Updated News From Kaup
ಅಗಸರು, ಕ್ಷೌರಿಕರು ಪರಿಹಾರಕ್ಕೆ ಅರ್ಜಿ ಸಲ್ಲಿಸಿ- ಜಿಲ್ಲಾಧಿಕಾರಿ ಜಿ.ಜಗದೀಶ್
Posted On: 17 Jun 2020, 04:53 PM
ಉಡುಪಿ ಜೂನ್ 16 (ಕರ್ನಾಟಕ ವಾರ್ತೆ): ಕೋವಿಡ್ 19 ಕಾರಣ ಲಾಕ್ ಡೌನ್ ಜಾರಿಗೊಳಿಸಿದ ಹಿನ್ನಲೆಯಲ್ಲಿ , ರಾಜ್ಯ ಸರ್ಕಾರದಿಂದ , ಅಗಸರು ಮತ್ತು ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ಒಂದು ಬಾರಿಯ ಪರಿಹಾರವಾಗಿ ರೂ.5000 ನೆರವನ್ನು ಪಡೆಯುವ ಕುರಿತಂತೆ, ಜೂನ್ 30 ರೊಳಗೆ ಜಿಲ್ಲೆಯಲ್ಲಿನ ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಅಗಸ ಮತ್ತು ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವವರು ಅರ್ಜಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಅವರು ಬುಧವಾರ ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಅಗಸರು ಮತ್ತು ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವವರು ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಅರ್ಜಿದಾರರು 18 ರಿಂದ 65 ವರ್ಷಗಳ ವಯೋಮಿತಿಯಲ್ಲಿದ್ದು, ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಪರಿಹಾರ ಪಡೆಯಲು ಅವಕಾಶವಿದ್ದು, ಬಿ.ಪಿ.ಎಲ್ ಕಾರ್ಡ್ ಹೊಂದಿದವರಿಗೆ ಮಾತ್ರ ಅರ್ಜಿ ಸಲ್ಲಿಸಬಹುದಾಗಿದ್ದು, ಆಧಾರ್ ಸಂಖ್ಯೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಹೊಂದಿರುವುದು ಕಡ್ಡಾಯವಾಗಿದೆ ಎಂದು ಹೇಳಿದರು. ಅರ್ಜಿ ಸಲ್ಲಿಸುವಾಗ , ಅಗಸ/ಕ್ಷೌರಿಕ ವೃತಿ ನಿರ್ವಹಿಸುತ್ತಿರುವ ಕುರಿತು ನಿಗಧಿತ ನಮೂನೆಯಲ್ಲಿ ಅಧಿಕಾರಿಗಳಿಂದ ಪಡೆದ ಉದ್ಯೋಗ ದೃಢೀಕರಣ ಪತ್ರ, ನಿಗಧಿತ ನಮೂನೆಯಲ್ಲಿ ಸ್ವಯಂ ಘೋಷಣೆ ಪತ್ರ ಸಲ್ಲಿಸಬೇಕು, ಬಿ.ಪಿ.ಎಲ್. ಕಾರ್ಡ್ , ಆಧಾರ್ ಕಾರ್ಡ್, ಜನ್ಮ ದಿನಾಂಕ ದಾಖಲೆ, ಪಾಸ್ ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ ಸಲ್ಲಿಸಬೇಕು, ಅರ್ಜಿಯೊಂದಿಗೆ ಸಲ್ಲಿಸಿರುವ ದಾಖಲೆಗಳು ಸಮರ್ಪಕವಾಗಿದ್ದಲ್ಲಿ , ಅರ್ಹ ಫಲಾನುಭವಿಗಳಿಗೆ ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಡಿ.ಬಿ.