Updated News From Kaup
ಕುತ್ಯಾರು : 'ಇಂದ್ರಪುರ ಅಂಗನವಾಡಿ' ಗೆ ಕುಡಿಯುವ ನೀರಿನ ಯಂತ್ರ ನೀಡಿದ ಪವನ್ ಕುಮಾರ್
Posted On: 14 Jun 2020, 09:01 PM
ಶಿರ್ವ ಮಂಚಕಲ್ಲಿನ ಕುತ್ಯಾರು ರಸ್ತೆಯಲ್ಲಿರುವ "ಇಂದ್ರಪುರ ಅಂಗನವಾಡಿ" ಕೇಂದ್ರಕ್ಕೆ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸಮಾಜ ಸೇವಕ ಪವನ್ ಕುಮಾರ್ ಅವರು ಸುಮಾರು 8000 ರೂಪಾಯಿ ಮೌಲ್ಯದ ಕುಡಿಯುವ ನೀರಿನ ಯಂತ್ರವನ್ನು ನೀಡಿದರು. ಈ ಸಂಧರ್ಭದಲ್ಲಿ ಮಾತನಾಡಿದ ಪವನ್ ಕುಮಾರ್ ಅವರು ಕರೋನದಿಂದ ಜನರು ಕಂಗಾಲಾಗಿದ್ದು, ಆರೋಗ್ಯದ ಕಡೆ ತುಂಬಾ ಜಾಗ್ರತೆಯನ್ನು ವಹಿಸುತ್ತಾರೆ. ಅದರಲ್ಲೂ ಮುಖ್ಯವಾಗಿ ಮಕ್ಕಳು. ಆದ ಕಾರಣ ಮಕ್ಕಳ ಆರೋಗ್ಯ ದೃಷ್ಟಿಯಿಂದ ಕುಡಿಯುವ ನೀರಿನ ಯಂತ್ರವನ್ನು ನೀಡಿರುತ್ತೆನೆಂದು ತಿಳಿಸಿದರು.. ಈ ಸಂಧರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಸುನಿತಾ ಪೂಜಾರಿ ಹಾಗೂ ಸಹಾಯಕಿ ಪ್ರಭಾ ಅವರು ಉಪಸ್ಥಿತರಿದ್ದರು.. ಪವನ್ ಅವರ ಈ ಕಾರ್ಯಕ್ಕೆ ಶಿಕ್ಷಕರು ಪ್ರಸಂಶಿದರು.
ಉಡುಪಿ.ಜೂನ್,14 : ರಕ್ತದಾನಿಗಳ ದಿನಾಚರಣೆಯ ಪ್ರಯುಕ್ತ 'ರಕ್ತದಾನ ಪುರಸ್ಕಾರ' ಗೌರವಾರ್ಪಣೆ
Posted On: 14 Jun 2020, 08:48 PM
ಉಡುಪಿ :- ವಿಶ್ವ ರಕ್ತದಾನಿಗಳ ದಿನಾಚರಣೆ ಇದರ ಪ್ರಯುಕ್ತ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಉಡುಪಿ ಜಿಲ್ಲೆ ಕುಂದಾಪುರದಲ್ಲಿ ಹಮ್ಮಿಕೊಂಡ ಕಾಯ೯ಕ್ರಮದಲ್ಲಿ "ರಕ್ತದಾನ ಪುರಸ್ಕಾರ". ಗೌರವವನ್ನು ರಕ್ತದಾನಿ ರಾಘವೇಂದ್ರ ಪ್ರಭು,ಕವಾ೯ಲು ಸಹಿತ 5 ಜನರಿಗೆ ಪ್ರಧಾನ ಮಾಡಲಾಯಿತು.ಕಾಯ೯ಕ್ರಮದಲ್ಲಿ ಮಾತನಾಡಿದ ಕುಂದಾಪುರ ಉಪ ವಿಭಾಗ ಸಹಾಯಕ ಆಯುಕ್ತ ಕೆ.ರಾಜು, ರಕ್ತದಾನಕ್ಕಿಂತ ಮಿಗಿಲಾದ ದಾನ ಬೇರೆ ಯಾವುದೂ ಇಲ್ಲ ಒಂದು ರಕ್ತದಾನ 3 ಜನರಿಗೆ ಸಹಾಯಕವಾಗಬಹುದು ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವಂತೆ ಕರೆ ನೀಡಿದರು.ಖ್ಯಾತ ವೈದ್ಯ ಡಾII ಉಮೇಶ್ ಪುತ್ರನ್, ಭಾರತೀಯ ವೈದ್ಯ ಸಂಘದ ಅಧ್ಯಕ್ಷೆ ಡಾ|| ಶ್ರೀದೇವಿ ಕಟ್ಟೆ, ಕುಂದಾಪುರ ತಾಲೂಕು ವೈದ್ಯಾಧಿಕಾರಿ ಡಾ" ನಾಗಭೂಷಣ್ ಉಡುಪ, ರೆಡ್ ಕ್ರಾಸ್ ಸಭಾಪತಿ ಜಯಕರ ಶೆಟ್ಟಿ ಮುಂತಾದವರಿದ್ದರು.ನಂತರ ರಕ್ತದಾನ ಶಿಬಿರ ನಡೆಯಿತು.ಸುಮಾರು 80 ಜನರು ರಕ್ತದಾನ ಮಾಡಿದರು.
ಶಿರ್ವ ಭಾಗದಲ್ಲಿ ಲೇಬರ್ ಕಾರ್ಡ್ ವಿತರಿಸಿದ ಸಮಾಜ ಸೇವಕ ಪವನ್ ಕುಮಾರ್
Posted On: 12 Jun 2020, 10:30 PM
ಶಿರ್ವ ಮಂಚಕಲ್ಲಿನ ತೊಟ್ಲಗುರಿ ಜನರಿಗೆ ಹಾಗೂ ಬಂಟಕಲ್ಲಿನ ಅರಸಿಕಟ್ಟೆಯಲ್ಲಿ ಕೂಲಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರಿಗೆ ಸಮಾಜ ಸೇವಕ ಪವನ್ ಕುಮಾರ್ ಅವರು "Labour card" ವಿತರಿಸಿದರು.. ತೊಟ್ಲಗುರಿಯಲ್ಲಿ ಸುಮಾರು 100 ಮನೆಗಳಿದ್ದು ಇಲ್ಲಿನ ಜನರಿಗೆ ಸಹಾಯ ಮಾಡುವ ದೃಷ್ಟಿಯಿಂದ ಕೂಲಿ ಕೆಲಸ ಮಾಡುವ ಜನರಿಗೆ "labour card" ಮಾಡಲು ಬೇಕಾಗುವ ದಾಖಲೆಯನ್ನು ಸ್ವೀಕರಿಸಿ ಕ್ಲಪ್ತ ಸಮಯಲ್ಲಿ ಅವರಿಗೆ "Labour card"ಅನ್ನು ವಿತರಿಸಿದರು. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಸಮಾಜ ಸೇವಕ ಪವನ್ ಕುಮಾರ್ ಅವರು ಕೂಲಿ ಕಾರ್ಮಿಕರಿಗೆ "Labour card" ಮಾಡುವುದರಿಂದ ಅನೇಕ ಸರಕಾರದ ಸವಲತ್ತುಗಳು ದೊರೆಯುತ್ತದೆ. ತಂದೆ ತಾಯಿಗಳು ಮಾಡುವ "labour card" ನಿಂದಾಗಿ ಮಕ್ಕಳ ವಿದ್ಯಾಭಾಸಕ್ಕಾಗಿ ಹಾಗೂ ಮಕ್ಕಳ ಮುಂದಿನ ಭವಿಷ್ಯಕ್ಕೆ ಸಹಾಯವಾಗುತ್ತದೆ. ಯಾವುದೇ ಅನಾಹುತ ಆದ ಸಂದರ್ಭದಲ್ಲಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು, ಮಕ್ಕಳು ಒಳ್ಳೆಯ ಅಂಕವನ್ನು ಗಳಿಸಿದರೆ ಮಕ್ಕಳಿಗೆ ವಿದ್ಯಾರ್ಥಿ ವೇತನ ದೊರೆಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು..
ಪಡುಬಿದ್ರಿ.ಜೂನ್,12 : ಕೃಷಿ ನಿರ್ಲಕ್ಷ್ಯದ ಸಮಯದಲ್ಲಿ ಕೃಷಿಯತ್ತ ಚಿತ್ತವಹಿಸಿದ ಯುವಕರು
Posted On: 12 Jun 2020, 08:31 PM
ಕೃಷಿ ನಿರ್ಲಕ್ಷ್ಯದ ಈ ಸಮಯದಲ್ಲಿ ಕೃಷಿಯತ್ತ ಚಿತ್ತವಹಿಸಿದ ಪಲಿಮಾರು ಪಂಚಾಯತ್ ವ್ಯಾಪ್ತಿಯ ಅವರಾಲು ಮಟ್ಟು ಪ್ರದೇಶದ ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಸದಸ್ಯರು. ಸೇವೆಯನ್ನೇ ತಮ್ಮ ಹವ್ಯಾಸವನ್ನಾಗಿ ಮಾಡಿಕೊಂಡು ತಮ್ಮ ಗ್ರಾಮಕ್ಕಾಗಿ ಮತ್ತು ಅಶಕ್ತರ ಪಾಲಿನ ಶಕ್ತಿಯಾಗಿ ಶ್ರಮಿಸುತ್ತಿರುವ ಪಲಿಮಾರ್ ಪಂಚಾಯಿತಿ ವ್ಯಾಪ್ತಿಯ ಅವರಾಲು ಮಟ್ಟು ಪ್ರದೇಶದಲ್ಲಿರುವ ಸಂಘಟನೆ ಶ್ರೀದೇವಿ ಫ್ರೆಂಡ್ಸ್ ಕ್ಲಬ್. ಅದೆಷ್ಟೋ ಸಮಾಜೋಪಯೋಗಿ ಕಾರ್ಯಗಳನ್ನು ನಿರ್ವಹಿಸಿದ ಸಂಸ್ಥೆ ಇದೀಗ ತಮ್ಮ ಪ್ರದೇಶದ ಹಡೀಲು ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಮಾಡಲಿದ್ದಾರೆ ಕೊರೋನ ಸಂದರ್ಭ ಹಲವಾರು ಕುಟುಂಬಗಳು ಒಪ್ಪೊತ್ತಿನ ಆಹಾರಕ್ಕಾಗಿ ಪರಿತಪಿಸಿದ್ದನ್ನು ಮನಗಂಡು ಈ ಒಂದು ಆಲೋಚನೆ ಈ ಸಂಘಟನೆಯಲ್ಲಿ ಮೂಡಿ, ಜೊತೆಗೆ ಕೃಷಿಗೆ ಉತ್ತೇಜನ ನೀಡುವುದರೊಂದಿಗೆ, ಕೃಷಿ ಕಾರ್ಯದ ಬಗ್ಗೆ ಯುವಕರಿಗೆ ತಿಳಿಸುವುದರೊಂದಿಗೆ, ಕೃಷಿ ನಂಬಿದ್ದ ಕಾರ್ಮಿಕರನ್ನು ಸೇರಿಸಿಕೊಂಡು ಕೃಷಿ ಕಾರ್ಯ ಮಾಡಬೇಕೆಂಬ ಮಹದಾಸೆ ಇವರದ್ದಾಗಿದೆ. ಪೂರ್ವ ತಯಾರಿಯ ಖರ್ಚು ಕಳೆದು ಬಂದಂತಹ ಅಕ್ಕಿಯನ್ನು ಅಶಕ್ತರಿಗೆ ಮತ್ತು ಬೈ ಹುಲ್ಲನ್ನು ಗೋಶಾಲೆಗೆ ನೀಡಲು ತೀರ್ಮಾನಿಸಿದ್ದಾರೆ. ಇವರ ಈ ಕಾರ್ಯಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಬರೋಬ್ಬರಿ 50 ಬಾರಿ ರಕ್ತದಾನ ಮಾಡಿದ ಕಾಪು ಕ್ಷೇತ್ರದ ರಾಘವೇಂದ್ರ ಪ್ರಭು
Posted On: 11 Jun 2020, 10:02 PM
ರಕ್ತದಾನ ಮಹಾದಾನ ಎಂಬ ನಂಬಿಕೆಯೊಂದಿಗೆ ಸತತವಾಗಿ ರಕ್ತದಾನ ಮಾಡುತ್ತಿರುವ ವೈದ್ಯಕೀಯ ಪ್ರತಿನಿಧಿ ಯುವಕನೊಬ್ಬ 50 ಬಾರಿ ರಕ್ತದಾನ ಮಾಡಿ ಪರರ ಜೀವ ಉಳಿಸಲು ನೆರವಾಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಮೂಡುಬೆಳ್ಳೆ ಅಲೆವೂರು ಸಮೀಪದ ಕರ್ವಾಲಿನ ಗ್ರಾಮೀಣ ಪ್ರದೇಶದ ಯುವಕ ರಾಘವೇಂದ್ರ ಪ್ರಭು ಕರ್ವಾಲು ಅವರೇ ಈ ಮಹಾದಾನಿಯೆನಿಸಿದ್ದಾರೆ. ರಕ್ತದಾನಕ್ಕೆ ಪರ್ಯಾಯವಿಲ್ಲ ಹಾಗಾಗಿ ಸಮಾಜದಲ್ಲಿ ತುರ್ತು ರಕ್ತದ ಅವಶ್ಯಕತೆ ಇದ್ದಾಗ ತುರ್ತಾಗಿ ಸ್ಪಂದಿಸಿ ರಕ್ತ ನೀಡುವ ಪರಿಪಾಠವನ್ನು ಕಾಲೇಜು ದಿನಗಳಿಂದಲೇ ಇವರು ಮೈಗೂಡಿಸಿಕೊಂಡಿದ್ದಾರೆ. ರಾಘವೇಂದ್ರ ಅವರು ಪ್ರಸ್ತುತ ವರ್ಷಕ್ಕೆ ಮೂರು-ನಾಲ್ಕು ಬಾರಿ ರಕ್ತದಾನ ಮಾಡುವುದು ಮಾತ್ರವಲ್ಲದೆ ಅನೇಕ ಸಮಾಜ ಸೇವಾ ಸಂಘಟನೆ ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ರಕ್ತದಾನ ಮಾಡಲು ಪ್ರೇರಣೆ ನೀಡುತ್ತಿದ್ದಾರೆ. ಸತತವಾಗಿ ಜನಜಾಗೃತಿ ಶಿಬಿರಗಳನ್ನೂ ಆಯೋಜಿಸಿ ರಕ್ತದಾನದ ಮಹತ್ವವನ್ನು ಯುವಜನಾಂಗಕ್ಕೆ ಮನವರಿಕೆ ಮಾಡಿ ಈ ಬಗ್ಗೆ ಪ್ರಚೋದನೆಯನ್ನೂ ನೀಡುತ್ತಾರೆ. ಉಡುಪಿ ತಾಲೂಕಿನಾದ್ಯಂತ ಸುಮಾರು 12 ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡಿರುವ ರಾಘವೇಂಧ್ರ ಪ್ರಭು ಅವರು ಭಾರತೀಯ ರೆಡ್ಕ್ರಾಸ್ ಸಂಸ್ಥೆಯಿಂದ ಅತ್ಯುತ್ತಮ ರಕ್ತದಾನಿ ಎಂಬ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಭಾರತೀಯ ಜೆಸಿಐ ಸಂಸ್ಥೆಯ ಮೂಲಕ ವಲಯ ತರಬೇತುದಾರರಾಗಿಯೂ ಹೆಸರು ಮಾಡಿದ್ದಾರೆ. ಕಾಲೇಜಿನ ದಿನಗಳಲ್ಲಿ ಎನ್ಎಸ್ಎಸ್ ಘಟಕದಲ್ಲಿ ಸಕ್ರೀಯರಾಗಿದ್ದಾಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಹಿಳೆಯೊಬ್ಬರಿಗೆ ರಕ್ತದಾನ ಮಾಡಿದ್ದ ರಾಘವೇಂದ್ರ ಪ್ರಭು ಅವರು, ಅಂದಿನಿಂದ ಇಂದಿನವರೆಗೆ ಸತತವಾಗಿ ರಕ್ತದಾನ ಮಾಡುತ್ತಾ ಅನೇಕರ ಜೀವ ಉಳಿಸಲು ನೆರವಾಗಿದ್ದಾರೆ. ನಾನು ಮತ್ತೊಬ್ಬರಿಗೆ ಸಹಾಯ ಮಾಡಲು ರಕ್ತದಾನ ಮಾಡುವುದೇ ವಿನಃ ಯಾವುದೇ ದಾಖಲೆ ಮಾಡುವ ಉದ್ಧೇಶವಿಲ್ಲ ಎಂಬ ಧನ್ಯತಾಭಾವ ರಾಘವೇಂದ್ರ ಪ್ರಭು ಅವರದ್ದಾಗಿದೆ.
ಕೃಷಿ - ಮಳೆ ಸಂಯೋಜನೆ ಬಗ್ಗೆ ಒಂದಿಷ್ಟು - ಕೆ ಎಲ್ ಕುಂಡಂತಾಯ
Posted On: 11 Jun 2020, 04:11 PM
ಮಳೆ : ಏನು ಮಳೆ, ಹೇಗೆ ಮಳೆ .... ಸುರಿಯುವ ಮಳೆ - ಅದರ ಶ್ರಾಯ , ಮಳೆ ಬೀಳುವ ಕ್ರಮ - ಪ್ರಮಾಣ , ಮಳೆಯ ಲಕ್ಷಣ - ನಿರೀಕ್ಷೆಗಳನ್ನು ಶತಮಾನ ಶತಮಾನಗಳಿಂದ ಗಮನಿಸುತ್ತಾ ಬಂದ ನಮ್ಮ ಪೂರ್ವಸೂರಿಗಳು ಮಳೆಯನ್ನು ಆಶ್ರಯಿಸಿ ನಡೆಸುವ ಕೃಷಿ ಸಂವಿಧಾನವನ್ನು ಸಿದ್ಧಪಡಿಸಿಕೊಂಡ .ಅದರಂತೆ ಯುಗಾದಿಯಿಂದ ಮೊದಲ್ಗೊಂಡು ಬೇಸಾಯದ ಕಾಯಕಕ್ಕೆ ತೊಡಗಿ ಪತ್ತನಾಜೆಯ ಬಳಿಕ ತೀವ್ರವಾಗಿ ಬೇಸಾಯಕ್ಕೆ ಪ್ರವೃತ್ತನಾಗುವುದು ಸಂಪ್ರದಾಯ . ಹದಿನೈದು ದಿನಕ್ಕೊಮ್ಮೆ ಮಳೆಯ ಹೆಸರು ಬದಲಾಗುತ್ತಾ ಸಾಗುತ್ತದೆ . ನಾವು ಎಷ್ಟು ಗಾಢವಾಗಿ ಸೌರಮಾನಿಗಳಾದರೂ ಮಳೆಯನ್ನು ಮಹಾನಕ್ಷತ್ರಗಳ ಮೂಲಕವೇ ಗುರುತಿಸುವುದು ರೂಢಿ . ನಮಗೆ ಯುಗಾದಿಯ ಬಳಿಕ ಕೃತ್ತಿಕಾ ನಕ್ಷತ್ರದಲ್ಲಿ ಸೂರ್ಯನು ಚಲಿಸುವ ಸಮಯವೇ ಮಳೆಯ ನಕ್ಷತ್ರಕಾಲ ( ಈ ವರ್ಷ ಮೇ11 ರಿಂದ ಆರಂಭವಾಗಿ ಮೇ 24). ಯಶಸ್ವೀ - ಅನುಭವೀ ಕೃಷಿಕ ಕೃತ್ತಿಕಾ ಮಳೆಯ ಹದಿನೈದು ದಿನಗಳಷ್ಟು ಕಾಲ ಮಳೆ ಬರಬಾರದು ,ಕೃತ್ತಿಕಾದ ಸೂರ್ಯನ ಪ್ರಖರತೆಗೆ ಗದ್ದೆ ಬಿರಿಯಬೇಕು .ಬಳಿಕದ ರೋಹಿಣಿ ನಕ್ಷತ್ರ ಕಾಲದಲ್ಲಿ ಭಾಗೀರಥೀ ಜನ್ಮದಿನ ಬರುತ್ತದೆ . ಗಂಗಾವರಣವಾದ ದಿನ .ಒಂದು ಅರ್ಥದಲ್ಲಿ ಸೂರ್ಯ ವಂಶದ ಅರಸ ಭಗೀರಥ ಗಂಗೆಯನ್ನು ಧರೆಗಿಳಿಸಲು ಪಟ್ಟ ಪ್ರಯತ್ನ 'ಭಗೀರಥ ಪ್ರಯತ್ನ'ವೆಂದೇ ಪ್ರಸಿದ್ಧ . ಅಂದರೆ ಕೃಷಿ - ಬೇಸಾಯವೂ ಅಷ್ಟೆ ಸಾಧನೆ - ಪ್ರಯತ್ನಬೇಕಾದುದು ತಾನೆ ? ಮುಂದೆ ಮೃಗಶಿರಾ ನಕ್ಷತ್ರ. ಈಗ ಸುರಿಯುತ್ತಿದೆ ಅಥವಾ ಸುರಿಯಲು ಸಿದ್ಧತೆಮಾಡುತ್ತಿದೆ . ಈ ಹದಿನೈದು ದಿನದಲ್ಲಿ ನಾಟಿಕಾರ್ಯ ನಡೆದರೆ 'ಮೃಗಶಿರೆಟ್ಟ್ ನಡಿನಾಂಡ ಮೃಗ ತಿಂದ್ ದ್ ಮುಗಿಯಂದ್ ಎಂಬುದು ಅನುಭವದ ರೈತನ ಮಾತು .ಮೃಗಶಿರಾ ನಕ್ಷತ್ರದ ಮಳೆಗೆ ನಾಟಿಮಾಡಿದರೆ ಮೃಗಗಳು ತಿಂದು ಮುಗಿಯದಷ್ಟು ಬೆಳೆಯಾದೀತಂತೆ .ಜೂ.21 ರ ವರೆಗೆ ಈ ಮಳೆಯ ಶ್ರಾಯ . ಬಳಿಕ ಆರ್ದಾ ಮಳೆಯ ಕಾಲ . ಆರ್ದಾ ಮಳೆ ಬಂದರೆ ಮುಂದಿನ ಆರು ಮಳೆಗಳು ಬೇಕಾದಷ್ಟು ಸುರಿಯುತ್ತವೆ ಎಂಬುದು ರೈತನ ನಿರೀಕ್ಷೆ .ಈ ಮಳೆ ಸುರಿಯುವ ಕ್ರಮವನ್ನು ನಮ್ಮ ಹಿರಿಯರು " ಅಡರ್ ಡ್ ದರ್ತಿಲೆಕ್ಕ " ಎಂದು ಅಂದರೆ ಅಷ್ಟು 'ತೀವ್ರವಾಗಿ' ಎಂದು ಉದ್ಗರಿಸಿದ್ದಾರೆ . ಈ ಮಳೆಯ ಸಂದರ್ಭದಲ್ಲಿ ಏನು ನೆಟ್ಟರೂ ಅದು 'ಜೀವ ಹಿಡಿಯುತ್ತದೆ' ಎಂಬುದು ನಂಬಿಕೆ .ಆರ್ದಾ ಮಳೆಗೆ ಯಕ್ಷಗಾನ ಕವಿಗಳು ಹೇಳುತ್ತಾರೆ 'ಹದಗಾಲ ಬೆಳೆಮಾಳ್ಕೆಗೆ' ಎಂದು. ತಡೆ ಇಲ್ಲದೆ ಬೀಳುವ ಮಳೆ 'ಪುನರ್ವಸು'. "ಪುನ ಪಿದಾಯಿದೀವರೆ ಬುಡಂದ್" ಎಂಬುದು ಈ ಮಳೆಗೆ ಇರುವ ಕೀರ್ತಿ ,ಬಹುಶಃ ಒಂದು ಕಾಲದಲ್ಲಿ ಆ ಕ್ರಮದಲ್ಲಿ 'ಹನಿ ನಿಲ್ಲದೆ ಸುರಿಯುತ್ತಿದ್ದಿರಬೇಕು' .ಈಗ ಕಾಲ ಬದಲಾಗಿದೆ , ಹವಾಮಾನ ವಿಪರೀತವಾಗಿ ವ್ಯತ್ಯಸ್ಥಗೊಂಡಿದೆ .ಇದು ನಿಜವಾಗಿ ಕೃಷಿಗೆ ಬಹಳ ಅವಸರದ ಕಾಲ ."ಬಗ್ಗ್ ತ್ ಬೆನೊಡು , ಕುಳ್ಳುತು ತಿನೊಡು" ( ಬಗ್ಗಿ ದುಡಿಯಬೇಕು , ಕುಳಿತು ತಿನ್ನಬೇಕು) ಅಂದರೆ ಇದು ರೈತ ದುಡಿಯುವ ವೇಳೆ . 'ಪುಸ್ಸನೆ' ಬಂದು ಹೋಗುವ ಮಳೆ 'ಪುಷ್ಯಾ'.ಬಹುತೇಕ ಕೃಷಿ ಮುಗಿಯುತ್ತಾ ಬರುವ ಕಾಲ ( ಮುಗಿದಿರುವುದು . ಆದರೆ ಈಗ ಧೈರ್ಯದಲ್ಲಿ ಹೇಳುವಂತಿಲ್ಲ ) . ಆಟಿ ( ಕರ್ಕಾಟಕ) ತಿಂಗಳು . ಕೃಷಿ ಕಾಯಕ ಮುಗಿಯುತ್ತಾ ಬಂದಿದೆ ,ಇನ್ನು ಬೆಳೆಯ ರಕ್ಷಣೆ ಮತ್ತು ನಿರೀಕ್ಷೆ ಮಾತ್ರ . 'ಪುಸ್ಯದ ಬರ್ಸೊಗು ಪುಚ್ಚೆದ ಪುಣಲಾ ಪಿದಾಯಿ ಬರಂದ್' ( ಪುಷ್ಯಾ ಮಳೆಗೆ ಬೆಕ್ಕಿನ ಹೆಣವೂ ಹೊರಗೆ ಬಾರದು). ಹೇಗೆಲ್ಲ ಮಳೆಯನ್ನು ವಿಶ್ಲೇಷಿಸಿದ್ದಾರೆ ನಮ್ಮ ಹಿರಿಯರು. ಆಶ್ಲೇಷಾ ಮಳೆ : ಆಶ್ಲೇಷಾ ಮಳೆಗಿಂತ ಬಿಸಿಲೇ ಲೇಸು . 'ಕೈ ಎಡ್ಡೆ ಆಂಡ ಕೆಯಿ ಎಡ್ಡೆ ಆವು' ಎಂಬ ಚಿಂತನೆಯಕಾಲ . ರೈತ ಹೇಳುವುದಿದೆ "ಪುಷ್ಯಾ ಕಂಡೆ ಮುಟ್ಟ ಕರತ್ಂಡ ಆಶ್ಲೇಷಾ ದೊಂಡೆ ಮುಟ್ಟ ಕನಪುಂಡು". ಪುಷ್ಯಾ ಮಳೆಯಿಂದ ಒಂದುವೇಳೆ ಬೆಳೆಗೆ ಹಾನಿಯಾಗಿದ್ದರೆ ಆಶ್ಲೇಷಾ ಮಳೆಯಿಂದ ಈ ಹಾನಿ ಪರಿಹಾರವಾಗುತ್ತದೆಯಂತೆ. ಪ್ರಕೃತಿ - ಮಳೆ ಅವಲಂಬಿತವಾದುದು ಕೃಷಿ . ಮಣ್ಣಿನಲ್ಲಿ ದುಡಿಯುವುದಷ್ಟೆ ರೈತನ ಕಾಯಕ . ಮಣ್ಣಿನ ಸತ್ವವನ್ನು ಮತ್ತು ನಿಸರ್ಗವನ್ನು ನಂಬಿದ್ದು ಅಷ್ಟು ವಿಶ್ವಾಸದಿಂದ. ಅದಕ್ಕೆ ರೈತ ಹೇಳುತ್ತಾನೆ "ಮಣ್ಣ್ ಡ್ ಪೊರ್ಂಬಿನಾಯೆ ನುಪ್ಪು ತಿನುವೆ , ನರಮಾನಿಡ ಪೊರ್ಂಬಿನಾಯೆ ಮಣ್ಣ್ ತಿನುವೆ". 'ಮಣ್ಣಿನಲ್ಲಿ ಛಲಸಾಧಿಸಿದರೆ ಅನ್ನ ತಿನ್ನುತ್ತಿ ,ಮನುಷ್ಯನಲ್ಲಿ ಛಲ ಸಾಧಿಸಿದರೆ ಮಣ್ಣು ತಿನ್ನುತ್ತಿ' ಎಂದು. ಈಗಂತೂ ಕೃಷಿ ಸಂಪೂರ್ಣ ಅವಗಣಿಸಲ್ಪಟ್ಟಿದೆ . ಕೃಷಿ ಲಾಭದಾಯಕವಲ್ಲ ಎಂಬ ನಿರ್ಧಾರಕ್ಕೆ ನಾವು ಬಂದಾಗಿದೆ . "ಕೃಷಿಯಿಂದ ದುರ್ಭಿಕ್ಷೆ ಇಲ್ಲ" ಎಂಬ ಮಾತು ಅಪ್ರಸ್ತುತವಾಗಿದೆ . [ಇನ್ನುಆಟಿ ಅಮಾವಾಸ್ಯೆಗೆ ಸರಿಯಾಗಿ ಮುಂದುವರಿಸಿ ಬರೆಯುವ . ಅಮಾವಾಸ್ಯೆ ಮತ್ತು ಉಳಿದ ಮಳೆಗಳ ಬಗ್ಗೆ ವಿವರ ನೀಡುವ. ನಾಗರ ಪಂಚಮಿಗೆ ಪ್ರತ್ಯೇಕ ಬರೆಯುವ. ವಾಯು ಭಾರ ಕುಸಿತ , ನಿಸರ್ಗದ ವಿಶಿಷ್ಟ ನಡೆಗಳಿಂದಾಗಿ ಹೀಗೆಯೇ ಎಂದು ಈಗ ಹೇಳಲಾಗದು.] ಬರಹ : ಕೆ. ಎಲ್ . ಕುಂಡಂತಾಯ
ಕಾಪು.ಜೂನ್, 11 : ಕುಂಜೂರಿನಲ್ಲಿ 13ನೇ ಶತಕದ ತುಳು ಶಾಸನ ಪತ್ತೆ
Posted On: 11 Jun 2020, 10:36 AM
