Updated News From Kaup

ಇದೀಗ ಹೊಸ ಆಡಳಿತದೊಂದಿಗೆ ಕಾಪುವಿನ ಹೋಟೆಲ್ ಮಯೂರ

Thumbnail
Posted On: 19 Aug 2023, 07:42 PM

ಕಳೆದ ಹಲವಾರು ವರ್ಷಗಳಿಂದ ಗ್ರಾಹಕರಿಗೆ ಲಾಡ್ಜಿಂಗ್ ಜೊತೆಗೆ ಸೌತ್ ಇಂಡಿಯನ್, ನಾರ್ತ್ ಇಂಡಿಯನ್ ಹಾಗೂ ಇನ್ನಿತರ ಖಾದ್ಯಗಳನ್ನು ಉಣ ಬಡಿಸುತ್ತಿರುವ ಕಾಪುವಿನ ಹೋಟೆಲ್ ಮಯೂರ ಇಂದಿನಿಂದ ಹೊಸ ಆಡಳಿತದೊಂದಿಗೆ ಮುನ್ನಡೆಯಲಿದೆ. ಸಂಜಿತ್ ಶೆಟ್ಟಿ ಕಲ್ಯಾಲು ಇವರು ಪಾಲುದಾರರಾಗಿ ಮತ್ತು ನಿರ್ವಾಹಕರಾಗಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಆಹಾರ ಮತ್ತು ರೂಮ್ಸ್ ಜೊತೆಗೆ ಮದುವೆ ಹಾಗೂ ಇನ್ನಿತರ ಶುಭಸಮಾರಂಭಗಳಿಗೆ ಸಭಾಂಗಣ ಹಾಗೂ ಕ್ಯಾ ಟರಿಂಗ್ ವ್ಯವಸ್ಥೆಯನ್ನು ಕೂಡಾ ಒದಗಿಸಲಾಗುವುದು ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : +91 87924 48087

ಶಿರ್ವ : ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ. ಕಾರವಾರ - ಶಿರ್ವ ಶಾಖೆ ವತಿಯಿಂದ ಅಗತ್ಯ ವಸ್ತುಗಳ ವಿತರಣೆ

Thumbnail
Posted On: 19 Aug 2023, 06:17 PM

ಶಿರ್ವ : ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ. ಕಾರವಾರ ಇದರ ಶಿರ್ವ ಶಾಖೆ ವತಿಯಿಂದ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯಂದು ಆಕ್ಸಿಲಿಯಂ ನಿವಾಸದ ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳನ್ನು ಮತ್ತು ಸಿಹಿತಿಂಡಿ ವಿತರಿಸಲಾಯಿತು. ಈ ಸಂದರ್ಭ ಶಿರ್ವ ಆರೋಗ್ಯ ಮಾತಾ ಚಚ್೯ ಪ್ರಧಾನ ಧರ್ಮ ಗುರುಗಳು ವಂ| ಫಾ| ಲೆಸ್ಲಿ ಡಿಸೋಜಾ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಮೆಲ್ವಿನ್ ಅರನ್ನಾ, ಉದ್ಯಮಿ ಕೆ ಶ್ರೀಧರ ಕಾಮತ್, ಕಾನ್ವೆಂಟಿನ ಮೇಲ್ವಿಚಾರಕಿ ಲೀಮಾ, ಶಾಖಾ ವ್ಯವಸ್ಥಾಪಕಿ ಪ್ರಮೀಳಾ ಲೋಬೊ, ಕಾನ್ವೆಂಟಿನ ಧರ್ಮ ಭಗಿನಿಯರು ಹಾಗೂ ಶಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾಪು : ಹೆಚ್.ಕೆ.ಟೈಲರ್( ಕಾಂತರ ಮೂಲ್ಯ )ಪುಂಚಲಕಾಡು ವಿಧಿವಶ

Thumbnail
Posted On: 19 Aug 2023, 05:42 PM

ಕಾಪು : ಕಳತ್ತೂರುವಿನ ಪುಂಚಲಕಾಡು ಪರಿಸರದಲ್ಲಿ ಎಚ್ ಕೆ ಟೈಲರ್ ಎಂದೇ ಹೆಸರುವಾಸಿಯಾಗಿದ್ದ ಕಾಂತರ ಮೂಲ್ಯ ಇಂದು ಅನಾರೋಗ್ಯದಿಂದ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು. ಮೃತರ ಅಂತ್ಯಕ್ರಿಯೆ ನಾಳೆ ಬೆಳಿಗ್ಗೆ ಅವರ ಸ್ವಗ್ರಹದಲ್ಲಿ ನಡೆಯಲಿದೆ.

ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಶಿವಕುಮಾರ್ ಮೆಂಡನ್, ಉಪಾಧ್ಯಕ್ಷರಾಗಿ ದೀಪಕ್ ಕುಮಾರ್ ಆಯ್ಕೆ

Thumbnail
Posted On: 18 Aug 2023, 06:47 PM

ಉಚ್ಚಿಲ : ಬಡಾ ಗ್ರಾಮ ಪಂಚಾಯತ್ ನ ಎರಡನೇ ಅವಧಿಯ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತರಾದ ಶಿವಕುಮಾರ್ ಮೆಂಡನ್ ಮತ್ತು ಉಪಾಧ್ಯಕ್ಷರಾಗಿ ದೀಪಕ್ ಕುಮಾರ್ ಆಯ್ಕೆಯಾಗಿದ್ದಾರೆ. 21 ಸದಸ್ಯ ಬಲದ ಬಡಾ ಗ್ರಾ.ಪಂ. ನಲ್ಲಿ 11 ಬಿಜೆಪಿ, 6 ಕಾಂಗ್ರೆಸ್, 4 ಎಸ್.ಡಿ‌.ಪಿ.ಐ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನವು ಸಾಮಾನ್ಯ ಪುರುಷ ಮತ್ತು ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಪುರುಷ ವರ್ಗಕ್ಕೆ ಮೀಸಲಾಗಿತ್ತು. ಅಧ್ಯಕ್ಷ ಹುದ್ದೆಗೆ ಬಿಜೆಪಿ ಬೆಂಬಲಿತರಾಗಿ ಎ. ಶಿವ ಕುಮಾರ್ ಮೆಂಡನ್ ಮತ್ತು ಕಾಂಗ್ರೆಸ್ ಬೆಂಬಲಿತರಾದ ಮಹಮ್ಮದ್ ರಫೀಕ್ ದೀವ್ ಹಾಗೂ ಉಪಾಧ್ಯಕ್ಷ ಹುದ್ದೆಗೆ ಬಿಜೆಪಿ ಬೆಂಬಲಿತ ದೀಪಕ್ ಕುಮಾರ್ ಮತ್ತು ಕಾಂಗ್ರೆಸ್ ಬೆಂಬಲಿತ ಅಬ್ದುಲ್ ಮಜೀದ್ ಸ್ಪರ್ಧಿಸಿದ್ದರು. ಚುನಾವಣೆ ನಡೆದು ಅಂತಿಮವಾಗಿ ಬಿಜೆಪಿ ಬೆಂಬಲಿತರಾದ ಶಿವಕುಮಾರ್ ಮೆಂಡನ್ ಅವರಿಗೆ 12 ಮತ್ತು ಉಪಾಧ್ಯಕ್ಷ ದೀಪಕ್ ಕುಮಾರ್ ಅವರು 11 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಒಂದು ಮತ ಅಸಿಂಧು ಆಗಿದ್ದು, ಮತ್ತೋರ್ವ ಸದಸ್ಯೆ ಮತದಾನ ನಡೆಸಲು ತಡವಾಗಿ ಆಗಮಿಸಿ, ಮತದಾನ ಪ್ರಕ್ರಿಯೆಯಿಂದ ವಂಚಿತರಾಗಿದ್ದರು. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ನಿಧೀಶ್ ಹೊಳ್ಳ ಚುನಾವಣಾಧಿಕಾರಿಯಾಗಿದ್ದು, ಪಿಡಿಒ ಸತೀಶ್ ಸಹ ಚುನಾವಣಾಧಿಕಾರಿಯಾಗಿ ಸಹಕರಿಸಿದ್ದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಶಿಲ್ಪಾ ಜಿ. ಸುವರ್ಣ, ಗಂಗಾಧರ್ ಸುವರ್ಣ, ನಿಕಟಪೂರ್ವ ಅಧ್ಯಕ್ಷೆ ಜ್ಯೋತಿ, ಉಪಾಧ್ಯಕ್ಷೆ ಶಕುಂತಳ ಮೊದಲಾದವರು ಉಪಸ್ಥಿತರಿದ್ದರು.

ಕಾಪು : ಮಜೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಪ್ರಸಾದ್ ಶೆಟ್ಟಿ ವಳದೂರು, ಉಪಾಧ್ಯಕ್ಷೆಯಾಗಿ ಮಂಜುಳಾ ಆಚಾರ್ಯ ಆಯ್ಕೆ  

Thumbnail
Posted On: 18 Aug 2023, 06:34 PM

ಕಾಪು : ಇಲ್ಲಿನ ಮಜೂರು ಗ್ರಾಮ ಪಂಚಾಯತ್ ನ ಎರಡನೇ ಅವಧಿಯ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತರಾದ ಪ್ರಸಾದ್ ಶೆಟ್ಟಿ ವಳದೂರು ಮತ್ತು ಉಪಾಧ್ಯಕ್ಷರಾಗಿ ಮಂಜುಳಾ ಆಚಾರ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತೋಟಗಾರಿಕೆ ಇಲಾಖೆ ಅಧಿಕಾರಿ ವರುಣ್ ಜೆ. ಚುನಾವಣಾಧಿಕಾರಿಯಾಗಿದ್ದು, ಪಿಡಿಒ ವಿಲಾಸಿನಿ ಸಹ ಚುನಾವಣಾಧಿಕಾರಿಯಾಗಿ ಸಹಕರಿಸಿದ್ದರು. 13 ಸದಸ್ಯ ಬಲದ ಮಜೂರು ಗ್ರಾ.ಪಂ. ನಲ್ಲಿ 9 ಬಿಜೆಪಿ, 4 ಕಾಂಗ್ರೆಸ್ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನವು ಸಾಮಾನ್ಯ ಪುರುಷ ಮತ್ತು ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಬಿಜೆಪಿ ಕ್ಷೇತ್ರಾಧ್ಯಕ್ಷ ಶ್ರೀಕಾಂತ್ ನಾಯಕ್, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಶಿಲ್ಪಾ ಜಿ. ಸುವರ್ಣ, ಮಾಜಿ ತಾ.ಪಂ. ಅಧ್ಯಕ್ಷೆ ಶಶಿಪ್ರಭಾ ಶೆಟ್ಟಿ, ಗಂಗಾಧರ್ ಸುವರ್ಣ, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಗಣೇಶ್ ಶೆಟ್ಟಿ, ಸಂದೀಪ್ ರಾವ್, ನಿಕಟಪೂರ್ವ ಅಧ್ಯಕ್ಷೆ ಶರ್ಮಿಳಾ ಆಚಾರ್ಯ, ಉಪಾಧ್ಯಕ್ಷ ಮಧುಸೂದನ್ ಸಾಲಿಯನ್ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ಆಗಸ್ಟ್ 19 : ಉಡುಪಿ ಜಿಲ್ಲಾ ಲಯನ್ಸ್ 317C ಇದರ ಸಂಪುಟ ಮತ್ತು ಗವರ್ನರ್ ಪದ ಪ್ರಧಾನ ಸಮಾರಂಭ

Thumbnail
Posted On: 17 Aug 2023, 09:53 PM

ಉಡುಪಿ : ಜಿಲ್ಲಾ ಲಯನ್ಸ್ 317C ಇದರ ಸಂಪುಟ ಮತ್ತು ಗವರ್ನರ್ ಪದ ಪ್ರಧಾನ ಸಮಾರಂಭ ಆಗಸ್ಟ್ 19ರಂದು ಮಧ್ಯಾಹ್ನ 3ಕ್ಕೆ ಉಡುಪಿಯ ಅಂಬಾಗಿಲಿನ ಅಮೃತ್ ಗಾರ್ಡನ್‌ನಲ್ಲಿ ಜರಗಲಿದೆ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಡಾ. ನೇರಿ ಕರ್ನೇಲಿಯೊ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಉಡುಪಿ ಬಿಷಪ್ ಡಾ. ಜೆರಾಲ್ಡ್ ಐಸಾಕ್ ಲೋಬೊ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಲಿದ್ದಾರೆ. ಲಯನ್ಸ್ ಕ್ಲಬ್‌ನ ಪ್ರಮುಖರಾದ ರಾಮಕೃಷ್ಣ ಮೂರ್ತಿ, ಕೆ. ವಂಶಿಧರ್ ಬಾಬು, ಜಿ. ಶ್ರೀನಿವಾಸ್ ಮೊದಲಾದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಾಧಕರಿಗೆ ಸಮ್ಮಾನ, ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು. ಲಯನ್ಸ್ ಜಿಲ್ಲೆ 317ಸಿ ವ್ಯಾಪ್ತಿಯಲ್ಲಿ ಉಡುಪಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಕಂದಾಯ ಜಿಲ್ಲೆಗಳಲ್ಲಿ ಒಳಗೊಂಡು 3 ಸಾವಿರ ಸದಸ್ಯರು ಇದ್ದಾರೆ. ಉಡುಪಿ ಜಿಲ್ಲೆಯಲ್ಲಿ ‘ಲೀವ್ ಟೂ ಲೀಡ್’ ಎಂಬ ಘೋಷಣೆಯೊಂದಿಗೆ 'ಬೆಳಕು' ಜಿಲ್ಲಾ ಕಾರ್ಯಕ್ರಮದಡಿಯಲ್ಲಿ ಹಲವಾರು ಸೇವಾ ಚಟುವಟಿಕೆಗಳ ಯೋಜನೆ ರೂಪಿಸಲಾಗಿದೆ. ಜಿಲ್ಲೆಗೆ ಈಗಾಗಲೆ ತುರ್ತು ನೆರೆ ಪರಿಹಾರ ನಿಧಿಯನ್ನು ವಿತರಿಸಿದ್ದೇವೆ. ಮುಂದಿನ ದಿನಗಳಲ್ಲಿ ಶಿಕ್ಷಣ, ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿ ಸಾಕಷ್ಟು ಯೋಜನೆಗಳನ್ನು ರೂಪಿಸಲಾಗುವುದು. ಸೇವಾ ಮತ್ತು ಸಮಾಜಮುಖಿ ಚಟುವಟಿಕೆ ಕಾರ್ಯಕ್ರಮಗಳನ್ನು ಹೆಚ್ಚು ಹಮ್ಮಿಕೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಲಯನ್ಸ್ ಸಂಪುಟ ಕಾರ್ಯದರ್ಶಿ ರವಿರಾಜ ನಾಯಕ್, ಖಜಾಂಚಿ ರೀಚರ್ಡ್ ಡಯಾಸ್, ಮಾರ್ಕೇಟಿಂಗ್ ಸಂವಹನ-ಮಾಹಿತಿ ಅಧಿಕಾರಿಗಳಾದ ಸಿದ್ಧರಾಜು, ಡಾ. ಜಗದೀಶ್ ಹೊಳ್ಳ, ಜಾರ್ಜ್ ಡಿ’ಸೋಜಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಇನ್ನಂಜೆ ಗ್ರಾಮ ಪಂಚಾಯತ್ : ಅಧ್ಯಕ್ಷರಾಗಿ ಮಾಲಿನಿ ಶೆಟ್ಟಿ ಮತ್ತು ಉಪಾಧ್ಯಕ್ಷರಾಗಿ ಸುರೇಖಾ ಶೆಟ್ಟಿ ಅವಿರೋಧ ಆಯ್ಕೆ

Thumbnail
Posted On: 17 Aug 2023, 05:35 PM

ಕಾಪು : ಇನ್ನಂಜೆ ಗ್ರಾಮ ಪಂಚಾಯತ್ ನ ಎರಡನೇ ಅವಧಿಯ ಅಧ್ಯಕ್ಷರಾಗಿ ಮಾಲಿನಿ ಶೆಟ್ಟಿ ಮತ್ತು ಉಪಾಧ್ಯಕ್ಷರಾಗಿ ಸುರೇಖಾ ಶೆಟ್ಟಿಯವರು ಆಯ್ಕೆಯಾಗಿದ್ದಾರೆ. 13 ಸದಸ್ಯ ಬಲದ ಇನ್ನಂಜೆ ಗ್ರಾ.ಪಂ. ನಲ್ಲಿ 9 ಬಿಜೆಪಿ, 3 ಕಾಂಗ್ರೆಸ್, 1 ಪಕ್ಷೇತರ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ತೋಟಗಾರಿಕಾ ಇಲಾಖೆಯ ಅಧಿಕಾರಿ ವರುಣ್ ಜೆ. ಚುನಾವಣಾಧಿಕಾರಿಯಾಗಿದ್ದು, ಪಿಡಿಒ ಚಂದ್ರಕಲಾ ಸಹ ಚುನಾವಣಾಧಿಕಾರಿಯಾಗಿ ಸಹಕರಿಸಿದ್ದರು. ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್‌ ಮೆಂಡನ್‌ರವರು ಅಧ್ಯಕ್ಷೆ ಮಾಲಿನಿ ಶೆಟ್ಟಿ ಹಾಗೂ ಉಫಾಧ್ಯಕ್ಷೆ ಸುರೇಖಾ ಶೆಟ್ಟಿಯವರಿಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭ ಇನ್ನಂಜೆ ಗ್ರಾಪಂ ಸದಸ್ಯರು, ಗ್ರಾಮಸ್ಥರು ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

ಬೆಳಪು ಗ್ರಾಮ ಪಂಚಾಯತ್ : 10ನೇ ಬಾರಿಗೆ ಅಧ್ಯಕ್ಷರಾಗಿ ಡಾ|| ದೇವಿ ಪ್ರಸಾದ್ ಶೆಟ್ಟಿ ಅವಿರೋಧ ಆಯ್ಕೆ

Thumbnail
Posted On: 17 Aug 2023, 05:31 PM

ಬೆಳಪು : ಇಲ್ಲಿನ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆದಿದ್ದು, ಅಧ್ಯಕ್ಷರಾಗಿ ಹತ್ತನೇ ಬಾರಿ ಡಾ|| ದೇವಿ ಪ್ರಸಾದ್ ಶೆಟ್ಟಿ ಯವರು ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷೆಯಾಗಿ ಕಳೆದ ಬಾರಿಯ ಅಧ್ಯಕ್ಷೆ ಶೋಭಾ ಭಟ್ ರವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಚುನಾವಣಾ ಅಧಿಕಾರಿಯಾಗಿ ತೋಟಗಾರಿಕಾ ಇಲಾಖಾಧಿಕಾರಿ ನಿದೀಶ್ ಕುಮಾರ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕಾಪು ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಯುಸಿ ಶೇಖಬ್ಬ, ಗ್ರಾಮ ಪಂಚಾಯತ್ ಸದಸ್ಯರು, ಉಧ್ಯಮಿ ಹರೀಶ್ ನಾಯಕ್ ಕಾಪು, ಕಾಪು ಕಾಂಗ್ರೆಸ್ ಅಧ್ಯಕ್ಷ ನವೀನನ್ ಚಂದ್ರ ಸುವರ್ಣ, ಶೇಖರ್ ಹೆಜಮಾಡಿ ಸಹಿತ ಗಣ್ಯರು ಶುಭ ಹಾರೈಸಿದರು.

ಶಂಕರಪುರ : ಸಣ್ಣ ವಯಸ್ಸಿನಲ್ಲಿ ಹೈನುಗಾರಿಕಾ ಕ್ಷೇತ್ರದಲ್ಲಿ ಸಾಧನೆಗೈಯುತ್ತಿರುವ ಇನ್ನಂಜೆಯ ಆದೀಶ್ ಆಚಾರ್ಯಗೆ ಸನ್ಮಾನ

Thumbnail
Posted On: 17 Aug 2023, 12:01 PM

ಶಂಕರಪುರ : ರೋಟರಾಕ್ಟ್ ಕ್ಲಬ್ ಸುಭಾಸ್ ನಗರ ಮತ್ತು ರೋಟರಿ ಸಮುದಾಯ ದಳ ಇನ್ನಂಜೆ ಇವರ ಜಂಟಿ ಆಶ್ರಯದಲ್ಲಿ ಆಗಸ್ಟ್ 15ರಂದು ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಅತ್ಯಂತ ಸಣ್ಣ ವಯಸಿನಲ್ಲಿ ಹೈನುಗಾರಿಕಾ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಾಧನೆಗೈಯುತ್ತಿರುವ ಇನ್ನಂಜೆಯ ಆದೀಶ್ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿ ಮೋಹನ್ ದಾಸ್ ಶೆಟ್ಟಿ, ರೋಟರಾಕ್ಟ್ ಕ್ಲಬ್ ಸುಭಾಸ್ ನಗರದ ಸಭಾಪತಿ ಗ್ಲಾಡ್ಸನ್ ಕುಂದರ್, ರೋಟರಿ ಸಮುದಾಯ ದಳ ಇನ್ನಂಜೆ ಸಭಾಪತಿ ಮಾಲಿನಿ ಇನ್ನಂಜೆ, ರೋಟರಾಕ್ಟ್ ಕ್ಲಬ್ ಸುಭಾಸ್ ನಗರದ ಅಧ್ಯಕ್ಷ ಯಜ್ನೇಶ್ ಹೆಗ್ಡೆ,ರೋಟರಿ ಸಮುದಾಯ ದಳ ಇನ್ನಂಜೆಯ ಅಧ್ಯಕ್ಷ ರವಿಪ್ರಸಾದ್, ರೋಟರಾಕ್ಟ್ ಕ್ಲಬ್ ಸುಭಾಸ್ ನಗರದ ಜೊತೆ ಕಾರ್ಯದರ್ಶಿ ನೇಹಾ ಶೆಟ್ಟಿ ಉಪಸ್ಥಿತರಿದ್ದರು.

ಆಗಸ್ಟ್ 26 : ಮೀರಾರೋಡಿನಲ್ಲಿ ಸೌಜನ್ಯ ಪ್ರಕರಣದ ವಿರುದ್ಧ ಪ್ರತಿಭಟನೆಯ ಪೂರ್ವಬಾವಿ ಸಭೆ

Thumbnail
Posted On: 16 Aug 2023, 11:15 PM

ಮುಂಬಯಿ : ಧರ್ಮವು ಅಧರ್ಮದ ದಾರಿಯಲ್ಲಿ ನಡೆದಾಗ ಭಗವಂತನು ಯಾವುದೇ ರೂಪದಲ್ಲಿ ಬಂದು ರಕ್ಷಣೆ ನೀಡುತ್ತಾನೆ ಎಂಬ ದೃಢ ನಂಬಿಕೆಯಿಂದ ಹನ್ನೆರಡು ವರ್ಷಗಳ ಹಿಂದೆ ಅಮಾನುಷವಾಗಿ ಕೊಲೆಯಾದ ಧರ್ಮಸ್ಥಳ ಪರಿಸರದ ಬಾಲೆ ಸೌಜನ್ಯಳ ನಿಜವಾದ ಕೊಲೆಗಾರ ಯಾರು ಎಂದು ತಿಳಿಯುವರೇ ಹೋರಾಟ ಆರಂಭವಾಗಿದೆ.ಈ ಹೋರಾಟದಲ್ಲಿ ನ್ಯಾಯ ಸಿಗಲೇಬೇಕೆಂದು ಪ್ರೋತ್ಸಾಹಿಸಿ ಮಹಾರಾಷ್ಟ್ರದ ಮಣ್ಣಿನಲ್ಲಿ ನೆಲೆಸಿದ ಸಮಾನ ಮನಸ್ಕರಾದ ನಾವು ಮುಂಬಯಿಯಲ್ಲೂ ಬೃಹತ್ ಪ್ರತಿಭಟನೆ ನಡೆಸುವ ಉದ್ದೇಶದಿಂದ ಪೂರ್ವಬಾವಿ ಸಭೆಯಲ್ಲಿ ಒಟ್ಟುಗೂಡಿದ್ದೇವೆ. ನಮ್ಮ ನಡೆ ಕೇವಲ ನ್ಯಾಯದ ಕಡೆ. ಹಿಂದೆ ಸಂತೋಷ್ ರಾವ್ ಎಂಬ ಸಜ್ಜನ ಯುವಕನನ್ನು ಆರೋಪಿಯ ಸ್ಥಾನದಲ್ಲಿಟ್ಟು ಇದೀಗ ನ್ಯಾಯಾಲಯವು ಅವರನ್ನು ನಿರಾಪರಾಧಿ ಎಂದು ತೀರ್ಪು ನೀಡಿದೆ. ಹಾಗಾಗಿ ನಿಜವಾದ ಆರೋಪಿ ಅಲ್ಲದೆ ಸಂತೋಷ್ ರಾವ್ ಹಾಗೂ ಅವರ ಕುಟುಂಬಕ್ಕೆ ಕಳಂಕ ತಂದವರು ಯಾರು ಎಂಬ ಗೊಂದಲವು ಈ ಪ್ರತಿಭಟನೆಗೆ ಕಾರಣವಾಗಿದೆ. ಇದಕ್ಕಾಗಿ ಎಸ್ ಐಟಿ ಮುಖೇನ ನಿವೃತ್ತ ನ್ಯಾಯಾಧೀಶರನ್ನು ನೇಮಿಸಿ ಮರು ತನಿಖೆ ನಡೆಸಬೇಕೆಂದು ಸರಕಾರಕ್ಕೆ ಮನವಿ ಮಾಡಬೇಕು. ನಾವು ಯಾರದ್ದೇ ಚಾರಿತ್ರ್ಯ ಹರಣ ಮಾಡದೆ ನ್ಯಾಯಕ್ಕಾಗಿ ಪ್ರತಿಭಟಿಸುವ ಎಂದು ಕನ್ನಡ ಜಾನಪದ ಪರಿಷತ್ ಮಹಾರಾಷ್ಟ್ರದ ಅದ್ಯಕ್ಷ , ಸಮಾಜ ಸೇವಕ ಸುರೇಶ್ ಶೆಟ್ಟಿ ಯೆಯ್ಯಾಡಿ ಹೇಳಿದರು. ಅವರು ಆಗಸ್ಟ್ 14ರಂದು ಮೀರಾರೋಡ್ ಶೀತಲ್ ನಗರದ ಸಾಯಿ ಸಾಫಲ್ಯ ವಸತಿ ಸಂಕೀರ್ಣದ ವಠಾರದಲ್ಲಿ ಸಭೆಯನ್ನು ಆಯೋಜಿಸಿ ಮಾತನಾಡಿದರು. ಸಭೆಯ ಇನ್ನೋರ್ವ ಆಯೋಜಕ ನೀಲೇಶ್ ಪೂಜಾರಿ ಪಲಿಮಾರು ಮಾತನಾಡಿ ಧರ್ಮ ಹಾಗೂ ನ್ಯಾಯ ಸಿಗುವಂತಹ ಧಾರ್ಮಿಕ ಕ್ಷೇತ್ರದ ಪರಿಸರದಲ್ಲಿ ನಡೆದ ಈ ಅಮಾನುಷ ಕೃತ್ಯಕ್ಕೆ ನ್ಯಾಯ ಯಾಕೆ ಸಿಗಲಿಲ್ಲ ಎಂಬ ವಿಚಾರವಾಗಿ ಇದೀಗ ಕಾನೂನಿನ ಮುಖಾಂತರ ನ್ಯಾಯಾಲಯದ ಮೊರೆ ಹೋಗುವಂತಾಗಿದೆ. ಖ್ಯಾತ ಸಮಾಜಮುಖಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯವರ ಉಪಸ್ಥಿತಿಯಲ್ಲಿ ಶನಿವಾರ ಆಗಸ್ಟ್ 26 ರಂದು ಮೀರಾರೋಡ್ ಪೂರ್ವದ ಶಾಂತಿ ನಗರ, ಸೆಕ್ಟರ್ 10ರ ಸ್ವಾಮೀ ನಾರಾಯಣ ಮಂದಿರದ (BAPS) ಸಭಾಗೃಹದಲ್ಲಿ ಮಧ್ಯಾಹ್ನ ಗಂಟೆ 2ರಿಂದ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ. ಸಭೆಗೆ ಒತ್ತಡ ಹಾಗೂ ಬೆದರಿಕೆ ಬಂದರೂ ನಾವೆಲ್ಲರೂ ಸೇರಿ ಸೌಜನ್ಯ ಕುಟುಂಬದ ನ್ಯಾಯಕ್ಕಾಗಿ ಹೋರಾಟ ನಡೆಸುವ ಎಂದರು. ಸಮಾಜಸೇವಕ, ಹ್ಯುಮಾನಿಟಿ ಫಸ್ಟ್ ಫೌಂಡೇಶನಿನ ರಾಯಭಾರಿ ಡಾ. ಶಿವ ಮೂಡಿಗೆರೆ ಮಾತನಾಡಿ ಇಂದು ನಾವು ಯಾವುದೇ ವ್ಯಕ್ತಿ ಪರ ಅಲ್ಲದೆ ರಾಜಕೀಯವಾಗಿ ಸಭೆಯನ್ನು ನಡೆಸುತ್ತಿಲ್ಲ.ಕೇವಲ ನ್ಯಾಯದ ಹೋರಾಟಕ್ಕೆ ಅಣಿಯಾಗುತ್ತಿದ್ದೇವೆ. ಮುಂಬಯಿಯ ಎಲ್ಲಾ ತುಳುಕನ್ನಡ ಸಂಸ್ಥೆಗಳು ಒಟ್ಟು ಸೇರಿ ಸರಕಾರಕ್ಕೆ ಕೂಡಲೇ ತ್ವರಿತ ಕ್ರಮ ಕೈಗೊಳ್ಳಲು ಲಿಖಿತ ಮನವಿ ನೀಡಬೇಕು. ಮೊದಲ ಬಾರಿ ಈ ಕೇಸಿನ ವಿಚಾರಣೆ ಮಾಡಿದ ವೈದ್ಯರು ಅಲ್ಲದೆ ಪೋಲಿಸು ಅಧಿಕಾರಿಗಳನ್ನು ಮೊದಲು ಅಧಿಕಾರದಿಂದ ವಜಾ ಮಾಡಬೇಕು. ಇವರೇ ಈ ಕೇಸಿಗೆ ಸಂಬಂಧಪಟ್ಟ ಸಾಕ್ಷಿಗಳನ್ನು ನಾಶ ಮಾಡಿದ್ದರಿಂದ ನ್ಯಾಯ ದೊರಕಲಿಲ್ಲ.ಅಲ್ಲದೆ ಅಲ್ಲಿನ ರಾಜಕೀಯ ಪ್ರಭಾವವೂ ಅವರೊಂದಿಗೆ ಜತೆ ಕೂಡಿರಬಹುದು. ನಿಜ ಆರೋಪಿಯನ್ನು ಕಂಡು ಹಿಡಿದು ಶಿಕ್ಷಿಸಿದರೆ ಮಾತ್ರ ಸೌಜನ್ಯ ಮತ್ತು ಸಂತೋಷ್ ರಾವ್ ಕುಟುಂಬಕ್ಕೆ ನೆಮ್ಮದಿ ಸಿಗಬಹುದು ಎಂದರು. ಮುಂಬಯಿಯ ಖ್ಯಾತ ಸಮಾಜಮುಖಿ ಹೋರಾಟಗಾರ ಬೆರ್ಮೊಟ್ಟು ಚಂದ್ರಕೃಷ್ಣ ಶೆಟ್ಟಿ ಮಾತನಾಡಿ ಲಕ್ಷಾಂತರ ಭಕ್ತರು ದರುಶನ ಪಡೆಯುವ ಅಣ್ಣಪ್ಪ ದೈವ ಮತ್ತು ಮಂಜುನಾಥ ಸ್ವಾಮಿ ನೆಲೆಸಿದ ಧರ್ಮದ ಬೀಡು, ದೇವರ ನಾಡು ಎಂದು ಜನಜನಿತವಾದ ಕ್ಷೇತ್ರಕ್ಕೆ ಇಂದು ಕಳಂಕ ಬಂದಿದೆ. ಕ್ಷೇತ್ರದ ಮಹಿಮೆಯ ಬಗ್ಗೆ ಹೆಗ್ಗಡೆಯವರ ಬಾಯಿಯಿಂದ ಬರುವ ಮಾತಿನ ಬಗ್ಗೆ ನಂಬಿಕೆಯಿದೆ. ಲೋಕಕ್ಕೆ ನ್ಯಾಯ ಸಿಗುವ ಸ್ಥಳದಲ್ಲಿ ನ್ಯಾಯಕ್ಕೆ ಅನ್ಯಾಯವಾಗಿದೆ. ಇದಕ್ಕೆ ಪರಿಹಾರವಾಗಿ ನ್ಯಾಯವು ಮರು ತನಿಖೆಯ ಮುಖಾಂತರ ನ್ಯಾಯಾಲಯದಿಂದ ಸಿಗಬಹುದೇ ಅಥವಾ ಧರ್ಮದ ನೆಲೆಯಲ್ಲಿ ಮಾತನಾಡುವ ದೇವರ ನಾಲಗೆಯಿಂದ ಬರಹುದೇ ಎಂದು ಕಾಯುವಂತಾಗಿದೆ. ಹೆಗ್ಗಡೆಯವರು ಯಾಕೆ ಮೌನವಾಗಿದ್ದಾರೆ, ಅವರೇ ಮುಂದೆ ಬಂದು ದೈವದೇವರ ಪರವಾಗಿ ನ್ಯಾಯ ನೀಡಲಿ, ಪ್ರತಿಭಟನೆ ನಿಲ್ಲಿಸಿ ಕ್ಷೇತ್ರದ ಪಾವಿತ್ರತೆಯನ್ನು ಉಳಿಸಲಿ. ಸೌಜನ್ಯಳ ತಾಯಿ ಮೂವರು ಅಪರಾಧಿಗಳೆಂದು ಹೆಸರು ಹೇಳಿದ್ದರೂ ಅವರ ವಿರುದ್ದ ಯಾವುದೇ ಕ್ರಮ ತೆಗೆದುಕೊಳ್ಳದಿರುವುದರಿಂದ ರಾಜಕೀಯ ಪ್ರಭಾವವಿದೆ ಮತ್ತು ಪ್ರಭಾವಿಗಳ ಷಡ್ಯಂತ್ರವಿದೆ ಎಂದು ಎದ್ದು ಕಾಣಿಸುತ್ತಿದೆ. ಸೌಜನ್ಯ ಕುಟುಂಬ ಹಾಗೂ ಸಂತೋಷ್ ರಾವ್ ಕುಟುಂಬಕ್ಕೆ ಕೂಡಲೇ ನ್ಯಾಯ ದೊರೆಯುವಂತೆ ದೇವರಲ್ಲಿ ಪ್ರಾರ್ಥಿಸುವ ಎಂದರು. ನಮ್ಮ ಹೋರಾಟ ಧರ್ಮದ ನೆಲೆ ಅಥವಾ ಯಾವುದೇ ವ್ಯಕ್ತಿಯ ಮೇಲೆ ಅಲ್ಲ. ಪಾಪಕೃತ್ಯ ಮಾಡಿದವನನ್ನು ಕಂಡುಹಿಡಿದು ಇಂತಹ ಕೃತ್ಯೆ ಮುಂದೆ ಆಗದಂತೆ ತಡೆಯುವುದರ ಮೂಲ ಉದ್ದೇಶ ಎಂದು ಗಂಧರ್ವ ಸುರೇಶ್ ಶೆಟ್ಟಿ ಹೇಳಿದರು. ಶ್ರೀ ಶಕ್ತಿ ಸಂಘಟನೆಯ ಅದ್ಯಕ್ಷೆ ಶಾಲಿನಿ ಸತೀಶ್ ಶೆಟ್ಟಿ, ಸಮಾಜ ಸೇವಕಿ ವಸಂತಿ ಶೆಟ್ಟಿ, ಡಾ.ರವಿರಾಜ್ ಸುವರ್ಣ, ಪತ್ರಕರ್ತ ವಿಜಯ ಶೆಟ್ಟಿ ಕುತ್ತೆತ್ತೂರು ಸೌಜನ್ಯ ಹತ್ಯೆಯ ಬಗ್ಗೆ ಮಾತನಾಡಿ ಮುಂದಿನ ಪ್ರತಿಭಟನಾ ಸಭೆಗೆ ಸಲಹೆ ಸೂಚನೆ ನೀಡಿ ತಮ್ಮ ಸಹಕಾರ ವ್ಯಕ್ತಪಡಿಸಿದರು. ರಾಧಾಕೃಷ್ಣ ಶೆಟ್ಟಿ, ಮೀರಾರೋಡ್ ಹಾಗೂ ವಿಜಯ ಶೆಟ್ಟಿ ಮೂಡುಬೆಳ್ಳೆ,ಪ್ರಭಾಕರ ಬೆಳ್ವಾಯಿ, ಸುಂದರ ಶೆಟ್ಟಿ ವಾಮನಪದವು, ಶೇಖರ ಪೂಜಾರಿ ಮತ್ತಿತರರು ಸಹಕರಿಸಿದ್ದರು. ಆರಂಭದಲ್ಲಿ ಸೌಜನ್ಯಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಸಭೆಯನ್ನು ಜಿ.ಕೆ.ಕೆಂಚನಕೆರೆ ನಿರೂಪಿಸಿದರು.