ಟಿ ಮೂಲಕ ಪರಿಹಾರವನ್ನು ವರ್ಗಾಯಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು. ಉದ್ಯೋಗ ದೃಢೀಕರಣ ಪತ್ರ ಪಡೆಯಲು ನಗರ ಪ್ರದೇಶದಲ್ಲಿ ನಗರಸಭೆ/ಪಟ್ಟಣ ಪಂಚಾಯತಿಯ ಕಂದಾಯ ಅಧಿಕಾರಿಗಳು /ಕಂದಾಯ ನಿರೀಕ್ಷಕರು, ತಾಲೂಕು ಮಟ್ಟದಲ್ಲಿ ತಹಸೀಲ್ದಾರ್ ಗಳು, ಉಪ ತಹಸೀಲ್ದಾರ್ ಗಳು, ಕಂದಾಯ ನಿರೀಕ್ಷಕರು , ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು/ಕಾರ್ಯದರ್ಶಿಗಳು ಮತ್ತು ಕಾರ್ಮಿಕ ಇಲಾಖೆಯ ಕಾರ್ಮಿಕ ಅಧಿಕಾರಿಗಳು/ಹಿರಿಯ ಕಾರ್ಮಿಕ ನಿರೀಕ್ಷಕರು/ಕಾರ್ಮಿಕ ನಿರೀಕ್ಷಕರುಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಪ್ರಭಾರ ಜಿಲ್ಲಾ ಕಾರ್ಮಿಕ ಅಧಿಕಾರಿ ಅಮರೇಂದ್ರ , ಜಿಲ್ಲಾ ನಗರಾಭಿವೃಧ್ದಿ ಕೋಶದ ಯೋಜನಾ ನಿರ್ದೇಶಕ ಅರುಣಪ್ರಭ, ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಕ್ಷೌರಿಕ ಮತ್ತು ಅಗಸ ಸಮುದಾಯದ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಬೆಳಪು : ಸಂಕ್ರಮಣ ಪೂಜೆಯ ಸಂದರ್ಭದಲ್ಲಿ ಕಂಡುಬಂತು ನೀರಿನಲ್ಲಿ ಶಿವನ ಆಕೃತಿ
Posted On: 16 Jun 2020, 08:39 AM
ಬೆಳಪು-ಪಣಿಯೂರು ಗ್ರಾಮದ ಮಲಂಗೋಲಿ ಪರಿಸರದಲ್ಲಿ ಇರುವ ಉಮಾಮಹೇಶ್ವರ ದೇವಸ್ಥಾನದ ಕೆರೆಯಲ್ಲಿ ತಾ/14.06.2020 ರ ಮಿಥುನ ಸಂಕ್ರಮಣದ ಪೂಜೆಯ ಸಂದರ್ಭದಲ್ಲಿ ಶಿವನ ಆಕೃತಿಯೊಂದು ಕಂಡುಬಂದಿದೆ. ಶ್ರೀ ಕ್ಷೇತ್ರವು ಬೆಳಪು-ಪಣಿಯೂರು ಗ್ರಾಮಕ್ಕೆ ಸಂಬಂಧಿಸಿದ್ದು, ಅನಾದಿ ಕಾಲದಲ್ಲಿ ಇಲ್ಲಿ ಗ್ರಾಮಸ್ಥರು ಸೇರಿ ಪೂಜಾವಿಧಿಗಳು ನಡೆಯುತ್ತಿದ್ದು ಕ್ಷೇತ್ರದಲ್ಲಿ ಶ್ರೀ ಉಮಾಮಹೇಶ್ವರ ದೇವರು, ತುಳುನಾಡಿನ ಮೂಲ ದೇವರಾದ ಬೆರ್ಮರು, ಹಾಗೂ ಲೆಕ್ಕೆಸಿರಿ ನಂದಿಗೋಣ ಸೇರಿ ಪಂಚ ದೈವಗಳ ಸಾನ್ನಿಧ್ಯವಿದೆ. ಹಲವಾರು ವರ್ಷಗಳಿಂದ ಅಜೀರ್ಣಾವಸ್ಥೆಯಲ್ಲಿ ಇರುವಂತಹ ಈ ದೇವಸ್ಥಾನದ ಜೀರ್ಣೋದ್ಧಾರ ಬಗ್ಗೆ ಅನೇಕ ವರ್ಷಗಳಿಂದ ಗ್ರಾಮಸ್ಥರು ಪ್ರಯತ್ನ ಪಡುತ್ತಿದ್ದರು, ಇನ್ನೂ ಕಾಲ ಕೂಡಿ ಬರಲಿಲ್ಲ ಎಂದು ಬೇಸರದಲ್ಲಿರುವ ಗ್ರಾಮಸ್ಥರು. ನೀರಿನಲ್ಲಿ ಕಾಣಿಸಿರುವ ಆಕೃತಿ ದೇವರ ಸನ್ನೆಯಂತೆ ಎಂದು ತಿಳಿದಿದ್ದಾರೆ. ಬೆಳಪು-ಪಣಿಯೂರು ಗ್ರಾಮದ ಪಂಚಾಯಿತಿ ಅಧ್ಯಕ್ಷರು ಶ್ರೀ ಡಾ. ದೇವಿಪ್ರಸಾದ್ ಶೆಟ್ಟಿಯವರು ಹಾಗೂ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಸಮಗ್ರವಾಗಿ ಜೀರ್ಣೋದ್ಧಾರದ ಬಗ್ಗೆ ಚಿಂತನೆ ನಡೆದಿದೆ.
ವಿಶೇಷ ಸೂಚನೆ : ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ, ಕಾಪು.
Posted On: 15 Jun 2020, 11:52 PM
ಪ್ರಿಯ ಭಕ್ತಾಭಿಮಾನಿಗಳೇ, ನಾಳೆಯಿಂದ, ಕಾಪು ಶ್ರೀ ಹಳೇ ಮಾರಿಯಮ್ಮ ದೇವಳದಲ್ಲಿ ಶ್ರೀದೇವಿಯ ದರ್ಶನಕ್ಕೆ ಸರ್ವರಿಗೂ ಅವಕಾಶವನ್ನು ಕಲ್ಪಿಸಲಾಗಿದೆ. ಶ್ರೀ ದೇವಳದಲ್ಲಿ ಕೋವಿಡ್ 19 ನಿಯಂತ್ರಣಕ್ಕಾಗಿ ಹಾಗೂ ಸರಕಾರದ ಮಾರ್ಗದರ್ಶನದಂತೆ ವಿಧಿಸಲಾದ ಈ ಕೆಳಗಿನ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಭಕ್ತಾಭಿಮಾನಿಗಳಲ್ಲಿ ವಿನಂತಿಸುತ್ತೇವೆ. ಆಡಳಿತ ಮಂಡಳಿ - ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ, ಕಾಪು.
ಇನ್ನಂಜೆ - ಕಂಬೆರ್ಲ ಪೆರಿಯಕಲ ಉಂಡಾರು ಪುನರ್ ಪ್ರತಿಷ್ಠೆ ಸಕಲ ಕಾರ್ಯಗಳು ಸಂಪನ್ನ
Posted On: 15 Jun 2020, 12:07 AM
ನಮ್ಮ ಹಿರಿಯರು ಅನಾದಿಕಾಲದಿಂದ ಆರಾಧಿಸಿಕೊಂಡು ಬಂದಿರುವ ಉಂಡಾರುವಿನ ಕಾರ್ನಿಕದ ಪರಮ ಪವಿತ್ರ ಸ್ಥಳ ಕಂಬೆರ್ಲ ಪೆರಿಯ ಕಲ ಭಗವಾನ್ ಶ್ರಿ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠೆಯು ಊರ ಪರವೂರ ಭಕ್ತಾದಿಗಳ ಸಹಕಾರದಿಂದ ಸರಳ ರೀತಿಯಲ್ಲಿ ಕಳೆದ ಬುಧವಾರ ಜರಗಿದ್ದು ಇದರ ಮುಂದುವರಿದ ಭಾಗವಾಗಿ ಪೆರಿಯಕಲದಲ್ಲಿ ನೆಲೆಯಾಗಿ ಭಕ್ತಾದಿಗಳಿಗೆ ಸದಾ ಅಭಯವನ್ನು ನೀಡುತ್ತಿರುವ ಸತ್ಯಗಳಿಗೆ ಪುನರ್ ಪ್ರತಿಷ್ಠೆಯ ಸಲುವಾಗಿ ಸಂದಬೇಕಾಗಿರುವ 3 ಬೋಗ ಸೇವೆಯಲ್ಲಿ 2 ಬೋಗ ಸೇವೆ (ಪಂಚಕಜ್ಜಾಯ ಸೇವೆ) ಯನ್ನು ಗ್ರಾಮದ ಭಕ್ತಾದಿಗಳು ಹತ್ತು ಸಮಸ್ತರೊಂದಿಗೆ ಸಲ್ಲಿಸಿದ್ದು 3ನೆಯ ಬೋಗ ಗಡಿಹಾರ ಸೇವೆ (ರಕ್ತಾಹಾರ ಸೇವೆ)ಯನ್ನು ಇಂದು ಪೆರಿಯಕಲದ ಸತ್ಯಗಳ ದರ್ಶನದೊಂದಿಗೆ ಗ್ರಾಮದ ಭಕ್ತಾದಿಗಳ ಸಹಕಾರದಿಂದ ಸಮರ್ಪಿಸಲಾಯಿತು. ಈ ಎಲ್ಲಾ ಕಾರ್ಯಕ್ರಮಗಳನ್ನು ಅತ್ಯಂತ ಸರಳ ರೀತಿಯಲ್ಲಿ ಆಚರಿಸಲಾಯಿತು. ಈ ಪುಣ್ಯ ಕಾರ್ಯಕ್ಕೆ ಕೈ ಜೋಡಿಸಿ ತನು ಮನ ಧನದ ಸಹಕಾರ ನೀಡಿದ ಎಲ್ಲರಿಗೂ ಆಡಳಿತ ಮಂಡಳಿಯು ಧನ್ಯವಾದಗಳನ್ನು ಸಲ್ಲಿಸುತ್ತದೆ.
ಕಾಪು : ಬ್ರಹ್ಮಬೈದರ್ಕಳ ಗರಡಿಯಲ್ಲಿ ಸೇವೆ ಮಾಡುವವರಿಗೆ ಸಹಾಯಧನ
Posted On: 14 Jun 2020, 11:37 PM
ಕೊರೋನ ಸಂಕಷ್ಟದ ಸಮಯದಲ್ಲಿ ಬಿರುವೆರ್ ಕಾಪು ಸೇವಾ ಟ್ರಸ್ಟ್ ಕೈಗೊಂಡ ಅತಿ ಪ್ರಾಮುಖ್ಯತೆಯ *ಬ್ರಹ್ಮ ಶ್ರೀ ನಾರಾಯಣ ಗುರು ಸಾಂತ್ವನ* ಎಂಬ ಯೋಜನೆಯು ಕೊನೆಯ ಹಂತದಲ್ಲಿದೆ. ತುಂಬಾ ಜನ ನಿಸ್ವಾರ್ಥ ಸೇವಾ ದಾನಿಗಳು ತಮ್ಮ ಕೈಯಲಾದ ಸಹಾಯವನ್ನು ಈ ಯೋಜನೆಗೆ ಮಾಡಿದ್ದಾರೆ. ಅದರಿಂದ ಟ್ರಸ್ಟಿನ ಮುಖಾಂತರ ಅನೇಕ ಕಷ್ಟಕ್ಕೊಳಗಾದ ಸಂಸಾರಗಳಿಗೆ ಸಹಾಯ ಮಾಡಿದ್ದಾರೆ, ಕೊನೆಯ ಹಂತದ ನಿಸ್ವಾರ್ಥ ಸೇವೆಯಾಗಿ ಬಿರುವೆರ್ ಕಾಪು ಸೇವಾ ಟ್ರಸ್ಟಿನ ಹೆಮ್ಮೆಯ ಸದಸ್ಯರಾದ ಶ್ರೀ ಸುರೇಶ್ ಪೂಜಾರಿ ಕಲ್ಲುಗುಡ್ಡೆ ಇವರ ಹೇಳಿಕೆಯ ಪ್ರಕಾರ ಬಿಲ್ಲವರ ಕುಲದೇವರ ಆರಾಧನಾಲಯವಾದ ಗರಡಿಗಳಲ್ಲಿ ಪೂ ಪೂಜೆ ಹಾಗೂ ದರ್ಶನ ಸೇವೆ ಮಾಡುವ ಆಯ್ದ ಬಡ ಸಂಸಾರಕ್ಕೆ, ಈ ಕ್ಲಿಷ್ಟಕರ ಸಮಯದಲ್ಲಿ ಟ್ರಸ್ಟ್ ನಿಂದಾದ ಸಣ್ಣ ಮಟ್ಟದ ಸಹಾಯ ಮಾಡುವ ನಿಟ್ಟಿನಲ್ಲಿ ಇಂದು ದಿನಾಂಕ 14.06.2020 ರ ಬೆಳಿಗ್ಗೆ ಆಯ್ದ 8 ಗರೋಡಿಗಳ ಸೇವಾದಾರರಿಗೆ ಸಹಾಯಧನವನ್ನು ವಿತರಿಸಲಾಯಿತು. ಈ ಕೆಲಸಕ್ಕೆ ಸಹಕರಿಸಿದ ರಾಕೇಶ್ ಕುಂಜೂರು, ವಿಜಯ್ ಧೀರಜ್ ಬಂಟಕಲ್ಲ್ ಮತ್ತು ಟ್ರಸ್ಟಿನ ಸದಸ್ಯರಾದ ಕಾರ್ತಿಕ್ ಅಮೀನ್ ಕಲ್ಲುಗುಡ್ಡೆ, ವಿಕ್ಕಿ ಪೂಜಾರಿ ಮಡುಂಬು, ಸುಧಾಕರ್ ಸಾಲ್ಯಾನ್ ಕಾಪು ಪಡು, ಅನಿಲ್ ಅಮೀನ್ ಕಾಪು ಪಡು, ಮನೋಹರ್ ಕಲ್ಲುಗುಡ್ಡೆ ಉಪಸ್ಥಿತರಿದ್ದರು, ಟ್ರಸ್ಟಿನ ಒಳ್ಳೆಯ ಕಾರ್ಯಕ್ರಮ ಆಯೋಜಿಸಿ ಅದನ್ನು ಒಳ್ಳೆಯ ರೀತಿಯಲ್ಲಿ ಮಾಡಿದ ಎಲ್ಲರಿಗೂ ಟ್ರಸ್ಟಿನ ಮುಖ್ಯಸ್ಥ ಬಾಲಕೃಷ್ಣ ಆರ್ ಕೋಟ್ಯಾನ್ ಕಾಪು (ಮಸ್ಕತ್) ಧನ್ಯವಾದಗಳನ್ನು ಅರ್ಪಿಸಿದರು.
