೆಲ್ವಿನ್ ಡಿಸೋಜ, ಚರಣ್ ವಿಠ್ಠಲ್ ಕುದಿ,ಯು. ಸಿ.ಶೇಕಬ್ಬ,ದಿನೇಶ್ ಕೋಟ್ಯಾನ್,ಅಮೀರ್ ಮೊಹಮ್ಮದ್, ಅಬ್ದುಲ್ ಹಮೀದ್, ನಾಗೇಶ್ ಸುವರ್ಣ, ಕೆ. ಎಚ್. ಉಸ್ಮಾನ್, ಮಹಮ್ಮದ್ ಇಮ್ರಾನ್,ಪ್ರಭಾಕರ ಆಚಾರ್ಯ, ಶಾಂತಲತಾ ಶೆಟ್ಟಿ, ಸೌಮ್ಯಾ ಎಸ್., ಅಶ್ವಿನಿ.ಎನ್., ಸುನಿಲ್ ಬಂಗೇರ, ಪ್ರಶಾಂತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಕಾಪುವಿನಲ್ಲಿ ಮೀನು ಮಾರುತ್ತಿದ್ದ ವೃದ್ಧೆಯ ಕಾಲಿನ ಸಮಸ್ಯೆಗೆ ನೆರವಾಗುವಿರಾ?
Posted On: 20 Jun 2020, 01:34 PM
ಹಾಸಿಗೆ ಹಿಡಿದು ನಡೆದಾಡಲು ಹಂಬಲಿಸುವ ವೃದ್ಧೆಗೆ ನೆರವಾಗುವಿರಾ? ಬ್ರಹ್ಮಾವರ.20,ಜೂನ್ : ಗಂಗು ಕಾಂಚನ್ ಉಡುಪಿ ಜಿಲ್ಲೆಯ ಮಲ್ಪೆ ಸಮೀಪ ವಾಸವಿದ್ದು, ಮೀನಿನ ಬುಟ್ಟಿ ಹೊತ್ತು ಮನೆ ಮನೆ ಸಾಗಿ ದಿನದ ಖರ್ಚಿನ ಹಣ ಸರಿದೂಗಿಸುತ್ತಿದ್ದವರು. ಕಾಪು ಭಾಗದಲ್ಲಿ ಕೂಡಾ ಮೀನು ಮಾರಲು ಮೀನಿನ ಬುಟ್ಟಿ ಹೊತ್ತು ಬರುತ್ತಿದ್ದರು ದುರಾದೃಷ್ಟವಶಾತ್ ಕೆಲವು ವರ್ಷಗಳಿಂದ ನಡೆದಾಡುವ ಕಾಲಿನ ಕೀಲು ಸಮಸ್ಯೆಯಿಂದ ಎದ್ದು ನಿಲ್ಲಲೂ ಸಾಧ್ಯವಾಗದೆ ಜೊತೆಗೆ ದುಡಿಮೆಯೂ ಇಲ್ಲದೆ, ಅತ್ತ ಪೋಷಕರೂ ಇರದೆ ಕಂಗಾಲಾಗಿದ್ದರು. ಇವರ ದಯನೀಯ ಪರಿಸ್ಥಿತಿಯನ್ನು ಮನಗಂಡ ಬ್ರಹ್ಮಾವರ ' ಅಪ್ಪ-ಅಮ್ಮ ಅನಾಥಾಲಯ'ದ ಸಂಚಾಲಕ ಪ್ರಶಾಂತ್ ಪೂಜಾರಿ ತಮ್ಮ ಆಶ್ರಮಕ್ಕೆ ಕರೆದುಕೊಂಡು ಹೋಗಿ ರಕ್ಷಣೆ ನೀಡಿದ್ದಾರೆ. ಇವರನ್ನು ವಿವಿದ ಆಸ್ಪತ್ರೆಗಳಲ್ಲಿ ಪರೀಕ್ಷಿಸಲಾಗಿದ್ದು, ಚಿಕಿತ್ಸೆಗೆ ಸುಮಾರು ಒಂದು ಲಕ್ಷ ರೂಪಾಯಿಗಿಂತಲೂ ಹೆಚ್ಚಿನ ಖರ್ಚು ಮಾಡಬೇಕಿದೆ. ಅಜ್ಜಿಗೆ ಒಂದು ಕಡೆ ದೈಹಿಕ ನೋವು. ಇನ್ನೊಂದು ಕಡೆ ಕಾಲುಗಳನ್ನು ಕಳೆದುಕೊಳ್ಳುವ ಆತಂಕ. ಹೀಗಾಗಿ ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಪ್ರಶಾಂತ್ ಪೂಜಾರಿಯವರು ತಮ್ಮ ಆಶ್ರಮದಲ್ಲಿ 21 ಮಂದಿ ನಿರ್ಗತಿಕರನ್ನು ಜೊತೆಯಾಗಿ ಇರಿಸಿಕೊಂಡು ಎಲ್ಲಾ ರೀತಿಯ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸುತ್ತಿದ್ದಾರೆ. ದಾನಿಗಳ ನೆರವು ಸಿಕ್ಕಲ್ಲಿ ಅಜ್ಜಿಯನ್ನು ಸ್ವಂತ ಕಾಲಿನಲ್ಲಿ ನಿಲ್ಲಿಸುವ ತವಕವೂ ಅವರಲ್ಲಿದೆ. ಸಹೃದಯಿ ಬಂಧುಗಳು , ಸಂಘಸಂಸ್ಥೆಗಳು ತಮ್ಮಿಂದ ಸಾಧ್ಯವಾದಷ್ಟು ನೆರವನ್ನು ನೀಡಿ ಸಹಕರಿಸಿ ಗಿರಿಜಾ ಕೃಷ್ಣ ಪೂಜಾರಿ ಚಾರಿಟೇಬಲ್ ಟ್ರಸ್ಟ್ (ರಿ.) ಕೂರಾಡಿ. ಅಪ್ಪ-ಅಮ್ಮ ಅನಾಥಾಲಯ ಬ್ರಹ್ಮಾವರ (ಉಚಿತ ಸೇವೆ) ಸಂಚಾಲಕರು- ಪ್ರಶಾಂತ್ ಪೂಜಾರಿ ಕೂರಾಡಿ. ಗಿರಿಜಾ ಕೃಷ್ಣ ಪೂಜಾರಿ ಚಾರಿಟೇಬಲ್ ಟ್ರಸ್ಟ್ (ರಿ). ಕೂರಾಡಿ ಅಪ್ಪ ಅಮ್ಮ- ಅನಾಥಾಲಯ(ಉಚಿತ ಸೇವೆ) :9164765898,9986111989 ಆಶ್ರಮಕ್ಕೆ ದೇಣಿಗೆ ಅಥವಾ ಧನ ಸಹಾಯ ನೀಡಲು ಇಚ್ಚಿಸುವವರು ನೇರವಾಗಿ ಆಶ್ರಮಕ್ಕೆ ಬೇಟಿ ನೀಡಿ ಅಥವಾ ಬ್ಯಾಂಕ್ ನ ಖಾತೆ ಗಿರಿಜಾ ಕೃಷ್ಣ ಪೂಜಾರಿ ಚಾರಿಟೇಬಲ್ ಟ್ರಸ್ಟ (ರಿ.)ಕೂರಾಡಿ 1 ಕರ್ನಾಟಕ ಬ್ಯಾಂಕ್ ಉಪ್ಪಿನಕೋಟೆ A/c no.7172000100017301 IFSC Code: KARB0000717 2 ಕೆನರಾ ಬ್ಯಾಂಕ್ ಕುರಾಡಿ A/c No.02103070000145, IFSC CODE:SYNB0000210 ಸಂಖ್ಯೆಗೆ ಜಮಾ ಮಾಡಬಹುದಾಗಿದೆ. Google pay & Phone pay.9164765898
