ದಲಿತ ಸಂಘರ್ಷ ಸಮಿತಿ ಕಳತ್ತೂರು ಗ್ರಾಮ ಶಾಖೆ ಉದ್ಘಾಟನೆ
ಕಾಪು : ಪ್ರೋ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಇದರ ಕಳತ್ತೂರು ಶಾಖೆಯ ಉದ್ಘಾಟನೆ ಕಳತ್ತೂರು ಶ್ರೀ ಬಬ್ಬುಸ್ವಾಮಿ ದೇವಸ್ಥಾನದ ಆವರಣದಲ್ಲಿ ಜರಗಿತು.
ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ದೇಶದಲ್ಲಿ ಅಸ್ಪೃಶ್ಯತೆ ಅಸಮಾನತೆ ಸೃಷ್ಟಿಯಿಂದ ಪ್ರಾರಂಭವಾಗಿದ್ದಲ್ಲ, ಅದು ಮಾನವರಿಂದ ಆದದ್ದು, ಅದರ ವಿರುದ್ಧ ಅಂಬೇಡ್ಕರರು ನ್ಯಾಯೋಚಿತವಾಗಿ ಹೋರಾಡಿ ಸಂವಿಧಾನವನ್ನು ರಚಿಸಿದರು. ಅದನ್ನು ಉಳಿಸಿ ಪೋಷಿಸಿದರೆ ಮಾತ್ರ ದೇಶ ಸುಭದ್ರ. ಹಾಗಾಗಿ ನಾವೆಲ್ಲ ಸಂವಿಧಾನ ಸಂರಕ್ಷಿಸಬೇಕೆಂದು ಹೇಳಿದರು.
ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ದಲಿತ ಸಮಾಜ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶ್ಯಸ್ತ್ಯ ನೀಡಿದಾಗ ಹಾಗೂ ಅಂಬೇಡ್ಕರರ ಚಿಂತನೆಯೊಂದಿಗೆ ಬದುಕಿದಾಗ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು.
ಮಾಜಿ ಶಾಸಕರಾದ ಲಾಲಾಜಿ.ಆರ್.ಮೆಂಡನ್, ಕುತ್ಯಾರು ಗ್ರಾ.ಪಂ ಅಧ್ಯಕ್ಷರಾದ ಜನಾರ್ಧನ ಆಚಾರ್ಯ ನೂತನ ಶಾಖೆಗೆ ಶುಭಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಉಡುಪಿ ಜಿಲ್ಲಾಧ್ಯಕ್ಷ ರಮೇಶ್ ಕೋಟ್ಯಾನ್ ಕೆಳರ್ಕಳಬೆಟ್ಟು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ರಂಗನಾಥ್ ಶೆಟ್ಟಿ ಬರಬೆಟ್ಟು, ಶ್ರೀಕೃಷ್ಣ ಬಜೆ, ಅಪ್ಪುರಾಜ್, ರವಿ ಪಲಿಮಾರ್, ನಾರಾಯಣ ಗುರಿಕಾರರು ಕಳತ್ತೂರು, ಸಂದೀಪ್ ಕರ್ಕೇರ ಕಳತ್ತೂರು, ಕುತ್ಯಾರು ಗ್ರಾ.ಪಂ. ಸದಸ್ಯರಾದ ದಿವ್ಯ ಶೆಟ್ಟಿಗಾರ್, ಸ್ಟ್ಯಾನಿ ಕೋಡ್ದ, ಲೀಲಾವತಿ, ಜಗದೀಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ರಾಘವೇಂದ್ರ ಸ್ವಾಗತಿಸಿದರು, ಸಂತೋಷ್ ನಂಬಿಯಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