ಕುತ್ಯಾರು : 'ಇಂದ್ರಪುರ ಅಂಗನವಾಡಿ' ಗೆ ಕುಡಿಯುವ ನೀರಿನ ಯಂತ್ರ ನೀಡಿದ ಪವನ್ ಕುಮಾರ್
Posted On: 14 Jun 2020, 09:01 PM
ಶಿರ್ವ ಮಂಚಕಲ್ಲಿನ ಕುತ್ಯಾರು ರಸ್ತೆಯಲ್ಲಿರುವ "ಇಂದ್ರಪುರ ಅಂಗನವಾಡಿ" ಕೇಂದ್ರಕ್ಕೆ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸಮಾಜ ಸೇವಕ ಪವನ್ ಕುಮಾರ್ ಅವರು ಸುಮಾರು 8000 ರೂಪಾಯಿ ಮೌಲ್ಯದ ಕುಡಿಯುವ ನೀರಿನ ಯಂತ್ರವನ್ನು ನೀಡಿದರು. ಈ ಸಂಧರ್ಭದಲ್ಲಿ ಮಾತನಾಡಿದ ಪವನ್ ಕುಮಾರ್ ಅವರು ಕರೋನದಿಂದ ಜನರು ಕಂಗಾಲಾಗಿದ್ದು, ಆರೋಗ್ಯದ ಕಡೆ ತುಂಬಾ ಜಾಗ್ರತೆಯನ್ನು ವಹಿಸುತ್ತಾರೆ. ಅದರಲ್ಲೂ ಮುಖ್ಯವಾಗಿ ಮಕ್ಕಳು. ಆದ ಕಾರಣ ಮಕ್ಕಳ ಆರೋಗ್ಯ ದೃಷ್ಟಿಯಿಂದ ಕುಡಿಯುವ ನೀರಿನ ಯಂತ್ರವನ್ನು ನೀಡಿರುತ್ತೆನೆಂದು ತಿಳಿಸಿದರು.. ಈ ಸಂಧರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಸುನಿತಾ ಪೂಜಾರಿ ಹಾಗೂ ಸಹಾಯಕಿ ಪ್ರಭಾ ಅವರು ಉಪಸ್ಥಿತರಿದ್ದರು.. ಪವನ್ ಅವರ ಈ ಕಾರ್ಯಕ್ಕೆ ಶಿಕ್ಷಕರು ಪ್ರಸಂಶಿದರು.
ಉಡುಪಿ.ಜೂನ್,14 : ರಕ್ತದಾನಿಗಳ ದಿನಾಚರಣೆಯ ಪ್ರಯುಕ್ತ 'ರಕ್ತದಾನ ಪುರಸ್ಕಾರ' ಗೌರವಾರ್ಪಣೆ
Posted On: 14 Jun 2020, 08:48 PM
ಉಡುಪಿ :- ವಿಶ್ವ ರಕ್ತದಾನಿಗಳ ದಿನಾಚರಣೆ ಇದರ ಪ್ರಯುಕ್ತ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಉಡುಪಿ ಜಿಲ್ಲೆ ಕುಂದಾಪುರದಲ್ಲಿ ಹಮ್ಮಿಕೊಂಡ ಕಾಯ೯ಕ್ರಮದಲ್ಲಿ "ರಕ್ತದಾನ ಪುರಸ್ಕಾರ". ಗೌರವವನ್ನು ರಕ್ತದಾನಿ ರಾಘವೇಂದ್ರ ಪ್ರಭು,ಕವಾ೯ಲು ಸಹಿತ 5 ಜನರಿಗೆ ಪ್ರಧಾನ ಮಾಡಲಾಯಿತು.ಕಾಯ೯ಕ್ರಮದಲ್ಲಿ ಮಾತನಾಡಿದ ಕುಂದಾಪುರ ಉಪ ವಿಭಾಗ ಸಹಾಯಕ ಆಯುಕ್ತ ಕೆ.ರಾಜು, ರಕ್ತದಾನಕ್ಕಿಂತ ಮಿಗಿಲಾದ ದಾನ ಬೇರೆ ಯಾವುದೂ ಇಲ್ಲ ಒಂದು ರಕ್ತದಾನ 3 ಜನರಿಗೆ ಸಹಾಯಕವಾಗಬಹುದು ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವಂತೆ ಕರೆ ನೀಡಿದರು.ಖ್ಯಾತ ವೈದ್ಯ ಡಾII ಉಮೇಶ್ ಪುತ್ರನ್, ಭಾರತೀಯ ವೈದ್ಯ ಸಂಘದ ಅಧ್ಯಕ್ಷೆ ಡಾ|| ಶ್ರೀದೇವಿ ಕಟ್ಟೆ, ಕುಂದಾಪುರ ತಾಲೂಕು ವೈದ್ಯಾಧಿಕಾರಿ ಡಾ" ನಾಗಭೂಷಣ್ ಉಡುಪ, ರೆಡ್ ಕ್ರಾಸ್ ಸಭಾಪತಿ ಜಯಕರ ಶೆಟ್ಟಿ ಮುಂತಾದವರಿದ್ದರು.ನಂತರ ರಕ್ತದಾನ ಶಿಬಿರ ನಡೆಯಿತು.ಸುಮಾರು 80 ಜನರು ರಕ್ತದಾನ ಮಾಡಿದರು.
ಶಿರ್ವ ಭಾಗದಲ್ಲಿ ಲೇಬರ್ ಕಾರ್ಡ್ ವಿತರಿಸಿದ ಸಮಾಜ ಸೇವಕ ಪವನ್ ಕುಮಾರ್
Posted On: 12 Jun 2020, 10:30 PM
ಶಿರ್ವ ಮಂಚಕಲ್ಲಿನ ತೊಟ್ಲಗುರಿ ಜನರಿಗೆ ಹಾಗೂ ಬಂಟಕಲ್ಲಿನ ಅರಸಿಕಟ್ಟೆಯಲ್ಲಿ ಕೂಲಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರಿಗೆ ಸಮಾಜ ಸೇವಕ ಪವನ್ ಕುಮಾರ್ ಅವರು "Labour card" ವಿತರಿಸಿದರು.. ತೊಟ್ಲಗುರಿಯಲ್ಲಿ ಸುಮಾರು 100 ಮನೆಗಳಿದ್ದು ಇಲ್ಲಿನ ಜನರಿಗೆ ಸಹಾಯ ಮಾಡುವ ದೃಷ್ಟಿಯಿಂದ ಕೂಲಿ ಕೆಲಸ ಮಾಡುವ ಜನರಿಗೆ "labour card" ಮಾಡಲು ಬೇಕಾಗುವ ದಾಖಲೆಯನ್ನು ಸ್ವೀಕರಿಸಿ ಕ್ಲಪ್ತ ಸಮಯಲ್ಲಿ ಅವರಿಗೆ "Labour card"ಅನ್ನು ವಿತರಿಸಿದರು. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಸಮಾಜ ಸೇವಕ ಪವನ್ ಕುಮಾರ್ ಅವರು ಕೂಲಿ ಕಾರ್ಮಿಕರಿಗೆ "Labour card" ಮಾಡುವುದರಿಂದ ಅನೇಕ ಸರಕಾರದ ಸವಲತ್ತುಗಳು ದೊರೆಯುತ್ತದೆ. ತಂದೆ ತಾಯಿಗಳು ಮಾಡುವ "labour card" ನಿಂದಾಗಿ ಮಕ್ಕಳ ವಿದ್ಯಾಭಾಸಕ್ಕಾಗಿ ಹಾಗೂ ಮಕ್ಕಳ ಮುಂದಿನ ಭವಿಷ್ಯಕ್ಕೆ ಸಹಾಯವಾಗುತ್ತದೆ. ಯಾವುದೇ ಅನಾಹುತ ಆದ ಸಂದರ್ಭದಲ್ಲಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು, ಮಕ್ಕಳು ಒಳ್ಳೆಯ ಅಂಕವನ್ನು ಗಳಿಸಿದರೆ ಮಕ್ಕಳಿಗೆ ವಿದ್ಯಾರ್ಥಿ ವೇತನ ದೊರೆಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು..
