Updated News From Kaup
ಕಾಪುವಿನ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ನೀಡಿದ ಕಾಪು ಅಭಿವೃದ್ಧಿ ಸಮಿತಿ
Posted On: 16 Oct 2023, 10:41 PM
ಕಾಪು : ಇಲ್ಲಿನ ಪ್ರಮುಖ ಸಮಸ್ಯೆಗಳ ಬಗ್ಗೆ ಕಾಪು ಅಭಿವೃದ್ಧಿ ಸಮಿತಿಯು ಕಾಪುವಿನ ತಾಲೂಕು ಆಡಳಿತ ಸೌಧದ ಸಭಾಭವನದಲ್ಲಿ ಸೋಮವಾರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜರಗಿದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮನವಿ ನೀಡಿತು. ಕಾಪು ಪೇಟೆಯ ಸುತ್ತಮುತ್ತಲೂ ಹಲವಾರು ವಸತಿ ಸಂಕೀರ್ಣಗಳು, ವಾಣಿಜ್ಯ ಕಟ್ಟಡಗಳ ತ್ಯಾಜ್ಯವನ್ನು ಬಿಡಲು ಸೂಕ್ತವಾದ ಒಳಚರಂಡಿಯ ವ್ಯವಸ್ಥೆ, ಟ್ರೀಟ್ಮೆಂಟ್ ಪ್ಲಾಂಟ್, ಕುಡಿಯುವ ನೀರು, ಪೇಟೆಯಲ್ಲಿ ವಾಹನ ನಿಲುಗಡೆಯ ವ್ಯವಸ್ಥೆ ಇಲ್ಲದಿರುವ ಬಗ್ಗೆ ಗಮನ ಸೆಳೆಯಲಾಯಿತು. ಪೇಟೆಯ ರಸ್ತೆಯ ಇಕ್ಕೆಲಗಳಲ್ಲಿ ಸರಕಾರೀ ಜಮೀನಿನ ಸಮೀಕ್ಷೆಯನ್ನು ನಡೆಸಿದಾಗ ಕೆಲವೊಂದು ಕಡೆ ಜಮೀನು ಒತ್ತುವರಿಯ ಬಗ್ಗೆ ತಿಳಿಸಲಾಯಿತು. ಪೇಟೆಯಲ್ಲಿ ಸಾಕಷ್ಟು ಬೀದಿದೀಪಗಳ ಕೊರತೆ. ರಾತ್ರಿಯಾದಂತೆ ಕಾಪು ಪೇಟೆಯಲ್ಲಿ ಮಾರ್ಕೆಟ್ ಬಳಿ ಅಳವಡಿಸಿದ ಹೈಮಾಸ್ಕ್ ದೀಪವನ್ನು ಬಿಟ್ಟರೆ ಉಳಿದ ದೀಪಗಳು ಬೆಳಕು ನೀಡುವಲ್ಲಿ ವಿಫಲವಾಗಿವೆ. ಹಾಗೂ ಪೇಟೆಯ ಪ್ರಮುಖ ಜಂಕ್ಷನ್ಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿದಲ್ಲಿ ಅಪರಾಧ ಪತ್ತೆಗೆ ಸಹಾಯವಾಗುತ್ತದೆ. ಸಾರ್ವಜನಿಕ ಹಿಂದೂ ರುದ್ರಭೂಮಿಯ ಪಕ್ಕ ಈ ಹಿಂದೆ ಇದ್ದ ತ್ಯಾಜ್ಯ ಸಂಗ್ರಹ ಕೇಂದ್ರವು ಪ್ರಸ್ತುತ ಕಾಪು ತಾಲೂಕಿನ ಎಲ್ಲೂರು ಗ್ರಾಮಕ್ಕೆ ಸ್ಥಳಾಂತರಿಸಲ್ಪಟ್ಟರೂ, ತ್ಯಾಜ್ಯದ ರಾಶಿಯು ಇನ್ನೂ ಇಲ್ಲೇ ಬಾಕಿಯಾಗಿ ದುರ್ನಾತ ಬೀರುತ್ತಿದೆ ಹಾಗೂ ಸುತ್ತಮುತ್ತಲಿನ ನಿವಾಸಿಗಳ ಬಾವಿಯ ಕಲುಷಿತವಾಗಿದೆ. ಈ ತ್ಯಾಜ್ಯವನ್ನು ಈ ಕೂಡಲೇ ತೆರವುಗೊಳಿಸಲು ನಿರ್ದೇಶಿಸುವ ಬಗ್ಗೆ ಮನವಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಸಂದರ್ಭ ಕಾಪು ಅಭಿವೃದ್ಧಿ ಸಮಿತಿ ಅಧ್ಯಕ್ಷ ಮನೋಹರ್ ಎಸ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಹರೀಶ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಪಡುಕುತ್ಯಾರು : ಆನೆಗುಂದಿ ಮಹಾ ಸಂಸ್ಥಾನ - ರಜತ ಮಂಟಪ ಸಮರ್ಪಣೆ
Posted On: 15 Oct 2023, 03:46 PM
ಪಡುಕುತ್ಯಾರು : ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಕಟಪಾಡಿ ಪಡು ಕುತ್ಯಾರಿನ ಶ್ರೀ ಸರಸ್ವತೀ ಮಾತೃ ಮಂಡಳಿಯ ವತಿಯಿಂದ 21ಕಿಲೋಗ್ರಾಂ ಬೆಳ್ಳಿಯಲ್ಲಿ ತಯಾರಿಸಲಾದ 5.5 ಅಡಿ ಎತ್ತರ ಹಾಗೂ 3.5 ಅಡಿ ಅಗಲದ ಅತ್ಯಾಕರ್ಷಕ ಕುಸುರಿ ಕೆಲಸದೊಂದಿಗೆ ನಿರ್ಮಾಣಗೊಂಡ ಜಗದ್ಗುರುಗಳವರ ಪಟ್ಟದ ದೇವರ ರಜತ ಮಂಟಪವು ಶರನ್ನವರಾತ್ರಿಯ ಆರಂಭದ ದಿನವಾದ ರವಿವಾರ ಶ್ರೀಕರಾರ್ಚಿತ ಪೂಜೆಗೆ ಸಮರ್ಪಣೆಗೊಂಡಿತು. ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಬ್ರಹ್ಮಶ್ರೀ ಅಕ್ಷಯ ಶರ್ಮಾ ತಂತ್ರಿ ಕಟಪಾಡಿ ಅವರ ನೇತೃತ್ವದಲ್ಲಿ ಮಹಾಸಂಸ್ಥಾನದ ಬ್ರಹ್ಮಶ್ರೀ ಕೇಶವ ಶರ್ಮ ಇರುವೈಲು, ಬ್ರಹ್ಮಶ್ರೀ ಮೌನೇಶ್ ಶರ್ಮ ಬ್ರಹ್ಮಶ್ರೀ ರುದ್ರೇಶ್ ಶರ್ಮ ರಜತಾ ಮಂಟಪದ ಶಿಲ್ಪಿಗಳಾದ ಅಣ್ಣಪ್ಪ ಆಚಾರ್ಯ ಶಿರ್ವ, ಮಹೇಶ್ ಆಚಾರ್ಯ ಬಾರ್ಕೂರು, ಧೀರಜ್ ಆಚಾರ್ಯ ಕಾರ್ಕಳ, ಸತೀಶ್ ಆಚಾರ್ಯ ಮಂಚಕಲ್ ವಿವಿಧ ವೈದಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಇದೇ ವೇಳೆ ಮಹಾ ಸಂಸ್ಥಾನದ ಆಪ್ತ ಸಹಾಯಕ ಲೋಲಾಕ್ಷ ಶರ್ಮ ಕಟಪಾಡಿ ಇವರಿಂದ ಧಾನ್ಯ ಲಕ್ಷ್ಮಿ ಪೂಜೆಯ ಅಂಗವಾಗಿ ಬತ್ತದ ತೆನೆಕಟ್ಟುವ ಸಂಪ್ರದಾಯ ನೆರವೇರಿತು. ಪ್ರತಿಷ್ಠಾನದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರ ಹೋಬಳಿ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ ಬಿ ಆಚಾರ್ ಕಂಬಾರ್, ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ, ಅಸೆಟ್ ಅಧ್ಯಕ್ಷ ಬಿ ಸೂರ್ಯ ಕುಮಾರ್ ಹಳೆಯಂಗಡಿ, ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಪ್ರಧಾನ ಕಾರ್ಯದರ್ಶಿ ರಮಾ ನವೀನ್ ಆಚಾರ್ಯ ಕಾರ್ಕಳ, ಕೋಶಾಧಿಕಾರಿ ದೀಪಾ ಸುರೇಶ್ ಆಚಾರ್ಯ ಉಡುಪಿ, ಆನೆಗುಂದಿ ಸರಸ್ವತಿ ಪೀಠ ಪಂಚ ಸಿಂಹಾಸನ ವಿಕಾಸ ಸಮಿತಿ ಅಧ್ಯಕ್ಷ ದಿನೇಶ್ ಆಚಾರ್ಯ ಪಡುಬಿದ್ರಿ, ಆನೆಗುಂದಿ ಗುರು ಸೇವಾ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮಣ್ಣು, ಆಶಾ ನಾಗರಾಜ ಆಚಾರ್ಯ ಕಾಡಬೆಟ್ಟು, ಶಾಲಿನಿ ಜಯಕರ ಆಚಾರ್ಯ ಕರಂಬಳ್ಳಿ, ರವಿ ಆಚಾರ್ಯ ಬೆಂಗಳೂರು ಲೋಕೇಶ್ ಆಚಾರ್ಯ ಅರೆ ಮಾದನಹಳ್ಳಿ, ಮನೋಹರ ಆಚಾರ್ಯ ಬೆಂಗಳೂರು, ಸುಧಾಕರ ಆಚಾರ್ಯ ಕುಕ್ಕಿ ಕಟ್ಟೆ,ಇಂದಿರಾ ಪುರುಷೋತ್ತಮ ಆಚಾರ್ಯ ಪುತ್ತೂರು, ಉಷಾ ವಿವೇಕ್ ಆಚಾರ್ಯ ಮಂಚಕಲ್, ಉಷಾ ರೂಪೇಶ್ ಆಚಾರ್ಯ ಶಿರ್ವ,ರಾಘವೇಂದ್ರ ಆಚಾರ್ಯ ಉಡುಪಿ, ಉಷಾ ಸುಬ್ರಹ್ಮಣ್ಯ ಆಚಾರ್ಯ ಕಾಡಬೆಟ್ಟು, ಸುರೇಶ್ ಆಚಾರ್ಯ ಇರಂದಾಡಿ, ನವೀನ್ ಆಚಾರ್ಯ ಪಣಿಯೂರು, ರಮಾ ಅಚ್ಯುತ ಆಚಾರ್ಯ ಉಡುಪಿ, ಲತಾ ಎಸ್ ಆಚಾರ್ಯ ಕುತ್ಯಾರು, ಶಾಲಿನಿ ರತ್ನಾಕರ ಆಚಾರ್ಯ ಕುತ್ಯಾರು, ಸವಿತಾ ನಾಗೇಶ ಆಚಾರ್ಯ ಉಡುಪಿ , ಸುಲೋಚನಾ ರಮೇಶ್ ಆಚಾರ್ಯ ಎರ್ಮಾಳು, ಚಂದ್ರಾವತಿ ಶ್ರೀಧರ. ಆಚಾರ್ಯ ವಡೇರಹೋಬಳಿ, ಪುಷ್ಪಲತಾ ಲೋಕೇಶ್ ಆಚಾರ್ಯ ಕಂಬಾರು ಮುಂತಾದವರು ಉಪಸ್ಥಿತರಿದ್ದರು.
ಕಟಪಾಡಿ : ಉಚಿತ ಪ್ರಾಣ ಯೋಗ ಶಿಬಿರ ಉದ್ಘಾಟನೆ
Posted On: 15 Oct 2023, 01:34 PM
ಕಟಪಾಡಿ : ಪತಂಜಲಿ ಯೋಗ ಸಮಿತಿ ಉಡುಪಿ ಹಾಗೂ ಎಸ್ ವಿ ಎಸ್ ಹಳೆ ವಿದ್ಯಾರ್ಥಿ ಸಂಘ (ರಿ.) ಕಟಪಾಡಿ ಇವರ ಸಹಯೋಗದಲ್ಲಿ ಅಕ್ಟೋಬರ್ 15 ರಿಂದ 24ರ ವರೆಗೆ 10 ದಿನಗಳ ಕಾಲ ನಡೆಯುವ ಉಚಿತ ಪ್ರಾಣ ಯೋಗ ಶಿಬಿರವನ್ನು ಕಟಪಾಡಿಯ ಮಹಿಳಾ ಮಂಡಲದ ಸಭಾ ಭವನದಲ್ಲಿ ರವಿವಾರ ಮುಂಜಾನೆ ಎಸ್ ವಿ ಎಸ್ ವಿದ್ಯಾವರ್ಧಕ ಸಂಘದ ಸಂಚಾಲಕರಾದ ಕೆ. ಸತ್ಯೇಂದ್ರ ಪೈ. ಉದ್ಘಾಟಿಸಿದರು. ಉಡುಪಿ ಪತಂಜಲಿ ಯೋಗ ಸಮಿತಿಯ ಯೋಗ ಶಿಕ್ಷಕರಾದ ರಾಘವೇಂದ್ರ ಭಟ್, ವೆಂಕಟೇಶ್ ಮೇಹಂದಲೆ, ಜಗದೀಶ್ ಕುಮಾರ್, ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಭಾ ಬಿ.ಶೆಟ್ಟಿ ಕಟಪಾಡಿ, ಹಳೆ ವಿದ್ಯಾರ್ಥಿ ಸಂಘದ ಮಹೇಶ್ ಅಂಚನ್, ರವಿರಾಜ್ ಶೆಟ್ಟಿ ಉಪಸ್ಥಿತರಿದ್ದರು. ಕಟಪಾಡಿ ಪತಂಜಲಿ ಯೋಗ ಕಕ್ಷೆಯ ರಾಜೇಶ್ ಕಾಮತ್, ರಾಮಚಂದ್ರ ಪೈ ಶಿಬಿರವನ್ನು ಆಯೋಜಿಸಿದ್ದರು. ಹಳೆ ವಿದ್ಯಾರ್ಥಿ ಸಂಘದ ಸದಸ್ಯ ನಾಗೇಶ್ ಕಾಮತ್ ಸ್ವಾಗತಿಸಿ, ವಂದಿಸಿದರು.
ಉಚ್ಚಿಲ ದಸರಾ - 2023 ; ಉಡುಪಿ ಜಿಲ್ಲಾಧಿಕಾರಿಯಿಂದ ಚಾಲನೆ
Posted On: 15 Oct 2023, 12:22 PM
ಉಚ್ಚಿಲ : ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವೈಭವದ ಉಚ್ಚಿಲ ದಸರಾಕ್ಕೆ ಭಾನುವಾರ ಉಡುಪಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು ಹುಲಿವೇಷ, ಸಾಂಸ್ಕೃತಿಕ ಮೆರುಗಿನ ಜೊತೆಗೆ ಭಕ್ತಿಭಾವದ ಸಂಭ್ರಮವನ್ನು ನವರಾತ್ರಿಯ ಸಂದರ್ಭ ಕಾಣಬಹುದಾಗಿದೆ. ಉಚ್ಚಿಲ ದಸರಾ ಉಡುಪಿಯ ಜನತೆಗೆ ಸಂಭ್ರಮದ ಹಬ್ಬವಾಗಲಿ ಸರಕಾರದಿಂದಲೂ ಅನುದಾನದ ಸಹಾಯ ನೀಡಲಾಗಿದೆ. ದಸರಾ ದೇಶದಾದ್ಯಂತ ನಡೆಯುತ್ತಿದೆ. ನಾಡಿಗೆ ಸುಖ ಸಮದ್ಧಿ ಜನರು ಸುಖ ಸಂತೋಷದಿಂದ ಇರಲಿ ಎಂದು ಶುಭಹಾರೈಸಿದರು. ನವದುರ್ಗೆಯರು ಮತ್ತು ಶ್ರೀ ಶಾರದಾ ಪ್ರತಿಷ್ಠಾಪನೆ ಯೊಂದಿಗೆ ಶಾರದೆಗೆ ಬೆಳ್ಳಿ ವೀಣೆ, ಬೆಳ್ಳಿ ಕಿರೀಟಧಾರಣೆಯು ನಡೆಯಿತು. ಈ ಸಂದರ್ಭದಲ್ಲಿ ದೇವಳದ ವತಿಯಿಂದ ಜಿಲ್ಲಾಧಿಕಾರಿಯವರನ್ನು ಗೌರವಿಸಲಾಯಿತು. ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ನವದುರ್ಗೆಯರಿಗೆ ಮಹಾಮಂಗಳಾರತಿ ನಡೆಯಿತು. ಇದೇ ಸಂದರ್ಭ ಅನ್ನಛತ್ರ, ನೂತನ ಅತಿಥಿಗೃಹ, ವಸ್ತು ಪ್ರದರ್ಶನ, ಫಲಪುಷ್ಪ ಪ್ರದರ್ಶನ, ಮೀನುಗಾರಿಕಾ ಪರಿಕರಗಳ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ, ಪುಸ್ತಕ ಪ್ರದರ್ಶನವನ್ನು ಕ್ಷೇತ್ರದ ಗೌರವ ಸಲಹೆಗಾರರಾದ ನಾಡೋಜ ಡಾ| ಜಿ. ಶಂಕರ್ ಉದ್ಘಾಟಿಸಿದರು. ಈ ಸಂದರ್ಭ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಸಹಾಯಕ ಕಮೀಷನರ್ ರಶ್ಮಿ ಎಸ್. ಆರ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕಾಪು ತಹಶೀಲ್ದಾರ್ ನಾಗರಾಜ ನಾಯ್ಕಡ, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಕಿದಿಯೂರು ಹೋಟೆಲ್ ಪ್ರೈ.ಲಿ. ನ ಆಡಳಿತ ನಿರ್ದೇಶಕ ಭುವನೇಂದ್ರ ಕಿದಿಯೂರು, ಮಹಿಳಾ ಮಹಾಜನ ಸಂಘದ ಅಧ್ಯಕ್ಷೆ ಉಷಾರಾಣಿ, ನಾಲ್ಕು ಪಟ್ಣ ಮೊಗವೀರ ಮಹಾಸಭಾದ ಅಧ್ಯಕ್ಷೆ ಸುಗುಣ ಕರ್ಕೇರ ಉಪಸ್ಥಿತರಿದ್ದರು. ಡಾ. ಜಿ. ಶಂಕರ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಸತೀಶ್ ಅಮೀನ್ ಪಡುಕೆರೆ ಕಾರ್ಯಕ್ರಮ ನಿರೂಪಿಸಿದರು.
ಉಚ್ಚಿಲ ದಸರಾ - 2023 ; ಕ್ಷಣ ಗಣನೆ ; ವಿದ್ಯುದ್ದೀಪಾಲಂಕಾರದ ಉದ್ಘಾಟನೆ
Posted On: 14 Oct 2023, 08:57 PM
ಉಚ್ಚಿಲ : ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಉಚ್ಚಿಲ ದಲ್ಲಿ ದಸರಾದ ಪ್ರಯುಕ್ತ ಶನಿವಾರ ಸಂಜೆ ವಿದ್ಯುದ್ದೀಪಾಲಂಕಾರ ಪ್ರಾಯೋಜಕರಾದ MRG ಗ್ರೂಪ್ ಅಧ್ಯಕ್ಷರಾದ ಬಂಜಾರ ಪ್ರಕಾಶ್ ಶೆಟ್ಟಿ ವಿದ್ಯುದ್ದೀಪಾಲಂಕಾರಕ್ಕೆ ಚಾಲನೆ ನೀಡಿದರು. ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಈ ಬಾರಿಯು ಉಚ್ಚಿಲ ದಸರಾವು ಅಕ್ಟೋಬರ್ 15 ರಿಂದ 24 ರವರೆಗೆ ನಡೆಯಲಿದೆ. ದೇವಸ್ಥಾನದ ಪಕ್ಕದ ಶಾಲಿನಿ ಜಿ. ಶಂಕರ್ ತೆರೆದ ಸಭಾಂಗಣದಲ್ಲಿ ನವದುರ್ಗೆಯರು ಶಾರದಾ ಮಾತೆಯ ಪ್ರತಿಷ್ಠಾಪನೆಯೊಂದಿಗೆ ಮತ್ತು ವಿಗ್ರಹ ಉತ್ಸವಕ್ಕೆ ಅಕ್ಟೋಬರ್ 15 (ನಾಳೆ) ಚಾಲನೆ ದೊರಕಲಿದೆ. ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾ ಕುಮಾರಿ ಚಾಲನೆ ನೀಡಲಿದ್ದು ಬಳಿಕ ಮಹಾಲಕ್ಷ್ಮೀ ಅನ್ನಛತ್ರ ಮತ್ತು ಅತಿಥಿಗೃಹ ಲೋಕಾರ್ಪಣೆಗೊಳ್ಳಲಿದೆ. ಕೊನೆ ಕ್ಷಣದ ಸಿದ್ಧತೆಗಳು ಪೂರ್ಣಗೊಂಡಿದೆ. ದೇವಳದ ಸುತ್ತಮುತ್ತಲಿನ ಪ್ರದೇಶ, ಬೀದಿಗಳು ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿದ್ದು, ಭಕ್ತಾದಿಗಳು ಈ ವೈಭವವನ್ನು ತಮ್ಮ ಮೊಬೈಲ್ ಗಳಲ್ಲಿ ಕ್ಲಿಕ್ಕಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಈ ಸಂದರ್ಭ ದೇವಳದ ಗೌರವ ಸಲಹೆಗಾರರಾದ ನಾಡೋಜ ಡಾ. ಜಿ. ಶಂಕರ್, ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶಪಾಲ್ ಸುವರ್ಣ, ದ. ಕ. ಮೊಗವೀರ ಮಹಾಜನ ಸಂಘ ಉಚ್ಚಿಲದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ದೇವಳದ ಅರ್ಚಕರಾದ ರಾಘವೇಂದ್ರ ಉಪಾಧ್ಯಾಯ, ಜೀಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ ಅಮೀನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಮಹಿಳಾ ಘಟಕ ಅಧ್ಯಕ್ಷೆ ಉಷಾ ರಾಣಿ, ಕಾಪು ನಾಲ್ಕು ಪಟ್ಣ ಮೊಗವೀರ ಸಭಾದ ಅಧ್ಯಕ್ಷೆ ಸುಗುಣ ಕರ್ಕೇರ, ಉಪಾಧ್ಯಕ್ಷ ಸುಭಾಶ್ಚಂದ್ರ, ಕಾರ್ಯದರ್ಶಿ ಸುಧಾಕರ್ ಕುಂದರ್, ಅನಿಲ್ ಕುಮಾರ್, ಶಂಕರ್ ಸಾಲ್ಯಾನ್, ದಿನೇಶ್ ಮೂಳೂರು, ಗಂಗಾಧರ ಸುವರ್ಣ ಎರ್ಮಾಳು, ಸತೀಶ್ ಬಾರ್ಕೂರು, ರವೀಂದ್ರ ಶ್ರೀಯಾನ್, ಸತೀಶ್ ಅಮೀನ್ ಬಾರ್ಕೂರು, ದೇವಳದ ಮುಖ್ಯ ಪ್ರಬಂಧಕ ಸತೀಶ್ ಅಮೀನ್ ಮಟ್ಟು ಉಪಸ್ಥಿತರಿದ್ದರು.
ಪಡುಬಿದ್ರಿ : ನೂತನ ಗ್ರಾಮ ಒನ್ ಮತ್ತು ಸೈಬರ್ ಕೆಫೆ, ಬುಕ್ಸ್ ಮತ್ತು ಸ್ಟೇಶನರಿ ಕಚೇರಿ ಶುಭಾರಂಭ
Posted On: 14 Oct 2023, 12:58 PM
ಪಡುಬಿದ್ರಿ : ಇಲ್ಲಿನ ಅದಿಧನ್ ಸಾಯಿ ಕೃಪಾ ಕಟ್ಟಡದ ನೆಲ ಮಹಡಿಯಲ್ಲಿ ನೂತನವಾಗಿ ಪ್ರಾರಂಭವಾದ ಪಡುಬಿದ್ರಿ ಗ್ರಾಮ ಒನ್ (ನಾಗರಿಕ ಸೇವಾ ಕೇಂದ್ರ) ಮತ್ತು ಸೈಬರ್ ಕೆಫೆ, ಬುಕ್ಸ್ ಮತ್ತು ಸ್ಟೇಶನರಿ ಕಚೇರಿಯನ್ನು ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಉದ್ಘಾಟಿಸಿ ಶುಭ ಹಾರೈಸಿದರು. ಕೇಂದ್ರ ಹಾಗು ರಾಜ್ಯ ಸರ್ಕಾರದ 750 ಕ್ಕೂ ಹೆಚ್ಚಿನ ಯೋಜನೆಗಳಿಗೆ ಅರ್ಜಿಯನ್ನು ಒಂದೇ ಸೂರಿನಲ್ಲಿ ಸಲ್ಲಿಸಬಹುದು ಹಾಗು ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಬುಕ್ಸ್ , ಸ್ಟೇಶನರಿ, ಮತ್ತು ಪ್ರೊಜೆಕ್ಟ್ ವಕ್೯್ಸ ,ಜೆರಾಕ್ಸ್ ಗಳನ್ನು ರಿಯಾಯತಿ ದರದಲ್ಲಿ ಪಡೆಯಬಹುದೆಂದು ಮಾಲಕರಾದ ರಮೀಜ್ ಹುಸೇನ್ ತಿಳಿಸಿದರು. ಈ ಸಂದರ್ಭದಲ್ಲಿ ಪಡುಬಿದ್ರಿ ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ ಪೂಜಾರಿ, ಉಪಾಧ್ಯಕ್ಷ ಹೇಮಚಂದ್ರ ಸಾಲ್ಯಾನ್, ಮಾಜಿ.ತಾ.ಪಂ ಸದಸ್ಯರಾದ ನವೀನಚಂದ್ರ ಜೆ.ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಶಿಕಾಂತ್ ಪಡುಬಿದ್ರಿ , ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ವೈ. ಸುಕುಮಾರ್, ಕೆ.ಪಿ.ಸಿ.ಸಿ ಕೊ-ಅರ್ಡೀನೇಟರ್ ಅಬ್ಬುಲ್ ಆಜೀಜ್ ಹೆಜಮಾಡಿ, ಪಡುಬಿದ್ರಿ ರೋಟರಿ ಅಧ್ಯಕ್ಷ ಸಂತೋಷ್ ಪಡುಬಿದ್ರಿ, ರಾಜ್ಯ ಜೆಡಿಎಸ್ ಕಾರ್ಯದರ್ಶಿ ಇಸ್ಮಾಯಿಲ್ ಪಲಿಮಾರ್, ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರಾದ ಎಂ.ಎಸ್ ಶಾಫಿ, ಜ್ಯೋತಿ ಮೆನನ್, .ಮಾಜಿ ಸದಸ್ಯ ಬುಡಾನ್ ಸಾಹೇಬ್, ಹಿರಿಯರಾದ ಕೆ.ಎಮ್ ಅಬ್ದುಲ್, ಪಿ ಎ ಹುಸೇನ್, ಸುಚರಿತ ಅಮೀನ್, ಮನ್ಸೂರ್ ಕಂಚಿನಡ್ಕ, ಪುಷ್ಪಲತಾ ಆಚಾರ್ಯ, ಅಬ್ದುಲ್ ರಜಾಕ್, ಹಸನ್ ಕನ್ನಂಗಾರ್ ಮತ್ತಿತರರು ಉಪಸ್ಥಿತರಿದ್ದರು.
ಕಾಪು : ಸತತ 3ನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪಡೆದ 80 ಬಡಗಬೆಟ್ಟು ಗ್ರಾಮ ಪಂಚಾಯತ್ ; ಅಭಿನಂದನಾ ಸಮಾರಂಭ
Posted On: 14 Oct 2023, 12:50 PM
ಕಾಪು : ಸತತ 3 ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪಡೆದ 80 ಬಡಗಬೆಟ್ಟು ಗ್ರಾಮ ಪಂಚಾಯತ್ ಸರ್ವ ಸದಸ್ಯರು, ಸಿಬ್ಬಂದಿಗಳಿಗೆ ಅಭಿನಂದನಾ ಸಮಾರಂಭವು ಇಂದು ಜರಗಿತು. ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಕಾರ್ಯಕ್ರಮನ್ನು ಉದ್ಘಾಟಿಸಿ, ಸಿಬ್ಬಂದಿವರ್ಗವನ್ನು ಅಭಿನಂದಿಸಿದರು. 80ನೇ ಬಡಗಬೆಟ್ಟು ಗ್ರಾಮ ಪಂಚಾಯತ್ ಗೆ ಸತತ ಮೂರು ಬಾರಿ "ಗಾಂಧಿ ಗ್ರಾಮ ಪುರಸ್ಕಾರ" ಲಭಿಸಿದ್ದು, ಇದಕ್ಕೆ ಕಾರಣಿಕರ್ತರಾದ 80 ಬಡಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರನ್ನು 80 ಬಡಗಬೆಟ್ಟು ಮೂಡುಮನೆ ಇವರ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಆರ್ಬಿ ವೈಶ್ಣವಿ ದುರ್ಗಾ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಜಯರಾಜ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 80 ಬಡಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಕೋಟ್ಯಾನ್, ಉಪಾಧ್ಯಕ್ಷರಾದ ರೂಪಾ ನಾಯಕ್, 80 ಬಡಗಬೆಟ್ಟು ಶಾಲಾ ಮುಖ್ಯೋಪಾಧ್ಯಾಯರಾದ ಸುರೇಶ್, 80 ಬಡಗಬೆಟ್ಟು ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ವಿದ್ವಾನ್ ವೆಂಕಟಾಚಲ ಭಟ್, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯರಾದ ಶ್ಯಾಮಲ ಕುಂದರ್ ಹಾಗೂ ಬಿ. ಶ್ರೀನಾಥ್ ಹೆಗ್ಡೆ, ಬಿ. ಅರುಣಾಚಲ ಹೆಗ್ಡೆ, 80 ಬಡಗಬೆಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ಉಪೇಂದ್ರ ನಾಯಕ್, ಶಾಂತಾರಾಮ್, ಶುಭಕರ್ ಶೆಟ್ಟಿ, ಹಾಗೂ 80 ಬಡಗಬೆಟ್ಟು ಗ್ರಾಮ ಪಂಚಾಯತ್ ಸರ್ವ ಸದಸ್ಯರು, ಸಿಬ್ಬಂದಿ ವರ್ಗದವರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.
ಉಡುಪಿ : ಅಕ್ಟೋಬರ್ 14 (ಇಂದು) ಬೆಳಿಗ್ಗೆ 6 ಗಂಟೆಯಿಂದ 15 (ನಾಳೆ)ರ ಸಂಜೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿ
Posted On: 14 Oct 2023, 08:31 AM
ಉಡುಪಿ : ಜಿಲ್ಲೆಯಾದ್ಯಂತ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಅಕ್ಟೋಬರ್ 14 (ಇಂದು) ಬೆಳಿಗ್ಗೆ 6 ಗಂಟೆಯಿಂದ 15 (ನಾಳೆ)ರ ಸಂಜೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಈ ಅವದಿಯಲ್ಲಿ ಮಹಿಷ ದಸರಾ ಆಚರಣೆಯ ಪರ ಅಥವಾ ವಿರೋಧದ ಪೋಸ್ಟರ್, ಬ್ಯಾನರ್, ಬಂಟಿಂಗ್ಸ್ ಅಳವಡಿಸುವುದನ್ನು, ಮೆರವಣಿಗೆ ನಡೆಸಿ ಘೋಷಣೆ ಕೂಗುವುದನ್ನು, ಪ್ರಚೋದನಕಾರಿ ಭಾಷಣ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಯ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಕಟಪಾಡಿ : ಅಕ್ಟೋಬರ್ 15 ರಿಂದ 24ರ ವರೆಗೆ ಉಚಿತ ಪ್ರಾಣ ಯೋಗ ಶಿಬಿರ
Posted On: 14 Oct 2023, 07:50 AM
ಕಟಪಾಡಿ : ಪತಂಜಲಿ ಯೋಗ ಸಮಿತಿ ಉಡುಪಿ, ಕಟಪಾಡಿ ಕಕ್ಷೆ ಹಾಗೂ ಎಸ್ ವಿ ಎಸ್ ಹಳೆ ವಿದ್ಯಾರ್ಥಿ ಸಂಘ (ರಿ.) ಕಟಪಾಡಿ ಇವರ ಸಹಯೋಗದಲ್ಲಿ ಅಕ್ಟೋಬರ್ 15 ರಿಂದ 24ರ ವರೆಗೆ 10 ದಿನಗಳ ಕಾಲ ಬೆಳಿಗ್ಗೆ 5.30ರಿಂದ 6.45 ರತನಕ ಉಚಿತ ಪ್ರಾಣ ಯೋಗ ಶಿಬಿರವನ್ನು ಕಟಪಾಡಿಯ ಮಹಿಳಾ ಮಂಡಲದ ಸಭಾ ಭವನದಲ್ಲಿ ಆಯೋಜಿಸಲಾಗಿದೆ. ಉಡುಪಿ ಪತಂಜಲಿ ಯೋಗ ಸಮಿತಿಯ ನುರಿತ ಹಿರಿಯ ಯೋಗ ಶಿಕ್ಷಕರಿಂದ ತರಬೇತಿ ನೀಡಲಾಗುವುದು. ಕಟಪಾಡಿ ಪತಂಜಲಿ ಯೋಗ ಸಮಿತಿಯ ಮುಖ್ಯ ಯೋಗ ಶಿಕ್ಷಕ ರಾಜೇಶ್ ಕಾಮತ್ ರವರು ಶಿಬಿರವನ್ನು ಆಯೋಜಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಾಗೇಶ್ ಕಾಮತ್ (9886432197)ರವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹೆಜಮಾಡಿ : ರಸ್ತೆ ಮೇಲೆ ಬಿದ್ದ ವಿದ್ಯುತ್ ತಂತಿ - ತಪ್ಪಿದ ಅನಾಹುತ
Posted On: 13 Oct 2023, 11:38 PM
ಹೆಜಮಾಡಿ : ದಾರಿಯಲ್ಲಿ ಏನೇ ಆದರು ನಮಗ್ಯಾಕೆ ಎನ್ನುವ ಈ ಕಾಲದಲ್ಲಿ ರಸ್ತೆ ಮೇಲೆ ಬಿದ್ದ ವಿದ್ಯುತ್ ತಂತಿಯನ್ನು ನೋಡಿದ ಕೂಡಲೇ ಸಾಮಾಜಿಕ ಕಾರ್ಯಕರ್ತನೋರ್ವ ಮೆಸ್ಕಾಂಗೆ ಮಾಹಿತಿ ನೀಡಿ, ತಕ್ಷಣ ಕಾರ್ಯಪ್ರವೃತ್ತನಾದ ಇಲಾಖೆ ಸಿಬ್ಬಂದಿ ಆಗಬಹುದಾದ ಅನಾಹುತ ತಪ್ಪಿಸಿದ ಘಟನೆ ಶುಕ್ರವಾರ ತಡರಾತ್ರಿ ಹೆಜಮಾಡಿಯಲ್ಲಿ ನಡೆದಿದೆ. ಗ್ರಾಮದ ಪರಪಟ್ಟ ಪರಿಸರದಲ್ಲಿ ವಿದ್ಯುತ್ ತಂತಿಯು ಕಡಿದು ರಸ್ತೆಯ ಮೇಲೆಯೇ ಬಿದ್ದಿರುವುದನ್ನು ಸಾಮಾಜಿಕ ಕಾರ್ಯಕರ್ತರಾದ ಚಂದ್ರಹಾಸ ನಡಿಕುದ್ರು ಇವರು ಗಮನಿಸಿ ತಕ್ಷಣ ಮೆಸ್ಕಾಂ ಇಲಾಖೆಯ ಸಿಬ್ಬಂದಿಯವರಾದ ಪ್ರವೀಣ್ ಇವರಿಗೆ ವಿಷಯವನ್ನು ತಿಳಿಸಿ ಅನಾಹುತವನ್ನು ತಪ್ಪಿಸಿದ್ದಲ್ಲದೇ ಆದಷ್ಟು ಶೀಘ್ರದಲ್ಲೇ ಸರಿಪಡಿಸಿದ್ದಾರೆ. ಚಂದ್ರಹಾಸ ಮತ್ತು ಪ್ರವೀಣ್ ಇವರು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈ ಮೊದಲು ಹೆಜಮಾಡಿ ಗ್ರಾಮದಲ್ಲಿ ಇದೇ ರೀತಿ ವಿದ್ಯುತ್ ತಂತಿ ಕಡಿದು ಬಿದ್ದಾಗ ಅದಕ್ಕೆ ಎರಡು ಮಂದಿ ದುರ್ಮರಣಕ್ಕೆ ಬಲಿಯಾಗಿದ್ದನ್ನು ಸ್ಮರಿಸಬಹುದು. ಹೆಜಮಾಡಿ ಗ್ರಾಮದ ಹೆಚ್ಚಿನ ಕಡೆಗಳಲ್ಲಿ ತುಕ್ಕು ಹಿಡಿದಿರುವ ವಿದ್ಯುತ್ ತಂತಿಗಳನ್ನು ಮೆಸ್ಕಾಂ ಇಲಾಖೆಯ ಅಧಿಕಾರಿಗಳು ವಿಶೇಷ ಗಮನಹರಿಸಿ ಆದಷ್ಟು ಶೀಘ್ರದಲ್ಲೇ ಸರಿಪಡಿಸಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
