ಎರ್ಮಾಳು ತೆಂಕ- ಬಡ ಜೋಡುಕರೆ ಕಂಬಳ ಪೂರ್ವಭಾವಿ ಪ್ರಥಮ ಸಭೆ ; ಫೆ. 28ರಂದು ಕಂಬಳ
Thumbnail
ಪಡುಬಿದ್ರಿ : ಎರ್ಮಾಳು ತೆಂಕ- ಬಡ ಜೋಡುಕರೆ ಕಂಬಳದ ಪೂರ್ವಭಾವಿ ಪ್ರಥಮ ಸಭೆಯು ಎರ್ಮಾಳು ಜನಾರ್ಧನ ದೇವಳದ ಆವರಣದಲ್ಲಿ ಭಾನುವಾರ ಜರಗಿತು. ಕಂಬಳ ಸಮಿತಿಯ ಗೌರವಾಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ಮಾತನಾಡಿ, ಬಡಗೊಟ್ಟು ಬಾಕ್ಯಾರು ಕಂಬಳಕ್ಕೆ ಮಾತ್ರ ಉಪಯೋಗಿಸಬಹುದಾದ 12ಎಕರೆ ಜಾಗದಲ್ಲಿ ನಾವು ಈ ಬಾರಿ ಪ್ರಥಮವಾಗಿ ಎರ್ಮಾಳು ತೆಂಕ- ಬಡ ಜೋಡುಕರೆ ಕಂಬಳಕ್ಕಾಗಿ ನಿಗದಿ ಪಡಿಸಿದ್ದೇವೆ. ಹಿಂದೆ ಜೈನ ಮತದವರು ಕಂಬಳ ಮಾಡುತ್ತಿದ್ದ ಜಾಗ ಇದಾಗಿತ್ತು. ಊರ ಜನರಿಗೆ ಯಾವುದೇ ತೊಂದರೆ ಬರದಂತೆ ನಾವು ವ್ಯಾಘ್ರ ಚಾಮುಂಡಿ ದೈವಕ್ಕೆ ಸೂಕ್ತ ನೆಲೆ ಕಲ್ಪಿಸಿ, ಇದೀಗ ಕಂಬಳ ಮಾಡಲು ಉದ್ದೇಶಿಸಿದ್ದೇವೆ. ಅ.22ರಂದು ಕಂಬಳ ಕರೆಗೆ ಭೂಮಿ ಪೂಜೆ, ಫೆ.28ರಂದು ಕಂಬಳ ಜರಗಲಿದೆ ಎಂದರು. ಕಂಬಳ ಜಾತ್ಯಾತೀತ ಜನಪದ ಕ್ರೀಡೆ. ಇದು ಕಂಬಳದ ಮೊದಲ ಸಭೆ. ಎರ್ಮಾಳು ಶ್ರೀ ಲಕ್ಷ್ಮೀ ಜನಾರ್ದನ ದೇವರ ಉತ್ಸವದಂತೆ ಎರ್ಮಾಳು ತೆಂಕ - ಬಡ ಕಂಬಳವನ್ನು ಎಲ್ಲರೂ ಸೇರಿ ಅದ್ದೂರಿಯಾಗಿ ಮಾಡೋಣ ಎಂದರು. ಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ರಾಜ್ ಎರ್ಮಾಳು ಬೀಡು ಮಾತನಾಡಿ, ಎರ್ಮಾಳು ಬೀಡು ನೇತೃತ್ವದಲ್ಲಿ ಎರ್ಮಾಳಿನಲ್ಲಿ 1978 ರಲ್ಲಿ ಕೊನೆಯ ಕಂಬಳವಾಗಿತ್ತು. ನಮ್ಮ ಕಂಬಳ ಎಂಬ ಭಾವನೆಯಿಂದ ಇದನ್ನು ಯಶಸ್ವಿಗೊಳಿಸೋಣ ಎಂದರು. ಎರ್ಮಾಳು ಶ್ರೀ ಕುದ್ರೊಟ್ಟು ಬ್ರಹ್ಮ ಬೈದರ್ಕಳ ಗರಡಿಯ ಪ್ರಧಾನ ಅರ್ಚಕ ಸದಾನಂದ ನಾಯ್ಗರು, ಎರ್ಮಾಳು ಜನಾರ್ಧನ ಜನಕಲ್ಯಾಣ ಸಮಿತಿ ಅಧ್ಯಕ್ಷ ಸುರೇಶ್ ಜಿ ಶೆಟ್ಟಿ, ಎರ್ಮಾಳು ಮಸೀದಿ ಅಧ್ಯಕ್ಷ ಸುಲೇಮಾನ್, ಜಿನರಾಜ್ ಎರ್ಮಾಳು, ವೈ. ಶಶಿಧರ ಶೆಟ್ಟಿ, ಯಶೋಧರ ಶೆಟ್ಟಿ ಮತ್ತಿತರರು ಅಭಿಪ್ರಾಯ ಮಂಡಿಸಿದರು. ಈ ಸಂದರ್ಭ ವೆಂಕಟೇಶ ನಾವಡ, ಬಾಲಚಂದ್ರ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಜಗಜೀವನ್ ಚೌಟ, ಭರತ್ ಕುಮಾರ್, ಗೋಪಾಲ ಶೆಟ್ಟಿ, ಜಯರಾಜ್ ಎರ್ಮಾಳು, ಸಂತೋಷ್ ಶೆಟ್ಟಿ ಬರ್ಪಾಣಿ, ಶಶಿಧರ ಶೆಟ್ಟಿ, ವಿವಿಧ ಜಾತಿ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು. ಶಿವಪ್ರಸಾದ್ ಶೆಟ್ಟಿ ಎಲ್ಲದಡಿ ಸ್ವಾಗತಿಸಿ, ನಿರೂಪಿಸಿದರು.
12 Oct 2025, 04:59 PM
Category: Kaup
Tags: