ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ : ಉಚ್ಚಂಗಿ ಬ್ರಹ್ಮಕಲಶಾಭಿಷೇಕ ; ಧಾರ್ಮಿಕ ಕಾರ್ಯಗಳು ಸಂಪನ್ನ
ಕಾಪು : ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಜರುಗುತ್ತಿರುವ 8ನೇ ದಿನದಂದು ಉಚ್ಚಂಗಿ ಬ್ರಹ್ಮಕಲಶಾಭಿಷೇಕ ಸಹಿತ ಧಾರ್ಮಿಕ ಕಾರ್ಯಗಳು ಸಂಪನ್ನಗೊಂಡವು.
ಧಾರ್ಮಿಕ ಕಾರ್ಯಗಳಲ್ಲಿ ಪೂರ್ವಾಹ್ನ ಭುವನೇಶ್ವರೀ ಸಹಸ್ರನಾಮಮಂತ್ರಯಾಗ, ವಿಜಯಪ್ರದ ಜಯಸೂಕ್ತಯಾಗ, ಚಾಮುಂಡಾಕಲಾ ಮಾತೃಕಾಮಂಡಲಾರಾಧನಮ್, ಚಂಡಿಕಾಸಪ್ತಶ್ಲೋಕಿ ಸಪ್ತಶತೀಯಾಗ, ಆಶ್ವಮೇಧಸೂಕ್ತಯಾಗ, ಪ್ರತ್ಯಕ್ಷ ಅಶ್ವಪೂಜಾ, ಉಚ್ಚಂಗಿ ಬ್ರಹ್ಮಕಲಶಾಭಿಷೇಕ ಧಾರ್ಮಿಕ ಕಾರ್ಯಗಳು ಜರುಗಿದವು.
ಮಧ್ಯಾಹ್ನ ಮಹಾಪ್ರಸಾದ, ನಂತರ ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು. ಸಂಜೆ ಸಾಕ್ಷಾತ್ ಗಂಗಾಭಾಗೀರಥೀ ಪೂಜನಮ್, ಕಾಳೀಕಲಾಮಾತೃಕಾ ಮಂಡಲೋಪಾಸನಮ್, ಶ್ರೀಮಾರಿಯಮ್ಮ ದೇವಿಯ ಪಂಚವಿಂಶತಿದ್ರವ್ಯಮೀಳಿತ ಸಹಸ್ರ ಕಲಶಪೂರಣಮ್, ಬ್ರಹ್ಮಕಲಶಾಧಿವಾಸಪೂಜಾ, ನವಕುಂಡಲಾಧಿವಾಸಯಾಗ, ಶ್ರೀಭೈರವೀಮಾತೃಕಾ ಮಂಡಲೋಪಾಸನಮ್, ಸರ್ವ ಮಂಗಲಕರ ಚಂಡೀಪುರಶ್ಛರಣಮ್. ಶ್ರೀತಾರಾಕಲಾಮಾತೃಕಾ ಮಂಡಲಪೂಜನಮ್ ಕಾರ್ಯಗಳು ಜರುಗಿದವು.
ಧಾರ್ಮಿಕ ವಿಧಿ ವಿಧಾನಗಳು ಕೊರಂಗ್ರಪಾಡಿ ವೇ.ಮೂ.ಶ್ರೀ ಕೆ.ಜಿ. ರಾಘವೇಂದ್ರ ತಂತ್ರಿಗಳ ಮಾರ್ಗದರ್ಶನದಲ್ಲಿ ಕ್ಷೇತ್ರದ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ಜ್ಯೋತಿಷ್ಯ ವಿದ್ವಾನ್ ಶ್ರೀ.ಕೆ.ಪಿ. ಕುಮಾರಗುರು ತಂತ್ರಿಗಳ ನೇತೃತ್ವದಲ್ಲಿ ಅರ್ಚಕರಾದ ವೇ.ಮೂ. ಕಲ್ಯ ಶ್ರೀ ಶ್ರೀನಿವಾಸ ತಂತ್ರಿಗಳ ಸಹಯೋಗದಲ್ಲಿ ಜರುಗಿದವು.
ಈ ಸಂದರ್ಭದಲ್ಲಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ಕೆ.ಪ್ರಕಾಶ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಲಾಲಾಜಿ ಆರ್ ಮೆಂಡನ್, ವಿವಿಧ ಸಮಿತಿಗಳ ಪದಾಧಿಕಾರಿಗಳು, ಕ್ಷೇತ್ರದ ಭಗವದ್ಭಕ್ತರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜೆ ವಿದ್ವಾನ್ ಗಣಪತಿ ಭಟ್ ಯಲ್ಲಪುರ, ವಿದ್ವಾನ್ ಶ್ರೀಪತಿ ಉಪಾಧ್ಯಾಯ ಕುಂಭಾಸಿ ಇವರಿಂದ "ಗಾನ ಆಖ್ಯಾನ" "ಗಂಗಾವತರಣ", ರಾತ್ರಿ ಪ್ರಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಮತ್ತು ಬಳಗದವರಿಂದ "ಸಂಗೀತಾಮೃತ" ಜರುಗಿತು.
