Updated News From Kaup

ಮೇ 5 : ದುಬೈನಲ್ಲಿ ನ್ಯೂ ಸ್ಟಾರ್ ಮಂಗಳೂರು ಮಹಿಳಾ ಥ್ರೋಬಾಲ್ ತಂಡದ ಜರ್ಸಿ ಅನಾವರಣ

Thumbnail
Posted On: 02 May 2024, 01:40 PM

ದುಬೈ ಸ್ಪೋರ್ಟ್ಸ್ ಕೌನ್ಸಿಲ್‌ನಿಂದ ಅಧಿಕೃತವಾಗಿ ಗುರುತಿಸಲ್ಪಟ್ಟಿರುವ ದುಬೈನ ಯಶಸ್ವಿ ತಂಡದಲ್ಲಿ ಒಂದಾಗಿರುವ ನ್ಯೂ ಸ್ಟಾರ್ ಮಂಗಳೂರು ತಂಡ ಕಬಡ್ಡಿ ಕ್ರೀಡೆಯಲ್ಲಿ ಮಾತ್ರವಲ್ಲದೆ ಇದೀಗ ಮಹಿಳೆಯರ ಥ್ರೋಬಾಲ್ ತಂಡವನ್ನು ಪ್ರಾರಂಭಿಸುತ್ತಿದ್ದು ಇದರ ಜರ್ಸಿಯನ್ನು ಮೇ 5 ರಂದು ಬೆಳಿಗ್ಗೆ 10 ಗಂಟೆಗೆ ಅನಾವರಣಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇ 2,3,4 : ಡಿಕೆಎಸ್ಸಿ, ಮರ್ಕಝ್ ಮೂಳೂರು ಇದರ ಸನದು ದಾನ ಸಮ್ಮೇಳನ

Thumbnail
Posted On: 01 May 2024, 04:35 PM

ಕಾಪು : ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಇದರ ಅಧೀನ ಸಂಸ್ಥೆಯಾದ ಮರ್ಕಝ್ ತ ಅ್ ಲೀಮಿಲ್ ಇಹ್ಸಾನಿನ ಭಾಗವಾದ ಅಲ್ ಇಹ್ಸಾನ್ ದ ಅವಾ ಕಾಲೇಜಿನಲ್ಲಿ ಧಾರ್ಮಿಕ, ಲೌಕಿಕ ಪದವಿ ಪೂರೈಸಿದ ಯುವ ವಿದ್ವಾಂಸರ ಘಟಿಕೋತ್ಸವ ಮಹಾಸಮ್ಮೇಳನವು ಮೂಳೂರು ಮರ್ಕಝ್ ಕ್ಯಾಂಪಸ್ಸಿನಲ್ಲಿ ಮೇ. 2,3 ಹಾಗೂ 4 ನಡೆಯಲಿದೆ ಎಂದು ಆಲ್ ಇಹ್ಸಾನ್ ಎಜುಕೇಶನ್ ಸೆಂಟರ್, ಮೂಳೂರು ಇದರ ಮ್ಯಾನೇಜರ್ ಅಲ್ ಹಾಜಿ ಮುಸ್ತಫಾ ಸ ಅದಿ ಹೇಳಿದರು. ಅವರು ಬುಧವಾರ ಕಾಪು ಪ್ರೆಸ್ ಕ್ಲಬ್ ನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಮೇ 2ರಂದು ಧ್ವಜಾರೋಹಣ, ಉದ್ಘಾಟನಾ ಸಮ್ಮೇಳನವು ಜರಗಲಿದೆ. ಮೇ 3ರಂದು ಖತಮುಲ್ ಕುರಾನ್ ಮಜ್ಲಿಸ್, ಗ್ರ್ಯಾಂಡ್ ಅಲ್ಯುಮಿನಿ ನಡೆಯಲಿದೆ. ಮೇ.4ರಂದು ಮಹಿಳಾ ಪದವಿ ಪ್ರದಾನ ಕಾರ್ಯಕ್ರಮ ಹಾಗು ಝಹರತುಲ್ ಕುರಾನ್ ಕಾನ್ವಕೇಶನ್ ನಡೆಯಲಿದೆ. ಅದೇ ದಿನ ಸಂಜೆ ಸನದುದಾನ ಹಾಗೂ ಸಮಾರೋಪ ಸಮಾರಂಭವು ಗಣ್ಯರ ಉಪಸ್ಥಿತಿಯಲ್ಲಿ ಜರಗಲಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಡಿಕೆಎಸ್ಸಿ ಕೇಂದ್ರ ಸಮಿತಿ ಅಧ್ಯಕ್ಷರಾದ ಆಸ್ಸಯ್ಯಿದ್ ಕೆ ಎಸ್ ಆಟಕೋಯ ತಂಙಳ್ ಕುಂಬೋಳ್, ಸ್ವಾಗತ ಸಮಿತಿ ಅಧ್ಯಕ್ಷರಾದ ಹಾಜಿ ಅಬೂಬಕ್ಕರ್ ನೇಜಾರು, ಸ್ವಾಗತ ಸಮಿತಿ ಕಾರ್ಯದರ್ಶಿ ಎಸ್ ಕೆ ಇಕ್ಬಾಲ್ ಶಂಶುದ್ದೀನ್ ಕಟಪಾಡಿ, ಪ್ರಚಾ‌ರ ಸಮಿತಿ ಅಧ್ಯಕ್ಷರಾದ ಕೆ ಎ ಅಬ್ದುಲ್ ರಹಿಮಾನ್ ರಝ್ವಿ ಕಲ್ಕಟ್ಟ, ಸ್ವಾಗತ ಸಮಿತಿ ಕೋಶಾಧಿಕಾರಿ ಅಬ್ದುಲ್ ಖಾದರ್ ಹಾಜಿ ಉಪಸ್ಥಿತರಿದ್ದರು.

ಕಾಪು ಶ್ರೀ ಹೊಸ ಮಾರಿಗುಡಿ ದೇವಳ : ಗೋನಿವಾಸದೊಂದಿಗೆ ದೇವಳದ ಶುದ್ಧಿ; ಒಂಬತ್ತು ಗೋವುಗಳು ಸಾನಿಧ್ಯದಲ್ಲಿ ವಾಸ್ತವ್ಯ

Thumbnail
Posted On: 30 Apr 2024, 06:27 PM

ಕಾಪು : ಇಳಕಲ್ಲಿನ ಶಿಲೆಯ ಕಲಾಕುಸುರಿಯಿಂದ ಅತ್ಯದ್ಭುತವಾಗಿ ಮೂಡಿ ಬರುತ್ತಿರುವ ಕಾಪುವಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಏಪ್ರಿಲ್ 9 ರಂದು ಬ್ರಹ್ಮಕಳಶೋತ್ಸವಕ್ಕೆ ಚಾಲನೆಯನ್ನು ನೀಡಿ, ಬೀಜ ವಪನ ಅಂದರೆ ನವಧಾನ್ಯಗಳನ್ನು ಬಿತ್ತಲಾಗಿದ್ದು ಅದರ ಅಂಗವಾಗಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಮಂಗಳವಾರದಂದು ಗೋ ನಿವಾಸ ಕಾರ್ಯವು ನಡೆಯಿತು. ಗೋನಿವಾಸದಲ್ಲಿ ಗೋವುಗಳಿಗೆ ಅರಿಶಿನ ಕುಂಕುಮವನ್ನು ಹಚ್ಚಿ, ಹಾರವನ್ನು ಹಾಕಿ ತಂತ್ರಿಗಳು ಗೋಪೂಜೆಯನ್ನು ನೆರವೇರಿಸಿದರು. ಶ್ರೀ ಕೃಷ್ಣನ ಕೊಳಲಿನ ನಾದದೊಂದಿಗೆ 9 ಗೋವುಗಳು ಮತ್ತು ಕರುಗಳು ಪ್ರದಕ್ಷಿಣಾ ಪಥದಲ್ಲಿ ಸಾಗಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಗರ್ಭಗುಡಿಯ ಹೊರಭಾಗದಲ್ಲಿ ಅವುಗಳಿಗೆ ಬೈಹುಲ್ಲು, ಹಿಂಡಿ ನೀಡಿ ನಂತರ ಒಂಬತ್ತು ಜನ ಮಹಿಳೆಯರು ಆರತಿಯನ್ನು ಬೆಳಗಿದರು, ನಂತರ ಮಾರಿಯಮ್ಮನ ಗರ್ಭಗುಡಿ ಮತ್ತು ಉಚ್ಚಂಗಿ ಗುಡಿಯಲ್ಲಿ ಬೆಳೆದಿದ್ದ ಧಾನ್ಯಗಳನ್ನು ಗೋವುಗಳಿಗೆ ಮೇಯಲು ಬಿಡಲಾಯಿತು. ಗೋವುಗಳು ಒಂದು ದಿನ ಗರ್ಭಗುಡಿಯಲ್ಲೇ ವಾಸ್ತವ್ಯವಿರಲಿದ್ದು, ಅವುಗಳಿಗೆ ಬೇಕಾದ ಮೇವನ್ನು ನೀಡಲು ವ್ಯವಸ್ಥೆಯನ್ನು ಮಾಡಲಾಗಿದೆ, ನಂತರ ಗೋವುಗಳ ಹಾಲನ್ನು ಕರೆದು ಭಕ್ತಾದಿಗಳಿಗೆ ನೀಡಲಾಗುತ್ತದೆ. ಅದೇ ರೀತಿಯಾಗಿ ಸಂಜೆ ಸಮಿತಿಯ ಸದಸ್ಯರಿಂದ ಕುಣಿತ ಭಜನೆ, ಭಜನಾ ಕಾರ್ಯಕ್ರಮ ಜರಗಲಿದೆ. ಕಾಪು ಶಾಸಕ, ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ಗೌರವಾಧ್ಯಕ್ಷ ಅನಿಲ್ ಬಲ್ಲಾಳ್ ಕಾಪು ಬೀಡು, ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಕೋಶಾಧಿಕಾರಿ ಮತ್ತು ಕಾರ್ಯ ನಿರ್ವಹಣಾಧಿಕಾರಿ ರವಿಕಿರಣ್ ಕೆ., ಜ್ಯೋತಿಷ್ಯ ವಿದ್ವಾನ್ ಕೆ. ಪಿ. ಶ್ರೀನಿವಾಸ ತಂತ್ರಿ ಮಡುಂಬು, ಗೌರವ ಸಲಹೆಗಾರ ನಡಿಕೆರೆ ರತ್ನಾಕರ ಶೆಟ್ಟಿ, ಉದ್ಯಮಿ ಸದಾನಂದ ಶೆಟ್ಟಿ ಪುಣೆ, ವೈ. ಪ್ರಫುಲ್ಲ ಶೆಟ್ಟಿ ಎಲ್ಲೂರುಗುತ್ತು, ಉಮಾಕೃಷ್ಣ ಶೆಟ್ಟಿ ಮುಂಬ, ಉಪಾಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ, ಮಾಧವ ಆರ್. ಪಾಲನ್, ದೇವಿಪ್ರಸಾದ್ ಶೆಟ್ಟಿ ಬೆಳಪು, ಮನೋಹರ್ ಶೆಟ್ಟಿ, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಉದಯ್ ಸುಂದರ್ ಶೆಟ್ಟಿ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಪುಣೆ ಸಮಿತಿ ಉಪಾಧ್ಯಕ್ಷ ಮಾಧವ ಶೆಟ್ಟಿ ಪಾದೂರು ಹೊಸಮನೆ, ದಿನೇಶ್ ಶೆಟ್ಟಿ ಕಳತ್ತೂರು, ಉದಯ್ ಶೆಟ್ಟಿ ಕಳತ್ತೂರು, ವಸಾಯಿ ಡಹಾಣು ವಲಯದ ಮುಖ್ಯ ಸಂಚಾಲಕ ರಮೇಶ್ ವಿ. ಶೆಟ್ಟಿ ಮುಂಬಯಿ, ಮೀರಾ ಬಾಯಂದರ್ ವಲಯದ ಮುಖ್ಯ ಸಂಚಾಲಕ ಕಿಶೋರ್ ಶೆಟ್ಟಿ ಕುತ್ಯಾರು, ವಾರ್ಡ್ ಸಮಿತಿ ಪ್ರಧಾನ ಸಂಚಾಲಕ ಶ್ರೀಕರ ಶೆಟ್ಟಿ ಕಲ್ಯ, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಗೌರವ ಸಲಹೆಗಾರ ನಿರ್ಮಲ್ ಕುಮಾರ್ ಹೆಗ್ಡೆ, ಸದಸ್ಯ ಸತೀಶ್ ಶೆಟ್ಟಿ ಗುಡ್ಡೆಚ್ಚಿ ಮತ್ತಿತರರು ಉಪಸ್ಥಿತರಿದ್ದರು.

ಪಡುಬಿದ್ರಿ : ಹಾನ್೯ - ಓವರ್ ಟೇಕ್ ಗಲಾಟೆ ; ಬಸ್ - ಕಾರು ಚಾಲಕರಿಂದ ದೂರು-ಪ್ರತಿದೂರು ದಾಖಲು

Thumbnail
Posted On: 29 Apr 2024, 11:43 PM

ಪಡುಬಿದ್ರಿ : ಹಾನ್೯ ಹಾಕಿದ ಕಾರಣಕ್ಕೆ ಮಂಗಳೂರು ಕಡೆಗೆ ಸಾಗುತ್ತಿದ್ದ ವೇಗದೂತ ಬಸ್ ಚಾಲಕನಿಗೆ ಪಡುಬಿದ್ರಿ ಬಸ್ ನಿಲ್ದಾಣದಲ್ಲಿ ಕಾರು ಚಾಲಕನೋರ್ವ ಚೂರಿಯಿಂದ ಮುಖಕ್ಕೆ ಗೀರಿ ಬೆದರಿಕೆಯೊಡ್ಡಿದ್ದಾನೆ ಎಂದು ಬಸ್ ಚಾಲಕ ದೂರನ್ನಿತ್ತರೆ, ಓವರ್‌ಟೇಕ್ ಮಾಡಿ ಕಾರಿಗೆ ಢಿಕ್ಕಿ ಹೊಡೆಯಲು ಪ್ರಯತ್ನಿಸಿ ಪ್ರಶ್ನಿಸಿದರೆ ಚಾಲಕ, ನಿರ್ವಾಹಕರು ಬೆದರಿಕೆಯೊಡ್ಡಿದ್ದಾರೆ ಎಂದು ಕಾರು ಚಾಲಕ ಪ್ರತಿ ದೂರನ್ನಿತ್ತ ಘಟನೆ ಪಡುಬಿದ್ರಿಯಲ್ಲಿ ಜರಗಿದೆ. ಪಡುಬಿದ್ರಿ ನಿವಾಸಿ ಶೈಲು ಯಾನೆ ಶೈಲೇಶ್ ಗಾಯಗೊಂಡವರು. ಆರೋಪಿ ಮುಲ್ಕಿಯ ಇಸ್ಮಾಯಿಲ್ ಆತೀಶ್ ಬಸ್ ಚಾಲಕನಿಗೆ ಕಾಲಿನಿಂದ ತುಳಿದು, ಕೈಯಿಂದ ಹೊಡೆದು, ನಂತರ ಬಸ್‌ನಿಂದ ಇಳಿದು ಹೋಗಿ ಆತನ ಕಾರ್‌ನ ಒಳಗಡೆ ಇದ್ದ ಸಣ್ಣ ಚೂರಿಯನ್ನು ತಂದು ಪುನಃ ಬಸ್‌ನ ಒಳಗಡೆ ಬಂದು ಕೊಲ್ಲುವ ಬೆದರಿಕೆ ಹಾಕಿ ಚೂರಿಯಿಂದ ಇರಿದು ಹಲ್ಲೆ ನಡೆಸಿದ್ದಾನೆ. ಸ್ಥಳದಲ್ಲಿ ಜನರು ಸೇರುತ್ತಿದ್ದಂತೆ ಆರೋಪಿ ತನ್ನ ಕಾರಿನಲ್ಲಿ ಪರಾರಿಯಾಗಿದ್ದಾನೆ. ಹಲ್ಲೆಯಿಂದ ಬಸ್ ಚಾಲಕನ ಮುಖಕ್ಕೆ ಗಾಯವಾಗಿದ್ದು, ಈ ಬಗ್ಗೆ ಪಡುಬಿದ್ರಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂಬುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಮತ್ತೊಂದೆಡೆ ಇದೇ ಘಟನೆಗೆ ಸಂಬಂಧಿಸಿ ಪ್ರತಿ ದೂರು ದಾಖಲಿಸಿದ್ದು, ಕಾರು ಚಾಲಕ ಕಾರ್ನಾಡು ಇಸ್ಮಾಯಿಲ್ ಆತೀಶ್ ಕಟಪಾಡಿಯಿಂದ ತನ್ನ ನಾದಿನಿಯ ಕ್ರೆಟ್ಟಾ ಕಾರಿನಲ್ಲಿ ನನ್ನ ಮಾವ, ಅತ್ತೆ, ಪತ್ನಿ ಮತ್ತು ಮಕ್ಕಳೊಂದಿಗೆ ಹೊರಟು ಕಾಪು ಮಾರ್ಗವಾಗಿ ಎರ್ಮಾಳಿನಲ್ಲಿ NH-66 ರಲ್ಲಿ ಹೋಗುತ್ತಿದ್ದಾಗ ನನ್ನ ಹಿಂದುಗಡೆಯಿಂದ ಒಂದು ಎಕ್ಸ್‌ಪ್ರೆಸ್ ಬಸ್ಸನ್ನು ಅದರ ಚಾಲಕನು ಅತೀವೇಗದಿಂದ ಚಲಾಯಿಸಿ ಆತೀಶ್ ಚಲಾಯಿಸುತ್ತಿದ್ದ ಕಾರನ್ನು ಓವರ್‌ಟೇಕ್ ಮಾಡಿ ಕಾರಿಗೆ ಢಿಕ್ಕಿ ಹೊಡೆಯಲು ಪ್ರಯತ್ನಿಸಿ ಕಾರಿನ ಮುಂದುಗಡೆಯಿಂದ ಒಮ್ಮೆಲೇ ರಸ್ತೆಯ ಎಡಬದಿಗೆ ಚಲಾಯಿಸಿರುತ್ತಾನೆ. ಇದರಿಂದ ಕೋಪಗೊಂಡ ಆತೀಶ್ ಹಿಂಬಾಲಿಸಿಕೊಂಡು ಹೋಗಿ ಪಡುಬಿದ್ರಿಯಲ್ಲಿ ಬಸ್ ನಿಲ್ಲಿಸಿದಾಗ ಬಸ್‌ನ ಒಳಗಡೆ ಹೋಗಿ ಬಸ್ ಚಾಲಕನ ಬಳಿ ನೀನು ಯಾಕೆ ಆ ರೀತಿ ಚಲಾಯಿಸುತ್ತೀಯ ಎಂದು ಕೇಳಿದ್ದಕ್ಕೆ ಬಸ್ ಚಾಲಕ ಅವಾಚ್ಯವಾಗಿ ಬೈದು ಮಾತನಾಡಲು ನನಗೆ ಟೈಂ ಇಲ್ಲ ಎಂದು ಹೇಳಿ, ಹೊಡೆದು, ಅವನ ಬಳಿ ಇದ್ದ ಸ್ಕ್ರೂ ಡ್ರೈವರನ್ನು ತೆಗೆದು ತೋರಿಸಿರುತ್ತಾನೆ. ಆಗ ಬಸ್‌ನ ನಿರ್ವಾಹಕನು ಬಂದು ಆತೀಶ್‌ರಿಗೆ ಕೈಗಳಿಂದ ಹೊಡೆದು, ಅವರಿಬ್ಬರು ಅತೀಶ್‌ರನ್ನು ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವುದಾಗಿ ದೂರು ದಾಖಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.

ಏ. 30 : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಗೋ ಪೂಜೆ ; ಗೋನಿವಾಸ

Thumbnail
Posted On: 29 Apr 2024, 07:18 PM

ಕಾಪು : ಮಾರಿಯಮ್ಮನ ಕ್ಷೇತ್ರದಲ್ಲಿ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ವಿದ್ವಾನ್ ಕೆ. ಪಿ. ಕುಮಾರಗುರು ತಂತ್ರಿಯವರ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವಕ್ಕೆ ದಿನ ನಿಗದಿಯಾಗಿದ್ದು ಆ ಪ್ರಯುಕ್ತ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಏಪ್ರಿಲ್ 9ಕ್ಕೆ ಸಾನಿಧ್ಯ, ವೃದ್ಧಿಗಾಗಿ ಭೂಕರ್ಷನ ಖನನ, ಹರಣ, ದಾಹ, ಪೂರಣ ಮತ್ತು ನವಧಾನ್ಯಗಳಿಂದ ಬೀಜ ವಪನ ಮಾಡಿರುತ್ತೇವೆ, ಈಗಾಗಲೇ ಬೀಜಗಳು ಮೊಳಕೆಯೊಡೆದಿವೆ. ಗರ್ಭಗುಡಿಯಲ್ಲಿ ಮೊಳಕೆಯೋಡೆದ ನವಧಾನ್ಯಗಳನ್ನು ಗೋವುಗಳು ಮೇಯುವ ಕಾರ್ಯಕ್ರಮ ಏಪ್ರಿಲ್ 30 ರಂದು ಬೆಳಿಗ್ಗೆ ಗಂಟೆ 10 ಕ್ಕೆ ಸರಿಯಾಗಿ ನಡೆಯಲಿದೆ. ಶ್ರೀಕೃಷ್ಣನ ಕೊಳಲಿನ ವಾದನದೊಂದಿಗೆ ಗೋವುಗಳನ್ನು ಗರ್ಭಗುಡಿಯವರೆಗೆ ಕರೆದುಕೊಂಡು ಹೋಗಿ ಪೂಜಿಸಲಾಗುವುದು, ಸಮಿತಿಯ ಸದಸ್ಯರು ಹಾಗೂ ಭಕ್ತಾದಿಗಳಿಂದ ವಿಶೇಷ ಭಜನೆ ಮತ್ತು ಅನೇಕ ಕಾರ್ಯಕ್ರಮಗಳು ನಡೆಯಲಿವೆ. 9 ಗೋವುಗಳು ಸಾನಿಧ್ಯದಲ್ಲಿ ವಾಸ್ತವ್ಯವಿದ್ದು, ಅವುಗಳಿಗೆ ಮೇವನ್ನು ನೀಡಿ ಗೋಪೂಜೆ ನೆರವೇರಿಸುವ ಕಾರ್ಯಕ್ರಮವೇ ಗೋನಿವಾಸ. ಭಕ್ತಾದಿಗಳು ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಿ ಮಾರಿಯಮ್ಮನ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇ 5 : ಉಡುಪಿಯಲ್ಲಿ ಮಕ್ಕಳ ಚಿತ್ರದ ಆಡಿಷನ್

Thumbnail
Posted On: 28 Apr 2024, 09:31 AM

ಉಡುಪಿ : ಈ ಹಿಂದೆ ಆರ್.ಎಸ್.ಬಿ ಭಾಷಿತ ಕೊಂಕಣಿ ಸಿನೇಮಾ ‘ಅಮ್ಚೆ ಸಂಸಾರ್’ ನಿರ್ಮಿಸಿದ ತಂಡ ‘ಅಮ್ಚೆ ಕ್ರಿಯೇಷನ್ಸ್’ ಬ್ಯಾನೆರ್ ಅಡಿಯಲ್ಲಿ 2ನೇ ಸಿನೇಮಾ ತಯಾರಿಸಲು ಸಜ್ಜಾಗುತ್ತಿದೆ. ಈ ಚಿತ್ರವು ಮಕ್ಕಳ ಚಿತ್ರವಾಗಿದ್ದು ಈ ಚಿತ್ರಕ್ಕೆ ಆಡಿಷನ್ ಅನ್ನು ಇದೇ ಬರುವ ಮೇ 5ರಂದು ಬಡಗಬೆಟ್ಟು ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ., ಲಿ ಉಡುಪಿ ಇದರ ಜಗನ್ನಾಥ ಸಭಾಂಗಣದಲ್ಲಿ ಬೆಳಗ್ಗೆ 10 ಘಂಟೆಯಿಂದ ನಡೆಯಲಿದೆ. ಆಡಿಷನ್‌ನ ಉದ್ಘಾಟನೆಯನ್ನು ಸಹಕಾರ ರತ್ನ ಜಯಕರ ಶೆಟ್ಟಿ ಇಂದ್ರಾಳಿ ಇವರು ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ ಚಲನಚಿತ್ರ ಕಲಾವಿದರುಗಳಾದ ಶೋಭರಾಜ್ ಪಾವೂರು, ರಾಹುಲ್ ಅಮೀನ್, ವಿನೀತ್ ಕುಮಾರ್, ಮಾನಸಿ ಸುಧೀರ್, ಶೈಲಶ್ರೀ ಮುಲ್ಕಿ ಉಪಸ್ಥಿತರಿರಲಿದ್ದಾರೆ. ಆಡಿಷನ್ ಮಕ್ಕಳ ಆಯ್ಕೆಯನ್ನು ಖ್ಯಾತ ಚಲನಚಿತ್ರ ನಿರ್ದೇಶಕರಾದ ಪ್ರಕಾಶ್ ಸುವರ್ಣ ಕಟಪಾಡಿ, ಕ್ಲಿಂಗ್ ಜಾನ್ಸನ್ ಮತ್ತು ಕಲಾವಿದೆ ಚಂದ್ರಕಲಾ ರಾವ್ ಇವರು ನಡೆಸಿಕೊಡಲಿದ್ದಾರೆ. ಈ ಆಡಿಶನ್ ನಲ್ಲಿ 8ರಿಂದ 15 ವರ್ಷ ಒಳಗಿನ ಬಾಲ ಕಲಾವಿದರು ಮತ್ತು ಕಲಾವಿದೆಯರನ್ನ ಆಯ್ಕೆ ನಡೆಯಲಿದ್ದು ತುಳು ಹಾಗೂ ಕನ್ನಡ ಭಾಷೆ ಕಡ್ಡಾಯ ತಿಳಿದಿರಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9964006869, 8073975851ಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಂದೀಪ್ ಕಾಮತ್ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

ಎ.30 - ಮೇ.5 : ಕಂಬೆರ್ಕಳ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಗದ್ದಿಗೆಬೆಟ್ಟು ಕೈಪುಂಜಾಲು - ನೂತನ ಶಿಲಾಮಯ ಗರ್ಭಗುಡಿಯಲ್ಲಿ ದೈವಗಳ ಪುನರ್ ಪ್ರತಿಷ್ಠೆ, ಕುಂಭಾಭಿಷೇಕ, ನೇಮೋತ್ಸವ

Thumbnail
Posted On: 27 Apr 2024, 03:20 PM

ಕಾಪು : ತಾಲೂಕಿನ ಕೈಪುಂಜಾಲು ಉಳಿಯಾರಗೋಳಿ ಗ್ರಾಮದ ಕಂಬೆರ್ಕಳ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಗದ್ದಿಗೆಬೆಟ್ಟು ಇಲ್ಲಿ ಎ.30 - ಮೇ.5ರವರೆಗೆ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಅರ್ಚಕರಾದ ಮಡುಂಬು ಶ್ರೀ ನಾರಾಯಣ ತಂತ್ರಿ ಇವರ ನೇತೃತ್ವದಲ್ಲಿ ನೂತನ ಶಿಲಾಮಯ ಗರ್ಭಗುಡಿಯಲ್ಲಿ ದೈವಗಳ ಪುನರ್ ಪ್ರತಿಷ್ಠೆ, ಕುಂಭಾಭಿಷೇಕ ಮತ್ತು ನೇಮೋತ್ಸವ ಇತ್ಯಾದಿ ಧಾರ್ಮಿಕ ಕಾರ್ಯಗಳು ಜರಗಲಿವೆ ಎಂದು ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಬಾವಗುತ್ತು ಕಿರಣ್ ಆಳ್ವ ಹೇಳಿದರು. ಅವರು ಕಾಪು ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಎಪ್ರಿಲ್ 30, ಮಂಗಳವಾರ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಿಂದ ಆಕರ್ಷಕ ಜಾನಪದ ಕಲಾತಂಡದೊಂದಿಗೆ ಮೆರವಣಿಗೆ, ಮೇ 1ರಂದು ವಿವಿಧ ಧಾರ್ಮಿಕ ಕಾರ್ಯಗಳು, ಮೇ 2 ರಂದು ದೈವಗಳ ಪ್ರತಿಷ್ಠೆ, ಅಮ್ಮನವರ ಸಾನಿಧ್ಯ ಸಂಕಲ್ಪ, ಶ್ರೀ ಬಬ್ಬು ಸ್ವಾಮಿ, ಪರಿವಾರ ದೈವಗಳ ದರ್ಶನ ಸೇವೆ, ಗರ್ಭಗುಡಿ ಪ್ರವೇಶ, ಮಹಾ ಅನ್ನಸಂತರ್ಪಣೆ, ಸಂಜೆ ಗಂಟೆ 6 ರಿಂದ ಕಾಪು ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಶ್ರೀಕಾಂತ್ ಶೆಟ್ಟಿ ಕಾರ್ಕಳ ಇವರ ಧಾರ್ಮಿಕ ಉಪನ್ಯಾಸ ಇರಲಿದೆ. ರಾತ್ರಿ 8:30 ರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರಗಲಿದೆ. ಮೇ. 3 ರಂದು ಸಂಜೆ ಗಂಟೆ 6ಕ್ಕೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಬಾವಗುತ್ತು ಕಿರಣ್ ಆಳ್ವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು ಮುಖ್ಯ ಅತಿಥಿಗಳಾಗಿದ್ದು ಪ್ರಸಾದ್ ಶೆಟ್ಟಿ ಕುತ್ಯಾರು ಇವರ ಧಾರ್ಮಿಕ ಉಪನ್ಯಾಸ ಇರಲಿದೆ. ರಾತ್ರಿ ಗಂಟೆ 8:30 ರಿಂದ ದೈವರಾಜ ಶ್ರೀ ಬಬ್ಬು ಸ್ವಾಮಿ ಭಕ್ತಿ ಪ್ರಧಾನ ತುಳು ನಾಟಕ ಪ್ರದರ್ಶನವಾಗಲಿದೆ. ಮೇ.4ರಂದು ಶ್ರೀ ಬಬ್ಬುಸ್ವಾಮಿ ಮತ್ತು ತನ್ನಿಗಮಾನಿಗ ದೇವಿಯ ನೇಮೋತ್ಸವ, ಮೇ.5 ರಂದು ಶ್ರೀ ಧೂಮಾವತಿ ಮತ್ತು ಬಂಟ ದೈವಗಳ ನೇಮೋತ್ಸವ, ಜೋಡು ಗುಳಿಗ ದೈವಗಳ ನೇಮೋತ್ಸವ ಜರಗಲಿದೆ ಎಂದು ತಿಳಿಸಿದರು. ಈ ಸಂದರ್ಭ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.

ದ್ವಿತೀಯ ಪಿ.ಯು.ಸಿ ಮರುಮೌಲ್ಯಮಾಪನ ಫಲಿತಾಂಶ : ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಸಾನ್ವಿ ರಾವ್ ರಾಜ್ಯಕ್ಕೆ ಪ್ರಥಮ, ಭಕ್ತಿ ಕಾಮತ್ ರಾಜ್ಯಕ್ಕೆ ಐದನೇ ರ‍್ಯಾಂಕ್

Thumbnail
Posted On: 27 Apr 2024, 01:36 PM

ಕಾರ್ಕಳ : ಶೈಕ್ಷಣಿಕ ಸಾಧನೆಯಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯು ರಾಜ್ಯಮಟ್ಟದಲ್ಲಿ ಗಮನಾರ್ಹ ಸಾಧನೆಗೈದಿದ್ದು ವಾಣಿಜ್ಯ ವಿಭಾಗದ ಸಾನ್ವಿ ರಾವ್ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದು ವಿಶೇಷ ಸಾಧನೆಗೈದಿದ್ದಾರೆ. ಸಂಸ್ಕೃತ ಮತ್ತು ಇ.ಬಿ.ಎ.ಸಿ ಯಲ್ಲಿ ತಲಾ 100 ಕ್ಕೆ 100 ಅಂಕಗಳನ್ನು ಪಡೆದುಕೊಂಡಿದ್ದ ಸಾನ್ವಿ ರಾವ್ ಆಂಗ್ಲ ಭಾಷೆಯಲ್ಲಿ 95 ಅಂಕಗಳನ್ನು ಗಳಿಸಿದ್ದರು. ಇದೀಗ ಮರುಮೌಲ್ಯಮಾಪನ ಫಲಿತಾಂಶದಲ್ಲಿ 03 ಅಂಕಗಳನ್ನು ಹೆಚ್ಚುವರಿಯಾಗಿ ಗಳಿಸಿಕೊಂಡು 598 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ಇವರು ಉತ್ತರಕನ್ನಡದ ಹೊನ್ನಾವರದ ಜಗದೀಶ್ ರಾವ್ ಬಿ ಎಸ್ ಮತ್ತು ವಿನುತಾ ಭಟ್ ದಂಪತಿಗಳ ಸುಪುತ್ರಿ. ವಾಣಿಜ್ಯ ವಿಭಾಗದ ಭಕ್ತಿ ಕಾಮತ್ 594 ಅಂಕಗಳೊಂದಿಗೆ ರಾಜ್ಯಕ್ಕೆ ಐದನೇ ರ‍್ಯಾಂಕ್, ವಿಜ್ಞಾನ ವಿಭಾಗದ ಸಾಗರ್ ಎಸ್. ಟಿ 591 ಅಂಕಗಳೊಂದಿಗೆ ರಾಜ್ಯಕ್ಕೆ 8ನೇ ರ‍್ಯಾಂಕ್ ಹಾಗೆಯೇ ವಾಣಿಜ್ಯ ವಿಭಾಗದ ವಿನಯ್ ಪ್ರಶಾಂತ್ 589 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 10ನೇ ರ‍್ಯಾಂಕ್ ಗಳಿಸಿರುತ್ತಾರೆ. ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಒಟ್ಟು 12 ವಿದ್ಯಾರ್ಥಿಗಳು ರಾಜ್ಯದ ಮೊದಲ 10 ರ‍್ಯಾಂಕ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿರುವುದು ಹೆಮ್ಮೆಯ ವಿಷಯವಾಗಿದ್ದು ವಿದ್ಯಾರ್ಥಿಗಳ ಈ ವಿಶೇಷ ಸಾಧನೆಯನ್ನು ಪ್ರಾಂಶುಪಾಲರು, ಆಡಳಿತ ಮಂಡಳಿ, ಉಪನ್ಯಾಸಕ ವರ್ಗದವರು, ಬೋಧಕೇತರ ವರ್ಗದವರು ಶ್ಲಾಘಿಸಿ, ಅಭಿನಂದಿಸಿದ್ದಾರೆ.

ಪಡುಬಿದ್ರಿ : ಕಾರಿಗೆ ಡಿಕ್ಕಿ ಹೊಡೆದು ಹೆದ್ದಾರಿಯಲ್ಲಿ ನಿಂತ ಲಾರಿ ; ಸಂಚಾರ ತೊಡಕು

Thumbnail
Posted On: 27 Apr 2024, 01:28 PM

ಪಡುಬಿದ್ರಿ : ಇಲ್ಲಿನ ಪಡುಬಿದ್ರಿ ಕಾರ್ಕಳ ಜಂಕ್ಷನ್ ನಲ್ಲಿ ಕಾರಿಗೆ ಡಿಕ್ಕಿ ಹೊಡೆದು ಡಿವೈಡರ್ ಏರಿ ನಿಂತ ಸರಕು ಸಾಗಾಣಿಕೆ ಲಾರಿ.ಸಂಚಾರ ತೊಡಕು. ಪಡುಬಿದ್ರಿ : ಉಡುಪಿಯಿಂದ ಮಂಗಳೂರು ಕಡೆಗೆ ಸರಕು ಹೇರಿಕೊಂಡು ಸಂಚರಿಸುತ್ತಿದ್ದ ಲಾರಿಯೊಂದು ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಕಾರ್ಕಳ ಕಡೆಯಿಂದ ಬಂದ ಕಾರಿಗೆ ಡಿಕ್ಕಿ ಹೊಡೆದು ಡಿವೈಡರ್ ಏರಿ ವಿರುದ್ಧ ದಿಕ್ಕಿನಲ್ಲಿ ನಿಂತ ಘಟನೆ ಸಂಭವಿಸಿದೆ. ಕಾರಿನಲ್ಲಿ ಆರು ಮಹಿಳಾ ಪ್ರಯಾಣಿಕರು ಇದ್ದರು. ಅಪಘಾತದಲ್ಲಿ ಯಾರಿಗೂ ಅಪಾಯ ಸಂಭವಿಸಿಲ್ಲ.ಕಾರು ನುಜ್ಜುಗುಜ್ಜಾಗಿದೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಂದಿಕೂರು : ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಮಹಿಳೆ ಮೃತ್ಯು

Thumbnail
Posted On: 26 Apr 2024, 08:50 PM

ನಂದಿಕೂರು : ಮಂಗಳೂರಿನಿಂದ ಕಾರ್ಕಳ ಮಾಳದತ್ತ ಹೋಗುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಶುಕ್ರವಾರ ನಂದಿಕೂರು ಮುದರಂಗಡಿ ಕ್ರಾಸ್ ಬಳಿ ನಡೆದಿದೆ. ಘಟನೆಯಲ್ಲಿ ಮೃತ ಮಹಿಳೆಯನ್ನು ಕಾವೂರಿನ ಸುಮಂಗಲಾ ಅಭ್ಯಂಕರ್(51) ಎಂದು ಗುರುತಿಸಲಾಗಿದೆ. ಉಪನಯನ ಸಮಾರಂಭದಲ್ಲಿ ಭಾಗವಹಿಸಲು ಮಂಗಳೂರು ಕಾವೂರಿನ ತಮ್ಮ ನಿವಾಸದಿಂದ ತೆರಳುತ್ತಿದ್ದರು. ಪತಿ ಪುರುಷೋತ್ತಮ ಅಭ್ಯಂಕರ್(61) ಅವರು ರಾಜ್ಯ ಹೆದ್ದಾರಿಯಲ್ಲಿ ವೇಗವಾಗಿ ಬರುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ತಕ್ಷಣ ಸ್ಥಳೀಯರು ಹರಸಾಹಸಪಟ್ಟು ಸುಮಂಗಲಾ ಅವರನ್ನು ಹೊರತೆಗೆದಿದ್ದರೂ ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಪಡುಬಿದ್ರಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.