Updated News From Kaup
ಪಡುಬಿದ್ರಿ : ಹೆದ್ದಾರಿ ಇಲಾಖೆಯ ಅಸಮರ್ಪಕ ಕಾಮಗಾರಿ ; ಮನೆಯೊಳಗೆ ನುಗ್ಗುವ ಚರಂಡಿ ನೀರು

Posted On: 05-07-2023 05:55PM
ಪಡುಬಿದ್ರಿ : ಇಲ್ಲಿನ ಕೆಳಗಿನ ಪೇಟೆಯ ಮನೆಯೊಂದಕ್ಕೆ ಈ ವರ್ಷವೂ ಹೆದ್ದಾರಿ ಇಲಾಖೆಯ ಅವ್ಯವಸ್ಥೆಯಿಂದ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಚರಂಡಿ ನೀರು ಮನೆಯೊಳಗೆ ಸೇರುವ ಸ್ಥಿತಿ ಉಂಟಾಗಿದೆ.

ಪಡುಬಿದ್ರಿಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಸೂಕ್ತ ಸರ್ವಿಸ್ ರಸ್ತೆ ಒಂದೆಡೆ ಇಲ್ಲ. ಇನ್ನೊಂದೆಡೆ ಅರೆಬರೆ ಕಾಮಗಾರಿಯ ದ್ಯೋತಕವಾಗಿ ಸರಾಗವಾಗಿ ಹರಿಯಲು ಸರಿಯಾದ ಪೈಪ್ ವ್ಯವಸ್ಥೆ ಮಾಡದೆ ಚರಂಡಿ ನೀರು ಮನೆ, ಬಾವಿ ಸೇರುವಂತಾಗಿದೆ.
ಕಳೆದ ವರ್ಷ ಈ ಬಗ್ಗೆ ಸ್ಥಳೀಯ ಪಂಚಾಯತ್, ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಿಲ್ಲ. ಈ ಬಾರಿ ಮತ್ತದೇ ಸಮಸ್ಯೆಯಾಗಿದೆ. ಮನೆಗೆ ನೀರು ನುಗ್ಗದಂತೆ ಆವರಣ ಗೋಡೆ ಅಥವಾ ಈ ಸಮಸ್ಯೆಗೆ ಶಾಶ್ವತವಾದ ಪರಿಹಾರ ಸಂಬಂಧಪಟ್ಟ ಇಲಾಖೆಗಳು ಮಾಡಬೇಕಾಗಿದೆ ಎಂದು ಸಮಸ್ಯೆಯೊಳಗಾದ ಮನೆಯ ವೀರೇಂದ್ರ ಎನ್ ಪೂಜಾರಿ ಮಾಧ್ಯಮದ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಸರ್ವಿಸ್ ರಸ್ತೆಯ ಇನ್ನೊಂದು ಪಾಶ್ವ೯ದಲ್ಲಿ ಚರಂಡಿ ಅವ್ಯವಸ್ಥೆಯ ಬಗ್ಗೆ ಪರಿಶೀಲಿಸಲು ಉಡುಪಿ ಜಿಲ್ಲೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಸೂಕ್ತ ಕ್ರಮವಹಿಸಲು ಸೂಚಿಸಿದ್ದರು. ಆದರೂ ಸಮಸ್ಯೆ ಬಗೆಹರಿದಂತಿಲ್ಲ.
ಕಟಪಾಡಿ : ತ್ರಿಶಾ ಸಂಸ್ಥೆ - ಗುರು ಪೌರ್ಣಮಿ ಆಚರಣೆ

Posted On: 05-07-2023 03:10PM
ಕಟಪಾಡಿ : ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಯಲ್ಲಿ ಗುರುವಿನ ಪಾತ್ರ ಮಹತ್ವವಾದದ್ದು, ಮತ್ತು ಸರಿಯಾದ ಗುರುವಿನ ಮಾರ್ಗದರ್ಶನದಿಂದ ಮಾತ್ರ ವಿದ್ಯಾರ್ಥಿಯ ಬದುಕು ಯಶಸ್ಸಿನತ್ತ ಮುಖ ಮಾಡಲು ಸಾಧ್ಯ ಎಂದು ತ್ರಿಶಾ ಸಂಸ್ಥೆಯ ಅಧ್ಯಕ್ಷರಾದ ಸಿ.ಎ ಗೋಪಾಲಕೃಷ್ಣ ಭಟ್ ಹೇಳಿದರು. ಅವರು ತ್ರಿಶಾ ಸಂಸ್ಥೆಯಲ್ಲಿ ನಡೆದ ಗುರು ಪೂರ್ಣಿಮೆ ಆಚರಣೆಯಲ್ಲಿ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಗುರುಗಳ ಮಹತ್ವದ ಬಗ್ಗೆ ಮಾತನಾಡಿದರು. ಕಾಲೇಜಿನ ಪ್ರಾಧ್ಯಾಪಕರುಗಳ ಮೇಲೆ ವಿದ್ಯಾರ್ಥಿಗಳು ಪುಷ್ಪವೃಷ್ಟಿ ಮಾಡಿ, ಸಿಬ್ಬಂದಿಗಳಿಗೆ ಉಡುಗೊರೆ ನೀಡುವ ಮೂಲಕ ಆಚರಿಸಿದರು.
