Updated News From Kaup

ಉಡುಪಿ : ಅಖಿಲಕರ್ನಾಟಕ ಬ್ರಾಹ್ಮಣ ಅರ್ಚಕ, ಪುರೋಹಿತರು ಉಡುಪಿ ಘಟಕದಿಂದ ಶ್ರೀರಾಮತಾರಕ ಮಹಾಯಾಗ

Posted On: 20-01-2024 05:53PM

ಉಡುಪಿ : ಅಯೋಧ್ಯೆ ಶ್ರೀರಾಮದೇವರ ಪ್ರತಿಷ್ಠಾಪನಾ ಅಂಗವಾಗಿ ಹಾಗೂ ನರೇಂದ್ರಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಲೋಕಕಲ್ಯಾಣಕ್ಕಾಗಿ ಅಖಿಲಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತರು ಉಡುಪಿ ಘಟಕ ಇವರ ನೇತೃತ್ವದಲ್ಲಿ ಉಡುಪಿ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ 13 ಕುಂಡಗಳಲ್ಲಿ ಲಕ್ಷ ಸಂಖ್ಯೆಯಲ್ಲಿ ಶ್ರೀರಾಮತಾರಕ ಮಹಾಯಾಗವು ಸಂಪನ್ನಗೊಂಡಿತು.

ನಂತರ ರಥಬೀದಿಯಲ್ಲಿ ಶ್ರೀರಾಮನ ಮೆರವಣಿಗೆ ನಡೆಯಿತು. ಶ್ರೀರಾಮದೇವರ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಅಖಿಲಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತರು ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷರಾದ ಚೆನ್ನಕೇಶವಗಾಯತ್ರಿಭಟ್, ಉಪಾಧ್ಯಕ್ಷರಾದ ಮನೋಹರತಂತ್ರಿಗಳು, ಉಡುಪಿ ತಾಲೂಕು ಅಧ್ಯಕ್ಷರಾದ ವಿಖ್ಯಾತ ಭಟ್, ಪದಾಧಿಕಾರಿಗಳಾದ ಸುದರ್ಶನ ಕಡಂಬಳಿತ್ತಾಯ, ಭಾನುಚಂದ್ರ ಐತಾಳ್, ರಾಘವೇಂದ್ರ ಭಟ್ ಗುಡ್ಡೆಯಂಗಡಿ, ದೇವಸ್ಥಾನದ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿ ಇನ್ನಾ, ಬ್ರಾಹ್ಮಣ ಸಂಘಟನೆಯವರು, ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.

ಕಟಪಾಡಿ : ಪರಿಸರ ಪ್ರೇಮಿ ಪಾಂಗಾಳ ಗೋಪಾಲಕೃಷ್ಣ ನಾಯಕ್ ನಿಧನ

Posted On: 20-01-2024 05:45PM

ಕಟಪಾಡಿ : ಭಾರತ ಸ್ವಾತಂತ್ರ್ಯ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದ ಕಟಪಾಡಿ ನಾಯಕ್ ಮನೆತನದ ಹಿರಿಯರಾದ, ಸ್ವಾತಂತ್ರ್ಯ ಹೋರಾಟಗಾರ ಪಾಂಗಾಳ ಲಕ್ಷ್ಮೀ ನಾರಾಯಣ ನಾಯಕ್ ಅವರ ಪುತ್ರ ಪಾಂಗಾಳ ಗೋಪಾಲಕೃಷ್ಣ ನಾಯಕ್ (92) ಶನಿವಾರ ಸ್ವಗೃಹದಲ್ಲಿ ನಿಧನರಾದರು.

ಕಟಪಾಡಿಯಲ್ಲಿ ಹೆಸರಾಂತ ನಾಯಕ್ ಆಯುರ್ವೇದಾಶ್ರಮ ಸಂಸ್ಥೆಯನ್ನು ನಡೆಸಿಕೊಂಡು ಬಂದಿದ್ದ ಇವರು ಗಾಂಧಿ ತತ್ವದಡಿ ಸರಳ ಜೀವನ ನಡೆಸುತ್ತಿದ್ದವರು. ಅವಿವಾಹಿತರಾಗಿದ್ದ ಇವರು ಸದಾ ಕಾಲ ಖಾದಿ ಬಟ್ಟೆ ಧರಿಸಿ. ದೇಶಿ ಆಹಾರ ಪದ್ಧತಿಯನ್ನು ಅನುಸರಿಸಿಕೊಂಡು ರಾಷ್ಟ್ರ ಪ್ರೇಮವನ್ನು ಬೆಳೆಸಿಕೊಂಡು ಬಂದವರು.

ಪ್ರಾಣಿ ಪಕ್ಷಿಗಳ ಬಗ್ಗೆ ಅತೀವ ಕಾಳಜಿ ಹೊಂದಿದ್ದ ಇವರು ಪರಿಸರ ಪ್ರೇಮಿಯಾಗಿ ಕಟಪಾಡಿ ಭಾಗದಲ್ಲಿ ಗಿಡಮರಗಳ ರಕ್ಷಣೆ ಮಾಡಿಕೊಂಡು ಬಂದವರು. ಆಯುರ್ವೇದ, ಶಾಸ್ತ್ರೀಯ ಸಂಗೀತದ ಬಗ್ಗೆ ಕೂಡಾ ಹೆಚ್ಚಿನ ಒಲವು ಹೊಂದಿದ್ದರು. ತಂದೆಯವರ ಜೊತೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೂಡಾ ಇವರು ಗುರುತಿಸಿಕೊಂಡಿದ್ದರು.

ಸಹೋದರ ಡಾ.ಪಾಂಗಾಳ ಸೀತಾರಾಮ ನಾಯಕ್ ಸೇರಿದಂತೆ ಇಬ್ಬರು ಸಹೋದರಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಗೋಪಾಲಕೃಷ್ಣ ನಾಯಕ್ ಅವರ ಸ್ವಇಚ್ಛೆಯಂತೆ ಪಾರ್ಥಿವ ಶರೀರವನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾನ ಮಾಡಲಾಯಿತು. ಆಸ್ಪತ್ರೆ ವೈದ್ಯಾಧಿಕಾರಿಗಳಿಗೆ ಕುಟುಂಬದವರು ದೇಹವನ್ನು ಹಸ್ತಾಂತರಿಸಿದರು.

ಜನವರಿ 20 (ಇಂದು) : ಕಾಪು ತಾಲೂಕು ಮಟ್ಟದ ಎಸ್.ಸಿ, ಎಸ್.ಟಿ ಹಿತರಕ್ಷಣೆ ಹಾಗೂ ಕುಂದುಕೊರತೆಗಳ ಬಗ್ಗೆ ಸಭೆ

Posted On: 20-01-2024 07:33AM

ಕಾಪು : 2023-24 ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಕಾಪು ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದವರ ಹಿತರಕ್ಷಣಾ ಹಾಗೂ ಕುಂದುಕೊರತೆ ಸಭೆಯನ್ನು ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಜನವರಿ 20 ರಂದು ಪೂರ್ವಾಹ್ನ 11 ಗಂಟೆಗೆ ಕಾಪು ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಾಪು ತಹಶಿಲ್ದಾರ್ ಕಚೇರಿಯಲ್ಲಿ ಮಹಾ ಯೋಗಿ ವೇಮನ ಜಯಂತಿ ಆಚರಣೆ

Posted On: 20-01-2024 07:12AM

ಕಾಪು : ಕವಿ ಮತ್ತು ದಾರ್ಶನಿಕರಾಗಿದ್ದ ಮಹಾಯೋಗಿ ವೇಮನ ಅವರು ಸಮಾಜದಲ್ಲಿನ ಮೌಢ್ಯ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ತಮ್ಮ ಉತ್ಕೃಷ್ಟ ಜನಸಾಮಾನ್ಯರ ಭಾಷೆಯ ಸಾಹಿತ್ಯದ ಮೂಲಕ ನಿರಂತರವಾಗಿ ಶ್ರಮಿಸಿದರು ಎಂದು ಡಾ ಪ್ರತಿಭಾ ಆರ್ ಸ್ಮರಿಸಿದರು. ಕಾಪು ತಹಶಿಲ್ದಾರ್ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ “ಮಹಾಯೋಗಿ ವೇಮನ ಜಯಂತಿ”ಯಲ್ಲಿ ಮಹಾಯೋಗಿ ವೇಮನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವದಲ್ಲಿ ವೇಮನ ನಂಬಿಕೆ ಇಟ್ಟಿದ್ದರು. ಸಮಾಜದ ಅಂಕುಡೊಂಕುಗಳನ್ನು ತಮ್ಮ ತೀಕ್ಷ್ಣ ಮೊನಚು ಚೌಪದಿಗಳ ಮೂಲಕ ಬಿಂಬಿಸಿ ಸಮಾಜದ ಪರಿವರ್ತನೆಗೆ ಕಾರಣರಾಗಿದ್ದರು. ವೇಮನರ ತತ್ವ ಮತ್ತು ಸಿದ್ಧಾಂತಗಳು ಸರ್ವ ಸಮುದಾಯಕ್ಕೂ ತಲುಪಬೇಕು. ವೇಮನರ ಪದ್ಯಗಳು ಕನ್ನಡ ತಮಿಳು ಮಲೆಯಾಳಿ ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡಿವೆ. ವಿಶ್ವ ಸಾಹಿತ್ಯಕ್ಕೆ ಭೂಷಣ ಪ್ರಾಯವಾಗಿವೆ. ವೇಮನರ ತತ್ವ ಸಂದೇಶಗಳ ಜ್ಞಾನ ಮತ್ತು ಜಾಗೃತಿ ಜನರಲ್ಲಿ ಮೂಡಬೇಕು ಶಾಂತಿ ಸಮತೆ ಸೌಹಾರ್ದತೆಯ ಪರಿಮಳ ಜನಮನದಲ್ಲಿ ಪಸರಿಸುವಂತಾಗಬೇಕು ಎನ್ನುವ ಉದಾತ್ತ ಧ್ಯೇಯದೊಂದಿಗೆ ವೇಮನರ ಜಯಂತಿಯನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭ ಉಪ ತಹಶೀಲ್ದಾರರಾದ ಅಶೋಕ್ ಎನ್ ಕೋಟೆಕಾರ್, ರವಿಕಿರಣ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸತೀಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪಡುಬಿದ್ರಿ : 40 ವರ್ಷಗಳಿಂದ ಹಕ್ಕುಪತ್ರ ಸಿಗದ ನಡಿಪಟ್ನ ಕಾಡಿಪಟ್ನದ 24 ಕುಟುಂಬಗಳು

Posted On: 19-01-2024 05:21PM

ಪಡುಬಿದ್ರಿ : ಇಲ್ಲಿನ ಕಾಡಿಪಟ್ನ ನಡಿಪಟ್ನದ ಒಟ್ಟು 24 ಬಡಕುಟುಂಬಗಳು ಸುಮಾರು 40 ವರ್ಷಗಳಿಂದ ಸರಕಾರಿ ಜಾಗದಲ್ಲಿ ನೆಲೆಸಿದ್ದು ಸರಕಾರದ 94cಯ ಅಕ್ರಮ ಸಕ್ರಮ ಕಾಯಿದೆಯಡಿ 40 ವರ್ಷಗಳಿಂದ ಹಕ್ಕು ಪತ್ರಕ್ಕೆ ಅರ್ಜಿ ಹಾಕುತ್ತಲೇ ಬಂದಿದ್ದು ಅಧಿಕಾರಿಗಳು, ಜನಪ್ರತಿನಿಧಿಗಳ ಮೌನ ಇಲ್ಲಿನ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ನಮ್ಮನ್ನು ಮೂರ್ಖರನ್ನಾಗಿಸಿದ್ದು ಕಳೆದ ಎರಡು ವರ್ಷಗಳಿಂದ 24 ಕುಟುಂಬದವರು ನಿರಂತರವಾಗಿ ಹಕ್ಕು ಪತ್ರಕ್ಕಾಗಿ ಜನಪ್ರತಿನಿಧಿಗಳು ಅಧಿಕಾರಿಗಳ ಹಿಂದೆ ಅಲೆಯುತ್ತಿದ್ದು, ಮಾಜಿ ಶಾಸಕರಾದ ಲಾಲಾಜಿ ಮೆಂಡನ್ ರವರು ಬಹುತೇಕ ಪ್ರಯತ್ನ ಪಟ್ಟರಾದರು ಅವರ ಅಧಿಕಾರದ ನಂತರ ಹಕ್ಕು ಪತ್ರದ ಬಗ್ಗೆ ನಮಗೆ ಯಾವುದೇ ಸರಿಯಾದ ಮಾಹಿತಿ ಸಿಗದೆ ಬಿಜೆಪಿ ಪಕ್ಷದ ಜನ ನಾಯಕರ ಬಳಿ ಕೇಳಿದಾಗ ಈಗ ನಮ್ಮ ಸರಕಾರ ಇಲ್ಲ, ಕಾಂಗ್ರೆಸ್ ಸರಕಾರ ಇರುವುದು ಎಂದು ಅವರ ಕಡೆ ಬೆರಳು ಮಾಡಿದರೆ, ಕಾಂಗ್ರೆಸ್ ಪಕ್ಷದವರು ನಮಗಿಂತ ಮುಂಚೆ ಕೇಂದ್ರ ಸರಕಾರದಿಂದ ಪಡುಬಿದ್ರಿ ಪಂಚಾಯತ್ ವರೆಗೆ ಬಿಜೆಪಿ ಸರಕಾರ ಇದ್ದರೂ ಏಕೆ ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆ. ಇದಕ್ಕೆ ಬಲಿಪಶುವಾದ ನಾವು ಪಂಚಾಯತ್ ಮುಂದೆ ಜಿಲ್ಲಾಧಿಕಾರಿಯವರ ಕಛೇರಿಯ ಮುಂದೆ ಧರಣಿ ಕೂರುತ್ತೇವೆ ಎಂದಾಗ ಸ್ಥಳಿಯ ಜನಪ್ರತಿನಿಧಿಗಳು ನಾವಿದ್ದೇವೆ ನಾವು ಹಕ್ಕು ಪತ್ರ ತೆಗೆಸಿಕೊಡುತ್ತೇವೆ ಎಂದು ನಮ್ಮನ್ನು ನಂಬಿಸಿ ವಿಧಾನಸಭಾ ಚುನಾವಣೆಯ ನಂತರ ಸುಮ್ಮನಾದರು. ಈಗ ಲೋಕಸಭಾ ಚುನಾವಣೆ ಎದುರಾಗುತ್ತಿದ್ದು ಇಗಲೂ ಅದೇ ರಾಗ ಅದೇ ತಾಳ ಹಾಕಿ ನಮ್ಮನ್ನು 2024ರಲ್ಲು ಮೂರ್ಖರನ್ನಾಗಿಸುವ ಹುನ್ನಾರ ಮಾಡುತ್ತಿದ್ದಾರೆ. ಸ್ಥಳೀಯ ಬಲಿಷ್ಠ ಪ್ರಬಲ ನಾಯಕರು ನಮ್ಮಲ್ಲಿದ್ದರು 24 ಕುಟುಂಬಕ್ಕೆ ಹಕ್ಕು ಪತ್ರ ಒದಗಿಸಲು ಸಾಧ್ಯ ವಾಗದಿದ್ದರೆ ಅಂತಹ ಜನಪ್ರತಿನಿದಿಗಳಿಂದ ಇನ್ನು ಮುಂದೆ ಏನು ಅಪೇಕ್ಷಿಸಲು ನಾವು ಸಾಧ್ಯವಿಲ್ಲ. ಈಗ ತಾನೆ ತಲೆಯೆತ್ತುತ್ತಿರುವ ಹೋಂ ಸ್ಟೇಗಳಿಗೆ ಸಿಗುವ ಪರವಾನಿಗೆ ಅದೆಷ್ಟೋ ವರ್ಷಗಳಿಂದ ವಾಸಿಸುತ್ತಿರುವ ಕರಾವಳಿಯ ಬಡ ಕುಟುಂಬಗಳಿಗೆ ಸಿಗದೇ ಇರುವುದು ವಿಪರ್ಯಾಸ ಎಂದು ಇಲ್ಲಿನ ಕುಟುಂಬದವರು ಬೇಸರ ವ್ಯಕ್ತಪಡಿಸಿದ್ದಾರೆ.

ಜನವರಿ 23 ರಂದು ಕಾಪು ತಾಲೂಕಿನ ಶಿಫಾರಸ್ಸಿಗೆ ಬರುವ ಗ್ರಾಮಗಳಿಗೆ ಹಕ್ಕು ಪತ್ರ ನೀಡಲಾಗುವುದು ಎಂಬ ವಿಷಯ ಹರಿದಾಡುತ್ತಿದ್ದು ಒಂದು ವೇಳೆ ಆ ಪಟ್ಟಿಯಲ್ಲಿ ಪಡುಬಿದ್ರಿ ಕರಾವಳಿಯ 24 ಮನೆಯ ಹಕ್ಕುಪತ್ರ ಇಲ್ಲದೆ ಹೋದಲ್ಲಿ ಮುಂದೆ ನಡೆಯುವ ಉಗ್ರ ಹೋರಾಟಕ್ಕೆ ಸ್ಥಳೀಯ ಜನಪ್ರತಿನಿಧಿಗಳೇ ನೇರ ಕಾರಣವಾಗಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮುಂಬೈನ ವಸಾಯಿ ಕ್ಷೇತ್ರದ ಶಾಸಕ ಹಿತೇಂದ್ರ ಠಾಕೂರ್ : ಕಾಪು ಮಾರಿಯಮ್ಮ ದೇವಸ್ಥಾನ ಭೇಟಿ

Posted On: 19-01-2024 04:46PM

ಕಾಪು : ಮುಂಬೈನ ವಸಾಯಿ ಕ್ಷೇತ್ರದ ಶಾಸಕರಾದ ಹಿತೇಂದ್ರ ಠಾಕೂರ್ ಮತ್ತು ಪತ್ನಿ ವಸಾಯಿ ತಾಲೂಕು ಇದರ ಮಾಜಿ ಮೇಯರ್ ಪ್ರವೀಣಾ ಠಾಕೂರ್ ಅವರು ಕಾಪು ಮಾರಿಯಮ್ಮ ದೇವಸ್ಥಾನದ ಜೀರ್ಣೋದ್ಧಾರದ ಮುಂಬೈ ಸಮಿತಿಯ ಗೌರವ ಸಲಹೆಗಾರರಾದ ವಿರಾರ್ ಶಂಕರ್ ಬಿ. ಶೆಟ್ಟಿ, ಬಳ್ಕುಂಜೆ ಅವರೊಂದಿಗೆ ಶುಕ್ರವಾರ ದೇಗುಲಕ್ಕೆ ಆಗಮಿಸಿ ಶ್ರೀ ದೇವಿಯ ದರುಶನ ಪಡೆದು, ಭರದಿಂದ ಸಾಗುತ್ತಿರುವ ಕಾಮಗಾರಿಯನ್ನು ವೀಕ್ಷಿಸಿದರು.

ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿಯವರು ಸನ್ನಿಧಾನದಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿ ಗೌರವಿಸಿದರು.

ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು ಇಂತಹ ಅದ್ಭುತ ಕೆಲಸ ನಿಜವಾಗಿಯೂ ಮನಸೊರೆಗೊಂಡಿತು, ಮುಂದೆ ನಡೆಯಲಿರುವ ಬ್ರಹ್ಮಕಳಶೋತ್ಸವದ ಸಂದರ್ಭದಲ್ಲಿಯೂ ಭೇಟಿ ನೀಡಿ ಅಮ್ಮನ ದರುಶನ ಪಡೆಯಲು ಕಾತುರದಿಂದ ಇದ್ದೇವೆ ಎಂದು ಹೇಳಿದರು.

ಈ ಸಂದರ್ಭ ಆರ್ಥಿಕ ಸಮಿತಿಯ ಮುಖ್ಯ ಸಂಚಾಲಕರಾದ ರತ್ನಾಕರ ಹೆಗ್ಡೆ ಕಲ್ಯಾ, ಹರೀಶ್ ಶೆಟ್ಟಿ ಗುರ್ಮೆ, ರಮನಾಥ್ ಶೆಟ್ಟಿ (ಪಪ್ಪಣ್ಣ), ನಕುಲನ್, ರಮೇಶ್ ಕೋಟಿ, ಕವಿತಾ ಕೋಟಿ ಹಾಗೂ ದೇವಳದ ಪ್ರಬಂಧಕರಾದ ಗೋವರ್ಧನ್ ಸೇರಿಗಾರ್ ಉಪಸ್ಥಿತರಿದ್ದರು.

ಜನವರಿ 20 : 31 ನೇ ವರ್ಷದ ಅಡ್ವೆ ನಂದಿಕೂರು ಹೊನಲು ಬೆಳಕಿನ ಕೋಟಿ ಚೆನ್ನಯ ಕಂಬಳ

Posted On: 19-01-2024 06:19AM

ನಂದಿಕೂರು : ಪಕ್ಷ, ಜಾತಿ, ಧರ್ಮಾತೀತವಾಗಿ ನಡೆಯುವ ಕಂಬಳವು ಜನ ಮಾನಸದಲ್ಲಿ ಮುಟ್ಟುವಂತಾಗಬೇಕು. ಸುಮಾರು ವರ್ಷಗಳಿಂದ ನಡೆದು ಬಂದ ಅಡ್ವೆ ನಂದಿಕೂರು ಕಂಬಳ ಹೊಸ ಪ್ರಯತ್ನದ ಪ್ರಯೋಗಗಳಿಗೆ ಸಾಕ್ಷಿಯಾಗಿದೆ. ಪೂಜ್ಯ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ನಡೆಯಲಿದ್ದು ಅನೇಕ ಗಣ್ಯರ ಭಾಗವಹಿಸುವಿಕೆ, ಸನ್ಮಾನ ಇತ್ಯಾದಿ ಕಾರ್ಯಕ್ರಮಗಳು ಜರಗಲಿವೆ. ಜನವರಿ 20, ಶನಿವಾರ ಪೂರ್ವಾಹ್ನ ಗಂಟೆ 8ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಕಾಪು ಶಾಸಕರು, ಅಡ್ವೆ ನಂದಿಕೂರು ಕಂಬಳದ ಗೌರವ ಅಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಅವರು ಅಡ್ವೆ ನಂದಿಕೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯ ವತಿಯಿಂದ ಜನವರಿ 20, ಶನಿವಾರ ಜರಗಲಿರುವ 31 ನೇ ವರ್ಷದ ಹೊನಲು ಬೆಳಕಿನ ಕಂಬಳೋತ್ಸವದ ಬಗ್ಗೆ ನಂದಿಕೂರಿನಲ್ಲಿ ಜರಗಿದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. ತುಳು ಭಾಷೆಯ ಬೆಳವಣಿಗೆಗೆ ಕಂಬಳವೂ ಸಹಕಾರಿಯಾಗಿದ್ದು ಇನ್ನು ಮುಂದೆಯೂ ನಡೆಯಬೇಕಾಗಿದೆ ಎಂದರು.

ಕಂಬಳ ತಜ್ಞ ಶೇಖರ್ ಶೆಟ್ಟಿ ಮಾತನಾಡಿ, ಅಡ್ವೆ ನಂದಿಕೂರಿನಲ್ಲಿ ಮೊದಲ ಬಾರಿಗೆ ಮೂರು ಕರೆ, ಪೆಡ್ ಲೈಟ್ ಇತ್ಯಾದಿ ಹೊಸ ಪ್ರಯೋಗಗಳನ್ನು ಕಂಬಳದಲ್ಲಿ ಮಾಡಿ ಯಶಸ್ವಿಯಾಗಿ ಈ ಬಾರಿ‌ ಕೋಣವನ್ನು 3 ನಿಮಿಷದಲ್ಲಿ ಗಂತು (ಕಂಬಳ ಓಟದ ಆರಂಭಿಕ ಸ್ಥಳ)ಗೆ ನಿಲ್ಲಿಸಬೇಕು. ಆ ಸಮಯಕ್ಕೆ ಬಾರದಿದ್ದಲ್ಲಿ ಅವಕಾಶವಿಲ್ಲ. ಆ ಮೂಲಕ ಸಮಯಕ್ಕೆ ಮಹತ್ವ ನೀಡಲಾಗುವುದು. ಇದು ಹೊಸ ಪ್ರಯತ್ನವಾಗಿದ್ದು ಇದಕ್ಕೆ ಕೋಣದ ಮಾಲೀಕರು ಮತ್ತು ತಂಡದ ಸಹಕಾರ ಅಗತ್ಯ ಎಂದರು.

ಈ ಸಂದರ್ಭ ಕೋಟಿ ಚೆನ್ನಯ ಜೋಡುಕೆರೆ ಕಂಬಳ ಸಮಿತಿಯ ಅಧ್ಯಕ್ಷ ಸುರೇಶ್ ಶೆಟ್ಟಿ ಅಡ್ವೆ ಮೂಡ್ರಗುತ್ತು, ಪ್ರಧಾನ ಕಾರ್ಯದರ್ಶಿ ನವೀನ್ ಚಂದ್ರ ಸುವರ್ಣ ಅಡ್ವೆ ಹಾಗೂ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ರಾಮನ ಆಲಯಕ್ಕೆ ಕಾಯುತ್ತಿದೆ ರಾಂಪುರ

Posted On: 17-01-2024 09:36AM

ಅಯೋಧ್ಯೆ ಭವ್ಯ ರಾಮಮಂದಿರ ಲೋಕಾರ್ಪಣೆಗೊಳ್ಳುವ ಈ ಸುಸಂದರ್ಭದಲ್ಲಿ ಎಲ್ಲೆಡೆ ರಾಮನ ಧ್ಯಾನ ನಡೆಯುತ್ತಿದೆ. ಇಡೀ ಭಾರತ ದೇಶವೇ ಶ್ರೀ ರಾಮನ ಅಯೋಧ್ಯಾ ಆಗಮನಕ್ಕೆ ಕಾಯುತ್ತಿದೆ.

ಉಡುಪಿ ತಾಲೂಕಿನ ಅಲೆವೂರು ಗ್ರಾಮದ ರಾಂಪುರ ಎಂಬ ಸಣ್ಣ ಪ್ರದೇಶ ರಾಮನ ಭವ್ಯ ಆಲಯಕ್ಕಾಗಿ ಕಾಯುತ್ತಿದೆ. ಇಲ್ಲಿಯೇ ಪಕ್ಕದಲ್ಲಿರುವ ರಾಮಮಂದಿರ ಶಿಥಿಲಗೊಂಡು ಸಂಪೂರ್ಣವಾಗಿ ಜೀರ್ಣವಾಗಿದೆ. ಆದರೆ ಈ ಆಲಯದಲ್ಲಿರುವ ಸೀತಾ ಸಹಿತ ರಾಮದೇವರ ಮೂರ್ತಿ ನೋಡಲು ಆಕರ್ಷಕವಾಗಿದೆ. ಒಂದು ಕಡೆಯಲ್ಲಿ ಉಬ್ಬಿದ ಶೈಲಿಯ ರಾಮದೇವರ ಮೂರ್ತಿ ಇದೆ ರೀತಿ ಅದರ ಕೆಳಗಡೆ ಮೂರು ಹಿತ್ತಾಳೆಯ ಪುರಾತನ ಮೂತಿ೯ಗಳು ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ದೇವಾಲಯ ಖಾಸಗಿ ಪ್ರದೇಶದಲ್ಲಿದ್ದು, ಕಾಲಂತರದಲ್ಲಿ ಇದು ವಿವಿಧ ಕಾರಣಗಳಿಂದ ಜೀರ್ಣವಾಗಿದೆ ಇದೇ ದೇವಾಲಯದ ಹೆಸರಿನಿಂದ ಈ ಪ್ರದೇಶಕ್ಕೆ ರಾಮಪುರ ಅಥವಾ ರಾಂಪುರ ಎಂಬ ಹೆಸರು ಬಂದಿತ್ತು. ಇಡೀ ಗ್ರಾಮಕ್ಕೆ ಈ ಒಂದು ದೇವಾಲಯ ಮುಕುಟ ಪ್ರಾಯವಾಗಿತ್ತು. ಇದೀಗ ಈ ದೇವಾಲಯದ ಪುನರ್ ನಿರ್ಮಾಣಕ್ಕೆ ಒತ್ತಾಯಗಳು ಕೇಳಿಬರುತ್ತಿವೆ. ಪ್ರತಿ ದಿನ ಇಲ್ಲಿ ಆಸಕ್ತ ಜನರು ಭೇಟಿ ಕೊಡುತ್ತಿದ್ದಾರೆ. ಅಯೋಧ್ಯೆ ರಾಮ ಮಂದಿರ ಯಾವ ರೀತಿ ಪ್ರಾಮುಖ್ಯತೆಯನ್ನು ಪಡೆದಿದೆಯೋ ಅದೇ ರೀತಿ ಈ ರಾಮಪುರ ರಾಮದೇವಲಯ ಪ್ರಖ್ಯಾತಿಯನ್ನು ಪಡೆದಿತ್ತು

ಇಲ್ಲಿನ ದೇವಾಲಯದ ಕಂಬಗಳು ಸುತ್ತು ಪೌಳಿ ನಶಿಸಿಹೋಗಿದೆ. ಕಂಬಗಳು ಧರೆಗುರುಳಿ ನಿಂತರೆ, ದೇವಾಲಯದ ಒಳಗಡೆ ಗೋಡೆಗಳಲ್ಲಿ ಗೆದ್ದಲು ಹಿಡಿದಿವೆ. ಇದೀಗ ಈ ದೇವಾಲಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಪ್ರಚಾರ ಸಿಕ್ಕಿದ ಪರಿಣಾಮ ಇದರ ಹಲವಾರು ಜನರಲ್ಲಿ ಚರ್ಚಿಗಳು ಪ್ರಾರಂಭವಾಗಿವೆ. ಆದರೆ ಖಾಸಗಿ ಸ್ಥಳದಲ್ಲಿರುವ ಕಾರಣ ಈ ದೇವಾಲಯದ ಅಭಿವೃದ್ಧಿ ಈವರೆಗೂ ನಡೆದಿಲ್ಲ ಎಂಬ ಮಾಹಿತಿ ಇದೆ . ಇಡೀ ಗ್ರಾಮಕ್ಕೆ ಹೆಸರುವಾಸಿಯಾದ ಮತ್ತು ಗ್ರಾಮದ ಹೆಸರಿಗೆ ಕಾರಣವಾದ ಈ ಮಂದಿರ ತನ್ನ ಹಿಂದಿನ ಗತವೈಭವವನ್ನು ಮತ್ತೆ ಸಾರಬೇಕಾಗಿದೆ

ಇದೀಗ ಈ ದೇವಾಲಯದ ನಿರ್ಮಾಣಕ್ಕೆ ಕೂಗು ಕೇಳಿ ಬರುತ್ತದೆ ಏನೇ ಆಗಲಿ ಈ ದೇವಾಲಯ ಮತ್ತೊಮ್ಮೆ ತನ್ನ ಗತ ವೈಭವ ಭಕ್ತರಿಗೆ ತೋರಿಸಬೇಕಾಗಿದೆ. ಜನರು ಈ ಬಗ್ಗೆ ಗಮನ ನೀಡಿದರೆ ಅದೇ ರೀತಿ ಈ ಸ್ಥಳದ ಸಂಬಂಧಿಕರು ಮನಸ್ಸು ಮಾಡಿದರೆ ಮಂದಿರದ ಜೀರ್ಣೋದ್ದಾರ ಕಷ್ಟದ ಮಾತಲ್ಲ. ಏನೇ ಆಗಲಿ ರಾಮಮಂದಿರವಾಗಲಿ. ಬರಹ : ರಾಘವೇಂದ್ರ ಪ್ರಭು, ಕವಾ೯ಲು

ಜನವರಿ 21 : ದೇವರ ಚಿತ್ರ ಬಿಡಿಸುವ ಸ್ಪರ್ಧೆ

Posted On: 16-01-2024 05:40PM

ಪಡುಬಿದ್ರಿ : ಅಯೋಧ್ಯೆಯಲ್ಲಿ ಶ್ರೀ ರಾಮ ದೇವರ ಮಂದಿರ ಉದ್ಘಾಟನೆ ಮತ್ತು ಶ್ರೀ ರಾಮನ ವಿಗ್ರಹದ ಪ್ರತಿಷ್ಠಾಪನೆಯ ನಿಮಿತ್ತ ದಿ| ಉಗ್ಗು ದೇವಿ ನಾರಾಯಣ ಇವರ ಮಕ್ಕಳು ಮತ್ತು ಗೆಳೆಯರ ಬಳಗ, ಮುಂಬಯಿ ಇವರ ಜಂಟಿ ಆಶ್ರಯದಲ್ಲಿ ಜನವರಿ 21, ಆದಿತ್ಯವಾರ ಬೆಳಿಗ್ಗೆ ಗಂಟೆ 10ರಿಂದ ಪಡುಬಿದ್ರಿ ಬೀಚ್ ರೋಡ್ ನಲ್ಲಿರುವ ಸಾಗರ ವಿದ್ಯಾಮಂದಿರ ಸಭಾಗೃಹದಲ್ಲಿ ದೇವರ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿದೆ.

ಈ ಸ್ಪರ್ಧೆಯಲ್ಲಿ ಮಲ್ಪೆಯಿಂದ ಹೆಜಮಾಡಿ ವರೆಗಿನ ಮೊಗವೀರರು ಮತ್ತು ಸಾಗರ ವಿದ್ಯಾ ಮಂದಿರದ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಬಹುದು. 5ರಿಂದ 10, 11ರಿಂದ 15, 16ರಿಂದ ಮೇಲ್ಪಟ್ಟ ವಯಸ್ಸಿನವರಿಗೆ ಭಾಗವಹಿಸುವ ಅವಕಾಶವಿದೆ.

ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು. ಭಾಗವಹಿಸುವವರು ಬರುವಾಗ ವಿಳಾಸದ ದಾಖಲೆ ಮತ್ತು ವಯಸ್ಸಿನ ದಾಖಲೆ ತರಬೇಕೆಂದು ವಿನಂತಿಸಿದ್ದಾರೆ. ಡ್ರಾಯಿಂಗ್ ಪೇಪರ್ ಸ್ಥಳದಲ್ಲಿ ನೀಡಲಾಗುವುದು. ಉಳಿದಂತೆ ಅಗತ್ಯವಿರುವ ಎಲ್ಲಾ ಸಾಮಗ್ರಿಗಳನ್ನು ಸ್ಪರ್ಧಾರ್ಥಿಗಳೇ ತರಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 96995 36571 7022194379

ಕಟಪಾಡಿ : ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಚಾಲನೆ

Posted On: 16-01-2024 05:02PM

ಕಟಪಾಡಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿಯೊಂದಿಗೆ ಭಾರತದಾದ್ಯಂತ ನವೆಂಬರ್ 15 ರಿಂದ ಜನವರಿ 26ರವರೆಗೆ ನಡೆಯುತ್ತಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಮಂಗಳವಾರದಂದು ಕಟಪಾಡಿ ಗ್ರಾಮ ಪಂಚಾಯತ್ ಬಳಿ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಶಾಸಕರು ಕೇಂದ್ರ ಸರ್ಕಾರದ 70ಕ್ಕೂ ಹೆಚ್ಚು ಯೋಜನೆಗಳ ಪೈಕಿ 17 ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿಯನ್ನು ಒದಗಿಸುವುದು, ಈ ಯೋಜನೆಗಳನ್ನು ಕೊನೆಯ ಮೈಲಿಯವರೆಗೂ ಮುಟ್ಟಿಸುವುದು, ಈವರೆಗೆ ಪ್ರಯೋಜನ ಪಡೆಯದ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಯೋಜನೆಗಳನ್ನು ತಲುಪಿಸುವುದು ಈ ಯಾತ್ರೆಯ ಉದ್ದೇಶವಾಗಿದ್ದು, ಯಾತ್ರೆಯಲ್ಲಿ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ವಾಹನ ಉಡುಪಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಲಿದ್ದು, ಎಲ್ಇಡಿ ಪರದೆಯ ಮೂಲಕ ಯೋಜನೆಗಳ ಮಾಹಿತಿಯನ್ನು ನೀಡಲಾಗುವುದು ಎಂದರು.

ಈ ಸಂದರ್ಭ ದೀನ್ ದಯಾಳ್ ಅಂತ್ಯೋದಯ ಯೋಜನೆ ಅಡಿಯಲ್ಲಿ ಸ್ವಸಹಾಯ ಸಂಘಗಳಿಗೆ ಮಂಜೂರಾದ ಸಹಾಯಧನವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಭಾವತಿ, ನಬಾರ್ಡ್ ನ ಸಂಗೀತಾ ಕರ್ತ, ವಿಕಸಿತ ಭಾರತ ಸಂಕಲ್ಪ ಯಾತ್ರೆ ನೊಡಲ್ ಅಧಿಕಾರಿಗಳಾದ ಸಂತೋಷ್, ಕೆನರಾ ಬ್ಯಾಂಕ್ ನ ಎಫ್.ಎಲ್.ಸಿ ಪ್ರದೀಪ್, ಅಂಚೆ ಇಲಾಖೆಯ ಸಂತೋಷ್ ಮಧ್ಯಸ್ಥ, ಕೃಷಿ ಇಲಾಖೆಯ ಅರುಣ್ ಕುಮಾರ್, ವೆಂಕಟೇಶ್, ಜಿಲ್ಲಾ ಆಸ್ಪತ್ರೆಯ ಆರೋಗ್ಯ ಮಿತ್ರದ ಹರೀಶ್, ಕಟಪಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶುೃತಿ, ಗ್ರಾಮ ಆಡಳಿತಾಧಿಕಾರಿಗಳಾದ ಡ್ಯಾನಿಯಲ್ ಹಾಗೂ ಕಟಪಾಡಿ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.