ಪಡುಬಿದ್ರಿ : ಮಹಿಳೆಯರು ಸಮಾಜಕ್ಕೆ ಭೂಷಣಪ್ರಾಯಳಾಗಿ ಸಮಾಜದ ಸ್ವಾಸ್ಥ್ಯಕ್ಕೆ ಮೆಟ್ಟಿಲಾಗಬೇಕು. ಭಾರತೀಯ ಮಹಿಳೆಯರಿಗೆ ಪ್ರಾಪಂಚಿಕವಾಗಿ ವಿಶೇಷವಾದ ಗೌರವ, ಸ್ಥಾನಮಾನ ಇದೆ ಎಂದು ಉಡುಪಿ ಜಿ.ಪಂ. ಮಾಜಿ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿಎರ್ಮಾಳು ಹೇಳಿದರು.
ಅವರು ಮಂಗಳವಾರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎರ್ಮಾಳು ಶ್ರೀನಿಧಿ ಮಹಿಳಾ ಮಂಡಳಿ (ರಿ.) ಆಯೋಜಿಸಿದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಡಾ. ಚೈತ್ರ ಗುರುಪ್ರಸಾದ್ ಶೆಟ್ಟಿ ಪಡುಬಿದ್ರಿ ಮಾತನಾಡಿ, ಶರೀರ-ಭಾವನೆ-ಮನಸ್ಸು ಇದ್ದಲ್ಲಿ ಮಾತ್ರ ಅದು ನಿಜವಾದ ಆರೋಗ್ಯವಾಗಿದೆ. ಸಾಧನೆಯ ಹಾದಿಯಲ್ಲಿರುವ ಹೆಣ್ಣು ಮಕ್ಕಳು ನೈಜ ನೆಮ್ಮದಿಯ ಜೊತೆಗೆ ಆರೋಗ್ಯದಾಯಕರಾಗಿದ್ದು, ಸಮಾಜದ ಆಗು ಹೋಗುಗಳ ಜೊತೆ ಉತ್ತಮ ಬಾಂಧವ್ಯವನ್ನು ವೃದ್ಧಿಸಿಕೊಳ್ಳುವಂತೆ ಕರೆ ನೀಡಿದರು. ಬಂಜೆತನ, ಥೈರಾಯ್ಡ್, ಹಾರ್ಮೋನ್ಸ್ ಸಹಿತ ಮಹಿಳೆಯರ ಆರೋಗ್ಯದ ವಿಚಾರದಲ್ಲಿ ಮಾಹಿತಿಯನ್ನು ನೀಡಿ ಸಮಾಲೋಚನೆ ನಡೆಸಿದರು.
ಸಮಾರಂಭದಲ್ಲಿ ಮಹಿಳಾ ರಿಕ್ಷಾ ಚಾಲಕಿ ಶಶಿಕಲಾ ನಂಬಿಯಾರ್ ಪಡುಬಿದ್ರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸದಸ್ಯೆಯರಿಗೆ ಏರ್ಪಡಿಸಲಾದ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಎರ್ಮಾಳು ಶ್ರೀನಿಧಿ ಮಹಿಳಾ ಮಂಡಳಿಯ ಅಧ್ಯಕ್ಷೆ ರೇಖಾ ಶೆಟ್ಟಿ ಸ್ವಾಗತಿಸಿದರು.
ವೇದಿಕೆಯಲ್ಲಿ ಕೋಶಾಧಿಕಾರಿ ವಿಮಲ ಕೆ. ಸಾಲ್ಯಾನ್ ಉಪಸ್ಥಿತರಿದ್ದರು.
ರಶ್ಮಿತಾ ಪ್ರಾರ್ಥಿಸಿದರು. ಉಪಾಧ್ಯಕ್ಷೆ ವಾಣಿಶ್ರೀ ಗಣೇಶ್ ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ಅಮಣಿ ಕುಂದರ್ ವಂದಿಸಿದರು. ಮಾಜಿ ಅಧ್ಯಕ್ಷೆ ಜ್ಯೋತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
