ಜುಲೈ 27 : ಶ್ರೀ ನಾರಾಯಣ ಗುರು ಯುವ ವೇದಿಕೆ ಉಡುಪಿ ವತಿಯಿಂದ ಕೋಟಿ ಚೆನ್ನೆಯೆರ್ ನಾಟಕ ಪ್ರದರ್ಶನ
Posted On:
25-07-2025 11:02AM
ಉಡುಪಿ : ಕಲಿಯುಗದ ಕಾರ್ಣಿಕ ಪುರುಷರಾದ ಕೋಟಿ ಚೆನ್ನಯ್ಯರ ಇತಿಹಾಸ ಸಾರುವ ಬಹು ನಿರೀಕ್ಷಿತ ಮತ್ತು ಉಚಿತ ಪ್ರವೇಶವಿರುವ 'ಕೋಟಿ ಚೆನ್ನಯೆರ್' ನಾಟಕವು ಜುಲೈ 27ರ ಆದಿತ್ಯವಾರ ಮಧ್ಯಾಹ್ನ 2 ಗಂಟೆಗೆ ಉದ್ಯಾವರದ ಕ್ಸೇವಿಯರ್ ಸಭಾಭವನದಲ್ಲಿ ಜರುಗಲಿದೆ ಎಂದು ಶ್ರೀ ನಾರಾಯಣ ಗುರು ಯುವ ವೇದಿಕೆಯ ಪ್ರಕಟಣೆ ತಿಳಿಸಿದೆ.
ಇತ್ತೀಚೆಗೆ ಬಿಡುಗಡೆಗೊಂಡ ಧರ್ಮ ಚಾವಡಿ ಚಿತ್ರ ನಿರ್ದೇಶಕರ ಸಾರಥ್ಯದ ಕೋಟಿ ಚೆನ್ನಯೆರ್ ನಾಟಕವು ಉಡುಪಿ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಮಂಗಳೂರಿನ ಖ್ಯಾತ ನಾಟಕ ತಂಡ ಪ್ರಕೃತಿ ಕಲಾವಿದೆರ್ ಕುಡ್ಲ ಇವರ ಅಭಿನಯದಲ್ಲಿ ಜರುಗಲಿದ್ದು, ಕಲಾಭಿಮಾನಿಗಳಲ್ಲಿ ಬಹಳಷ್ಟು ನಿರೀಕ್ಷೆ ಹುಟ್ಟಿಸಿದೆ.
ಬಹಳಷ್ಟು ಯಶಸ್ವೀ ಸಾಂಸ್ಕೃತಿಕ ಕಾರ್ಯಕ್ರಮ ಪ್ರಾಯೋಜಕತ್ವ ವಹಿಸಿಕೊಂಡು, ಹಲವಾರು ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊoಡಿರುವ ಶ್ರೀ ನಾರಾಯಣ ಗುರು ಯುವ ವೇದಿಕೆ (ರಿ) ಉಡುಪಿ, ಈ ಸಂಘಟನೆಯು ಹತ್ತು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು ಬಂದಿದೆ. ಶೂದ್ರ ಶಿವ, ಗೆಜ್ಜೆ ಗಿರಿ ಕ್ಷೇತ್ರ ಮಹಾತ್ಮೆ, ಶಂಭು ಕಲ್ಲು ಕ್ಷೇತ್ರ ಮಹಾತ್ಮೆ ಮುಂತಾದ ಇತಿಹಾಸ ಹಿನ್ನೆಲೆಯ ಕಾರ್ಯಕ್ರಮ ಮಾತ್ರವಲ್ಲದೆ, ತುಳು ನಾಟಕ, ನಾರಾಯಣ ಗುರುಗಳ ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂಬ ಸಂದೇಶವನ್ನು ಪ್ರತಿ ಕಾರ್ಯಕ್ರದಲ್ಲಿ ಸಂಬಂಧಪಟ್ಟ ಸಂಪನ್ಮೂಲ ಅತಿಥಿಗಳ ಮೂಲಕ ಗುರು ಸಂದೇಶ ಎಂಬ ಹೆಸರಿನಲ್ಲಿ ಶ್ರೀ ನಾರಾಯಣ ಗುರುಗಳ ತತ್ವ ಸಿದ್ಧಾಂತವನ್ನು ಪ್ರತಿಪಾದಿಸುವ ವಿಶಿಷ್ಟ ಕಾರ್ಯಕ್ರವನ್ನು ನಡೆಸಿಕೊಂಡು ಬಂದಿದೆ.
2025ನೇ ಸಾಲಿನಲ್ಲಿ, ಕಳೆದ 7 ತಿಂಗಳಲ್ಲಿ ಮೂರನೇ ಬಾರಿಗೆ ಯಶಸ್ವೀ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡು ಬಂದಿರುವ ಯುವ ವೇದಿಕೆಯು, ಇದೀಗ 'ಬಿರ್ಧ್ ದ ಬೀರೆರ್ ಕೋಟಿ ಚೆನ್ನಯೆರ್' ಎಂಬ ನಾಟಕ ಪ್ರದರ್ಶನಕ್ಕೆ ಸಿದ್ದಗೊಂಡಿದೆ. ಪ್ರಖ್ಯಾತ ಕಲಾವಿದರಿಂದ ಕೂಡಿದ, ಭಕ್ತಿ ಪ್ರಧಾನ ನಾಟಕಕ್ಕೆ ಗಣ್ಯಾತಿ ಗಣ್ಯರು ಮತ್ತು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದ್ದು, ಕಲಾಭಿಮಾನಿಗಳು ಬಹು ನಿರೀಕ್ಷೆಯ ಈ ನಾಟಕದ ಪ್ರಯೋಜನವನ್ನು ಪಡೆಯಲು ಶ್ರೀ ನಾರಾಯಣ ಗುರು ಯುವ ವೇದಿಕೆ (ರಿ) ಉಡುಪಿ ಇದರ ಸರ್ವ ಪದಾಧಿಕಾರಿಗಳು ವಿನಂತಿಸಿದ್ದಾರೆ.