ಪಡುಬಿದ್ರಿ.ಜೂನ್,12 : ಕೃಷಿ ನಿರ್ಲಕ್ಷ್ಯದ ಸಮಯದಲ್ಲಿ ಕೃಷಿಯತ್ತ ಚಿತ್ತವಹಿಸಿದ ಯುವಕರು
Posted On: 12 Jun 2020, 08:31 PM
ಕೃಷಿ ನಿರ್ಲಕ್ಷ್ಯದ ಈ ಸಮಯದಲ್ಲಿ ಕೃಷಿಯತ್ತ ಚಿತ್ತವಹಿಸಿದ ಪಲಿಮಾರು ಪಂಚಾಯತ್ ವ್ಯಾಪ್ತಿಯ ಅವರಾಲು ಮಟ್ಟು ಪ್ರದೇಶದ ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಸದಸ್ಯರು. ಸೇವೆಯನ್ನೇ ತಮ್ಮ ಹವ್ಯಾಸವನ್ನಾಗಿ ಮಾಡಿಕೊಂಡು ತಮ್ಮ ಗ್ರಾಮಕ್ಕಾಗಿ ಮತ್ತು ಅಶಕ್ತರ ಪಾಲಿನ ಶಕ್ತಿಯಾಗಿ ಶ್ರಮಿಸುತ್ತಿರುವ ಪಲಿಮಾರ್ ಪಂಚಾಯಿತಿ ವ್ಯಾಪ್ತಿಯ ಅವರಾಲು ಮಟ್ಟು ಪ್ರದೇಶದಲ್ಲಿರುವ ಸಂಘಟನೆ ಶ್ರೀದೇವಿ ಫ್ರೆಂಡ್ಸ್ ಕ್ಲಬ್. ಅದೆಷ್ಟೋ ಸಮಾಜೋಪಯೋಗಿ ಕಾರ್ಯಗಳನ್ನು ನಿರ್ವಹಿಸಿದ ಸಂಸ್ಥೆ ಇದೀಗ ತಮ್ಮ ಪ್ರದೇಶದ ಹಡೀಲು ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಮಾಡಲಿದ್ದಾರೆ ಕೊರೋನ ಸಂದರ್ಭ ಹಲವಾರು ಕುಟುಂಬಗಳು ಒಪ್ಪೊತ್ತಿನ ಆಹಾರಕ್ಕಾಗಿ ಪರಿತಪಿಸಿದ್ದನ್ನು ಮನಗಂಡು ಈ ಒಂದು ಆಲೋಚನೆ ಈ ಸಂಘಟನೆಯಲ್ಲಿ ಮೂಡಿ, ಜೊತೆಗೆ ಕೃಷಿಗೆ ಉತ್ತೇಜನ ನೀಡುವುದರೊಂದಿಗೆ, ಕೃಷಿ ಕಾರ್ಯದ ಬಗ್ಗೆ ಯುವಕರಿಗೆ ತಿಳಿಸುವುದರೊಂದಿಗೆ, ಕೃಷಿ ನಂಬಿದ್ದ ಕಾರ್ಮಿಕರನ್ನು ಸೇರಿಸಿಕೊಂಡು ಕೃಷಿ ಕಾರ್ಯ ಮಾಡಬೇಕೆಂಬ ಮಹದಾಸೆ ಇವರದ್ದಾಗಿದೆ. ಪೂರ್ವ ತಯಾರಿಯ ಖರ್ಚು ಕಳೆದು ಬಂದಂತಹ ಅಕ್ಕಿಯನ್ನು ಅಶಕ್ತರಿಗೆ ಮತ್ತು ಬೈ ಹುಲ್ಲನ್ನು ಗೋಶಾಲೆಗೆ ನೀಡಲು ತೀರ್ಮಾನಿಸಿದ್ದಾರೆ. ಇವರ ಈ ಕಾರ್ಯಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಬರೋಬ್ಬರಿ 50 ಬಾರಿ ರಕ್ತದಾನ ಮಾಡಿದ ಕಾಪು ಕ್ಷೇತ್ರದ ರಾಘವೇಂದ್ರ ಪ್ರಭು
Posted On: 11 Jun 2020, 10:02 PM
ರಕ್ತದಾನ ಮಹಾದಾನ ಎಂಬ ನಂಬಿಕೆಯೊಂದಿಗೆ ಸತತವಾಗಿ ರಕ್ತದಾನ ಮಾಡುತ್ತಿರುವ ವೈದ್ಯಕೀಯ ಪ್ರತಿನಿಧಿ ಯುವಕನೊಬ್ಬ 50 ಬಾರಿ ರಕ್ತದಾನ ಮಾಡಿ ಪರರ ಜೀವ ಉಳಿಸಲು ನೆರವಾಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಮೂಡುಬೆಳ್ಳೆ ಅಲೆವೂರು ಸಮೀಪದ ಕರ್ವಾಲಿನ ಗ್ರಾಮೀಣ ಪ್ರದೇಶದ ಯುವಕ ರಾಘವೇಂದ್ರ ಪ್ರಭು ಕರ್ವಾಲು ಅವರೇ ಈ ಮಹಾದಾನಿಯೆನಿಸಿದ್ದಾರೆ. ರಕ್ತದಾನಕ್ಕೆ ಪರ್ಯಾಯವಿಲ್ಲ ಹಾಗಾಗಿ ಸಮಾಜದಲ್ಲಿ ತುರ್ತು ರಕ್ತದ ಅವಶ್ಯಕತೆ ಇದ್ದಾಗ ತುರ್ತಾಗಿ ಸ್ಪಂದಿಸಿ ರಕ್ತ ನೀಡುವ ಪರಿಪಾಠವನ್ನು ಕಾಲೇಜು ದಿನಗಳಿಂದಲೇ ಇವರು ಮೈಗೂಡಿಸಿಕೊಂಡಿದ್ದಾರೆ. ರಾಘವೇಂದ್ರ ಅವರು ಪ್ರಸ್ತುತ ವರ್ಷಕ್ಕೆ ಮೂರು-ನಾಲ್ಕು ಬಾರಿ ರಕ್ತದಾನ ಮಾಡುವುದು ಮಾತ್ರವಲ್ಲದೆ ಅನೇಕ ಸಮಾಜ ಸೇವಾ ಸಂಘಟನೆ ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ರಕ್ತದಾನ ಮಾಡಲು ಪ್ರೇರಣೆ ನೀಡುತ್ತಿದ್ದಾರೆ. ಸತತವಾಗಿ ಜನಜಾಗೃತಿ ಶಿಬಿರಗಳನ್ನೂ ಆಯೋಜಿಸಿ ರಕ್ತದಾನದ ಮಹತ್ವವನ್ನು ಯುವಜನಾಂಗಕ್ಕೆ ಮನವರಿಕೆ ಮಾಡಿ ಈ ಬಗ್ಗೆ ಪ್ರಚೋದನೆಯನ್ನೂ ನೀಡುತ್ತಾರೆ. ಉಡುಪಿ ತಾಲೂಕಿನಾದ್ಯಂತ ಸುಮಾರು 12 ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡಿರುವ ರಾಘವೇಂಧ್ರ ಪ್ರಭು ಅವರು ಭಾರತೀಯ ರೆಡ್ಕ್ರಾಸ್ ಸಂಸ್ಥೆಯಿಂದ ಅತ್ಯುತ್ತಮ ರಕ್ತದಾನಿ ಎಂಬ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಭಾರತೀಯ ಜೆಸಿಐ ಸಂಸ್ಥೆಯ ಮೂಲಕ ವಲಯ ತರಬೇತುದಾರರಾಗಿಯೂ ಹೆಸರು ಮಾಡಿದ್ದಾರೆ. ಕಾಲೇಜಿನ ದಿನಗಳಲ್ಲಿ ಎನ್ಎಸ್ಎಸ್ ಘಟಕದಲ್ಲಿ ಸಕ್ರೀಯರಾಗಿದ್ದಾಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಹಿಳೆಯೊಬ್ಬರಿಗೆ ರಕ್ತದಾನ ಮಾಡಿದ್ದ ರಾಘವೇಂದ್ರ ಪ್ರಭು ಅವರು, ಅಂದಿನಿಂದ ಇಂದಿನವರೆಗೆ ಸತತವಾಗಿ ರಕ್ತದಾನ ಮಾಡುತ್ತಾ ಅನೇಕರ ಜೀವ ಉಳಿಸಲು ನೆರವಾಗಿದ್ದಾರೆ. ನಾನು ಮತ್ತೊಬ್ಬರಿಗೆ ಸಹಾಯ ಮಾಡಲು ರಕ್ತದಾನ ಮಾಡುವುದೇ ವಿನಃ ಯಾವುದೇ ದಾಖಲೆ ಮಾಡುವ ಉದ್ಧೇಶವಿಲ್ಲ ಎಂಬ ಧನ್ಯತಾಭಾವ ರಾಘವೇಂದ್ರ ಪ್ರಭು ಅವರದ್ದಾಗಿದೆ.
