50ನೇ ಹುಟ್ಟು ಹಬ್ಬದ ಪ್ರಯುಕ್ತ ಆಶ್ರಮಗಳಿಗೆ ರೂ.50 ಸಾವಿರ ಮೌಲ್ಯದ ದಿನಸಿ ಸಾಮಾಗ್ರಿ ವಿತರಿಸಿದ ಗಿರೀಶ್ ರಾವ್
ಉಡುಪಿ : ಪಡುಬಿದ್ರಿ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದ ಪ್ರಥಮ ಗುರಿಕಾರ ಗಿರೀಶ್ ರಾವ್ ರವರು ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಉಡುಪಿಯ ಕಾರ್ತಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಸುತ್ತಿರುವ ಹೊಸ ಬದುಕು ಹಾಗು ಕೌಡೂರಿನ ಹೂಸ ಬೆಳಕು ಆಶ್ರಮಕ್ಕೆ ಒಟ್ಟು ಸುಮಾರು ರೂ. 50,000 ವೆಚ್ಚದ ದಿನಸಿ ಸಾಮಗ್ರಿಗಳನ್ನು ನೀಡಿ ಆಶ್ರಮ ವಾಸಿಗಳೂಂದಿಗೆ ಹುಟ್ಟು ಹಬ್ಬ ಆಚರಿಸಿದರು.
ಈ ಸಂದರ್ಭ ಅವರ ಸಹವರ್ತಿ ಭಾರತೀಯ ನೌಕಾ ಪಡೆಯ ನಿವೃತ್ತ ಅಧಿಕಾರಿ ನಟರಾಜ್ ಪಿ.ಎಸ್. ರವರು ಮಾತನಾಡಿ, ದಾನವೆಂದರೆ ಕೇವಲ ಹಣವನ್ನು ಸಹಾಯ ರೂಪದಲ್ಲಿ ನೀಡುವುದು ಮಾತ್ರವಲ್ಲದೆ ದಾನದ ನಿಜವಾದ ಅರ್ಥವೆಂದರೆ ಸೇವೆಗೆ ತನ್ನ ಶಕ್ತಿ ಸಮಯ ಮತ್ತು ಸಂಪನ್ಮೂಲಗಳನ್ನು ನಿಸ್ವಾರ್ಥವಾಗಿ ಕೊಡುಗೆ ನೀಡುವುದಾಗಿದೆ. ದಾನ ಮಾಡುವುದರಿಂದ ಆತ್ಮದ ಶುದ್ದೀಕರಣ ಮತ್ತು ಸಂಪತ್ತಿನ ಜೊತೆಗೆ ಸಂತೋಷವನ್ನು ಪಡೆಯಬಹುದು. ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವೆ ಮಾಡುವ ಮನೋ ಇಂಗಿತ ಇಂದಿನ ಯುವ ಜನತೆಯಲ್ಲಿ ಮೂಡಿ ಬರಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಡಾ. ತನುಶ್ರೀ ರಾವ್, ಮೂರನೇ ಗುರಿಕಾರ ಮುರುಡಿ ಜಗದೀಶ್ ರಾವ್, ಪಡುಬಿದ್ರಿ ರೋಟರಿ ನಿಯೋಜಿತ ಅಧ್ಯಕ್ಷ ಸುನಿಲ್ ಕುಮಾರ್, ಪೂರ್ವ ಅಧ್ಯಕ್ಷ ಸಂತೋಷ್ ಪಡುಬಿದ್ರಿ, ಸರ್ವಕಾಲೇಜು ವಿದ್ಯಾರ್ಥಿ ಶಕ್ತಿ ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್, ಹೊಸ ಬದುಕು ಸಂಸ್ಥೆಯ ನಿರ್ವಾಹಕರಾದ ವಿನಯಚಂದ್ರ, ರಾಜಶ್ರೀ ಮತ್ತು ಕೌಡೂರು ಹೊಸ ಬೆಳಕು ಆಶ್ರಮದ ನಿರ್ವಾಹಕರಾದ ತನುಲಾ ಉಪಸ್ಥಿತರಿದ್ದರು.
