Updated News From Kaup
ಉದ್ಯಾವರ : ಗ್ರಾಮ ಪಂಚಾಯತ್ ಅಧ್ಯಕ್ಷೆ ಸಹಿತ ಇಬ್ಬರು ಕಾಂಗ್ರೆಸ್ ಸೇರ್ಪಡೆ
Posted On: 30 Nov 2023, 02:56 PM
ಉದ್ಯಾವರ : ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಅಧಿಕೃತ ಅಧ್ಯಕ್ಷ ಅಭ್ಯರ್ಥಿಯ ಸೋಲಿಗೆ ಕಾರಣರಾಗಿದ್ದ ಬಿಜೆಪಿ ಬೆಂಬಲದಿಂದ ಆಯ್ಕೆಯಾಗಿದ್ದ ಗ್ರಾಮ ಪಂಚಾಯತ್ ಸದಸ್ಯರಿಬ್ಬರು ಮಾಜಿ ಸಚಿವರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಂಡರು. ಬಿಜೆಪಿಯ ಅಧಿಕೃತ ಅಧ್ಯಕ್ಷೆ ಅಭ್ಯರ್ಥಿಯ ವಿರುದ್ಧ ಬಂಡಾಯವೆದ್ದು ಕಾಂಗ್ರೆಸ್ ಬೆಂಬಲದಿಂದ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ 12ನೇ ವಾರ್ಡ್ ನ ಮಾಲತಿ ಸಂದೀಪ್ ಮತ್ತು ಮೂರು ಬಾರಿ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದ ಗಿರೀಶ್ ಸುವರ್ಣ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕಾಪು ಬ್ಲಾಕ್ ಕಾಂಗ್ರೆಸ್ ಉತ್ತರ ವಲಯ ಅಧ್ಯಕ್ಷ ಸಂತೋಷ್ ಕುಲಾಲ್, ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ರೋಯ್ಸ್ ಫೆರ್ನಾoಡೀಸ್, ನಾಗೇಶ್ ಕುಮಾರ್ ಉದ್ಯಾವರ ಮತ್ತು ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಕಾಪು : ವಿಶ್ವೇಶತೀರ್ಥ ವಿದ್ಯಾಲಯದ ನೂತನ ಶಾಲಾ ಕಟ್ಟಡ ಉದ್ಘಾಟನೆ
Posted On: 30 Nov 2023, 02:51 PM
ಕಾಪು : ಊರು ಉದ್ಧಾರವಾಗಲು ಮಂದಿರ, ಶಾಲೆ, ವೈದ್ಯಕೀಯ ವ್ಯವಸ್ಥೆ ಜೊತೆಗೆ ಉದ್ಯೋಗ ಕಲ್ಪಿಸುವ ವ್ಯವಸ್ಥೆ ಇರಬೇಕು. ಊರೊಳಗೆ ಈ ಎಲ್ಲಾ ವ್ಯವಸ್ಥೆಗಳು ಇದ್ದಲ್ಲಿ ಸಮಗ್ರ ಬೆಳವಣಿಗೆ ಕಾಣಲು ಸಾಧ್ಯ. ಉತ್ತಮ ಶಿಕ್ಷಣ ಬದುಕಿನಲ್ಲಿ ಸಾರ್ಥಕತೆ ಗಳಿಸಲು ಸಾಧ್ಯ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ಅವರು ವಿದ್ಯಾಸಾಗರ ಎಜಕೇಶನ್ ಟ್ರಸ್ಟ್ ಇದರ ಆಡಳಿತಕ್ಕೊಳಪಟ್ಟ ಶಿಕ್ಷಣ ಸಂಸ್ಥೆ ಕೈಪುಂಜಾಲು ಚೆನ್ನಪ್ಪ ಸಾಹುಕಾರ್ ರವರ ಸ್ಮರಣಾರ್ಥ ವಿಶ್ವೇಶತೀರ್ಥ ವಿದ್ಯಾಲಯದ ನೂತನ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಶಾಲೆಯ ನೂತನ ಸಭಾಭವನ ಉದ್ಘಾಟಿಸಿ ಮಾತನಾಡಿದ ಉಡುಪಿಯ ಡಾ. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ. ಜಿ. ಶಂಕರ್ ಮಾತನಾಡಿ ಸತೀಶ್ ಕುಂದರ್ ತಂಡದಿಂದ ಈ ಶಿಕ್ಷಣ ಸಂಸ್ಥೆ ಮೂಡಿ ಬಂದಿದೆ. ದಾನಿಗಳು ಶಿಕ್ಷಣ ಸಂಸ್ಥೆಗೆ ತಮ್ಮಿಂದಾದ ಸಹಾಯ ಮಾಡಬಹುದು. ಆದರೆ ಸಂಸ್ಥೆಯ ಬೆಳವಣಿಗೆಯು ಉತ್ತಮ ಸಂಸ್ಕಾರಯುತ ಶಿಕ್ಷಣದ ಮೇಲೆ ಅವಲಂಬಿತವಾಗಿದೆ. ಈ ಜವಾಬ್ದಾರಿ ಶಿಕ್ಷಕ ವರ್ಗಕ್ಕಿದೆ ಎಂದರು. ಸಮ್ಮಾನ : ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ಪೇಜಾವರ ಶ್ರೀಗಳನ್ನು ವಿವಿಧ ಫಲಗಳ ಸಹಿತ ಪುಷ್ಪ ಸಿಂಚನದೊಂದಿಗೆ ಗೌರವಿಸಲಾಯಿತು. ಉಡುಪಿಯ ಡಾ. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ. ಜಿ. ಶಂಕರ್, ಬೆಂಗಳೂರಿನ ಏಸ್ ಸಂಸ್ಥೆಯ ಅಧ್ಯಕ್ಷ ರಾಮದಾಸ್ ಪುತ್ತಿಗೆ, ಶಾಲಾ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಸತೀಶ್ ಕುಂದರ್, ರವಿ ಕುಮಾರ್, ಲಕ್ಷ್ಮೀಶ ತಂತ್ರಿ ಮೊದಲಾದವರನ್ನು ಪೇಜಾವರ ಶ್ರೀಗಳು ಸಮ್ಮಾನಿಸಿದರು. ಈ ಸಂದರ್ಭ ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಬೆಂಗಳೂರಿನ ಏಸ್ ಸಂಸ್ಥೆಯ ಅಧ್ಯಕ್ಷ ರಾಮದಾಸ್ ಪುತ್ತಿಗೆ, ಕಾಪು ದೇವಿಪ್ರಸಾದ್ ಕನ್ ಸ್ಟ್ರಕ್ಷನ್ ನ ವಾಸುದೇವ ಶೆಟ್ಟಿ, ಮತ್ಸ್ಯೋದಮಿಗಳಾದ ಸಾಧು ಸಾಲ್ಯಾನ್, ಹರಿಯಪ್ಪ ಸಾಲ್ಯಾನ್, ಪಾಜಕ ಆನಂದ ತೀರ್ಥ ವಿದ್ಯಾಲಯದ ಕಾರ್ಯದರ್ಶಿ ಬಿ. ಸುಬ್ರಹ್ಮಣ್ಯ ಸಾಮಗ, ಶಿಕ್ಷಣ ತಜ್ಞ ವಾಸುದೇವ ಭಟ್, ಕಾಪು ದಂಡತೀರ್ಥ ಪ್ರತಿಷ್ಠಾನದ ಸೀತಾರಾಮ ಭಟ್, ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ, ಪ್ರಭಾಕರ ಪೂಜಾರಿ, ನಾಗರಾಜ ಸುವರ್ಣ, ಪ್ರವೀಣ್ ಶ್ರೀಯಾನ್, ಚಂದ್ರಶೇಖರ ಅಮೀನ್, ಮುಖ್ಯ ಶಿಕ್ಷಕ ಸಾಕ್ಷತ್ ಯು.ಕೆ, ದಯಾವತಿ ಕುಂದರ್, ವಿನೋದ್ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು.
ಕಾಪು ಮಾರಿಯಮ್ಮನ ಪ್ರಸಾದದಿಂದ ಬೆಂಗಳೂರು ಕಂಬಳ ಗೆಲ್ಲುವಂತಾಯಿತು : ನಂದಳಿಕೆ ಶ್ರೀಕಾಂತ್ ಭಟ್
Posted On: 29 Nov 2023, 07:04 PM
ಕಾಪು : ತುಳುನಾಡಿನ ಸಪ್ತ ಜಾತ್ರೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಕಾಪು ಮಾರಿಯಮ್ಮನ ದಿವ್ಯ ಸಾನಿಧ್ಯವಾದ ಕಾಪು ಹೊಸ ಮಾರಿಗುಡಿ ದೇವಳದಲ್ಲಿ ನವೆಂಬರ್ 28 ಮತ್ತು 29 ರಂದು ಕಾಲಾವಧಿ ಜಾರ್ದೆ ಮಾರಿ ಪೂಜೆಯು ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ನಡೆಯಿತು. ಬೆಂಗಳೂರು ಕಂಬಳ ಸಮಿತಿಯ ಗೌರವಾದ್ಯಕ್ಷರು ಮತ್ತು ಕಾಪು ಹೊಸ ಮಾರಿಗುಡಿ ದೇವಸ್ಥಾನದ ಗೌರವಾಧ್ಯಕ್ಷರಾದ ಎಮ್. ಆರ್.ಜಿ ಗ್ರೂಪ್ ನ ಆಡಳಿತ ನಿರ್ದೇಶಕರಾದ ಉದ್ಯಮಿ ಕೊರಂಗ್ರಪಾಡಿ ದೊಡ್ಡಮನೆ ಪ್ರಕಾಶ್ ಶೆಟ್ಟಿ ಹಾಗೂ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ನಡೆದ ಬೆಂಗಳೂರು ಕಂಬಳ ನಮ್ಮ ಕಂಬಳದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಚಿನ್ನದ ಪದಕವನ್ನು ಹೆಗಲಿಗೆರಿಸಿಕೊಂಡ ನಂದಳಿಕೆ ಶ್ರೀಕಾಂತ್ ಭಟ್ ಅವರು ದೇವಸ್ಥಾನಕ್ಕೆ ಭೇಟಿಕೊಟ್ಟು ಭರದಿಂದ ಸಾಗುತ್ತಿರುವ ಜೀರ್ಣೋದ್ಧಾರ ಕಾರ್ಯಗಳನ್ನು ವೀಕ್ಷಿಸಿ ಶ್ರೀದೇವಿಯ ದರುಶನವನ್ನು ಪಡೆದು ಕ್ಷೇತ್ರದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯಾ ಇವರಿಂದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿಯವರ ಸಮ್ಮುಖದಲ್ಲಿ ಅಮ್ಮನ ಅನುಗ್ರಹ ಪ್ರಸಾದವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಉದ್ಯಾನ ನಗರಿ, ರಾಜ್ಯ ರಾಜಧಾನಿಯಲ್ಲಿ ನಡೆದ ಪ್ರಥಮ ಕಂಬಳದಲ್ಲಿ ಪ್ರಥಮ ಬಹುಮಾನ ಕಾಪುವಿನ ಅಮ್ಮನ ದಯೆಯಿಂದ ನಮಗೆ ಬಂದಿದೆ. ಪ್ರತೀ ಕಂಬಳಕ್ಕೂ ಹೊರಡುವ ಮುನ್ನ ಅಮ್ಮನ ಪ್ರಸಾದ ಹಿಡಿದುಕೊಂಡೆ ನಾನು ಇಲ್ಲಿಂದ ಹೊರಡುವುದು, ಈ ಬಾರಿಯೂ ಅಮ್ಮನ ಪ್ರಸಾದವನ್ನು ಕೋಣಗಳಿಗೆ ಹಾಕಿ ಕಂಬಳದ ಕರೆಗೆ ಇಳಿಸಿದ್ದೆ. ನನಗೆ ಏನೇ ಗೌರವ ಬಂದಿದ್ದರೂ ಅದು ಅಮ್ಮನ ಆಶೀರ್ವಾದ ಎಂದು ನಾನು ನಂಬುತ್ತೇನೆ, ಈ ದೇಗುಲ ಜೀರ್ಣೋದ್ಧಾರಗೊಳ್ಳುತ್ತಿದ್ದು ಇಲ್ಲಿನ ಒಂದೊಂದು ಸ್ತಂಭಗಳನ್ನು ನೋಡುವಾಗ ಮೈ ರೋಮಾಂಚನಗೊಳ್ಳುತ್ತಿದೆ. ಕೇವಲ ಭಕ್ತರ ನೆರವಿನಿಂದ ಇಷ್ಟು ದೊಡ್ಡ ದೇವಸ್ಥಾನ ನಿರ್ಮಾಣ ಆಗುತ್ತಿರುವುದು ಅಮ್ಮನ ದಯೆಯೇ ಹೊರತು ಬೇರೇನೂ ಅಲ್ಲ. ಅಧ್ಯಕ್ಷರಾದ ವಾಸುದೇವ ಶೆಟ್ರು ಮತ್ತು ಸಮಿತಿಯವರು ಅಮ್ಮನ ಪ್ರೇರಣೆಯಿಂದ ಈ ಕಾರ್ಯವನ್ನು ಮಾಡುತ್ತಿದ್ದಾರೆ. ಈ ಕೆಲಸ ಒಬ್ಬರಿಂದ ಆಗುವಂತದ್ದಲ್ಲ ಲಕ್ಷಾಂತರ ಭಕ್ತರ ನೆರವಿನಿಂದ ಆಗುತ್ತಿದೆ, ಇದಕ್ಕಾಗಿ "ಕಾಪುವಿನ ಅಮ್ಮನ ಮಕ್ಕಳು" ಎಂಬ ತಂಡವೊಂದನ್ನು ರಚಿಸಲಾಗಿದೆ 9 ಶಿಲೆಯ ಬಾಬ್ತು ರೂಪಾಯಿ 9,999 ನೀಡಿದ್ದಲ್ಲಿ ಈ ತಂಡಕ್ಕೆ ಸೇರ್ಪಡೆಯಾಗಬಹು, ಊರ ಪರವೂರ, ದೇಶ ವಿದೇಶಗಳ ಭಕ್ತರನ್ನು ಸೇರಿಸಿ ಆರ್ಥಿಕ ಕ್ರೋಡಿಕರಣ ಆಗುತ್ತಿದೆ. ನಾವು ಕೂಡಾ ನಮ್ಮಿಂದ ಆಗುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಈವರೆಗೆ ಜೂನಿಯರ್ ವಿಭಾಗದಲ್ಲಿ 167 ಪದಕ, ಸೀನಿಯರ್ ವಿಭಾಗದಲ್ಲಿ 59 ಪದಕ ಗಳಿಸಿದ್ದೇನೆ. ಪಾಂಡು 203 ಪದಕ ಗಳಿಸಿದೆ. ಬೆಂಗಳೂರಿನಲ್ಲಿ ಲಕ್ಷಾಂತರ ಜನರ ಮುಂದೆ ಪಾಂಡುವಿಗೆ ಆದ ಸನ್ಮಾನ ನನಗೆ ಬಹಳಷ್ಟು ಖುಷಿ ಕೊಟ್ಟಿದೆ. ಕಂಬಳದ ಆರಂಭದಿಂದ ಕಂಬಳ ಮುಗಿದು ಲಾರಿ ಹತ್ತುವವರೆಗೂ ಪಾಂಡುವಿನೊಂದಿಗೆ ಸೆಲ್ಫಿಗಾಗಿ ಜನರು ಮುಗಿಬೀಳುತ್ತಿದ್ದರು. ಕಾಪು ಮಾರಿಯಮ್ಮನ ದೇಗುಲ ನಿರ್ಮಾಣಕ್ಕೆ ಎಲ್ಲ ಭಕ್ತರ ತನು ಮನ ಧನದ ಸಹಕಾರವಿರಲಿ ಎಂದರು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯಾ, ಮಾಜಿ ಅಧ್ಯಕ್ಷರು ಮತ್ತು ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರರಾದ ರತ್ನಾಕರ ಶೆಟ್ಟಿ ನಡಿಕೆರೆ, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾದ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಕಾಶಿನಾಥ್ ಶೆಣೈ, ಪ್ರಬಂಧಕರಾದ ಗೋವರ್ಧನ್ ಸೇರಿಗಾರ್ ಮತ್ತು ಸಿಬ್ಬಂದಿ ಲಕ್ಷ್ಮಣ್ ಶೆಟ್ಟಿ ಮಂಡೇಡಿ ಉಪಸ್ಥಿತರಿದ್ದರು.
