ಶಿರ್ವ: ಕ್ಯಾನ್ಸರ್ ಪೀಡಿತ ಒಬ್ಬಂಟಿ ವ್ಯಕ್ತಿಗೆ ಗ್ರಾ.ಪಂ ಅಧ್ಯಕ್ಷರ ವಾಟ್ಸಪ್ ಗ್ರೂಪ್ ನಿಂದ 1.58 ಲಕ್ಷ ರೂ ನೆರವು
ಶಿರ್ವ: ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಟಕಲ್ಲು ಪೊದಮಾಲೆ ನಿವಾಸಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಹೆನ್ರಿ ಅರಾನ್ನಾರವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಮಣಿಪಾಲದ ಕೆ.ಎಮ್.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಸುಮಾರು 1.50 ಲಕ್ಷ ರೂ ಚಿಕಿತ್ಸಾ ವೆಚ್ಚವನ್ನು ಭರಿಸಬೇಕಾಗಿತ್ತು. ಈ ವಿಚಾರವನ್ನು ತಿಳಿದ ಶಿರ್ವ ಗ್ರಾ.ಪಂ ಅಧ್ಯಕ್ಷ, ಬಂಟಕಲ್ಲು ವಾರ್ಡಿನ ಸದಸ್ಯ ಕೆ ಆರ್ ಪಾಟ್ಕರ್ ರವರು ತಮ್ಮ ವಾರ್ಡ್ ನ ಬಂಟಕಲ್ಲು ವಾರ್ಡ್ ವಾಟ್ಸಪ್ ಗ್ರೂಪ್ ಮೂಲಕ ಈ ಬಗ್ಗೆ ಒಂದು ಸಂದೇಶವನ್ನು ಹಾಕಿದ್ದರು. ಕೇವಲ ಅರ್ಧ ದಿನದ ಅವಧಿಯಲ್ಲಿ ರೂ 1.58 ಲಕ್ಷ ರೂ ಯನ್ನು ಆ ವಾರ್ಡಿನ ಸಹೃದಯಿ ಬಾಂಧವರಿಂದ ಸಂಗ್ರಹವಾಗಿತ್ತು.
ಈ ಸ್ಪಂದನೆಗೆ ಕೆ ಆರ್ ಪಾಟ್ಕರ್ ರವರು ವಾಟ್ಸಪ್ ಮೂಲಕವೇ ಕೃತಜ್ಞತೆ ಸಲ್ಲಿಸಿದ್ದರು. ಆಸ್ಪತ್ರೆಯ ವೆಚ್ಚ ಭರಿಸಲು ಹಣ ಸಂಗ್ರಹವಾಗುತ್ತಿದ್ದಂತೆ ಹೆನ್ರಿ ಅರಾನ್ನಾ ರವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಸಂಗ್ರಹವಾದ ಹಣವನ್ನು ಆಸ್ಪತ್ರೆಗೆ ನೀಡಬೇಕಾಗಿದ್ದ ಬಾಕಿ ಮೊತ್ತವನ್ನು ಪಾವತಿಸಲು ಹಾಗೂ ಅವರ ಅಂತ್ಯಕ್ರಿಯೆಯ ವೆಚ್ಚಕ್ಕೆ ಉಪಯೋಗಿಸಲಾಯಿತು.
