ಹಳೆಯ ಕೆರೆಗಳನ್ನು ಉಳಿಸಿದರೆ ಮುಂದಿನ ಜೀವ ಕುಲ ಉಳಿದೀತು : ಕಟ್ಟಿಂಗೇರಿ ಹೆಬ್ಬಾರ್
Thumbnail
ಕಾಪು : ಕೃಷಿ ಹಾಗೂ ಅಂತರ್ಜಲ ವೃದ್ಧಿಗೆ ಕೆರೆಗಳು ಪ್ರಮುಖ ಪಾತ್ರ ವಹಿಸುತ್ತವೆ. ನೀರಿನ ಶೇಖರಣೆಗೆ ಕೆರಗಳು ಅತೀ ಮುಖ್ಯ. ಜೀವಜಲ ಉಳಿಸುವುದು ಪುಣ್ಯದ ಕಾರ್ಯ. ಹಳೆಯ ಕೆರೆಗಳನ್ನು ಉಳಿಸಿದರೆ ಮುಂದಿನ ಜೀವ ಕುಲ ಉಳಿದೀತು ಎಂದು ರಾಜ್ಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪೂರ್ವ ಅಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್ ನುಡಿದರು. ಅವರು ಶನಿವಾರ ಬೆಳ್ಳೆ ಗ್ರಾ.ಪಂ.ವ್ಯಾಪ್ತಿಯ ಪಡುಬೆಳ್ಳೆ ಸಮೀಪ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ "ನಮ್ಮೂರು ನಮ್ಮ ಕೆರೆ" ಕಾರ್ಯಕ್ರಮದಲ್ಲಿ ಕುರುಡಾಯಿ ಕೆರೆಯ ಹೂಳೆತ್ತುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಮೂಲಕ ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಹುಟ್ಟಿನಿಂದ ಸಾಯುವವರೆಗೆ ಮನುಷ್ಯರಿಗೆ ಏನೆಲ್ಲಾ ಅಗತ್ಯ ಇದೆಯೋ ಅದನ್ನೆಲ್ಲಾ ಗ್ರಾಮಾಭಿವೃದ್ಧಿ ಯೋಜನೆಗಳ ಮೂಲಕ ಸಾಕಾರಗೊಳಿಸಲಾಗುತ್ತಿದೆ. ಈಗಾಗಲೇ 800ಕ್ಕೂ ಅಧಿಕ ಕೆರಗಳ ಜೀರ್ಣೋದ್ದಾರ ಮಾಡಲಾಗಿದೆ ಎಂದರು. ಕಾಪು ತಾಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ ಮಾತನಾಡಿ, ಎಲ್ಲಾ ಜೀವರಾಶಿಗಳಿಗೂ ನೀರು ಅತ್ಯಂತ ಅಮೂಲ್ಯವಾಗಿದ್ದು ಅದನ್ನು ಪೂಜ್ಯರು ಮನಗಂಡು ಈ ಕಾರ್ಯವನ್ನು ಕೈಗೊಂಡಿದ್ದಾರೆ. ಇದಕ್ಕೆ ಸರ್ವರ ಸಹಕಾರ ಅತ್ಯಗತ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರೀಶ್ ಶೆಟ್ಟಿ ಗ್ರಾ.ಪಂ.ಸದಸ್ಯ ಹಾಗೂ ಕುರುಡಾಯಿ ಕೆರೆ ಸಮಿತಿ ಬೆಳ್ಳೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬೆಳ್ಳೆ ಗ್ರಾ.ಪಂ.ಅಧ್ಯಕ್ಷೆ ದಿವ್ಯಾ ಆಚಾರ್ಯ, ಉಪಾಧ್ಯಕ್ಷ ಶಶಿಧರ ವಾಗ್ಲೆ, ಜನಜಾಗೃತಿ ಸಮಿತಿ ಸದಸ್ಯೆ ಸುಜಾತಾ ಸುವರ್ಣ, ಜನಜಾಗೃತಿ ವೇದಿಕೆ ಪೂರ್ವಾಧ್ಯಕ್ಷ ನವೀನ್ ಅಮೀನ್ ಶಂಕರಪುರ, ಕೇಂದ್ರ ಸಮಿತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಪ್ರಮುಖರಾದ ಸ್ಯಾಮ್ಸನ್, ಶ್ರೀನಿಧಿ ಪ್ರಭು, ಗ್ರಾ.ಪಂ.ಸದಸ್ಯರಾದ ಸಂತೋಷ್, ಪ್ರೇಮಾ, ವೆಂಕಟೇಶ್, ಅಮಿತಾ ಉಪಸ್ಥಿತರಿದ್ದರು. ಮೇಲ್ವಿಚಾರಕಿ ಗೀತಾ ನಿರೂಪಿಸಿದರು. ದೇವೇಂದ್ರ ನಾಯಕ್ ಸ್ವಾಗತಿಸಿದರು. ಸೇವಾ ಪ್ರತಿನಿಧಿಗಳಾದ ದಿವ್ಯಾ, ಮಲ್ಲಿಕಾ, ಲಕ್ಷ್ಮಿ, ಶೌರ್ಯ ಘಟಕದ ಸದಸ್ಯರು ಉಪಸ್ಥಿತರಿದ್ದರು.
19 Apr 2025, 05:38 PM
Category: Kaup
Tags: