Updated News From Kaup

ಶಿರ್ವ : ಹಿಂದು ಪ್ರೌಢಶಾಲೆ ಮತ್ತು ಸ.ಹಿ.ಪ್ರಾ.ಶಾಲೆ ಕೈರಬೆಟ್ಟುಗೆ ವಾಟರ್ ಕೂಲರ್‌ ಕೊಡುಗೆ

Posted On: 15-02-2024 05:56PM

ಶಿರ್ವ : ಇಲ್ಲಿನ ಹಿಂದು ಪ್ರೌಢಶಾಲೆ ಹಾಗೂ ಸ.ಹಿ.ಪ್ರಾ.ಶಾಲೆ ಕೈರಬೆಟ್ಟುವಿನ ಹಳೆ ವಿದ್ಯಾರ್ಥಿ ದಿವಂಗತ ಕುಮಾರ್ ಟಿ. ಸುವರ್ಣ ಮತ್ತು ಅವರ ಪತ್ನಿ ದಿವಂಗತ ಹೇಮಾವತಿ ಕೆ. ಸುವರ್ಣ ಸ್ಮರಣಾರ್ಥ ಅವರ ಮಕ್ಕಳು ವಿದ್ಯಾರ್ಥಿಗಳ ಉಪಯೋಗಕ್ಕಾಗಿ 45 ಸಾವಿರ ರೂ. ಮೌಲ್ಯದ ವಾಟರ್ ಕೂಲರನ್ನು ಸೋಮವಾರ ಹಸ್ತಾಂತರಿಸಿದರು.

ಈ ಸಂಧರ್ಭ ಅವರ ಮಕ್ಕಳಾದ ಸುನಿಲ್ ಕೆ.ಸುವರ್ಣ, ಸುಧೀರ್ ಕೆ. ಸುವರ್ಣ, ಸುಜಿತ್ ಸುವರ್ಣ, ಮಗಳು ಸುನಿತಾ ಕೆ. ಕೋಟ್ಯಾನ್, ಮತ್ತು ಅಳಿಯ ಶೇಖರ್ ಕೋಟ್ಯಾನ್, ಕುಟುಂಬಿಕರಾದ ಲಕ್ಷ್ಮಣ ಸುವರ್ಣ, ಶೇಖರ್ ಕೋಟ್ಯಾನ್, ಸುಜನ್.ಎಲ್.ಸುವರ್ಣ, ಶಾಲೆಯ ಎಸ್.ಡಿ.ಎಮ್.ಸಿ.ಅಧ್ಯಕ್ಷರಾದ ಹರೀಶ್ ಕೋಟ್ಯಾನ್, ಉಪಾಧ್ಯಕ್ಷೆಯಾದ ಸರಿತಾ ನಾಯ್ಕ್, ಸದಸ್ಯರಾದ ನಾಗೇಶ್ ಆಚಾರ್ಯ, ಶಕುಂತಳಾ, ಮಮತಾ ನಾಯ್ಕ್, ಹಿರಿಯ ಸಹಶಿಕ್ಷಕಿಯಾದ ಶಶಿಕಲಾ.ಹೆಚ್, ಅತಿಥಿ ಶಿಕ್ಷಕರಾದ ಸ್ವಾತಿ ಆಚಾರ್ಯ, ಅಡುಗೆ ಸಿಬ್ಬಂದಿಗಳಾದ ಪ್ರೇಮ ಮತ್ತು ಲಲಿತಾ, ಕಾಲೇಜಿನ ಪ್ರಿನ್ಸಿಪಾಲ್ ಭಾಸ್ಕರ ಎ. ಪ್ರೌಢಶಾಲಾ ಮುಖ್ಯ ಶಿಕ್ಷಕಿ ವಸಂತಿ ಬಾಯಿ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.

ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಶಾಲೆಯ ಮುಖ್ಯ ಶಿಕ್ಷಕಿಯಾದ ಶಶಿಕಲಾ ಶೆಟ್ಟಿ ಸ್ವಾಗತಿಸಿದರು. ಸಹ ಶಿಕ್ಷಕಿಯಾದ ಕುಮುದಾ ವಂದಿಸಿದರು. ಗೌರವ ಶಿಕ್ಷಕಿಯಾದ ಸವಿತಾ ಕಾರ್ಯಕ್ರಮ ನಿರೂಪಿಸಿದರು.

ಫೆಬ್ರವರಿ 18 : ಕುತ್ಯಾರು ಕುಲಾಲ ಸಂಘದ ವಾರ್ಷಿಕೋತ್ಸವ, ಸಾರ್ವಜನಿಕ ಶ್ರೀ ಸತ್ಯ ನಾರಾಯಣ ಪೂಜೆ

Posted On: 15-02-2024 09:43AM

ಕಾಪು : ತಾಲೂಕಿನ ಮೂಲ್ಯರ ಯಾನೆ ಕುಲಾಲರ ಸಂಘ (ರಿ.) ಕುತ್ಯಾರು ಆಯೋಜನೆಯಲ್ಲಿ ಫೆಬ್ರವರಿ 18 ರಂದು ಸಂಘದ ವಾರ್ಷಿಕೋತ್ಸವದ ಪ್ರಯುಕ್ತ ಸಾರ್ವಜನಿಕ ಶ್ರೀ ಸತ್ಯ ನಾರಾಯಣ ಪೂಜೆ, ಅನ್ನ ಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಸಭೆಯು ಕುತ್ಯಾರು ರಾಮೊಟ್ಟು ಬನತೊಡಿ ಗದ್ದೆಯಲ್ಲಿ ನಡೆಯಲಿದೆ ಎಂದು ಕುತ್ಯಾರು ಕುಲಾಲ ಸಂಘದ ಪ್ರಮುಖರು ಪ್ರಕಟಣೆಯಲ್ಲಿ ತಿಳಿಸಿರುವರು.

ಉಡುಪಿ : ಶ್ರೀ ಸಾಯಿ ಮುಖ್ಯ ಪ್ರಾಣ ದೇವಸ್ಥಾನ ದ್ವಾರಕಾಮಾಯಿ ಮಠ ಶ್ರೀ ಕ್ಷೇತ್ರ ಶಂಕರಪುರ - ಪುಲ್ವಾಮಾ ದಾಳಿಯಲ್ಲಿ ಮಡಿದ ವೀರ ಸೈನಿಕರಿಗೆ ನುಡಿ ನಮನ

Posted On: 14-02-2024 05:10PM

ಉಡುಪಿ : ಶ್ರೀ ಸಾಯಿ ಮುಖ್ಯ ಪ್ರಾಣ ದೇವಸ್ಥಾನ ದ್ವಾರಕಾಮಾಯಿ ಮಠ ಶ್ರೀ ಕ್ಷೇತ್ರ ಶಂಕರಪುರ ವತಿಯಿಂದ ಪುಲ್ವಾಮಾ ದಾಳಿಯ 5ನೇ ವರ್ಷಾಚರಣೆ ಅಂಗವಾಗಿ ದಾಳಿಯಲ್ಲಿ ಮಡಿದ ವೀರ ಸೈನಿಕರಿಗೆ ನುಡಿ ನಮನ ಸಲ್ಲಿಸುವ ಕಾರ್ಯಕ್ರಮ ಅಜ್ಜರಕಾಡು ಯುದ್ಧ ಸ್ಮಾರಕ ಬಳಿ ಬುಧವಾರ ನಡೆಯಿತು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಶಂಕರಪುರ ಸಾಯಿ ಮುಖ್ಯಪ್ರಾಣ ದೇವಾಲಯದ ಶ್ರೀ ಸಾಯಿ ಈಶ್ವರ ಗುರೂಜಿ ಮಾತನಾಡಿ ಫೆಬ್ರವರಿ 14ರಂದು ಪ್ರೇಮಿಗಳ ದಿನಾಚರಣೆ ಮಾಡುವುದು ಸರಿಯಲ್ಲ. ನಮ್ಮ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಪುಲ್ವಾಮಾ ದಾಳಿಯಲ್ಲಿ ವೀರ ಮರಣವನ್ನು ಅಪ್ಪಿದ 40 ಜನ ವೀರ ಸೈನಿಕರಿಗೆ ನುಡಿ ನಮನ ಸಲ್ಲಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಿ.ಆರ್.ಪಿ.ಎಫ್ ಹವಾಲ್ದಾರ್ ಮುರಳಿದರ್ .ಕೆ, ಸಿ.ಆರ್.ಪಿ.ಎಫ್ ಎ.ಎಸ್.ಐ ಕೇಶವ ಆಚಾರ್ಯ, ಉಡುಪಿ ಜಿಲ್ಲಾ ಹಿಂದೂ ಮಹಾಸಭಾ ಅಧ್ಯಕ್ಷರು ಸಂತೋಷ್ ಉದ್ಯಾವರ, ರಾಘವೇಂದ್ರ ಭಕ್ತ, ಸುಧಾಕರ್ ಶೆಟ್ಟಿ, ರಾಘವೇಂದ್ರ ಪ್ರಭು ಕವಾ೯ಲು, ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ವೀಣಾ.ಎಸ್. ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ, ಜಗದೀಶ್ ಶೆಟ್ಟಿ, ಉದಯ ನಾಯ್ಕ್, ವಿಜಯ ಕುಂದರ್, ವಾರಿಜ ಕಲ್ಮಾಡಿ, ಸತೀಶ್, ವಿಘ್ನೇಶ್, ಪ್ರದೀಪ್, ನೀಲೇಶ್, ಅಜಯ್, ಸುದರ್ಶನ್, ಸುಪ್ರೀತಾ, ಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಸಿ.ಆರ್.ಪಿ.ಎಫ್ ಹವಾಲ್ದಾರ್ ಮುರಳಿದರ್ .ಕೆ, ಸಿ.ಆರ್.ಪಿ.ಎಫ್ ಎ.ಎಸ್.ಐ ಕೇಶವ ಆಚಾರ್ಯ, ಉಡುಪಿ ಜಿಲ್ಲಾ ಹಿಂದೂ ಮಹಾಸಭಾ ಅಧ್ಯಕ್ಷರು ಸಂತೋಷ್ ಉದ್ಯಾವರ, ರಾಘವೇಂದ್ರ ಭಕ್ತ, ಸುಧಾಕರ್ ಶೆಟ್ಟಿ, ರಾಘವೇಂದ್ರ ಪ್ರಭು ಕವಾ೯ಲು, ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ವೀಣಾ.ಎಸ್. ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ, ಜಗದೀಶ್ ಶೆಟ್ಟಿ, ಉದಯ ನಾಯ್ಕ್, ವಿಜಯ ಕುಂದರ್, ವಾರಿಜ ಕಲ್ಮಾಡಿ, ಸತೀಶ್, ವಿಘ್ನೇಶ್, ಪ್ರದೀಪ್, ನೀಲೇಶ್, ಅಜಯ್, ಸುದರ್ಶನ್, ಸುಪ್ರೀತಾ, ಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.

ಖಾರ್ಲಾಂಡ್ ಯೋಜನೆಯಡಿಯಲ್ಲಿ ಅನುದಾನ ಮಂಜೂರು ಮಾಡಿ : ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಪ್ರಸ್ತಾವನೆ

Posted On: 14-02-2024 12:43PM

ಕಾಪು : ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕಾಪು ತಾಲೂಕು ಕೈಪುಂಜಾಲು, ಉಳಿಯಾರಗೋಳಿ, ಮಟ್ಟು ಆಳಿಂಜೆ, ತೆಂಕು ಕೊಪ್ಪಳ, ಬಡಗು ಕೊಪ್ಪಳ, ಕಲ್ತಟ್ಟ ಹಾಗೂ ದಡ್ಡಿ ಎಂಬಲ್ಲಿ ಪಾಂಗಾಳ ನದಿದಂಡೆಯ ಕೊರೆತಕ್ಕೊಳಗಾದ ಆಯ್ದ ಭಾಗಗಳಲ್ಲಿ ಖಾರ್ಲಾಂಡ್ ನಿರ್ಮಾಣ ಕಾಮಗಾರಿಯು ತೀರಾ ಅತ್ಯವಶ್ಯಕವಿರುತ್ತದೆ. ಈ ಭಾಗದಲ್ಲಿ ಜಿ.ಐ ಟ್ಯಾಗ್ ಮಾನ್ಯತೆ ಹೊಂದಿದ ಮಟ್ಟುಗುಳ್ಳ ವಿಭಿನ್ನ ತರಕಾರಿ ಬೆಳೆಯಾಗಿದ್ದು, ಬಹು ಬೇಡಿಕೆಯದ್ದಾಗಿರುತ್ತದೆ. ಅಷ್ಟ ಮಠದ ಪ್ರಮುಖ ಯತಿಗಳಾದ ವಾದಿರಾಜ ಸ್ವಾಮೀಗಳು ಪ್ರಸಾದ ರೂಪದಲ್ಲಿ ನೀಡಿದ ದಿವ್ಯ ಸ್ವರೂಪದ ಬೀಜವನ್ನು ಬಿತ್ತಿದ ಪ್ರದೇಶವಾಗಿರುತ್ತದೆ ಎಂಬ ಐತಿಹ್ಯವಿದೆ. ಮಟ್ಟುಗುಳ್ಳ ಬೆಳೆಗಾರರು ಇಂದಿಗೂ ಉಡುಪಿಯ ಪರ್ಯಾಯ ಮಹೋತ್ಸವಕ್ಕೆ ಮಟ್ಟುಗುಳ್ಳ ತರಕಾರಿಯನ್ನು ಹೊರೆಕಾಣಿಕೆಯ ರೂಪದಲ್ಲಿ ನೀಡುತ್ತಾ ಬಂದಿರುತ್ತಾರೆ. ಅಲ್ಲದೇ ಸದ್ರಿ ಪ್ರದೇಶದಲ್ಲಿನ ತೆಂಗು ಬೆಳೆಯು ಹಾನಿಯಾಗಿರುತ್ತದೆ.

ಆದ್ದರಿಂದ ಕೆಳಗಿನ ಪ್ರದೇಶಗಳಲ್ಲಿ ಪಾಂಗಾಳ ನದಿಗೆ ಖಾರ್ಲಾಂಡ್ ಯೋಜನೆಯಡಿಯಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಅನುದಾನ ಮಂಜೂರು ಮಾಡುವಂತೆ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಸದನದ ಗಮನ ಸೆಳೆದರು.

ಫೆ. 18 : ಪಡುಬಿದ್ರಿ ಸಿ.ಎ.ಸೊಸೈಟಿ - ನವೀಕೃತ ಹವಾನಿಯಂತ್ರಿತ ಹೆಜಮಾಡಿ ಶಾಖೆಯ ಉದ್ಘಾಟನೆ

Posted On: 14-02-2024 11:23AM

ಪಡುಬಿದ್ರಿ: ಉಡುಪಿ ಜಿಲ್ಲೆಯಲ್ಲಿ ಅತ್ಯುತ್ತಮ ಬ್ಯಾಂಕಿಂಗ್ ಸೊಸೈಟಿಯಾಗಿ ಹೆಗ್ಗಳಿಕೆ ಹೊಂದಿರುವ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ನವೀಕರಣಗೊಂಡ ಹವಾನಿಯಂತ್ರಿತ ಹೆಜಮಾಡಿ ಶಾಖೆಯು ಫೆಬ್ರವರಿ 18, ಭಾನುವಾರ ಉದ್ಘಾಟನೆಗೊಳ್ಳಲಿದೆ ಎಂದು ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಬುಧವಾರ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಕೇಂದ್ರ ಕಚೇರಿಯಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಬೆಳಿಗ್ಗೆ 10 ಗಂಟೆಗೆ ಬ್ಯಾಂಕಿಂಗ್ ಕಟ್ಟಡವನ್ನು ಕರ್ನಾಟಕ ವಿಧಾನ ಸಭಾಧ್ಯಕ್ಷರಾದ ಯು. ಟಿ. ಖಾದರ್ ಉದ್ಘಾಟಿಸಲಿದ್ದು, ಪಡುಬಿದ್ರಿ ಸೊಸೈಟಿ ಅಧ್ಯಕ್ಷ ವೈ. ಸುಧೀರ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ಉಡುಪಿ ಜಿಲ್ಲಾ ಉಸ್ತುವಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಬಲೀಕರಣ ಇಲಾಖಾ ಸಚಿವರಾದ ಲಕ್ಷ್ಮೀ ಹೆಬ್ಬಾಳ್ವರ್ ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸುವರು.

ಸ್ಥಳೀಯ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನಚಂದ್ರ ಡಿ ಸುವರ್ಣ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ನಿ, ಬೆಂಗಳೂರು ಇದರ ನಿರ್ದೇಶಕ ಬಿ ಜಯಕರ ಶೆಟ್ಟಿ ಇಂದ್ರಾಳಿ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ನಿ., ಬೆಂಗಳೂರು, ನಿರ್ದೇಶಕ ಡಾ| ಐಕಳಬಾವ ದೇವಿಪ್ರಸಾದ್ ಶೆಟ್ಟಿ ಸಹಿತ ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿರುವರು ಎಂದರು. ಸಮಾರಂಭದಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಕಾಪು ದಿವಾಕರ ಶೆಟ್ಟಿ, ಶೈಕ್ಷಣಿಕ ಸಾಧಕಿ ಡಾ. ಹರ್ಷಿತ ಎನ್. ಅಂಚನ್, ಕ್ರೀಡಾ ಸಾಧಕ ಧನುಷ್ ಎಸ್. ಸಾಲ್ಯಾನ್‌ರನ್ನು ಸನ್ಮಾನಿಸಲಾಗುವುದು. ಸೊಸೈಟಿ ವ್ಯಾಪ್ತಿಯ ಕರಾವಳಿಯನ್ನು ನಿರಂತರವಾಗಿ ಸ್ವಚ್ಛಗೊಳಿಸಿ ಉತ್ತಮ ಸಮಾಜ ಸೇವೆಗೈಯ್ಯುತ್ತಿರುವ ಹೆಜಮಾಡಿ ಕರಾವಳಿ ಯುವಕ ಯುವತಿ ವೃಂದ ಮತ್ತು ಪಡುಬಿದ್ರಿ ನಡಿಪಟ್ನ ಕರಾವಳಿ ಸ್ಟಾರ್ ಸಂಸ್ಥೆಗಳಿಗೆ ಸ್ವಚ್ಚತಾ ಪರಿಕರಗಳನ್ನು ವಿತರಿಸಲಾಗುವುದು.

ಫೆ. 5 ರಿಂದ ಮಾರ್ಚ್ ಅಂತ್ಯದವರೆಗೆ ಸೊಸೈಟಿಯಲ್ಲಿ ಠೇವಣಿ ವಿನಿಯೋಗಿಸುವ ಠೇವಣಿದಾರರಿಗೆ ಹಾಗೂ ಚಿನ್ನಾಭರಣ ಸಾಲ ಪಡೆಯುವ ಸಾಲಗಾರರಿಗೆ ಲಕ್ಕಿ ಕೂಪನ್ ವಿತರಿಸಲಾಗುತ್ತಿದ್ದು, ಉದ್ಘಾಟನಾ ಸಮಾರಂಭದಂದು ಲಕ್ಕಿ ಕೂಪನ್‌ಗಳ ಡ್ರಾ ಮೂಲಕ 10 ವಿಜೇತರನ್ನು ಗಣ್ಯರು ಆಯ್ಕೆ ಮಾಡಲಿದ್ದಾರೆ. ಮಾರ್ಚ್ 31 ರವರೆಗೆ ಈ ಅವಕಾಶ ಕಲ್ಪಿಸಲಾಗಿದ್ದು, ಏಪ್ರಿಲ್ 3 ರಂದು ವಿಜೇತರನ್ನು ಆಯ್ಕೆಮಾಡಿ ಬಹುಮಾನ ನೀಡಲಾಗುವುದು. ಅತ್ಯಾಧುನಿಕ ಭದ್ರತಾ ಕೊಠಡಿ, ನವೀಕೃತ ಹೆಜಮಾಡಿ ಶಾಖೆಯಲ್ಲಿ ಅತ್ಯಾಧುನಿಕ ಹಾಗೂ ಬೃಹತ್ ಗಾತ್ರದ ಭದ್ರತಾ ಕೊಠಡಿ ಅಳವಡಿಸಲಾಗಿದ್ದು, ಭದ್ರತಾ ಕೊಠಡಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೊಸೈಟಿಯ ಉಪಾಧ್ಯಕ್ಷ ಗುರುರಾಜ್ ಪೂಜಾರಿ, ಕಾರ್ಯನಿರ್ವಹಣಾಧಿಕಾರಿ ನಿಶ್ಮಿತ ಪಿ.ಎಚ್, ನಿರ್ದೇಶಕರುಗಳು ಉಪಸ್ಥಿತರಿದ್ದರು.

ಕಾಪು : ನಿದ್ದೆಯಲ್ಲಿದ್ದ ವ್ಯಕ್ತಿಯನ್ನು ಸ್ಕೂಟರಿನಿಂದ ಕೆಳಗಿಳಿಸಿ ಸ್ಕೂಟರ್ ಸಮೇತ ದಾಖಲೆಗಳ ಕಳವು

Posted On: 13-02-2024 11:20PM

ಕಾಪು : ಸ್ಕೂಟರ್ ನಲ್ಲಿ ಸಂಚರಿಸುತ್ತಿರುವ ಸಂದರ್ಭ ನಿದ್ರೆ ಬಂದ ಕಾರಣ ಸ್ಕೂಟರ್ ನಿಲ್ಲಿಸಿ ಮಲಗಿದ್ದ ವ್ಯಕ್ತಿ ಎಚ್ಚರವಾದಾಗ ಸ್ಕೂಟರ್ ಸಮೇತ ತನ್ನೆಲ್ಲಾ ಸೊತ್ತುಗಳನ್ನು ಕಳೆದುಕೊಂಡು ರಸ್ತೆ ಬದಿಯಲ್ಲಿ ಮಲಗಿದ್ದ ಘಟನೆ ಭಾನುವಾರ ತಡರಾತ್ರಿ ಕಾಪು ಸಮೀಪದ ಕೊಪ್ಪಲಂಗಡಿ ಬಳಿ ನಡೆದಿದೆ.

ಕಾರ್ಕಳ ಮುಡಾರು ನಿವಾಸಿ ಚೇತನ್‌ ಎಂಬುವವರು ರಾತ್ರಿ ಸುರತ್ಕಲ್‌ ಕಡೆ ತೆರಳುವ ಸಂದರ್ಭ ರಾತ್ರಿ 12 ಗಂಟೆ ಸಮಯಕ್ಕೆ ಕೊಪ್ಪಲಂಗಡಿ ಬಳಿ ತಲುಪುತ್ತಿದ್ದಂತೆ ಸ್ಕೂಟರ್‌ ಸವಾರಿ ಮಾಡಲು ಕಷ್ಟವಾಗಿದ್ದುದರಿಂದ ತನ್ನ ಸ್ಕೂಟರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಸ್ಕೂಟರಿನಲ್ಲಿ ತಲೆ ಇಟ್ಟು ಮಲಗಿದ್ದು ನಂತರ ಬೆಳಿಗ್ಗೆ 02:30 ಗಂಟೆಗೆ ಎಚ್ಚರವಾದಾಗ ಹೆಲ್ಮೆಟ್‌ ಸಮೇತ ರಸ್ತೆ ಬದಿ ಮಲಗಿದ್ದು ಅವರ ಸ್ಕೂಟರ್‌, ಮೊಬೈಲ್‌, ಪರ್ಸ್‌ ಎಲ್ಲವೂ ಕಳವಾಗಿತ್ತು.

ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ : ಹೋಂ ಡಾಕ್ಟರ್ ಫೌಂಡೇಶನ್ - ಜಿಲ್ಲಾಧಿಕಾರಿಗೆ ಮನವಿ

Posted On: 13-02-2024 06:53PM

ಉಡುಪಿ : ಪರಿಸ್ಥಿತಿಯ ಒತ್ತಡಕ್ಕೆ ಅಥವಾ ವಿವಿಧ ಕಾರಣಗಳಿಗಾಗಿ ತಪ್ಪು ಮಾಡಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು ಸಕಾ೯ರಿ ಜುಲ್ಮಾನೆ ಕಟ್ಟಲು ಸಾಧ್ಯವಿಲ್ಲದೆ ಜೀವನ ಪೂತಿ೯ ಜೈಲಿನಲ್ಲಿ ಯಾತನೆ ಅನುಭವಿಸುವವರು ಬಹಳಷ್ಟು ಮಂದಿ ಇದ್ದು ಇವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಅನುವು ಮಾಡಬೇಕೆಂದು ಹೋಂ ಡಾಕ್ಟರ್ ಫೌಂಡೇಶನ್ ವತಿಯಿಂದ ಜಿಲ್ಲಾಧಿಕಾರಿ ಡಾI ವಿದ್ಯಾ ಕುಮಾರಿಯವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಈ ಸಂದಭ೯ದಲ್ಲಿ ಡಾ.ಶಶಿಕಿರಣ್ ಶೆಟ್ಟಿ, ಉದಯ್ ನಾಯ್ಕ್, ಸುಜಯ ಶೆಟ್ಟಿ, ಸುಂದರ್ ಪೂಜಾರಿ, ರಾಘವೇಂದ್ರ ಪ್ರಭು ಕವಾ೯ಲು, ರಮೇಶ ಮುಂತಾದವರಿದ್ದರು.

