Updated News From Kaup
ಏ. 22- 30 : ಶಿಬರೂರು ಕೊಡಮಣಿತ್ತಾಯ ಕ್ಷೇತ್ರದಲ್ಲಿ ಬ್ರಹ್ಮಕುಂಭಾಭಿಷೇಕ, ನಾಗಮಂಡಲ, ಜಾತ್ರಾ ಮಹೋತ್ಸವ
Posted On: 16 Apr 2024, 06:17 PM
ಶಿಬರೂರು : ಇಲ್ಲಿನ ಕೊಡಮಣಿತ್ತಾಯ ಕ್ಷೇತ್ರದಲ್ಲಿ ಏಪ್ರಿಲ್ 22ರಿಂದ 30ರವರೆಗೆ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಬ್ರಹ್ಮಕುಂಭಾಭಿಷೇಕ, ನಾಗಮಂಡಲ ಸೇವೆ, ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಪುದ್ಯುಮ್ನ ರಾವ್, ಕೈಯ್ಯೂರಗುತ್ತು ಹೇಳಿದರು. ಅವರು ಶಿಬರೂರು ಕೊಡಮಣಿತ್ತಾಯ ಕ್ಷೇತ್ರದಲ್ಲಿ ಮಂಗಳವಾರ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 26ರಂದು ಶ್ರೀ ಉಳ್ಳಾಯ ಕೊಡಮಣಿತ್ತಾಯ ದೈವಗಳಿಗೆ ಬ್ರಹ್ಮಕುಂಭಾಭಿಷೇಕವು ಬ್ರಹ್ಮಶ್ರೀ ವೇದವ್ಯಾಸ ತಂತ್ರಿ, ಶಿಬರೂರುರವರ ನೇತೃತ್ವದಲ್ಲಿ ಜರಗಲಿದ್ದು ಅದೇ ದಿನ ರಾತ್ರಿ ಕ್ಷೇತ್ರದ ನಾಗಮಂಡಲ ಸೇವೆ ಜರುಗಲಿದೆ. ಏಪ್ರಿಲ್ 27ರಿಂದ 30ರ ತನಕ ವಿಶೇಷ ಜಾತ್ರಾ ಮಹೋತ್ಸವವು ಜರಗಲಿದೆ. ಕೊಡಮಣಿತ್ತಾಯನ ಮೇಲಿನ ಭಕ್ತಿಯಿಂದ ಚಿನ್ನದ ಪಲ್ಲಕ್ಕಿಗಾಗಿ ಭಕ್ತರು ತಮ್ಮ ಒಡವೆಯನ್ನೇ ದಾನ ರೂಪವಾಗಿ ನೀಡಿದ 2 ಕೋಟಿ ಮೌಲ್ಯದ ಸ್ವರ್ಣ ಪಲ್ಲಕ್ಕಿಯನ್ನು ಏಪ್ರಿಲ್ 19 ರಂದು ಶ್ರೀ ಕ್ಷೇತ್ರ ಕಟೀಲಿನಿಂದ ಸಂಜೆ 4 ಗಂಟೆಗೆ ವಿಜೃಂಭಣೆಯ ಮೆರವಣಿಗೆಯಲ್ಲಿ ಶ್ರೀ ಕ್ಷೇತ್ರಕ್ಕೆ ಊರ ಪರವೂರ ಭಕ್ತರು ಸೇವೆಯ ರೂಪದಲ್ಲಿ ಸಲ್ಲಿಸಲಿದ್ದಾರೆ. ಬ್ರಹ್ಮಕುಂಭಾಭಿಷೇಕ, ನಾಗಮಂಡಲ ಸಂದರ್ಭದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮಗಳನ್ನು ಸ್ವಾಮೀಜಿಗಳ ಸಮಕ್ಷಮದಲ್ಲಿ ಧಾರ್ಮಿಕ ಮುಖಂಡರ ಹಾಗೂ ಅನೇಕ ಸಾಂಸ್ಕೃತಿಕ ತಂಡಗಳ ಹಾಗೂ ಭಜನಾ ಮಂಡಳಿಗಳ ಮುಖಾಂತರ ನಿರಂತರ ಭಜನಾ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ. ಕಟೀಲು ಕ್ಷೇತ್ರಕ್ಕೂ ಕೊಡಮಣಿತ್ತಾಯ ಕ್ಷೇತ್ರಕ್ಕೂ ಅವಿನಾಭಾವ ನಂಟಿದೆ. ಕಟೀಲು ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ದೇವಿ ಮತ್ತು ದೈವದ ಭೇಟಿ ಅಪರೂಪವಾಗಿದೆ. ಬ್ರಹ್ಮಕುಂಭಾಭಿಷೇಕ ಸಂದರ್ಭದಲ್ಲಿ ಕ್ಷೇತ್ರದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು ದೇಶ ವಿದೇಶಗಳಲ್ಲಿ ಸಾಕಷ್ಟು ಸಂಖ್ಯೆಯ ಭಕ್ತರು ದೈವದ ಸೇವೆಯಲ್ಲಿ ಕೈಜೋಡಿಸಲಿದ್ದಾರೆ. ಕಳೆದ 8 ತಿಂಗಳಲ್ಲಿ 3.5 ಕೋಟಿ ವೆಚ್ಚದ ಸಿವಿಲ್ ಕಾಮಗಾರಿ, 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬ್ರಹ್ಮಕುಂಭಾಭಿಷೇಕ ಸಂದರ್ಭದಲ್ಲಿ ನಿತ್ಯ ಉಪಹಾರ, ಅನ್ನದಾನ ನಡೆಯಲಿದ್ದು ರಾಜ್ಯಾದ್ಯಂತ 3-4 ಲಕ್ಷ ಜನ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. 22 ಸಮಿತಿಗಳನ್ನು ರಚಿಸಲಾಗಿದ್ದು, ಪ್ಲಾಸ್ಟಿಕ್ ಮುಕ್ತವಾಗಿ ಮಾಡಲು ನಿರ್ಧರಿಸಲಾಗಿದೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿಯೊಂದಿಗೆ ಮೂರು ದಿನಗಳ ಕಾಲ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಶಿಲ್ಪಾ ಶೆಟ್ಟಿ ಬೆಳ್ಳಿಯ ಕಲಶ ನೀಡಿದ್ದಾರೆ. ಕೊಡಮಣಿತ್ತಾಯನ ಮೇಲಿನ ಭಕ್ತಿಯಿಂದ ಚಿನ್ನದ ಪಲ್ಲಕ್ಕಿಗಾಗಿ ಭಕ್ತರು ತಮ್ಮ ಒಡವೆಯನ್ನೇ ದಾನ ರೂಪವಾಗಿ ನೀಡುತ್ತಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಕೋಂಜಾಲಗುತ್ತು ಪ್ರಭಾಕರ ಎಸ್ ಶೆಟ್ಟಿ, ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಶಿಬರೂರು ಗುತ್ತು ಉಮೇಶ್ ಎನ್ ಶೆಟ್ಟಿ, ಪರ್ಲಬೈಲುಗುತ್ತು ತುಕಾರಾಮ ಶೆಟ್ಟಿ, ಮೊಕ್ತೇಸರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ ಮಧುಕರ್ ಅಮೀನ್, ಜೀರ್ಣೋದ್ಧಾರ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಸಂಚಾಲಕ ಸುಬ್ರಮಣ್ಯ ಪ್ರಸಾದ್ ಕೋರ್ಯಾರು ಮತ್ತಿತರರು ಉಪಸ್ಥಿತರಿದ್ದರು.
ಏಪ್ರಿಲ್ 17 : ಚುನಾವಣಾ ಕರ್ತವ್ಯನಿರತರಿಗೆ ಎರಡನೇ ಹಂತದ ತರಬೇತಿ ಕಾರ್ಯಗಾರ
Posted On: 16 Apr 2024, 09:41 AM
ಕಾಪು : ಲೋಕಸಭಾ ಚುನಾವಣೆಯ ಮತದಾನ ದಿನದಂದು ಕರ್ತವ್ಯಕ್ಕೆ ನಿಯೋಜನೆಗೊಂಡ ಎಲ್ಲ ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಗೆ ಏಪ್ರಿಲ್ 17ರಂದು ವಿಧಾನಸಭಾ ಕ್ಷೇತ್ರದ ಮಟ್ಟದಲ್ಲಿ ಎರಡನೇ ಹಂತದ ತರಬೇತಿ ಕಾರ್ಯಗಾರ ಏರ್ಪಡಿಸಲಾಗಿದೆ. ಕುಂದಾಪುರ ವಿಧಾನಸಭಾ ಕ್ಷೇತ್ರದವರಿಗೆ ಭಂಡಾರ್ ಕಾರ್ಸ್ ಕಾಲೇಜು ಕುಂದಾಪುರ, ಉಡುಪಿ ವಿಧಾನಸಭಾ ಕ್ಷೇತ್ರದವರಿಗೆ ಸೈಂಟ್ ಸಿಸಿಲಿಸ್ ಸ್ಕೂಲ್ ಬ್ರಹ್ಮಗಿರಿ ಉಡುಪಿ, ಕಾಪು ವಿಧಾನಸಭಾ ಕ್ಷೇತ್ರದವರಿಗೆ ದಂಡತೀರ್ಥ ಪಿಯು ಕಾಲೇಜು ಉಳಿಯಾರಗೋಳಿ ಕಾಪು, ಕಾರ್ಕಳ ವಿಧಾನಸಭಾ ಕ್ಷೇತ್ರದವರಿಗೆ ಕ್ರೈಸ್ಟ್ ಕಿಂಗ್ ಪಿಯು ಕಾಲೇಜು ಗಾಂಧಿ ಮೈದಾನ ಕಾರ್ಕಳದಲ್ಲಿ ತರಬೇತಿ ನಡೆಯಲಿದೆ. ಸಿಬ್ಬಂದಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಬೈಂದೂರು ಕ್ಷೇತ್ರದ ಬೈಂದೂರು ತಾಲೂಕು ಆಡಳಿತ ಸೌಧ, ಕುಂದಾಪುರ ಕ್ಷೇತ್ರದ ಕುಂದಾಪುರ ಗಾಂಧಿ ಮೈದಾನ, ಉಡುಪಿ ಕ್ಷೇತ್ರದ ಉಡುಪಿ ಬೋರ್ಡ್ ಹೈಸ್ಕೂಲ್ ಬಳಿ ಹಾಗೂ ಕಾರ್ಕಳ ಕ್ಷೇತ್ರದಿಂದ ಆಗಮಿಸುವ ಪೋಲಿಂಗ್ ಅಧಿಕಾರಿಗಳು ಕಾರ್ಕಳ ಪೇಟೆ ಹಾಗೂ ಬಂಡೀಮಠ ಬಸ್ ನಿಲ್ದಾಣಕ್ಕೆ ಬೆಳಗ್ಗೆ 7 ಗಂಟೆಗೆ ಆಗಮಿಸಬೇಕು ಎಂದು ಕಾಪು ತಹಸೀಲ್ದಾರ್ ಪ್ರತಿಭಾ ಆರ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಪು : ದೆಂದೂರು ಕೊಲ್ಲು ಕೆ. ಶೆಡ್ತಿ ನೆನಪಿನ ಪಾಡ್ದನ ಪ್ರಶಸ್ತಿ ಪ್ರದಾನ - ಪ್ರಶಸ್ತಿ ಪುರಸ್ಕೃತರಾದ ಗೋಪಿ ಪಾನರ ಮೂಡುಬೆಟ್ಟು ಕಟಪಾಡಿ
Posted On: 15 Apr 2024, 07:05 PM
ಕಾಪು : ತುಳುವರು ತುಳುನಾಡ ಮಣ್ಣನ್ನು ನಂಬಿ ಬದುಕಿದವರು. ದೈವವನ್ನು ಆಹ್ವಾಹನೆ ಮಾಡಿಕೊಂಡು ನಮ್ಮ ಆಚರಣೆ, ನಂಬಿಕೆಯನ್ನು ಗಟ್ಟಿಗೊಳಿಸುವ ಪ್ರಯತ್ನವನ್ನು ಪಾಡ್ದನದ ಮೂಲಕ ಮಾಡಿಕೊಂಡವರು. ಪಾಡ್ದನ ಎಂದರೆ ಜನರಿಂದ ಜನರು ಪಾಡಿಕೊಂಡು ಬಂದ ಜಾನಪದ ಕಲೆ. ಇದು ಜೀವನ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಸಾಹಿತಿ ದಯಾಮಣಿ ಎಸ್. ಶೆಟ್ಟಿ ಎಕ್ಕಾರು ತಿಳಿಸಿದ್ದಾರೆ. ಅವರು ದೆಂದೂರು ಕೊಲ್ಲು ಕೃಷ್ಣ ಶೆಟ್ಟಿ ಫೌಂಡೇಶನ್ ಮತ್ತು ಉಡುಪಿ ಜೈಂಟ್ ಗ್ರೂಪ್ ವತಿಯಿಂದ ಕಾಪುವಿನ ಕೆ.ಒನ್ ಹೊಟೇಲಿನಲ್ಲಿ ಸೋಮವಾರ ನಡೆದ ಹಿರಿಯ ಪಾಡ್ದನಗಾರ್ತಿ ಗೋಪಿ ಪಾನರ ಮೂಡುಬೆಟ್ಟು ಕಟಪಾಡಿ ಇವರಿಗೆ ಪಡಿ ಅಕ್ಕಿ ನೀಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡ ಜಾನಪದ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಸುವರ್ಣ ಕಟಪಾಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, 800 ವರ್ಷಗಳ ಹಿಂದಿನ ಜನಪದ ತುಳು ಪಾಡ್ದನವನ್ನು ಇಂದಿಗೂ ಜನಜನಿತವಾಗಿ ಇಟ್ಟುಕೊಂಡವರು ದೈವ ನರ್ತಕರು. ಇಂದಿನ ಪೌರಾಣಿಕ, ಜಾನಪದ ನಾಟಕಗಳಿಗೆ, ಸಿನೆಮಾ ಕಥೆಗಳಿಗೂ ತುಳು ಪಾಡ್ದನ ಮೂಲವಾಗಿದೆ. ತಂತ್ರಜ್ಞಾನ ಮುಂದುವರೆದರೂ ಪಾಡ್ದನಗಳ ದಾಖಲೀಕರಣವಾಗದಿದ್ದರೆ ಮಂದಿನ ತಲೆಮಾರು ಮರೆತು ಹೋಗಬಹುದು ಎಂದರು. ಸನ್ಮಾನ : ಹಿರಿಯ ಪಾಡ್ದನಗಾರ್ತಿ ಗೋಪಿ ಪಾನರ ಮೂಡುಬೆಟ್ಟು ಕಟಪಾಡಿ ಇವರಿಗೆ ಪಾಡ್ದನ ಪ್ರಶಸ್ತಿ ಸಹಿತ 5 ಸಾವಿರ ನಗದಿನೊಂದಿಗೆ ಪತಿ ವಾಮಯ್ಯರ ಜೊತೆಗೂಡಿ ಗೌರವಿಸಲಾಯಿತು. ಈ ಸಂದರ್ಭ ಗೋಪಿ ಪಾಣಾರ ಅವರು ವರ್ತೆ ಪಂಜುರ್ಲಿ ದೈವದ ಪಾಡ್ದನ ಹಾಡಿದರು. ಮುಖ್ಯ ಅತಿಥಿಗಳಾಗಿದ್ದ ಉದ್ಯಮಿ ದೆಂದೂರು ಸುಭಾಸ್ ಎಮ್. ಸಾಲಿಯನ್ ನೆಲ್ಲಿಕಟ್ಟೆ ಮಾತನಾಡಿ, ತುಳುನಾಡಿನ ಜನಪದ ಸಂಸ್ಕೃತಿ ಅಗಾಧವಾಗಿದ್ದು, ಆಧುನಿಕತೆ ಬೆಳೆದರೂ ತುಳನಾಡಿನ ಭವ್ಯ ನಾಗರಿಕ ಪರಂಪರೆ ನಮಗೆಲ್ಲಾ ದಾರಿದೀಪವಾಗಿದೆ ಎಂದರು. ಪಾಡ್ದನ ಪ್ರಶಸ್ತಿಯ ಪ್ರಾಯೋಜಕರಾದ ಸಮಾಜಸೇವಕ ಚೇತನ್ ಕುಮಾರ್ ಶೆಟ್ಟಿ ಬ್ರಹ್ಮಾವರ ಮಾತನಾಡಿ,ತುಳು ಪಾಡ್ದನಗಳಲ್ಲಿನ ತುಳುನಾಡಿನ ವೀರಪುರುಷರ ಬದುಕಿನ ತಿರುಳನ್ನು ಯುವಜನಾಂಗಕ್ಕೆ ತಿಳಿಯಪಡಿಸುವ ಕೆಲಸ ನಡೆಯಬೇಕಿದೆ ಎಂದರು. ಉಡುಪಿ ಜೈಂಟ್ ಸಂಸ್ಥೆ ಅಧ್ಯಕ್ಷ ಯಶವಂತ್, ಕೊಲ್ಲು ಕೃಷ್ಣ ಶೆಟ್ಟಿ ಪೌಂಡೇಶನ್ ದೆಂದೂರು ಸಂಸ್ಥೆಯ ಗೌರವಾಧ್ಯಕ್ಷೆ ದೀಪಾ ಚೇತನ್ ಕುಮಾರ್ ಶೆಟ್ಟಿ, ಅಧ್ಯಕ್ಷ ದಯಾನಂದ ಕೆ. ಶೆಟ್ಟಿ ದೆಂದೂರು,ಕಾರ್ಯದರ್ಶಿ ಗುಣವತಿ ಡಿ.ಶೆಟ್ಟಿ ಮಾತನಾಡಿದರು. ಎಸ್ ಎಂ ಶೆಟ್ಟಿ, ಅಶೋಕ್ ಶೇರಿಗಾರ್ ಅಲೆವೂರ್, ಪುಷ್ಪರಾಜ್ ಸುಲೋಚನ, ದೀಪಕ್ ಬೀರ ಮತ್ತಿತರರು ಉಪಸ್ಥಿತರಿದ್ದರು. ಉಪನ್ಯಾಸಕಿ ಭಾಗ್ಯಲಕ್ಷ್ಮಿ ಉಪ್ಪೂರು ಪ್ರಾರ್ಥಿಸಿದರು. ಸಂಸ್ಥೆಯ ಅಧ್ಯಕ್ಷ ದಯಾನಂದ ಕೆ. ಶೆಟ್ಟಿ ದೆಂದೂರು ಸ್ವಾಗತಿಸಿ, ಪ್ರಸ್ತಾವನೆಗೈದರು. ಟ್ರಸ್ಟಿ ಇಶಾನಿ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಉಪನ್ಯಾಸಕ ದಯಾನಂದ ಕಿದಿಯೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಏಪ್ರಿಲ್ 18 : ಎಲ್ಲೂರು ಮಹತೋಭಾರ ಶ್ರೀ ವಿಶ್ವೇಶ್ವರ ದೇವಸ್ಥಾನದ ಮನ್ಮಾಹಾರಥೋತ್ಸವ
Posted On: 15 Apr 2024, 03:42 PM
ಕಾಪು : ಎಲ್ಲೂರು ಮಹತೋಭಾರ ಶ್ರೀ ವಿಶ್ವೇಶ್ವರ ದೇವಸ್ಥಾನದಲ್ಲಿ ಏಪ್ರಿಲ್ 20 ರವರೆಗೆ ವಾರ್ಷಿಕ ನಡಾವಳಿ ಕಾರ್ಯಕ್ರಮಗಳು ಜರುಗುತ್ತಿದ್ದು, ಏಪ್ರಿಲ್ 18 ರಂದು ಶ್ರೀ ಮನ್ಮಾಹಾರಥೋತ್ಸವ ಹಾಗೂ ಮಹಾ ಅನ್ನಸಂತರ್ಪಣೆಯು ನಡೆಯಲಿದೆ. ಪರ್ಯಾಯ ತಂತ್ರಿ ವೇ.ಮೂ.ಬೆಟ್ಟಿಗೆ ವೆಂಕಟರಾಜ ತಂತ್ರಿಗಳು, ಸರದಿ ಅರ್ಚಕರಾದ ವೇ.ಮೂ ಶ್ರೀನಿವಾಸ ಭಟ್ಟ, ವೇ.ಮೂ. ವೆಂಕಟೇಶ ಭಟ್ಟ ಹಾಗೂ ವೇ.ಮೂ. ಗುರುರಾಜ ಭಟ್ಟರ ನೇತೃತ್ವದಲ್ಲಿ ಏಪ್ರಿಲ್ 18 ರಂದು ಬೆಳಿಗ್ಗೆ 11 ಕ್ಕೆ ರಥಾರೋಹಣ. ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಸ್ಯಾಕ್ಸೋಫೋನ್ ಕಛೇರಿ, ರಾತ್ರಿ 8.30ಕ್ಕೆ ರಥೋತ್ಸವ, ಉತ್ಸವ ಬಲಿ, ರಂಗಪೂಜೆ, ಭೂತ ಬಲಿ, ಶಯನೋತ್ಸವ. ಏಪ್ರಿಲ್ 19 ರಂದು ಕವಾಟೋದ್ಘಾಟನೆ, ತುಲಾಭಾರ ಸೇವೆ, ಉತ್ಸವ ಬಲಿ, ಸಂಜೆ ಅವಭೃತ, ಗಂಧಪೂಜೆ, ಧ್ವಜ ಅವರೋಹಣ, ಮಹಾಮಂತ್ರಾಕ್ಷತೆ. ಏಪ್ರಿಲ್ 13 ರಿಂದ 19 ರವರೆಗೆ ಪ್ರತಿದಿನ ಪ್ರಧಾನ ಹೋಮ, ನವಕ, ಶತರುದ್ರಾಭಿಷೇಕ, ಉತ್ಸವ ಬಲಿ, ಕಟ್ಟೆಪೂಜೆಗಳು ನಡೆಯಲಿರುವುದು.
ಏಪ್ರಿಲ್ 15 (ನಾಳೆ) : ದೆಂದೂರು ಕೊಲ್ಲು ಕೆ. ಶೆಡ್ತಿ ನೆನಪಿನ ಪಾಡ್ದನ ಪ್ರಶಸ್ತಿ ಪ್ರದಾನ ಸಮಾರಂಭ
Posted On: 14 Apr 2024, 10:31 PM
ಕಾಪು : ದೆಂದೂರು ಕೊಲ್ಲು ಕೃಷ್ಣ ಶೆಟ್ಟಿ ಫೌಂಡೇಶನ್ ಮತ್ತು ಉಡುಪಿ ಜೈಂಟ್ ಗ್ರೂಪ್ ವತಿಯಿಂದ ದೆಂದೂರು ಕೊಲ್ಲು ಕೆ. ಶೆಡ್ತಿ ನೆನಪಿನ ಪಾಡ್ಡನ ಪ್ರಶಸ್ತಿ ಪ್ರದಾನ ಸಮಾರಂಭ ಏ.15ರಂದು ಬೆಳಗ್ಗೆ 10:30 ಗಂಟೆಗೆ ಕಾಪು ಕೆ.ಒನ್ ಹೊಟೇಲಿನಲ್ಲಿ ನಡೆಯಲಿದೆ. ಸಾಹಿತಿ ದಯಾಮಣಿ ಎಸ್. ಶೆಟ್ಟಿ ಎಕ್ಕಾರು ಕಾರ್ಯಕ್ರಮ ಉದ್ಘಾಟಿಸುವರು. ಕನ್ನಡ ಜಾನಪದ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಸುವರ್ಣ ಕಟಪಾಡಿ ಅಧ್ಯಕ್ಷತೆ ವಹಿಸುವರು. ಉದ್ಯಮಿಗಳಾದ ಶಶಿಧರ ನಾಯಕ್, ಚೇತನ್ ಕುಮಾರ್ ಶೆಟ್ಟಿ ಬ್ರಹ್ಮಾವರ, ದೆಂದೂರು ಸುಭಾಸ್ ಎಮ್. ಸಾಲಿಯನ್ ನೆಲ್ಲಿಕಟ್ಟೆ ಮೂಡುಬೆಳ್ಳೆ, ಉಡುಪಿ ಜೈಂಟ್ ಸಂಸ್ಥೆ ಅಧ್ಯಕ್ಷ ಯಶವಂತ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಪಾಡ್ದನಗಾರ್ತಿ ಗೋಪಿ ಪಾನರ ಮೂಡುಬೆಟ್ಟು ಕಟಪಾಡಿ ಇವರಿಗೆ ಪಾಡ್ದನ ಪ್ರಶಸ್ತಿಯನ್ನು 5 ಸಾವಿರ ನಗದಿನೊಂದಿಗೆ ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಗೌರವಾಧ್ಯಕ್ಷೆ ದೀಪಾ ಚೇತನ್ ಕುಮಾರ್ ಶೆಟ್ಟಿ ಹಾಗೂ ಅಧ್ಯಕ್ಷ ದಯಾನಂದ ಕೆ. ಶೆಟ್ಟಿ ದೆಂದೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪಡುಬಿದ್ರಿಯಲ್ಲಿ 133 ನೇ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ
Posted On: 14 Apr 2024, 08:09 PM
ಪಡುಬಿದ್ರಿ : ಈ ದೇಶದ ಸಮಸ್ತ ಮಹಿಳೆಯರಿಗೆ ಆಸ್ತಿ ಹಕ್ಕು, ಉದ್ಯೋಗ, ಹೆರಿಗೆ ಭತ್ಯೆ, ಸಮಾನ ವೇತನ ಅನೇಕ ಸಂವಿಧಾನ ಬದ್ದ ಹಕ್ಕುಗಳನ್ನು ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಕಾರಣರಾದವರು ಡಾ. ಬಿ.ಆರ್ ಅಂಬೇಡ್ಕರ್, ಹಾಗು ಸಮಸ್ತ ದೇಶವಾಸಿಗಳಿಗೆ ದುಂಡು ಮೇಜಿನ ಪರಿಷತ್ ನಲ್ಲಿ ವಾದ ಮಾಡುವ ಮೂಲಕ ಮತದಾನದ ಹಕ್ಕನ್ನು ನೀಡಿರುತ್ತಾರೆ. ರಿಸರ್ವ್ ಬ್ಯಾಂಕ್ ಅನ್ನು ಸ್ಥಾಪಿಸುವುದರ ಮೂಲಕ ದೇಶದ ಆರ್ಥಿಕತೆಗೆ ಭಾಷ್ಯ ಬರೆದವರು ಡಾ. ಬಿ.ಆರ್ ಅಂಬೇಡ್ಕರ್ ರವರು. ದೇಶದ ಸಮಸ್ತ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವುದು ಮಾತ್ರವಲ್ಲ ಈ ದೇಶದಲ್ಲಿ ಜಾರಿಯಾಲ್ಲಿರುವ ಕಾಯ್ದೆಗಳನ್ನು ರೂಪಿಸಿ, ಸಮ ಸಮಾಜದ ಬದುಕಿಗೆ ಸಂವಿಧಾನ ಬದ್ಧವಾಗಿ ಒತ್ತು ಕೊಟ್ಟವರು ಡಾ.ಬಿ.ಆರ್ ಅಂಬೇಡ್ಕರ್. ವಿಶ್ವಶ್ರೇಷ್ಠ ಭಾರತದ ಸಂವಿಧಾನವನ್ನು ಉಳಿಸಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಹಾಗು ಅಂಬೇಡ್ಕರ್ ರವರಿಗೆ ನೀಡುವ ವಿಶೇಷ ಗೌರವವೆಂದು ಚಿಂತಕ, ಹೋರಾಟಗಾರ ಶೇಖರ್ ಹೆಜ್ಮಾಡಿ ಹೇಳಿದರು. ಅವರು ಪಡುಬಿದ್ರಿ ಬೋರ್ಡ್ ಶಾಲೆಯಲ್ಲಿ ದ.ಸಂ.ಸ. ಅಂಬೇಡ್ಕರ್ ವಾದ ಪಡುಬಿದ್ರಿ ಗ್ರಾಮ ಶಾಖೆ ಹಾಗು ಪಡುಬಿದ್ರಿ ರೋಟರಿ ಕ್ಲಬ್ ವತಿಯಿಂದ ನಡೆದ 133 ನೇ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷ ಸಂತೋಷ್ ಪಡುಬಿದ್ರಿ, ದ.ಸಂ.ಸ ಅಂಬೇಡ್ಕರ್ ವಾದ ಪಡುಬಿದ್ರಿ ಗ್ರಾಮ ಶಾಖಾ ಪ್ರಧಾನ ಸಂಚಾಲಕ ಕೀರ್ತಿ ಕುಮಾರ್, ಪಡುಬಿದ್ರಿ ಗ್ರಾ.ಪಂ.ಸದಸ್ಯ ರಮೀಜ್ ಹುಸೇನ್, ಕರ್ನಾಟಕ ದಲಿತ ಸಂಘಷ ಸಮಿತಿ ಜಿಲ್ಲಾ ಖಜಾಂಚಿ ಸದಾಶಿವ ಕೋಟ್ಯಾನ್, ರಾಜ್ಯ ದ.ಸಂ.ಸ. ಮಹಿಳಾ ಸಂಘಟನ ಸಂಚಾಲಕಿ ವಸಂತಿ ಶಿವಾನಂದ್,, ದ.ಸಂ.ಸ. ಅಂಬೇಡ್ಕರ್ ವಾದ ಪಡುಬಿದ್ರಿ ಗ್ರಾಮ ಶಾಖಾ ಮಹಿಳಾ ಸಂಚಾಲಕಿ ಆಶಾ ಕರ್ಕೇರ ಉಪಸ್ಥಿತರಿದ್ದರು. ಶಿವಾನಂದ ಕೋಟ್ಯಾನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಿಠಲ್ ಮಾಸ್ಟರ್ ವಂದಿಸಿದರು.
ಪಡುಬಿದ್ರಿ : ಡಾ.ಬಿ.ಆರ್.ಅಂಬೇಡ್ಕರ್ ರವರ 133ನೇ ಜಯಂತಿ ಆಚರಣೆ
Posted On: 14 Apr 2024, 01:44 PM
ಪಡುಬಿದ್ರಿ : ನಡ್ಸಾಲು ಗ್ರಾಮದ ಸಾಮಾಜಿಕ ಕಾರ್ಯಕರ್ತ ಸುಧಾಕರ್ ಕೆ ಪಡುಬಿದ್ರಿ ಇವರ ನಿವಾಸದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ 133ನೇ ಜಯಂತಿ ಆಚರಿಸಲಾಯಿತು. ಈ ಸಂದರ್ಭ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಕಾಪು ದಿವಾಕರ್ ಶೆಟ್ಟಿ, ವೈ. ಸುಧೀರ್ ಕುಮಾರ್, ನವೀನ್ ಚಂದ್ರ ಜೆ ಶೆಟ್ಟಿ, ಕಿರಣ್, ಗ್ರಾಮ ಪಂಚಾಯತ್ ಸದಸ್ಯ ರಮೀಜ್ ಹುಸೇನ್, ಬೂತ್ ಅಧ್ಯಕ್ಷರಾದ ಅಬ್ದುಲ್ ಖಾದರ್, ಮಾಜಿ ಗ್ರಾಮ ಪಂಚಾಯತ್ ಸದಸ್ಯ ರವಿ ಪೂಜಾರಿ ಹಾಗೂ ಕಾರ್ಯಕರ್ತರು, ಮತ್ತಿತರರು ಉಪಸ್ಥಿತರಿದ್ದರು.