ತ್ರಿಶಾ ವಿದ್ಯಾ ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ಪ್ರಾಧ್ಯಾಪಕರ ಕಾಲು ತೊಳೆದು, ಅವರಿಗೆ ಉಡುಗೊರೆಯನ್ನು ಕೊಡುವುದರ ಮೂಲಕ ಸಂಭ್ರಮದಿಂದ ಆಚರಿಸಿದರು.
ಕಾರ್ಯಕ್ರಮದಲ್ಲಿ ತ್ರಿಶಾ ವಿದ್ಯಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಗುರುಪ್ರಸಾದ್ ರಾವ್, ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಇಂದುರೀತಿ, ತ್ರಿಶಾ ವಿದ್ಯಾ ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ಡಾ. ಅನಂತ್ ಪೈ ಹಾಗೂ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪಡುಬಿದ್ರಿ : ಕಡಲ್ಕೊರೆತ ; ಕಡಲೊಡಲು ಸೇರಿದ 6 ತೆಂಗಿನಮರ, ಅಪಾಯದಲ್ಲಿ ಕೈರಂಪಣಿ ಗೋದಾಮು

Posted On: 05-07-2023 02:33PM
ಪಡುಬಿದ್ರಿ : ಕರಾವಳಿಯಾದ್ಯಂತ ಮಳೆ ಬಿರುಸುಗೊಂಡಿದ್ದು ಕಡಲಾರ್ಭಟವು ಮುಂದುವರೆದಿದೆ. ಪಡುಬಿದ್ರಿ ಮುಖ್ಯ ಬೀಚ್ ಸೇರಿದಂತೆ ಕಾಡಿಪಟ್ಣ ಭಾಗದಲ್ಲಿ ಕಡಲ್ಕೊರೆತದ ಪ್ರಭಾವ ಹೆಚ್ಚಾಗಿದೆ. ಈಗಾಗಲೇ 6 ತೆಂಗಿನಮರಗಳು ಕಡಲ ಒಡಲು ಸೇರಿದೆ. ಮುಖ್ಯ ಬೀಚ್ ನ ಇಂಟರ್ಲಾಕ್, ಕೈರಂಪಣಿ ಗೋದಾಮು ಸಮುದ್ರ ಪಾಲಾಗುವ ಅಪಾಯದಲ್ಲಿದೆ.

ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಪಡುಬಿದ್ರಿ ಕಾಡಿಪಟ್ಣ ಮೊಗವೀರ ಸಭಾದ ಅಧ್ಯಕ್ಷರಾದ ಅಶೋಕ್ ಸಾಲ್ಯಾನ್, ಬ್ಲ್ಯೂ ಫ್ಲಾಗ್ ಮಾನ್ಯತೆ ದೊರಕಿದ ಬೀಚ್ ಸರ್ವನಾಶವಾಗುತ್ತಿದೆ. ಜಿಲ್ಲಾಡಳಿತ ಇದಕ್ಕೆ ತುರ್ತು ವ್ಯವಸ್ಥೆ ಕಲ್ಪಿಸಬೇಕಾಗಿದೆ. ಸುಶೀಲ್ ಕಾಂಚನ್ ರವರಿಗೆ ಸೇರಿದ ತೆಂಗಿನಮರಗಳು ಸಮುದ್ರ ಪಾಲಾಗಿದೆ. ಕೈರಂಪಣಿ ಗೋದಾಮು, ಪ್ರವಾಸಿಗರು ಆಸೀನವಾಗಲಿಕ್ಕಿರುವ ಮಂಟಪ ಅಪಾಯದ ಭೀತಿಯಲ್ಲಿದೆ. ಇಲ್ಲಿ 2-3 ವರ್ಷದಿಂದ ಆಗುತ್ತಿರುವ ಸಮಸ್ಯೆ. ತೌಖ್ತೆ ಚಂಡಮಾರುತದ ಸಮಯದಲ್ಲಿಯೂ ಇಲ್ಲಿಗೆ ಭೇಟಿ ನೀಡಿದ ಕಂದಾಯ ಸಚಿವರಾದ ಅಶೋಕ್, ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಶಾಸಕರಿಗೂ ಮನವಿ ಮಾಡಿದರೂ ಸ್ಪಂದನೆಯಿಲ್ಲ. ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ ಎಂದರು.