ಪಲಿಮಾರು : ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕ : ಸಂಪದ - ೨೦೨೩ ತಿಂಗಳ ಸಡಗರ ಶಾಲೆಯತ್ತ ಸಾಹಿತ್ಯ ಸಂಪನ್ನ
Posted On: 29 Nov 2023, 06:35 PM
ಪಲಿಮಾರು : ನಾಡು, ನುಡಿ, ಸಾಹಿತ್ಯ, ಜನಪದ, ಕನ್ನಡ, ಕನ್ನಡಿಗ, ಕರ್ನಾಟಕ ಎಂಬ ಸದ್ವಿಚಾರದ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯನಿರ್ವಹಿಸುತ್ತಿದೆ. ಉಡುಪಿ ಜಿಲ್ಲಾ ತಾಲೂಕು ಪರಿಷತ್ತಿನ ತಾಲೂಕು ಘಟಕಗಳಿಂದ ಸಾಹಿತ್ಯ ವಿಚಾರದ ಕಾರ್ಯಕ್ರಮಗಳ ಜೊತೆಗೆ ಸ್ವಾತಂತ್ರ್ಯ ಹೋರಾಟಗಾರರನ್ನೂ ಗುರುತಿಸುವಂತಹ ಕಾರ್ಯ ನಡೆದಿದೆ. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜಿಲ್ಲೆಯಲ್ಲಿ ೪೮ ಕಾರ್ಯಕ್ರಮಗಳು ಜರಗಿದೆ. ಸಾರ್ವಜನಿಕರನ್ನು ಒಗ್ಗೂಡಿಸಿಕೊಂಡು ೫ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿದ ಕಾಪು ತಾಲೂಕು ಘಟಕದ ಕಾರ್ಯ ಶ್ಲಾಘನೀಯ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಹೇಳಿದರು. ಅವರು ಸರಕಾರಿ ಪದವಿ ಪೂರ್ವ ಕಾಲೇಜು ಪಲಿಮಾರು ಇಲ್ಲಿ ಬುಧವಾರ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲೂಕು ಘಟಕದಿಂದ ಕನ್ನಡ ರಾಜ್ಯೋತ್ಸವ ಮಾಸಾಚಾರಣೆ ಸಂಪದ - ೨೦೨೩ ತಿಂಗಳ ಸಡಗರ ಶಾಲೆಯತ್ತ ಸಾಹಿತ್ಯ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಗಾಯಕ ಡಾ. ಗಣೇಶ್ ಗಂಗೊಳ್ಳಿ ಜಾನಪದ ಸಾಹಿತ್ಯದಲ್ಲಿ ಮೌಲ್ಯಗಳು ವಿಷಯದೊಂದಿಗೆ ಜಾನಪದ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಗೌರವಾರ್ಪಣೆ : ಮುಂದಿನ ವರ್ಷ ಜರಗಲಿರುವ ಕಾಪು ತಾಲೂಕಿನ ೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ವಹಿಸಿರುವ ಪಲಿಮಾರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರನ್ನು, ಕವನ ಬರೆಯುವ ಹವ್ಯಾಸದ ಕಾಲೇಜಿನ ಯುವ ಕವಯಿತ್ರಿರನ್ನು ಜಿಲ್ಲಾ ಕಸಾಪ ವತಿಯಿಂದ ಗುರುತಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ತಾಲೂಕು ಘಟಕದ ಅಧ್ಯಕ್ಷರಾದ ಪುಂಡಲೀಕ ಮರಾಠೆ ವಹಿಸಿದ್ದರು. ವೇದಿಕೆಯಲ್ಲಿ ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಉಪಾಧ್ಯಕ್ಷ ರಾಯೇಶ್ವರ ಪೈ, ಪಲಿಮಾರು ಸರಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಸಾದ್ ಪಲಿಮಾರು, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಪಲಿಮಾರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಗ್ರೆಟ್ಟಾ ಮೊರಸ್, ಕನ್ನಡ ಶಿಕ್ಷಕ ಸುಧಾಕರ ಶೆಣೈ, ಕಾಪು ತಾಲೂಕು ಘಟಕದ ಗೌರವ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್, ಸಂಘಟನಾ ಕಾರ್ಯದರ್ಶಿ ದೀಪಕ್ ಕೆ. ಬೀರ, ಅನಂತ ಮೂಡಿತ್ತಾಯ, ಡೊಮಿಯನ್ ನೊರೊನ್ಹ, ಸುಧಾಕರ ಪೂಜಾರಿ ಉಪಸ್ಥಿತರಿದ್ದರು. ಪಲಿಮಾರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಗ್ರೆಟ್ಟಾ ಮೊರಸ್ ಸ್ವಾಗತಿಸಿದರು. ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ಪವಿತ್ರ ಕೆ. ಕಾರ್ಯಕ್ರಮ ನಿರೂಪಿಸಿದರು. ಕಾಪು ತಾಲೂಕು ಘಟಕದ ಗೌರವ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ವಂದಿಸಿದರು.
ಕುತ್ಯಾರು : ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್ - ಇಂಗ್ಲೀಷ್ ಭಾಷಾ ಶಿಕ್ಷಕರ ಕಾರ್ಯಾಗಾರ
