Updated News From Kaup

ಪಡುಬಿದ್ರಿ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಸಭೆ

Posted On: 08-10-2023 06:25PM

ಪಡುಬಿದ್ರಿ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರದ ಬಗ್ಗೆ ಇಂದು ಸಾರ್ವಜನಿಕ ಸಭೆಯು ಜರಗಿತು.

ಈ ಸಂದರ್ಭದಲ್ಲಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಪ್ರಕಾಶ್ ಶೆಟ್ಟಿ, ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ದೇವಳದ ಅನುವಂಶಿಕ ಮೊಕ್ತೇಸರ ಭವಾನಿ ಶಂಕರ್ ಹೆಗ್ಡೆ, ಪಡುಬಿದ್ರಿ ಬೀಡು ರತ್ನಾಕರ ರಾಜ್ ಅರಸ್ ಕಿನ್ಯಕ್ಕ ಬಲ್ಲಾಳ್, ಅರ್ಚಕರಾದ ಪದ್ಮನಾಭ ಭಟ್, ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾವಡ, ಸಮಿತಿ ಸದಸ್ಯರಾದ ಶ್ರೀಧರ ಆಚಾರ್, ಕಾರ್ಯನಿರ್ವಹಣಾಧಿಕಾರಿ ಅಶೋಕ್ ಕೋಟೆಕಾರ್, ಗ್ರಾಮಸ್ಥರು ಉಪಸ್ಥಿತರಿದ್ದರು.

ಪಡುಬಿದ್ರಿ : ಸಾಂತೂರು ವ್ಯಕ್ತಿ ನಾಪತ್ತೆ

Posted On: 08-10-2023 12:34PM

ಪಡುಬಿದ್ರಿ : ಇಲ್ಲಿನ ಸಾಂತೂರು ಗ್ರಾಮದ ನಿವಾಸಿ ಸುರೇಶ್ ಮೂಲ್ಯ ರವರು ಅಕ್ಟೋಬರ್ 5 ರಿಂದ ನಾಪತ್ತೆಯಾಗಿರುವರು,ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಯಾರಿಗಾದರೂ ತಿಳಿದು ಬಂದಲ್ಲಿ ಪಡುಬಿದ್ರಿ ಪೊಲೀಸ್ ಠಾಣೆ (08202555452)ಯನ್ನು ಸಂಪರ್ಕಿಸಲು ಕೊರಲಾಗಿದೆ.

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಜನಪರ ಕಾರ್ಯ ಶ್ಲಾಘನೀಯ - ಡಾ|ದೇವಿಪ್ರಸಾದ್ ಶೆಟ್ಟಿ ಬೆಳಪು

Posted On: 08-10-2023 11:40AM

ಪಡುಬಿದ್ರಿ : ಈ ಭಾಗದಲ್ಲಿ ಯಶಸ್ಸು ಕಂಡ ಸಹಕಾರಿ‌ ಸಂಸ್ಥೆ ಪಡುಬಿದ್ರಿ ಸೊಸೈಟಿಯು ಲಾಭದ ಉದ್ದೇಶ ಹೊಂದದೆ ಜನಪರ ಕಾರ್ಯಕ್ರಮಗಳ ಮೂಲಕ ಅಭಿವೃದ್ಧಿ ಕಂಡಿದೆ. ಅದರಲ್ಲೂ ಗ್ರಾಮದ ಜನರ ಆರೋಗ್ಯದ ಬಗೆಯೂ ಕಾಳಜಿ ಹೊಂದಿದೆ. ಅದರಂತೆ ಗ್ರಾಮದ ಜನರಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದು ಬೆಳಪು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷರಾದ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದರು. ಅವರು ಭಾನುವಾರ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ (ನಿ), ಪ್ರಾಥಮಿಕ ಆರೋಗ್ಯ ಕೇಂದ್ರ ಪಡುಬಿದ್ರಿ ಹಾಗೂ ಶ್ರೀನಿವಾಸ ಆಸ್ಪತ್ರೆ ಇವರ ಆಶ್ರಯದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಶಿಬಿರದಲ್ಲಿ ವೈದ್ಯಕೀಯ ವಿಭಾಗ, ಚರ್ಮ, ಮಕ್ಕಳ ವಿಭಾಗ, ಕಿವಿಮೂಗು ಗಂಟಲು ವಿಭಾಗ, ಸ್ತ್ರೀರೋಗ ವಿಭಾಗ, ಎಲುಬು ಮತ್ತು ಕೀಲು ವಿಭಾಗ, ಹೃದಯ ರೋಗ, ಕಣ್ಣಿನ ವಿಭಾಗ, ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಪ್ರಯೋಜನ ಪಡೆದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಅಧ್ಯಕ್ಷರಾದ ವೈ ಸುಧೀರ್ ಕುಮಾರ್ ವಹಿಸಿದ್ದರು.

ಈ ಸಂದರ್ಭ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಜಶ್ರೀ ಕಿಣಿ, ಮುಕ್ಕ ಶ್ರೀನಿವಾಸ ಆಸ್ಪತ್ರೆಯ ವೈದ್ಯಾಧಿಕಾರಿ ಶಶಿರಾಜ್ ಶೆಟ್ಟಿ, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ದೀಪಕ್ ಸಾಲ್ಯಾನ್, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಉಪಾಧ್ಯಕ್ಷರಾದ ಗುರುರಾಜ್ ಪೂಜಾರಿ, ಸೊಸೈಟಿಯ ನಿರ್ದೇಶಕರು, ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಮಾಧವ ಆಚಾರ್ಯ ಪ್ರಾರ್ಥಿಸಿ, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಅಧ್ಯಕ್ಷರಾದ ವೈ ಸುಧೀರ್ ಕುಮಾರ್ ಸ್ವಾಗತಿಸಿದರು. ಸೊಸೈಟಿಯ ನಿರ್ದೇಶಕಿ ಸುಚರಿತ ಎಲ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು. ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಉಪಾಧ್ಯಕ್ಷರಾದ ಗುರುರಾಜ್ ಪೂಜಾರಿ ವಂದಿಸಿದರು.

ಕಾಪು : ಚಿರತೆ ಕಳೇಬರ ಪತ್ತೆ ; ದಹನ

Posted On: 07-10-2023 10:37PM

ಕಾಪು : ಬೆಳೆ ಸಮೀಕ್ಷೆಗೆ ತೆರಳಿದ್ದ ತಂಡಕ್ಕೆ ಚಿರತೆಯೊಂದರ ಕಳೇಬರ ಸಿಕ್ಕಿದ ಘಟನೆ ಶುಕ್ರವಾರ ಇನ್ನಂಜೆ ಗ್ರಾ.ಪಂ. ವ್ಯಾಪ್ತಿಯ ಕಲ್ಲುಗುಡ್ಡೆ - ಕುಂಜಾರ್ಗ ಬಳಿಯ ಕಾಡಿನಲ್ಲಿ ಸಂಭವಿಸಿದೆ.

ಬೆಳೆ ಸಮೀಕ್ಷೆಗೆ ತೆರಳಿದ್ದ ಗ್ರಾಮ ಆಡಳಿತಾಧಿಕಾರಿ ಅವಿನಾಶ್ ಮತ್ತು ಗ್ರಾಮ ಸಹಾಯಕ ಜೇಸುದಾಸ್ ಸೋನ್ಸ್ ಅವರು ಕುಂಜಾರ್ಗ ರಾಜೇಂದ್ರ ಮಾಸ್ಟ್ರಮನೆ ಬಳಿ ಚಿರತೆ ಕಳೇಬರವನ್ನು ಗಮನಿಸಿದ್ದು ಗ್ರಾಮ ಪಂಚಾಯತ್‌ಗೆ ಮಾಹಿತಿ ನೀಡಿದ್ದರು. ಇನ್ನಂಜೆ ಗ್ರಾ. ಪಂ. ಅಧ್ಯಕ್ಷೆ ಮಾಲಿನಿ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿದ್ದು ಬಳಿಕ ಅರಣ್ಯ ಇಲಾಖೆ ಮತ್ತು ಪಶು ಇಲಾಖೆಗೆ ವಿಷಯ ತಿಳಿಸಿದ್ದರು.

ಕುಂದಾಪುರ ಉಪವಿಭಾಗದ ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ ಪಡುಬಿದ್ರಿ ಉಪ ವಲಯ ಅರಣ್ಯಾಧಿಕಾರಿಗಳಾದ ಜೀವನ್‌ದಾಸ್ ಶೆಟ್ಟಿ, ಗುರುರಾಜ್ ಕೆ. ಹಾಗೂ ಕಾಪು ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿ ಡಾ| ಅರುಣ್ ಹೆಗ್ಡೆ ಸ್ಥಳಕ್ಕೆ ಆಗಮಿಸಿ ಚಿರತೆಯ ಮೃತದೇಹ ಪರಿಶೀಲನೆ ನಡೆಸಿದರು. ಸುಮಾರು ಮೂರೂವರೆ ವರ್ಷ ಪ್ರಾಯದ ಗಂಡು ಚಿರತೆ ಯಾವುದೋ ಕಾರಣದಿಂದ ಬಾಯಿ ಗಾಯಕ್ಕೊಳಗಾಗಿ ಕೆಲವು ದಿನಗಳ ಕಾಲ ಆಹಾರ ಸೇವಿಸಲಾಗದೇ ಸಾವಿಗೀಡಾಗಿರುವ ಸಾಧ್ಯತೆಗಳಿವೆ ಎಂದು ಪರಿಶೀಲನೆ ನಡೆಸಿದ ಪಶು ವೈದ್ಯಾಧಿಕಾರಿ ಡಾ| ಅರುಣ್ ಹೆಗ್ಡೆ ತಿಳಿಸಿದ್ದಾರೆ.

ಈ ಸಂದರ್ಭ ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲಿನಿ ಶೆಟ್ಟಿ, ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗ, ಸ್ಥಳೀಯರ ಸಹಕಾರದಿಂದ ಚಿರತೆ ಕಳೇಬರವನ್ನು ದಹಿಸಲಾಯಿತು.

ಕಾಪು : ಶ್ರೀ ಹೊಸ ಮಾರಿಗುಡಿ ದೇವಸ್ಥಾನ - ಸಮಾಲೋಚನಾ ಸಭೆ

Posted On: 05-10-2023 09:46PM

ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಶಾಸಕರು, ಉದ್ಯಮಿಗಳು, ಗಣ್ಯರ ಸಮಾಲೋಚನಾ ಸಭೆಯು ಅಕ್ಟೋಬರ್ 3 ರಂದು ಮಾರಿಗುಡಿಯ ನವದುರ್ಗಾ ಮಂಟಪದಲ್ಲಿ ನಡೆಯಿತು. ಗಣ್ಯ ಮಹಿಳೆಯರಾದ ನಿರುಪಮಾ ಪ್ರಸಾದ್, ಸ್ವಪ್ನ ಸುರೇಶ್, ವಿಜಯ ಗೋಪಾಲ ಬಂಗೇರ, ಕವಿತ ಹರೀಶ್, ಬೇಬಿ ಕುಂದರ್, ಅಮೃತಾ ಕೃಷ್ಣ ಮೂರ್ತಿ, ಸ್ವರೂಪ ಶೆಟ್ಟಿ, ಮೀನಾ ಅಡ್ಯಂತಾಯ, ರೂಪಾ ಶೋಧನ್ ಶೆಟ್ಟಿ ಸಮಾಲೋಚನಾ ಸಭೆಯನ್ನು ದೀಪ ಬೆಳಗಿಸಿ ಅಮ್ಮನಿಗೆ ಆರತಿ ಎತ್ತುವ ಮೂಲಕ ಉದ್ಘಾಟಿಸಿದರು.