ಕಾರ್ಕಳ : ಜೆ.ಇ.ಇ ಮೈನ್ಸ್‌ ಫಲಿತಾಂಶ ಪ್ರಕಟ - ಕ್ರಿಯೇಟಿವ್‌ ಕಾಲೇಜಿನ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ

Posted On: 13-02-2024 06:51PM

ಕಾರ್ಕಳ : ದೇಶದ ಪ್ರತಿಷ್ಠಿತ ಎಂಜಿನಿಯರಿಂಗ್‌ ವಿಭಾಗಕ್ಕೆ ಸೇರಬಯಸುವ ವಿದ್ಯಾರ್ಥಿಗಳಿಗೆ ನ್ಯಾಶನಲ್‌ ಟೆಸ್ಟಿಂಗ್‌ ಏಜೆನ್ಸಿ ನಡೆಸುವ ಜೆ.ಇ.ಇ ಮೈನ್ಸ್‌ ನ ಮೊದಲ ಹಂತದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಕ್ರಿಯೇಟಿವ್‌ ಕಾಲೇಜಿನ 26 ವಿದ್ಯಾರ್ಥಿಗಳು 95 ಪರ್ಸಂಟೈಲ್‌ ಗಿಂತ ಅಧಿಕ ಅಂಕಗಳಿಸಿದ್ದಾರೆ 81 ವಿದ್ಯಾರ್ಥಿಗಳು 90 ಪರ್ಸಂಟೈಲ್‌ ಗಿಂತ ಅಧಿಕ ಅಂಕ ಗಳಿಸಿದ್ದಾರೆ.

ವಿದ್ಯಾರ್ಥಿಗಳಾದ ಪ್ರಣವ್‌ ಟಿ. ಎಂ 98.6313, ಯುವರಾಜ್‌ ಬಿ. ಕೆ 98.2878, ಸತೀಶಗೌಡ 97.9123, ಅನನ್ಯ ಡಿ. ಜೆ ಗೌಡ 97.7325, ಕಾರ್ತಿಕ್‌ ಎ.ಎಸ್‌ 97.4489, ಕದಂಬ ಸಿದ್ದಾಂತ್‌. ಎಸ್‌ 97.3435, ಸುಜಿತ್‌ ಡಿ.ಕೆ 97.2340 ಹಾಗೂ ಪ್ರೇಮ್‌ಸಾಗರ್‌ ಪಾಟೀಲ್‌ 97.1615 ಶೇಕಡಾ ಅಂಕ ಗಳಿಸಿದ್ದಾರೆ.

ಅತ್ಯಂತ ಕಠಿಣವಾದ ಪರೀಕ್ಷೆಯಲ್ಲಿ ಸಾಧನೆಗೈದ ಎಲ್ಲ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು, ಆಡಳಿತ ಮಂಡಳಿ, ಉಪನ್ಯಾಸಕ ವರ್ಗದವರು, ಜೆ ಇ ಇ ಸಂಯೋಜಕರಾದ ನಂದೀಶ್‌ ಹೆಚ್‌. ಬಿ ಶ್ಲಾಘಿಸಿ ಅಭಿನಂದಿಸಿದ್ದಾರೆ.

ಉಡುಪಿ : ಕೊಳಲಗಿರಿ ಯುವ ವಿಚಾರ ವೇದಿಕೆಯ 23ನೇ ವಾರ್ಷಿಕೋತ್ಸವ ಸಂಪನ್ನ

Posted On: 13-02-2024 05:10PM

ಉಡುಪಿ : ಕೊಳಲಗಿರಿ ಯುವ ವಿಚಾರ ವೇದಿಕೆಯ 23ನೇ ವಾರ್ಷಿಕೋತ್ಸವವನ್ನು ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಾಘವೇಂದ್ರ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ ಸಮಾಜ ಸುಧಾರಣೆಯಲ್ಲಿ ಯುವಕರ ಪಾತ್ರ ಮಹತ್ವದ್ದು, ಗ್ರಾಮದ ಅಭಿವೃದ್ಧಿಗೆ ನನ್ನ ಸಹಕಾರ ಸದಾ ಇದೆ ಎಂದು ವೇದಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಉಪ್ಪೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಾಯತ್ರಿ ರಾಜೇಂದ್ರ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಯುವ ವಿಚಾರ ವೇದಿಕೆಯ ಹಡಿಲು ಭೂಮಿ ಕೃಷಿಯ ಫಸಲನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಸನ್ಮಾನ/ ಅಭಿನಂದನೆ : ಸ್ಪಂದನ ವಿಶೇಷ ಚೇತನ ಶಾಲೆ ಮುಖ್ಯಸ್ಥರಾದ ಉಮೇಶ್ ಹಾಗೂ ಜನಾರ್ಧನ ಇವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ತೋರಿದ ಸ್ಥಳೀಯ ವಿದ್ಯಾರ್ಥಿಗಳಾದ ಹರ್ಷಿತಾ, ಪ್ರಜ್ಞಾ, ರಿಯಾ, ಪ್ರೀತಮ್, ದಾನಿಗಳಾದ ಪ್ರಶಾಂತ್ ಶೆಟ್ಟಿ ಅಮ್ಮುಂಜೆ ಇವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಉಪ್ಪೂರು ವ್ಯ.ಸೇ.ಸ. ಸಂಘದ ಅಧ್ಯಕ್ಷರಾದ ರಮೇಶ್ ಎನ್ ಶೆಟ್ಟಿ, ಕೊಳಲಗಿರಿ ಸೇಕ್ರೆಡ್ ಹಾರ್ಟ್ ಚರ್ಚ್ ನ ಧರ್ಮಗುರುಗಳು ರೆ|ಫಾ| ಜೋಸೆಫ್ ಮಚಾದೋ, ಉದ್ಯಮಿ ರೋಯಲ್ ರತ್ನಾಕರ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯ ಅಶ್ವಿನ್ ರೋಚ್, ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವೀಕ್ಷಕ ಪ್ರಾಂಕಿ ಡಿಸೋಜ, ಮಾಹೆ ಮಣಿಪಾಲದ ಪ್ರಾಧ್ಯಾಪಕ ಡಾ. ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸತೀಶ್ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯ ರಾಜಶ್ರೀ ಮಸ್ಕರೇನಸ್, ಸಮಾಜ ಸೇವಕರಾದ ರಮೇಶ್ ಕರ್ಕೇರ, ಉದ್ಯಮಿ ಸಂದೀಪ ನಾಯಕ್ ಉಪಸ್ಥಿತಿಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಸಭಾ ಕಾರ್ಯಕ್ರಮದ ಮುಂಚಿತವಾಗಿ ಸ್ಥಳೀಯ ಅಂಗನವಾಡಿ ಮಕ್ಕಳು ಹಾಗೂ ವೇದಿಕೆಯ ಸದಸ್ಯರಾದ, ನೃತ್ಯ ಗುರು ವಿದ್ವಾನ್ ಕೆ ಭವಾನಿ ಶಂಕರ್ ಅವರ ನಿರ್ದೇಶನದಲ್ಲಿ ಸ್ಪಂದನ ವಿಶೇಷ ಚೇತನ ಶಾಲೆ ವಿದ್ಯಾರ್ಥಿಗಳು ಮನೋಜ್ಞವಾಗಿ ಅಭಿನಯಿಸಿದ ನೃತ್ಯ ರೂಪಕ "ಶ್ರೀ ರಾಮಾಯಣ ಕಥಾ ಸಾರಾಂಶ" ಪ್ರದರ್ಶಿಸಿದರು. ಸಭಾ ಕಾರ್ಯಕ್ರಮದ ಬಳಿಕ ವೇದಿಕೆಯ ಮಹಿಳಾ ಸದಸ್ಯರ, ಮಕ್ಕಳ ನೃತ್ಯ ಪ್ರದರ್ಶನವಾಯಿತು. ಬಳಿಕ ವೇದಿಕೆಯ ಸದಸ್ಯರು ಅಭಿನಯಿಸಿದ ತುಳು ಸಾಮಾಜಿಕ ಹಾಸ್ಯಮಯ ನಾಟಕ ಅಜ್ಜಿಗ್ ಏರ್ಲಾ ಇಜ್ಜಿ ಪ್ರದರ್ಶನವಾಯಿತು.

ಸಭಾ ಕಾರ್ಯಕ್ರಮದ ಅತಿಥಿ ಗಣ್ಯರಿಗೆ ವೇದಿಕೆಯ ಅಧ್ಯಕ್ಷರಾದ ದಿನೇಶ್ ಶೆಟ್ಟಿ, ಬೆಳಗ್ಗಿನ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಸಂದೀಪ್ ಶೆಟ್ಟಿ ಸ್ವಾಗತಿಸಿದರು. ವೇದಿಕೆಯ ಅಶೋಕ್ ಹಾಗೂ ಸುರೇಶ್ ವಂದಿಸಿದರು. ವೇದಿಕೆಯ ಸದಸ್ಯರಾದ ಯೋಗೀಶ್ ಗಾಣಿಗ, ಸದಾಶಿವ ಕುಮಾರ್, ಸುಬ್ರಹ್ಮಣ್ಯ ಆಚಾರ್ಯ. ಕಾರ್ಯಕ್ರಮ ನಿರೂಪಿಸಿದರು.

ಬಂಟಕಲ್ಲು : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಂಬಿಎ ಕೋರ್ಸ್ ಉದ್ಘಾಟನೆ