ಕಾಪು , ಜೂ.10 : ಎಲ್ಲೂರು ಗ್ರಾಮದ ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ಮುಂಭಾಗದಲ್ಲಿ ಗೋಪುರದ ಇಕ್ಕೆಲಗಳಲ್ಲಿ ಇದ್ದ ಎರಡು "ತುಳು ಲಿಪಿಯಲ್ಲಿ ಬರೆದ ತುಳುಭಾಷೆಯ" ಶಾಸನಗಳನ್ನು ಇತಿಹಾಸ ಸಂಶೋಧಕ ಬಂಟಕಲ್ಲಿನ ಸುಭಾಸ್ ನಾಯಕ್ ಅವರು ಓದುವ ಪ್ರಯತ್ನ ಮಾಡಿದ್ದಾರೆ . ಎರಡು ಶಾಸನಗಳಲ್ಲಿ ಒಂದು ಸಂಪೂರ್ಣ ತ್ರುಟಿತಗೊಂಡಿದೆ , ಕಾಮಗಾರಿ ವೇಳೆ ಸಿಮೆಂಟ್ ಬಿದ್ದು ಲಭ್ಯ ಅಕ್ಷರಗಳೂ ಅಸ್ಪಷ್ಟವಾಗಿದ್ದು ,ಓದಲಾಗದ ಸ್ಥಿತಿಯಲ್ಲಿದೆ . ಆದರೆ ಕಾಣುವ ಅಕ್ಷರಗಳನ್ನು ಗಮನಿಸಿದಾಗ ಅದು ತುಳು ಲಿಪಿಯ ಶಾಸನವೆಂದು ನಾಯಕ್ ಹೇಳುತ್ತಾರೆ . ಇನ್ನೊಂದು ಶಾಸನವು (ದೇವಳದ ಈಶಾನ್ಯದಲ್ಲಿರುವ) ಬಹುತೇಕ ಅಳಿಸಿಹೋಗಿದ್ದರೂ ಕೆಲವು ಅಕ್ಷರಗಳು ತ್ರುಟಿತಗೊಂಡಿದ್ದರೂ ಓದಲು ಸಾಧ್ಯವಾಗುತ್ತದೆ . ಈ ಕಲ್ಬರಹದ ಮೇಲೆ ಶಿವಲಿಂಗ ಮತ್ತು ಸೂರ್ಯ - ಚಂದ್ರರ ಉಬ್ಬುಶಿಲ್ಪವಿದೆ . ಸ್ವಸ್ತಿಶ್ರೀಃ ಎಂದು ಪ್ರಾರಂಭವಾಗುವ ಬರೆಹವು 'ಮೀನಸ್ಯ' ಅಂದರೆ ಮೀನಮಾಸದಲ್ಲಿ . ಮುಂದೆ 'ವಲ್ಲ ಮಹಾದೇವರ ಕಾಲನ್ಟ್ ' ಎಂದು ಓದಬಹುದಾಗುತ್ತದೆ .ವಲ್ಲ ಮಹಾದೇವರ ಕಾಲನ್ಟ್ ಎಂದರೆ ವಲ್ಲ ಮಹಾದೇವರ ಕಾಲದಲ್ಲಿ. ಬಳಿಕ ಕೆಳಗಿನ ಸಾಲಿನಲ್ಲಿ ಇರುವ ಅಕ್ಷರಗಳು ಅಸ್ಪಷ್ಟವಾಗಿವೆ. ಪಳಂ ತುಳುವಾಗಿರುವುದರಿಂದ ಶಬ್ದ ಸಂಯೋಜನೆ ಕಷ್ಟಸಾಧ್ಯ . ಅನಂತರದ ಒಂದು ಸಾಲಿನಲ್ಲಿ 'ತುನರ ಪುರತ್ ನಯೆ' ಮುಂದುವರಿದರೆ 'ಮುದೆಲಾಯ' ಮುಂತಾದ ಶಬ್ದಗಳು ಸಿಗುತ್ತವೆ .ಇನ್ನುಳಿದಂತೆ ಅಕ್ಷರಗಳು ಒಂದೋ ಸಿಮೆಂಟ್ ಬಿದ್ದು ಅಥವಾ ಸವೆದು ಹೋಗಿದೆ . ಆದರೆ ಇದು ತುಳು ಭಾಷೆಯ ತುಳುಲಿಪಿಯಲ್ಲಿರುವ ಶಾಸನವಾದುದರಿಂದ ಮುಂದಿನ ಅಧ್ಯಯನ ಅಗತ್ಯವಿದೆ ಎನ್ನುತ್ತಾರೆ ನಾಯಕ್ . ಈ ಶಾಸನದಲ್ಲಿ ಉಲ್ಲೇಖವಾಗಿರುವ 'ವಲ್ಲ ಮಹಾದೇವ' ನು ಆಳುಪರ ಅರಸ ವಲ್ಲಭ ದೇವನೇ ಆಗಿದ್ದರೆ ಈ ಶಾಸನದ ಕಾಲ ಕ್ರಿ.ಶ. 1230 - 1250.ಅಂದರೆ 13 ನೇ ಶತಮಾನ ಎಂದು ಸುಭಾಸ್ ನಾಯಕ್ ಹೇಳಿದ್ದಾರೆ . ಇವರು ತುಳು ಶಾಸನ ಓದುವ ಬೆರಳೆಣಿಕೆಷ್ಟು ವಿದ್ವಾಂಸರಲ್ಲಿ ಒಬ್ಬರು .ಕ್ಷೇತ್ರಕಾರ್ಯದಲ್ಲಿ ಗುರುಪ್ರಸಾದ ನಾಯಕ್ ಸಹಕರಿಸಿದ್ದರು .ದೇವಸ್ಥಾನದ ಮೆನೇಜರ್ ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು . ಕುಂಜೂರಿಗೆ ಬಹಳಷ್ಟು ಧಾರ್ಮಿಕ , ಐತಿಹಾಸಿಕ , ಸಾಂಸ್ಕೃತಿಕ ಹಿನ್ನೆಲೆ ಇದೆ.ಈ ಶಾಸನದ ಅಧ್ಯಯನಕ್ಕೆ ಬೇಕಾದ ಲಭ್ಯ ಮಾಹಿತಿಗಳನ್ನು ಸ್ಥಳೀಯರು ಒದಗಿಸಲು ಅಣಿಯಾಗಿದ್ದಾರೆ . ಬರಹ : ಕೆ ಎಲ್ ಕುಂಡಂತಾಯ
ಧನುಷ್ ತೀರ್ಥದಲ್ಲಿ ಮದ್ಯಪಾನ-ಮೋಜು : ಸ್ಥಳೀಯರ ವ್ಯಾಪಕ ಖಂಡನೆ
Posted On: 10 Jun 2020, 10:04 PM