ಈ ಬಗ್ಗೆ ತುರ್ತು ಕ್ರಮಕ್ಕಾಗಿ ಸ್ಥಳೀಯರು ಆಗ್ರಹಿಸಿದ್ದಾರೆ.
ಶಿರ್ವ : ಸಂತ ಮೇರಿ ಮಹಾವಿದ್ಯಾಲಯ - ವಿಶ್ವ ಪ್ಲಾಸ್ಟಿಕ್ ಮುಕ್ತ ದಿನಾಚರಣೆ

Posted On: 05-07-2023 10:52AM
ಶಿರ್ವ : ಸಂತ ಮೇರಿ ಮಹಾವಿದ್ಯಾಲಯ, ಶಿರ್ವ ಇದರ ರಾಷ್ಟ್ರೀಯ ಭೂ-ಯುವಸೇನಾದಳದ ಎನ್.ಸಿ.ಸಿ. ಘಟಕ ಮತ್ತು 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಉಡುಪಿ ಜಂಟಿಯಾಗಿ ವಿಶ್ವ ಪ್ಲಾಸ್ಟಿಕ್ ಮುಕ್ತ ದಿನಾಚರಣೆಯನ್ನು ಏರ್ಪಡಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್ ಮಾತನಾಡಿ, ಇಂದು ನಾವು ದಿನನಿತ್ಯದ ಜೀವನದಲ್ಲಿ ಕೆಲವು ಅಂಗಡಿಯಿಂದ ಸಣ್ಣಪುಟ್ಟ ವಸ್ತುಗಳನ್ನು ಪ್ಲಾಸ್ಟಿಕ್ ಚೀಲಗಳನ್ನು ಬಳಸಿ ತರುತ್ತಿದ್ದೇವೆ. ಇಂಥ ಪ್ಲಾಸ್ಟಿಕ್ ವಸ್ತುವಿನ ಮರುಬಳಕೆ ಮಾಡಲಾಗದೆ ಅವುಗಳನ್ನು ಎಸೆಯುವುದರಿಂದ ನಮ್ಮ ಮತ್ತು ಪರಿಸರದ ಮೇಲೆ ಅನೇಕ ದುಷ್ಪರಿಣಾಮಗಳು ಉಂಟಾಗುತ್ತದೆ ಎಂದರು. ಇಂತಹ ಕಾರ್ಯಕ್ರಮ ಹಮ್ಮಿಕೊಂಡ ಕಾಲೇಜಿನ ಎನ್.ಸಿ.ಸಿ ಘಟಕವನ್ನು ಪ್ರಶಂಸಿದರು ಮತ್ತು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದಂತ ಐಡಿ ಎಸ್ಎಸ್ಸಿ ಐಜಿಸಿ ಕ್ಯಾಂಪಲ್ಲಿ ಭಾಗವಹಿಸಿದ ಕೆಡೆಟ್ ಪೂಜಾ ಶೆಟ್ಟಿ, ಮೈಸೂರಲ್ಲಿ ನಡೆದಂತ ಏಕ್ ಭಾರತ ಶ್ರೇಷ್ಠ ಭಾರತ್ಕ್ಯಾಂಪಲ್ಲಿ ವಿಜೇತರಾದ ಸೋನಾಲಿಕುಲಾಲ್,ಉಳಿದ್ರಾ ಖುಷಿರವರನ್ನು ಅಭಿನಂದಿಸಲಾಯಿತು ಹಾಗೂ ಕೆಡೆಟ್ಗಳಿಗೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ಕರಪತ್ರಗಳನ್ನು ನೀಡಲಾಯಿತು. ಮಾನವನ ಚಟುವಟಿಕೆಗಳಿಂದ ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳನ್ನು ತಡೆಗಟ್ಟುವುದು ಹಾಗೂ ಪರಿಸರ ಕಾಳಜಿಯ ವಿವಿಧ ವಿಷಯಗಳ ಬಗ್ಗೆ ಜನಸಾಮಾನ್ಯರಿಗೆ ವ್ಯಾಪಕವಾಗಿ ಅರಿವು ಮತ್ತು ಜಾಗೃತಿ ಮೂಡಿಸುವಲ್ಲಿ ಯುವಕರು ಭಾಗವಹಿಸಿ ಪ್ಲಾಸ್ಟಿಕ್ ಮುಕ್ತ ಪರಿಸರದ ನಿರ್ಮಾಣಮಾಡಲು ಶ್ರಮಿಸಬೇಕೆಂದು ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಅವರು ಕರೆ ನೀಡಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು ಮತ್ತು ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್ ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಫಸ್ಟ್ ಆಫೀಸರ್ ಜಾನ್ ವಿಲಿಯಂ ವೇಗಸ್, ಲ್ಲ್ಯಾನ್ಸ್ ಕಾರ್ಪೊರಲ್ ಅನೀಶ್ ಭಟ್, ಮತ್ತು ಕೆಡೆಟ್ಗಳು ಉಪಸ್ಥಿತರಿದ್ದರು. ಕ್ಯಾಡೆಟ್ಗಳಾದ ವಿಶಾಲ್ ಟೆರೆನ್ಸ್ ವಾಜ್ ಹಾಗೂ ಆಲಿಸ್ಟರ್ ಸುಜಾಯ್ ಡಿಸೋಜ ಸಹಕರಿಸಿದರು. ಕೆಡೆಟ್ ಕೃತಿಕಾ ಸ್ವಾಗತಿಸಿ , ಲ್ಲ್ಯಾನ್ಸ್ ಕಾರ್ಪೊರಲ್ ಶೆಟ್ಟಿಗಾರ್ ಹೇಮಾಶ್ರೀ ಸುದರ್ಶನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅದಿತಿ ಆಚಾರ್ಯ ವಂದಿಸಿದರು. ಕೆಡೆಟ್ ಪೂಜಾ ಕಾರ್ಯಕ್ರಮವನ್ನು ನಿರೂಪಿಸಿದರು.
ಚಿತ್ರನಟ ಉಪೇಂದ್ರ ನಿವಾಸಕ್ಕೆ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಭೇಟಿ

Posted On: 05-07-2023 10:30AM
ಉಡುಪಿ : ಜಿಲ್ಲೆಯ ಅಷ್ಟ ಮಠಗಳಲ್ಲಿ ಒಂದಾದ ಪಲಿಮಾರು ಮಠದ ಹಿರಿಯ ಶ್ರೀಗಳಾದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಖ್ಯಾತ ಚಿತ್ರನಟರಾದ ಉಪೇಂದ್ರ ಅವರ ಆಹ್ವಾನದ ಮೇರೆಗೆ ಅವರ ನಿವಾಸಕ್ಕೆ ತೆರಳಿದರು.
ಈ ಸಂದರ್ಭ ಉಪೇಂದ್ರ ಅವರು ಕೇಳಿದ ಆಧ್ಯಾತ್ಮದ ಪ್ರಶ್ನೆಗಳಿಗೆ ಉತ್ತರಿಸಿದ ಶ್ರೀಗಳು, ಉಪೇಂದ್ರ ಅವರನ್ನು ರಜತಪೀಠಪುರಕ್ಕೆ ಹಾಗೂ ಪಲಿಮಾರಿನ ಮೂಲ ಮಠಕ್ಕೆ ಭೇಟಿ ನೀಡುವಂತೆ ಆಹ್ವಾನವಿತ್ತರು.
ಈ ಸಂದರ್ಭದಲ್ಲಿ ಪಲಿಮಾರು ಮಠದ ಪಿ.ಆರ್.ಓ ಕಡೆಕಾರು ಶ್ರೀಶ ಭಟ್, ಗಿರೀಶ್ ಉಪಾಧ್ಯಾಯ, ಶ್ರೀನಿವಾಸ ಭಟ್ ಮತ್ತಿತರು ಉಪಸ್ಥಿತರಿದ್ದರು.
ಕಳತ್ತೂರು ಕುಲಾಲ ಒಕ್ಕೂಟ : ಸನ್ಮಾನ, ವಿದ್ಯಾರ್ಥಿ ವೇತನ ವಿತರಣೆ

Posted On: 05-07-2023 10:01AM
ಕಾಪು : ಕುಲಾಲ ಬಾಂಧವರು ಕಳತ್ತೂರು ಇದರ ವತಿಯಿಂದ ರವಿವಾರ ಜರಗಿದ ಸಭೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ವಿದ್ಯಾರ್ಥಿ ವೇತನ ಕಾರ್ಯಕ್ರಮ ನಡೆಯಿತು.
ಕುಲಾಲ ಬಾಂಧವರು ಕಳತ್ತೂರು ಒಕ್ಕೂಟದ ಅಧ್ಯಕ್ಷರು ರಾಜೇಶ್ ಕುಲಾಲ್ ಪೈಯ್ಯಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ತನಿಸ್ಕ, ರಕ್ಷಿತಾ, ಚಿರಾಗ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಕ್ತಿ ಆರ್ ಕುಲಾಲ್, ಕೋಶಾಧಿಕಾರಿ ಹರೀಶ್ ಕೆ ಮೂಲ್ಯ , ಸಮಾಜದ ಹಿರಿಯರಾದ ತೊತು ಮೂಲ್ಯ, ಪಾಂಡು ಮೂಲ್ಯ, ಶಂಕರ ಮೂಲ್ಯ, ಬಾಡು ಮೂಲ್ಯ, ಸಂಜೀವ ಕುಲಾಲ್, ಒಕ್ಕೂಟದ ಹಿರಿಯ ಗುರಿಕಾರರು, ಮಹಿಳಾ ಘಟಕದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಜುಲೈ 5 (ನಾಳೆ) : ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Posted On: 04-07-2023 09:58PM
ಉಡುಪಿ : ಜಿಲ್ಲೆಯಲ್ಲಿ ಮಳೆಯ ಅಬ್ಬರವಿರುವ ಹಿನ್ನೆಲೆಯಲ್ಲಿ ಜುಲೈ 5 ರಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಅದರಂತೆ ನಾಳೆ ಉಡುಪಿ ಜಿಲ್ಲೆಯ ಎಲ್ಲಾ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್.ಎಂ ರಜೆ ಘೋಷಿಸಿದ್ದಾರೆ.
ಇಲಾಖಾ ದರದಲ್ಲಿ ತೋಟಗಾರಿಕೆ ಸಸಿಗಳು ಲಭ್ಯ

Posted On: 04-07-2023 11:26AM
ಉಡುಪಿ : ತೋಟಗಾರಿಕೆ ಇಲಾಖೆಯ ವತಿಯಿಂದ ಜಿಲ್ಲೆಯ ತೋಟಗಾರಿಕೆ ಕ್ಷೇತ್ರಗಳಲ್ಲಿ ರೈತರ ಹಾಗೂ ಸಾರ್ವಜನಿಕರ ಬೇಡಿಕೆ ಆಧಾರದ ಮೇಲೆ ವಿವಿಧ ತೋಟಗಾರಿಕೆ ಕಸಿ/ ಸಸಿ ಗಿಡಗಳನ್ನು ಉತ್ಪಾದಿಸಿ ಇಲಾಖಾ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
ಉಡುಪಿ ತಾಲೂಕಿನ ಶಿವಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ಅಡಿಕೆ 2,667, ಕಾಳುಮೆಣಸು 4,328 ಹಾಗೂ ತೆಂಗು 458 ಗಿಡಗಳು ಸೇರಿದಂತೆ ಒಟ್ಟು 7,453 ಸಸಿಗಳು ಮತ್ತು ಕಾರ್ಕಳ ತಾಲೂಕಿನ ರಾಮಸಮುದ್ರ ತೋಟಗಾರಿಕೆ ಕ್ಷೇತ್ರಗಳಲ್ಲಿ ಅಡಿಕೆ 9,000, ಗೋಡಂಬಿ 5,683 ಹಾಗೂ 15,266 ಕಾಳುಮೆಣಸು ಸಸಿಗಳು ಸೇರಿದಂತೆ ಒಟ್ಟು 29,949 ಉತ್ತಮ ಗುಣಮಟ್ಟದ ಗಿಡಗಳು ಲಭ್ಯವಿರುತ್ತದೆ.
ಅಡಿಕೆ (ರೂ. 20), ಕಸಿ ಗೇರು (ರೂ. 32), ಕಾಳುಮೆಣಸು (ರೂ.11) ಹಾಗೂ ತೆಂಗು ತಳಿ (ರೂ. 170) ಗಿಡಗಳನ್ನು ಖರೀದಿಸಲು ವರುಣ್, ಸಹಾಯಕ ತೋಟಗಾರಿಕೆ ನಿರ್ದೇಶಕರು, ಮೊ.ನಂ 7892326323 ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಕಾರ್ಕಳ ತಾಲೂಕು ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಡುಕುತ್ಯಾರು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ - ಚಾತುರ್ಮಾಸ್ಯ ವ್ರತಾಚರಣೆ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

Posted On: 03-07-2023 10:44PM
ಕಾಪು : ಸನ್ಯಾಸಿಗಳು ನಡೆಸುವ ಚಾತುರ್ಮಾಸ್ಯಕ್ಕೆ ವಿಶೇಷ ಮಹತ್ವವಿದೆ. ಈ ಅವಧಿಯಲ್ಲಿ ಆತ್ಮೋನ್ನತಿಗೆ ಬೇಕಾದ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವುದರೊಂದಿಗೆ ಸಮಾಜದ ಜನರಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಪ್ರಜ್ಞೆಯನ್ನು ಮೂಡಿಸುವುದಕ್ಕಾಗಿ ಕಠಿಣ ಪ್ರಯತ್ನಗಳು ನಡೆಯಲಿವೆ ಎಂದು ಕಟಪಾಡಿ ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಹೇಳಿದರು. ಪಡುಕುತ್ಯಾರು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದಲ್ಲಿ ಸೋಮವಾರ ಆರಂಭವಾದ ಚಾತುರ್ಮಾಸ್ಯ ವ್ರತಾಚರಣೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು. ಪ್ರತೀಯೊಬ್ಬ ವ್ಯಕ್ತಿಗೂ ಗುರು ಪರಂಪರೆ ಮತ್ತು ಚಾತುರ್ಮಾಸ್ಯದ ಕುರಿತಾಗಿ ಅರಿವು, ಜ್ಞಾನ ಹೆಚ್ಚಿಸುವುದಕ್ಕಾಗಿ ನಮ್ಮ ಪ್ರಯತ್ನ ಜಾರಿಯಲ್ಲಿರುತ್ತದೆ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಗಳಿಗೆ ಒತ್ತು ನೀಡಿ ಈ ಬಾರಿಯ ಚಾತುರ್ಮಾಸ್ಯವನ್ನು ನಡೆಸಲಾಗುವುದು. ಪಾಶ್ಚಾತ್ಯ ಸಂಸ್ಕೃತಿಯ ಮೇಲಿನ ವ್ಯಾಮೋಹದಿಂದಾಗಿ ಜನರು ಭಾರತೀಯ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಭಾರತೀಯ ಸಂಸ್ಕೃತಿಯನ್ನು ಅನುಸರಿಸಿ, ಸಂಸ್ಕಾರವನ್ನು ಬೆಳೆಸಿಕೊಳ್ಳುವುದು ಇಂದಿನ ಅನಿವಾರ್ಯತೆಯಾಗಿದೆ. ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರದ ಅನುಸರಣೆಯೇ ನಮಗೆ ಸಮಾಜದಲ್ಲಿ ಸುಸಂಸ್ಕೃತರಾಗಿ ಬಾಳಿ ಬದುಕಲು ದಾರಿದೀಪವಾಗಿದೆ ಎಂದರು.

ಸ್ವಾಮೀಜಿಯವರಿಂದ ಗೌರವಾರ್ಪಣೆ ಸ್ವೀಕರಿಸಿ ಮಾತನಾಡಿದ ರಂಗಭೂಮಿ ಹಾಗೂ ಚಿತ್ರ ನಟ ಸತೀಶ್ ಆಚಾರ್ಯ ಪೆರ್ಡೂರು, ಹುಟ್ಟು ಮತ್ತು ಸಾವುಗಳ ನಡುವಿನ ಜೀವನ ಯಶಸ್ವಿಯಾಗಿ ಮುನ್ನಡೆಯುವಲ್ಲಿ ಗುರುಗಳ ಅನುಗ್ರಹ, ಆಶೀರ್ವಚನ ಮತ್ತು ಮಾರ್ಗದರ್ಶನ ಅತೀ ಅಗತ್ಯವಾಗಿದೆ. ಜಗದ್ಗುರು ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರನ್ನು ಗುರುಗಳನ್ನಾಗಿ ಪಡೆದಿರುವ ನಮ್ಮ ಸಮಾಜ ಧನ್ಯವಾಗಿದೆ. ಗುರು ಪರಂಪರೆ, ಗುರು ತತ್ವ ಮತ್ತು ಧಾರ್ಮಿಕ ಆಚರಣೆಗಳ ಬಗ್ಗೆ ಇನ್ನಷ್ಟು ಒತ್ತು ನೀಡುವ ಮೂಲಕ ನಮ್ಮಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಹೆಚ್ಚಿಸಿಕೊಳ್ಳೋಣ ಎಂದರು.

ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಮತ್ತು ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಡೇರ ಹೋಬಳಿ ಶ್ರೀಧರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಪಿ. ವಿ. ಗಂಗಾಧರ ಆಚಾರ್ಯ ಉಡುಪಿ, ಶ್ರೀ ನಾಗ ಧರ್ಮೇಂದ್ರ ಸರಸ್ವತಿ ಸಂಸ್ಕೃತ ವೇದ ಸಂಜೀವಿನೀ ಪಾಠಶಾಲೆ ಪ್ರಧಾನ ಸಂಚಾಲಕ ಬಿ. ಸೂರ್ಯಕುಮಾರ ಆಚಾರ್ಯ ಹಳೆಯಂಗಡಿ, ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪಂಚಸಿಂಹಾಸನ ವಿಕಾಸ ಸಮಿತಿ ಅಧ್ಯಕ್ಷ ಹರಿಶ್ಚಂದ್ರ ಎನ್ ಆಚಾರ್ಯ ಬೆಂಗಳೂರು, ಅಸ್ಸೆಟ್ ಅಧ್ಯಕ್ಷ ಮೋಹನ್ಕುಮಾರ್ ಬೆಳ್ಳೂರು, ಗೋವು ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಸುಂದರ ಆಚಾರ್ಯ ಬೆಳುವಾಯಿ, ಆನೆಗುಂದಿ ಗುರು ಸೇವಾ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮ್ಮಣ್ಣು, ಸರಸ್ವತಿ ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಕುತ್ಯಾರು ಗ್ರಾ.ಪಂ. ಅಧ್ಯಕ್ಷೆ ಲತಾ ಎಸ್. ಆಚಾರ್ಯ ಕುತ್ಯಾರು, ವಿವಿಧ ದೇವಸ್ಥಾನಗಳ ಆಡಳಿತ ಮೊಕ್ತೇಸರರಾದ ಕೆ. ಕೇಶವ ಆಚಾರ್ಯ ಮಂಗಳೂರು, ಕಳಿ ಚಂದ್ರಯ್ಯ ಆಚಾರ್ಯ ಉಪ್ರಳ್ಳಿ, ಶಿಲ್ಪಿ ರಾಮಚಂದ್ರ ಆಚಾರ್ಯ ಕಾರ್ಕಳ, ಗಜಾನನ ಎನ್ ಆಚಾರ್ಯ ಭಟ್ಕಳ, ಯದುನಂದನ ಆಚಾರ್ಯ ಬಂಗ್ರಮಂಜೇಶ್ವರ, ಮಧುಕರ ಚಂದ್ರಶೇಖರ ಆಚಾರ್ಯ ಹೊನ್ನಾವರ, ಬಾಲಕೃಷ್ಣ ಆಚಾರ್ಯ ಬೆಳಪು, ಶೇಖರ ಆಚಾರ್ಯ ಕಾಪು, ಸುಂದರ ಆಚಾರ್ಯ ಕೋಟೆಕಾರು, ಜನಾರ್ದನ ಆಚಾರ್ಯ ಆರಿಕ್ಕಾಡಿ, ನ್ಯಾಯವಾದಿ ಕೆ ಪ್ರಭಾಕರ ಆಚಾರ್ಯ ಕೋಟೆಕಾರು, ಸಿಎ ಶ್ರೀಧರ ಆಚಾರ್ಯ ಪನ್ವೇಲ್, ಜ್ಯೋತಿಷ್ಯ ವಿದ್ವಾನ್ ಉಮೇಶ್ ಆಚಾರ್ಯ ಪಡೀಲು, ವೈ. ಧರ್ಮೇಂದ್ರ ಆಚಾರ್ಯ ಕಾಸರಗೋಡು, ತ್ರಾಸಿ ಸುಧಾಕರ ಆಚಾರ್ಯ, ಜಯಕರ ಆಚಾರ್ಯ ಕರಂಬಳ್ಳಿ, ಬಂಬ್ರಾಣ ಯಜ್ಞೇಶ ಆಚಾರ್ಯ ಮಂಗಳೂರು ಮೊದಲಾದವರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ. ಬಿ. ಆಚಾರ್ ಕಂಬಾರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೆ.ಎಂ. ಗಂಗಾಧರ ಆಚಾರ್ಯ ನಿರೂಪಿಸಿದರು. ಕೋಶಾಧಿಕಾರಿ ಅರವಿಂದ ವೈ. ಆಚಾರ್ಯ ವಂದಿಸಿದರು.
ಉಡುಪಿ : ನಿಖಿತಾ ಕುಲಾಲ್ ಸಾವಿನ ಪ್ರಕರಣ - ಪರಿಹಾರಕ್ಕಾಗಿ ಮನವಿ

Posted On: 03-07-2023 09:24PM
ಉಡುಪಿ : ಕಾಪು ತಾಲೂಕಿನ ಎಲ್ಲೂರು ಬಂಡಸಾಲೆ ಪ್ರತಿಭಾನ್ವಿತ ವಿದ್ಯಾರ್ಥಿನಿ ನಿಖಿತಾ ಕುಲಾಲ್ ಉಡುಪಿಯ ಸಿಟಿ ಆಸ್ಪತ್ರೆಯಲ್ಲಿ ಅಸಹಜ ಸಾವನಪ್ಪಿದ್ದು ನಿಖಿತಾ ಮನೆಯವರಿಗೆ ಸೂಕ್ತ ನ್ಯಾಯ ಒದಗಿಸಿ, ಸೂಕ್ತ ಪರಿಹಾರ ನೀಡಬೇಕೆಂದು ಆಸ್ಪತ್ರೆಯ ಮುಖ್ಯ ವೈದ್ಯರಿಗೆ ಹಾಗೂ ಆಡಳಿತ ಮಂಡಳಿಗೆ ಜಿಲ್ಲಾ ಕುಲಾಲ ಸಂಘಟನೆಯ ಪ್ರಮುಖರು ಸೇರಿ ಮನವಿ ನೀಡಿದರು.
ಮನವಿಗೆ ಸ್ಪಂದಿಸಿ ಮಾತಾಡಿದ ವೈದ್ಯರು ಆಸ್ಪತ್ರೆಯ ಬಗ್ಗೆ ಈಗಾಗಲೇ ದೂರು ದಾಖಲಾಗಿದುದರಿಂದ ಇನ್ನು 15 ದಿನಗಳ ಬಳಿಕ ತನಿಖೆಯ ವರದಿ ಬರಲಿದ್ದು ಅಲ್ಲಿಯ ತನಕ ಕಾಯಿರಿ, ನಂತರ ನಿಖಿತಾ ಕುಲಾಲ್ ಮನೆಯವರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಮಾತು ತಪ್ಪಿದಲ್ಲಿ ಎಲ್ಲಾ ಸ್ವಜಾತಿ ಬಾಂಧವರುಗಳನ್ನು ಒಟ್ಟು ಗೂಡಿಸಿ ದೊಡ್ಡ ಮಟ್ಟದ ಪ್ರತಿಭಟನೆ ಮಾಡಲಾಗುವುದು ಎಂದು ಸಂಘಟನೆಯ ಪ್ರಮುಖರು ತಿಳಿಸಿದರು.
ಈ ಸಂದರ್ಭದಲ್ಲಿ ಸಂತೋಷ್ ಕುಲಾಲ್ ಪಕ್ಕಾಲು, ಸಂದೀಪ್ ಬಂಗೇರ ಶಂಕರಪುರ, ಉದಯ್ ಕುಲಾಲ್ ಕಳತ್ತೂರು, ಸುಧಾಕರ್ ಕುಲಾಲ್ ಪಟ್ಲ, ಸಂತೋಷ್ ಕುಲಾಲ್ ಪದವು, ದಿವಾಕರ್ ಬಂಗೇರ, ವಸಂತ್ ಕುಲಾಲ್ ಎರ್ಲಪಾಡಿ, ಬಸವರಾಜ್ ಕುಲಾಲ್, ಸತೀಶ್ ಕುಲಾಲ್ ನಡೂರು, ಕೃಷ್ಣಪ್ಪ ಕುಲಾಲ್ ಪೆರ್ಡೂರು, ಶಂಕರ್ ಕುಲಾಲ್ ಪೆರಂಪಳ್ಳಿ, ದಿನೇಶ್ ಕುಲಾಲ್, ಸುರೇಂದ್ರ ಕುಲಾಲ್ ವರಂಗ, ಹರೀಶ್ ಕುಲಾಲ್ ಹಂದಿಬೆಟ್ಟು ಉಪಸ್ಥಿತರಿದ್ದರು.