Updated News From Kaup
ಉಡುಪಿ : ಸುಳ್ಳಿಗೆ ಬೆಂಬಲವಾಗಿ ನಿಲ್ಲುವ ಸಂಘಟನೆ ನ್ಯಾಯದ ಘೋರಿ ಕಟ್ಟಲು ಹೊರಟಿದೆಯಾ ?
Posted On: 09 Nov 2023, 10:48 PM
ಉಡುಪಿ : ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಆಯುರ್ವೇದ ವೈದ್ಯರುಗಳ ಸಂಘಟನೆ ಎಂಬ ಹೆಸರಿನಲ್ಲಿ ಕೆಲವು ವ್ಯಕ್ತಿಗಳು ತನ್ನ ವೈದ್ಯಕೀಯ ವೃತ್ತಿಗೆ ಪತ್ರಕರ್ತ ಓರ್ವನಿಂದ ತೊಂದರೆಯಾಗುತ್ತಿದೆ ಎಂದು ಹೇಳಿ ತುಳುನಾಡ ರಕ್ಷಣಾ ವೇದಿಕೆ ಎಂಬ ಸಂಘಟನೆಗೆ ದೂರು ಸಲ್ಲಿಸಿದ್ದಾರೆ ಆಯುರ್ವೇದ ವೈದ್ಯರುಗಳೆಂಬ ವ್ಯಕ್ತಿಗಳ ಬೆಂಬಲಕ್ಕೆ ನಿಂತು ಆಯುರ್ವೇದ ವೈದ್ಯರ ಪರವಾಗಿ ಉಡುಪಿ ಜಿಲ್ಲಾ ಎಸ್.ಪಿಯವರಿಗೆ ಮನವಿ ನೀಡಿದ್ದಾರೆ ಎಂದು ಅದೇ ಸಂಘಟನೆಯ ಹೆಸರನ್ನು ಹೋಲುವ ವೆಬ್ ಸೈಟ್ ನಲ್ಲಿ ವರದಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ, ಅಸಲಿಗೆ ಆಯುರ್ವೇದ ವೈದ್ಯರುಗಳು ಎನ್ನುವರಿಗೆ ಅನ್ಯಾಯ ಆಗಿದೆ, ಬೆದರಿಕೆ ಇದೆ ಎಂದಾದರೆ ಕಾನೂನಿನ ಸಾಮಾನ್ಯ ಅರಿವು ಇದ್ದವರು ಕೂಡ ನೇರವಾಗಿ ಸಮೀಪದ ಪೊಲೀಸ್ ಠಾಣೆಯಲ್ಲಿ, ದೂರನ್ನು ಸಲ್ಲಿಸುತ್ತಾರೆ. ಈ ಪ್ರಕರಣದಲ್ಲಿ ಆಯುರ್ವೇದ ವೈದ್ಯರು ಎಂದು ಹೇಳುವವರು ಕನಿಷ್ಠ ಪೊಲೀಸರಿಗೆ ದೂರು ನೀಡದೆ ಸಂಘಟನೆ ಒಂದಕ್ಕೆ ದೂರು ನೀಡಿರುವುದು ವಿಪರ್ಯಾಸ ಅಲ್ಲದೆ, ಅಹಿತಕರ ಬೆಳವಣಿಗೆ ಆಗಿದೆ. ಈ ಆಯುರ್ವೇದ ವೈದ್ಯರುಗಳು ತಮ್ಮ ಸಂಘಟನೆಯ ಮೂಲಕ ತುಳುನಾಡ ರಕ್ಷಣಾ ವೇದಿಕೆಗೆ ದೂರು ನೀಡಿ ಓರ್ವ ನಿಷ್ಠಾವಂತ ಪತ್ರಕರ್ತನಿಗೆ ಬೆದರಿಸುವ ತಂತ್ರವೇ? ಯಾವುದೇ ಸಂಘಟನೆ ಯಾವುದೇ ಘಟನೆಗಳ ಬಗ್ಗೆ ದೂರನ್ನು ಸಲ್ಲಿಸುವಾಗ ಆ ವಿಚಾರದ ಬಗ್ಗೆ ಕೂಲಂಕುಶವಾಗಿ ತನಿಖೆ ಮಾಡುವುದು ಸೂಕ್ತ ಅದನ್ನು ಬಿಟ್ಟು ಯಾರೋ ತಮಗೆ ಆಗದವರ ಮೇಲೆ ನೀಡಿದ ದ್ವೇಷ ಪೂರಿತ ದೂರನ್ನು ಯಥಾವತ್ ಹಿಂದುಮುಂದು ನೋಡದೆ ಮನವಿ ಸಲ್ಲಿಸುವುದು ಸಂಘಟನೆಯ ಅಪಪ್ರಬುದ್ಧತೆಯನ್ನು ಎತ್ತಿ ತೋರಿಸುತ್ತದೆ, ಅಲ್ಲದೆ ಪತ್ರಕರ್ತ ಕಿರಣ್ ಪೂಜಾರಿಯವರು ಹಳ್ಳಿಗಾಡಿನಾ ಬಡ ಮುಗ್ದ ರೋಗಿಗಳಿಗೆ ಆಗುತ್ತಿರುವ ಅನ್ಯಾಯದ ಪರ ರಾತ್ರಿ ಹಗಲೆನ್ನದೆ ತನಿಖಾ ಪತ್ರಕರ್ತಿಕ್ಕೆ ನಡೆಸಿ ಪ್ರಕಟಿಸಿದ ವರದಿಯಿಂದ ರೊಚ್ಚಿಗೆದ್ದ, ಅಕ್ರಮವಾಗಿ ವ್ಯವಹಾರ ನಡೆಸುತ್ತಿರುವ ವೈದ್ಯರುಗಳು ಪತ್ರಕರ್ತ ಕಿರಣ ಪೂಜಾರಿಯ ಮಾನಹಾನಿ ಮಾಡಲು ಎಲ್ಲಿಲ್ಲದ ಪ್ರಯತ್ನ ನಡೆಸುವುದರಲ್ಲದೆ ಅವರನ್ನು ನಿರ್ನಾಮ ಮಾಡುವವರೆಗೆ ಎಲ್ಲಾ ಪ್ರಯತ್ನವನ್ನು ಈಗಾಗಲೇ ಮಾಡಿದ್ದಾರೆ. ಆಯುಷ್ ಫೆಡರೇಶನ್ ಆಫ್ ಇಂಡಿಯಾ ಸಂಘಟನೆಯ ತಾಲೂಕು ಅಧ್ಯಕ್ಷ ಡಾ ಹರಿಪ್ರಸಾದ್ ಶೆಟ್ಟಿ ಎಂದು ತಿಳಿದು ಬಂದಿದೆ. ಆದರೆ ತುಳುನಾಡ ರಕ್ಷಣಾ ವೇದಿಕೆಗೆ ಮನವಿ ನೀಡಿದ ಲೆಟರ್ ಹೆಡ್ ರಾಜ್ಯಕ್ಕೆ ಸಂಬಂಧಿಸಿದ್ದು, ತಾಲೂಕು ಅಧ್ಯಕ್ಷ ರವೀಂದ್ರ ಗೊಲ್ಲ ಎನ್ನುವ ವ್ಯಕ್ತಿಯದಾಗಿರುತ್ತದೆ, ಇದು ಸಹ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಮನವಿ ನೀಡಿದ ಆಯುರ್ವೇದ ವೈದ್ಯರಾಗಿ ಅಲೋಪತಿ ಚಿಕಿತ್ಸೆಯನ್ನು ನೀಡಿ ಕೋಟಿಗಟ್ಟಲೆ ಆಸ್ತಿ ಸಂಪಾದಿಸಿರುವ ವೈದ್ಯರುಗಳು ಬಡ ಪತ್ರಕರ್ತ ಕಿರಣ್ ಪೂಜಾರಿಯವರನ್ನು ಹಣಿಯಲು ಪೊಲೀಸ್ ದೂರಿನಿಂದ ಮೊದಲು ಬಂದು ಇನ್ನಿಲ್ಲದ ಕಸರತ್ತುಗಳನ್ನು ನಡೆಸಿ ವಿಫಲರಾಗಿದ್ದು, ಇದೀಗ ಸಂಘಟನೆ ಒಂದರ ಬೆಂಬಲವೆಂಬ ಹೊಸ ನಾಟಕದೊಂದಿಗೆ ನಿಷ್ಠಾವಂತ ಪತ್ರಕರ್ತನನ್ನು ಹಣಿಯಲು ವೇದಿಕೆಯನ್ನು ನಿರ್ಮಿಸಿದ್ದಾರೆ. ಆಯುರ್ವೇದ ವೈದ್ಯರುಗಳು ನಡೆಸುವ ಚಿಕಿತ್ಸೆ, ಅವರು ನಡೆಸುವ ವ್ಯವಹಾರಗಳು ನ್ಯಾಯಯುತವಾಗಿದ್ದರೆ ಅವರು ಭಯಪಡುವ ಅಗತ್ಯ ಏನಿದೆ? ಕಿರಣ್ ಪೂಜಾರಿಯಂತ 100 ಪತ್ರಕರ್ತರು ಬಂದರು ಹೆದರುವ ಅಗತ್ಯ ಇದೆಯೇ? ತಾವು ನಡೆಸುವ ಅಕ್ರಮ ವ್ಯವಹಾರವನ್ನು ಯಾರು ಪ್ರಶ್ನಿಸಬಾರದು ತಾವು ವೈದ್ಯರು ಎಂಬ ದುರಂಕಾರದಿಂದ ಓರ್ವ ಪತ್ರಕರ್ತ ಕಿರಣ್ ಪೂಜಾರಿ ಅವರನ್ನು ಮಣಿಸಲು ಯತ್ನಿಸಿದರೆ ಅವರಂತ ನೂರು ಪತ್ರಕರ್ತರು ಇಂಥ ಅಕ್ರಮ ವ್ಯವಹಾರ ನಡೆಸುವಂತಹ ವೈದ್ಯರುಗಳ ಜಾತಕ ಬಯಲು ಮಾಡಲು ಸಜ್ಜಾಗುವುದರಲ್ಲಿ ಸಂಶಯವಿಲ್ಲ. ಪತ್ರಕರ್ತರು ಭಯವನ್ನು ಜಯಿಸಿದ ಮೇಲೆಯೇ ಇಂತಹ ತನಿಖಾ ಪತ್ರಿಕೋದ್ಯಮಕ್ಕೆ ಇಳಿದಿರುತ್ತಾರೆ ಅಂತಹ ಭಯವನ್ನು ಜಯಸಿ ಬಂದಿರುವ ಕಿರಣ್ ಪೂಜಾರಿಯಂತಹ ಪತ್ರಕರ್ತರನ್ನು ಯಾವುದೇ ಸಂಘಟನೆಗಳಿಂದ ಭಯಭೀತಿಗೊಳ್ಳಿಸುವ ಪ್ರಯತ್ನದಿಂದ ಏನು ಪ್ರಯೋಜನವಾಗದು , ಬಡವರ ಮುಗ್ದ ರೋಗಿಗಳ ಪರವಾಗಿ ನಿಂತಿರುವ ಕಿರಣ್ ಪೂಜಾರಿಯಂತವರ ನ್ಯಾಯಯುತ ಹೋರಾಟ ನಿರಂತರವಾಗಿ ಇರಬೇಕು. ಈ ಹೋರಾಟಕ್ಕೆ ನ್ಯಾಯವನ್ನು ಬಯಸುವ ಪ್ರತಿ ಒಬ್ಬ ಸಾಮಾಜಿಕ ಕಳಕಳಿ ಇರುವ ಸಾರ್ವಜನಿಕರು ಬೆಂಬಲ ಸಹಕಾರ ನಿಷ್ಠಾವಂತ ಪತ್ರಕರ್ತ ಕಿರಣ್ ಪೂಜಾರಿ ಅವರಿಗೆ ಬೇಕು.
ಉಡುಪಿ : ಕೊಳಲಗಿರಿ ವಿಶಿಷ್ಟ ರೀತಿಯಲ್ಲಿ ದೀಪಾವಳಿ ಆಚರಣೆ
Posted On: 08 Nov 2023, 05:58 PM
ಉಡುಪಿ : ಜಿಲ್ಲೆಯ ಪ್ರಮುಖ ಸೇವಾ ಸಂಸ್ಥೆಯಾದ ಹೋಮ್ ಡಾಕ್ಟರ್ ಫೌಂಡೇಶನ್ ಇದರ ವತಿಯಿಂದ ವಿಶಿಷ್ಟ ರೀತಿಯಲ್ಲಿ ಸಾಮೂಹಿಕ ದೀಪ ಬೆಳಗಿಸುವುದರೊಂದಿಗೆ ದೀಪಾವಳಿ ಹಬ್ಬವನ್ನು ನವೆಂಬರ್ 7 ರಂದು ಆಚರಿಸಲಾಯಿತು. ಕೊಳಲಗಿರಿ ಸಂತೆ ಮಾರುಕಟ್ಟೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಮಾಜ ಸೇವಕರಾದ ಗೀತಾ ಶೆಟ್ಟಿ, ರಾಜೇಶ್ ರೈ, ಸಚ್ಚಿದಾನಂದ ಹೆಗ್ಡೆ, ಉದ್ಯಮಿಗಳಾದ ಯದುನಾಥ್, ಸದಾನಂದ ಶೆಟ್ಟಿ ಇವರು ಭಾಗವಹಿಸಿ ಶುಭ ಹಾರೈಸಿದರು. ಸಂಸ್ಥೆಯ ಪ್ರಮುಖರಾದ ಡಾ| ಶಶಿಕಿರಣ್ ಶೆಟ್ಟಿ ಮಾತನಾಡಿ ಹೋಮ್ ಡಾಕ್ಟರ್ ಫೌಂಡೇಶನ್ ನಡೆದು ಬಂದ ಹಾದಿ ಮತ್ತು ವಿವಿಧ ಕಾನ್ಸೆಪ್ಟ್ ಗಳ ಮೂಲಕ ಸಮಾಜ ಸೇವೆಗಳ ವಿವರಗಳನ್ನು ಸಭೆಗೆ ತಿಳಿಸಿದರು. ವೇದಿಕೆಯಲ್ಲಿ ಡಾ| ಸುಮಾ ಎಸ್ ಶೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹಲವಾರು ಅಸಹಾಯಕ ರೋಗಿಗಳಿಗೆ ಸಹಾಯಧನ ಮತ್ತು ಅಕ್ಕಿ ಸೇರಿದಂತೆ ದಿನಬಳಕೆ ವಸ್ತುಗಳನ್ನು ವಿತರಿಸಲಾಯಿತು. ನಂತರ ಶಾರದ ಅಂಧ ಕಲಾವಿದ ತಂಡದಿಂದ ಸುಗಮ ಸಂಗೀತ ಕಾಯ೯ಕ್ರಮ ನಡೆಯಿತು. ಸಂಸ್ಥೆಯ ಸದಸ್ಯರಾದ ರಾಘವೇಂದ್ರ ಪೂಜಾರಿ, ಬಂಗಾರಪ್ಪ, ಸುಜಯ, ರಾಜೇಂದ್ರ, ಗಣೇಶ್, ಸುಂದರ ಪೂಜಾರಿ, ದಯಾನಂದ ಪೂಜಾರಿ, ರಾಘವೇಂದ್ರ ಕವಾ೯ಲು ಮುಂತಾದವರಿದ್ದರು. ರೋಷನ್ ಡಿಸೋಜ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕುತ್ಯಾರು ಯುವಕ ಮಂಡಲಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
Posted On: 08 Nov 2023, 05:49 PM
ಕಾಪು : ಕುತ್ಯಾರು ಯುವಕ ಮಂಡಲ ( ರಿ.) ಕುತ್ಯಾರು 1963 ರಲ್ಲಿ ಸ್ಥಾಪನೆ ಗೊಂಡು 60 ವರ್ಷಗಳಿಂದ ಸ್ಥಳೀಯವಾಗಿ ಶೈಕ್ಷಣಿಕ ಕ್ಷೇತ್ರ, ಕ್ರೀಡಾ ಕ್ಷೇತ್ರ, ಕೃಷಿ ಕ್ಷೇತ್ರ, ಕಲಾ ಕ್ಷೇತ್ರ, ಉದ್ಯೋಗ ಕಾರ್ಯಕ್ರಮ, ರಾಷ್ಟ್ರೀಯ ಹಬ್ಬ, ಪರಿಸರ ಸಂರಕ್ಷಣೆ, ರಕ್ತದಾನ ಇನ್ನಿತರ ಸಮಾಜ ಸೇವೆಗಳನ್ನು ಮಾಡಿಕೊಂಡು ಬಂದಿರುತ್ತದೆ. ಯುವಕ ಮಂಡಲದ ಸೇವೆಯನ್ನು ಮನಗೊಂಡು ಪ್ರಸ್ತುತ 2023 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪಡುಬಿದ್ರಿ ಆರೋಗ್ಯ ಕೇಂದ್ರ : ಆರೋಗ್ಯ ರಕ್ಷಾ ಸಮಿತಿ ಸಭೆ
Posted On: 08 Nov 2023, 05:45 PM
ಪಡುಬಿದ್ರಿ : ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಇದರ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಇಂದು ಜರಗಿತು. ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಕಲಾ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ನೀತಾ ಗುರುರಾಜ್, ಪ್ರಕಾಶ್ ಪಾದೆಬೆಟ್ಟು, ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಜಶ್ರೀ ಹಾಗೂ ಆರೋಗ್ಯ ರಕ್ಷಾ ಸಮಿತಿ ಸದಸ್ಯರು, ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ದಾದಿಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ನವೆಂಬರ್ 9 : ಕಟಪಾಡಿಯಲ್ಲಿ ಆಯುಷ್ ಆರೋಗ್ಯ ಶಿಬಿರ
Posted On: 08 Nov 2023, 11:58 AM
ಕಟಪಾಡಿ : ಆಯುಷ್ ಇಲಾಖೆ, ಉಡುಪಿ, ಜಿಲ್ಲಾ ಪಂಚಾಯತ್ ಉಡುಪಿ, ಪತಂಜಲಿ ಯೋಗ ಸಮಿತಿ ಉಡುಪಿ ಕಟಪಾಡಿ ಕಕ್ಷೆ, ಕಟಪಾಡಿ ಗ್ರಾಮ ಪಂಚಾಯತ್, ಎಸ್.ವಿ.ಎಸ್. ಹಳೆವಿದ್ಯಾರ್ಥಿ ಸಂಘ ಕಟಪಾಡಿ, ಮಹಿಳಾ ಮಂಡಲ ಕಟಪಾಡಿ, ಕೋಟೆ ಗ್ರಾಮ ಪಂಚಾಯತ್, ರೋಟರಿ ಕ್ಲಬ್ ಕಟಪಾಡಿ, ಸೃಷ್ಠಿ ಫೌಂಡೇಶನ್ ಕಟಪಾಡಿ, ಎಸ್.ವಿ.ಎಸ್.ವಿದ್ಯಾವರ್ಧಕ ಸಂಘ ಕಟಪಾಡಿ ಇವರ ಜಂಟಿ ಆಶ್ರಯದಲ್ಲಿ ಜಿಲ್ಲಾ ಆಯುರ್ವೇದ ಆಸ್ಪತ್ರೆ ಉಡುಪಿ ಇದರ ರಾಷ್ಟ್ರೀಯ ಅಯುಷ್ ಅಭಿಯಾನದ ಯೋಜನೆಯಡಿ ನವೆಂಬರ್ 9ರಂದು ಬೆಳಗ್ಗೆ 9.30ರಿಂದ 12.30ರ ವರೆಗೆ ಕಟಪಾಡಿ ಮಹಿಳಾ ಮಂಡಲ ಸಭಾ ಭವನದಲ್ಲಿ ಆಯುಷ್ ಆರೋಗ್ಯ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ ಆಯುರ್ವೇದ ಪದ್ಧತಿಯಲ್ಲಿ ಚಿಕಿತ್ಸೆ ನೀಡಲಾಗುವುದು. ಈ ಶಿಬಿರದಲ್ಲಿ ಅಸ್ತಮಾ, ಗ್ಯಾಸ್ಟಿಕ್, ವಾತವ್ಯಾಥಿ ಮತ್ತು ಸ್ತ್ರೀ ಸಂಬಂಧಿ ಖಾಯಿಲೆಗಳು ಹಾಗೂ ಎಲ್ಲಾ ರೀತಿಯ ಖಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಶಿಬಿರದಲ್ಲಿ ಉಡುಪಿ ಜಿಲ್ಲಾ ಆಯುಷ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ದಿನಕರ್ ಡೋಂಗ್ರೆ, ತಜ್ಞ ವೈದ್ಯರಾದ ಡಾ.ಸ್ವಾತಿ ಆರೋಗ್ಯ ತಪಾಸಣೆ ನಡೆಸಲಿರುವರು. ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕಾಗಿ ಸಂಘಟಕರಾದ ಪ್ರಕಾಶ ಸುವರ್ಣ ಕಟಪಾಡಿ ಹಾಗೂ ನಾಗೇಶ್ ಕಾಮತ್ ಕಟಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಲಿಮಾರು : ನಿರಂತರ ಪರಿಶ್ರಮ ಮಾತ್ರ ಯಶಸ್ಸನ್ನು ದೊರಕಿಸಿಕೊಡಬಲ್ಲುದು - ಸುಧಾಕರ್ ಶೆಣೈ
Posted On: 07 Nov 2023, 06:23 PM
ಪಲಿಮಾರು : ಹಿರಿಯರು ಕಟ್ಟಿ ಬೆಳೆಸಿದ ಸುಂದರ ಸಂಸ್ಥೆ ಪಲಿಮಾರಿನ ಸರಕಾರಿ ವಿದ್ಯಾ ಸಂಸ್ಥೆ. ಎಲ್ಲಾ ರೀತಿಯ ಸೌಕರ್ಯಗಳಿರುವ ಈ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಬೇಕು, ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳನ್ನು ಈ ವಿದ್ಯಾಸಂಸ್ಥೆಗೆ ಸೇರಿಸಲು ಮುಂದೆ ಬರಬೇಕು ಎಂಬುದಾಗಿ ಸರಕಾರಿ ಪ್ರೌಢಶಾಲೆಯ ಪಲಿಮಾರು ಇಲ್ಲಿಯ ಕನ್ನಡ ಶಿಕ್ಷಕರಾದ ಸುಧಾಕರ್ ಶೆಣೈ ಹೇಳಿದರು. ಅವರು ನವೆಂಬರ್ 7ರಂದು ಸರಕಾರಿ ಪದವಿ ಪೂರ್ವ ಕಾಲೇಜು ಪಲಿಮಾರು ಇಲ್ಲಿ ನಡೆದ ಪೋಷಕರ ಮತ್ತು ವಿದ್ಯಾರ್ಥಿಗಳ ಸಭೆಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಅವರಿಗಿಂತ ನಿಮ್ಮ ಜೀವನ ಮಟ್ಟ ಒಳ್ಳೆಯದಾಗಬೇಕು ಎನ್ನುವುದು ನಿಮ್ಮ ಪೋಷಕರ ಅಭಿಲಾಷೆ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸತತ ಪ್ರಯತ್ನ ಮಾಡಿ, ಜೀವನದಲ್ಲಿ ಯಶಸ್ವಿಗಳಾಗಬೇಕು. ಯಶಸ್ಸಿಗೆ ಯಾವುದೇ ಅಡ್ಡ ದಾರಿಗಳಿಲ್ಲ. ನಿರಂತರ ಪರಿಶ್ರಮ ಮಾತ್ರ ಯಶಸ್ಸನ್ನು ದೊರಕಿಸಿಕೊಡಬಲ್ಲುದು ಎಂಬುದಾಗಿ ಅವರು ತಿಳಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಗ್ರೆಟ್ಟಾ ಮೊರಾಸ್ ಮಾತನಾಡಿ, ಪಲಿಮಾರಿನ ವಿದ್ಯಾರ್ಥಿಗಳು ತುಂಬಾ ಶಿಸ್ತು, ವಿನಯ ಮತ್ತು ವಿಧೇಯತೆ ಇರುವ ಮಕ್ಕಳು. ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ ಮಾತ್ರವಲ್ಲ, ತಪ್ಪದೆ ತರಗತಿಗಳಿಗೆ ಹಾಜರಾಗುತ್ತಾರೆ ಎಂಬುದಾಗಿ ವಿದ್ಯಾರ್ಥಿಗಳನ್ನು ಮತ್ತು ಪೋಷಕರನ್ನು ಅಭಿನಂದಿಸಿದರು. ಸಮಯ ಪ್ರಜ್ಞೆಯನ್ನು ಬೆಳೆಸುವಲ್ಲಿ ಹೆಚ್ಚಿನ ಆಸಕ್ತಿ ತೋರಿಸಬೇಕು ಎಂಬುದಾಗಿ ಅವರು ತಿಳಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಪ್ರಸಾದ್ ಪಲಿಮಾರ್ ಮಾತನಾಡಿ, ಸಂಸ್ಥೆಯಲ್ಲಿ ಯಾವುದೇ ಕುಂದು ಕೊರತೆಗಳಿದ್ದಲ್ಲಿ ಪೋಷಕರು ನೇರವಾಗಿ ಕೇಳಬಹುದು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬಿ.ಕಾಂ ಮತ್ತು ಎಂ.ಕಾಮ್ ನಲ್ಲಿ ಪ್ರಥಮ ಬ್ಯಾಂಕ್ ಗಳಿಸಿದ ನಿಮ್ಮ ಪ್ರಾಂಶುಪಾಲರನ್ನೇ ಮೀರಿಸು ಸಾಧನೆಯನ್ನು ನೀವು ಮಾಡಬೇಕು ಎಂದು ಕರೆ ಕೊಟ್ಟರು. ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರೂ, ಪಲಿಮಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷರೂ ಆಗಿರುವ ರಾಯೇಶ್ವರ್ ಪೈ, ಪೋಷಕ ಪ್ರತಿನಿಧಿಗಳಾದ ಪ್ರಸನ್ನ, ತುಳಸಿ, ರೇಖಾ ಹಾಗೂ ನಳಿಸಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಡೆದ ಕಾಪು ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಕನ್ನಡ ಉಪನ್ಯಾಸಕಿ ಜ್ಯೋತಿ ಸ್ವಾಗತಿಸಿ, ವಾಣಿಜ್ಯ ಉಪನ್ಯಾಸಕಿ ಸ್ವಾತಿ ಪ್ರದೀಪ್ ವಂದಿಸಿದರು. ಅರ್ಥಶಾಸ್ತ್ರ ಉಪನ್ಯಾಸಕರು ಜೊತೆ ಜೊತೆ ಸೇರಿ ಒಂದು ಪವಿತ್ರ ಕೆ ಕಾರ್ಯಕ್ರಮ ನಿರೂಪಿಸಿದರು.
ಶಿರ್ವ : ಶ್ರೀ ವಿಶ್ವ ಬ್ರಾಹ್ಮಣ ಯುವ ಸಂಗಮದ ಮಹಾಸಭೆ ; ಮಹಿಳಾ ಬಳಗದ ಪದಗ್ರಹಣ
Posted On: 06 Nov 2023, 09:25 PM
ಶಿರ್ವ : ಇಲ್ಲಿನ ಶ್ರೀ ವಿಶ್ವ ಬ್ರಾಹ್ಮಣ ಯುವ ಸಂಗಮ (ರಿ.) ಇದರ ಮಹಾಸಭೆ ಮತ್ತು ಮಹಿಳಾ ಬಳಗದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಕಾಪು ಶ್ರೀ ಕಾಳಿಕಾ ಭಜನಾ ಮಂಡಳಿಯ ಅಧ್ಯಕ್ಷರಾದ ರೇಖಾ ಶ್ರೀಕಾಂತ್ ಆಚಾರ್ಯ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಮಾತನಾಡಿ ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆ ಮುಂದುವರಿಸಿಕೊಂಡು ಹೋಗುವಲ್ಲಿ ನಮ್ಮ ಪಾತ್ರ ಗಣನೀಯವಾಗಿದೆ ಎಂದರು. ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಜನಾರ್ಧನ ಆಚಾರ್ಯ ಮಾತನಾಡಿ ರಾಜಕೀಯವಾಗಿ ನಾವು ಸಬಲರಾಗಿರಬೇಕಾದರೆ ನಮ್ಮಲ್ಲಿ ಒಗ್ಗಟ್ಟಿರಬೇಕು. ಆಗ ಮಾತ್ರ ನಮ್ಮನ್ನು ಸಮಾಜ ಗುರುತಿಸುತ್ತದೆ ಎಂದರು. ಈ ಸಂದರ್ಭ ಜನಾರ್ಧನ ಆಚಾರ್ಯರನ್ನು ಸನ್ಮಾನಿಸಲಾಯಿತು. ಗೌರವಾಧ್ಯಕ್ಷ ಸುರೇಶ್ ಆಚಾರ್ಯ, ಮಹಿಳಾ ಬಳಗದ ಅಧ್ಯಕ್ಷೆ ಸುಮತಿ ಆಚಾರ್ಯ, ನೂತನ ಅಧ್ಯಕ್ಷೆ ಸಹನಾ ಗಣೇಶ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಿಳಾ ಬಳಗದ ಸದಸ್ಯರು ಪ್ರಾರ್ಥಿಸಿದರು. ಯುವ ಸಂಗಮದ ಕೋಶಾಧಿಕಾರಿ ಪ್ರಶಾಂತ ಆಚಾರ್ಯ ಲೆಕ್ಕಪತ್ರ ಮಂಡಿಸಿದರು. ಪ್ರೀತಿ ಆಚಾರ್ಯ ವರದಿ ವಾಚಿಸಿದರು. ಮಂಜುಳಾ ಆಚಾರ್ಯ ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು. ಅಧ್ಯಕ್ಷ ಉಮೇಶ್ ಆಚಾರ್ಯ ಸ್ವಾಗತಿಸಿ, ಮಾಧವಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಶಿರ್ವ : ಬಾಲ ಸಂಸ್ಕಾರ ಕೇಂದ್ರ ಉದ್ಘಾಟನೆ
Posted On: 06 Nov 2023, 09:15 PM
ಶಿರ್ವ : ವಿಶ್ವಹಿಂದು ಪರಿಷದ್ ಭಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ವಿಷ್ಣುಮೂರ್ತಿ ಘಟಕದ ಆಶ್ರಯದಲ್ಲಿ ಬಾಲ ಸಂಸ್ಕಾರ ಕೇಂದ್ರ ಉದ್ಘಾಟನಾ ಸಮಾರಂಭ ಶಿರ್ವ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು. ದೇವಸ್ಥಾನದ ಪ್ರದಾನ ಅರ್ಚಕರಾದ ರಘುಪತಿ ಗುಂಡುಭಟ್ ಉದ್ಘಾಟನೆ ಮಾಡಿದರು. ವಿಷ್ಣುಮೂರ್ತಿದೇವಸ್ಥಾನದ ಆಡಳಿತ ಮಂಡಳಿಯ ಕೋಶಾಧಿಕಾರಿಯಾದ ರತ್ನವರ್ಮ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ವಿಶ್ವಹಿಂದು ಪರಿಷದ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಕಾಪು ಪ್ರಖಂಡ ಕಾರ್ಯದರ್ಶಿ ರಾಜೇಂದ್ರ ಶೆಣೈ, ಕಾಪು ಪ್ರಖಂಡ ಮಾತೃಶಕ್ತಿ ಪ್ರಮುಖ್ ವಾಣಿ ಆಚಾರ್ಯ, ಕಾಪು ಪ್ರಖಂಡ ಧರ್ಮಚಾರಿ ಪ್ರಮುಖ್ ಪ್ರಸನ್ನ ಭಟ್, ಘಟಕದ ಅಧ್ಯಕ್ಷರಾದ ಜಯ ಪೂಜಾರಿ, ಘಟಕ ಮಾತೃ ಶಕ್ತಿ ಪ್ರಮುಖ್ ಚಂದ್ರಾವತಿ, ಕಾಪು ಪ್ರಖಂಡ ಭಜರಂಗದಳ ಸಹ ಸಂಯೋಜಕ ಆನಂದ್ ಶಿರ್ವ, ಪ್ರಖಂಡ ದುರ್ಗಾವಾಹಿನಿ ಸಂಯೋಜಕಿ ನಿಕ್ಷಿತಾ ಉಪಸ್ಥಿತರಿದ್ದರು.
ಕಾಪು : ಇನ್ನಂಜೆ ಬಿಲ್ಲವ ಸಂಘ - ಅಧ್ಯಕ್ಷರಾಗಿ ಜಗದೀಶ್ ಅಮೀನ್, ಕಾರ್ಯದರ್ಶಿಯಾಗಿ ಅರವಿಂದ ಕಲ್ಲುಗುಡ್ಡೆ ಆಯ್ಕೆ
Posted On: 06 Nov 2023, 06:30 PM
ಕಾಪು : ಇನ್ನಂಜೆ ಬಿಲ್ಲವ ಸಂಘದ ಮಹಾಸಭೆ ನವೆಂಬರ್ 5 ರಂದು ಜರಗಿತು. ಸಂಘದ ನೂತನ ಅಧ್ಯಕ್ಷರನ್ನಾಗಿ ಜಗದೀಶ್ ಅಮೀನ್ ಮತ್ತು ಕಾರ್ಯದರ್ಶಿಯಾಗಿ ಅರವಿಂದ ಕಲ್ಲುಗುಡ್ಡೆ ಇವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ಸದಾಶಿವ ಪೂಜಾರಿ ಮಜಲು, ಕಾರ್ಯದರ್ಶಿ ರಮಾನಂದ ಪೂಜಾರಿ ಕಲ್ಲುಗುಡ್ಡೆ, ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಉಚ್ಚಿಲ : ಯುವವಾಹಿನಿ ಪಡುಬಿದ್ರಿ ಘಟಕ - ಸರಸ್ವತಿ ಮಂದಿರ ಶಾಲೆಯಲ್ಲಿ ಮಕ್ಕಳ ಹಬ್ಬ
Posted On: 05 Nov 2023, 07:45 PM
ಉಚ್ಚಿಲ : ಶಾಲಾ ಹಂತದಲ್ಲಿ ಪಠ್ಯದ ಜೊತೆಗೆ ಪಠ್ಯ ಪೂರಕ ಚಟುವಟಿಕೆಗಳು ಮಕ್ಕಳ ಕಲಿಕೆಗೆ ಪೂರಕವಾಗಿದೆ. ಜೀವನದಲ್ಲಿ ಮಾಧ್ಯಮ ಮುಖ್ಯವಾಗದು. ಕನ್ನಡ ಮಾಧ್ಯಮದಲ್ಲಿಯೂ ಕಲಿತವರು ಸಾಧನೆಯ ಹಂತ ತಲುಪಿದ್ದಾರೆ. ಕಳೆದ ಹಲವು ವರ್ಷಗಳಿಂದ ಮಕ್ಕಳಿಗೆ ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಬರತ್ತಿರುವ ಪಡುಬಿದ್ರಿ ಯುವವಾಹಿನಿ ಘಟಕದ ಕಾರ್ಯ ಶ್ಲಾಘನೀಯ ಎಂದು ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಹರೀಶ್ ಕುಮಾರ್ ಹೆಜಮಾಡಿ ಹೇಳಿದರು. ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪಡುಬಿದ್ರಿ ಘಟಕದ ವತಿಯಿಂದ ಉಚ್ಚಿಲ ಸರಸ್ವತಿ ಮಂದಿರ ಶಾಲೆಯಲ್ಲಿ ರವಿವಾರ ಜರಗಿದ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಉಚ್ಚಿಲ ಸರಸ್ವತಿ ಮಂದಿರ ಶಾಲೆಯ ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕ ಶಿಖರ್ ಮತ್ತು ಹೈಸ್ಕೂಲ್ ವಿಭಾಗದ ವಿದ್ಯಾರ್ಥಿ ನಾಯಕಿ ತಮೀಮಾ ಉದ್ಘಾಟಿಸಿದರು. ಈ ಸಂದರ್ಭ ಮಕ್ಕಳಿಗಾಗಿ ನಡೆದ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಲಾಯಿತು. ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಅಶ್ವಥ್ ಎಸ್ ವಹಿಸಿದ್ದರು. ಈ ಸಂದರ್ಭ ಪ್ರಾಥಮಿಕ ಶಾಲಾ ವಿಭಾಗದ ಸಂಚಾಲಕ ಮೋಹನ್ ದಾಸ್ ಶೆಟ್ಟಿ, ಪ್ರಾಥಮಿಕ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಗೀತಾ ವೈ., ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಬಾಬುರಾಯ ಆಚಾರ್ಯ, ಪ್ರೌಢಶಾಲಾ ವಿಭಾಗದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಆಶಾ, ಪ್ರಾಥಮಿಕ ವಿಭಾಗದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಕಲಾವತಿ, ಪಡುಬಿದ್ರಿ ಘಟಕದ ಕಲಾ ಮತ್ತು ಸಾಹಿತ್ಯ ನಿರ್ದೇಶಕರಾದ ಸಂತೋಷ್ ಕರ್ನಿರೆ, ಕಾರ್ಯದರ್ಶಿ ನಿಖಿಲ್ ಪೂಜಾರಿ ಪೂಜಾರಿ ಉಪಸ್ಥಿತರಿದ್ದರು. ಪಡುಬಿದ್ರಿ ಘಟಕದ ಕಲಾ ಮತ್ತು ಸಾಹಿತ್ಯ ನಿರ್ದೇಶಕರಾದ ಸಂತೋಷ್ ಕರ್ನಿರೆ ಸ್ವಾಗತಿಸಿದರು. ಕಾರ್ಯಕ್ರಮವನ್ನು ವಿಧಿತ್ ಮತ್ತು ಪವಿತ್ರ ನಿರೂಪಿಸಿದರು. ಕಾರ್ಯದರ್ಶಿ ನಿಖಿಲ್ ಪೂಜಾರಿ ಪೂಜಾರಿ ವಂದಿಸಿದರು.
