Updated News From Kaup
ಅಪೂರ್ವ ಸಾಧಕ, ಯುವ ಕಲಾವಿದ ಕಾಪು ಕ್ಷೇತ್ರದ ಮಹೇಶ್ ಮರ್ಣೆ
Posted On: 02 Jul 2020, 07:18 PM
ಆಧುನಿಕ ಜಗತ್ತಿನಲ್ಲಿ ಚಿತ್ರಕಲೆ, ಶಿಲ್ಪಕಲೆಗಳು ವೈವಿಧ್ಯಪೂರ್ಣವಾಗಿ ರೂಪುಗೊಂಡು ಕಲಾರಸಿಕರಿಗೆ ಪ್ರಭಾವ ಬೀರುತ್ತ ಬಂದಿದೆ. ಒಬ್ಬ ಶಿಲ್ಪಿ ತನ್ನ ಅಪೂರ್ವ ಜಾಣ್ಮೆಯಿಂದ ಎಂತಹ ಕಲ್ಲನ್ನು ಕೂಡ ಮೂರ್ತಿಯನ್ನಾಗಿ ಮಾಡಬಲ್ಲನು. ಅಲ್ಲದೆ ತನ್ನ ಕ್ರಿಯಾಶೀಲತೆಯಿಂದ ಯಾವ ವಸ್ತುವಿನಲ್ಲಿಯೂ ಕೂಡ ಕಲಾ ದೇವತೆಯನ್ನು ಪ್ರತಿಷ್ಠಾಪನೆ ಮಾಡಬಲ್ಲನು, ಇಂತಹ ನೂರಾರು ಜನ ಹಿರಿಯ ಕಲಾವಿದರು ನಮ್ಮ ನಾಡಿನಲ್ಲಿದ್ದಾರೆ. ಈ ಹಿರಿಯ ಕಲಾವಿದರಿಗೆ ಸರಿಸಾಟಿ ಎಂಬಂತೆ ಉಡುಪಿಯ ಉದಯೋನ್ಮುಖ ಯುವ ಕಲಾವಿದರಲ್ಲಿ ಮಹೇಶ್ ಮರ್ಣೆ ಓಬ್ಬರು. ಉಡುಪಿಯಿಂದ ಸುಮಾರು ಇಪ್ಪತ್ತು ಕಿಲೋಮೀಟರ್ ದೂರದಲ್ಲಿರುವ ಮರ್ಣೆ ಗ್ರಾಮದಲ್ಲಿ 1984 ರಲ್ಲಿ ಜನಿಸಿದ ಮಹೇಶ್ ಗೆ ಶಿಲ್ಪ ಕೆತ್ತನೆಯ ಹವ್ಯಾಸ ಹುಟ್ಟಿಕೊಂಡಿತ್ತು. ಮರ್ಣೆ ಶ್ರೀಧರಾಚಾರ್ಯ ಮತ್ತು ಲಲಿತಾ ದಂಪತಿಗಳಿಗೆ ಪುತ್ರರಾಗಿರುವ ಇವರು ಉನ್ನತ ವ್ಯಾಸಂಗ ಮಾಡಲು ಇಷ್ಟವಿದ್ದರೂ ಮನೆಯ ಆರ್ಥಿಕ ಪರಿಸ್ಥಿತಿಯಿಂದ ಅದನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಆದರೆ ತನ್ನ ಇಷ್ಟದ ಹವ್ಯಾಸವನ್ನು ವೃತ್ತಿಯನ್ನಾಗಿ ಸ್ವೀಕರಿಸಿ ಆ ವೃತ್ತಿಯಲ್ಲಿರುವ ಕಲಾವಂತಿಕೆಯನ್ನು ನಾಡಿನ ಜನರಿಗೆ ಉಣಬಡಿಸುತ್ತಾರೆ. ಮಹೇಶ್ ಮರ್ಣೆಯಲ್ಲಿರುವ ಕಲಾವಿದ ಶಿಲ್ಪಿ ಉನ್ನತ ರೂಪ ಪಡೆದಿದ್ದು, ಖ್ಯಾತ ಶಿಲ್ಪಿ ಗುಣವಂತೇಶ್ವರ ಭಟ್ ಅವರ ಮಾರ್ಗದರ್ಶನದಲ್ಲಿ ಬೆಳೆದ ಅವರು ಶಿಲ್ಪಕಲೆಯಲ್ಲಿ ಪರಿಪಕ್ವತೆಯನ್ನು ಸಾಧಿಸುತ್ತಾ ಹೋದರು, ಸಹೋದರರಾದ ಸಂತೋಷ್ ಮತ್ತು ಉಮೇಶ್ ರವರ ಪ್ರೋತ್ಸಾಹದೊಂದಿಗೆ ಶಿಲ್ಪಕಲಾ ತರಬೇತಿಯನ್ನು ಪೂರ್ಣಗೊಳಿಸಿದರು. ಪ್ರತಿಭಾವಂತ ಕಲಾವಿದ ಗೋಪಾಡ್ಕರ್ ರವರ ಪರಿಚಯವಾದ ನಂತರ ಅವರಲ್ಲಿ ತನ್ನ ಕಲಾಸೇವೆಯನ್ನು ಮುಂದುವರಿಸಿದ ಮಹೇಶ್ ರವರು ಈವರೆಗೆ ಸಾವಿರಾರು ಕಾಷ್ಟ ಹಾಗೂ ಶಿಲೆಗಳಿಂದ ಶಿಲ್ಪವನ್ನು ರಚಿಸಿರುತ್ತಾರೆ. ಥರ್ಮೋಫೋಮ್ ನಲ್ಲಿ 10 ಅಡಿ ಎತ್ತರದ ಸುಂದರ ನಟರಾಜನ ವಿಗ್ರಹ, 7 ಅಡಿ ಎತ್ತರದ ನಟರಾಜನ ವಿಗ್ರಹ, ಥರ್ಮಕೋಲ್ ನಲ್ಲಿ ಮಹಾಗಣಪತಿ ಹಾಗೂ ಮುಂತಾದ ಶಿಲ್ಪಕಲಾಕೃತಿಯನ್ನು ರಚಿಸಿರುತ್ತಾರೆ. ಅಪೂರ್ವ ವೇದಿಕೆ ನಿರ್ಮಾಣ : ಕೇವಲ ಶಿಲ್ಪಕಲೆ ಅಲ್ಲದೆ ಅತ್ಯುತ್ತಮವಾದ ಪಾರಂಪರಿಕ ವೇದಿಕೆ ನಿರ್ಮಾಣದಲ್ಲಿಯೂ ಮಹೇಶ್ ಮರ್ಣೆಯವರು ಎತ್ತಿದ ಕೈ. ತನ್ನ ಅದ್ಭುತ ಕಲಾಕೃತಿಯಿಂದ ಹಲವಾರು ಸುಂದರ ಕಾರ್ಯಕ್ರಮಗಳಲ್ಲಿ ವೇದಿಕೆ ನಿರ್ಮಾಣ ಮಾಡಿದ್ದಾರೆ. ಈ ವೇದಿಕೆಯನ್ನು ನೋಡಿದ ಹಲವಾರು ಜನ ಕಲಾಪ್ರೇಮಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಐಸ್ ಕ್ರೀಮ್ ಕಡ್ಡಿಯಿಂದ ಅರಳಿದ ಗಣಪ : ಪ್ರತಿವರ್ಷ ಗಣೇಶ ಚತುರ್ಥಿ ಸಂದರ್ಭ ಸೃಜನಾತ್ಮಕವಾಗಿ ಗಣಪತಿ ಕಲಾಕೃತಿಯನ್ನು ರಚಿಸಿರುತ್ತಾರೆ. ಈ ಬಾರಿ ಐಸ್ ಕ್ರೀಮ್ ತಿನ್ನಲು ಬಳಸುವ ಕಡ್ಡಿಯನ್ನು ಫೆವಿಕೋಲ್ ಗಮ್ ನಿಂದ ಅಂಟಿಸಿ ದಪ್ಪ ಮಾಡಿಕೊಂಡು ಅದರಿಂದ ಗಣಪತಿಯ ಮುಖ, ಹೊಟ್ಟೆ, ಕೈಕಾಲುಗಳನ್ನು ಕೆತ್ತನೆಯ ಮೂಲಕ ಮೂಡಿಸಿದ್ದಾರೆ. ಕಡ್ಡಿಯನ್ನು ಕ್ರಮವಾಗಿ ಜೋಡಿಸಿ ಪ್ರಭಾವಳಿ, ಗಣಪತಿ ಪೀಠ ರಚಿಸಿದ್ದಾರೆ. ಇದಕ್ಕೆ 3500 ಐಸ್ ಕ್ರೀಮ್ ಕಡ್ಡಿ ಉಪಯೋಗಿಸಲಾಗಿದೆ. ಗಣಪತಿ ಪ್ರಭಾವಳಿ, ಆಭರಣಗಳ ಅಲಂಕಾರಕ್ಕಾಗಿ ಕೆಂಪು ಮತ್ತು ಕಪ್ಪು ಬಣ್ಣದ 750 ಬೆಂಕಿ ಕಡ್ಡಿ ಬಳಸಿದ್ದು, 24 ಇಂಚು ಎತ್ತರ ಮತ್ತು 17 ಇಂಚು ಅಗಲವಿರುವ ಈ ಕಲಾಕೃತಿ 15 ದಿನಗಳ ಕಠಿಣ ಪರಿಶ್ರಮದಿಂದ ರೂಪುಗೊಂಡಿದೆ ಎಂದು ಅವರು ಹೇಳುತ್ತಾರೆ. ಈ ಹಿಂದೆ ಬಾಟಲಿಯೊಳಗೆ ಗಣಪತಿ, ತರಕಾರಿಯಲ್ಲಿ ಗಣಪತಿ, ಸೀಮೆಸುಣ್ಣದಲ್ಲಿ ಗಣಪತಿಯ ಕಲಾಕೃತಿಯನ್ನು ರಚಿಸಿದ್ದಾರೆ. ಈಗಾಗಲೇ ಹತ್ತಾರು ಕಡೆಗಳಲ್ಲಿ ಇವರ ಸಾಧನೆಯನ್ನು ಗಮನಿಸಿ ಸನ್ಮಾನ ದೊರಕಿದೆ. ಈ ಕಲಾವಿದನ ಸರಿಯಾದ ಮಾರ್ಗದರ್ಶನ, ಪ್ರೋತ್ಸಾಹ ನೀಡಿದಲ್ಲಿ ರಾಷ್ಟ್ರಮಟ್ಟದಲ್ಲಿ ಕಲಾವಿದನಾಗುವಲ್ಲಿ ಸಂದೇಹವಿಲ್ಲ. ತನ್ನ ಎಲ್ಲಾ ಬಗೆಯ ಕಲಾಪ್ರಕಾರಗಳಲ್ಲಿ ಸಾಧನೆಯನ್ನು ಮಾಡಿ ಹವ್ಯಾಸ ಮತ್ತು ಉದ್ಯೋಗದಲ್ಲಿ ಹೊಸ ಪರಿಕಲ್ಪನೆಯನ್ನು ತಂದ ಮಹೇಶ್ ಮರ್ಣೆ ಅಭಿನಂದಾರ್ಹರು, ಅವರು ಈ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆಯನ್ನು ಮಾಡಲಿ ಎಂಬುದು ನಮ್ಮ ಶುಭಾ ಹಾರೈಕೆ. ಬರಹ : ರಾಘವೇಂದ್ರ ಪ್ರಭು ಕರ್ವಾಲು..