Posted On: 29 Nov 2023, 01:34 PM
ಕುತ್ಯಾರು : ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸಿದ ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗ ದ್ವಿತೀಯ ಭಾಷೆ ಇಂಗ್ಲೀಷ್ ಕಾರ್ಯಾಗಾರ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್ ಕುತ್ಯಾರು ಇಲ್ಲಿ ನಡೆಯಿತು. ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಸದಸ್ಯರಾದ ಶ್ರೀಕಾಂತ ಪ್ರಭು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ತರಬೇತಿ ಶಿಕ್ಷಕರಿಗೆ ಅನಿವಾರ್ಯವಾಗಿದೆ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಸಂತೋಷವನ್ನುಂಟು ಮಾಡಲು ವಿದ್ಯಾರ್ಥಿಗಳು ಸಂತೋಷದಾಯಕವಾಗಿ ಇರಲು ಶಿಕ್ಷಕರು ಸಂಪತ್ಭರಿತವಾಗಿರಬೇಕು ಎಂದರು. ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್ ಶೈಕ್ಷಣಿಕ ಆಡಳಿತ ಅಧಿಕಾರಿ ದಿವಾಕರ ಆಚಾರ್ಯ ಮಾತನಾಡಿ ತರಬೇತಿಯಿಂದ ಶಿಕ್ಷಕರು ಸಂಪನ್ಮೂಲ ವ್ಯಕ್ತಿಗಳಾಗಲು ಸಾಧ್ಯ. ತರಬೇತಿಯಿಂದ ಶಿಕ್ಷಕರು ಹಲವಾರು ವಿಧದ ಜ್ಞಾನವನ್ನು ಕೌಶಲವನ್ನು ಪಡೆಯುವುದಕ್ಕೆ ಸಾಧ್ಯ. ಶಿಕ್ಷಕರು ನಿರಂತರವಾಗಿ ತರಬೇತಿಯನ್ನು ಪಡೆಯುವುದರಿಂದ ಬೋಧನೆಯಲ್ಲಿ ಗುಣಮಟ್ಟವನ್ನ ಕಾಯ್ದುಕೊಳ್ಳುವಲ್ಲಿ ಸಾಧ್ಯವಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಶಾಲೆಯ ಆಡಳಿತ ಮಂಡಳಿ ಉಪಾಧ್ಯಕ್ಷರಾದ ವಿವೇಕ್ ಆಚಾರ್ಯ ವಹಿಸಿದ್ದರು. ಈ ಸಂದರ್ಭ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್ ಶೈಕ್ಷಣಿಕ ಆಡಳಿತ ಅಧಿಕಾರಿ ದಿವಾಕರ ಆಚಾರ್ಯ, ಮುಖ್ಯ ಶಿಕ್ಷಕಿ ಸಂಗೀತ, ವಿದ್ಯಾಭಾರತಿ ಜಿಲ್ಲೆಯ ಕಾರ್ಯದರ್ಶಿ ಮಹೇಶ್ ಹೈಕಾಡಿ ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಆನೆಗುಂದಿ ಸರಸ್ವತಿ ಪೀಠ ಕಾರ್ಯದರ್ಶಿ ಗುರುರಾಜ್ ಆಚಾರ್ಯ ವಹಿಸಿದ್ದರು. ಕಾರ್ಯಗಾರದಲ್ಲಿ12 ಸಂಸ್ಥೆಗಳ ದ್ವಿತೀಯ ಭಾಷೆ ಇಂಗ್ಲಿಷ್ ನ 22 ಶಿಕ್ಷಕರು ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಸವಿತಾ ಸಹಕರಿಸಿದ್ದರು. ಶಿಕ್ಷಕಿ ಅನಿತಾ ಸ್ವಾಗತಿಸಿದರು. ಉಡುಪಿ ಜಿಲ್ಲೆಯ ವಿದ್ಯಾಭಾರತಿ ಕಾರ್ಯದರ್ಶಿ ಮಹೇಶ್ ಹೈಕಾಡಿ ಪ್ರಸ್ತಾವನೆಗೈದರು. ಶಿಕ್ಷಕಿಯರಾದ ರಮ್ಯ ನಿರೂಪಿಸಿ, ಶರೋನ್ ವಂದಿಸಿದರು.
ಕ್ರಿಯೇಟಿವ್ ಕಾಲೇಜಿನ ವಾರ್ಷಿಕೋತ್ಸವ ಆವಿರ್ಭವ್-2023
Posted On: 27 Nov 2023, 04:49 PM
ಕಾರ್ಕಳ : ವಸುದೈವ ಕುಟುಂಬಕಂ ಪರಿಕಲ್ಪನೆಯ ಮೂಲಕ ಎಲ್ಲ ಭಾಷೆಗಳನ್ನು ಗೌರವಿಸುವ ಮತ್ತು ಪರಿಚಯಿಸುವ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ನವೆಂಬರ್ 25 ರಂದು ಹಿರ್ಗಾನದ ಆದಿಲಕ್ಷ್ಮೀ ಮಹಾಲಕ್ಷ್ಮೀ ದೇವಸ್ಥಾನದ ಗೀತಾಂಜಲಿ ಸಭಾಭವನದಲ್ಲಿ ನೆರವೇರಿತು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಖ್ಯಾತ ವಾಗ್ಮಿ ರಾಮಕೃಷ್ಣ ಕಾಲೇಜು ಮಂಗಳೂರು ಇದರ ಪ್ರಾಂಶುಪಾಲರಾದ ಬಾಲಕೃಷ್ಣ ಶೆಟ್ಟಿ ಅವರು ಮಾತನಾಡಿ ಜೀವನದ ಎಲ್ಲ ಹಂತಗಳಲ್ಲಿ ಹೋರಾಟ ಇರುತ್ತದೆ. ಕಠಿಣ ಪರಿಶ್ರಮ, ನಿರಂತರ ತೊಡಗಿಸಿಕೊಳ್ಳುವಿಕೆ, ಬಂದ ಸವಾಲುಗಳಿಗೆ ಎದೆಯೊಡ್ಡಿ ನಿಂತು ಎದುರಿಸಿ. ಆಗ ಯಶಸ್ಸು ಹಿಂಬಾಲಿಸಿ ಬರುತ್ತದೆ. ಸಾಧಕರ ಸಾಧನೆಗಳು ಕೇಳಲು ರೋಮಾಂಚನ ಉಂಟುಮಾಡುತ್ತದೆ. ಆದರೆ ಅದರ ಹಿಂದೆ ಬಹುದೊಡ್ಡ ತ್ಯಾಗವಿರುತ್ತದೆ. ಅದು ಕ್ರಿಯೇಟಿವ್ ನ ವಿದ್ಯಾರ್ಥಿಗಳಿಂದ ಸಾಧ್ಯವಾಗಲಿ ಎಂದು ಹಾರೈಸಿದರು. ಮತ್ತು ಕಳೆದ ವರ್ಷ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುನ್ನತ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ “ಸಾಧಕ ಪುರಸ್ಕಾರ” ನೆರವೇರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕ್ರಿಯೇಟಿವ್ ಕಾಲೇಜಿನಲ್ಲಿ ವಾಸಂಗ ಮಾಡಿ ರಾಜ್ಯದ ವಿವಿಧ ಪ್ರತಿಷ್ಠಿತ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಸಂಸ್ಥಾಪಕರಲ್ಲೋರ್ವರಾದ ಡಾ. ಗಣನಾಥ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕ್ರಿಯೇಟಿವ್ ಕಾಲೇಜು ಪ್ರಾರಂಭವಾದ ಮೂರೇ ವರ್ಷದ ಅವಧಿಯಲ್ಲಿ ಅನೇಕ ಹೊಸ ಸಾಧನೆಗಳನ್ನು ಮಾಡಿದೆ. ಶೈಕ್ಷಣಿಕವಾಗಿ ಮಾತ್ರವಲ್ಲದೇ ಸಾಮಾಜಿಕವಾಗಿಯೂ ತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ನವಚೇತನ ನೀಡುವ ಕಾರ್ಯ ವಿದ್ಯಾಸಂಸ್ಥೆಯ ವತಿಯಿಂದ ನಡೆಯುತ್ತಿದೆ ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥಾಪಕರಾದ ಅಶ್ವತ್ ಎಸ್. ಎಲ್ ಅವರು ವಿದ್ಯಾರ್ಥಿಗಳನ್ನು ಕೇವಲ ಅಂಕ ಗಳಿಕೆಗೆ ಮಾತ್ರ ಸೀಮಿತಗೊಳಿಸದೆ ಕಲೆ, ಸಂಸ್ಕೃತಿಯ ಮೂಲಕ ಶ್ರೀಮಂತ ಮೌಲ್ಯಗಳನ್ನು ತಿಳಿಸಲಾಗುತ್ತದೆ ಎಂದು ನುಡಿದರು. ಈ ಸಂದರ್ಭದಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್, ಗಣನಾಥ ಶೆಟ್ಟಿ, ಅಮೃತ್ ರೈ, ಆದರ್ಶ ಎಂ. ಕೆ, ಅಶ್ವತ್ ಎಸ್. ಎಲ್, ಹೆಚ್.ಕೆ.ಎಸ್ ನ ಪ್ರಾಂಶುಪಾಲರಾದ ವಿಮಲ್ ರಾಜ್. ಜಿ, ಗಣಪತಿ ಕೆ. ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ರಾಮಕೃಷ್ಣ ಹೆಗಡೆ ಸ್ವಾಗತಿಸಿದರು. ಪ್ರಾಚಾರ್ಯರಾದ ವಿದ್ವಾನ್ ಗಣಪತಿ ಭಟ್ ಸಂಸ್ಥೆಯ ಸಾಧನೆಗಳನ್ನು ತಿಳಿಸುವ ವಾರ್ಷಿಕ ವರದಿ ವಾಚಿಸಿದರು. ಜೀವಶಾಸ್ತ್ರ ಉಪನ್ಯಾಸಕ ಲೋಹಿತ್ ಎಸ್. ಕೆ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ವಿನಾಯಕ ಜೋಗ್ ವಂದಿಸಿದರು. “ಸಾಧಕರ ಸನ್ಮಾನ” ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಕಳ : ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನಿಟ್ಟೆಯ ಧನುಷ್ ಕುಲಾಲ್ ಗೆ ಚಿನ್ನದ ಪದಕ
Posted On: 27 Nov 2023, 04:39 PM
ಕಾರ್ಕಳ : ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನಿಟ್ಟೆಯ ಧನುಷ್ ಕುಲಾಲ್ ಚಿನ್ನದ ಪದಕ ಪಡೆದಿದ್ದಾರೆ. ನಿಟ್ಟೆ ನಿವಾಸಿ ರಮೇಶ್ ಸಂಜನ್ ಹಾಗೂ ದಿವ್ಯ ದಂಪತಿಗಳ ಪುತ್ರನಾದ ಇವರು. ನಿಟ್ಟೆ ಡಾ.ಎನ್.ಎಸ್.ಎ.ಎಮ್ ಆಂಗ್ಲ ಮಾಧ್ಯಮ ಶಾಲೆಯ 6 ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ.
ಕಾಪು : ಕೊಪ್ಪಲಂಗಡಿ ಶ್ರೀ ವಾಸುದೇವ ಸ್ವಾಮಿ ಭಜನಾ ಮಂಡಳಿಯ ವಾರ್ಷಿಕ ಭಜನಾ ಮಂಗಲೋತ್ಸವ
Posted On: 25 Nov 2023, 10:11 PM
ಕಾಪು : ಶ್ರೀ ಲಕ್ಷ್ಮಿಜನಾರ್ದನ ದೇವಳದ ಆಡಳಿತಕ್ಕೊಳಪಟ್ಟಿರುವ ಕೊಪ್ಪಲಂಗಡಿ ಶ್ರೀ ವಾಸುದೇವ ದೇವಸ್ಥಾನದ ಶ್ರೀ ವಾಸುದೇವ ಸ್ವಾಮಿ ಭಜನಾ ಮಂಡಳಿಯ ವಾರ್ಷಿಕ ಭಜನಾ ಮಂಗಲೋತ್ಸವದ ದೀಪ ಪ್ರಜ್ವಲನೆಯನ್ನು ಕಾಪು ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಕೆ ಪಿ ಆಚಾರ್ಯ ಮಾಡಿದರು. ಈ ಸಂದರ್ಭ ಮೋಹನ್ ಬಂಗೇರ, ಕೊಪ್ಪಳಮನೆ ಉದಯ ಶೆಟ್ಟಿ, ಜಯರಾಮ ಆಚಾರ್ಯ, ಭಜನಾ ಮಂಡಳಿ ಅಧ್ಯಕ್ಷ ಉಮೇಶ್ ಪೂಜಾರಿ, ಸದಸ್ಯರು, ದೇವಳದ ಸಿಬ್ಬಂದಿವರ್ಗ ಹಾಗೂ ಊರವರು ಉಪಸ್ಥಿತರಿದ್ದರು.
ಹೆಜಮಾಡಿ ಯುವವಾಹಿನಿ ಘಟಕದ ಆಶ್ರಯದಲ್ಲಿ ಸೌಹಾರ್ದತೆಯ ತುಳುವರೆ ತುಳಸಿ ಪರ್ಬ ಆಚರಣೆ
Posted On: 25 Nov 2023, 06:17 PM
ಹೆಜಮಾಡಿ : ಹಬ್ಬಗಳು ದೇಶದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇಂತಹ ಅಚರಣೆಗಳು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ರವಾನಿಸಲು ವೇದಿಕೆಯಾಗಿದೆ. ಈ ಹಬ್ಬಗಳ ಮೂಲಕ ಯುವಕರು ತಮ್ಮ ಸಾಂಸ್ಕೃತಿಕ ಪರಂಪರೆ ಮತ್ತು ವಿವಿಧ ಪದ್ದತಿಗಳು ಹಾಗು ಆಚರಣೆಗಳ ಮಹತ್ವವನ್ನು ತಿಳಿದುಕೊಳ್ಳುತ್ತಾರೆ. ಕೂಡು ಕುಟುಂಬ ಒಡೆದು ಹೋಗಿರುವುದರಿಂದ ಹಬ್ಬಗಳ ಮಹತ್ವ ಕಳೆದು ಹೋಗಿದೆ. ಪುರಾಣದ ಹಿನ್ನೆಲೆಯುಳ್ಳ ಇಂತಹ ಹಬ್ಬಗಳನ್ನು ವಿವಿಧ ಧರ್ಮದ ಜನರನ್ನು ಸೇರಿಸಿ ಸೌಹಾರ್ದತೆಯ ರೀತಿಯಲ್ಲಿ ಅಚರಿಸುತಿರುವ ಹೆಜಮಾಡಿ ಯುವವಾಹಿನಿಯ ಕಾರ್ಯ ಶ್ಲಾಘನೀಯ ಎಂದು ಪ್ರವಚನಕಾರ, ಯಕ್ಷಗಾನ ಕಲಾವಿದ ಭಾಸ್ಕರ್ ಪಡುಬಿದ್ರಿ ಹೇಳಿದರು. ಅವರು ಹೆಜಮಾಡಿ ಬಿಲ್ಲವ ಸಂಘದಲ್ಲಿ ಹೆಜಮಾಡಿ ಯುವವಾಹಿನಿ (ರಿ.) ವತಿಯಿಂದ ನಡೆದ ಸೌಹಾರ್ದತೆಯ ತುಳುವರೆ ತುಳಸಿ ಪರ್ಬ ಕಾರ್ಯಕ್ರಮದಲ್ಲಿ ತುಡರ್ ದೀಪ ಬೆಳಗಿಸಿ ಮಾತಾನಾಡಿದರು. ಹೆಜಮಾಡಿ ಯುವವಾಹಿನಿ ಅಧ್ಯಕ್ಷ ದೀಪಕ್ ವಿ.ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕೃಷಿಕ ಹೆಜಮಾಡಿ ಶೇಖರ್ ಕುಕ್ಯಾನ್ ರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷ ಲೋಕೇಶ್ ಅಮೀನ್, ಯುವವಾಹಿನಿ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಭರತೇಶ್, ಉದ್ಯಮಿ ಜೋನ್ ಕ್ವಾಡ್ರಸ್, ಪಡುಬಿದ್ರಿ ರೋಟರಿ ಪೂರ್ವ ಅಧ್ಯಕ್ಷ ರಮೀಜ್ ಹುಸೇನ್, ಕಾರ್ಯಕ್ರಮ ನಿರ್ದೇಶಕ ಮಹೇಂದ್ರ ಸಾಲ್ಯಾನ್, ಹೆಜಮಾಡಿ ಯುವವಾಹಿನಿ ಕಾರ್ಯದರ್ಶಿ ನಾಗವೇಣಿ ಉಪಸ್ಥಿತರಿದ್ದರು. ಹೆಜಮಾಡಿ ಯುವವಾಹಿನಿ ಅಧ್ಯಕ್ಷ ದೀಪಕ್ ವಿ. ಕೋಟ್ಯಾನ್ ಸ್ವಾಗತಿಸಿದರು. ಹೆಜಮಾಡಿ ಯುವವಾಹಿನಿಯ ಗೌರವ ಸಲಹೆಗಾರ ಪ್ರಭೋಧ್ ಚಂದ್ರ ಹೆಜ್ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನೀತಾ ಕರ್ಕೇರ ಮತ್ತು ಧೀರಜ್ ಹೆಜಮಾಡಿ ನಿರೂಪಿಸಿದರು. ಕುಮಾರಿ ಪ್ರಾಪ್ತಿ ಹೆಜಮಾಡಿ ವಂದಿಸಿದರು.
ಡಿಸೆಂಬರ್ 3, 4 : ಶಂಕರಪುರ ದ್ವಾರಕಾಮಾಯಿ ಮಠ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದ ಶಿಲಾಮಯ ಗರ್ಭಗುಡಿಯಲ್ಲಿ ಕಾಲಭೈರವ ಸ್ವಾಮಿ ಪ್ರತಿಷ್ಠೆ ; ಗುರು ವಂದನೆ ಕಾರ್ಯಕ್ರಮ
Posted On: 25 Nov 2023, 06:04 PM
ಶಂಕರಪುರ : ಕಾಪು ತಾಲೂಕಿನ ಶಂಕರಪುರ ದ್ವಾರಕಾಮಾಯಿ ಮಠ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ಇಲ್ಲಿ ಶಿಲಾಮಯ ಗರ್ಭಗುಡಿಯಲ್ಲಿ ಕಾಲಭೈರವ ಸ್ವಾಮಿ ಪ್ರತಿಷ್ಠೆ ಮತ್ತು ಗುರು ವಂದನೆ ಕಾರ್ಯಕ್ರಮ ಡಿಸೆಂಬರ್ 3 ಮತ್ತು 4 ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಶನಿವಾರ ಶ್ರೀ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ಮಾತನಾಡಿದ ದ್ವಾರಕಾಮಾಯಿ ಮಠದ ಧರ್ಮದರ್ಶಿ ಶ್ರೀ ಸಾಯಿ ಈಶ್ವರ್ ಗುರೂಜಿ, ದಾನಿಗಳು, ಭಕ್ತರ ಸಹಾಯದಿಂದ 3 ವರ್ಷದ ಮೊದಲು ಜೀರ್ಣೋದ್ದಾರಗೊಂಡ ದ್ವಾರಕಾಮಾಯಿ ಮಠ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನವು ಧಾರ್ಮಿಕ, ಸಾಮಾಜಿಕ ಸೇವೆಗಳನ್ನು ಮಾಡುತ್ತಾ ಬರುತ್ತಿದ್ದು ಇತ್ತೀಚಿನ ದಿನಗಳಲ್ಲಿ ಹೊರ ರಾಜ್ಯ, ಹೊರ ದೇಶದ ಭಕ್ತರನ್ನು ಆಕರ್ಷಿಸುವ ಈ ಪುಣ್ಯ ಕ್ಷೇತ್ರವಾಗಿದೆ. ಮಠದ ಆವರಣದಲ್ಲಿಯೇ 2018ರಲ್ಲಿ ಶ್ರೀ ಸಾಯಿನಾಥರ 100ನೇ ಪುಣ್ಯಸ್ಮರಣೆಯ ದಿನದಂದು ಬಿಲ್ವಮರದ ಕಟ್ಟೆಗೆ "ಪ್ರಾಣಿ ಪಕ್ಷಿ ಮೋಕ್ಷ ಕಟ್ಟೆ" ಎಂದು ಸಂಕಲ್ಪಿಸಿ ಮೋಕ್ಷಕಾರಕ ಶಿವನ ಸಂಕಲ್ಪದಲ್ಲಿ ಪೂಜೆ ಸಲ್ಲುತ್ತಿತ್ತು. 2022ರಲ್ಲಿ ಕ್ಷೇತ್ರಕ್ಕೆ ಭೇಟಿ ನೀಡಿದ ಗುರುಗಳಾದ ಶ್ರೀ ಪ್ರವೀಣ್ ರಾಜ್ ಮಚ್ಚೇಂದ್ರನಾಥ ಬಾಬಾರು ಇಲ್ಲಿ ಶಿವನೇ ಕಾಲಭೈರವನಾಗಿ ಮೋಕ್ಷ ಕಟ್ಟೆಯಲ್ಲಿ ನೆಲೆಸಿದ್ದಾನೆ ಎಂದು ತಿಳಿಸಿ, ಈ ಕಟ್ಟೆಯಲ್ಲಿ ಉಜ್ಜಯಿನಿಯ ಸಂಕಲ್ಪದಲ್ಲಿ ಕಾಲ ಭೈರವ - ಸ್ವಾಮಿಗೆ ಸ್ಥಾನವನ್ನು ನೀಡಬೇಕು ಎಂದು ಪ್ರಸ್ತಾಪಿಸಿದರು. ಗುರುವಿನ ಆಜ್ಞೆಯಂತೆ ಅದೇ ಜಾಗದಲ್ಲಿ ಶಿಲಾಮಯ ಗರ್ಭಗುಡಿಯಲ್ಲಿ ಪಾನ ಪ್ರಿಯ ಕಾಲಭೈರವ ಸ್ವಾಮಿಯನ್ನು ಇದೇ 2023ರ ಡಿಸೆಂಬರ್ 3 ಮತ್ತು 4ರಂದು ಗುರುವರ್ಯರಾದ ಶ್ರೀ ಪ್ರವೀಣ್ ರಾಜ್ ಮಚ್ಚೇಂದ್ರನಾಥ ಬಾಬಾರ ಉಪಸ್ಥಿತಿಯಲ್ಲಿ ವೇದಮೂರ್ತಿ ಶ್ರೀ ದೇವದಾಸ್ ತಂತ್ರಿ, ಮುಂಬೈ ಇವರ ನೇತೃತ್ವದಲ್ಲಿ ಪ್ರತಿಷ್ಠಾಪನೆ ನಡೆಯಲಿದೆ. ಈ ಧಾರ್ಮಿಕ ಸಮಾರಂಭದಲ್ಲಿ ದೇಶದ ನಾನಾ ರಾಜ್ಯಗಳಿಂದ 110ಕ್ಕೂ ಹೆಚ್ಚು ಸಾಧು ಸಂತರು ಭಾಗವಹಿಸಲಿದ್ದಾರೆ. ಡಿಸೆಂಬರ್ 3ರಂದು ಬೆಳಿಗ್ಗೆ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಬಳಿಕ 11:30ಕ್ಕೆ ಶಿರ್ವ ಮಟ್ಟಾರ್ನ ಪಾಂಜಗುಡ್ಡೆಯಲ್ಲಿ ಮಠದ ಮಹತ್ವದ ಯೋಜನೆಯಾದ ಸಂತ ಆಶ್ರಯ ಧಾಮಕ್ಕೆ ಸಾಧು ಸಂತರು ಭಗವತ್ ಧ್ವಜವನ್ನು ಇಟ್ಟು ದೀಪ ಬೆಳಗಿಸಿ ಪ್ರಾರ್ಥಿಸಲಿದ್ದಾರೆ. ಮಧ್ಯಾಹ್ನ 3:30ಕ್ಕೆ ಅಖಿಲ ಭಾರತೀಯ ಸಂತ ಸಮಿತಿಯ ಪ್ರಾಂತ್ಯ ಸಭೆಯು ನಡೆಯಲಿದೆ. ಸಂಜೆ 5ಕ್ಕೆ ಸಾಲ್ಮರ ಶಂಕರಪುರದಿಂದ ಕಾಲಭೈರವ ಸ್ವಾಮಿ ಪ್ರತಿಮೆ ಹಾಗೂ ಹಸಿರು ಹೊರಕಾಣಿಕೆ ಮೆರವಣಿಗೆ ನಡೆಯಲಿದೆ. ಡಿಸೆಂಬರ್ 4 ರಂದು ಬೆಳಿಗ್ಗೆ ಪ್ರತಿಷ್ಠೆ ಕಲಶಾಭಿಷೇಕ, 10:30ಕ್ಕೆ ಗುರುವಂದನೆ, 12:30 ಮಹಾಪೂಜೆ ನಂತರ ಮಹಾ ಅನ್ನ ಸಂತರ್ಪಣೆ ನಡೆಯಲಿದೆ. ಎಂದರು. ಈ ಸಂದರ್ಭ ಮಠದ ಟ್ರಸ್ಟಿ ವಿಶ್ವನಾಥ ಸುವರ್ಣ, ಗೌರವ ಅಧ್ಯಕ್ಷ ಸುಧಾಕರ್ ಶೆಟ್ಟಿ, ಕ್ಷೇತ್ರದ ಮಾರ್ಗದರ್ಶಕರುಗಳಾದ ವೀಣಾ ಶೆಟ್ಟಿ, ಗೀತಾಂಜಲಿ ಸುವರ್ಣ, ವಿಜಯ್ ಕುಂದರ್ ಉಪಸ್ಥಿತರಿದ್ದರು.