ಜೂ09, ಕಾಪು ತಾಲೂಕಿನ ಇನ್ನಂಜೆ ಹಾಗೂ ಮಜೂರು ಗ್ರಾಮದ ಗಡಿಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಕ್ಷೇತ್ರ ಧನುಷ್ ತೀರ್ಥದಲ್ಲಿ ಮಂಗಳವಾರ ಸಂಜೆ ಹೊರಭಾಗದಿಂದ ಬಂದ ಕೆಲ ಯುವಕರು ಮದ್ಯಪಾನ ಮಾಡಿ ಮೋಜು ಮಾಡಿದ್ದಾರೆ. ತದನಂತರ ಕುಡಿದ ಮತ್ತಿನಲ್ಲಿ ತಮ್ಮ ಬೈಕ್ ಟಯರ್ ಗಳ ಬ್ಲೋ ತೆಗೆದಿದ್ದಾರೆಂದು ರಂಪಾಟ ನಡೆಸಿದ್ದಾರೆ. ಇದನ್ನು ಪರಿಸರದ ಯುವಕರು ಹಾಗೂ ಸ್ಥಳೀಯರು ತೀಕ್ಣವಾಗಿ ಖಂಡಿಸಿದ್ದು, ಪ್ರಸ್ತುತ ಸ್ಥಳವು ಪುರಾಣ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿದ್ದು ತಮಗೆಲ್ಲರಿಗೂ ಪೂಜನೀಯವಾಗಿದೆ. ಇದು ಇತ್ತೀಚೆಗೆ ಹೊರಗಿನಿಂದ ಬರುವ ಪ್ರೇಮಿಗಳ ಹಾಗೂ ಪುಂಡು ಪೋಕರಿಗಳ ಅಡ್ಡೆಯಾಗತ್ತಿದ್ದು, ಪ್ರತಿದಿನವೂ ಬಂಡೆಯಲ್ಲಿ ಮದ್ಯದ ಬಾಟಲ್ ,ಪ್ಲಾಸ್ಟಿಕ್ ರಾಶಿ ಬೀಳುತ್ತಿದ್ದು, ಮೇಲಿರುವ ತೀರ್ಥದ ಕೆರೆಯೂ ಕ್ರಮೇಣ ಮಲಿನಗೊಳ್ಳುತ್ತಿದೆ. ಪ್ರವಾಸಿ ತಾಣವಾಗಬೇಕಿದ್ದ, ಪ್ರೇಕ್ಷಣೀಯ ಸ್ಥಳವಾಗಬೇಕಿದ್ದ ಧನಸ್ಸು ತೀರ್ಥ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಇಂದು ಕುಡುಕರ ಅಡ್ಡೆಯಾಗಿದೆ. ಆದರೂ ಇಂದೋ ನಾಳೆಯೋ ಈ ಸಮಸ್ಯೆಯಿಂದ ಮುಕ್ತಿ ಸಿಗಬಹುದು ಎಂದು ಸಾರ್ವಜನಿಕರು ಕಾದು ಕುಳಿತಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಿ, ಸಮಸ್ಯೆ ಹೀಗೇ ಮುಂದುವರಿದರೆ ಸಾರ್ವಜನಿಕರು ತಾವೇ ಕಾನೂನು ಕೈಗೆತ್ತಿಕೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ವೃದ್ಧರಿಗೆ ಸೂರು ನಿರ್ಮಿಸಲು ಬಹುಮಾನದ ಹಣವನ್ನು ನೀಡಿದ ಪಡುಬಿದ್ರಿಯ ಸಪ್ನಾ
Posted On: 10 Jun 2020, 08:50 PM
ಕರುಳು ಕಿತ್ತು ಬರುವ ದೃಶ್ಯ.ಇಂದೋ ನಾಳೆಯೋ ಬೀಳುವ ಹಂತದಲ್ಲಿರುವ ಮನೆ ,ಮನೆಯ ಕೆಲವು ಭಾಗಗಳು ಈಗಾಗಲೇ ಕುಸಿದು ಬಿದ್ದಿವೆ, ಮನೆಯ ಒಳಗೆಲ್ಲಾ ನೀರು ಸೋರುತ್ತಿದೆ ,ಆದರೂ ವಿಧಿಯಿಲ್ಲದೆ ಆ ಎರಡು ಹಿರಿ ಜೀವಗಳು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಆ ಮುರುಕಲು ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇವರೇ ಮೂಡುಬಿದಿರೆ ತಾಲೂಕಿನ ಪಾಲಡ್ಕ ಗ್ರಾ.ಪಂ.ವ್ಯಾಪ್ತಿಯ ಕೇಮಾರಿನ ಹೊಂಡೇಲು ನಿವಾಸಿಗಳಾದ ದೂಜ ಪೂಜಾರಿ, ಸುಶೀಲ ಪೂಜಾರ್ತಿ. ಈ ದಂಪತಿಗಳ ಕರುಣಾಜನಕ ಸ್ಥಿತಿ ನೋಡಿದವರೇ ಬಲ್ಲರು. ಇಬ್ಬರ ಆರೋಗ್ಯವೂ ಸರಿಯಾಗಿಲ್ಲ ತಾವೇ ದುಡಿದು ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುತ್ತಿರುವ ಈ ಹಿರಿ ಜೀವಗಳು ಮನೆಯನ್ನು ದುರಸ್ತಿ ಮಾಡುವ ಸ್ಥಿತಿಯಲ್ಲಿಲ್ಲ ಆದರೆ ಎಲ್ಲಿ ಈ ಬಾರಿಯ ಗಾಳಿ ಮಳೆಗೆ ಮನೆಯೊಳಗಡೆ ಮಲಗಿದಲ್ಲಿ ಮನೆ ಬಿದ್ದು ನಮಗೇನಾಗುವುದೋ ಎಂಬ ಭೀತಿಯಿಂದ ದೇವರ ಮೇಲೆ ಭಾರ ಹಾಕಿ ಜೀವನ ಸಾಗಿಸುವ ಅನಿವಾರ್ಯತೆ. ನಿಸ್ವಾರ್ಥ ಸೇವಾ ಮಾಣಿಕ್ಯ ಸ್ಫೂರ್ತಿ ವಿಶೇಷ ಶಾಲೆಯ ಸಂಸ್ಥಾಪಕರಾದ ಪ್ರಕಾಶ್ ಜೆ.ಶೆಟ್ಟಿಗಾರ್ ಮತ್ತು ಯುವ ಉತ್ಸಾಹಿ ಬಳಗ ಕೇಮಾರು ಇವರು ಈ ವೃದ್ಧ ಜೀವಗಳಿಗೊಂದು ಸೂರು ನಿರ್ಮಿಸಿಕೊಡುವ ಮಹಾ ಕೈಂಕರ್ಯ ಕ್ಕೆ ಇಳಿದಿದ್ದಾರೆ. ಈ ಪುಣ್ಯ ಕಾರ್ಯದಲ್ಲಿ 'ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ' ಪೇಜ್ ವತಿಯಿಂದ ನಡೆದ ಮೂಕ ಪ್ರಾಣಿಗಳಿಗೆ ಆಹಾರ, ನೀರು ಇಡುವ ಫೋಟೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಕ್ಕೆ ವಿಜೇತರಾದ ಸಪ್ನ ಪೂಜಾರಿ ಉಡುಪಿ ಇವರು ಬಹುಮಾನ ಗಳಿಸಿದ 5,000 ರೂಗಳನ್ನು ನೀಡಿ ಅಶಕ್ತ ವೃದ್ಧರ ಪಾಲಿಗೊಂದು ಸೂರು ನಿರ್ಮಿಸಿ ಕೊಡುವ ಮಹಾ ಕೈಂಕರ್ಯ ಕ್ಕೆ ಜೊತೆಯಾಗಿದ್ದಾರೆ. ಇವರಿಗೆ ನಮ್ರತೆಯ ನಮನಗಳು.
ಉಂಡಾರು ಪೆರಿಯ ಕಲ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠಾಪನೆ
Posted On: 10 Jun 2020, 10:51 AM
ಇನ್ನಂಜೆ ಗ್ರಾಮದ ಉಂಡಾರುವಿನ ಕಾರ್ಣಿಕದ ದೈವ ಪೆರಿಯ ಕಲದ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳಾದ ಕಂಬೆರ್ಲು, ಜುಮಾದಿ, ಬಂಟ, ತನ್ನಿಮಾನಿಗ, ಅಜ್ಜಿ ಬೇರೆಂತೆಲ್, ಕೊರಗಜ್ಜ, ಗುಳಿಗ ದೈವಗಳ ಸಹಿತ ಬ್ರಹ್ಮೆರ್ ಪುನರ್ ಪ್ರತಿಷ್ಠೆ ಕಾಯಕ್ರಮವು ಇಂದು ಆಡಳಿತ ಮಂಡಳಿ ಮತ್ತು ಊರ ಜನರ ಸಮ್ಮುಖದಲ್ಲಿ ವಿಧಿವತ್ತಾಗಿ ನಡೆಯಿತು.. ದಿನಾಂಕ 09-06-2020 ರಂದು ಸಂಜೆ ವಾಸ್ತು ಹೋಮ, ಅಘೋರ ಹೋಮ ಹಾಗೂ ಇತರೆ ವಾಸ್ತುವಿಗೆ ಸಂಬಂಧಪಟ್ಟ ಪೂಜೆಗಳು ಬ್ರಹ್ಮಶ್ರೀ ನಾಗರಾಜ ತಂತ್ರಿಗಳ ಉಪಸ್ಥಿತಿಯಲ್ಲಿ ಸಾಂಗವಾಗಿ ನೆರೆವೇರಿದವು. ತಾತ್ಕಾಲಿಕ ಶೆಡ್ ವ್ಯವಸ್ಥೆಯಲ್ಲಿದ್ದ ದೈವಗಳನ್ನು ಜೀರ್ಣೋದ್ದಾರಗೊಂಡ ಗುಡಿಯ ಒಳಗೆ ಪುನರ್ ಪ್ರತಿಷ್ಠೆ ಮಾಡಲಾಯಿತು, ಪುನರ್ ಪ್ರತಿಷ್ಠೆಗೊಂಡ ದೈವಗಳಿಗೆ ದರ್ಶನ ಸೇವೆ ನೀಡಲಾಯಿತು. ಸರ್ಕಾರದ ಆದೇಶದ ಮೇರೆಗೆ ಈ ಎಲ್ಲಾ ಕಾರ್ಯಕ್ರಮಗಳು ಸಾಮಾಜಿಕ ಅಂತರ ಹಾಗೂ ಮಾಸ್ಕ್ ಮತ್ತು sanitizer ಬಳಸಿಕೊಂಡು ನಡೆಯಿತು. ಪೆರಿಯ ಕಲದ ಜೀರ್ಣೋದ್ದಾರ ಕಾರ್ಯಕ್ಕೆ ದೇಣಿಗೆ ನೀಡುವವರು ನೀಡಬಹುದು. ಬ್ಯಾಂಕ್ ಖಾತೆ ವಿವರ Account No-0636101016108 IFSC Code-CNRB0000636 Account Name-Shree Babbuswamy Matthu Parivara Bank Branch-CANARA Bank Shankarapura.