ಪ್ರಧಾನ ಅರ್ಚಕ ವೇ| ಮೂ| ಶ್ರೀನಿವಾಸ ತಂತ್ರಿ ಕಲ್ಯ ಅವರ ನೇತೃತ್ವದಲ್ಲಿ ಮಾರಿಯಮ್ಮ ದೇವಿಯ ಸನ್ನಿಧಾನದಲ್ಲಿ ದರ್ಶನ ಸೇವೆಯಲ್ಲಿ ಅಭಯ ಪ್ರಸಾದ ನೀಡಲಾಯಿತು. ನಂತರ ಸಂಪೂರ್ಣ ಇಳಕಲ್ ಶಿಲೆಯಿಂದ ನಿರ್ಮಾಣಗೊಳ್ಳುತ್ತಿರುವ ಹೊಸ ಮಾರಿಗುಡಿ, ಉಚ್ಚಂಗಿ ಗುಡಿ ಸಹಿತವಾಗಿ ದೇವಸ್ಥಾನದ ಸಮಗ್ರ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ, ಪರಿಶೀಲಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಮಿತಿ ಕಾರ್ಯಾಧ್ಯಕ್ಷ ಮತ್ತು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಮುಂದಿನ 1200 ವರ್ಷಗಳವರೆಗೆ ಬಾಳಿಕೆ ಬರುವಂತಹ ಇಳಕಲ್ ಶಿಲೆಯನ್ನು ಬಳಸಿಕೊಂಡು ಹೊಸ ಮಾರಿಗುಡಿ ಜೀರ್ಣೋದ್ಧಾರಗೊಳ್ಳುತ್ತಿದೆ. ಜೀರ್ಣೋದ್ಧಾರಕ್ಕೆ ಎಲ್ಲೆಡೆ ಉತ್ತಮ ಸ್ಪಂದನೆ ದೊರಕುತ್ತಿದೆ. ಪ್ರಪಂಚದ 18 ದೇಶಗಳಲ್ಲಿ ಸಮಿತಿ ರಚಿಸಲಾಗಿದ್ದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲೂ ಸಮಿತಿ ರಚಿಸಲು ಒತ್ತು ನೀಡಲಾಗುತ್ತಿದೆ. ಇದಕ್ಕೆ ಎಲ್ಲರ ಸಹಕಾರದ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದರು. ಜಿಲ್ಲೆಯ ಶಾಸಕರಾದ ಗುರುರಾಜ್ ಗಂಟಿಹೊಳೆ, ಕಿರಣ್ ಕುಮಾರ್ ಕೊಡ್ಗಿ, ಯಶ್‌ಪಾಲ್ ಸುವರ್ಣ, ಕೆ.ಎಂ.ಎಫ್ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ಗಣ್ಯರಾದ ಜೆರ್ರಿ ವಿನ್ಸೆಂಟ್ ಡಯಾಸ್, ಬಿ.ಎನ್. ಶಂಕರ ಪೂಜಾರಿ, ಜಯ ಸಿ. ಕೋಟ್ಯಾನ್, ಗೋಪಾಲ್ ಬಂಗೇರ, ರಮೇಶ್ ಕಾಂಚನ್, ಜನಾರ್ದನ ತೋನ್ಸೆ, ಅಶೋಕ್ ಶೆಟ್ಟಿ, ಪಿ. ಕಿಶನ್ ಹೆಗ್ಡೆ, ಅಜಯ್ ಪಿ. ಶೆಟ್ಟಿ, ವಿ.