ಕಾಪು : ತಹಶಿಲ್ದಾರರ ಕಚೇರಿಯಲ್ಲಿ ಡಾ. ಅಂಬೇಡ್ಕರ್ ಜಯಂತಿ ಆಚರಣೆ
Posted On: 14 Apr 2024, 11:39 AM
ಕಾಪು : ಸಂವಿಧಾನ ಶಿಲ್ಪಿ, ನೊಂದವರ ದನಿ, ಸಮಾನತಾವಾದಿ, ಶೋಷಿತರ ಆಶಾಕಿರಣ ಡಾ ಅಂಬೇಡ್ಕರ್ ರವರು ಸಾರ್ವಕಾಲಿಕ ಆದರ್ಶ ಮತ್ತು ಚಿಂತನೆಗಳನ್ನು ಹೊಂದಿದ್ದರು. ಅವರ ಚಿಂತನೆಗಳು ಭಾರತದ ಭವ್ಯ ಭವಿಷ್ಯದ ರೂವಾರಿ ಈ ಮಹಾಪುರುಷ. ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ, ದೇಶದ ಮೊದಲ ಕಾನೂನು ಸಚಿವರು, ದೇಶ ಕಂಡ ಮಹಾನ್ ವ್ಯಕ್ತಿ ಡಾ.ಬಿ.ಆರ್. ಅಂಬೇಡ್ಕರ್. ಪ್ರತಿ ವರ್ಷ ಏಪ್ರಿಲ್ 14 ರಂದು ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಆಚರಣೆ ಮಾಡಲಾಗುತ್ತದೆ. ಭಾರತದ ಕಾನೂನು ಸುವ್ಯವಸ್ಥೆ, ಅಸ್ಪೃಶ್ಯತೆ ನಿವಾರಣೆ, ಪ್ರಜೆಗಳ ಮೂಲಭೂತ ಕರ್ತವ್ಯ, ಸಮಾನತೆ, ಶಿಕ್ಷಣ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆ ಅಪಾರ ಎಂದು ಕಾಪು ತಾಲೂಕು ತಹಶಿಲ್ದಾರ್ ಡಾ. ಪ್ರತಿಭಾ ಆರ್. ಹೇಳಿದರು. ಡಾ.ಬಿ. ಆರ್. ಅಂಬೇಡ್ಕರ್ ಭಾರತದ ಹೆಮ್ಮೆಯ ಪುತ್ರ. ನಮ್ಮ ರಾಷ್ಟ್ರ ಕಂಡ ಶ್ರೇಷ್ಠ ನಾಯಕರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೂಡಾ ಪ್ರಮುಖರು. ಅಂಬೇಡ್ಕರ್ ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ. ಅವರು ಸಾಮಾಜಿಕವಾಗಿ ಮೂಡಿಸಿದ ಸಂಚಲನಗಳು ಅಷ್ಟು ಹಿರಿದಾಗಿದ್ದವು. ಇವರ ತತ್ವ ಆದರ್ಶಗಳು ಸುಂದರ ಸಮಾಜವನ್ನು ನಿರ್ಮಿಸುವಂತಿದೆ. ಅದೂ ಅಲ್ಲದೆ, ಪ್ರತಿಯೊಬ್ಬ ಭಾರತೀಯರ ಪಾಲಿನ ಪವಿತ್ರ ಗ್ರಂಥವಾದ ಸಂವಿಧಾನದ ಹಿಂದಿನ ದೊಡ್ಡ ಶಕ್ತಿ ಬಾಬಾ ಸಾಹೇಬ್ ಅಂಬೇಡ್ಕರ್ ಎಂದರು. ಈ ಸಂದರ್ಭ ಸಹಾಯಕ ಚುನಾವಣಾಧಿಕಾರಿ ಜಯಮಾಧವ, ಉಪ ತಹಶಿಲ್ದಾರ್ ಗಳಾದ ರವಿಕಿರಣ್, ಅಶೋಕ್ ಎನ್ ಕೋಟೇಕಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾಪು : ಮನೆ ಮತದಾನ ಪ್ರಕ್ರಿಯೆ ಪ್ರಾರಂಭ - ತಮ್ಮ ಹಕ್ಕು ಚಲಾಯಿಸಿದ ಹಿರಿಯ ನಾಗರಿಕರು
Posted On: 13 Apr 2024, 03:09 PM
ಕಾಪು : ಏಪ್ರಿಲ್ 13 ರಿಂದ 18 ರವರೆಗೆ ಮನೆ ಮತದಾನ ಪ್ರಕ್ರಿಯೆ ನಡೆಯಲಿದ್ದು, ಆ ಪ್ರಯುಕ್ತ ಕಾಪು ತಾಲೂಕಿನ ಕಲ್ಯ ಗ್ರಾಮಕ್ಕೆ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಹಾಗೂ ಕಾಪು ತಹಶಿಲ್ದಾರ್ ಪ್ರತಿಭಾ ಆರ್ ಭೇಟಿ ನೀಡಿ ಪರಿಶೀಲಿಸಿದರು. 85 ವರ್ಷ ಮೇಲ್ಪಟ್ಟ ವ್ಯಕ್ತಿಗಳು ಮತ್ತು ದಿವ್ಯಾಂಗರ ಮನೆಗೆ ತೆರಳಿ ಚುನಾವಣಾ ಅಧಿಕಾರಿಗಳು ಮತದಾನ ಮಾಡಿಸಿದರು.
ಮಹಾಮಾಯ ಫೌಂಡೇಷನ್ : ಪಿಯು ಮಕ್ಕಳಿಗೆ ಆನ್ ಲೈನ್, ಆಫ್ ಲೈನ್ ತರಗತಿಗಳು, ವಿದ್ಯಾರ್ಥಿ ವೇತನ
Posted On: 12 Apr 2024, 05:03 PM
ಮಣಿಪಾಲ್ ಫೌಂಡೇಶನ್ ನ ಆರ್ಥಿಕ ಸಹಯೋಗದೊಂದಿಗೆ ಶ್ರೀ ಕಾರ್ಕಳ ರುಕ್ಮ ರಂಗನಾಥ ಪೈ ಮೆಮೋರಿಯಲ್ ಮಹಾಮಾಯ ಫೌಂಡೇಶನ್ ಕಾರ್ಯಯೋಜನೆಯಲ್ಲಿ ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಉಡುಪಿ ಮತ್ತು ದ.ಕ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಆನ್ಲೈನ್ ಮತ್ತು ಆಫ್ ಲೈನ್ ವಿಭಾಗದ ತರಗತಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಆಫ್ ಲೈನ್ ತರಗತಿಯಲ್ಲಿ ಕೋಟ ಪಿಯು ಕಾಲೇಜಿನ ಶ್ರೀಪ್ರಿಯ (588), ಉಡುಪಿ ಸರಕಾರಿ ಪಿಯು ಕಾಲೇಜಿನ ಚಿರಂಜೀವಿ ಜಿ. (587), ಉಡುಪಿ ಎಮ್ ಜಿ ಎಮ್ ಕಾಲೇಜಿನ ವಿದ್ಯಾರ್ಥಿಗಳಾ ನಿಖಿತ (586), ಎಸ್ ವರುಣ್ ನಾಯಕ್ (578), ಪ್ರಥಮ್ (575), ಹಿರಿಯಡ್ಕ ಪಿಯು ಕಾಲೇಜಿನ ಸುಶಾನ್ (575), ಸುಹಾನ್ (571), ಬೈಲೂರು ಪಿಯು ಕಾಲೇಜಿನ ನಿಖಿತ (570) ಅಂಕ ಗಳಿಸಿದ್ದಾರೆ. ಆನ್ ಲೈನ್ ತರಗತಿಯಲ್ಲಿ ಸುಬ್ರಹ್ಮಣ್ಯ ಕುಮಾರಸ್ವಾಮಿ ಪಿಯು ಕಾಲೇಜಿನ ಸಾತ್ವಿಕ್ ಎಚ್ ಎಸ್ (592), ಭುವನೇಂದ್ರ ಕಾಲೇಜಿನ ನಾಗೇಶ್ ಪ್ರಭು (588), ಕಾರ್ಕಳ ಕ್ರಿಸ್ತ ಕಿಂಗ್ ಕಾಲೇಜಿನ ಶ್ರೀಲಕ್ಷ್ಮಿ ಪ್ರಭು (582), ಉಡುಪಿ ಪಿಪಿಸಿ ಕಾಲೇಜಿನ ಪುನೀತ್ (578), ಮುಲ್ಕಿ ವಿಜಯ ಕಾಲೇಜಿನ ಅಭಿಜ್ಞಾ ಪ್ರಭು (577), ಸುನ್ನಾರಿ ಎಕ್ಸಲೆಂಟ್ ಪಿಯು ಕಾಲೇಜ್ ಆಶ್ರಿತ ಎಚ್ಆರ್ (574), ಕಾರ್ಕಳ ಜ್ಞಾನಸುಧ ಪಿಯು ಕಾಲೇಜಿನ ರಾಮ್ ಪ್ರಸಾದ್ ಪೈ (573), ಎಂಜಿಎಂ ಪಿಯು ಕಾಲೇಜಿನ ಪ್ರಶಾಂತ್ ಕೋಟ್ಯಾನ್ (572) ಅಂಕ ಗಳಿಸಿರುತ್ತಾರೆ. ಸಂಸ್ಥೆಯು 2014 ರಲ್ಲಿ ಪ್ರಾಂಭವಾಗಿ ವಿದ್ಯಾರ್ಥಿಗಳಿಗಾಗಿ ಆನ್ ಲೈನ್ ಮತ್ತು ಆಫ್ ಲೈನ್ ತರಗತಿಗಳ ಜೊತೆಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ವಿದ್ಯಾರ್ಥಿವೇತನ ಜೊತೆಗೆ ಶೇ.90 ಕ್ಕಿಂತ ಅಧಿಕ ಅಂಕ ಗಳಿಸಿದವರಿಗೆ ಬಂಗಾರದ ಪದಕವನ್ನೂ ನೀಡಲಾಗುತ್ತಿದೆ.