Posted On: 13-02-2024 03:32PM

ಬಂಟಕಲ್ಲು : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು 2023-24ನೇ ಸಾಲಿನಿಂದ ಎಂಬಿಎ ಸ್ನಾತಕೋತ್ತರ ಪದವಿ ತರಗತಿಗಳು ಪ್ರಾರಂಭವಾಗಿದ್ದು ಅದರ ಉದ್ಘಾಟನೆಯನ್ನು ಶ್ರೀ ಸೋದೆ ವಾದಿರಾಜ ಮಠ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಕಾಲೇಜಿನ ಆವರಣದಲ್ಲಿ ಮಾಡಿದರು. ಈ ಸಂದರ್ಭ ಮಾತನಾಡಿದ ಶ್ರೀಗಳು ವಿದ್ಯಾಸಂಸ್ಥೆಯಲ್ಲಿ ಎಂಬಿಎ ತರಗತಿಗಳನ್ನು ಪ್ರಾರಂಭಿಸಿದ್ದಕ್ಕೆ ಅತೀವ ಹರ್ಷ ವ್ಯಕ್ತಪಡಿಸಿ, ಸೋದೆ ಮಠದ ಶ್ರೀ ವಾದಿರಾಜ ಸ್ವಾಮೀಜಿಯವರು ಉಡುಪಿಯಲ್ಲಿ ಅಷ್ಟಮಠ ವ್ಯವಸ್ಥೆಯನ್ನು 16ನೇ ಶತಮಾನದಲ್ಲಿಯೇ ರೂಪಿಸಿ, ಈಗಿನ ನಿರ್ವಹಣಾಶಾಸ್ತ್ರದ ಪರಿಣಿತರಿಗೆ ಮಾದರಿಯಾಗಿದ್ದಾರೆ. ತತ್ವಶಾಸ್ತ್ರವನ್ನು ಶಿಕ್ಷಣದಲ್ಲಿ ಅಳವಡಿಸಿದಾಗ ಮಾತ್ರ ಉತ್ತಮ ಆವಿಷ್ಕಾರಗಳು ಹೊರಬರಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಇಂದಿನ ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಪಡೆದು ದೇಶದ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಬೇಕೆಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಶ್ರೀಗಳು ಎಂಬಿಎ ಕೋರ್ಸ್‌ ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಿಟ್ಟೆಯ ಜಸ್ಟಿಸ್ ಕೆ ಎಸ್ ಹೆಗ್ಡೆ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ನಿರ್ದೇಶಕರಾದ ಡಾ. ಗುರುರಾಜ್ ಹೆಚ್ ಕಿದಿಯೂರು ಭಾಗವಹಿಸಿದ್ದರು. ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಭಾರತವನ್ನು ವಿಶ್ವದ ಅತೀ ದೊಡ್ಡ ಆರ್ಥಿಕತೆಯನ್ನಾಗಿ ಪರಿವರ್ತಿಸುವಲ್ಲಿ ಎಂಬಿಎ ಪದವೀಧರರ ಪಾತ್ರವನ್ನು ವಿವರಿಸಿದರು. ವಿದ್ಯಾರ್ಥಿಗಳು ತಮ್ಮ ಸಂವಹನ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳುವುದರ ಜೊತೆಗೆ ದಿನ ಪತ್ರಿಕೆಗಳಲ್ಲಿನ ವ್ಯಾಪಾರ, ವ್ಯವಹಾರ ಕ್ಷೇತ್ರಕ್ಕೆ ಸಂಬಂಧಿಸಿದ ಅಂಕಣಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಇದಲ್ಲದೆ, ಕೈಗಾರಿಕೆಗಳಲ್ಲಿ ನಿರ್ವಹಣಾ ಶಾಸ್ತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವಲ್ಲಿ ವಿದ್ಯಾರ್ಥಿಗಳು ತಲ್ಲೀನರಾಗಬೇಕೆಂದು ಸಲಹೆ ನೀಡಿದರು.

ಶ್ರೀ ಸೋದೆ ವಾದಿರಾಜ ಮಠ ಎಜುಕೇಶನ್ ಟ್ರಸ್ಟ್‌ನ ಉಪಾಧ್ಯಕ್ಷರಾದ ಪಿ ಶ್ರೀನಿವಾಸ ತಂತ್ರಿ, ಕಾರ್ಯದರ್ಶಿಗಳಾದ ರತ್ನಕುಮಾರ್, ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಮತ್ತು ಎಂಬಿಎ ವಿಭಾಗದ ನಿರ್ದೇಶಕರಾದ ಡಾ. ಸೂರಜ್ ಫ್ರಾನ್ಸಿಸ್ ನೊರೋನ್ಹ, ಸಂಸ್ಥೆಯ ಉಪ ಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್, ಡೀನ್, ವಿಭಾಗದ ಮುಖ್ಯಸ್ಥರು, ತರಬೇತಿ ಮತ್ತು ಉದ್ಯೋಗ ನಿಯೋಜನ ಅಧಿಕಾರಿ, ಸಂಸ್ಥೆಯ ಪ್ರಾಧ್ಯಾಪಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಕು. ಸುಪ್ರೀತ ಪ್ರಾರ್ಥಿಸಿದರು. ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಸ್ವಾಗತಿಸಿದರು. ಎಂಬಿಎ ವಿಭಾಗದ ಆಡಳಿತ ಅಧಿಕಾರಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು, ಎಂಬಿಎ ವಿಭಾಗದ ನಿರ್ದೇಶಕರಾದ ಡಾ. ಸೂರಜ್ ಫ್ರಾನ್ಸಿಸ್ ನೊರೋನ್ಹ ವಂದಿಸಿದರು ಮತ್ತು ಪ್ರಾಧ್ಯಾಪಕಿಯಾದ ಅಕ್ಷತಾ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು.