ಕಾಪು : ಸಾಧನಾ ಶಿಖರವೇರಿದ ಸಾಹಿತಿ ಎಸ್.ಎಲ್.ಭೈರಪ್ಪ - ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ
Thumbnail
ಕಾಪು : ಬದುಕಿನ ಸಮಸ್ಯೆಗಳನ್ನು ಲೆಕ್ಕಿಸದೆ ಸಾಧನಾ ಶಿಖರವನ್ನು ಏರಿದ ಸಾಹಿತಿ ಭೈರಪ್ಪ ನಮಗೆ ಸ್ಪೂರ್ತಿ ಆಗಬೇಕು. ಇವರ ಕೃತಿಗಳು ಚರ್ಚೆಗೆ ಒಳಗಾದ್ದರಿಂದ ಎಡ ಬಲ ಚಿಂತಕರೂ ಕೊಂಡು ಓದಿದವರಿದ್ದಾರೆ. ಕೃತಿಗಳ ಮೂಲಕ ಚಿರಾಯುವಾದ ಸಾಹಿತಿ ಎಸ್.ಎಲ್.ಭೈರಪ್ಪ ಎಂದು ಉಡುಪಿ ಎಮ್.ಜಿ.ಎಮ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ ನುಡಿದರು. ಅವರು ಮಂಗಳವಾರ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ನೇತೃತ್ವದಲ್ಲಿ ಸಾಹಿತ್ಯ ಸಂಘ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕಾಪು ಇವರ ಸಹಭಾಗಿತ್ವದಲ್ಲಿ ಕಾಲೇಜಿನ ಡಾ.ವಿ.ಎಸ್.ಆಚಾರ್ಯ ಸಭಾಭವನದಲ್ಲಿ ಏರ್ಪಡಿಸಿದ "ಡಾ.ಎಸ್.ಎಲ್.ಭೈರಪ್ಪ ಸಂಸ್ಮರಣೆ" ಕಾರ್ಯಕ್ರಮದಲ್ಲಿ ಮಾತನಾಡಿದರು. ದೇವರು ಎಲ್ಲಿ ? ಎನ್ನುವವರಿಗೆ ದೇವರು ಇಲ್ಲಿ ಎಂದು ತೋರಿಸಿ ಕೊಟ್ಟ ಭೈರಪ್ಪರವರನ್ನು ಹೊಗಳುವವರೂ ತೆಗಳುವವರೂ ಇದ್ದಾರೆ. ಇವರ ಕೃತಿಗಳಲ್ಲಿ ವಾಸ್ತವತೆ ಮತ್ತು ಬದುಕಿನ ಚಿಂತೆನೆಯೂ ಇದೆ ಎಂದರು. ಕಾಲೇಜಿನ ಪ್ರಾಚಾರ್ಯರಾದ ಡಾ.ಗೋಪಾಲೃಷ್ಣ ಎಂ.ಗಾಂವ್ಕರ್ ಮಾತನಾಡಿ, ಹಲವಾರು ಸಾಹಿತ್ಯ ಕೃತಿಗಳಲ್ಲಿ ಅತೀ ಹೆಚ್ಚು ಆಸಕ್ತಿಯನ್ನು ಮೂಡಿಸಿದ ಕೃತಿಗಳಿದ್ದರೆ ಅದು ಭೈರಪ್ಪರವರದ್ದು, ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಓದುಗರಾಬೇಕು. ಸಾಹಿತ್ಯ ವ್ಯಕ್ತಿತ್ವವನ್ನು ರೂಪಿಸುತ್ತದೆ. ದಿನ ನಿತ್ಯದ ವಾಸ್ತವಿಕತೆ ಅರಿಯಲು ಕಾದಂಬರಿಗಳನ್ನು ಓದಬೇಕು ಎಂದರು. ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಭೈರಪ್ಪನವರು ಕಾದಂಬರಿ ಬರೆಯುವ ಪೂರ್ವದಲ್ಲಿ ಸಾಕಷ್ಟು ಸಿದ್ಧತೆ ಮಾಡಿಕೊಂಡು ನಿಖರವಾದ ಮಾಹಿತಿಯನ್ನು ಓದುಗರಿಗೆ ತಿಳಿಯುವಂತೆ ಅಭಿವ್ಯಕ್ತಿಗೊಳಿಸುತ್ತಿದ್ದರು. ಹಾಗಾಗಿ ಅವರ ಕಾದಂಬರಿಗಳಲ್ಲಿ ನಿತ್ಯ ಸತ್ಯವನ್ನು ಕಾಣಬಹುದಾಗಿದೆ ಎಂದರು. ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕರೂ, ಸಾಹಿತ್ಯ ಸಂಘದ ನಿರ್ದೇಶಕರಾದ ಡಾ.ರವಿರಾಜ್ ಶೆಟ್ಟಿ ಭೈರಪ್ಪರವರ ಸಾಹಿತ್ಯ ಸೇವೆಯ ಬಗ್ಗೆ ಅನುಭವ ಹಂಚಿಕೊಂಡರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸಹಿತ ವೇದಿಕೆಯಲ್ಲಿರುವ ಗಣ್ಯರು ಭೈರಪ್ಪರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿ, ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕಾಪು ಕಸಾಪ ಸಹಕಾರ್ಯದರ್ಶಿ ಕೃಷ್ಣಕುಮಾರ್ ರಾವ್ ಮಟ್ಟು, ಸದಸ್ಯರಾದ ಮಧುಕರ್ ಎಸ್.ಕಲ್ಯಾ, ರಾಕೇಶ್ ಕುಂಜೂರು, ಜಿಲ್ಲಾ ಸಮಿತಿಯ ನರಸಿಂಹಮೂರ್ತಿ ರಾವ್, ಕಾಲೇಜಿನ ಸಹ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಘಟಕದ ಕೋಶಾಧ್ಯಕ್ಷರು, ಕಾರ್ಯಕ್ರಮ ಸಂಯೋಜಕರಾದ ವಿದ್ಯಾಧರ್ ಪುರಾಣಿಕ್ ನಿರೂಪಿಸಿದರು. ಆಂಗ್ಲ ಭಾಷಾ ವಿಭಾಗದ ಸಹ ಪ್ರಾಧ್ಯಾಪಕಿ ದೀಪಿಕಾ ಸುವರ್ಣ ವಂದಿಸಿದರು.
15 Oct 2025, 05:15 AM
Category: Kaup
Tags: