Updated News From Kaup
ಉಡುಪಿ : ಹಾವಂಜೆ ಕೊಳಲುಗಿರಿ ಕಾತಿಬೈಲು ಬಬ್ಬು ಸ್ವಾಮಿ ಪರಿವಾರ ದೈವಗಳ ದೈವಸ್ಥಾನದಲ್ಲಿ ವಾರ್ಷಿಕ ಹರಕೆ ಸೇವೆ ಸಂಪನ್ನ
Posted On: 14 Dec 2023, 07:30 PM
ಉಡುಪಿ : ಜಿಲ್ಲೆಯ ಇತಿಹಾಸ ಪ್ರಸಿದ್ಧ ಹಾವಂಜೆ ಕೊಳಲುಗಿರಿ ಕಾತಿಬೈಲು ಬಬ್ಬು ಸ್ವಾಮಿ ಪರಿವಾರ ದೈವಗಳ ದೈವಸ್ಥಾನ ಇಲ್ಲಿಯ ವಾರ್ಷಿಕ ಹರಕೆ ಸೇವೆ ಜರಗಿತು. ಈ ಒಂದು ಸಂದರ್ಭದಲ್ಲಿ ಪರಿವಾರ ದೈವಗಳ ದರ್ಶನ ಸೇವೆ ಜರಗಿತು. ಈ ಒಂದು ಪುಣ್ಯದ ಕಾರ್ಯದಲ್ಲಿ ಊರಿನ ಹಾಗೂ ಪರ ಊರಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗಂಧ ಪ್ರಸಾದ ಪಡೆದು ದೈವದ ಕೃಪೆಗೆ ಪಾತ್ರರಾದರು. ಈ ಸಂದರ್ಭ ಸುಂದರ್ ಶೆಟ್ಟಿ, ಅಶೋಕ್ ಶೆಟ್ಟಿ, ಸುರೇಶ್ ಶೆಟ್ಟಿ, ಮನೋರಂಜನ್ ಹೆಗ್ಡೆ, ವಿನೋದ್ ಶೆಟ್ಟಿ ದೊಡ್ಡನಗುಡ್ಡೆ, ದೋಗು ಪೂಜಾರಿ, ದಾದು ಪೂಜಾರಿ, ದೂಮಾ ಪೂಜಾರಿ, ತಾಡ ಪೂಜಾರಿ ಮತ್ತು ಗುರಿಕಾರರು ಹಾಗೂ ಹತ್ತು ಸಮಸ್ತರು, ಆಡಳಿತ ಮಂಡಳಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತಿ ಇದ್ದರು.
ಡಿಸೆಂಬರ್ 18 : ಮಾತೃಜ ಸೇವಾ ಸಿಂಧು ನಿಟ್ಟೆ ವತಿಯಿಂದ ಭವತಿ ಭಿಕ್ಷಾoದೇಹಿ
Posted On: 14 Dec 2023, 07:06 PM
ಕಾರ್ಕಳ : ಇಲ್ಲಿನ ನಿಟ್ಟೆಯ ಮಾತೃಜ ಸೇವಾ ಸಿಂಧು ನಿಟ್ಟೆ ಇವರ ವತಿಯಿಂದ ಶ್ರೀ ಕ್ಷೇತ್ರ ಕಡಂದಲೆ ಹಾಗೂ ಶ್ರೀ ಕ್ಷೇತ್ರ ಸೂಡದಲ್ಲಿ ಷಷ್ಟಿ ಮಹೋತ್ಸವದಂದು ಎರಡು ಅನಾರೋಗ್ಯ ಮಕ್ಕಳಿಗೆ ಭವತಿ ಭಿಕ್ಷಾಂದೇಹಿ ಮುಖೇನ ಧನ ಸಂಗ್ರಹ ತಂಡದ ಸದಸ್ಯರು ಮಾಡಲಿರುವರು ಎಂದು ಸಂಸ್ಥೆಯ ಪ್ರಮುಖರು ಪ್ರಕಟಣೆಯಲ್ಲಿ ತಿಳಿಸಿರುವರು.
ಪ್ರತಿಷ್ಠಿತ ಹೊಯ್ಸಳ ಪ್ರಶಸ್ತಿಗೆ ಆಯ್ಕೆಯಾದ ಡಾ.ಅಣ್ಣಯ್ಯ ಕುಲಾಲ್ ಉಳ್ತೂರು
Posted On: 13 Dec 2023, 08:23 PM
ಮಂಗಳೂರು : ಮೈಸೂರಿನ ಹೊಯ್ಸಳ ಕನ್ನಡ ಸಂಘ ಮತ್ತು ಸಿರಿಗನ್ನಡ ಪತ್ರಿಕಾ ಬಳಗ ನೀಡುತ್ತಿರುವ ಪ್ರತಿಷ್ಟಿತ ಹೊಯ್ಸಳ ಪ್ರಶಸ್ತಿಗೆ ಹಿರಿಯ ಸಮಾಜವಿಜ್ಞಾನಿ ಡಾ. ಎಂ ಅಣ್ಣಯ್ಯ ಕುಲಾಲ್ ಉಲ್ತೂರ್ ಆಯ್ಕೆ ಆಗಿದ್ದಾರೆ. ಕಳೆದ ೨೦ ವರ್ಷಗಳಿಂದ ಮೈಸೂರಿನ ಹೊಯ್ಸಳ ಕನ್ನಡ ಸಂಘ ಮತ್ತು ಸಿರಿಗನ್ನಡ ಪತ್ರಿಕಾ ಬಳಗ ನೀಡುತ್ತಿರುವ ಈ ಬಾರಿಯ ಪ್ರಶಸ್ತಿಗೆ ೧೮ ಮಂದಿಯನ್ನು ಆಯ್ಕೆ ಮಾಡಲಾಗಿದೆ. ಕರಾವಳಿ ಮಲೆನಾಡು ಭಾಗದಿಂದ ನಾಡು, ನುಡಿ, ನೆಲ, ಜಲ, ಪರಿಸರ, ಕೃಷಿ ,ಸಮಾಜ ಮುಖಿ ವೈದ್ಯಕೀಯ ಸೇವೆ, ಶಿಕ್ಷಣ, ಸಾಹಿತ್ಯ, ಸಂಘಟನೆಗಳ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.
ಕಾಪು : ಸಮಾಜ ಸೇವಕ ಲೀಲಾಧರ್ ಶೆಟ್ಟಿ ಮತ್ತು ವಸುಂದರ ದಂಪತಿಗಳ ಅಂತ್ಯಕ್ರಿಯೆ
Posted On: 13 Dec 2023, 08:05 PM
ಕಾಪು : ಇಲ್ಲಿನ ರಂಗತರಂಗ ನಾಟಕ ಸಂಸ್ಥೆಯ ಸ್ಥಾಪಕ, ಸಮಾಜ ಸೇವಕ ಧರಣಿ ಸಮಾಜ ಸಂಸ್ಥೆ ಸ್ಥಾಪಿಸಿದ್ದ ಕರಂದಾಡಿ ಲೀಲಾಧರ್ ಶೆಟ್ಟಿ ಮತ್ತು ಮಡದಿ ವಸುಂದರ ದಂಪತಿಗಳು ಆತ್ಮಹತ್ಯೆ ಶರಣಾಗಿದ್ದಾರೆ. ಅವರ ಮರಣದಿಂದ ಕಾಪು ತಾಲೂಕಿನ ಅವರ ಅಭಿಮಾನಿ ವರ್ಗ ಸೇರಿದಂತೆ ಎಲ್ಲರೂ ಕಂಬನಿ ಮಿಡಿದಿದ್ದಾರೆ. ಅವರ ಮರಣದಿಂದ ಕಾಪುವಿಗೆ ಸೂತಕದ ಛಾಯೆ ಆವರಿಸಿದೆ. ಆಟೋ, ಟ್ಯಾಕ್ಸಿ ಸೇರಿದಂತೆ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಣೆಯಿಂದ ಬಂದ್ ಆಗಿದೆ. ಮಣಿಪಾಲದಿಂದ ಬಂದ ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಸಹಸ್ರಾರು ಜನರು ಸೇರಿದ್ದರು. ಜನರ ಮೆಚ್ಚಿನ ಲೀಲಣ್ಣ ಮತ್ತು ವಸುಂದರಕ್ಕನವರ ಪಾರ್ಥಿವ ಶರೀರದ ಮೆರವಣಿಗೆಯು ಕಾಪು ಪೊಲಿಪು ಜಾಮೀಯಾ ಮಸೀದಿಯ ಜಂಕ್ಷನ್ ನಿಂದ ಪ್ರಾರಂಭಗೊಂಡು ಕರಂದಾಡಿ ಶಾಲೆಯಲ್ಲಿ ಕೊನೆಗೊಂಡು, ಅಂತಿಮ ದರ್ಶನ ಕರಂದಾಡಿ ಶಾಲಾ ಮೈದಾನದಲ್ಲಿ ನಡೆಯಲಿದೆ. ಕರಂದಾಡಿ ಶಾಲಾ ಮೈದಾನದಲ್ಲಿ ಅಂತಿಮ ದರ್ಶನದ ಸಕಲ ಏರ್ಪಾಡು ಆಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಂತಿಮ ದರ್ಶನ ಕ್ಕಾಗಿ ಕಾಯುವ ದೃಶ್ಯ ಮನ ಮಿಡಿಯುತ್ತಿತ್ತು. ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕರುಗಳಾದ ಲಾಲಾಜಿ ಮೆಂಡನ್, ವಿನಯ ಕುಮಾರ್ ಸೊರಕೆ ಸಹಿತ ನೂರಾರು ಗಣ್ಯರು ಉಪಸ್ಥಿತರಿದ್ದರು.
ಉಡುಪಿ : ಮೆಡಿಕಲ್ ಶಾಪ್ಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯ - ಜಿಲ್ಲಾಧಿಕಾರಿ
Posted On: 13 Dec 2023, 12:28 PM
ಉಡುಪಿ : ಸಾರ್ವಜನಿಕ ಹಿತವನ್ನು ಕಾಪಾಡುವ ದೃಷ್ಟಿಯಿಂದ ಕ್ರಿಮಿನಲ್ ಪ್ರೊಸೀಜರ್ ಕೋಡ್ 1973 ಕಾಲಂ 133 ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜಿಲ್ಲೆಯಲ್ಲಿ “X” ಮತ್ತು “H” ಔಷಧಿಗಳನ್ನು ಮಾರಾಟ ಮಾಡುವ ಎಲ್ಲಾ ವೈದ್ಯಕೀಯ ಹಾಗೂ ಫಾರ್ಮಸಿ ಅಂಗಡಿಗಳಲ್ಲಿ ಕಡ್ಡಾಯವಾಗಿ ಸಿ.ಸಿ ಟಿವಿ ಅಳವಡಿಸುವಂತೆ ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಆದೇಶಿಸಿದ್ದಾರೆ. ಸಿ.ಸಿ.ಟಿವಿ ಕ್ಯಾಮೆರಾವನ್ನು ಅಳವಡಿಸಲು ಎಲ್ಲಾ ವೈದ್ಯಕೀಯ, ಫಾರ್ಮಸಿ ಅಂಗಡಿ ಮಾಲೀಕರಿಗೆ ಎರಡು ವಾರಗಳ ಕಾಲಾವಕಾಶ ನೀಡಲಾಗಿದ್ದು, ಜಿಲ್ಲಾ ಔಷಧ ನಿಯಂತ್ರಕರು ಸದ್ರಿ ಅಂಗಡಿಗಳಲ್ಲಿ ಸಿ.ಸಿ ಟಿವಿ ಅಳವಡಿಸಿರುವ ಕುರಿತು ತಪಾಸಣೆ ನಡೆಸಬೇಕು. ಈ ಆದೇಶವನ್ನು ಉಲ್ಲಂಘಿಸುವ ಮೆಡಿಕಲ್, ಫಾರ್ಮಸಿ ಅಂಗಡಿ ಮಾಲೀಕರ ವಿರುದ್ಧ ನಿಯಮಾನುಸಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂಟ್ಸ್ ಕತಾರ್ : ವಾರ್ಷಿಕ ಸಾಮಾನ್ಯ ಸಭೆ ; ಅಧ್ಯಕ್ಷರಾಗಿ ನವೀನ್ ಶೆಟ್ಟಿ ಇರುವೈಲ್ ಅವಿರೋಧ ಆಯ್ಕೆ
Posted On: 13 Dec 2023, 12:14 PM
ಭಾರತದ ರಾಯಭಾರ ಕಚೇರಿಯ ಅಧೀನದಲ್ಲಿ ಇಂಡಿಯನ್ ಕಲ್ಚರಲ್ ಸೆಂಟರ್ ಸಹವರ್ತಿ ಸಂಘಗಳಲ್ಲಿ ಒಂದಾದ ಬಂಟ್ಸ್ ಕತಾರ್ ತನ್ನ ಸದಸ್ಯರಿಗೆ ವೇದಿಕೆಯನ್ನು ಒದಗಿಸುವ ಮತ್ತು ಉತ್ತೇಜಿಸುವ ಮತ್ತು ರವಾನಿಸುವ ಮುಖ್ಯ ಉದ್ದೇಶದೊಂದಿಗೆ 2011 ರಲ್ಲಿ ಸ್ಥಾಪನೆಯಾದಾಗಿನಿಂದ ಯುವ ಪೀಳಿಗೆಗೆ ಸ್ಥಳೀಯ ಸಂಸ್ಕೃತಿ, ವಿವಿಧ ಸಾಮಾಜಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ಇದರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ 2023-25 ನೇ ಸಾಲಿನ ನೂತನ ಅಧ್ಯಕ್ಷರಾಗಿ ನವೀನ್ ಶೆಟ್ಟಿ ಇರುವೈಲ್ ಅವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಸುಬೋಧ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸುಖರಾಮ ಶೆಟ್ಟಿ, ಕೋಶಾಧಿಕಾರಿಯಾಗಿ ಸುನೀಲ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಯಾಗಿ ನವೀನ್ ಶೆಟ್ಟಿ ಮಡಂತ್ಯಾರು, ವಿಶೇಷ ಅಗತ್ಯಗಳ ಉಸ್ತುವಾರಿಯಾಗಿ ಪ್ರೀತನ್ ರೈ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅಕ್ಷಿಣಿ ವಿಘ್ನೇಶ್ ಶೆಟ್ಟಿ, ಜಂಟಿ ಪ್ರಧಾನ ಕಾರ್ಯದರ್ಶಿಯಾಗಿ ಚಿದಾನಂದ ರೈ, ಜಂಟಿ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪೂಜಾ ಆದರ್ಶ ಶೇಣವ, ಲಾಜಿಸ್ಟಿಕ್ ಮತ್ತು ಯುವ ಸಂಯೋಜಕರಾಗಿ ದಿನೇಶ್ ಶೆಟ್ಟಿ, ಸದಸ್ಯತ್ವ ಮತ್ತು ಪರಿಸರ ಸಂಯೋಜಕರಾಗಿ ಮನೋಜ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಬಂಟ್ಸ್ ಕತಾರ್ನ ನಿರ್ಗಮಿತ ಅಧ್ಯಕ್ಷೆ ಡಾ.ಪದ್ಮಶ್ರೀ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ ಉದ್ದೇಶಗಳನ್ನು ವಿವರಿಸಿ, ಶ್ಲಾಘಿಸಿದರು. ಅವರ ಆಡಳಿತ ಸದಸ್ಯರ ಸಾಮೂಹಿಕ ಪ್ರಯತ್ನಕ್ಕೆ ಮತ್ತು ಸಲಹಾ ಸಮಿತಿ, ಸದಸ್ಯರಿಂದ ದೊರೆತ ಬೆಂಬಲಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ತಮ್ಮ ಅಧಿಕಾರಾವಧಿಯಲ್ಲಿ ನೀಡಿದ ಸಹಕಾರಕ್ಕಾಗಿ ನಿರ್ಗಮಿತ ಕಾರ್ಯಕಾರಿ ಮಂಡಳಿ ಮತ್ತು ಸಲಹಾ ಸಮಿತಿ ಸದಸ್ಯರಿಗೆ ನೆನಪಿನ ಕಾಣಿಕೆ ನೀಡಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಈ ಸಂದರ್ಭ ಸ್ಥಾಪಕ ಅಧ್ಯಕ್ಷ ರವಿ ಶೆಟ್ಟಿ, ಮಾಜಿ ಅಧ್ಯಕ್ಷ ನವನೀತ ಶೆಟ್ಟಿ, ಹಿರಿಯ ಸದಸ್ಯರಾದ ರಾಮ್ ಮೋಹನ್ ರೈ, ರಾಮಚಂದ್ರ ಶೆಟ್ಟಿ ಅವರು ಹೊಸ ಸಮಿತಿಯನ್ನು ಅಭಿನಂದಿಸಿ ಮತ್ತು ನೂತನ ಆಡಳಿತ ಅವಧಿಯಲ್ಲಿ ಬಂಟ್ಸ್ ಕತಾರ್ ಇನ್ನು ಹೆಚ್ಚು ಎತ್ತರಕ್ಕೆ ಬೆಳೆಯಲಿ ಎಂದು ತಮ್ಮ ಶುಭಾಶಯಗಳನ್ನು ತಿಳಿಸಿದರು. ಮಾಜಿ ಅಧ್ಯಕ್ಷ ಮತ್ತು ನಿರ್ಗಮಿತ ಸಲಹಾ ಸಮಿತಿ ಛೇರ್ಮನ್ ದೀಪಕ್ ಶೆಟ್ಟಿ, ಹಿಂದಿನ ಸಮಿತಿಯ ಸದಸ್ಯರು ಮತ್ತು ಬಂಟ್ಸ್ ಕತಾರ್ ಸದಸ್ಯರು ಉಪಸ್ಥಿತರಿದ್ದರು. ನಿರ್ಗಮಿತ ಪ್ರಧಾನ ಕಾರ್ಯದರ್ಶಿ ಮಾನಸ ಶೆಟ್ಟಿ ಗತ ಸಾಲಿನ ಚಟುವಟಿಕೆಗಳನ್ನು ಪ್ರಸ್ತುತಪಡಿಸಿದರು. ಕೋಶಾಧಿಕಾರಿ ಮನೋಹರ ಶೆಟ್ಟಿ ಆಯವ್ಯಯ ಪತ್ರ ಮಂಡಿಸಿದರು.
ಕಾಪು : ಸ್ವಾತಂತ್ರ್ಯ ಹೋರಾಟಗಾರನ್ನು ಸ್ಮರಿಸುವುದೇ ಪುಣ್ಯದ ಕಾರ್ಯ - ಸುಬ್ರಹ್ಮಣ್ಯ ಶೆಟ್ಟಿ
Posted On: 13 Dec 2023, 11:02 AM
ಕಾಪು : ಮಹಾತ್ಮಗಾಂಧೀಜಿಯವರ ಕರೆಗೆ ಓಗೊಟ್ಟು ತಮ್ಮ ಸರ್ವಸ್ವವನ್ನು ತ್ಯಾಗಮಾಡಿ ಸಮರ್ಪಣಾಭಾವದಿಂದ ದೇಶವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಹೋರಾಡಿ, ಲಾಠಿಏಟು, ಸೆರೆಮನೆ ವಾಸ, ವಿವಿಧ ಚಿತ್ರಹಿಂಸೆಗಳನ್ನು ಅನುಭವಿಸಿ ದೇಶಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರು ನಮಗೆ ಪ್ರಾತ:ಸ್ಮರಣೀಯರು, ಅವರನ್ನು ಸ್ಮರಿಸುವುದೇ ಜೀವನದ ಅವಿಸ್ಮರಣೀಯ ಕ್ಷಣ ಹಾಗೂ ಪುಣ್ಯದ ಕಾರ್ಯ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ನುಡಿದರು. ಅವರು ಸೋಮವಾರ ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ವತಿಯಿಂದ ಕಾಪು ಪಡುಗ್ರಾಮ ಕೊಪ್ಪಲಂಗಡಿ ಸಾಲ್ಯಾನ್ ತೋಟ "ಶ್ರೀಪ್ರಭಾ"ನಿವಾಸದಲ್ಲಿ ಏರ್ಪಡಿಸಿದ ಸ್ವಾತಂತ್ರ್ಯ ವೀರ ಸಹೋದರರಾದ ಕಾಪು ವೀರಪ್ಪ ಎಂ.ಸಾಲಿಯಾನ್ ಕಾಪು ಹರೇಂದ್ರ ಸಾಲಿಯಾನ್ರವರ ಸಂಸ್ಮರಣೆ "ಅಮೃತಭಾರತಿಗೆ ಕನ್ನಡದ ಆರತಿ" ಸ್ವಾತಂತ್ರ್ಯ ಸೇನಾನಿಗಳ ನೆನಪಿನಲ್ಲಿ ಏರ್ಪಡಿಸಿದ "ಅಮೃತಾಂಜಲಿ" ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ, ಕಾಪು ತಾಲೂಕು ಕಸಾಪ ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮದಲ್ಲಿ ತಾಲೂಕಿನ ಹೋರಾಟಗಾರರನ್ನು ಗುರುತಿಸಿ ಅವರ ಮನೆಯಂಗಳದಲ್ಲಿ ಕುಟುಂಬದ ಸದಸ್ಯರನ್ನೊಳಗೊಂಡು ಹಿರಿಯ ಹೋರಾಟಗಾರರನ್ನು ಸ್ಮರಿಸುವ ಇಂತಹ ಸ್ತುತ್ಯ ಕಾರ್ಯ ರಾಜ್ಯಕ್ಕೆ ಮಾದರಿಯಾಗಿದೆ ಎಂದರು. ದಿ.ವೀರಪ್ಪ ಎಂ.ಸಾಲ್ಯಾನ್ರವರ ಹಿರಿಯ ಪುತ್ರಿ ಪ್ರಭಾವತಿ ಪಿ.ಸಾಲಿಯಾನ್ ದೀಪ ಪ್ರಜ್ವಲನದೊಂದಿಗೆ ಸ್ವಾತಂತ್ರ್ಯ ಸೇನಾನಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನುಡಿ ನಮನ ಸಲ್ಲಿಸಿದರು. ಕಾಪು ಪುರಸಭಾ ಮಾಜಿ ಸದಸ್ಯ ಕೆ.ಎಚ್.ಉಸ್ಮಾನ್ ಮಾತನಾಡಿ ಸ್ವಾತಂತ್ರ್ಯ ಹೋರಾಟಗಾರರ ನೆನಪು ಸದಾ ಉಳಿಯುವಂತೆ ಅವರು ವಾಸಿಸಿದ ಹಾಗೂ ನಡೆದಾಡಿದ ರಸ್ತೆಗೆ "ವೀರಪ್ಪ ಎಂ.ಸಾಲಿಯಾನ್ ರಸ್ತೆ" ಎಂದು ನಾಮಕರಣ ಮಾಡುವಂತೆ ಸಾಹಿತ್ಯ ಪರಿಷತ್ತು ನಿರ್ಣಯ ಕೈಗೊಂಡು ಪುರಸಭೆಗೆ ನೀಡುವಂತೆ ಸಲಹೆ ನೀಡಿದಲ್ಲದೆ ಈ ನಿಟ್ಟಿನಲ್ಲಿ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಮುಂದಾಳು ಮಾಧವ ಪಾಲನ್ ಕಾಪು, ಜಿಲ್ಲಾ ಕಸಾಪ ಸಭಾಭವನ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್ ನುಡಿನಮನ ಸಲ್ಲಿಸಿದರು. ಕುರ್ಕಾಲು ಗ್ರಾಮ ಪಂ.ಅಧ್ಯಕ್ಷ ಪ್ರಶಾಂತ್ ಪೂಜಾರಿ, ವೀರಪ್ಪ ಸಾಲಿಯಾನ್ರವರ ಪುತ್ರಿಯರಾದ ಜಯಲಕ್ಷ್ಮಿ ಪೂಜಾರಿ, ಮೀರಾ ಪೂಜಾರಿ, ಭಜನಾ ಮಂಡಳಿ ಅಧ್ಯಕ್ಷೆ ಸಾವಿತ್ರಿಗಣೇಶ್, ಅರುಣ್ ಬಂಗೇರ, ಸುಧಾಕರ ಪಾಣಾರ ಬೆಳ್ಳೆ, ಜಿಲ್ಲಾ ದೈಹಿಕ ಶಿಕ್ಷಣ ನಿವೃತ್ತ ಅಧಿಕಾರಿ ಮಧುಕರ್ ಎಸ್.ಕಲ್ಯಾ ವೇದಿಕೆಯಲ್ಲಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿ ಮಾತನಾಡಿ ದೇಶದ ಸ್ವಾತಂತ್ರ್ಯದ ಅಮೃತಮಹೋತ್ಸವ ಹೊಸ್ತಿಲಲ್ಲಿ ಕಾಪು ತಾಲೂಕಿನ ಹೋರಾಟಗಾರರ ವಿವರವನ್ನು ಸಂಗ್ರಹಿಸಿ ಅವರ ದೇಶಭಕ್ತಿ, ತ್ಯಾಗ, ಕೊಡುಗೆಯನ್ನು ಸ್ಮರಿಸಿ ಇಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವನ್ನು ತಾಲೂಕು ಘಟಕ ಶೃದ್ದಾಭಕ್ತಿಯಿಂದ ಮಾಡುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರಾದ ವೀರಪ್ಪ ಎಂ.ಸಾಲಿಯಾನ್ರವರ ನೆನಪು ಸದಾ ಉಳಿಯುವಂತೆ ಅವರು ವಾಸಿಸಿದ ಹಾಗೂ ನಡೆದಾಡಿದ ರಸ್ತೆಗೆ "ವೀರಪ್ಪ ಎಂ.ಸಾಲಿಯಾನ್ ರಸ್ತೆ" ಎಂದು ನಾಮಕರಣ ಮಾಡುವ ಪ್ರಸ್ತಾವದ ಬಗ್ಗೆ ನಿರ್ಣಯ ಕೈಗೊಂಡು ಕಾಪು ಪುರಸಭೆಗೆ ಮನವಿ ಸಲ್ಲಿಸುವುದಾಗಿ ತಿಳಿಸಿ ಈನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳೂ ಕೈಜೋಡಿಸುವಂತೆ ವಿನಂತಿಸಿದರು. ಕಸಾಪ ಗೌರವ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ನೀಲಾನಂದ ನಾಯ್ಕ್ ನಿರೂಪಿಸಿದರು. ಗೌರವ ಕೋಶಾಧ್ಯಕ್ಷ ವಿದ್ಯಾಧರ್ ಪುರಾಣಿಕ್ ವಂದಿಸಿದರು.
ಡಿಸೆಂಬರ್ 15 : ಕಾಪು ತಾಲ್ಲೂಕು ಮಟ್ಟದ ಪಿಂಚಣಿ ಅದಾಲತ್
Posted On: 13 Dec 2023, 08:52 AM
ಕಾಪು : ಸಾಮಾಜಿಕ ಭದ್ರತಾ ಯೋಜನೆಗಳಾದ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲ ವೇತನ, ನಿರ್ಗತಿಕ ವಿಧವಾ ವೇತನ, ಮೈತ್ರಿ ಯೋಜನೆ ಹಾಗೂ ಮನಸ್ವಿನಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾಪು ತಾಲೂಕಿಗೆ ಸಂಬಂಧಿಸಿದ ಗ್ರಾಮಗಳ ಕಾಪು ತಾಲ್ಲೂಕು ಮಟ್ಟದ ಪಿಂಚಣಿ ಅದಾಲತ್ ಡಿಸೆಂಬರ್ 15 ರಂದು ಬೆಳಿಗ್ಗೆ 10 ಗಂಟೆಗೆ ಕಾಪು ಆಡಳಿತ ಸೌಧದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತರಾದ ರಶ್ಮಿ ಎಸ್ ಆರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕಾಪು ತಾಲ್ಲೂಕು ವ್ಯಾಪ್ತಿಯ ಗ್ರಾಮಗಳಿಗೆ ಸಂಬಂಧಪಟ್ಟ ಪಿಂಚಣಿಗಾಗಿ ಈಗಾಗಲೇ ಅರ್ಜಿ ಸಲ್ಲಿಸಿ ಕೋರಿಕೆ ತಿರಸ್ಕೃತಗೊಂಡಿರುವವರು ಪಿಂಚಣಿ ಬಾರದಿರುವವ ಹಾಗೂ ಪಿಂಚಣಿಗೆ ಸಂಬಂಧಿಸಿದ ಇನ್ನಿತರ ದೂರುಗಳ ಫಲಾನುಭವಿಗಳು ಹಾಜರಾಗಿ ಪರಿಹಾರ ಕಂಡುಕೊಳಬಹುದಾಗಿದೆ ಎಂದು ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಓಮನ್ ಬಿಲ್ಲವಾಸ್ : ವ್ಯವಹಾರ ಸಂಪರ್ಕ - ತರಬೇತಿ ಕಾರ್ಯಾಗಾರ ಸಂಪನ್ನ
Posted On: 13 Dec 2023, 08:30 AM
ಓಮನ್ ಬಿಲ್ಲವಾಸ್ ಮುಖೇನ 'ವ್ಯವಹಾರ ಸಂಪರ್ಕ' ಶೀರ್ಷಿಕೆಯಡಿಯಲ್ಲಿ ಬಿಲ್ಲವ ಬಾಂಧವರನ್ನು ಆರ್ಥಿಕವಾಗಿ ಸ್ವಾವಲಂಬಿತರನ್ನಾಗಿಸುವ ಹಾಗೂ ಪರಸ್ಪರ ವ್ಯಾವಹಾರಿಕ ಬೆಂಬಲವನ್ನು ವೃದ್ಧಿಪಡಿಸುವ ತರಬೇತಿ ಕಾರ್ಯಾಗಾರ ಡಿಸೆಂಬರ್ 8ರಂದು ಮಸ್ಕತ್ ನ ಅಜ್ಹೈಭ ಗಾರ್ಡನ್ ಹಾಲ್ ನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಮುದಾಯದ ಹಿರಿಯ ಉದ್ಯಮಿಗಳು, ಸ್ವಉದ್ಯೋಗಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳು ತಮ್ಮ ವ್ಯಾವಹಾರಿಕ ಅನುಭವನ್ನು ಹಂಚಿಕೊಂಡರು ಹಾಗೂ ಯಶಸ್ವೀ ಉದ್ಯಮಿಗಳಾಗುವಲ್ಲಿ ಪರಿಪಾಲಿಸಬೇಕಾದ ಸೂಕ್ಷ್ಮ ವಿಚಾರಗಳನ್ನು ತಿಳಿಸಲಾಯಿತು. ಅಧ್ಯಕ್ಷರಾದ ಸುಜಿತ್ ಅಂಚನ್ ಮಾತನಾಡಿ ಸಂಘಟನಾತ್ಮಕ ಚಟುವಟಿಕೆಗಳು ಹಾಗೂ ಮುಂಬರುವ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಪ್ರಸ್ತಾಪಿಸಿದರು. ಸ್ಥಾಪಕ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಡಾ. ಅಂಚನ್ ಸಿ. ಕೆ ದಿಕ್ಸೂಚಿ ಭಾಷಣ ನೀಡಿದರು. ಕಾರ್ಯಕಾರಿ ಸಮಿತಿ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಹರೀಶ್ ಸುವರ್ಣ ಸ್ವಾಗತಿಸಿದರು. ಶ್ರೀ ಕೃಷ್ಣ ಪ್ರಸಾದ್ ಮತ್ತು ಸುರೇಂದ್ರ ಅಮೀನ್ ಪ್ರಸ್ತಾವನೆಗೈದರು. ಉಮೇಶ್ ಜೆಪ್ಪು ಕಾರ್ಯಕ್ರಮ ನಿರೂಪಿಸಿ, ವಂದನ ರಾಮಕೃಷ್ಣ ವಂದಿಸಿದರು.
ಕಾಪು : ಸಮಾಜ ಸೇವಕ ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆ
Posted On: 13 Dec 2023, 08:04 AM
ಕಾಪು : ಇಲ್ಲಿನ ಸಮಾಜ ಸೇವಕ, ರಂಗತರಂಗ ನಾಟಕ ಸಂಸ್ಥೆಯ ಸ್ಥಾಪಕರೂ ಆಗಿದ್ದ ಲೀಲಾಧರ ಶೆಟ್ಟಿ ಹಾಗೂ ಅವರ ಪತ್ನಿ ವಸುಂಧರಾ ಶೆಟ್ಟಿ ಜೊತೆಯಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಜನರ ಪ್ರೀತಿಯ ಲೀಲಣ್ಣ ಸರಳ ಸಜ್ಜನ ವ್ಯಕ್ತಿಯಾಗಿ ಓರ್ವ ಉತ್ತಮ ನಟ, ನಿರ್ದೇಶಕನಗಿ, ಕಾಪು ರಂಗತರಂಗ ತಂಡದ ಜನಪ್ರಿಯತೆಗೆ ಕಾರಣವಾಗಿದ್ದರು. ಒಂದು ಬಾರಿ ಕಾಪು ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಸಮಾಜದ ಪರವಾಗಿ ಕಾಳಜಿ ಹೊಂದಿದ್ದರು. ಸಮಾಜ ಸೇವಕನಾಗಿ, ಕಾಪು ಬಂಟರ ಸಂಘದ ಮಾಜಿ ಅಧ್ಯಕ್ಷ, ಭಜನಾ ಮಂಡಳಿಯ ಸಂಚಾಲಕ ಆಗಿದ್ದರು. ಅವರು ದಂಪತಿ ಸಹಿತವಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಆಘಾತವುಂಟು ಮಾಡಿದೆ. ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಇಂದು ಸಾಯಂಕಾಲ 4 ಘಂಟೆಯ ನಂತರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