ಜಿ. ಶೆಟ್ಟಿ, ಮೋಹನಚಂದ್ರ ನಂಬಿಯಾರ್, ನವೀನ್ ಅಡ್ಯಂತಾಯ, ದಿವಾಕರ್ ಸನಿಲ್, ಶೋಧನ್ ಕುಮಾರ್ ಶೆಟ್ಟಿ ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ವಾಗ್ಧಾನ ನೀಡಿದರು. ಪ್ರಮುಖರಾದ ಕೆ. ಉದಯ ಕುಮಾರ್ ಶೆಟ್ಟಿ, ನಾಗೇಶ್ ಹೆಗ್ಡೆ, ಸಾಧು ಸಾಲ್ಯಾನ್, ಆನಂದ್ ಕುಂದರ್, ಮಟ್ಟಾರು ರತ್ನಾಕರ್ ಹೆಗ್ಡೆ, ಜಯಕರ್ ಶೆಟ್ಟಿ ಇಂದ್ರಾಳಿ, ಮನೋಹರ್ ಶೆಟ್ಟಿ ತೊನ್ಸೆ, ಕುಯಿಲಾಡಿ ಸುರೇಶ್ ನಾಯಕ್, ಶ್ರೀಕಾಂತ್ ಹೆಬ್ರಿ, ಕಿರಣ್ ಕುಮಾರ್, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಸುಪ್ರಸಾದ್ ಶೆಟ್ಟಿ, ದಿನಕರ್ ಶೆಟ್ಟಿ, ಸುರೇಶ್ ಶೆಟ್ಟಿ ಉಡುಪಿ, ಉದಯ ಶೆಟ್ಟಿ ಇನ್ನ, ಶ್ರೀಪತಿ ಭಟ್, ಸುಧಿರ್ ಶೆಟ್ಟಿ, ಕೀರ್ತಿ ಅಂಬಲಪಾಡಿ, ರಾಮದಾಸ್ ಶೆಟ್ಟಿಗಾರ್, ಸುರೇಂದ್ರ ಪಣಿಯೂರು, ಶಿಲ್ಪಾ ಜಿ. ಸುವರ್ಣ, ಗೀತಾಂಜಲಿ ಎಂ. ಸುವರ್ಣ, ರೇಷ್ಮಾ ಯು. ಶೆಟ್ಟಿ, ವಿವಿಧ ಸಮುದಾಯ ಮತ್ತು ರಾಜಕೀಯ ಪಕ್ಷಗಳ ಮುಖಂಡರು, ಹೊಸ ಮಾರಿಗುಡಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ, ಗಂಗಾಧರ ಸುವರ್ಣ, ಮನೋಹರ ಶೆಟ್ಟಿ, ಮಾಧವ ಆರ್. ಪಾಲನ್, ಗೌರವ ಸಲಹೆಗಾರ ನಡಿಕೆರೆ ರತ್ನಾಕರ ಶೆಟ್ಟಿ, ಗ್ರಾಮ ಸಮಿತಿಯ ಪ್ರಧಾನ ಸಂಚಾಲಕರಾದ ಜಿ. ಲೀಲಾಧರ ಶೆಟ್ಟಿ, ಅರುಣ್ ಶೆಟ್ಟಿ ಪಾದೂರು, ಕಾಪು ಪುರಸಭಾ ವ್ಯಾಪ್ತಿಯ ವಾರ್ಡ್ ಸಮಿತಿಯ ಪ್ರಧಾನ ಸಂಚಾಲಕರಾದ ಶ್ರೀಕರ ಶೆಟ್ಟಿ ಕಲ್ಯಾ, ಆರ್ಥಿಕ ಸಮಿತಿಯ ಮುಖ್ಯ ಸಂಚಾಲಕರುಗಳಾದ ರತ್ನಾಕರ ಹೆಗ್ಡೆ ಕಲ್ಯಾ, ರಮೇಶ್ ಶೆಟ್ಟಿ ಕಾಪು ಕೊಲ್ಯ, ಪ್ರಚಾರ ಸಮಿತಿಯ ಸಂಚಾಲಕರುಗಳಾದ ಜಯರಾಮ್ ಆಚಾರ್ಯ, ರಘುರಾಮ್ ಶೆಟ್ಟಿ ಕೊಪ್ಪಲಂಗಡಿ, ಆರ್ಥಿಕ ಸಮಿತಿಯ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರು, ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಪ್ರಸ್ತಾವನೆಗೈದರು. ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ಶೆಟ್ಟಿ ಬಾಲಾಜಿ ವಂದಿಸಿದರು. ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅವ್ಯವಹಾರ - ಕಾಂಗ್ರೆಸ್ ಪಕ್ಷದಿಂದ ಬೃಹತ್ ಪ್ರತಿಭಟನಾ ಸಭೆ

Posted On: 05-10-2023 09:30PM

ಕಾಪು : ದ.ಕ ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ಬ್ರಹ್ಮಾವರ ಇದರ ಹಳೆ ಸಾಮಾಗ್ರಿಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡುವುದರ ಮೂಲಕ ಅವ್ಯವಹಾರ ನಡೆಸಿ ಕಾರ್ಖಾನೆಯ ಸದಸ್ಯರಿಗೆ ಮತ್ತು ರೈತರಿಗೆ ವಂಚಿಸಿರುವ ಆಡಳಿತ ಮಂಡಳಿಯ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ, ಎಲ್ಲಾ ಬ್ಲಾಕ್ ಸಮಿತಿಗಳ ಸಹಭಾಗಿತ್ವದಲ್ಲಿ ಅಕ್ಟೋಬರ್ 9, ಸೋಮವಾರ ಬೆಳಿಗ್ಗೆ 10 ಗಂಟೆಗೆ, ಬ್ರಹ್ಮಾವರ - ಸಕ್ಕರೆ ಕಾರ್ಖಾನೆಯ ಎದುರು ಬೃಹತ್ ಪ್ರತಿಭಟನಾ ಸಭೆ ಯನ್ನು ಹಮ್ಮಿಕೊಳ್ಳಲಾಗಿದೆ.

ಈ ಬಗ್ಗೆ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಮತ್ತು ಕಾಪು ಕಾಂಗ್ರೆಸ್ ಪಕ್ಷದ ಉಭಯ ಬ್ಲಾಕ್ ಸಮಿತಿಗಳ ಅಧ್ಯಕ್ಷರುಗಳು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

ಬೆಳಪು : ಈಜಲು ತೆರಳಿದ್ದ ಬಾಲಕ ಸಾವು ; ಮೂವರ ರಕ್ಷಣೆ

Posted On: 05-10-2023 08:28PM

ಬೆಳಪು : ಇಲ್ಲಿನ ಔದ್ಯೋಗಿಕ ನಗರದ ಗುಂಡಿಯೊಂದರಲ್ಲಿ ಈಜಲು ತೆರಳಿದ್ದ ನಾಲ್ವರು ಮಕ್ಕಳಲ್ಲಿ ಓರ್ವ ಮೃತಪಟ್ಟಿದ್ದು ಮೂವರನ್ನು ಸ್ಥಳೀಯರು ರಕ್ಷಣೆ ಮಾಡಿದ ಘಟನೆ ಗುರುವಾರ ಸಂಜೆ ಘಟಿಸಿದೆ. ಮೃತ ಬಾಲಕನನ್ನು ಬೆಳಪು ವಸತಿ ಬಡಾವಣೆಯ ನಿವಾಸಿ ವಿಶ್ವಾಸ್ (11) ಎಂದು ಗುರುತಿಸಲಾಗಿದೆ. ಈತ ಇನ್ನಂಜೆ ಶಾಲೆಯ ವಿದ್ಯಾರ್ಥಿ.

ವಿಶ್ವಾಸ್ ನಾಲ್ವರೊಂದಿಗೆ ಔದ್ಯೋಗಿಕ ನಗರದಲ್ಲಿ ನೀರು ತುಂಬಿದ್ದ ಗುಂಡಿಯೊಂದರಲ್ಲಿ ಈಜಲು ತೆರಳಿದ್ದರು. ತೀವ್ರ ಅಸ್ವಸ್ಥಗೊಂಡ ವಿಶ್ವಾಸ್ ನನ್ನು ಸ್ಥಳೀಯರಾದ ಜಹೀರ್ ಅಹ್ಮದ್ ಬೆಳಪು, ಉಚ್ಚಿಲದ ಜಲಾಲ್, ಹಂಝ, ಮೋಹಿಯುದ್ದೀನ್, ಶಾಹಿದ್ ರವರು ತುರ್ತಾಗಿ ಬಾಲಕನನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯುವ ಹಾದಿಯಲ್ಲಿ ಮೃತಪಟ್ಟಿದ್ದಾನೆ. ಮೃತ ಶರೀರವನ್ನು ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಬಗ್ಗೆ ಶಿರ್ವ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

ಕಾಪು : ಕಳತ್ತೂರು ಫ್ರೆಂಡ್ಸ್ ವತಿಯಿಂದ ವೀಲ್ ಚೇರ್, ಔಷಧಿ ವೆಚ್ಚ ಹಸ್ತಾಂತರ

Posted On: 04-10-2023 07:54PM

ಕಾಪು : ಕಳತ್ತೂರು ಫ್ರೆಂಡ್ಸ್ ವತಿಯಿಂದ ಸಮಾಜ ಸೇವಾರ್ಥ ನಡೆದ ಪ್ರಥಮ ವರ್ಷದ ಪಿಲಿನಲಿಕೆ ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣದಲ್ಲಿ ಅನಾರೋಗ್ಯ ಪೀಡಿತರಾದ ಅದಮಾರಿನ ರಾಜೇಶ್ ಕುಲಾಲ್ ಅವರಿಗೆ ವೀಲ್ ಚೇರ್ ಮತ್ತು ಅವರ ಒಂದು ತಿಂಗಳ ಔಷಧಿಯ ವೆಚ್ಚವನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭ ಕಳತ್ತೂರು ಫ್ರೆಂಡ್ಸ್ ತಂಡದ ಸದಸ್ಯರು ಉಪಸ್ಥಿತರಿದ್ದರು.

ಕಾಪು : ಅಲೆವೂರು ಪ್ರಗತಿ ನಗರಕ್ಕೆ ಕಾಪು ಶಾಸಕರ ಭೇಟಿ ; ಅಹವಾಲು ಸ್ವೀಕಾರ

Posted On: 04-10-2023 07:46PM

ಕಾಪು : ಅಲೆವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರಗತಿ ನಗರಕ್ಕೆ ಬುಧವಾರ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಭೇಟಿ ನೀಡಿ ಜನರ ಕುಂದು ಕೊರತೆಯನ್ನು ಆಲಿಸಿ ಅಹವಾಲುಗಳನ್ನು ಸ್ವೀಕರಿಸಿದರು.

ರಸ್ತೆ ನಿರ್ಮಾಣ ಹಾಗೂ ನಿವೇಶನ, ಹಕ್ಕುಪತ್ರ ಸಮಸ್ಯೆ ಬಗ್ಗೆ ಸ್ಥಳೀಯರು ಶಾಸಕರಿಗೆ ಅಹವಾಲು ನೀಡಿದ್ದು ಈ ಬಗ್ಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಪರಿಹರಿಸುವುದಾಗಿ ಶಾಸಕರು ತಿಳಿಸಿದರು.

ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್, ಅಲೆವೂರು ಗ್ರಾಮ ಪಂಚಾಯತ್ ಸದಸ್ಯರಾದ ಶೇಖರ ಆಚಾರ್ಯ, ಅವಿನಾಶ್ ಶೆಟ್ಟಿಗಾರ್, ಆಶೀಶ್, ಅಕ್ಷಯ ಎಂಟರ್ಪ್ರೈಸಸ್ ಅರವಿಂದ ನಾಯಕ್, ಬೂತ್ ಅಧ್ಯಕ್ಷರಾದ ಮಂಜು ಉಪಸ್ಥಿತರಿದ್ದರು.

ಬೋಳ ಕುಲಾಲ ಸಂಘ ಹಾಗೂ ನಾನಿಲ್ತಾರು ಕುಲಾಲ ಸಂಘದಿಂದ ವೈದ್ಯಕೀಯ ನೆರವು

Posted On: 04-10-2023 07:39PM

ಕಾರ್ಕಳ : ಇಲ್ಲಿನ ಭಾರತಿ ಕುಲಾಲ್ ಇವರಿಗೆ ಬೋಳ ಕುಲಾಲ ಸಂಘದ ವತಿಯಿಂದ ಸಂಗ್ರಹಗೊಂಡ ರೂ. 27 ಸಾವಿರ ಹಾಗೂ ನಾನಿಲ್ತಾರ್ ಕುಲಾಲ ಸಂಘದ ವತಿಯಿಂದ ರೂ. 3 ಸಾವಿರದ ಚೆಕ್ ನ್ನು ಭಾರತಿ ಅವರ ವೈದ್ಯಕೀಯ ಚಿಕಿತ್ಸೆಗೆ ನೀಡಲಾಯಿತು.

ಹಸ್ತಾಂತರ ಸಂದರ್ಭದಲ್ಲಿ ಕುಲಾಲ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.