Updated News From Kaup

ಪಡುಬಿದ್ರಿ : ಹಕ್ಕುಪತ್ರ ಸಮಸ್ಯೆ - ಜಿಲ್ಲಾಧಿಕಾರಿ, ಶಾಸಕರ ಭೇಟಿ

Posted On: 16-09-2023 04:02PM

ಪಡುಬಿದ್ರಿ : ಗ್ರಾಮ ಪಂಚಾಯತ್ ವ್ಯಾಪ್ತಿಯ ನಡ್ಸಾಲು ಭಾಗದಲ್ಲಿ ಹಲವಾರು ವರ್ಷಗಳಿಂದ ವಾಸವಾಗಿರುವ ಜನರಿಗೆ ಹಕ್ಕುಪತ್ರ ನೀಡುವಲ್ಲಿ ಸಮಸ್ಯೆ ಉಂಟಾಗುತ್ತಿದ್ದು, ಈ ಸಂಬಂಧ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಉಡುಪಿ ಜಿಲ್ಲಾಧಿಕಾರಿಗಳಾದ ವಿದ್ಯಾ ಕುಮಾರಿ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸರಕಾರಿ ಜಮೀನಿನಲ್ಲಿ ಹಲವಾರು ವರ್ಷಗಳಿಂದ ವಾಸ್ತವ್ಯವಿದ್ದು ಪಹಣಿಯಲ್ಲಿ ನದಿ ಪರಂಬೋಕು ಎಂದು ಉಲ್ಲೇಖಿಸಿರುವುದರಿಂದ ಇದನ್ನು ವಿರಹಿತಗೊಳಿಸಲು ಸರಕಾರ ಮಟ್ಟದಲ್ಲಿ ಪರಿಹರಿಸುವಂತೆ ಪ್ರಸ್ತಾವನೆ ಸಲ್ಲಿಸಿ ಶೀಘ್ರದಲ್ಲಿ ಸಮಸ್ಯೆ ಬಗೆಹರಿಸುವ ಬಗ್ಗೆ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ, ಉಪಾಧ್ಯಕ್ಷರಾದ ಹೇಮಚಂದ್ರ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶಶಿಕಾಂತ್ ಪಡುಬಿದ್ರಿ, ಬಿಜೆಪಿ ಮುಖಂಡರಾದ ಮಿಥುನ್ ಹೆಗ್ಡೆ ಹಾಗೂ ಸಹಾಯಕ ಆಯುಕ್ತರಾದ ರಶ್ಮಿ, ಕಾಪು ತಹಶೀಲ್ದಾರರಾದ ನಾಗರಾಜ್ ನಾಯ್ಕಡ ಮತ್ತು ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರು, ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಪಿ.ಎಂ ವಿಶ್ವಕರ್ಮ ಯೋಜನೆ : ವಿಶ್ವಕರ್ಮ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಲು ಆನೆಗುಂದಿ ಪ್ರತಿಷ್ಠಾನದಿಂದ ಪ್ರಧಾನ ಮಂತ್ರಿಗೆ ಮನವಿ

Posted On: 16-09-2023 03:57PM

ಪಡುಕುತ್ಯಾರು : ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಲ್ಲಿ ಪಂಚ ಕುಲವೃತ್ತಿ ನಡೆಸುತ್ತಿರುವ ವಿಶ್ವಕರ್ಮ ಸಮುದಾಯಕ್ಕೆ ಸೂಕ್ತ ಪರಿಗಣನೆಯೊಂದಿಗೆ ಅರ್ಹ ಪ್ರಾತಿನಿಧ್ಯ ನೀಡಬೇಕೆಂದು ಪಡುಕುತ್ಯಾರಿನ ಕಟಪಾಡಿ ಶ್ರೀಮತ್‌ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನವು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದೆ. ಪ್ರಧಾನ ಮಂತ್ರಿಯವರು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಘೋಷಿಸಿದ ಪಿ.ಎಂ ವಿಶ್ವಕರ್ಮ ಯೋಜನೆಯು ಸೆ.೧೭ರ ವಿಶ್ವಕರ್ಮ ಜಯಂತಿಯಂದು ದೇಶದ ೭೦ ಕೇಂದ್ರಗಳಲ್ಲಿ ಉದ್ಘಾಟನೆಗೊಳ್ಳುತ್ತಿದೆ.

ಈ ಸಂದರ್ಭದಲ್ಲಿ ವಿಶ್ವಕರ್ಮರ ಕುಲಗುರುಗಳಾದ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಆಶಯದಂತೆ ಪರಂಪರಾಗತ ಸಮಾಜದ ಪಂಚಕುಲಸುಬುಗಳಿಗೆ ಯೋಜನೆಯ ಜ್ಯಾರಿಯಲ್ಲಿ ಸೂಕ್ತ ಪ್ರಾತಿನಿಧ್ಯ ಹಾಗೂ ಮಹಾಸಂಸ್ಥಾನದ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ನೀಡಬೇಕೆಂದು ಪ್ರಧಾನ ಮಂತ್ರಿಯವರಿಗೆ ಮನವಿ ನೀಡಲಾಗಿದೆ. ವಿಶ್ವಕರ್ಮ ಮಹೋತ್ಸವದ ದಿನ ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ವಿಶೇಷವಾಗಿ ಹಿಂದುಳಿದ ಸಮುದಾಯಗಳಿಗೆ ಪ್ರಯೋಜನವಾಗುವ ಪಿ.ಎಂ ವಿಶ್ವಕರ್ಮ ಯೋಜನೆಯನ್ನು ಜ್ಯಾರಿಗೊಳಿಸುವ ಮಹತ್ವದ ನಿರ್ಧಾರ ಕೈಗೊಂಡ ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಸಮಸ್ತ ವಿಶ್ವಕರ್ಮ ಸಮಾಜದ ಅಭಿನಂದನೆಯನ್ನು ಹಾಗೂ ಕೃತಜ್ಞತೆಯನ್ನು ಅನೆಗುಂದಿಶ್ರೀಗಳವರು ಸಲ್ಲಿಸಿದ್ದಾರೆ.

ಪ್ರಸ್ತುತ ಯೋಜನೆಯಲ್ಲಿ ವಿಶ್ವಕರ್ಮ ಪಂಚಕುಲ ವೃತ್ತಿಗಳಾದ ಬಡಗಿ, ಕಮ್ಮಾರ, ಅಕ್ಕಸಾಲಿಗ, ಶಿಲಾ ಶಿಲ್ಪಿ, ಎರಕಶಿಲ್ಪಗಳು ಹಾಗೂ ಇತರ ೧೩ ಕರಕುಶಲ ವೃತ್ತಿಗಳಾದ ದೋಣಿ ತಯಾರಕ, ರಕ್ಷ ಕವಚ ತಯಾರಕ, ಸುತ್ತಿಗೆ ಇತರೆ ಸಾಮಾಗ್ರಿ ತಯಾರಕ,ಚಮ್ಮಾರ, ಗಾರೆ ಮೇಸ್ತ್ರಿ, ಬುಟ್ಟಿ, ಚಾಪೆ, ಹಿಡಿಸೂಡಿ ತಯಾರಕ, ಸೆಣಬು ನೇಕಾರರು, ಗೊಂಬೆ ಮತ್ತು ಆಟಿಕೆ ತಯಾರಕ, ಕ್ಷೌರಿಕ, ಮಾಲೆ ತಯಾರಕ, ದೋಬಿ ಮತ್ತು ಮಡಿವಾಳ,ಟೈಲರ್‌, ಮೀನಿನ ಬಲೆ ತಯಾರಕ ಹೀಗೆ ಒಟ್ಟು ೧೮ ವಿಭಾಗಗಳಿಗೆ ಒಟ್ಟು ರೂ ೧೩,೦೦೦ ಕೋಟಿಯ ಬೃಹತ್‌ ಯೋಜನೆ ಯನ್ನು ಪಿ.ಎಂ.ವಿಶ್ವಕರ್ಮ ಎಂಬ ಯೋಜನೆಯಲ್ಲೇ ಅಳವಡಿಸಲಾಗಿದೆ. ವೇದ ಪುರಾಣಗಳಲ್ಲಿರುವ ಸಕಲ ವಸ್ತುಗಳ ನಿರ್ಮಾತೃ ವಿಶ್ವಕರ್ಮ, ವಿಶ್ವದಲ್ಲಿರುವ ಎಲ್ಲಾ ನಿರ್ಮಾಣಗಳ ಮೂಲಕರ್ತೃ ವಿಶ್ವಕರ್ಮ, ಹಾಗೆಯೇ ಸಮಾಜದ ದೇವರು ಪಂಚ ವೃತ್ತಿಗಳು, ಕುಲ ಗುರು ಪರಂಪರೆ ಸೇರಿದಂತೆ ವಿವಿಧ ವಿಷಯಗಳನ್ನು ಮನವಿಯಲ್ಲಿ ವಿವರಿಸಲಾಗಿದೆ. ಹಾಗೆಯೇ ಭಾರತದಲ್ಲಿರುವ ಸುಪ್ರಸಿದ್ಧ ಪ್ರವಾಸಿ ತಾಣಗಳ ವಿಶ್ವಕರ್ಮರ ನಿರ್ಮಾಣಗಳು ಪ್ರಮುಖವಾಗಿ ಹಂಪಿ ವಿಜಯನಗರ, ಮಧುರೆ ಮೀನಾಕ್ಷಿ, ದ್ವಾರಕ, ಪುರಿ ಜಗನ್ನಾಥ ದೇವಳ, ಬೇಲೂರು, ಹಳೆಬೀಡು, ಕೈಲಾಸನಾಥ, ದೇವಾಲಯಗಳು . ಬೇಲೂರು, ಹಳೆಬೀಡು ಸೇರಿದಂತೆ ಹಲವು ದೇವಾಲಯ ನಿರ್ಮಾಣ ಮಾಡಿದ ಜಕ್ಕಣಾಚಾರ್ಯ, ಕೊನಾರ್ಕ ದೇವಸ್ಥಾನದ ಶಿಲ್ಪಿ ಮೊಹಾಪಾತ್ರ ಕುಟುಂಬದವರು, ಸೋಮನಾಥ ದೇವಸ್ಥಾನದ ಅಕ್ಷರಧಾಮ ನಿರ್ಮಾಣದ ಸೋಂಪುರ ಕುಟುಂಬ, ಅಯೋಧ್ಯಾ ರಾಮಮಂದಿರ ಶಿಲ್ಪಿ ಚಂದ್ರಕಾಂತ ಬಾಯಿ ಸೋಂಪುರ, ಆಯೋಧ್ಯಾ ರಥ ಶಿಲ್ಪಿ ಕೋಟೇಶ್ವರ ಲಕ್ಷ್ಮೀನಾರಾಯಣ ಆಚಾರ್ಯ, ಸರ್ದಾರ್‌ ಪಟೇಲ್ ರ ಮೂರ್ತಿ ಶಿಲ್ಪಿ ರಾಮ್‌ ವಿ ಸುತಾರ್‌, ಅಹಿಂಸಾ ಸ್ಥಲ್‌ ನ ಮಹಾವೀರ ಮೂರ್ತಿ ಶಿಲ್ಪಿ ಶಾಮರಾಯ ಆಚಾರ್ಯ ಕಾರ್ಕಳ, ವಿವೇಕಾನಂದ ರಾಕ್‌ ಶಿಲ್ಪಿ ಸ್ಥಪತಿ ಎಸ್‌ ಕೆ ಆಚಾರ್ಯ, ಕರ್ನಾಟಕ ಮತ್ತು ತಮಿಳ್ನಾಡು ದೇವಳಗಳ ಸ್ಥಪತಿ ದಕ್ಷಿಣಾ ಮೂರ್ತಿ ಮುಂತಾದ ಪ್ರಸಿದ್ಧ ಶಿಲ್ಪಿಗಳ ಪಟ್ಟಿ ಬೆಳೆಯುತ್ತದೆ, ಇವರೆಲ್ಲರೂ ವಿಶ್ವಕರ್ಮ ಸಮಾಜದವರೇ ಆಗಿದ್ದಾರೆ. ಭಾರತದ ಕೇಂದ್ರ ಮತ್ತು ರಾಜ್ಯ ಪ್ರವಾಸೋಧ್ಯಮ ಇಲಾಖೆಗೆ ದೇಶ ವಿದೇಶಗಳಿಂದ ಸಂದಾಯವಾಗುತ್ತಿರುವ ಪ್ರಮುಖ ಆರ್ಥಿಕ ಸಂಪನ್ಮೂಲಕ್ಕೆ ಕಾರಣ ಇಲ್ಲಿನ ಅದ್ಭುತ ಶಿಲ್ಪದೇವಾಲಯಗಳು, ವಿವಿಧ ನಿರ್ಮಾಣಗಳು. ಇವುಗಳ ಸೌಂದರ್ಯ ವೀಕ್ಷಿಸಿ ಆಸ್ವಾದಿಸಲು ಬರುವ ದೇಶ ಮತ್ತು ವಿದೇಶಗಳ ದೊಡ್ಡ ಮಟ್ಟದ ಪ್ರವಾಸಿಗರಿದ್ದಾರೆ.

ಈ ಮೂಲಕ ದೇಶದ ಖಜಾನೆಗೆ ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾದ ವಾರ್ಷಿಕ ವರದಿ ಪ್ರಕಾರ ಭಾರತ ದೇಶದ ಸಂರಕ್ಷಿತ ಸ್ಮಾರಕಗಳನ್ನು ವೀಕ್ಷಿಸುವುದಕ್ಕೆ 2022 - 2023 ರ ಕಾಲಘಟ್ಟದಲ್ಲಿ 6.19 ಮಿಲಿಯನ್ ವಿದೇಶಿ ಪ್ರವಾಸಿಗರು ಬಂದಿದ್ದು, ಇವರಿಂದ ಒಟ್ಟಾರೆ 252. 82 ಕೋಟಿ ರೂಪಾಯಿ ಹಣವನ್ನು ಪ್ರವೇಶ ಟಿಕೆಟ್ ಮೂಲಕ ಸಂಗ್ರಹಿಸಲಾಗಿದೆ. ಇಂಡಿಯಾ ಟೂರಿಸಂ ಅಟ್ ಎ ಗ್ಲಾನ್ಸ್ ಅಂಕಿ ಅಂಶಗಳ ಪ್ರಕಾರ ಅಂದಾಜು 2022-23ರ ಅವಧಿಯಲ್ಲಿ ಪ್ರವಾಸೋದ್ಯಮ ಸಚಿವಾಲಯ 1, 34, 543 ಕೋಟಿ ರೂಪಾಯಿ ವಿದೇಶಿ ವಿನಿಮಯ ಗಳಿಸಿದೆ. ಹೀಗೆ ಒಟ್ಟಿನಲ್ಲಿ ಎಲ್ಲ ಬಗೆಯ ಶಿಲ್ಪಗಳು ಅವುಗಳ ಪಾರಂಪರಿಕ ಹಿನ್ನೆಲೆ, ವಿಶ್ವಕರ್ಮ ಕುಲವೃತ್ತಿ ಅವುಗಳ ಮಹತ್ವವನ್ನು ಸೇರಿದ ಎಲ್ಲಾ ವಿವರಗಳನ್ನು ಪ್ರಧಾನ ಮಂತ್ರಿಗಳವರು ಗಮನಹರಿಸಿ ಪ್ರಸ್ತುತ ಪಿ.ಎಂ. ವಿಶ್ವಕರ್ಮ ಯೋಜನೆಯಲ್ಲಿ ವಿಶ್ವಕರ್ಮ ಸಮಾಜದ ಪಂಚವೃತ್ತಿಗಳಾದ ಬಡಗಿ , ಕಮ್ಮಾರ, ಅಕ್ಕಸಾಲಿಗ, ಶಿಲಾ ಶಿಲ್ಪಿ, ಎರಕಶಿಲ್ಪ ವೃತ್ತಿದಾರರಿಗೆ ಅನುಪಾತಿಕವಾಗಿ ಇಲ್ಲವೇ ಜನಸಂಖ್ಯಾ ಪ್ರಣಾಮವನ್ನು ಅನುಸರಿಸಿ ಅರ್ಹ ಪಾಲಿನ ವಿಶೇಷ ವಿಭಾಗದ ಪರಿಗಣನೆ ನೀಡಬೇಕೆಂದು ಪ್ರಸ್ತುತ ಮನವಿಯಲ್ಲಿ ಒತ್ತಾಯಿಸಲಾಗಿದೆ. ವಿಶ್ವಕರ್ಮ ಸಮಾಜದ ಕುಲಗುರು ಪೀಠವಾದ ಪಡುಕುತ್ಯಾರಿನ ಕಟಪಾಡಿ ಶ್ರೀಮತ್‌ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠವು ಸಮಾಜದ ಅಭಿವೃದ್ದಿಗೆ ನಡೆಸಲಾಗುವ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕ್ರತಿಕ ಮತ್ತು ಆರ್ಥಿಕ ಸೇರಿದ ಸಮಗ್ರ ಅಭಿವೃದ್ಧಿ ಯೋಜನೆಗಗಳ ಬಗ್ಗೆ ಹಾಗೂ ಮುಂದಿನ ನಿರ್ಮಾಣ ಯೋಜನೆಗಳ ವಿವರಣೆಗಳನ್ನು ನೀಡಿದಲ್ಲದೆ ಮುಂದಿನ ಬಜೆಟ್‌ ನಲ್ಲಿ ವಿಶೇಷ ನೆರವಿಗಾಗಿಯೂ ಮನವಿಯಲ್ಲಿ ಬೇಡಿಕೆ ಸಲ್ಲಿಸಲಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಆನೆಗುಂದಿ ಪ್ರತಿಷ್ಠಾನದ ನೇತೃತ್ವದಲ್ಲಿ ಸಮಾಜದ ಮುಖಂಡರುಗಳು ಸನ್ಮಾನ್ಯ ಪ್ರಧಾನ ಮಂತ್ರಿ ಗಳವರನ್ನು ಸಂದರ್ಶಿಸಿ ವಿಶ್ವಕರ್ಮ ಸಮಾಜದ ಸ್ಥಿತಿಗತಿ ಮತ್ತು ಅಭಿವೃದ್ಧಿ ಯೋಜನೆಗಳನ್ನು ವಿವರಿಸಲು ತೀರ್ಮಾನಿಸಲಾಗಿದೆ ಎಂದು ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಹಾಗೂ ಪ್ರಧಾನ ಕಾರ್ಯದರ್ಶಿ ಲೋಕೇಶ್‌ ಎಂ.ಬಿ ಆಚಾರ್‌ ಕಂಬಾರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಪು : ಕನ್ನಡ ಬಳಕೆ, ಅಭಿರುಚಿಯನ್ನು ಬೆಳೆಸುವ ಕಾರ್ಯ ಕನ್ನಡ ಭಾಷೆ ಕಲಿಸುವ ಶಿಕ್ಷಕರಿಂದ ಆಗಲಿ - ನೀಲಾವರ ಸುರೇಂದ್ರ ಅಡಿಗ

Posted On: 16-09-2023 12:31PM

ಕಾಪು : ಬೋಧಿಸುವ ಭಾಷೆಗೆ ನ್ಯಾಯ ಒದಗಿಸುವ ಕಾರ್ಯ ಶಿಕ್ಷಕರು ಮಾಡಬೇಕಾಗಿದೆ. ಕನ್ನಡ ಭಾಷೆಯ ಮೇಲೆ ಆಂಗ್ಲ ಭಾಷೆಯ ಪ್ರಭಾವ ಅಷ್ಟೇನು ಪ್ರಭಾವ ಬೀರದು. ಕನ್ನಡ ಎಲ್ಲೆಲ್ಲೂ ಅದರದೇ ಆದ ಮಹತ್ವ ಹೊಂದಿದೆ. ಪದವಿಯಲ್ಲಿ ಕಲಾ ವಿಷಯದಲ್ಲಿ ಕನ್ನಡ ಭಾಷೆಯಲ್ಲಿ ಅಭ್ಯಸಿಸುವವರ ಸಂಖ್ಯೆಗೆ ಕೊರತೆಯಿಲ್ಲ. ಕನ್ನಡ ಬಳಕೆ ಮತ್ತು ಅಭಿರುಚಿಯನ್ನು ಬೆಳೆಸುವ ಕಾರ್ಯ ಕನ್ನಡ ಭಾಷೆ ಕಲಿಸುವ ಶಿಕ್ಷಕರಿಂದ ಆಗಲಿ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಹೇಳಿದರು. ಅವರು ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕ ವತಿಯಿಂದ ಕಾಪು ತಾಲೂಕು ವ್ಯಾಪ್ತಿಯ ಪಾಥಮಿಕ, ಪ್ರೌಢ, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳ ಕನ್ನಡ ಭಾಷಾ ಶಿಕ್ಷಕರು, ಉಪನ್ಯಾಸಕರಿಗೆ ವಿದ್ಯಾರ್ಥಿಗಳಲ್ಲಿ ಕನ್ನಡ ಕಲಿಕೆ, ಶುದ್ಧ ಕನ್ನಡದ ಬಳಕೆ ಮತ್ತು ಕನ್ನಡ ನಾಡಿನ ಕಲೆ, ಸಾಹಿತ್ಯದ ಅಭಿರುಚಿ ಬೆಳೆಸುವ ಕುರಿತು ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಶನಿವಾರ ಜರಗಿದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಗೋಪಾಲಕೃಷ್ಣ ಗಾವ್ಕಂಕರ್ ಮಾತನಾಡಿ ಹೆಚ್ಚು ಭಾಷೆ ಕಲಿತಾಗ ತಿಳುವಳಿಕೆ ಮಟ್ಟ ಹೆಚ್ಚು ಎಂದು ಕಲಿತು ಅದರ ಪರಿಣಾಮ ಭಾಷೆ ಸಂಮಿಶ್ರವಾಗುತ್ತಿದೆ. ಕಾರ್ಯಾಗಾರದ ಮೂಲಕ ಮತ್ತಷ್ಟು ಜ್ಞಾನ ತಿಳಿಯಲು ಸಾಧ್ಯ ಎಂದರು.

ಉಪನ್ಯಾಸಕಿ ಪಜ್ಞಾ ಮಾರ್ಪಳ್ಳಿ ದಿಕ್ಸೂಚಿ ಭಾಷಣ ಮಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ವಿಶ್ರಾಂತ ಪತ್ರಕರ್ತ ಎಸ್‌.ನಿತ್ಯಾನಂದ ಪಡ್ರೆ ಹಾಗೂ ಶಿಕ್ಷಕ ರಾಘವೇಂದ್ರ ರಾವ್‌ ಕಟಪಾಡಿ ಭಾಗವಹಿಸಿ ವಿದ್ಯಾರ್ಥಿಗಳಲ್ಲಿ ಕನ್ನಡ ಕಲಿಕೆ, ಶುದ್ಧ ಕನ್ನಡದ ಬಳಕೆ ಮತ್ತು ಕನ್ನಡ ನಾಡಿನ ಕಲೆ, ಸಾಹಿತ್ಯದ ಅಭಿರುಚಿ ಬೆಳೆಸುವ ಕುರಿತು ತರಬೇತಿ ನಡೆಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ತಾಲೂಕು ಘಟಕದ ಪುಂಡಲೀಕ ಮರಾಠೆ ವಹಿಸಿದ್ದರು. ಶಿಕ್ಷಣ ಸಂಯೋಜಕ ಶಂಕರ್, ಕಾಪು ಪ್ರಥಮ ದರ್ಜೆ ಕಾಲೇಜಿನ ಸಾಹಿತ್ಯ ಸಂಘದ ಸಂಯೋಜಕರಾದ ದೀಪಿಕಾ ಸುವರ್ಣ, ಕಾರ್ಯದರ್ಶಿಗಳಾದ ಅಶ್ವಿನ್ ಲಾರೆನ್ಸ್, ನೀಲಾನಂದ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೋಶಾಧಿಕಾರಿ ವಿದ್ಯಾಧರ್ ಪುರಾಣಿಕ್ ಸ್ವಾಗತಿಸಿದರು. ಕಾರ್ಯದರ್ಶಿ ನೀಲಾನಂದ ನಾಯಕ್ ನಿರೂಪಿಸಿದರು. ಅಶ್ವಿನ್ ಲಾರೆನ್ಸ್ ವಂದಿಸಿದರು.

ಉಡುಪಿ : ಮಲ್ಪೆಯ ತೊಟ್ಟಂ ನಲ್ಲಿ ಗ್ರಾನೈಟ್ ಬಿದ್ದು ಕಾರ್ಮಿಕರಿಬ್ಬರು ಸಾವನ್ನಪ್ಪಿದ್ದು ಮೃತರ ಕುಟುಂಬಕ್ಕೆ ಪರಿಹಾರ ನೀಡಲು SDTU ಆಗ್ರಹ

Posted On: 16-09-2023 07:21AM

ಉಡುಪಿ : ಮಲ್ಪೆಯ ತೊಟ್ಟಂನಲ್ಲಿ ಕಂಟೈನರ್ ನಿಂದ ಗ್ರಾನೈಟ್ ಇಳಿಸುವಾಗ ಆಕಸ್ಮಿಕ ಕಾರ್ಮಿಕರಿಬ್ಬರ ಮೇಲೆ ಬಿದ್ದು ಒರಿಸ್ಸಾದ ಇಬ್ಬರು ದಾರುಣವಾಗಿ ಮೃತಪಟ್ಟ ದುರ್ಘಟನೆ ನಡೆದಿದೆ. ಈ ದುರ್ಘಟನೆಗೆ SDTU ಉಡುಪಿ ಜಿಲ್ಲೆ ತೀವ್ರವಾಗಿ ಖಂಡನೆ ವ್ಯಕ್ತಪಡಿಸುತ್ತಿದೆ. ಕುಟುಂಬದ ಜೀವನ ನಿರ್ವಹಣೆಗಾಗಿ ಜವಾಬ್ದಾರಿಯನ್ನು ಹೊತ್ತು ಹೊರರಾಜ್ಯದಿಂದ ಕೆಲಸವನ್ನು ಹರಸಿ ಬರುವ ಕಾರ್ಮಿಕರು ಸೂಕ್ತ ಸುರಕ್ಷಾ ಕ್ರಮ ಇಲ್ಲದೆ ವಿವಿಧ ಅಪಾಯಗಳನ್ನು ಎದುರಿಸುತ್ತಿದ್ದಾರೆ.

ದುಡಿಸುವವರು ಅನುಕೂಲಕ್ಕೆ ತಕ್ಕ ಹೊರರಾಜ್ಯದ ಕಾರ್ಮಿಕರನ್ನು ಯಾವುದೇ ಸುರಕ್ಷಾ ಕ್ರಮ ವಹಿಸದೆ ಕಾರ್ಮಿಕರನ್ನು ವಿವಿಧ ರೀತಿಯಲ್ಲಿ ಬಳಸುತ್ತಿರುವ ಕಾರಣದಿಂದ ಸಾವು ನೋವುಗಳು ಸಂಭವಿಸುವ ಘಟನೆಗಳು ನಡೆಯುತ್ತಿದೆ. ಕಾರ್ಮಿಕರ ಶ್ರಮವನ್ನು ನಮ್ಮ ಅನುಕೂಲಕ್ಕೆ ತಕ್ಕ ಬಳಸುವಾಗ ಅವರ ಕ್ಷೇಮಾಭಿವೃದ್ಧಿ ಮತ್ತು ಸುರಕ್ಷತೆಯನ್ನು ಖಾತ್ರಿ ಪಡಿಸುವೂದಕ್ಕಾಗಿ ಅಧಿಕೃತರು ವಿಶೇಷ ಕ್ರಮ ವಹಿಸಬೇಕು ಮಾತ್ರವಲ್ಲ ದುಡಿಮೆಗಾಗಿ ಹೊರ ರಾಜ್ಯದಿಂದ ಬರುವ ಹೊರರಾಜ್ಯಕ್ಕೆ ತೆರಳುವ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಸರಕಾರ ವಿಶೇಷ ಕ್ರಮವಹಿಸಲು ಸೋಷಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಉಡುಪಿ ಜಿಲ್ಲೆ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಉಚ್ಚಿಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಶಿರ್ವ ಸಂತಮೇರಿ ಕಾಲೇಜು - ಕೊಂಕಣಿ ಅಧ್ಯಯನ ಪೀಠದಿಂದ ವಿಶೇಷ ಉಪನ್ಯಾಸ

Posted On: 15-09-2023 09:49PM

ಶಿರ್ವ : ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ವತಿಯಿಂದ ಸಂತ ಮೇರಿ ಕಾಲೇಜಿನ ಸಹಯೋಗದಲ್ಲಿ " ಕೊಂಕಣಿ ಮಾತೃಭಾಷೆ -ಒಂದು ಚಿಂತನೆ" ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಲಾಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತರು ಹಾಗೂ ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾದ ಬಿ. ಪುಂಡಲೀಕ ಮರಾಠೆಯವರು ಕೊಂಕಣಿ ಭಾಷೆಯ ಪರಂಪರೆ, ಬೆಳವಣಿಗೆ ಹಾಗೂ ಅದರ ಪ್ರಸ್ತುತ ವೈಭವವನ್ನು ವಿವರಿಸಿದರು. ಕೊಂಕಣಿ ಒಂದು ರಾಷ್ಟ್ರಭಾಷೆಯಾಗಿದ್ದು, ಶಾಲೆಗಳಲ್ಲಿಯೂ ತೃತೀಯ ಭಾಷೆಯಾಗಿ ಕಲಿಯುವ ಅವಕಾಶ ಇದೆ. ಬದಲಾಗುತ್ತಿರುವ ಸನ್ನಿವೇಶಗಳಲ್ಲಿ ಕೊಂಕಣಿ ಭಾಷೆಯಲ್ಲೂ ಅವಕಾಶಗಳು ಉಜ್ವಲವಾಗಿದ್ದು, ಕೊಂಕಣಿ ಭಾಷಿಕರು ಹಾಗೂ ಆಸಕ್ತರು ಇದರ ಸದುಪಯೋಗ ಪಡೆಯುವಂತೆ ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಮಂಗಳೂರು ವಿಶ್ವವಿದ್ಯಾನಿಲಯ ಕೊಂಕಣಿ ಅಧ್ಯಯನ ಪೀಠದ ಸಂಯೋಜಕರಾದ ಡಾ. ಜಯವಂತ ನಾಯಕ್‌ರವರು ಮಾತನಾಡಿ ಕೊಂಕಣಿ ಭಾಷೆಯು ರಾಜ್ಯಭಾಷೆಯಾಗಿ ಬೆಳೆದು ಬಂದ ದಾರಿಯನ್ನು ವಿವರಿಸಿದರು. ಸಂವಿಧಾನದ ಎಂಟನೇ ಪರಚ್ಛೇದದಲ್ಲಿ ಸೇರ್ಪಡೆಗೊಂಡ ನಂತರ ಕೊಂಕಣಿ ಭಾಷೆಯ ಕ್ಷಿಪ್ರ ಬೆಳವಣಿಗೆಯನ್ನು ವಿವರಿಸಿದರು. ಭಾಷೆಯು ಜನರನ್ನು ಒಗ್ಗೂಡಿಸುವ ಜೊತೆಗೆ ಅನೇಕ ಸಂಬಂಧಗಳನ್ನು ಬೆಸೆಯುತ್ತದೆ. ಕೊಂಕಣಿ ಭಾಷೆಯು ತನ್ನದೇ ಆದ ಅಸ್ಮಿತತೆಯನ್ನು ಹೊಂದಿದ್ದು ಜಾತಿ, ಧರ್ಮ ಹಾಗೂ ಪ್ರಾಂತ್ಯಗಳ ಬೇಧವಿಲ್ಲದೆ ವಿವಿಧ ಕ್ಷೇತ್ರಗಳಲ್ಲಿ ತನ್ನ ಅಪೂರ್ವ ಕೊಡುಗೆಗಳನ್ನು ನೀಡಿದೆ ಅಲ್ಲದೆ ಎರಡು ಜ್ಞಾನಪೀಠ ಗೌರವವನ್ನು ಪಡೆದಿದೆ ಎಂದು ನುಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆರಾಲ್ಡ್ ಐವನ್ ಮೊನಿಸ್‌ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, ಪ್ರತಿಯೊಬ್ಬರೂ ತಮ್ಮ ಮಾತೃಭಾಷೆಯನ್ನು ಪ್ರೀತಿಸಿ ಅದನ್ನು ಬಳಸಿದಾಗ ಭಾಷೆಯ ಉಳಿವು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಉಪನ್ಯಾಸಕರಾದ ಪೂರ್ಣಿಮಾ ಜಿ.ಎ., ಶರ್ಮಿಳಾ, ಪ್ರೇಮನಾಥ, ರಾಘವೇಂದ್ರ ಹೆಗ್ಡೆ ಮತ್ತು ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕರಾದ ಮೆಲ್ವಿನ್ ಕ್ಯಾಸ್ತೆಲಿನೊ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಐಕ್ಯೂಎಸಿ ಸಂಯೋಜಕರಾದ ಜಗದೀಶ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೇಯಾ ನಾಯಕ್ ಕಾರ್ಯಕ್ರಮ ನಿರೂಪಿಸಿ, ಶಾನಿಯಾ ತಂಡದವರು ಪ್ರಾರ್ಥಿಸಿದರು. ವೆನೆಸಿಯಾ ಕ್ವಾಡ್ರಸ್ ವಂದಿಸಿದರು.

ಕಾಪು : ಹೊಸ ಮಾರಿಗುಡಿ ದೇವಳದಲ್ಲಿ ಭಾರತದ ಸಂವಿಧಾನ ಪೀಠಿಕೆ ಓದುವ ಮೂಲಕ ಪ್ರಜಾಪ್ರಭುತ್ವ ದಿನಾಚರಣೆ

Posted On: 15-09-2023 06:40PM

ಕಾಪು : ಕರ್ನಾಟಕ ರಾಜ್ಯ ಸರ್ಕಾರದ ಆದೇಶದಂತೆ, ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಭಾರತದ ಸಂವಿಧಾನ ಪೀಠಿಕೆಯನ್ನು ಓದುವ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯಾದ್ಯಂತ ಹಮ್ಮಿಕೊಂಡಿದ್ದು ಇಂದು ಕಾಪು ಹೊಸ ಮಾರಿಗುಡಿ ದೇವಳದಲ್ಲಿ ಭಾರತದ ಸಂವಿಧಾನ ಪೀಠಿಕೆಯನ್ನು ಓದುವ ಕಾರ್ಯಕ್ರಮವು ಜರುಗಿತು.

ಈ ಸಂದರ್ಭ ಹೊಸ ಮಾರಿಗುಡಿ ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯ, ಸದಸ್ಯರುಗಳಾದ ಚಂದ್ರಶೇಖರ ಅಮೀನ್, ಬಾಬು ಮಲ್ಲಾರು, ಪ್ರಬಂಧಕರಾದ ಗೋವರ್ಧನ ಶೇರಿಗಾರ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಬಿಜೆಪಿ ಟಿಕೆಟ್ ವಂಚನೆ ಪ್ರಕರಣ - ಇದರ ಹಿಂದಿರುವ ಕಾಣದ ಕೈಗಳನ್ನು ಬಂಧಿಸಲು ವಿಮೆನ್ ಇಂಡಿಯಾ ಮೂವ್ಮೇಂಟ್ ಆಗ್ರಹ

Posted On: 15-09-2023 06:14PM

ಉಡುಪಿ : ಬೈಂದೂರಿನ ಉದ್ಯಮಿ ಹಾಗೂ ಬಿಜೆಪಿ ಪಕ್ಷದ ಮುಖಂಡರೊಬ್ಬರಿಗೆ ಪಕ್ಷದ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಏಳು ಕೋಟಿ ರೂಪಾಯಿಗಳನ್ನು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಚೈತ್ರಾ ಕುಂದಾಪುರ ಎಂಬ ನಕಲಿ ಹಿಂದೂ ಹೋರಾಟಗಾರ್ತಿಯನ್ನು ಬಂಧಿಸಿರುವ ಪೋಲೀಸರ ಕ್ರಮ ಸ್ವಾಗತಾರ್ಹ.

ದ್ವೇಷಭಾಷಣದ ಮೂಲಕ ಕುಖ್ಯಾತಿ ಹೊಂದಿದ್ದ ಚೈತ್ರ ರೌಡಿಸಂನಲ್ಲೂ ಗುರುತಿಸಿಕೊಂಡಿದ್ದರು. ಇದೀಗ ವಂಚನೆ ಪ್ರಕರಣದಲ್ಲೂ ಸಿಕ್ಕಿಬಿದ್ದಿರುವುದು ಅತಿಶಯೋಕ್ತಿ ಅಲ್ಲ. ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿದರೆ ಇನ್ನಷ್ಟು ಪ್ರಕರಣಗಳು ಬಯಲಾಗಬಹುದು.

ಅಂತೆಯೇ ಈ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಗೆ ಪೊಲೀಸರಿಂದ ತಪ್ಪಿಸಲು ಆಶ್ರಯ ನೀಡಿದ ಕಾಂಗ್ರೆಸ್ ವಕ್ತಾರೆ, ವಂಚನೆಗೊಳಗಾದ ಉದ್ಯಮಿ ಮತ್ತು ಸ್ವತಃ ಚೈತ್ರಾಳೇ ತಿಳಿಸಿರುವಂತೆ ಈ ವಂಚನೆಯ ಹಿಂದಿರುವ ಪ್ರಭಾವಿ ಆರ್ ಎಸ್ ಎಸ್ ಮುಖಂಡನನ್ನೂ ಸಮಗ್ರ ತನಿಖೆಗೊಳಪಡಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಉಡುಪಿ ಜಿಲ್ಲಾಧ್ಯಕ್ಷೆ ನಾಝಿಯಾ ನಸ್ರುಲ್ಲಾ ಪತ್ರಿಕಾ ಪ್ರಕಟಣೆ ಮೂಲಕ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸಮಾಜ ಸೇವೆಗೆ ಮತ್ತೊಂದು ಹೆಸರು ಆಸ್ಕರ್ ಫೆರ್ನಾಂಡಿಸ್ : ಎಂ.ಎ. ಗಪೂರ್

Posted On: 15-09-2023 06:11PM

ಉಡುಪಿ : ಕೇಂದ್ರ ರಾಜ್ಯದಲ್ಲಿ ನಿಸ್ವಾರ್ಥ ರಾಜಕಾರಣ ಮಾಡಿರುವ ಕೇಂದ್ರದ ಮಾಜಿ ಸಚಿವ ದಿವಂಗತ ಆಸ್ಕರ್ ಫೆರ್ನಾಂಡಿಸ್ ಉಡುಪಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾರಣಕರ್ತರು. ಯಾವುದೇ ಪ್ರಚಾರ ಬಯಸದ ಆಸ್ಕರ್ ಫೆರ್ನಾOಡಿಸ್ ನಿಜವಾಗಿಯೂ ಸಮಾಜಸೇವೆಗೆ ಮತ್ತೊಂದು ಹೆಸರು ಎಂದು ಕೆಪಿಸಿಸಿ ಕಾರ್ಯದರ್ಶಿ ಎಂಎ ಗಪೂರ್ ತಿಳಿಸಿದರು.

ಅವರು ದಿವಂಗತ ಆಸ್ಕರ್ ಫೆರ್ನಾOಡಿಸ್ ಅಭಿಮಾನಿ ಬಳಗ ಮತ್ತು ಮಾನವ ಬಂಧುತ್ವ ವೇದಿಕೆ ಉಡುಪಿ ಜಿಲ್ಲಾ ಸಂಚಲನ ಸಮಿತಿ ನೇತೃತ್ವದಲ್ಲಿ ದಿವಂಗತ ಆಸ್ಕರ್ ಫೆರ್ನಾOಡಿಸ್ ರವರ ದ್ವಿತೀಯ ಪುಣ್ಯತಿಥಿಯ ಸ್ಮರಣಾರ್ಥ ಉದ್ಯಾವರ ಸಂಪಿಗೆ ನಗರದ 'ಸ್ನೇಹಲಯ'ದಲ್ಲಿ ದಿನಸಿ ವಸ್ತುಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಿ ಮಾತನಾಡಿದರು.

ಉಡುಪಿ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷರಾದ ಕೃಷ್ಣಮೂರ್ತಿ ಆಚಾರ್ಯ, ಅಸ್ಕರ್ ಫೆರ್ನಾOಡಿಸ್ ರವರು ಕೇಂದ್ರ ಸಚಿವರಾಗಿದ್ದಾಗ ಮಧ್ಯರಾತ್ರಿಯವರೆಗೂ ತನ್ನ ಕಚೇರಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡುತ್ತಿದ್ದರು. ಅವರ ಕೆಲಸ ಕಾರ್ಯಗಳೇ ನನ್ನ ಸಾಮಾಜಿಕ ಕೆಲಸಗಳಿಗೆ ಪ್ರೇರಣೆ ಎಂದರು.

ಈ ಸಂದರ್ಭದಲ್ಲಿ ದಿನಸಿ ವಸ್ತುಗಳ ಪ್ರಾಯೋಜಕರೂ, ಮಾನವ ಬಂಧುತ್ವ ವೇದಿಕೆ ಇದರ ರಾಜ್ಯ ಸಮಿತಿ ಸದಸ್ಯರಾಗಿರುವ ರೊನಾಲ್ಡ್ ಮನೋಹರ್ ಕರ್ಕಡ, ಕಡೆಕಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ನವೀನ್ ಶೆಟ್ಟಿ, ಮಂಜೀತ್ ನಾಗರಾಜ್, ಮಹಮ್ಮದ್ ಶೀಶ್, ಜೂಲಿಯನ್ ದಾಂತಿ, ಚಾಲ್ಸ್ ಅಂಬ್ಲರ್, ರಿಯಾಜ್ ಪಳ್ಳಿ, ಸುಹೇಲ್ ಅಬ್ಬಾಸ್, ಪ್ರೇಮ್ ಮಿನೆಜಸ್, ಸಿಸ್ಟರ್ ಲೀನಾ ಮತ್ತಿತರರು ಉಪಸ್ಥಿತರಿದ್ದರು. ಸ್ಟೀವನ್ ಕುಲಾಸೊ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಸೆಪ್ಟೆಂಬರ್ 16 : ಕಾಪು ಉಪ ಅಂಚೆ ಕಚೇರಿಯಲ್ಲಿ ಅಂಚೆ ಜನ ಸಂಪರ್ಕ ಅಭಿಯಾನ

Posted On: 14-09-2023 11:51AM

ಕಾಪು : ಅಂಚೆ ಜನ ಸಂಪರ್ಕ ಅಭಿಯಾನವನ್ನು ಕಾಪು ಉಪ ಅಂಚೆ ಕಚೇರಿಯಲ್ಲಿ ಸೆಪ್ಟೆಂಬರ್ 16, ಶನಿವಾರ ಬೆಳಿಗ್ಗೆ 9 ಗಂಟೆ ಯಿಂದ ಸಂಜೆ 5 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.

ಈ ಅಭಿಯಾನದಲ್ಲಿ ವಿವಿಧ ಅಂಚೆ ಸೇವೆಗಳ ಬಗ್ಗೆ ಮಾಹಿತಿ ನೀಡುವುದು, ಎಲ್ಲ ರೀತಿಯ ಹೊಸ ಅಂಚೆ ಉಳಿತಾಯ ಖಾತೆಗಳನ್ನು ಮತ್ತು ಹೊಸ ವಿಮಾ ಪಾಲಿಸಿಗಳನ್ನು ತೆರೆಯುವುದು, ಹೊಸ ಆಧಾರ್ ನೊಂದಣಿ, ಬಯೋಮೆಟ್ರಿಕ್, ವಿಳಾಸ ಹಾಗು ಮೊಬೈಲ್ ಸಂಖ್ಯೆ ಬದಲಾವಣೆ, ಸರಕಾರದ ವಿವಿಧ ಸವಲತ್ತುಗಳಿಗಾಗಿ ಅಂಚೆ ಖಾತೆಗೆ ಆಧಾರ್ ಜೋಡಣೆ, ಹತ್ತು ಲಕ್ಷ ರೂಪಯಿವರೆಗಿನ ಅಪಘಾತ ವಿಮೆಗಾಗಿ ಟಾಟಾ ಇನ್ಸುರೆನ್ಸ್ ಮೊದಲಾದ ಸೇವೆಗಳನ್ನು ಕಾಪು ಅಂಚೆ ಕಚೇರಿಯಲ್ಲಿಯೇ ಗ್ರಾಹಕರಿಗೆ ಒದಗಿಸುವ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ.

ಈ ಅಭಿಯಾನದ ಲಾಭವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕಾಗಿ ಉಡುಪಿ ಅಂಚೆ ವಿಭಾಗದ ಅಧೀಕ್ಷಕ ರಮೇಶ ಪ್ರಭು ವಿನಂತಿಸಿದ್ದಾರೆ.

ಗ್ರಾಹಕರು ತರಬೇಕಾದ ದಾಖಲೆಗಳು : ಆಧಾರ್ ಪ್ರತಿ, ಪಾನ್ ಕಾರ್ಡ್ ಪ್ರತಿ, ಗುರುತು ಪತ್ರ, ಪಾಸ್ ಪೊರ್ಟ್ ಫೊಟೊ-2. ಜನನ ಪ್ರಮಾಣ ಪತ್ರ [SSA]. ಹೆಚ್ಚಿನ ವಿವರಗಳಿಗೆ ಪೋಸ್ಟ್ ಮಾಸ್ಟರ್ ಕಾಪುರವರನ್ನು ಸಂಪರ್ಕಿಸಬಹುದು.

ಉಡುಪಿ ತಾಲೂಕು ಮಟ್ಟದ ತ್ರೈಮಾಸಿಕ ಕೆ.ಡಿ.ಪಿ ಸಭೆ

Posted On: 13-09-2023 01:41PM

ಉಡುಪಿ : ತಾಲೂಕು ಮಟ್ಟದ ತ್ರೈಮಾಸಿಕ ಕೆ.ಡಿ.ಪಿ ಸಭೆ ಇಂದು ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಡೆಂಗ್ಯೂ ರೋಗ ತಡೆಗೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಮತ್ತು ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ಘಟಕವನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿ ಲೋಕೋಪಯೋಗಿ ಮತ್ತು ಸಣ್ಣ ನೀರಾವರಿ ಇಲಾಖೆಯ ಕಾಮಗಾರಿಯ ಪ್ರಗತಿಯ ಬಗ್ಗೆ ಮಾಹಿತಿ ಪಡೆದು ವಿವಿಧ ಇಲಾಖೆಗಳಲ್ಲಿ ಸಿಬ್ಬಂದಿಗಳ ಕೊರತೆಯ ಇದ್ದು ಆಡಳಿತಾತ್ಮಕ ಹಿತ ದೃಷ್ಟಿಯಿಂದ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಸರಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಉಡುಪಿ ತಾಲೂಕು ಪಂಚಾಯತ್ ಆಡಳಿತಾಧಿಕಾರಿಗಳಾದ ರವೀಂದ್ರ, ಉಡುಪಿ ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳಾದ ವಿಜಯ ಮತ್ತು ಉಡುಪಿ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.