ಕೋವಿಡ್ ಸಮಯದಲ್ಲಿ ವೈದ್ಯರನ್ನು ನೋಡುವ ದೃಷ್ಠಿಕೋನ ಬದಲಾಗಿದೆ - ಡಾ!! ಉಮೇಶ್ ಪ್ರಭು
Posted On: 01 Jul 2020, 10:43 PM
ಉಡುಪಿ.01, ಜುಲೈ :- ವೈದ್ಯರು ರೋಗಿಗಳ ಜೀವರಕ್ಷಣಿಗೆ ತಮ್ಮ ವೈಯತ್ತಿಕ ಬದುಕನ್ನು ತ್ಯಾಗ ಮಾಡಿ ಸಮಾಜದ ರಕ್ಷಕರಾಗಿ ಕಾಯ೯ ನಿವ೯ಹಿಸುತ್ತಿದ್ದಾರೆ.ಕೊವಿಡ್ ಸಮಯದಲ್ಲಿ ವೈದ್ಯರನ್ನು ನೋಡುವ ದೃಷ್ಠಿಕೋನ ಬದಲಾಗಿದೆ ಎಂದು ಭಾರತೀಯ ವೈದ್ಯ ಸಂಘ ಕರಾವಳಿ ಶಾಖೆ ಅಧ್ಯಕ್ಷ ಡಾ|| ಉಮೇಶ್ ಪ್ರಭು ಹೇಳಿದರು. ಅವರು ಜುಲೈ 1 ರಂದು ಬಡಗಬೆಟ್ಟು ಸೊಸೈಟಿಯ ಜಗನ್ನಾಥ್ ಸಭಾ ಭವನದಲ್ಲಿ ವೈದ್ಯಕೀಯ ಪ್ರತಿನಿಧಿ ಸಂಘ(ಕೆ.ಎಸ್.ಎಂ ಎಸ್.ಆರ್.ಎ) ಮತ್ತು ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಇದರ ವತಿಯಿಂದ 18ನೇ ವಷ೯ದ ವೈದ್ಯರ ದಿನಾಚರಣೆ ಕಾಯ೯ಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಹೇಳಿದರು. ಕೋವಿಡ್ ನಿಂದ ವೈದ್ಯರು, ವೈದ್ಯಕೀಯ ಸಿಬ್ಬ೦ದಿಗಳು ಹಗಲು ರಾತ್ರಿಯೆನ್ನದೆ ಕಾಯ೯ ನಿವ೯ಹಿಸುತ್ತಿರುವುದು ಅಭಿನಂದನೀಯ ಎಂದರು. ಬಡಗಬೆಟ್ಟು ಸೊಸೈಟಿಯ ಪ್ರ.ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ವೈದ್ಯರು ನಿಜವಾದ ಸಮಾಜ ರಕ್ಷಕರು ಅವರ ಸೇವೆ ಅಭಿನಂದನೀಯ ಎಂದರು. ವೇದಿಕೆಯಲ್ಲಿ ವೇಣುಗೋಪಾಲ ಹೆಬ್ಬಾರ್, ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು, ಕಾಯ೯ದಶಿ೯ ಶ್ರೀನಾಥ್ ಕೋಟ, ವೈದ್ಯಕೀಯ ಪ್ರತಿನಿಧಿ ಸಂಘದ ಪ್ರ.ಕಾಯ೯ದಶಿ೯ ಪ್ರಸನ್ನ ಕಾರಂತ್, ಪ್ರಕಾಶ್ ಆಚಾರ್ ಉಪಸ್ಥಿತರಿದ್ದರು. ಹಿರಿಯ ಸಾಧಕ ವೈದ್ಯರಾದ ಕುಟುಂಬ ವೈದ್ಯ ಡಾ|| ಡೊನಾಲ್ಡ್ ಸೈಮನ್, ಕೆ.ಎಂ.ಸಿ ಮಣಿಪಾಲ ಇ.ಎನ್.ಟಿ ವಿಭಾಗದ ಡಾII ದೀಪಕ್ ರಂಜನ್ ನಾಯ್ಕ್ ರವರನ್ನು ಗೌರವಿಸಲಾಯಿತು.ಸನ್ಮಾನಿತರು ಶುಭ ಹಾರೈಸಿದರು.ಮಾಧವ ಆಚಾರ್ , ಸುಬ್ರಮಣ್ಯ, ಮೋಹನ್ ಸನ್ಮಾನ ಪತ್ರ ವಾಚಿಸಿದರು.ರಾಘವೇಂದ್ರ ಪ್ರಭು, ಕವಾ೯ಲು ನಿರೂಪಿಸಿದರು. ಮಧುಸೂಧನ್ ಪ್ರಸ್ತಾಪಿಸಿದರು.ಕೋವಿಡ್ ಮಾಗ೯ ಸೂಚಿಯನ್ನು ಅನುಸರಿಸಿ ಕಾಯ೯ಕ್ರಮ ನಡೆಸಲಾಯಿತು.
ಪತ್ರಿಕಾ ದಿನಾಚರಣೆಯ ಪ್ರಯುಕ್ತ ಸ್ವಗೃಹದಲ್ಲೇ ಸಮ್ಮಾನಿತರಾದ ಹಿರಿಯ ಪತ್ರಕರ್ತ ಕಿರಣ್ ಮಂಜನಬೈಲು
Posted On: 01 Jul 2020, 08:46 PM
ದಿನದ ಪ್ರಯುಕ್ತ ಸುಮಾರು 25 ವರ್ಷಗಳ ಕಾಲ ಪತ್ರಕರ್ತರಾಗಿ ಹಲವಾರು ಸಾಧನೆಗಳನ್ನು ಮಾಡಿರುವ ಹಿರಿಯ ಪತ್ರಕರ್ತರಾದ ಕಿರಣ್ ಮಂಜನಬೈಲು ಅವರನ್ನು ಜುಲೈ 1 ರಂದು ಸ್ವಚ್ಛ ಭಾರತ್ ಫ್ರೆಂಡ್ಸ್ ಮತ್ತು ಜೇಸಿಐ ಉಡುಪಿ ಸಿಟಿ ವತಿಯಿಂದ ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವಿದ್ಯುನ್ಮಾನ ಪತ್ರಿಕೆಗಳ ಯುಗದಲ್ಲಿಯೂ ಪತ್ರಿಕಾ ಮಾಧ್ಯಮ ಸೃಜನಶೀಲತೆಯನ್ನು ಸೂಕ್ತ ರೀತಿಯಲ್ಲಿ ಅಳವಡಿಸಿಕೊಂಡು ತನ್ನ ಸುಸ್ಥಿರತೆಯನ್ನು ಕಾಯ್ದುಕೊಂಡಿರುವುದು ಶ್ಲಾಘನೀಯ ಬೆಳವಣಿಗೆ. ಕೊರೊನಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಕವಲು ದಾರಿಯಲ್ಲಿದ್ದ ಪತ್ರಿಕೋದ್ಯಮ ಹಲವಾರು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿಕೊಂಡು ಸಮತೋಲನವನ್ನು ಕಾಪಾಡಿಕೊಂಡು ಜನಧ್ವನಿಯನ್ನು ಗಟ್ಟಿಗೊಳಿಸಿ ಸಮಯೋಚಿತವಾಗಿ ಜಾಗೃತಿಯನ್ನು ಮೂಡಿಸುತ್ತಿದೆ. ಪತ್ರಿಕಾ ರಂಗವು ಸಂದರ್ಭಕ್ಕೆ ಅನುಗುಣವಾಗಿ ಸಮಾಜದ ಬೆನ್ನೆಲುಬಾಗಿ ಚಿರಾಯುವಾಗಲಿ ಎಂದು ಆಶಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜನಾರ್ಧನ ಕೊಡವೂರು, ಜಗದೀಶ್ ಶೆಟ್ಟಿ, ಗಣೇಶ್ ಪ್ರಸಾದ್ ಜಿ. ನಾಯಕ್, ರಾಘವೇಂದ್ರ ಪ್ರಭು ಕರ್ವಾಲು, ಉದಯ ನಾಯ್ಕ್ ಮತ್ತು ವೀಕ್ಷಿತ್ ಉಪಸ್ಥಿತರಿದ್ದರು.
ಬ್ಯಾಂಕ್ ನೌಕರಿ ಗಿಟ್ಟಿಸುವ ಈ ಪ್ರತಿಭೆಯ ಕನಸು ನನಸಾಗಲೇ ಇಲ್ಲ
Posted On: 01 Jul 2020, 08:09 PM
ಇವರು ಜೀವನೋತ್ಸಹದ ಗಣಿ ಪ್ರತಿಭೆಯ ಧಣಿ ವಿಕಲಾಂಗತೆಯನ್ನು ಮೆಟ್ಟಿನಿಂತು ಚಿತ್ರಕಲೆಯಲ್ಲಿ ಸಾಧನೆಗೈದ ಸಾಧಕ : ಗಣೇಶ್ ಪಂಜಿಮಾರು -ಮಂಜುನಾಥ ಹಿಲಿಯಾಣ. ಇವರು ಮೂಳೆಯ ತೀವ್ರ ದುರ್ಬಲತೆಯಿಂದ ಬರುವ ಅನುವಂಶೀಯ ಖಾಯಿಲೆ Osteogenesis imperfecta ಎಂಬ ವಿಚಿತ್ರ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿ. ಎತ್ತರ ಕೇವಲ ಮೂರಡಿ ಮಾತ್ರ. ತೂಕ ಇಪ್ಪತ್ಮೂರು ಕಿಲೋ ಗ್ರಾಂ. ಇವರ ಒಡಹುಟ್ಟಿದವರಲ್ಲಿ ನಾಲ್ಕುಮಂದಿಗೆ ಇದೇ ಖಾಯಲೆ. ಇವರ ಸ್ಥಿತಿಯಲ್ಲಿ ಯಾರಿದ್ದರೂ ಹುಟ್ಟಿಸಿದ ಆ ವಿಧಿಯನ್ನು ಹಳಿಯುತ್ತಾ ಜೀವನವನ್ನು ನರಕವನ್ನಾಗಿಸಿಕೊಂಡು ವ್ಯಥೆ ಪಡುತ್ತಾ ಬದುಕನ್ನು ಸವೆಸುತ್ತಿದ್ದರೇನೋ.. ಆದರೆ ನಮ್ಮ ಗಣೇಶ್ ಪಂಜಿಮಾರು ಅವರ ಬದುಕೇ ಒಂದು ಅದ್ಬುತ ಸ್ಪೂರ್ಥಿಯ ಗಾಥೆ..! ಬದುಕಲ್ಲಿ ಸೋತೆ ಎಂದು ವ್ಯಥೆ ಪಟ್ಟುಕೊಳ್ಳುವವರಿಗೆ, ಆತ್ಮಹತ್ಯೆ ಯೋಚನೆ ಮಾಡುವವರಿಗೆ ಜೀವನೋತ್ಸಾಹ ತುಂಬುವ ಸತ್ಯ ಕಥೆ.. ಗಣೇಶ್ ಪಂಜಿಮಾರು ಉಡುಪಿ ಜಿಲ್ಲೆ ಶಿರ್ವ ಬಂಟಕಲ್ಲು ಸಮೀಪದವರು. ದಿವ್ಯಾಂಗರಾಗಿ ಹುಟ್ಟಿದರೂ ಉನ್ನತ ಶಿಕ್ಷಣ ಪಡೆಯಲೇ ಬೇಕು ಎಂಬ ಛಲ ಇವರೊಳಗೆ ಮೂಡಿತು. ಆ ಛಲದ ಫಲಶ್ರುತಿಯಾಗಿಯೇ ಬದುಕಿನ ನೂರು ಸವಾಲು ಸಮಸ್ಯೆಗಳನ್ನು ಮೆಟ್ಟಿನಿಂತು ಶಿರ್ವ ಕಾಲೇಜಿನಲ್ಲಿ ಬಿ.ಕಾಂ ಪದವಿ ಗಿಟ್ಟಿಸಿಕೊಂಡಿದ್ದು ಖಂಡಿತಾ ಸಣ್ಣ ಸಾಧನೆಯೇನಲ್ಲ. ಧಾನಿಯೊಬ್ಬರು ಕೊಡುಗೆಯಾಗಿ ನೀಡಿದ ವಿದ್ಯುತ್ ಚಾಲಿತ ತ್ರಿಚಕ್ರ ಸ್ಕೂಟರಿನಲ್ಲಿ ನಿತ್ಯ ಹತ್ತು ಕಿ,ಮೀ ಕ್ರಮಿಸಿ ಪದವಿ ಗಿಟ್ಟಿಸಿಕೊಂಡ ಛಲಗಾರ. ಓದಿನ ಜೊತೆ ಜೊತೆಯಲ್ಲೆ ಇವರು ಹವ್ಯಾಸವನ್ನಾಗಿ ಬೆಳೆಸಿಕೊಂಡ ಚಿತ್ರಬಿಡಿಸುವ ಕಲೆ ಇವರನ್ನಿಂದು ಪ್ರಸಿದ್ದ ಚಿತ್ರಕಲಾವಿದನನ್ನಾಗಿ ಕರಾವಳಿಯಾದ್ಯಂತ ಪರಿಚಯಿಸಿದೆ. ಧರ್ಮಸ್ಥಳದ ಧರ್ಮದಿಕಾರಿ ವಿರೇಂದ್ರ ಹೆಗ್ಗಡೆ, ಮಾಣಿಲ ಶ್ರೀ, ಉಡುಪಿ ಡಿ.ಸಿ ಜಿ. ಜಗದೀಶ್, ಉದ್ಯಮಿ ಪ್ರಕಾಶ್ ಶೆಟ್ಟಿ ಸೇರಿದಂತೆ ಈ ಸಮಾಜದ ಗಣ್ಯರು, ಸಿನಿಮಾ ನಟ-ನಟಿಯರು ರಾಜಕೀಯ ನಾಯಕರು, ಪ್ರಕೃತಿ, ಪ್ರಾಣಿ ಪಕ್ಷಿ ಎಲ್ಲವೂ ಇವರ ಕಲಾಕುಂಚದಲ್ಲಿ ಚಿತ್ರಿತಗೊಂಡು ನೋಡುಗರ ಹೃನ್ಮನ ಸೂರೆಗೊಳ್ಳುತ್ತದೆ. ಈಗಾಗಲೇ ಇನ್ನೂರಕ್ಕೂ ಮಿಕ್ಕಿ ಅದ್ಬುತ ಎನಿಸುವ ಚಿತ್ರಗಳನ್ನು ರೂಪಿಸಿರುವ ಗಣೇಶ್ ಪಂಜಿಮಾರನ್ನು ಚಿತ್ರಕಲೆಯ ಕೋಲ್ಮಿಂಚು ಎಂದರೆ ಅದು ಅತಿಶಯದ ಮಾತಾಗದು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಹೆಗ್ಗಡೆ, ಉದ್ಯಮಿ ಪ್ರಕಾಶ್ ಶೆಟ್ಟರು ಸೇರಿದಂತೆ ಸಮಾಜದ ಅನೇಕ ಗಣ್ಯರು ಇವರ ಪ್ರತಿಭೆಯನ್ನು ಕೊಂಡಾಡಿ ಹರಸಿದ್ದಾರೆ. ಅಸಂಖ್ಯ ಸನ್ಮಾನಗಳು ಇವರನ್ನರಸಿ ಬಂದಿವೆ.. ಹಲವಾರು ಪತ್ರಿಕೆ ಟಿವಿ ಮಾದ್ಯಮದಲ್ಲಿ ಇವರ ವಿಶೇಷ ಸಾಧನೆಯ ಗಾಥೆ ಬಿತ್ತರವಾಗಿದೆ. ಹಲವು ನಾಟ್ಯಗಳ ಸಂಗ್ರಹ, ಸ್ಟ್ಯಾಂಪ್ ಸಂಗ್ರಹವೂ ಇವರ ಹವ್ಯಾಸದ ಇನ್ನಿತರ ಆಸಕ್ತಿಗಳಾಗಿದೆ. ವಿಕಲಚೇತನಳಾಗಿ ಮಲಗಿದ್ದಲ್ಲೆ ಬದುಕು ಸವೆಸುವ ಇವರ ಸಹೋದರಿ ಕೂಡ ಕಾಗದಗಳ ಪಟ್ಟಿಯಿಂದ ಗೊಂಬೆ ತಯಾರಿಸುವಲ್ಲಿ ನಿಷ್ಣಾತರು. ಗಣೇಶ್ ಪಂಜಿಮಾರು ತನನ್ನು ವಿಕಲಾಂಗಚೇತನನ್ನಾಗಿ ಮಾಡಿದ ಎಂದು ದೇವರನ್ನು ಎಂದೂ ಹಳಿಯುದಿಲ್ಲ. ನನ್ನ ಹಣೆಬರಹ ಎಂದು ವ್ಯಥಿಸುತ್ತಾ ಕೂರುವುದಿಲ್ಲ. ಆ ದೇವರು ಕೊಟ್ಟ ಆಯುಷ್ಯವನ್ನು ಸದ್ವಿನಿಯೋಗ ಮಾಡ್ತೇನೆ.. ಇತರರಿಗೆ ಮಾದರಿಯಾಗಿ ಬದುಕ್ತೇನೆ ಎಂದು ಛಲದಿಂದ ನುಡಿಯುತ್ತಾರೆ.. ಹಾಗೇ ನುಡಿಯುವಾಗ ಅವರ ಕಂಗಳಲ್ಲಿ ಜೀವನೋತ್ಸಾಹದ ಜಲ ಅವರಿಗರಿವಿಲ್ಲದಂತೆ ಜಿನುಗುತ್ತದೆ. ನನಗೊಂದು ಉದ್ಯೋಗ ಕೊಡಿ: ಪ್ರಾಮಾಣಿಕವಾಗಿ ಕೆಲಸ ಮಾಡ್ತೇನೆ ಗಣೇಶ್ ಪಂಜಿಮಾರು ಅವರಿಗೆ ಇದೀಗ ಮೂವತ್ತೊಂದರ ಹರೆಯ. ಅವರು ಪದವಿ ಗಿಟ್ಟಿಸಿಕೊಂಡಿದ್ದೇ ಬ್ಯಾಂಕ್ ಎಕ್ಸಾಮ್ ಅಲ್ಲಿ ಪಾಸಾಗಿ ಬ್ಯಾಂಕ್ ಉದ್ಯೋಗಿ ಆಗಬೇಕು ಎಂಬ ಆಸೆಯಿಂದ. ಕಠಿಣ ಪರಿಶ್ರಮದಿಂದ ಓದಿ ಬ್ಯಾಂಕ್ ಪರೀಕ್ಷೆ ಹಲವು ಬಾರಿ ಕಟ್ಟಿದರೂ ಇದುವರಗೆ ಪಾಸಾಗಿಲ್ಲ. ನನಗಿಂತಲೂ ತ್ರಾಸದಾಯಕವಾಗಿ ಬದುಕುತ್ತಿರುವ ತಂಗಿ, ಮಲ್ಲಿಗೆ ಹೂವುಗಳನ್ನು ಮಾರಿ ತಮ್ಮನ್ನು ಪೋಷಿಸುತ್ತಿರುವ ತಾಯಿ ಇವರಿಗೆ ನಾನು ಆಸರೆಯಾಗಬೇಕು ಅಂದರೆ ನನಗೊಂದು ಉದ್ಯೋಗ ಬೇಕು. ಪದವಿ ಪಡೆದಿರುವ ನನ್ನ ಅರ್ಹತೆಯನ್ನು ಪರಿಗಣಿಸಿ ನನಗೆ ಮಾಡಲು ಸಾದ್ಯವಿರುವ ಕೆಲಸವನ್ನು ಯಾರದರೂ ಕೊಟ್ಟರೆ ಪ್ರಾಮಾಣಿಕನಾಗಿ ಅವರು ಮೆಚ್ಚುವಂತೆ ಕೆಲಸ ಮಾಡುವೆ ಎನ್ನುವಾಗ ಗಣೇಶ್ ಬಾವುಕರಾಗುತ್ತಾರೆ.. ಯಾರದರೂ ಧಾನಿಗಳು ಸಂಘ ಸಂಸ್ಥೆಗಳು ಉದ್ಯೋಗ ಕೊಡಿಸಿಯಾರೇ ಎಂಬ ಆಸೆ ಅವರದ್ದು ಗಣೇಶ್ ಪಂಜಿಮಾರ್ ಆಟ್ಸ್ ಎಂಬ ಯೂ ಟ್ಯೂಬ್ ಚಾನೆಲ್ ಅಲ್ಲಿ ಅವರ ಕಲಾ ವೈಖರಿಯನ್ನು ನೀವು ಗಮನಿಸಬಹುದು. ಗಣೇಶರ ಎಂದೂ ಬತ್ತದ ಉತ್ಸಾಹಕ್ಕೆ, ಗೆರೆ-ಬರೆಗಳ ಚಿತ್ತಾಕರ್ಷದ ಚಿತ್ರಕಲೆಗೆ ಪರಿಶ್ರಮದ ಬದುಕಿಗೆ ತಪ್ಪದೆ ಒಂದು ಹ್ಯಾಟ್ಸಾಪ್ ಹೇಳಿ.. ಸಂಪರ್ಕ ಸಂಖ್ಯೆ- 9880053740 ಗಣೇಶ್ ಪಂಜಿಮಾರು ಎನೆನ್ನುತ್ತಾರೆ?? " ನನಗೆ ಈ ಸಮಾಜದ ಯಾರ ಕರುಣೆ ಬೇಡ..ಅವಕಾಶ ಬೇಕು.. ನಮ್ಮಲ್ಲಿರುವ ನ್ಯೂನತೆಯನ್ನು ಮೆಟ್ಟಿನಿಂತು ಆ ದೇವರು ಕೊಟ್ಟ ಬದುಕನ್ನು ಸಂತೋಷದಿಂದ ಕಳೆಯುವ. ನಾಲ್ಕು ಜನ ಮೆಚ್ಚುವಂತೆ ಆದರ್ಶರಾಗಿ ಬದುಕುವ. ಬದುಕಲ್ಲಿ ಸೋತೆ ಎಂದು ಆತ್ಮಹತ್ಯೆ ಯೋಚನೆ ಮಾಡುವವರು, ಕೆಲಸವಿಲ್ಲವೆಂದು ಮನೆಯಲ್ಲೆ ಕುಳಿತು ಕೊರಗುವವರು ನನ್ನನ್ನೊಮ್ಮೆ ನೋಡಿ.. ನಾನು ಸ್ಪೂರ್ತಿ ತುಂಬುವೆ"
ವೈದ್ಯರ ದಿನಾಚರಣೆ ಪ್ರಯುಕ್ತ ಹಿರಿಯ ವೈದ್ಯ ಅನಂತ ಪದ್ಮನಾಭ ಭಟ್ ಬುಕ್ಕಿಗುಡ್ಡೆಯವರಿಗೆ ಗೌರವಾರ್ಪಣೆ
Posted On: 01 Jul 2020, 01:20 PM
ಉಡುಪಿ :- ವೈಧ್ಯಕೀಯ ಪ್ರತಿನಿಧಿಗಳ ಸಂಘ (ಕೆ.ಎಸ್.ಎಂ ಎಸ್.ಆರ್.ಎ) ಮತ್ತು ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಇದರ ವತಿಯಿಂದ 18ನೇ ವಷ೯ದ ವೈದ್ಯರ ದಿನಾಚರಣೆ ಪ್ರಯುಕ್ತ ಕಳೆದ 50 ವಷ೯ಗಳಿಂದ ವೈದ್ಯಕೀಯ ಸೇವೆ ನೀಡುತ್ತಿರುವ ಹಿರಿಯ ವೈದ್ಯ ಡಾII ಎಂ. ಅನಂತ ಪದ್ಮನಾಭ ಭಟ್ ಬುಕ್ಕಿಗುಡ್ಡೆ ರವರನ್ನು ಜುಲೈ 1 ರಂದು ಗೌರವಿಸಲಾಯಿತು.ಈ ಸಂದಭ೯ದಲ್ಲಿ ಅತಿಥಿಗಳಾಗಿ ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು, ಧನ್ವoತರಿ ಸಂಘದ ಅಧ್ಯಕ್ಷ ಸುಧೀರ್ ಕುಮಾರ್, ವೈದ್ಯಕೀಯ ಪ್ರತಿನಿಧಿ ಸಂಘದ ಅಧ್ಯಕ್ಷ ಅಣ್ಣಯ್ಯ ದಾಸ್, ಕಾಯ೯ದಶಿ೯ ಪ್ರಸನ್ನ ಕಾರಂತ್ , ಮಿಲ್ಟನ್ ಒಲಿವರ್, ವೇಣು ಗೋಪಾಲ ಹೆಬ್ಬಾರ್, ಪ್ರಕಾಶ್ ಆಚಾರ್, ಮಾಧವ ವೈದ್ಯರ ಕುಟುಂಬಸ್ಥರು ಉಪಸ್ಥಿತರಿದ್ದರು.
ಜೆಸಿಐ ಶಂಕರಪುರ ಜಾಸ್ಮಿನ್ ವತಿಯಿಂದ ಆಶಾಕಾರ್ಯಕರ್ತೆಯರಿಗೆ ಸಮ್ಮಾನ
Posted On: 30 Jun 2020, 11:05 PM
ಕೊರೊನ ಎಂಬ ಮಹಾಮಾರಿ ಇಡೀ ದೇಶವನ್ನೇ ನಲುಗಿಸಿ ಅನೇಕ ಸಾವು ನೋವುಗಳಿಗೆ ಸಾಕ್ಷಿ ಆಗಿದೆ. ಮನುಕುಲದ ಇತಿಹಾಸದಲ್ಲಿ ಕಠಿಣ ಪರಿಸ್ಥಿತಿಯ ಈ ಸಮಯದಲ್ಲಿ ಮಾತನಾಡಲು ಭಯಪಡುವ ಸಮಯದಲ್ಲಿ ನಾವಿದ್ದೇವೆ. ಈಗಲೂ ಕೊರೊನ ಮಹಾಮಾರಿಯ ಅಟ್ಟಹಾಸ ಮುಂದುವರಿಯುತ್ತಾ ಇದೆ. ಈ ಕಠಿಣ ಪರಿಸ್ಥಿತಿಯಲ್ಲಿ ಜನರ ನೆರವಿಗೆ ಬಂದು ತಮ್ಮ ಜೀವವನ್ನು ಪಣಕಿಟ್ಟು ಈಗಲೂ ಜನಸೇವೆ ಮಾಡುತ್ತಿರುವವರು ನಮ್ಮ ಆಶಾ ಕಾರ್ಯಕರ್ತರು. ನಿನ್ನೆ ಜೆಸಿಐ ಶಂಕರಪುರ ಜಾಸ್ಮಿನ್ ನ ಜೆಸಿ ಭವನದಲ್ಲಿ ಕುರ್ಕಾಲ್ ಗ್ರಾಮ ಮತ್ತು ಇನ್ನಂಜೆ ಪಾಂಗಾಳ ಗ್ರಾಮದ ಆಶಾ ಕಾರ್ಯಕರ್ತರು ಆದ ಶ್ರೀಮತಿ ಗಾಯತ್ರಿ, ಕಲಾ, ಸುಷ್ಮಾ ಮತ್ತು ರೇಖಾ ಶೆಟ್ಟಿ, ಪುಷ್ಪ ಶೆಟ್ಟಿ, ಸುಜಾತಾ ಭಂಡಾರಿ, ಉಷಾ ಭಟ್ ಇವರನ್ನು ಸಮ್ಮಾನಿಸಲಾಯಿತು. ಜೆಸಿಐ ಶಂಕರಪುರ ಜಾಸ್ಮಿನ್ ವತಿಯಿಂದ ಆಶಾಕಾರ್ಯಕರ್ತೆಯರನ್ನು ಗೌರವಿಸಿ, ಪ್ರಶಂಸೆ ವ್ಯಕ್ತಪಡಿಸಿದರು.
ಉಡುಪಿ ನಗರಾಭಿವೃದಿ ಪ್ರಾಧಿಕಾರ ನೂತನ ಪದಾಧಿಕಾರಿಗಳ ಆಯ್ಕೆ
Posted On: 29 Jun 2020, 08:52 PM
ಉಡುಪಿ. 29, ಜೂನ್ : ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ಇಂದು ಅಧಿಕಾರ ಸ್ವೀಕರಿಸಿದ ಕೆ. ರಾಘವೇಂದ್ರ ಕಿಣಿಯವರನ್ನು ಮತ್ತು ಪ್ರಾಧಿಕಾರದ ನೂತನ ಸದಸ್ಯರನ್ನು ಇಂದು ಆದಿ ಉಡುಪಿಯಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರದ ಕಛೇರಿಯಲ್ಲಿ ಸ್ವಚ್ಛ ಭಾರತ್ ಫ್ರೆಂಡ್ಸ್ ವತಿಯಿಂದ ಅಭಿನಂದಿಸಿ ಶುಭ ಹಾರೈಸಲಾಯಿತು. ಉಡುಪಿಯ ಸರ್ವತೋಮುಖ ಅಭಿವೃದ್ಧಿಯಲ್ಲಿ ಎಲ್ಲರ ಸಹಕಾರ ಮತ್ತು ಸಹಭಾಗಿತ್ವದ ಅವಶ್ಯಕತೆ ಇದೆ ಎಂದು ಈ ಸಂದರ್ಭದಲ್ಲಿ ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದರು. ಜಗದೀಶ್ ಶೆಟ್ಟಿ, ಗಣೇಶ್ ಪ್ರಸಾದ್ ಜಿ. ನಾಯಕ್, ರಾಘವೇಂದ್ರ ಪ್ರಭು ಕರ್ವಾಲು, ಉದಯ ನಾಯ್ಕ್ ಉಪಸ್ಥಿತರಿದ್ದರು.
ರಾಜ್ಯ ಮಟ್ಟದ ಶ್ರೇಷ್ಠ ವೈದ್ಯ ಪ್ರಶಸ್ತಿಗೆ ಡಾ. ಕೆ. ಪ್ರಭಾಕರ ಶೆಟ್ಟಿ ಆಯ್ಕೆ
Posted On: 29 Jun 2020, 01:52 PM
ಕಾಪುವಿನ ಹಿರಿಯ ವೈದ್ಯ ಡಾ. ಕೆ. ಪ್ರಭಾಕರ ಶೆಟ್ಟಿಯವರಿಗೆ ರಾಜ್ಯ ಮಟ್ಟದ ಡಾ. ಬಿ.ಸಿ. ರಾಯ್ ಸ್ಮರಣಾರ್ಥ ಶ್ರೇಷ್ಟ ವೈದ್ಯ ಪ್ರಶಸ್ತಿ ಕಾಪುವಿನ ಹಿರಿಯ ವೈದ್ಯ, ದಂಡತೀರ್ಥ ಸಮೂಹ ವಿದ್ಯಾ ಸಂಸ್ಥೆಗಳ ಗೌರವಾಧ್ಯಕ್ಷ ಡಾ. ಕೆ. ಪ್ರಭಾಕರ ಶೆಟ್ಟಿ ಅವರು ಕರ್ನಾಟಕ ರಾಜ್ಯ ಭಾರತೀಯ ವೈದ್ಯಕೀಯ ಸಂಘ ಬೆಂಗಳೂರು ಇವರು ವೈದ್ಯರ ದಿನಾಚರಣೆಯ ಅಂಗವಾಗಿ ಡಾ. ಬಿ. ಸಿ. ರಾಯ್ ಸ್ಮರಣಾರ್ಥ ಕೊಡಮಾಡುವ ರಾಜ್ಯ ಮಟ್ಟದ ಶ್ರೇಷ್ಟ ವೈದ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಳೆದ ಐದೂವರೆ ದಶಕಗಳಿಂದ ಕಾಪು ಪರಿಸರದಲ್ಲಿ ವೈದ್ಯಕೀಯ ಸೇವೆ ನಡೆಸಿಕೊಂಡು ಬರುತ್ತಿರುವ ಡಾ. ಪ್ರಭಾಕರ ಶೆಟ್ಟಿ ಅವರು ವೈದ್ಯಕೀಯ, ಶೈಕ್ಷಣಿಕ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ನಡೆಸಿಕೊಂಡು ಬರುತ್ತಿರುವ ಜೀವಮಾನದ ಶ್ರೇಷ್ಟ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕಾಪು ಪ್ರಶಾಂತ್ ಹಾಸ್ಪಿಟಲ್ ನ ಸ್ಥಾಪಕರಾಗಿರುವ ಅವರು ಕಾಪು ಸುತ್ತಮುತ್ತಲಿನಲ್ಲಿ ಅತ್ಯಂತ ಹಿರಿಯ ವೈದ್ಯರಾಗಿ ಗ್ರಾಮೀಣ ಜನರ ಪಾಲಿನ ಸಂಜೀವಿನಿಯಾಗಿದ್ದಾರೆ. ಉಳಿಯಾರಗೋಳಿ ದಂಡತೀರ್ಥ ವಿದ್ಯಾ ಸಂಸ್ಥೆಗಳ ಸಂಚಾಲಕರಾಗಿ ಗ್ರಾಮೀಣ ವಿದ್ಯಾರ್ಥಿಗಳ ಪಾಲಿಗೆ ಶೈಕ್ಷಣಿಕ ಸೇವೆಯನ್ನು ಒದಗಿಸಿದ್ದಾರೆ. ವೈದ್ಯಕೀಯ, ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆಗಾಗಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ಅವರು ಹತ್ತಾರು ವಿಶೇಷ ಪ್ರಶಸ್ತಿ - ಗೌರವಗಳಿಗೆ ಪಾತ್ರರಾಗಿದ್ದಾರೆ.
ರೋಟರಿ ಶಂಕರಪುರ ವತಿಯಿಂದ ಇನ್ನಂಜೆಯಲ್ಲಿ ನಾಟಿ ಮಾಡುವುದರ ಮೂಲಕ ರೈತಮಿತ್ರ ಕಾರ್ಯಕ್ರಮ
Posted On: 29 Jun 2020, 01:44 PM
ಇನ್ನಂಜೆ.29, ಜೂನ್ : ರೋಟರಿ ಶಂಕರಪುರ ವತಿಯಿಂದ ಇನ್ನಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಶ್ಮೀರ್ ನೊರೊನ್ನಾ ಇವರ ಗದ್ದೆ ವಹಿಸಿಕೊಂಡು ನಾಟಿ ಮಾಡುವುದರ ಮೂಲಕ ರೈತ ಮಿತ್ರ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮದ ಪ್ರಾಯೋಜಕತ್ವ ವನ್ನು ವಹಿಸಿದ ಶ್ರೀ ನವೀನ್ ಮೋನಿಸ್ ಮತ್ತು ಶ್ರೀ ಅರುಣ್ ನೊರೊನ್ನಾ ಇವರ ಪರವಾಗಿ ನವೀನ್ ಮೋನಿಸ್ ಇವರ ತಾಯಿಯಾದ ತೆರೆಜಾ ಮೋನಿಸ್ ಇವರು ನಾಟಿ ಮಾಡುವುದರ ಮೂಲಕ ಉದ್ಘಾಟನೆ ಮಾಡಿದರು. ರೋಟರಿ ಜಿಲ್ಲೆ 3182 ಜೋನ್ 5 ರ ಸಹಾಯಕ ಗವರ್ನರ್ ಶ್ರೀ ನವೀನ್ ಅಮೀನ್ ಇವರು ಶುಭಹಾರೈಸಿದರು. ರೋಟರಿ ಶಂಕರಪುರದ ಅಧ್ಯಕ್ಷರು ಆದ ರೋ ವಿಕ್ಟರ್ ಮಾರ್ಟಿಸ್ ಇವರು ಸ್ವಾಗತ ನೀಡಿದರು. ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದವನ್ನು ಕಾರ್ಯದರ್ಶಿಯಾದ ರೋ ಜೆರಾಮ್ ರೋಡ್ರಿಗೆಸ್ ಇವರು ಮಾಡಿದರು. ಈ ಸಂದರ್ಭದಲ್ಲಿ ಸಂದೀಪ್ ಬಂಗೇರ, ಪ್ಲಾವಿಯಾ ಮೆನೆಜಸ್, ನಂದನಕುಮಾರ್, ಐವನ್ ಪಿಂಟೋ, ಫ್ರಾನ್ಸಿಸ್ ಡೇಸಾ, ವಿನ್ಸೆಟ್ ಸಲ್ದಾನ, ಮಾಲಿನಿ ಶೆಟ್ಟಿ ಅಲ್ಬರ್ಟ್ ಇವರು ಉಪಸ್ಥಿತರಿದ್ದರು.
ಕುತ್ಯಾರಿನ ಯುವಕರು ರಚಿಸಿದ ಕನಸು ಫಿಲಮ್ಸ್'ನ ಚೊಚ್ಚಲ ಚಿತ್ರ 'ಜಂಕ್ಷನ್' ಬಿಡುಗಡೆಯ ಹೊಸ್ತಿಲಲ್ಲಿ
Posted On: 29 Jun 2020, 10:53 AM
ಕಾಪು(ಜೂನ್ 29 ನಮ್ಮ ಕಾಪು ನ್ಯೂಸ್) ಕಾಪುವಿನ ಕುತ್ಯಾರಿನ ಯುವಕರ ತಂಡವೊಂದು ಸಮಾಜಕ್ಕೆ ಉತ್ತಮ ಸಂದೇಶ ಸಾರುವಂತಹ ಕಿರುಚಿತ್ರ ಜಂಕ್ಷನ್ ಅತೀ ಶೀಘ್ರದಲ್ಲಿ ತಮ್ಮ ನಡುವೆ ಬರಲಿದ್ದು,ಕಿರುಚಿತ್ರದ ಮೂಹೂರ್ತವು ನಿನ್ನೆ ಕುತ್ಯಾರು ಶ್ರೀ ವೀರಭದ್ರ ದೇವಸ್ದಾನದಲ್ಲಿ ನಡೆಯಿತು.. ಪ್ರವೀಣ್ ಡಿ ಆಚಾರ್ಯ ಇವರ ಸುಂದರ ಕಥೆ,ನಿರ್ದೇಶನ ಸಂಭಾಷಣೆ ಜೊತೆಗೆ ನಿರ್ಮಾಪಕರಾಗಿ ಯುವಕರ ಪಾಲಿನ ಉತ್ಸಾಹಿ ಚಿಲುಮೆ ಶ್ರೀ ಪ್ರಸಾದ್ ಕುತ್ಯಾರು,ಶ್ರೀ ಜಿನೇಶ್ ಬಲ್ಲಾಳ್,ಶ್ರೀ ನಿತೇಶ್ ಭಂಡಾರಿ ಕುತ್ಯಾರು,ಶ್ರೀಮತಿ ಸರಿತಾ ಕುಲಾಲ್,ಉದ್ಯಮಿ ಶ್ರೀ ರಾಜೇಶ್ ಶೆಟ್ಟಿ(ಶಬರಿ ಶಾಮಿಯಾನ) ನಿರ್ವಸಿರುತ್ತಾರೆ.. ಶ್ರೀ ನಿಲೇಶ್ ದೇವಾಡಿಗ ಇವರ ಕ್ಯಾಮರದಲ್ಲಿ ಸೆರೆಯಾಗುವ ಈ ಕಿರುಚಿತ್ರಕ್ಕೆ ಶ್ರೀ ಬಸಂತ್ ಕುಮಾರ್ ಪೊಸ್ಟರ್ ಹಾಗೂ ಎಡಿಟಿಂಗ್ ಮಾಡಿ ಶ್ರೀ ಧೀರಜ್ ಕುಲಾಲ್ ಕುತ್ಯಾರು ಈ ತಂಡಕ್ಕೆ ಸಂಪೂರ್ಣ ಸಹಕಾರ ನೀಡಿರುತ್ತಾರೆ... ಒಂದೊಳ್ಳೆ ಕಿರುಚಿತ್ರವಾಗಿ ಜನಮಾನಸದಲ್ಲಿ ನೆಲೆಯೂರಲಿ ಎನ್ನುತ್ತ ತಂಡದ ಸರ್ವರಿಗೂ ನಮ್ಮ ಕಾಪು ನ್ಯೂಸ್ ತಂಡ ಶುಭವನ್ನ ಕೊರುತ್ತದೆ...
