ಐಎಂಎ ಇದರ ರಾಜ್ಯ ಉಪಾಧ್ಯಕ್ಷರಾಗಿ ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಅವಿರೋಧ ಆಯ್ಕೆ
Thumbnail
ಉಡುಪಿ : ನೂರು ವರ್ಷಗಳ ಸಂಭ್ರಮದಲ್ಲಿ ಇರುವ ಭಾರತೀಯ ವೈದ್ಯಕೀಯ ಸಂಘ ಇದರ ಕರ್ನಾಟಕ ರಾಜ್ಯ ಶಾಖೆಗೆ ನಡೆದ ಚುನಾವಣೆಯಲ್ಲಿ ರಾಜ್ಯ ಉಪಾಧ್ಯಕ್ಷರಾಗಿ ಮಂಗಳೂರು ಭಾರತೀಯ ಸಂಘದ ಮಾಜಿ ಅಧ್ಯಕ್ಷ ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಅವಿರೋಧವಾಗಿ ಆಯ್ಕೆ ಆಗಿರುತ್ತಾರೆ. ವಿಶ್ವದಲ್ಲಿಯೇ ಅತಿ ದೊಡ್ಡ ಹಾಗು ಅತೀ ಪ್ರಭಾವಶಾಲಿ ಸರಕಾರೇತರ ಸಂಸ್ಥೆಯಾಗಿರುವ ಐಎಂಎ ಭಾರತದ ಪ್ರತೀ ರಾಜ್ಯ, ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಶಾಖೆಗಳನ್ನ ಹೊಂದಿರುವುದಲ್ಲದೇ ವಿಶ್ವದ ಹಲವು ರಾಷ್ಟ್ರಗಳಲ್ಲಿ ತನ್ನ ಸುಮಾರು 2500 ರಷ್ಟು ಶಾಖೆಯನ್ನ ಹೊಂದಿದೆ. ಕಳೆದ 2 ಎರಡು ದಶಕಗಳಿಂದ ಐಎಂಎ ಯ ಜೊತೆ ಸಂಘಟನಾತ್ಮಕವಾಗಿ ಜೋಡಿಸಿಕೊಂಡು ದುಡಿಯುತ್ತಿರುವ ಡಾ ಕುಲಾಲ್ ದ.ಕ ಜಿಲ್ಲೆ, ಕರಾವಳಿ, ಮಲೆನಾಡು ಹಾಗು ಮೈಸೂರು ವಿಭಾಗಗಳಲ್ಲಿ ಪರಿಣಾಮಕಾರಿ ನಾಯಕತ್ವ ನೀಡಿ, ಸ್ಥಳೀಯ ಶಾಖಾ ಅಧ್ಯಕ್ಷ, ಪ್ರಾದೇಶಿಕ ಅಧ್ಯಕ್ಷ, ಸಾರ್ವಜನಿಕ ಸಂಪರ್ಕ ಅಧಿಕಾರಿ, ಸಂಚಾಲಕ, ಸಂಯೋಜಕ , ರಾಜ್ಯ ಕೇಂದ್ರ ಹಾಗೂ ರಾಷ್ಟ್ರ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ದುಡಿದು ಸಾಕಷ್ಟು ಜನಾನುರಾಗಿ ಆಗಿರುವ ಇವರು ರಾಜ್ಯದ ಕನ್ನಡ ವೈದ್ಯ ಬರಹಗಾರರ ಬಳಗವನ್ನ ಹುಟ್ಟು ಹಾಕಿ, ವೈದ್ಯ ಸಾಹಿತಿಗಳನ್ನ ಸಂಘಟಿಸಿ 2020 ರಲ್ಲಿ ಮಂಗಳೂರಲ್ಲಿ ಪ್ರಥಮ ವೈದ್ಯರ ಸಾಹಿತ್ಯ ಸಮ್ಮೇಳನ ಆಯೋಜಿಸಿ ಚಾಲನೆ ಕೊಟ್ಟಿದ್ದರು. ಹಲವಾರು ವೈದ್ಯ ಹಾಗು ಕುಟುಂಬ ವೈದ್ಯರ ಸಮ್ಮೇಳನ ನಡೆಯಿಸಿದವರು. ಸಂಘಟನೆ, ವೈದ್ಯಕೀಯ ಸೇವೆ, ಬರಹ, ಭಾಷಣ ,ಸಾಮಾಜಿಕ ಹೋರಾಟಗಳಿಂದ ಚಿರಪರಿಚಿತರಾಗಿರುವ ಇವರಿಗೆ ಐಎಂಎ ಜೀವಮಾನದ ಸಾಧನೆಗೆ ಕೊಡುವ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಡಾ. ಬಿ. ಸಿ. ರಾಯ್ ಗೌರವ ಪುರಸ್ಕಾರ ಪಡೆದ ಅತಿ ಕಿರಿಯ ವಯಸ್ಸಿನ ವೈದ್ಯರು ಎಂಬ ಖ್ಯಾತಿ ಇದೆ. ಕೆಎಂಸಿ ಯ ಹಳೆ ವಿದ್ಯಾರ್ಥಿ ಆಗಿರುವ ಶ್ರೀಯುತರು ಶ್ರೀನಿವಾಸ್ ಸಂಸ್ಥೆಯಲ್ಲಿ ದುಡಿದು ಈಗ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಕ್ಟೋಬರ್ 25 ರಂದು ಗಂಗಾವತಿಯಲ್ಲಿ ಜರುಗುವ 81 ನೇ ಐಎಂಎ ರಾಜ್ಯ ಸಮ್ಮೇಳನದಲ್ಲಿ ಅವರು ಅಧಿಕಾರ ಸ್ವೀಕರಿಸಲಿದ್ದು, ಹಿರಿಯ ನಾಯಕರಾದ ಅವರಿಗೆ ಬೆಳಗಾವಿ ವಿಭಾಗದ ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಧಾರವಾಡ, ಹುಬ್ಬಳ್ಳಿ, ಗದಗ, ಹಾವೇರಿ, ಉತ್ತರಕನ್ನಡ ಜಿಲ್ಲೆಗಳಲ್ಲಿ ವೈದ್ಯರನ್ನ ಸಂಘಟಿಸಿ ಸಂಘಟನೆಯನ್ನ ಮತ್ತಷ್ಟು ಬಲಪಡಿಸುವ ಜವಾಬ್ದಾರಿ ಹಾಗೂ ಉಸ್ತುವಾರಿಗಳನ್ನ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
21 Oct 2025, 10:58 AM
Category: Kaup
Tags: