Updated News From Kaup
ಉಡುಪಿ : ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಹಿರಿಯ ನಾಗರಿಕರಿಗೆ ಉಚಿತ ಸಾಧನಾ ಸಲಕರಣೆಗಳ ಸಮರ್ಪಣೆ
Posted On: 24 Sep 2023, 02:22 PM
ಉಡುಪಿ : ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ವಿಕಲಚೇತನರಿಗೆ ಉಚಿತವಾಗಿ ಸಾಧನ ಸಲಕರಣೆಗಳ ಸಮರ್ಪಣೆ ಕಾರ್ಯಕ್ರಮವನ್ನು ಇಂದು ಮಣಿಪಾಲ ಜಿಲ್ಲಾಧಿಕಾರಿಗಳ ಅಟಲ್ ಬಿಹಾರಿ ವಾಜಪೇಯಿ ಆಡಿಟೋರಿಯಂನಲ್ಲಿ ಕೇಂದ್ರ ಸರಕಾರದ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಕಾಪು ಶಾಸರಾದ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ, ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ, ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರಸನ್ನ ಎಚ್, ಅಪರ ಜಿಲ್ಲಾಧಿಕಾರಿಗಳಾದ ಮಮತಾ ದೇವಿ, ಸಹಾಯಕ ಆಯುಕ್ತರಾದ ರಶ್ಮಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸೆಪ್ಟೆಂಬರ್ 25 : ಜನತಾ ದರ್ಶನ ಕಾರ್ಯಕ್ರಮ
Posted On: 24 Sep 2023, 10:34 AM
ಉಡುಪಿ : ರಾಜ್ಯದ ವಿವಿಧ ಭಾಗಗಳಿಂದ ನಾಗರೀಕರು ಬೆಂಗಳೂರಿಗೆ ಆಗಮಿಸಿ ಹಲವಾರು ರೀತಿ ಸಮಸ್ಯೆಗಳ ಕುರಿತು ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ನೀಡಿ, ಅಹವಾಲುಗಳನ್ನು ಸಲ್ಲಿಸುತ್ತಿದ್ದು, ಸದ್ರಿ ಅಹವಾಲುಗಳನ್ನು ಜಿಲ್ಲಾ ಮಟ್ಟದಲ್ಲಿಯೇ ಆಲಿಸಿ ಸೂಕ್ತ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಪ್ರತಿಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಪ್ರತೀ ತಿಂಗಳು "ಜನತಾದರ್ಶನ" ಕಾರ್ಯಕ್ರಮವನ್ನು ಹಮ್ಮಿಕೊಂಡು ಜನರ ಅಹವಾಲುಗಳನ್ನು ಆಲಿಸಿ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಒದಗಿಸುವ ಸಲುವಾಗಿ ಮಾನ್ಯ ಮುಖ್ಯಮಂತ್ರಿಯವರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸೆಪ್ಟಂಬರ್ 25 ರಂದು ಏಕಕಾಲದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ "ಜನತಾದರ್ಶನ" ಕಾರ್ಯಕ್ರಮವನ್ನು ನಡೆಸಲು ನಿರ್ದೇಶನ ನೀಡಿರುತ್ತಾರೆ. ಸರ್ಕಾರದ ಆದೇಶದಂತೆ, ಜಿಲ್ಲೆಯಲ್ಲಿ ನಾಗರಿಕರಿಂದ ಅಹವಾಲುಗಳನ್ನು ಆಲಿಸಿ, ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಒದಗಿಸಲು ಜಿಲ್ಲೆಯಲ್ಲಿ ಕರ್ನಾಟಕ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮವನ್ನು ಸೆಪ್ಟಂಬರ್ 25 ರಂದು ರಂದು ಬೆಳಗ್ಗೆ 10.30 ಕ್ಕೆ ನಗರದ ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಉದ್ಘಾಟಿಸಲಿದ್ದಾರೆ. ಜಿಲ್ಲೆಯ ಸಾರ್ವಜನಿಕರು ಸರ್ಕಾರಿ ಕೆಲಸದ ಸಂಬಂಧ ತಮ್ಮ ಅಹವಾಲುಗಳೇನಾದರೂ ಇದ್ದರೆ, ತಾವು ಖುದ್ದಾಗಿ ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಿ, ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್ 25 : ಕಾಪು ಕುಲಾಲ ಯುವ ವೇದಿಕೆ, ಕುಲಾಲ ಸಂಘದಿಂದ ರಾಜೇಶ್ ಕುಲಾಲ್ ಕುಟುಂಬಕ್ಕೆ ಆರ್ಥಿಕ ನೆರವು ಹಸ್ತಾಂತರ ಕಾರ್ಯಕ್ರಮ
Posted On: 23 Sep 2023, 05:18 PM
ಕಾಪು : ಗ್ಯಾಂಗ್ರಿನ್ ಕಾಯಿಲೆಯಿಂದ ತನ್ನ ಒಂದು ಕಾಲು ಕಳೆದು, ಇನ್ನೊಂದು ಕಾಲು ಉಳಿಸಲು ಪ್ರಯತ್ನ ಮಾಡುತ್ತಲಿರುವ ಕಾಪು ಅದಮಾರು ನಿವಾಸಿ ರಾಜೇಶ್ ಕುಲಾಲ್ ಕುಟುಂಬಕ್ಕೆ ಕಾಪು ಕುಲಾಲ ಯುವ ವೇದಿಕೆ ಹಾಗೂ ಕುಲಾಲ ಸಂಘ (ರಿ.) ಕಾಪು ವಲಯದ ವತಿಯಿಂದ ಸಂಗ್ರಹ ಗೊಂಡ ಧನಸಹಾಯವನ್ನು 25, ಸೋಮವಾರ ಬೆಳಿಗ್ಗೆ 11 ಗಂಟೆಗೆ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ದಾನಿಗಳು, ಹಿತೈಷಿಗಳ ಸಹಭಾಗಿತ್ವದಲ್ಲಿ ರಾಜೇಶ್ ಕುಲಾಲ್ ಕುಟುಂಬಕ್ಕೆ ಹಸ್ತಾಂತರ ಮಾಡಲಿದ್ದಾರೆ. ಸ್ವಜಾತಿ ಮಿತ್ರರು, ಹಿತೈಷಿಗಳು ಅಂದು ನಮ್ಮೊಡನೆ ಭಾಗಿಯಾಗಿ ಎಂದು ಕಾಪು ಕುಲಾಲ ಯುವ ವೇದಿಕೆ ಪ್ರಮುಖರು ಉದಯ ಕುಲಾಲ್, ಕಾಪು ಕುಲಾಲ ಸಂಘದ ಅಧ್ಯಕ್ಷರು ಸಂದೀಪ್ ಬಂಗೇರ ಪ್ರಕಟಣೆಯಲ್ಲಿ ತಿಳಿಸಿರುವರು.
ಶಂಕರಪುರ : ಬಿಲ್ವ ಪತ್ರ ಗಿಡ ವಿತರಣಾ ಅಭಿಯಾನ
Posted On: 22 Sep 2023, 08:31 PM
ಶಂಕರಪುರ : ದ್ವಾರಕಾಮಯಿ ಮಠ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ಶಂಕರಪುರ ಮತ್ತು ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಇದರ ವತಿಯಿಂದ ಗುರುವಾರ ಜಯಂಟ್ಸ್ ಸಪ್ತಾಹದ ಅಂಗವಾಗಿ ಬಿಲ್ವ ಪತ್ರ ಗಿಡ ವಿತರಣಾ ಅಭಿಯಾನ ಕಾಯ೯ಕ್ರಮವನ್ನು ಶ್ರೀ ಸಾಯಿ ಈಶ್ವರ್ ಗುರೂಜಿ ಉದ್ಘಾಟಿಸಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಬಿಲ್ವಪತ್ರ ಗಿಡದಿಂದ ನಮ್ಮ ಆರೋಗ್ಯಕ್ಕೆ ಮತ್ತು ಪರಿಸರಕ್ಕೆ ವಿಶೇಷವಾದ ಲಾಭವಿದೆ. ಈ ಗಿಡವನ್ನು ನೆಟ್ಟು ನಮ್ಮ ಆರೋಗ್ಯವನ್ನು ಮತ್ತು ಆಧ್ಯಾತ್ಮಿಕವಾಗಿ ನಮ್ಮ ಸಮಾಜವನ್ನು ಕೂಡ ಕಾಪಾಡಬಹುದು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಇದರ ಅಧ್ಯಕ್ಷ ವಿವೇಕಾನಂದ ಕಾಮತ್, ನಿಕಟ ಪೂರ್ವ ಅಧ್ಯಕ್ಷ ಸುಂದರ ಪೂಜಾರಿ ಮೂಡುಕುಕ್ಕುಡೆ, ಸುನೀತಾ ಮಧುಸೂಧನ್ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕುರಿತಾಗಿ ಜಯಂಟ್ಸ್ ಗ್ರೂಪ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂದನ್ ಹೇರೂರು ಬಿಲ್ವ ಪತ್ರ ಅಭಿಯಾನದ ಕುರಿತಾಗಿ ಮಾಹಿತಿ ನೀಡಿದರು. ಈ ಸಂದರ್ಭ ಬೆಂಗಳೂರಿನ ಸಾಯಿ ಭಕ್ತರಾದ ಶ್ರೀರಾಮು ಇವರು ಕೊಡ ಮಾಡಿದ ಸಾಯಿ ಮುಖ್ಯಪ್ರಾಣ ಭಾವಚಿತ್ರವನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿ ವಂದಿಸಿದರು. ಸುಮಾರು 300 ಜನರಿಗೆ ಗಿಡಗಳನ್ನು ವಿತರಿಸಲಾಯಿತು.
ಉಚ್ಚಿಲ ದಸರಾ-2023: ಯುವ ನೃತ್ಯೋತ್ಸವಕ್ಕಾಗಿ ಸಾರ್ವಜನಿಕರಿಂದ ಆಡಿಶನ್ ರೌಂಡ್ಗೆ ಆಹ್ವಾನ
Posted On: 22 Sep 2023, 12:33 PM
ಉಚ್ಚಿಲ : ದ.ಕ.ಮೊಗವೀರ ಮಹಾಜನ ಸಂಘ ಆಡಳಿತದ ಶ್ರೀ ಕ್ಷೇತ್ರ ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಳದಲ್ಲಿ ಈ ಬಾರಿ ಅದ್ದೂರಿಯಾಗಿ ನಡೆಯಲಿರುವ ಉಚ್ಚಿಲ ಯುವ ದಸರಾ -2023ರ ಅಂಗವಾಗಿ ಹಮ್ಮಿಕೊಂಡಿರುವ ನೃತ್ಯೋತ್ಸವ ಸಲುವಾಗಿ ಸಾರ್ವಜನಿಕರಿಂದ ನೃತ್ಯ ಸ್ಪರ್ಧೆಯ ಆಡಿಶನ್ ರೌಂಡ್ಗಾಗಿ ಸ್ಪರ್ಧಿಗಳನ್ನು ಆಹ್ವಾನಿಸಲಾಗಿದೆ. ಅಕ್ಟೋಬರ್ 8ರಂದು ಸಂಜೆ 3 ಗಂಟೆಯಿಂದ 6 ಗಂಟೆವರೆಗೆ ಉಚ್ಚಿಲದ ಮೊಗವೀರ ಭವನದಲ್ಲಿ ಆಡಿಶನ್ ರೌಂಡ್ ಸ್ಪರ್ಧೆ ನಡೆಯಲಿದೆ. ಆಡಿಶನ್ ಸುತ್ತಿನ ಸ್ಪರ್ಧಾ ನಿಯಮಗಳು: ಸ್ಪರ್ಧೆಯಲ್ಲಿ ಪ್ರತಿಯೊಂದು ನೃತ್ಯ ತಂಡದಲ್ಲಿ ಕನಿಷ್ಠ 5 ಜನರಿಗೆ ಅವಕಾಶ. ಯಾವುದೇ ವಯಸ್ಸಿನ ಮಿತಿ ಇಲ್ಲ, ತಂಡವೊಂದಕ್ಕೆ 5(4+1) ನಿಮಿಷದ ಅವಕಾಶ. ಆಡಿಶನ್ ಸುತ್ತಿನಲ್ಲಿ ಯಾವುದೇ ಕಾಸ್ಟ್ಯೂಮ್ (ವೇಷಭೂಷಣ) ಅಗತ್ಯವಿಲ್ಲ. ಆಡಿಶನ್ ಸುತ್ತಿನಲ್ಲಿ ಆಯ್ಕೆಯಾದ ತಂಡಗಳು ಅಕ್ಟೋಬರ್ 15ರಂದು ನಡೆಯುವ ಯುವ ದಸರಾ ಉತ್ಸವದ ನೃತ್ಯ ಸ್ಪರ್ಧೆಗೆ ಅರ್ಹತೆ ಪಡೆಯುತ್ತಾರೆ. ಆಡಿಶನ್ ಸುತ್ತಿನಲ್ಲಿ ಒಬ್ಬ ಸ್ಪರ್ಧಿ ಬೇರೆ ಬೇರೆ ತಂಡಗಳಲ್ಲಿ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಯಾವುದೇ ಭಾಷೆ ಅಥವಾ ನೃತ್ಯ ಪ್ರಾಕಾರದ ನಿರ್ಬಂಧವಿಲ್ಲ. ಫೈನಲ್ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಶಸ್ತಿ ಸಹಿತ ಪ್ರಥಮ ಬಹುಮಾನ 30ಸಾವಿರ ರೂ., ದ್ವಿತೀಯ 20ಸಾವಿರ ರೂ., ತೃತೀಯ 15ಸಾವಿರ ರೂ., ಚತುರ್ಥ 10 ಸಾವಿರ ರೂ. ಹಾಗೂ 5 ತಂಡಗಳಿಗೆ ತಲಾ 5ಸಾವಿರ ರೂ. ನಂತೆ ಪ್ರೋತ್ಸಾಹಕ ಬಹುಮಾನ ನೀಡಲಾಗುವುದು ಎಂದು ದಸರಾ ಸಮಿತಿ ಪ್ರಕಟಣೆ ತಿಳಿಸಿದೆ.
ಹೆಜಮಾಡಿ : ವಿಶ್ವ ಹಿಂದೂ ಪರಿಷತ್ - 48ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ; ಸಭಾ ಕಾರ್ಯಕ್ರಮ
Posted On: 19 Sep 2023, 09:43 PM
ಹೆಜಮಾಡಿ : ವಿಶ್ವ ಹಿಂದೂ ಪರಿಷತ್, ಹೆಜಮಾಡಿ ಇದರ 48ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಸಲುವಾಗಿ ಸೆಪ್ಟೆಂಬರ್ 19ರಂದು ಸಭಾ ಕಾರ್ಯಕ್ರಮ ಜರಗಿತು. ಸಭಾ ಕಾರ್ಯಕ್ರಮದಲ್ಲಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಹೆಜಮಾಡಿ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ ಸುಧಾಕರ ಕರ್ಕೇರ, ರಾಷ್ಟ್ರಮಟ್ಟದ ತರಬೇತುದಾರರಾದ ರಾಜೇಂದ್ರ ಭಟ್ ಕೆ, ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇಶ್ಮಾ ಎ ಮೆಂಡನ್, ಹೆಜಮಾಡಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ದಯಾನಂದ ಹೆಜಮಾಡಿ, ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷರಾದ ಲೋಕೇಶ್ ಅಮೀನ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಹೆಜಮಾಡಿ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ವೇದಮೂರ್ತಿ ಶ್ರೀಹರಿ ಭಟ್, ಹೆಜಮಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ವಾಮನ್ ಕೋಟ್ಯಾನ್, ಹೆಜಮಾಡಿ ಘಟಕ ಭಜರಂಗದಳದ ಸಂಚಾಲಕರಾದ ನವೀನ್ ಕೋಟ್ಯಾನ್, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಹರೀಶ್ ಹೆಜಮಾಡಿ ಉಪಸ್ಥಿತರಿದ್ದರು.
ಉಡುಪಿ : ಮಹಿಳಾ ಮೀಸಲಾತಿ ಮಾಜಿ ಪ್ರಧಾನಿ ದೇವೇಗೌಡರ ಕನಸಿನ ಕೂಸು - ಯೋಗೀಶ್ ವಿ ಶೆಟ್ಟಿ
Posted On: 19 Sep 2023, 09:40 PM
ಉಡುಪಿ : ಲೋಕಸಭೆ ಮತ್ತು ರಾಜ್ಯವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33% ಮೀಸಲಾತಿ ನೀಡುವ ವಿಚಾರವನ್ನು 1996ರಲ್ಲಿ ದೇವೇಗೌಡರು ಪ್ರಧಾನ ಮಂತ್ರಿಗಳಾಗಿದ್ದಾಗ ಪ್ರಸ್ತಾವನೆ ಮಾಡಿದ್ದರು. ಇದು ದೇವೇಗೌಡರ ಕನಸಿನ ಕೂಸು. ನಮ್ಮ ನಾಯಕರಾದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರೂ ಆ ಸಂದರ್ಭ ಲೋಕಸಭೆ ಸದಸ್ಯರಾಗಿದ್ದರು. ನಮ್ಮ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಇದರ ಬಗ್ಗೆ ಪ್ರಸ್ತಾವನೆ ಮಾಡಿದ್ದು ಸಂತೋಷ ತಂದಿರುತ್ತದೆ. ಇದು ಆದಷ್ಟು ಶೀಘ್ರದಲ್ಲಿ ಜಾರಿಗೆ ಬರಲಿ. ಇದು ಅಭಿವೃದ್ಧಿ ಸಮಾಜ ಸುಧಾರಣೆಯ ಹೊಸ ಹೆಜ್ಜೆ ಮಹಿಳಾ ಮೀಸಲಾತಿಗೆ ಮರು ಜೀವ ತಂದದ್ದು ಸಂತಸದ ವಿಚಾರ ಎಂದು ಉಡುಪಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕಾಪು : ತಾಲೂಕಿನಾದ್ಯಂತ ಸಂಭ್ರಮದ ಗಣೇಶೋತ್ಸವ ಆಚರಣೆ
Posted On: 19 Sep 2023, 12:27 PM
ಕಾಪು : ಮೊದಲ ಪೂಜಿತ ದೇವ ಗಣಪತಿಯ ಆರಾಧನಾ ಮಹೋತ್ಸವ ಗಣೇಶ ಚತುರ್ಥಿಯ ಸಂಭ್ರಮವನ್ನು ಕಾಪು ತಾಲೂಕಿನಾದ್ಯಂತ ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಮೂಲಕ 14 ಕಡೆಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಕಾಪು ತಾಲೂಕಿನ ದೇವಳಗಳಲ್ಲಿ ವಿಶೇಷ ಪೂಜೆಯೊಂದಿಗೆ, ಉಚ್ಚಿಲದಲ್ಲಿ 33 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ, ಕಾಪುವಿನಲ್ಲಿ 44ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ, ಪಾದೂರಿನಲ್ಲಿ 9ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ, 20 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಪಣಿಯೂರು, 36 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಎರ್ಮಾಳು ಸೇರಿದಂತೆ ಪಡುಬಿದ್ರಿ ಇನ್ನಿತರ ಭಾಗಗಳಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಗಣೇಶೋತ್ಸವವು ಆಚರಿಸಲಾಗುತ್ತಿದೆ.
ಕಾಪು : ಕಾಲು ಕಳೆದುಕೊಂಡು ಸಹಾಯದ ನಿರೀಕ್ಷೆಯಲ್ಲಿದ್ದ ವ್ಯಕ್ತಿಗೆ ಸಹಾಯಗೈದ ಕುಲಾಲ್ಸ್ ದೋಹಾ ಸದಸ್ಯರು
Posted On: 18 Sep 2023, 11:23 PM
ಕಾಪು : ಕಾಲು ಕಳೆದುಕೊಂಡು ಸಹಾಯದ ನಿರೀಕ್ಷೆಯಲ್ಲಿದ್ದ ಕಾಪು ತಾಲೂಕಿನ ಅದಮಾರುವಿನ ರಾಜೇಶ್ ಕುಲಾಲ್ ಅವರ ಮನವಿಗೆ ದೋಹಾ ಕತಾರ್ ಕುಲಾಲ ಮಿತ್ರರು ಸ್ಪಂದಿಸಿ ಅವರಿಗೆ 25 ಸಾವಿರ ರೂಪಾಯಿ ಸಹಾಯ ನೀಡಿದ್ದಾರೆ.
ನಮ್ಮ ನಾಡ ಒಕ್ಕೂಟ - ಕಾಪು ತಾಲೂಕು ಘಟಕದಿಂದ ಸಮಾಜ ಸೇವಕ ಫಾರೂಕ್ ಚಂದ್ರನಗರರಿಗೆ ಸನ್ಮಾನ
Posted On: 18 Sep 2023, 10:35 PM
ಕಾಪು : ಮನುಕುಲದ ಸೇವೆಯೆ ಭಗವಂತನ ಸೇವೆ ಎಂಬ ಧ್ಯೇಯ ವಾಕ್ಯವನ್ನು ನಂಬಿಕೊಂಡು ಜಾತಿ ಮತ ಬೇದವಿಲ್ಲದೆ ಸಮಾಜ ಸೇವೆಯಲ್ಲಿ ಜನರಿಗೆ ತನ್ನ ಕೈಯಲ್ಲಿ ಆಗುವ ಸಹಾಯ ಮಾಡುತ್ತ ಉತ್ತಮ ಸಮಾಜ ಸೇವಕರಾಗಿ ಗುರುತಿಸಿ ಅನೇಕ ಸಂಘ ಸಂಸ್ಥೆಗಳಿಂದ ಜಿಲ್ಲಾ ರಾಜ್ಯ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಪಡೆದ ಫಾರೂಕ್ ಚಂದ್ರನಗರರನ್ನು ನಮ್ಮ ನಾಡ ಒಕ್ಕೂಟ (ರಿ.) ಕಾಪು ತಾಲೂಕು ಘಟಕದಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಂದರ್ಭ ನಮ್ಮ ನಾಡ ಒಕ್ಕೂಟದ ಅಧ್ಯಕ್ಷರಾದ ಮಹಮ್ಮದ್ ಅಶ್ರಫ್ ಪಡುಬಿದ್ರಿ, ಉಪಾಧ್ಯಕ್ಷರಾದ ಮಹಮ್ಮದ್ ಇರ್ಫಾನ್ ಕಾಪು, ಕಾರ್ಯದರ್ಶಿ ಅಬ್ದುಲ್ ಹಮೀದ್ ಯೂಸುಫ್, ಕೋಶಾಧಿಕಾರಿ ಯು.ಎ ರಶೀದ್, ಸದಸ್ಯ ರಝಾಕ್ ಉಚ್ಚಿಲ ಉಪಸ್ಥಿತರಿದ್ದರು.
